Homeಮುಖಪುಟಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಕೆ!: ಹೊರಗುತ್ತಿಗೆ ವಿಷಯ ಮುಚ್ಚಿಟ್ಟ ಚುನಾವಣಾ ಆಯೋಗ, ಆರ್‌ಟಿಐ ಕಾಯಿದೆಯಡಿ...

ಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಕೆ!: ಹೊರಗುತ್ತಿಗೆ ವಿಷಯ ಮುಚ್ಚಿಟ್ಟ ಚುನಾವಣಾ ಆಯೋಗ, ಆರ್‌ಟಿಐ ಕಾಯಿದೆಯಡಿ ವಿಷಯ ಬಹಿರಂಗ

- Advertisement -
- Advertisement -

ಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಕೆ!

ಹೊರಗುತ್ತಿಗೆ ವಿಷಯ ಮುಚ್ಚಿಟ್ಟ ಚುನಾವಣಾ ಆಯೋಗ

ಆರ್‌ಟಿಐ ಕಾಯಿದೆಯಡಿ ವಿಷಯ ಬಹಿರಂಗ

ಚುನಾವಣಾ ಅಕ್ರಮ ಶಂಕೆಗೆ ಇನ್ನಷ್ಟು ಪುಷ್ಟಿ

 

ಮೂಲ: ಪೂನಂ ಅಗರ್ವಾಲ್, ‘ದಿ ಕ್ವಿಂಟ್’

ಮರುನಿರೂಪಣೆ: ನಿಖಿಲ್ ಕೋಲ್ಪೆ

ಪ್ರಜಾಪ್ರಭುತ್ವದಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಸಂಸ್ಥೆ ಭಾಗಿಯಾಗಿರುವುದಿಲ್ಲ ಮತ್ತು ಹೊರಗುತ್ತಿಗೆ ನೀಡಲಾಗಿರುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳುತ್ತಲೇ ಬಂದಿದೆ. ಆದರೆ, ಹಿಂದಿನ ಕೆಲವು ವಿಧಾನಸಭಾ ಚುನಾವಣೆಗಳು ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಅಕ್ರಮ ನಡೆದಿರುವ ಬಗ್ಗೆ ವ್ಯಾಪಕ ಆರೋಪ ಮತ್ತು ಸಂಶಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ‘ದಿ ಕ್ವಿಂಟ್’ ನಡೆಸಿದ ತನಿಖೆಯಿಂದ ಇದು ಸುಳ್ಳೆಂದು ಬಹಿರಂಗವಾಗಿದ್ದು, ಇಂತಹಾ ಸಂಶಯಗಳಿಗೆ ಮತ್ತು ಸಾಧ್ಯತೆಗಳಿಗೆ ಮರುಹುಟ್ಟು ನೀಡಿದೆ.

ಹಿಂದೆ, ಅಂದರೆ 2017ರಿಂದಲೇ ‘ಕ್ವಿಂಟ್’ ಬಳಿ ಇರುವ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ)ಯಡಿ ಪಡೆದ ಉತ್ತರವೊಂದರ ಪ್ರಕಾರ, ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮತ್ತು ವೋಟರ್ ವೆರಿಫೈಡ್‌ ಪೇಪರ್ ಅಡಿಟ್ ಟ್ಟ್ರೈಲ್ (ವಿವಿಪ್ಯಾಟ್) ಯಂತ್ರಗಳನ್ನು ತಯಾರಿಸುವ ಸಾರ್ವಜನಿಕ ರಂಗದ ಉದ್ದಿಮೆಯಾಗಿರುವ ಇಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಸಂಸ್ಥೆಯು, ಮುಂಬಯಿ ಮೂಲದ ಖಾಸಗಿ ಸಂಸ್ಥೆಯಾಗಿರುವ ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಇಂಜಿನಿಯರ್‌ಗಳನ್ನು “ಸಮಾಲೋಚಕರು”
(Consultants) ಎಂಬ ನೆಲೆಯಲ್ಲಿ ನೇಮಿಸಿಕೊಂಡಿತ್ತು.

