Homeಕರ್ನಾಟಕಗಾಂಧಿ ಜಯಂತಿ: ರಾಷ್ಟ್ರೀಯ ಆಷಾಢಭೂತಿತನದ ಆಚರಣೆ

ಗಾಂಧಿ ಜಯಂತಿ: ರಾಷ್ಟ್ರೀಯ ಆಷಾಢಭೂತಿತನದ ಆಚರಣೆ

- Advertisement -
- Advertisement -

ಮಹಾತ್ಮಾ ಗಾಂಧಿಯವರ ಬಗ್ಗೆ ಇತ್ತೀಚಿಗೆ ಓದಿದ ಅಷ್ಟೂ ಬರಹಗಳ ಪೈಕಿ ಸುನೀಲ್ ಖಿಲ್ನಾನಿಯವರ Incarnations: A History of Indian in 40 Lives ಎಂಬ ಪುಸ್ತಕದಲ್ಲಿರುವ ’ಗಾಂಧೀ’ ಎಂಬ ಹೆಸರಿನ ಅಧ್ಯಾಯದ ಆರಂಭದ ಸಾಲುಗಳನ್ನು ಅದ್ಯಾಕೋ ಮರೆಯಲಾಗುತ್ತಿಲ್ಲ. ನೆನಪಾದಾಗಲೆಲ್ಲಾ ನೋಯಿಸಿ ಕಾಡುವ ಆ ಸಾಲುಗಳನ್ನು ಖಿಲ್ನಾನಿಯವರ ಮೂಲ ಇಂಗ್ಲಿಷ್ ರೂಪದಲ್ಲೇ ಮೊದಲಿಗೆ ನೋಡಿ ಆ ನಂತರ ಕನ್ನಡಕ್ಕಿಳಿಸೋಣ.

Gandhinagar, the capital of Gujarat, is named after the region’s most famous son, Mohandas Gandhi – the Mahatma… Some years ago, I happened to watch a film there about the plot to kill Gandhi. As the screen assassin pumped bullets into Gandhi’s body, the audience erupted into wild applause and cheers…

ಗಾಂಧಿನಗರ, ಗುಜರಾತ್‌ನ ರಾಜಧಾನಿ. ಆ ನಗರಕ್ಕೆ ಆ ಹೆಸರು ಬಂದಿದ್ದು ಆ ರಾಜ್ಯದಲ್ಲಿ ಹುಟ್ಟಿದ ಹೆಮ್ಮೆಯ ಪುತ್ರ, ಪ್ರಸಿದ್ದರಲ್ಲಿ ಪ್ರಸಿದ್ಧ ಮೋಹನ್‌ದಾಸ್ ಗಾಂಧಿ ಅಥವಾ ಮಹಾತ್ಮನಿಂದಾಗಿ. ಕೆಲವು ವರ್ಷಗಳ ಹಿಂದೆ ಆ ನಗರದಲ್ಲಿ ಒಂದು ಸಿನೆಮಾ ನೋಡಿದೆ. ಅದು ಗಾಂಧಿಯವರ ಕೊಲೆಯ ಸಂಚಿನ ಸುತ್ತ ಹೆಣೆದ ಚಲನಚಿತ್ರ. ತೆರೆಯ ಮೇಲೆ ಕೊಲೆಗಾರ ಗಾಂಧಿಯವರ ದೇಹದ ಮೇಲೆ ಗುಂಡಿನ ಮಳೆಗರೆಯುತಿದ್ದ. ಆ ದೃಶ್ಯ ಮೂಡಿಬರುತ್ತಿದ್ದಂತೆ ಪ್ರೇಕ್ಷಕರೆಲ್ಲಾ ಆವೇಶ ಬಂದ ರೀತಿಯಲ್ಲಿ ಚಪ್ಪಾಳೆಗೈದರು. ಶಿಳ್ಳೆ-ಕೇಕೆಗಳ ಮೂಲಕ ಆ ದೃಶ್ಯವನ್ನು ನೋಡಿ ಸಂಭ್ರಮಿಸಿದರು.

