Homeಮುಖಪುಟತೊಂಭತ್ತರ ಹರೆಯದಲ್ಲೂ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತ ಹಿರಿಯಜ್ಜ..!!

ತೊಂಭತ್ತರ ಹರೆಯದಲ್ಲೂ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತ ಹಿರಿಯಜ್ಜ..!!

2019ನೆಯ ವರ್ಷದ ರಸಾಯನ ವಿಜ್ಞಾನದ ನೊಬೆಲ್ ಪುರಸ್ಕೃತರಾದ ಜಾನ್ ಈವರೆಗಿನ ನೊಬೆಲ್ ಪುರಸ್ಕೃತರಲ್ಲೇ ಹಿರಿಯರು...

- Advertisement -
- Advertisement -

ಇದೇ ವರ್ಷದ ಜುಲೈ 22ಕ್ಕೆ 98ವರ್ಷ ತುಂಬುವ ಹಿರಿಯಜ್ಜ ಪ್ರತಿದಿನವೂ ಪ್ರಯೋಗಾಲಕ್ಕೆ ಹೋಗಿ ಬರುತ್ತಾರೆಂದರೆ ದೊಡ್ಡ ಅಚ್ಚರಿಯೇ! ಜಾನ್ ಗುಡ್‌ಎನಫ್ ತಮ್ಮ ತೊಂಭತ್ತರ ಹರೆಯದಲ್ಲಿ ದಿನವೂ ಆಸ್ಟಿನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಮೆಕಾನಿಕಲ್ ಇಂಜನಿಯರಿಂಗ್ ಮತ್ತು ಮಟೆರಿಯಲ್ ವಿಜ್ಞಾನ ಪ್ರಯೋಗಾಲಕ್ಕೆ ಹೋಗಿ ಸಂಶೋಧನೆಯಲ್ಲಿ ತೊಡಗಿರುತ್ತಾರೆ.2019ನೆಯ ವರ್ಷದ ರಸಾಯನ ವಿಜ್ಞಾನದ ನೋಬೆಲ್ ಪುರಸ್ಕೃತರೂ ಆಗಿರುವ ಜಾನ್ ಈವರೆಗಿನ ನೊಬೆಲ್ ಪುರಸ್ಕೃತರಲ್ಲೇ ಹಿರಿಯರು. ಅಷ್ಟೇ ಅಲ್ಲ ಪ್ರಶಸ್ತಿ ಸ್ವೀಕಾರಕ್ಕೂ ಗಾಲಿ ಖುರ್ಚಿಯಲ್ಲೇ ಬಂದು, ತಮ್ಮ ಭಾಷಣವನ್ನೂ ಮಾಡಿದರು.

ನಾಗರಿಕ ಜಗತ್ತಿಗೆ ಮಹತ್ವವಾದ ಅನ್ವೇಷಣೆಯನ್ನು ತಮ್ಮ 50ರ ಹರೆಯದಲ್ಲಿಯೇ ಕೊಡುಗೆಯಾಗಿ ಕೊಟ್ಟ ಈ ವಿಜ್ಞಾನಿಗೆ ಇನ್ನೂ ಮತ್ತೂ ಮಹತ್ತರವಾದ ತಮ್ಮ ಕನಸೊಂದನ್ನು ನನಸು ಮಾಡುವ ಬಯಕೆಯಂತೆ.