ಈ ಖಾಸಗಿ ‘ಸಮಾಲೋಚಕ’ ಇಂಜಿನಿಯರ್‌ಗಳನ್ನು 2019ರ ಲೋಕಸಭಾ ಚುನಾವಣಾ ಪ್ರಕ್ರಿಯೆಯುದ್ದಕ್ಕೂ ಬಳಸಿಕೊಳ್ಳಲಾಗಿತ್ತು ಎಂದು ‘ಕ್ವಿಂಟ್’ ಪತ್ತೆಹಚ್ಚಿದೆ. ಅವರ ಕೆಲಸಗಳು ಅತ್ಯಂತ ಸೂಕ್ಷ್ಮ ಸ್ವರೂಪದವುಗಳಾಗಿದ್ದು, ಅವುಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಚುನಾವಣಾ ಪ್ರಕ್ರಿಯೆಯ ಆರಂಭದಿಂದ ಅಂದರೆ, ಮೊದಲ ಹಂತದ ಪರಿಶೀಲನೆ (ಎಫ್ಎಲ್‌ಸಿ)ಯಿಂದ ಹಿಡಿದು, ಮತ ಎಣಿಕೆ ಮುಕ್ತಾಯವಾಗುವ ವರೆಗೂ ಪರೀಕ್ಷಿಸುವುದು ಮತ್ತು ನಿರ್ವಹಿಸುವುದು ಸೇರಿತ್ತು.

ಲೋಕಸಭಾ ಚುನಾವಣೆಯಲ್ಲಿ ಬಳಸಲಾದ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಲು ಇಸಿಐಎಲ್ ಸಂಸ್ಥೆಯು ಖಾಸಗಿ ಸಮಾಲೋಚಕರನ್ನು ಬಳಸಿದೆಯೇ ಎಂದು ‘ಕ್ವಿಂಟ್’ ಕಳೆದ ವಾರ ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗ, ಅದು ‘ಇಲ್ಲ’ ಎಂಬ ಉತ್ತರ ನೀಡಿತ್ತು.

“ಬಿಇಎಲ್ ಮತ್ತು ಇಸಿಐಎಲ್ ಸಂಸ್ಥೆಗಳಿಗೆ ಇಂಜಿನಿಯರ್‌ಗಳನ್ನು ಒದಗಿಸಲು ಯಾವುದೇ ಖಾಸಗಿ ಸಂಸ್ಥೆಯನ್ನು ನೇಮಿಸಲಾಗಿಲ್ಲ” ಎಂದು ಚುನಾವಣಾ ಆಯೋಗದ ವಕ್ತಾರೆ ಶಿಫಾಲಿ ಶರಣ್ ಉತ್ತರ ನೀಡಿದ್ದರು. (ಇಲ್ಲಿ ಬಿಇಎಲ್ ಎಂದರೆ, ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ತಯಾರಿಸಲು ಸರಕಾರ ನೇಮಿಸಿದ ಸಾರ್ವಜನಿಕ ರಂಗದ ಇನ್ನೊಂದು ಉದ್ದಿಮೆಯಾಗಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್)

ಚುನಾವಣಾ ಆಯೋಗವು ಸಾರ್ವಜನಿಕರಿಂದ ಸತ್ಯವನ್ನು ಮುಚ್ಚಿಡುತ್ತಿದೆ ಎಂಬುದು ಸ್ಪಷ್ಟ. ಆದರೆ, ಯಾಕಾಗಿ?