ಖಿಲ್ನಾನಿಯವರು ಬರೆದದ್ದನ್ನು ಓದಿದ ಮೇಲೆ ಪ್ರತಿವರ್ಷ ಗಾಂಧೀ ಜಯಂತಿ ಬಂದಾಗಲೂ ಒಂದು ಪ್ರಶ್ನೆ ಕಾಡುತ್ತದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಗಾಂಧೀ ದ್ವೇಷ ಎಂಬ ವಿಷವನ್ನು ಜನರಿಗೆ, ವಿಶೇಷವಾಗಿ ಹೊಸ ತಲೆಮಾರುಗಳಿಗೆ, ಉಣ್ಣಿಸುವವರ ಪ್ರಯತ್ನ ಹೇಗೆ ಸಾಗಿರಬಹುದು ಮತ್ತು ಆ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ಸು ಕಂಡಿರಬಹುದು ಎಂಬುದು. ಜತೆಗೆ, ಗಾಂಧೀಜಿಯನ್ನು ಒಪ್ಪುವವರು ಪರ್ಯಾಯವಾಗಿ ಮನುಷ್ಯತ್ವವನ್ನು ಒಪ್ಪುವವರು ಇದನ್ನೆಲ್ಲಾ ನೋಡಿ ಮೌನದಿಂದ ಯಾಕಿದ್ದಾರೆ ಎನ್ನುವುದು ಕೂಡ ಅಷ್ಟೇ ಚೋದ್ಯದ ವಿಚಾರ. ಈ ಮೌನವನ್ನು ಸಮ್ಮತಿ ಅಂತ ಭಾವಿಸುವುದೇ, ಉದಾಸೀನ ಅಂತ ನೋಡುವುದೇ ಅಥವಾ ಶುದ್ಧ ಹೇಡಿತನ ಅಂತ ಕರೆಯುವುದೇ?

ಗಾಂಧೀಜಿಯವರ ವಿರುದ್ಧ ಜನರನ್ನು ಎತ್ತಿಕಟ್ಟುವ ಯತ್ನ ದೊಡ್ಡ ಮಟ್ಟಿನ ಯಶಸ್ಸು ಕಾಣುತ್ತಿದೆ ಎನ್ನುವುದಕ್ಕೆ ಮೇಲೆ ಖಿಲ್ನಾನಿ ಬರೆದ ಸಾಲುಗಳೇ ಸಾಕ್ಷಿ. ಅಷ್ಟೇ ಅಲ್ಲ. ಇಲ್ಲೊಂದು ವೈಯಕ್ತಿಕ ಅನುಭವವನ್ನು ಕೂಡಾ ದಾಖಲಿಸಬೇಕು ಅನ್ನಿಸುತ್ತದೆ. ನಮ್ಮ ನೆರೆಯಲ್ಲಿ ನಮ್ಮ ಕಣ್ಣೆದುರು ಬೆಳೆದ ಹೆಣ್ಣುಮಗಳೊಬ್ಬಳು, ಒಂದೇ ಪ್ರಯತ್ನದಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆ ಪಾಸು ಮಾಡಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವವಳು, ಒಮ್ಮೆ ನಾವು ದೆಹಲಿಗೆ ಹೋಗಿ ಮಹಾತ್ಮ ಗಾಂಧೀ ಸಮಾಧಿಯ ಫೋಟೋ ಒಂದನ್ನು ಹಂಚಿಕೊಂಡ ನಂತರ ನಮ್ಮಲ್ಲಿ ಮಾತೇ ಬಿಟ್ಟುಬಿಟ್ಟಳು. ದೇವಸ್ಥಾನಕ್ಕೆ ಭೇಟಿ ನೀಡುವಂತೆ ಗಾಂಧೀ ಸಮಾಧಿಗೆ ಭೇಟಿ ನೀಡುವಷ್ಟು ’ನಾವು ದೇಶದ್ರೋಹಿಗಳು ಮತ್ತು ಹಿಂದೂ ದ್ರೋಹಿಗಳಾಗಿದ್ದನ್ನು’ ಅವಳಿಗೆ ಸಹಿಸಲಾಗಿಲ್ಲ ಅಂತಲೂ, ಆ ಕಾರಣದಿಂದಾಗಿ ನಮ್ಮ ಜತೆ ಹಿಂದಿನಂತೆ ಬೆರೆಯುವುದಕ್ಕೆ ಅವಳ ಮನಸ್ಸು ಒಪ್ಪದು ಅಂತಲೂ, ನಮ್ಮ ಮನೆ ಮಗಳಂತೆ ಓಡಾಡುತ್ತಿದ್ದ ಆಕೆ ಯಾವ ಅಳುಕೂ ಇಲ್ಲದೆ ಹೇಳಿದಳು. ಇಂತಹದ್ದೊಂದು ಅನುಭವ ಆಗಿದ್ದನ್ನು ಇನ್ನೂ ನಂಬಲಾಗುತ್ತಿಲ್ಲ.

