ತನ್ನ ಮಗಳಿಗೆ ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು ಪಡೆದುಕೊಂಡ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ದ್ವಾರಕೇಶ್ವರಯ್ಯ ಸೇರಿದಂತೆ ಒಟ್ಟು 11 ಜನರ ವಿರುದ್ಧ ದಾವಣಗೆರೆಯ ಕೆಟಿಜೆ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಮಾಜಿ ಸಚಿವ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿ ಎಂ.ಆರ್.ಚೇತನ ಅವರು ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ ಎಂದು ಹಲವು ದಿನಗಳಿಂದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಅವರ ದಾಖಲೆಗಳು ಸಾಮಾಜಿಕ ಜಾಲತಾಣದಗಳಲ್ಲಿ ಹರಿದಾಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಎಂ.ಪಿ.ರೇಣುಕಾಚಾರ್ಯ ಲಿಂಗಾಯತರಾಗಿದ್ದು, ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕುಂದೂರು ಶಾಲೆಯಲ್ಲಿ ಅವರು ಓದುತ್ತಿದ್ದಾಗ ಪಡೆದಿರುವ ಶಾಲಾ ದಾಖಲೆಗಳಲ್ಲೂ ಜಾತಿ ಕಲಂನಲ್ಲಿ ‘ಲಿಂಗಾಯತ’ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಆದರೆ ಅವರ ಪುತ್ರಿ ಎಂ.ಆರ್.ಚೇತನ ಬೇಡ ಜಂಗಮ ಜಾತಿ ಎಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು 2012ರ ನ.17ರಂದು ಬೆಂಗಳೂರಿನ ಉತ್ತರ ತಾಲ್ಲೂಕು ತಹಸೀಲ್ದಾರ್ ಅವರಿಂದ ಪಡೆದಿದ್ದಾರೆ. ಅದನ್ನು ಜಿಲ್ಲಾ ಅಧಿಕಾರಿಗಳು ಸರಿ ಇದೆಯೇ ಎಂದು ಪರಿಶೀಲನೆಯನ್ನೂ ನಡೆಸಿಲ್ಲ ಎಂದು ‘ವಿಜಯ ಕರ್ನಾಟಕ’ ವರದಿ ಮಾಡಿತ್ತು.
ಇದನ್ನೂ ಓದಿ: ಪರಿಶಿಷ್ಟರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದರೆ ಶಿಕ್ಷೆ ಏನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರೇಣುಕಾಚಾರ್ಯ ಅವರು, ಮಗಳು ಪರಿಶಿಷ್ಟ ಜಾತಿಯ ಸರ್ಟಿಫಿಕೇಟ್ ಪಡೆದಿದ್ದು ನಿಜವೇ ಆಗಿದೆ ಎಂದು ಒಪ್ಪಿಕೊಂಡಿದ್ದರು. ಆದರೆ ತನ್ನ ಮಗಳು ಯಾವುದೆ ಸವಲತ್ತುಗಳನ್ನು ಪಡೆದುಕೊಂಡಿಲ್ಲ ಎಂದು ಹೇಳಿದ್ದರು. ಅಲ್ಲದೆ ಈ ಪ್ರಮಾಣ ಪತ್ರವನ್ನು ತನ್ನ ಸಹೋದರ ಮಾಡಿಕೊಟ್ಟಿದ್ದಾಗಿ ಕೂಡಾ ಹೇಳಿಕೊಂಡಿದ್ದರು.
ಈ ಬಗ್ಗೆ ದಲಿತ ಸಂಘಟನೆಯ ಮುಖಂಡರಾದ ಹೆಗ್ಗರೆ ರಂಗಪ್ಪ ದೂರು ನೀಡಿದ್ದರು. ಅದರಂತೆ ದ್ವಾರಕೇಶ್ವರಯ್ಯ ಸೇರಿದಂತೆ 11 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ನಕಲಿ ಜಾತಿ ಪ್ರಮಾಣ ಪತ್ರ ಪಡೆಯುದರ ಬಗ್ಗೆ ಕಾನೂನು ತಜ್ಞರು ಏನು ಹೇಳುತ್ತಾರೆ?
ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪರ್ಯಾಯ ಕಾನೂನು ವೇದಿಕೆಯ ಸಲಹೆಗಾರರಾದ ಶಿವಮಣಿ, “ನಕಲಿ ಜಾತಿ ಪ್ರಮಾಣ ಪತ್ರ ಪಡೆದರೆ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬಹುದು. ನಕಲಿ ಪ್ರಮಾಣ ಪತ್ರ ಬರೆದು ಮೀಸಲಾಯಿಯನ್ನು ಪಡೆದರೆ ನಿಜವಾದ ಫಲಾನುಭವಿಗೆ ತೊಂದರೆ ನೀಡಿದಂತಾಗುತ್ತದೆ. ಮೀಸಲಾತಿಯ ಅವಕಾಶ ಪಡೆದು ಸರ್ಕಾರಿ ಸೇವೆಯಲ್ಲಿದ್ದರೆ ಕೆಲಸದಿಂದ ವಜಾಗೊಳಿಸಬಹುದು. ಜನಪ್ರತಿನಿಧಿಯಾಗಿದ್ದರೆ ಸ್ಥಾನವನ್ನು ಅಸಿಂಧುಗೊಳಿಸಬಹುದು” ಎಂದು ಹೇಳಿದ್ದಾರೆ
ಇದನ್ನೂ ಓದಿ: ಮಾಧ್ಯಮಗಳ ಜಾತಿ ಅಜೆಂಡಾ ವಿರುದ್ದ ಆಕ್ರೊಶ: ಟಿವಿ ಚರ್ಚೆಗಳನ್ನು ಬಹಿಷ್ಕರಿಸಿದ ಬಿಎಸ್ಪಿ
“ಕರ್ನಾಟಕದಲ್ಲಿ ಸಿವಿಲ್ ರೈಟ್ಸ್ ಎನ್ಫೋರ್ಸ್ಮೆಂಟ್ ಏಜೆನ್ಸಿ ಎಂಬುವುದು ಇದೆ. ಯಾರ್ಯಾರು ಸರ್ಕಾರಿ ಅಧಿಕಾರಿಗಳು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸುವುದೇ ಅದರ ಕೆಲಸ. ಬಿಜೆಪಿ ಸಚಿವರಾಗಿರುವ ಪ್ರಭು ಚೌವ್ಹಾಣ್ ಅವರು ನಕಲಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಸದರಿ ಸಂಸ್ಥೆ ಹೇಳಿತ್ತು. ಆದರೆ ಜಿಲ್ಲಾಧಿಕಾರಿಯವರು ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿಲ್ಲ. ಚೌವ್ಹಾಣ್ ಸಚಿವರಾಗಿ ಮುಂದುವರಿಯುತ್ತಲೇ ಇದ್ದಾರೆ” ಎಂದು ಶಿವಮಣಿ ವಿಷಾದಿಸಿದ್ದಾರೆ.
“ಚೌವ್ಹಾಣ್ ಅವರು ಎಸ್ಸಿ ಪ್ರಮಾಣಪತ್ರ ಬರೆದು ಎರಡು ಸಲ ಗೆದ್ದಿದ್ದಾರೆ. ಇವರ ವಿರುದ್ಧ ಪ್ರಕರಣ ನಡೆಯುತ್ತಿದೆ. ಅಂತಾರಾಜ್ಯ ಜಾತಿ ಪ್ರಮಾಣ ಪತ್ರ ಪಡೆದಿರುವುದು ಶಿಕ್ಷಾರ್ಹ ಅಪರಾಧ” ಎಂದು ತಿಳಿಸಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ ಗಂಭೀರವಾಗಿ ತನಿಖೆಗಳೂ ನಡೆಯಬೇಕಿದೆ. ಬೆಂಗಳೂರಿನ ಡಿಆರ್ಡಿಒನಲ್ಲಿ ಏಳುನೂರು ಜನರು ನಕಲಿ ಜಾತಿ ಪ್ರಮಾಣಪತ್ರ ಬರೆದಿದ್ದಾರೆಂಬ ವರದಿಯಾಗಿದೆ” ಎಂದು ಶಿವಮಣಿ ಆತಂಕ ವ್ಯಕ್ತಪಡಿಸಿದ್ದಾರೆ.
ವಲಸಮ್ಮ ವರ್ಸಸ್ ಸ್ಟೇಟ್ ಆಫ್ ಕೇರಳ ಪ್ರಕರಣವನ್ನು ಉಲ್ಲೇಖಿಸಿದ ಶಿವಮಣಿ, “ಗಂಡ ಪರಿಶಿಷ್ಟ ಜಾತಿಯಾಗಿದ್ದಾರೆಂದು ಹೆಂಡತಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು ಕೆಲಸ ಪಡೆದಿರುತ್ತಾರೆ. ಆದರೆ ಹೆಂಡತಿ ಸವರ್ಣೀಯ ಜಾತಿಗೆ ಸೇರಿರುತ್ತಾರೆ. ಸುಪ್ರೀಂ ಈ ಕುರಿತು ವಿಚಾರಣೆ ನಡೆಸಿ, ಜಾತಿ ಎಂಬುದು ಹುಟ್ಟಿನಿಂದ ಬರುತ್ತದೆ. ಮದುವೆಯಾಗುವುದರಿಂದ ಬದಲಾಗುವುದಿಲ್ಲ ಎಂದಿದೆ” ಎಂದು ಶಿವಮಣಿ ವಿವರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ರಾಜಸ್ಥಾನದಲ್ಲಿ ಜಾತಿ ದೌರ್ಜನ್ಯದ ವಿರುದ್ದ ’ಆಪರೇಷನ್ ಸಮಾನತಾ’: ದಲಿತರ ಮದುವೆಯಲ್ಲಿ ಕುದುರೆ ಸವಾರಿಗೆ ಆಡಳಿತದ ಸಾಥ್!