‘ಸಮಾಲೋಚಕ’ ಸಂಸ್ಥೆಯ ನಿಗೂಢತೆ

2017ರಲ್ಲಿ ಉತ್ತರಖಂಡ ವಿಧಾನಸಭಾ ಚುನಾವಣೆಯ ವೇಳೆ ವಕೀಲ ಅಮಿತ್ ಅಹ್ಲುವಾಲಿಯಾ ಎಂಬವರು ಮಾಹಿತಿ ಹಕ್ಕು ಕಾಯಿದೆಯಡಿ ಒಂದು ಅರ್ಜಿ ಸಲ್ಲಿಸಿದ್ದರು. ಅವರು ಆ ಹೊತ್ತಿಗೆ ಇಸಿಐಎಲ್ ಸಂಸ್ಥೆಗೆ ಕೇಳಿದ್ದ ಪ್ರಶ್ನೆ ಮತ್ತು ಪಡೆದಿದ್ದ ಉತ್ತರ ಕೆಳಗಿವೆ:

“ಇಸಿಐಎಲ್‌ಗೆ ಸಮಾಲೋಚಕರನ್ನು ಒದಗಿಸುವ/ಪೂರೈಸುವ ಯಾವುದೇ ಸಂಸ್ಥೆ ಇದೆಯೇ? ಹೌದಾದಲ್ಲಿ, ಸಮಾಲೋಚಕರ ನೇಮಕಾತಿಗೆ ಇರುವ ಮಾನದಂಡಗಳ ಜೊತೆಗೆ ಈ ಮಾಹಿತಿಯನ್ನು ದಯವಿಟ್ಟು ನೀಡಿರಿ.”

“ಇಸಿಐಎಲ್ ನುರಿತ/ಅರೆನುರಿತ “ಸಮಾಲೋಚಕ”ರನ್ನು ನೇಮಿಸುತ್ತಿದೆ. ಹೌದು. ಅಧಿಕೃತವಾದ ಒಂದೇ ಒಂದು ಮಾನವಶಕ್ತಿ ಪೂರೈಕೆ ಸಂಸ್ಥೆ ಎಂದರೆ, M/s ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಮುಂಬಯಿ ವಿಳಾಸ ಹೊಂದಿದೆ). (ಇದ್ದದ್ದು ಇದ್ದ ಹಾಗೆ- ಅಂದರೆ, ವಿಳಾಸ ಕೊಡಲಾಗಿಲ್ಲ!)

ಈ ಆರ್‌ಟಿಐ ಮಾಹಿತಿಯ ಆಧಾರದಲ್ಲಿ ‘ಕ್ವಿಂಟ್’,  2017ರ ಉತ್ತರಖಂಡ ವಿಧಾನಸಭಾ ಚುನಾವಣೆಯ ವೇಳೆ ಭಾಗಿಯಾಗಿದ್ದ ಕೆಲವು ‘ಸಮಾಲೋಚಕ’ ಇಂಜಿನಿಯರ್‌ಗಳ ಜೊತೆಗೆ ಮಾತನಾಡಿತು. ಅವರಲ್ಲಿ ಕೆಲವರು ತಮ್ಮನ್ನು 2019ರ ಲೋಕಸಭಾ ಚುನಾವಣೆ ಮತ್ತು 2018ರ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಕೆಲವು ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ನಿರ್ವಹಣೆಗೆ ನೇಮಿಸಲಾಗಿತ್ತು ಎಂದು ದೃಢಪಡಿಸಿದರು.

ಮುಕ್ತ, ನ್ಯಾಯಬದ್ಧ ಚುನಾವಣೆ ಜೊತೆ ರಾಜಿ?