ಗಾಂಧೀಜಿಯವರ ಕೊಲೆ ನಡೆಯಿತು ಎಂಬುದನ್ನು ಅರಗಿಸಿಕೊಳ್ಳಲಾಗದೆ ವರಕವಿ ಬೇಂದ್ರೆ ಬರೆದ ಸಾಲುಗಳು ನೆನಪಾಗುತ್ತವೆ: ’ನೋಡಿರಣ್ಣ ಸೋಜಿಗ, ಹೀಗೂ ಉಂಟು ಈ ಜಗ’. ಮತ್ತೆ ಅದೇ ಪ್ರಶ್ನೆ ಮೂಡುತ್ತದೆ. ಹೋದ ವರ್ಷದ ಗಾಂಧೀ ಜಯಂತಿ ಮತ್ತು ಈ ವರ್ಷದ ಗಾಂಧೀ ಜಯಂತಿಯ ಮಧ್ಯೆ ಈ ದೇಶದಲ್ಲಿ ಗಾಂಧೀ ದ್ವೇಷ ಎಷ್ಟು ಹೆಚ್ಚಿರಬಹುದು ಅಂತ.

ಸಾಮಾಜಿಕ ಮಾಧ್ಯಮದಲ್ಲಿ ಎಷ್ಟೋ ಮಂದಿ ಗಾಂಧೀಜಿಯವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆಯ ಭಾವಚಿತ್ರವನ್ನು (ಡಿಪಿ) ಬಳಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವರನ್ನು ಈ ದೇಶದ ಕೆಲವು ಮಹಾನ್ ನಾಯಕರು ಫೇಸ್ಬುಕ್-ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಫಾಲೋ ಮಾಡುತ್ತಿರಬಹುದು. ಮತ್ತೆ ಅಕ್ಟೋಬರ್ ಎರಡರಂದು ಗಾಂಧೀ ಸಮಾಧಿಯ ಮೇಲೆ ಮಾಮೂಲಿಯಾಗಿ ಪುಷ್ಪಗುಚ್ಛ ಇಟ್ಟು ತೆಗೆಸಿಕೊಂಡ ಫೋಟೋವನ್ನು ಕೂಡಾ ಅದೇ ತಾಣಗಳಲ್ಲಿ ಈ ನಾಯಕರುಗಳೆಲ್ಲಾ ಹಂಚಿಕೊಳ್ಳಬಹುದು.