ಇಪ್ಪತ್ತನೆಯ ಶತಮಾನದ ಎರಡು ಮಹತ್ವದ ಶೋಧಗಳೆಂದರೆ ಇಲೆಕ್ಟ್ರಾನಿಕ್ ಲೋಕವನ್ನು ಸಾಧ್ಯಮಾಡಿದ ಟ್ರಾನ್ಸ್ಸಿಸ್ಟರ್ ಮತ್ತು ಇಡೀ ಎಲೆಕ್ಟ್ರಾನಿಕ್ ಲೋಕವನ್ನು ಮೊಬೈಲಾಗಿಸಿದ ಹಗುರವಾದ ಲಿತಿಯಂ ಅಯಾನಿನ ಬ್ಯಾಟರಿ. ಗಾತ್ರದಲ್ಲಿ ಎರಡೂ ಒಂದನ್ನೊಂದು ಪೈಪೋಟಿ ಮಾಡುತ್ತಾ ಚಿಕ್ಕದಾಗುತ್ತಾ ಬೆಳೆದವು. ಟ್ರಾನ್ಸಿಸ್ಟರ್ ಅನ್ವೇಷಣೆಯನ್ನು ಬೆಲ್ ಪ್ರಯೋಗಾಲಯದ ವಿಜ್ಞಾನಿಗಳು 1947ರಲ್ಲಿಯೇ ಮಾಡಿ ಇಂದಿನ ಇಲೆಕ್ಟ್ರಾನಿಕ್ ಜಗತ್ತನ್ನು ಇಷ್ಟು ಅಗಲವಾಗಿ ಬೆಳೆಸಿದ್ದಾರೆ. ಅದರ ಈ ಬೆಳವಣಿಗೆಯನ್ನು ಚಲನೆಗೆ ಒಗ್ಗುವಂತೆ ಮಾಡಿದ ಕೀರ್ತಿಯು ಚಿಕ್ಕದಾಗುತ್ತಾ-ಹಗುರವಾಗುತ್ತಾ ಬೆಳೆಯುತ್ತಿರುವ ಲಿತಿಯಂ ಬ್ಯಾಟರಿಯದು. ಸಮಕಾಲೀನ ನಾಗರಿಕತೆಯಲ್ಲಿ ಒಟ್ಟಾರೆ ಆರ್ಥಿಕ ವಹಿವಾಟಿನಲ್ಲಿ ಇಲೆಕ್ಟ್ರಾನಿಕ್ ಉದ್ಯಮದ ಪಾತ್ರ ಹಿರಿದು. ಎಷ್ಟೆಂದರೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನು! ನಮ್ಮ ಆಲೋಚನೆಗಳಿಗೆ ಧ್ವನಿಯನ್ನು ಅಷ್ಟೇ ವೇಗವಾಗಿ ಹರಿಬಿಡಲು ಸಾಧ್ಯವಾಗುತ್ತಿದೆ ಎಂದರೆ, ಅದಕ್ಕೆ ಸಾಧನವಾಗಿ ಶಕ್ತಿ ಒದಗಿಸುವ ಲಿತಿಯಂ ಬ್ಯಾಟರಿಯ ಚಮತ್ಕಾರವು ಅದರಲ್ಲಿ ಬೆರೆತಿದೆ. ಇದರ ಹಿಂದಿರುವ ವಿಜ್ಞಾನಿಯೇ ಈ ಹಿರಿಯಜ್ಜ, ಇನ್ನೂ ಕನಸುಗಳನ್ನು ಹೊತ್ತು ದಿನವೂ ಪ್ರಯೋಗಾಲಯಕ್ಕೆ ಅಲೆಯುತ್ತಿದ್ದಾರೆ.

ಕಳೆದ 60-70 ವರ್ಷದ ವೈಜ್ಞಾನಿಕ ಬದಲಾವಣೆಗಳಲ್ಲಿ ಮಹತ್ವವಾದ ಪೋಲಿಯೋ ವ್ಯಾಕ್ಸೀನು, ರಾಕೆಟ್ ತಂತ್ರಜ್ಞಾನ-ಆ ಮೂಲಕ ಸಾಧ್ಯವಾದ- ವ್ಯೋಮಯಾನ, ಇಂಟರ್ನೆಟ್ ಬೆಳವಣಿಗೆಗಳು ನಮ್ಮ ನಾಗರಿಕ ಬದುಕಿನ ನೋಟವನ್ನೇ ಅಚ್ಚರಿಗೊಳಿಸಿವೆ. ಇದನ್ನೆಲ್ಲಾ ಸಾಧ್ಯಮಾಡಲು ಒಳಗೆ ಮುಚ್ಚಿಟ್ಟ ಡಬ್ಬಿಯಲ್ಲಿ ಅಡಗಿದ ಬ್ಯಾಟರಿಯು ಇಡೀ ಕೌತುಕವನ್ನು ಜನಪ್ರಿಯಗೊಳಿಸುತ್ತಾ ತನ್ನ ಶಕ್ತಿಯನ್ನು ಕೊಡುತ್ತಿದೆ. ಈ ಲಿತಿಯಂ ಬ್ಯಾಟರಿಯನ್ನು 1980ರಲ್ಲಿ ಮೊದಲಬಾರಿಗೆ ಜಾನ್ ಗುಡ್‌ಎನಫ್ ರೂಪುಗೊಳಿಸಿದರು.