‘ಕ್ವಿಂಟ್’, ಮಾಜಿ ಮುಖ್ಯ ಚುನಾವಣಾ ಕಮೀಷನರ್ ಎಸ್. ವೈ. ಖುರೇಶಿ ಅವರೊಂದಿಗೆ ಮಾತನಾಡಿತು. 2017ರ ಚುನಾವಣೆ ನಡೆದು ಕೆಲವು ತಿಂಗಳುಗಳ ಬಳಿಕ ಇಸಿಐಎಲ್ ಸಂಸ್ಥೆಯು ಇವಿಎಂ ಮತ್ತು ವಿವಿಪ್ಯಾಟ್ ತಪಾಸಣೆಗೆ ಹೊರಗುತ್ತಿಗೆ ಕೊಟ್ಟಿರುವ ಬಗ್ಗೆ ಆರೋಪಗಳು ಬಂದಿದ್ದವು ಎಂದು ಅವರು ತಿಳಿಸಿದರು. ಆದರೆ, ತಾನು ಆಗಿನ ಚುನಾವಣಾ ಆಯೋಗವನ್ನು ಕೇಳಿದಾಗ, ಕೇವಲ ಸಂಸ್ಥೆಯೊಳಗಿನ ಇಂಜಿನಿಯರ್‌ಗಳನ್ನು ಮಾತ್ರ ಬಳಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿತ್ತು ಎಂದು ಖುರೇಶಿ ತಿಳಿಸಿದರು.

ಚುನಾವಣಾ ಆಯೋಗ ಅವರಿಗೆ ಈ ಭರವಸೆ ಜೊತೆ ಲಿಖಿತ ಮಾರ್ಗದರ್ಶಿ ಸೂತ್ರವನ್ನೂ ನೀಡಿದ್ದು, ಆ ಕುರಿತು ಅವರು ಟ್ವೀಟ್ ಕೂಡಾ ಮಾಡಿದ್ದರು. ಅದು ಹೀಗೆ ಹೇಳುತ್ತದೆ: “ಬಿಇಎಲ್/ಇಸಿಐಎಲ್‌ನ ಸಂಬಳ ಪಟ್ಟಿಯಲ್ಲಿ ಇರುವ ಇಂಜಿನಿಯರ್‌ಗಳನ್ನು ಮಾತ್ರ ಎಫ್ಎಲ್‌ಸಿ (ಮೊದಲ ಹಂತದ ತಪಾಸಣೆ)ಗಾಗಿ ಬಳಸಲಾಗಿದೆ.”

ಅದರೆ, ಇಸಿಐಎಲ್ ಸಂಸ್ಥೆ ಆರ್‌ಟಿಐ ಪ್ರಶ್ನೆಗೆ  ನೀಡಿದ ಉತ್ತರದಲ್ಲಿ 2017ರಿಂದಲೇ ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ನಿಂದ ಹೊರಗುತ್ತಿಗೆ ಇಂಜಿನಿಯರ್‌ಗಳನ್ನು ಪಡೆಯುತ್ತಿರುವುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದೆ. ಹೀಗಿರುವಾಗ ಚುನಾವಣಾ ಆಯೋಗವು ಖುರೇಶಿಯವರಂತಹ ಒಬ್ಬ ಮಾಜಿ ಕೇಂದ್ರ ಮುಖ್ಯ ಚುನಾವಣಾ ಕಮೀಷನರ್‌ಗೇ ಸುಳ್ಳು ಯಾಕೆ ಹೇಳಿತು?
(ಮೂಲ ವರದಿಯಲ್ಲಿ ಇದನ್ನು ಸಾಬೀತುಪಡಿಸುವ ಲಿಖಿತ ವಿವರಗಳಿದ್ದು, ಅದನ್ನು ಇಲ್ಲಿ ನೀಡಲಾಗಿಲ್ಲ).