PC : India Today

ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಹಿಂದೂ ಮಹಾಸಭಾದ ಕೆಲವು ಮುಖಂಡರು ಪತ್ರಿಕಾಗೋಷ್ಠಿ ಕರೆದು ’ಗಾಂಧಿಯನ್ನೇ ಬಿಟ್ಟಿಲ್ಲ ಮತ್ತೆ ಇವರನ್ನು ಬಿಡುತ್ತೇವೆಯೇ’ ಎಂಬ ಧಾಟಿಯಲ್ಲಿ ಈ ರಾಜ್ಯದ ಈಗಿನ ಮುಖ್ಯಮಂತ್ರಿಗಳನ್ನು ಗುರಿಮಾಡಿ ಹೇಳಿದ್ದು ವರದಿಯಾಗಿತ್ತಲ್ಲ. ಆ ನಂತರ ಹಾಗೆ ಹೇಳಿದವರನ್ನು ಬಂಧಿಸಲಾಗಿದೆ ಎಂಬ ವರದಿಗಳೂ ಬಂದವು. ಇಲ್ಲಿ ಗಮನಿಸಬೇಕಾದ ಕೆಲವು ವಿಚಾರಗಳಿವೆ. ಸಂಬಂಧಪಟ್ಟವರ ಬಂಧನ ನಡೆದದ್ದು ಅವರ ಹೇಳಿಕೆಯಲ್ಲಿ ’ಮತ್ತೆ ಇವರನ್ನು ಬಿಡುತ್ತೇವೆಯೇ’ ಅಂತ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದ್ದಕ್ಕೆ. ಒಂದು ವೇಳೆ, ವಾಕ್ಯದ ಎರಡನೆಯ ಭಾಗವನ್ನು ಹೇಳದೆ, ’ಗಾಂಧಿಯನ್ನೇ ಕೊಂದಿದ್ದೇವೆ’ ಅಂತ ಅಷ್ಟೇ ಹೇಳಿ, ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಾಕುವ ರೀತಿಯ ಎರಡನೆಯ ಭಾಗವನ್ನು ಹೇಳದೆ ಹೋಗಿದ್ದರೆ ಅವರ ಬಂಧನವೇನೂ ಆಗುತ್ತಿರಲಿಲ್ಲ. ಬದಲಿಗೆ, ಇಷ್ಟೊತ್ತಿಗೆ ಆ ಹೇಳಿಕೆ ನೀಡಿದವರನ್ನೆಲ್ಲಾ ’ಕ್ಲಬ್ ಹೌಸ್’ನಲ್ಲಿ ಮಾತುಕತೆಗೆ ಕರೆದು ಹತ್ತುಸಾವಿರ ಜನ ಸೇರಿಸುವ ಸನ್ನಾಹ ನಡೆಯುತಿತ್ತು. ಗಾಂಧಿ ದ್ವೇಷ ಎಂಬ ಭಸ್ಮಾಸುರ, ಅದನ್ನು ಸೃಷ್ಟಿಸಿದವರ ತಲೆಗೆ ಕೈ ಇಡುವ ಕಾಲ ಬಂದಿದೆ ಎನ್ನುವುದಕ್ಕೆ ಮೇಲಿನ ಘಟನೆ ಒಂದು ನಿದರ್ಶನವೋ ಏನೋ? ಆದರೆ, ಈ ಗಾಂಧಿ ದ್ವೇಷ ಹರಡುವವರ ಮನಸ್ಥಿತಿ ಹೇಗಿದೆ ಎಂದರೆ, ಅವರಿಗೆ ತಾವು ಭಸ್ಮವಾದರೂ ಚಿಂತೆಯಿಲ್ಲ, ಈ ’ಪವಿತ್ರ’ ಕೆಲಸವನ್ನು ಮಾಡಿಯೇ ತೀರಬೇಕು ಎನ್ನುವ ಛಲವಿದ್ದಂತೆ ಇದೆ. ಇದು ಗಾಂಧೀ ವಿರುದ್ಧ ಶತಮಾನಗಳ ಯುದ್ಧದಲ್ಲಿ ತೊಡಗಿರುವವರು ಗಳಿಸಿರುವ ಬಹುದೊಡ್ಡ ಯಶಸ್ಸು ಅಂತಲೇ ಹೇಳಬೇಕಾಗುತ್ತದೆ. ಆ ರಾಜಕೀಯಕ್ಕೀಗ ಅಧಿಕಾರದಲ್ಲಿ ಇರುವವರ ಒತ್ತಾಸೆ ಮತ್ತು ಬೆಂಬಲ ಬೇರೆ ಇದೆ.

ಗಾಂಧೀಜಿಯ ಕೊಲೆಯ ಅಪಾದನೆಯಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುತ್ತಿರುವ ವರ್ಗಗಳಿಗೆ ಈಗ ಆ ಕೊಲೆಗೊಂದು ಸಮರ್ಥನೆ ಬೇಕಿದೆ. ಅದಕ್ಕಾಗಿ ದೇಶ ವಿಭಜನೆಯ ಆಪಾದನೆಯನ್ನು ಅವರ ಮೇಲೆ ಹೇರಿ ಅದನ್ನು ಎಲ್ಲರೂ ನಂಬುವ ಹಾಗೆ ಮಾಡುವ ರಾಷ್ಟ್ರೀಯ ಯೋಜನೆಯೊಂದು ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಗಾಂಧೀ ಹತ್ಯೆಯ ವಿಫಲ ಪ್ರಯತ್ನಗಳು ವಿಭಜನೆಯ ಪ್ರಸ್ತಾಪ ಮುನ್ನೆಲೆಗೆ ಬರುವುದಕ್ಕೆ ಮೊದಲೇ ಮತ್ತೆ ಮತ್ತೆ ನಡೆದದ್ದನ್ನು ಚರಿತ್ರೆ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ದಾಖಲಿಸಿದೆ. ಗಾಂಧೀಜಿಯವರನ್ನು ಕಂಡು ಕೇಳಿ ತಿಳಿದ ಸ್ವಾತಂತ್ರ್ಯಾನಂತರದ ಮೊದಲ ತಲೆಮಾರುಗಳನ್ನು ಗಾಂಧೀಜಿಯವರ ಕುರಿತಾಗಿ ಸುಳ್ಳು ಹೇಳಿ ನಂಬಿಸಲು ಸಾಧ್ಯವಾಗಿಲ್ಲ. ಗಾಂಧೀಜಿಯ ಮರಣಾನಂತರದ ಮೂರನೆಯ ತಲೆಮಾರು ಈಗ ಪ್ರವರ್ಧಮಾನಕ್ಕೆ ಬಂದಿದೆ. ಕೊನೆಗೂ ಗಾಂಧೀ ದ್ವೇಷಕ್ಕೆ ದೊಡ್ಡ ಮಾರುಕಟ್ಟೆ ಲಭಿಸಿದೆ. ಇದಕ್ಕೆ ಪೂರಕ ಎಂಬಂತೆ ಪೂನಾ ಒಪ್ಪಂದಕ್ಕೆ ಗಾಂಧೀಜಿ ಕಾರಣರಾಗಿ ದಲಿತರ ರಾಜಕೀಯ ಸಬಲೀಕರಣಕ್ಕೆ ತಡೆಯಾಯಿತು ಅಂತ ಒಂದು ಸಂಕತನ ಬೇರೆ ಹುಟ್ಟಿಕೊಂಡು ಹರಡುತ್ತಿದೆ. ಮೂಲ ಗಾಂಧೀ ದ್ವೇಷಿಗಳಿಗೆ ಬಯಸದೆ ಬಂದ ಪರೋಕ್ಷ ಬೆಂಬಲವಿದು.

ಗೋಡ್ಸೆ ಕೊಂದರೂ ಬದುಕಿದ ಗಾಂಧಿಯನ್ನು ಈಗ ದಿನನಿತ್ಯ ಕೊಲ್ಲಲಾಗುತ್ತಿದೆ. ಆ ಕೊಲೆಯ ರಕ್ತ ದೇಶದಲ್ಲಿ ಎಲ್ಲರ ಕೈಗೂ ಅಂಟಿಕೊಂಡಿದೆ – ಗಾಂಧೀ ದ್ವೇಷ ಹರಡುವವರಿಗೆ ಮಾತ್ರವಲ್ಲ, ಅವರು ಮಾಡುವುದನ್ನೆಲ್ಲಾ ನೋಡಿ ಸುಮ್ಮನಿರುವ ನಮ್ಮೆಲ್ಲರ ಕೈಗೂ ಅದು ಅಂಟಿಕೊಂಡಿದೆ. ಗಾಂಧೀಜಿ ಹಿಂದೂ ದ್ವೇಷಿ ಎನ್ನುವ ಸುಳ್ಳನ್ನು ಅವರು ಹೊಸ ತಲೆಮಾರಿನ ದೇಹದ ಕಣಕಣದಲ್ಲೂ ತುಂಬುತ್ತಿದ್ದರೆ ಹಾಗಲ್ಲ ಹೀಗೆ ಎನ್ನುವ ಪ್ರಯತ್ನ ಎಷ್ಟರ ಮಟ್ಟಿಗೆ ಆಗಿದೆ. ಗಾಂಧೀಜಿಯಿಂದಾಗಿ ದೇಶ ವಿಭಜನೆ ಆಯಿತು ಎಂಬ ಸುಳ್ಳನ್ನು ಅವರು ಗಟ್ಟಿ ಧ್ವನಿಯಲ್ಲಿ ಎಲ್ಲೆಡೆ ಹಬ್ಬುತಿದ್ದರೆ, ಹಾಗಲ್ಲ ಹೀಗೆ ಅಂತ ದೇಶ ವಿಭಜನೆಯ ಕತೆಯ ಸತ್ಯವನ್ನು ಹೇಳುವ ಮನಸ್ಸು ಯಾರಿಗಿದೆ. ಗೋಜಲು-ಗೋಜಲಾಗಿರುವ ಚಾರಿತ್ರಿಕ ಸನ್ನಿವೇಶವೊಂದರಲ್ಲಿ ಯಾವ ದೇಶ, ಎಲ್ಲಿಯ ವಿಭಜನೆ, ಅಂತ ಕೇಳುವ ಧೈರ್ಯ ಯಾರಿಗಿದೆ? ಪೂನಾ ಒಪ್ಪಂದದ ಕುರಿತೂ ಅಷ್ಟೇ. ಬೀಸು ಹೇಳಿಕೆಗಳನ್ನೇ ಸತ್ಯ ಅಂತ ಪ್ರತಿಪಾದಿಸುವ ಕೆಲವರ ವಾದಗಳಿಂದಾಗಿ ವಿನಾಕಾರಣ ಎದ್ದಿರುವ ಅಪನಂಬಿಕೆಗಳನ್ನು ಸರಿಪಡಿಸುವ ಕಾಳಜಿ
ಯಾರಿಗಿದೆ.