ಖುರೇಶಿಯವರು ತನ್ನ ಪುಸ್ತಕ “ಎನ್ ಅನ್‌ಡಾಕ್ಯುಮೆಂಟೆಡ್ ವಂಡರ್: ದಿ ಮೇಕಿಂಗ್ ಆಫ್ ದಿ ಗ್ರೇಟ್ ಇಂಡಿಯನ್ ಇಲೆಕ್ಷನ್’ನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಖಾಸಗಿಯವರನ್ನು ಬಳಸದಿರುವ ಮಹತ್ವವನ್ನು ವಿವರಿಸಿದ್ದಾರೆ. ಅವರು ಹೇಳಿರುವುದರ ಸಾರಾಂಶವೆಂದರೆ, ಸರಕಾರಿ ನೌಕರರನ್ನೇ ಬಳಸಲಾಗುವುದು ಏಕೆಂದರೆ, ಅವರ ಮೇಲೆ ಆಡಳಿತಾತ್ಮಕ ನಿಯಂತ್ರಣ ಇರುತ್ತದೆ. ಖಾಸಗಿಯವರ ಮೇಲೆ ಚುನಾವಣೆ ಮುಗಿದ ತಕ್ಷಣ ಯಾವುದೇ ನಿಯಂತ್ರಣ ಇರುವುದಿಲ್ಲ. ಅವರಿಗೆ ಯಾವುದೇ ಭಯವಿಲ್ಲದ ಕಾರಣ ಅಕ್ರಮ ನಡೆಸುವುದು ಸುಲಭ.

2019ರ ಲೋಕಸಭಾ ಚುನಾವಣೆಗೆ ಒದಗಿಸಲು ಇಸಿಐಎಲ್ ಬಳಿ ಸಾಕಷ್ಟು ಇಂಜಿನಿಯರ್‌ಗಳು ಇದ್ದಿರಲಾರರು. ಇವಿಎಂ ತಯಾರಿಸುವ ಎರಡೇ ಸಂಸ್ಥೆಗಳಾದ ಇಸಿಐಎಲ್ ಮತ್ತು ಬಿಇಎಲ್ ಒಟ್ಟು 2,220 ಇಂಜಿನಿಯರ್‌ಗಳನ್ನು ಪೂರೈಸಿದ್ದವು. ಪ್ರಶ್ನೆ ಎಂದರೆ, ಇಸಿಐಎಲ್ ಅರ್‌ಟಿಐ ಅಡಿಯಲ್ಲಿ ಗುತ್ತಿಗೆ ಇಂಜಿನಿಯರ್‌ಗಳ ಬಳಕೆಯನ್ನು ಒಪ್ಪಿಕೊಂಡಿರುವಾಗ, ಚುನಾವಣಾ ಆಯೋಗವು ನಿರಾಕರಿಸುತ್ತಿರುವುದು ಏಕೆ? ಸಾರ್ವಜನಿಕರೊಂದಿಗೆ ಈ ಮಾಹಿಯನ್ನು ಏಕೆ ಹಂಚಿಕೊಂಡಿಲ್ಲ? ಇಂತಹಾ ಸೂಕ್ಷ್ಮ ಜವಾಬ್ದಾರಿಗೆ ಆಯ್ಕೆಯದ ಈ ನಿರ್ದಿಷ್ಟ ಸಂಸ್ಥೆಯನ್ನು ಯಾವ ಮಾನದಂಡ ಅಥವಾ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಯಿತು? ಪ್ರಕ್ರಿಯೆ ನಡೆದಿಲ್ಲವಾದರೆ, ಯಾರ ಶಿಫಾರಸಿನ ಮೇಲೆ ಆಯ್ಕೆ ನಡೆಯಿತು? ಸಂಸ್ಥೆಯ ಅರ್ಹತೆ ಮತ್ತು ಹಿನ್ನೆಲೆ ಏನು? ಬಳಸಿಕೊಳ್ಳಲಾದ ಖಾಸಗಿ ಇಂಜಿನಿಯರ್‌ಗಳ ಹಿನ್ನೆಲೆಯನ್ನು ಚುನಾವಣಾ ಆಯೋಗ ತಪಾಸಣೆ ಮಾಡಿದೆಯೇ?