ದೇಶದ ದೊಡ್ಡ ನಾಯಕ ಸಾರ್ವಜನಿಕ ವೇದಿಕೆಗಳಲ್ಲಿ ನಿಂತು ಗಾಂಧೀಜಿಯ ಗುಣಗಾನ ಮಾಡುವುದು, ನಾಯಕನ ಅನುಯಾಯಿಗಳು, ನಾಯಕನ ಭಕ್ತರು, ಆತನ ಪಕ್ಷದ ಪುಡಾರಿಗಳು ಹಾದಿ-ಬೀದಿಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಗಾಂಧೀಜಿಯನ್ನು ಅವಹೇಳನ ಮಾಡುವುದು, ರಾಷ್ಟ್ರಪಿತ ಅಂತ ಬರೆಯುವಾಗ ಪಿತ ಎನ್ನುವ ಪದವನ್ನು ಉದ್ಧರಣ ಚಿಹ್ನೆಯೊಳಗೆ ಬರೆಯುವುದು, ಇನ್ನು ಕೆಲವರು ಇನ್ನೂ ಮುಂದುವರಿದು ’ಪಾಕಿಸ್ತಾನ್ ಪಿತ’ ಎನ್ನುವುದು, ಗಾಂಧೀಜಿಯ ಕುರಿತು ಸೃಷ್ಟಿಯಾದ ಅಗಾಧ ಹುಸಿ-ಕತೆಗಳ ತುಣುಕುಗಳನ್ನು ಹುಡುಕಿ-ಹುಡುಕಿ ಹರಡುವುದು ಇತ್ಯಾದಿಗಳೆಲ್ಲಾ ಎಗ್ಗಿಲ್ಲದೆ ನಡೆಯುತ್ತದೆ. ಪರೋಕ್ಷವಾಗಿ ಇಲ್ಲೆಲ್ಲಾ ನಡೆಯುವುದು ಗಾಂಧೀಜಿಯ ಕೊಲೆಯ ಸಮರ್ಥನೆ. ಇದನ್ನು ಒಂದು ದೊಡ್ಡ ಸಂಖ್ಯೆಯ ಜನ ಮಾಡುವುದು, ಅದಕ್ಕಿಂತ ದೊಡ್ಡ ಸಂಖ್ಯೆಯ ಜನ ಅದನ್ನೆಲ್ಲಾ ನೋಡಿ ಸುಮ್ಮನಿರುವುದು. ಹೀಗಿರುವಾಗ ಗಾಂಧೀ ಜಯಂತಿ ಆಚರಿಸುವುದು ಒಂದು ರಾಷ್ಟ್ರೀಯ ದಿನಾಚರಣೆ ಎನ್ನುವುದಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಆಷಾಢಭೂತಿತನದ
ಆಚರಣೆಯಂತೆ ಕಾಣಿಸುತ್ತದೆ.