(ಮೂಲ ವರದಿಯಲ್ಲಿ ಉತ್ತರಖಂಡ ಚುನಾವಣೆಯಲ್ಲಿ ಇಸಿಐಎಲ್ ಹೊರಗುತ್ತಿಗೆ ಇಂಜಿನಿಯರ್‌ಗಳ ಬಳಕೆ ಒಪ್ಪಿಕೊಂಡಿರುವ ಬಗ್ಗೆ ಆರ್‌ಟಿಐ ಪತ್ರ ವ್ಯವಹಾರಗಳ ವಿವರಗಳಿದ್ದು, ಅದನ್ನಿಲ್ಲಿ ನೀಡಲಾಗಿಲ್ಲ. ಮುಖ್ಯ ವಿಷಯ ಎಂದರೆ, ಈ ಖಾಸಗಿ ‘ಸಮಾಲೋಚಕ’ರನ್ನು ತಪಾಸಣೆ, ಮತದಾನ ಮಾತ್ರವಲ್ಲ; ಎಣಿಕೆ ವೇಳೆಯೂ ಬಳಸಿಕೊಳ್ಳಲಾಗಿತ್ತು ಎಂಬುದು! ಪಾರದರ್ಶಕತೆಗಾಗಿ ಹೋರಾಡುತ್ತಿರುವ ಕಾರ್ಯಕರ್ತರು ಇದರಲ್ಲಿ ಗಂಭೀರ ಲೋಪ ಮತ್ತು ವಂಚನೆಯ ಸಾಧ್ಯತೆಯನ್ನು ಕಾಣುತ್ತಿದ್ದಾರೆ.)

ಆರ್‌ಟಿಐ ಮಾಹಿತಿಯು ಇಂತಹ ಕೆಲವು ಇಂಜಿನಿಯರ್‌ಗಳ ಹೆಸರು ಹಾಗೂ ಮೊಬೈಲ್ ನಂಬರ್‌ಗಳನ್ನು ಒಳಗೊಂಡಿತ್ತು. ವಿಚಾರಿಸಿದಾಗ, ತಾವು ಟಿ ಎಂಡ್ ಎಂ ಸಂಸ್ಥೆಗೆ ಅರ್ಜಿ ಹಾಕಿ, ಇಸಿಐಎಲ್‌ನಲ್ಲಿ ಕೆಲಸದ ಗುತ್ತಿಗೆ ಪಡೆದಿರುವುದಾಗಿ ಅವರು ತಿಳಿಸಿದರು. ಕೆಲವೇ ಕೆಲವು ಇಸಿಐಎಲ್‌ನ ಖಾಯಂ ನೌಕರರನ್ನು ಚುನಾವಣೆಗೆ ನಿಯೋಜಿಸಲಾಗಿತ್ತು ಎಂದೂ ಅವರು ತಿಳಿಸಿದರು. ಯಾವುದೇ ಒಂದು ಪಕ್ಷ ತನ್ನ ಜನರನ್ನೇ ಅರ್ಜಿ ಹಾಕಿಸಿ, ಈ ಮೂಲಕ ಒಳಸೇರಿಸಲು ಸಾಧ್ಯವಿಲ್ಲವೆ ಎಂಬುದೊಂದು ಗಂಭೀರ ಪ್ರಶ್ನೆ.