PC : Varthabharathi (ಪೂನಾ ಒಪ್ಪಂದ)

ಗಾಂಧೀಜಿ ಹೇಳುತ್ತಿದ್ದರಂತೆ ಅನ್ಯಾಯ ಮಾಡುವುದಷ್ಟೇ ಅಪರಾಧವಲ್ಲ, ಅನ್ಯಾಯ ಮತ್ತು ಅಸತ್ಯಗಳನ್ನು ಕಂಡು ಸುಮ್ಮನಿರುವುದು ಕೂಡಾ ಅಪರಾಧ ಅಂತ. ನಾವೀಗ ಗಾಂಧೀಜಿಯ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಕುರಿತು, ಅವರ ವಿರುದ್ಧ ಹರಡಿಸಲಾಗುತ್ತಿರುವ ಅಸತ್ಯಗಳ ಕುರಿತು ಸುಮ್ಮನಿದ್ದೇವೆ. ಅದು ಅಪರಾಧ. ಹಾಗಾಗಿ, ಗಾಂಧೀ ಜಯಂತಿಯನ್ನು ಆಚರಿಸುವ ನೈತಿಕ ಹಕ್ಕು ಈ ದೇಶದಲ್ಲಿ ಯಾರಿಗೂ ಉಳಿದಿಲ್ಲ. ಗಾಂಧೀಜಿಯವರ ಕಲ್ಪನೆಯ ಭಾರತವನ್ನು ಕಟ್ಟುವುದಕ್ಕೆ ನಮಗೆ ಆಗಿಲ್ಲ ಎನ್ನುವ ಕಾರಣಕ್ಕೆ ಅಲ್ಲ ನಾವು ಅವರ ಜಯಂತಿ ಆಚರಿಸುವ ನೈತಿಕ ಹಕ್ಕನ್ನು ಕಳೆದುಕೊಂಡಿರುವುದು. ಅವರನ್ನು ಈ ದೇಶದ ಖಳನಾಯಕ ಎಂದು ಕೆಲವರು ಬಿಂಬಿಸುತ್ತಿರುವಾಗ ದೇಶಕ್ಕೆ ದೇಶವೇ ಮೌನವಹಿಸಿ ಕುಳಿತಿದೆಯಲ್ಲಾ ಅದಕ್ಕೆ. ನಿಜ, ಗಾಂಧೀ ದ್ವೇಷದ ಪ್ರಚಾರಕ್ಕೆ ಎಲ್ಲರೂ ಬಲಿ ಬೀಳದೆ ಇರಬಹುದು. ಆದರೆ, ಈ ಪ್ರಚಾರದಿಂದಾಗಿ ಗಾಂಧೀ ದ್ವೇಷ ಸದ್ದಿಲ್ಲದೇ ಮನಸ್ಸುಗಳನ್ನು ಆವರಿಸಿಕೊಳ್ಳುತ್ತಿರುವಾಗ ಸುಮ್ಮನಿದ್ದುಬಿಡುವುದು ಅಪಾಯಕಾರಿಯಾದ ನಿಲುವು. ಗಾಂಧೀ ಜಯಂತಿಯಂದು ಸನ್ಮನಸುಳ್ಳ ಕೆಲವರು ಅವರ ಕುರಿತು ಆಡುವ ನಾಲ್ಕು ಒಳ್ಳೆಯ ಮಾತುಗಳು ಈ ಅಪಾಯದಿಂದ ದೇಶವನ್ನು ರಕ್ಷಿಸಲಾರವು.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು


ಇದನ್ನೂ ಓದಿ: ಮೋದಿ ಎದುರು ಗಾಂಧಿತತ್ವಗಳ ಅಗತ್ಯತೆ ಸ್ಮರಿಸಿದ ಅಮೆರಿಕ ಅಧ್ಯಕ್ಷ ಬೈಡನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...