ಚುನಾವಣೆ ನಡೆಯುವುದಕ್ಕೆ ಕೇವಲ ಹದಿನೈದು ದಿನಗಳಿರುವಾಗಿನ ತನಕ ಅಂದರೆ, ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ನಂತರದಲ್ಲಿ ಈ ಖಾಸಗಿ ‘ಸಮಾಲೋಚಕ’ರಿಗೆ ಇವಿಎಂ ಮತ್ತು ವಿವಿಪ್ಯಾಟ್ ತೆರೆಯುವ ಅವಕಾಶವಿದ್ದು, ಅವರು ಅಭ್ಯರ್ಥಿಗಳ ಹೆಸರು, ಚಿಹ್ನೆ ಮುಂತಾದವುಗಳನ್ನು ಅಳವಡಿಸಬೇಕಾಗಿತ್ತು. ಇಂತಹಾ ಸೂಕ್ಷ್ಮ ಕೆಲಸಕ್ಕೆ ಹೊರಗಿನವರನ್ನು ನೇಮಿಸುವುದರಿಂದ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗಲಿಲ್ಲವೆ? ಇದು ಚುನಾವಣಾ ಆಯೋಗಕ್ಕೆ ಗೊತ್ತಿಲ್ಲ ಅಂದರೆ ಹೇಗೆ? ಚುನಾವಣೆ ನಡೆಯುತ್ತಿರುವಾಗಲೂ, ನಡೆದ ಬಳಿಕವೂ ಇವರನ್ನು ಬಳಸಲಾಗಿರುವಾಗ ಚುನಾವಣಾ ಆಯೋಗಕ್ಕೆ ಗೊತ್ತಿಲ್ಲದೇ ಇರುವುದು ಹೇಗೆ ಸಾಧ್ಯ? ಈ ಕುರಿತು ಇನ್ನಷ್ಟು ವಿವರಗಳನ್ನು ‘ಕ್ವಿಂಟ್’ ಪ್ರಕಟಿಸಲಿದೆ.

ಕೃಪೆ: ದಿ ಕ್ವಿಂಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಥಳಾಂತರಗೊಂಡ ಅಕ್ಬರ್ ನಗರ ನಿವಾಸಿಗಳನ್ನು SIR ನಿಂದ ಹೊರಗಿಟ್ಟಿರುವ ಬಗ್ಗೆ ಪರಿಶೀಲಿಸಲು ಲಕ್ನೋ ಚುನಾವಣಾ ಅಧಿಕಾರಿಗೆ ಸುಪ್ರೀಂ ಸೂಚನೆ

ಉತ್ತರ ಪ್ರದೇಶದಲ್ಲಿ ತಮ್ಮ ಮನೆಗಳನ್ನು ನೆಲಸಮಗೊಳಿಸಿ, ಸ್ಥಳಾಂತರದ ನಂತರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿಂದ ತಮ್ಮನ್ನು ಹೊರಗಿಡಲಾಗಿದೆ ಎಂದು ಆರೋಪಿಸಿ ಅಕ್ಬರ್ ನಗರದ ಮಾಜಿ ನಿವಾಸಿಗಳು ಎತ್ತಿರುವ ದೂರುಗಳನ್ನು...

‘ವಯಸ್ಕರು ಒಟ್ಟಿಗೆ ವಾಸಿಸಲು ನಿರ್ಧರಿಸುವುದು ಅಪರಾಧವಲ್ಲ..’; ಅಂತರಧರ್ಮೀಯ ಜೋಡಿ ಕುರಿತು ಕೋರ್ಟ್ ಮಹತ್ವದ ತೀರ್ಪು

"ಅಂತರ್ಧರ್ಮೀಯರಾದ ಇಬ್ಬರು ವಯಸ್ಕ ವ್ಯಕ್ತಿಗಳು, ಅವರು ತಮ್ಮ ಸ್ವತಂತ್ರ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ, ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನು ಅವರನ್ನು ತಡೆಯಲು ಅಥವಾ ಅಂತರಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಾಧ್ಯವಿಲ್ಲ" ಎಂದು...

ಗೋರಖ್‌ಪುರದ ಏಮ್ಸ್‌ನಲ್ಲಿ ನಾಗಾಲ್ಯಾಂಡ್ ವೈದ್ಯೆಗೆ ಕಿರುಕುಳ; ಜನಾಂಗೀಯ ನಿಂದನೆ

ಉತ್ತರ ಪ್ರದೇಶದ ಗೋರಖ್‌ಪುರದ ಏಮ್ಸ್‌ನಲ್ಲಿ ನಿಯೋಜಿತರಾಗಿದ್ದ ನಾಗಾಲ್ಯಾಂಡ್‌ನ ಮೂರನೇ ವರ್ಷದ ನಿವಾಸಿ ವೈದ್ಯರ ಮೇಲೆ ಭಾನುವಾರ ಸಂಜೆ ಸಂಸ್ಥೆಯ ಆವರಣದ ಬಳಿ ಮೂವರು ಜನಾಂಗೀಯ ನಿಂದನೆ, ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ...

‘2026 ರಲ್ಲಿ ಸಮುದ್ರವನ್ನು ಪ್ರಾಬಲ್ಯಗೊಳಿಸುತ್ತೇವೆ’: ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿಯಿಂದ ಭಾರತಕ್ಕೆ ಬಹಿರಂಗ ಬೆದರಿಕೆ

2008ರ ಮುಂಬೈ ದಾಳಿಯ ಭೀಕರತೆಯನ್ನು ಪ್ರತಿಧ್ವನಿಸುವ ಕಟು ಬೆದರಿಕೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಭಾರತದಲ್ಲಿ ಮತ್ತೊಮ್ಮೆ ಸಮುದ್ರ ಮಾರ್ಗವನ್ನು ಬಳಸಿಕೊಂಡು 26/11 ಮಾದರಿಯ ದಾಳಿಯನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ...

ಕೇರಳ ಹೆಸರು ಇನ್ನು ಮುಂದೆ ‘ಕೇರಳಂ’; ಕೇಂದ್ರ ಸಚಿವ ಸಂಪುಟ ಅನುಮೋದನೆ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. "ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ...

ನಾಡೋಜ ಗೌರವ ತಿರಸ್ಕರಿಸಿದ ಹಿರಿಯ ಚಿಂತಕ ಡಾ ಜಿ. ರಾಮಕೃಷ್ಣ; ರಾಜ್ಯಪಾಲರಿಂದ ಗೌರವ ಸ್ವೀಕರಿಸದಿರಲು ನಿರ್ಧಾರ

ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆಯುವ 34ನೇ ನುಡಿಹಬ್ಬದಲ್ಲಿ...

‘ಕೇರಳ ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ, ಸಿನಿಮಾದಲ್ಲಿ ತಪ್ಪು ಚಿತ್ರಣವಿದೆ’: ‘ದಿ ಕೇರಳ ಸ್ಟೋರಿ 2’ ಕುರಿತು ಕೇರಳ ಹೈಕೋರ್ಟ್

ವಿವಾದಾತ್ಮಕ 'ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್' ಸಿನಿಮಾಗೆ ಸರ್ಟಿಫಿಕೇಟ್ ನೀಡಿರುವ ಕುರಿತು ಕೇರಳ ಹೈಕೋರ್ಟ್ ಮಂಗಳವಾರ (ಫೆ.24) ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ಪ್ರಶ್ನಿಸಿದೆ ಎಂದು ಕಾನೂನು ಸುದ್ದಿ...

‘ಸರ್ವಾಧಿಕಾರಿ ಪ್ರವೃತ್ತಿ, ಹೇಡಿತನಕ್ಕೆ ಸಾಕ್ಷಿ’ : ಯುವ ಕಾಂಗ್ರೆಸ್‌ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಪಕ್ಷದ ಇತರ ಸದಸ್ಯರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಇದು ಸರ್ವಾಧಿಕಾರಿ ಪ್ರವೃತ್ತಿ ಮತ್ತು...

‘ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ’; ನ್ಯಾಯಮೂರ್ತಿ ಉಜ್ವಲ್  ಭೂಯಾನ್

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ...

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ; ಎಎಸ್ಎ ಪ್ರತಿಭಟನೆ

ದಲಿತ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ಹಲ್ಲೆ ನಡೆದಿದ್ದರೂ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆಡಳಿತಾತ್ಮಕ ನಿಷ್ಕ್ರಿಯತೆ ಇದೆ ಎಂದು ಆರೋಪಿಸಿ, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಸೋಮವಾರ (ಫೆ.23) ಪ್ರತಿಭಟನೆ ನಡೆಸಿತು...