ನಂತರ 1991ರಲ್ಲಿ ಅದು ಸೋನಿ ಕಂಪನಿಯ ಮೂಲಕ ನಾಗರಿಕ ಬದುಕಿಗೆ ಪರಿಚಯಗೊಂಡಿತು. ಈ ಬ್ಯಾಟರಿಗಳು ಆ ಮೊದಲೂ ಇಲ್ಲವೆಂದಲ್ಲ ಇದ್ದವು ಅವು ಆಮ್ಲದೊಳಗೆ ಮುಳುಗಿದ್ದ ಲೋಹದ ಸರಳುಗಳನ್ನು ಒಳಗೊಂಡು ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿ ಎಲ್ಲಿಯಾದರೂ ಕೊಂಡೊಯ್ಯಲು ಅಸಾಧ್ಯ ಎನ್ನುವಂತಿದ್ದವು. ಆದರೆ ಲಿತಿಯಂ ಅತ್ಯಂತ ಹಗುರವಾದ ಲೋಹವಾಗಿದ್ದು ಅದರ ಮೂಲಕ ಇಂದು ಬ್ಯಾಟರಿಗಳು ಚಿಕ್ಕದಾಗುತ್ತಾ ಹಗುರವಾಗುತ್ತಾ ಬಂದಿವೆ.

ಈ ಲಿತಿಯಂಅನ್ನು ಬ್ಯಾಟರಿಯಲ್ಲಿ ಊಹಿಸಿದ್ದೇ ಒಂದು ಅಪ್ಪಟ ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವಾದ ಮಿಶ್ರಣ. ಈ ಎರಡೂ ಜ್ಞಾನಶಾಖೆಗಳ ಮೂಲಭೂತ ಅಧ್ಯಯನವಿಲ್ಲದ ವ್ಯಕ್ತಿಯೊಬ್ಬರು ಸಾಧ್ಯಮಾಡಿದ್ದು ಅಚ್ಚರಿಯೇ ಸರಿ. ಜಾನ್ ಗುಡ್‌ಎನಫ್ ತಮ್ಮ ಗಣಿತದ ಪದವಿಯನ್ನು ಪಡೆದ ನಂತರ ಸೈನ್ಯದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದವರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೇನೆಯಲ್ಲಿದ್ದು ಹೊರದೇಶಗಳ ಸುತ್ತಾಟದಲ್ಲಿ ಕಳೆದವರು. ಯುದ್ಧ ಮುಗಿದನಂತರ ಸೈನಿಕರಿಗೆ ಪುನರ್ವಸತಿ ಮಾಡಿಕೊಡುವ ತಯಾರಿಯಲ್ಲಿ ಉಳಿದ ಹಣದಿಂದ ಕೆಲವರನ್ನು ಹೆಚ್ಚಿನ ಓದಿಗೆ ಕಳಿಸಲು ಆಲೋಚಿಸಲಾಯಿತು. ಅಂತಹ ಆಕಸ್ಮಿಕವಾದ ನಿರ್ಧಾರದಲ್ಲಿ ಸಿಕ್ಕಿಕೊಂಡವರು ಜಾನ್ ಅವರನ್ನು ಚಿಕಾಗೋ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಓದಿಗೆ ಶಿಫಾರಸ್ಸು ಮಾಡಿ ಕಳಿಸಲಾಯಿತು. ಅದೂ ಭೌತವಿಜ್ಞಾನದ ಅಧ್ಯಯನಕ್ಕೆ! ತಮಾಷೆ ಎಂದರೆ ಆಗಲೇ ಜಾನ್ ಅವರಿಗೆ 24 ವರ್ಷ ತುಂಬಿದ್ದವು.

ಆಗಿನಕಾಲದಲ್ಲಿ ಭೌತವಿಜ್ಞಾನ ಏನಿದ್ದರೂ ಮೊದಲ 2-3 ದಶಕದೊಳಗೇ ಓದಿ ಅರ್ಥೈಸಿಕೊಳ್ಳುವುದು ಎನ್ನುವಂತಹ ಪರಿಪಾಠ. ಅಲ್ಲದೆ ತಮ್ಮ ಸಹಪಾಠಿಗಳಿಗೆ ಹೋಲಿಸಿದರೆ ಜಾನ್ ಹಿರಿಯರಾದ ಕಾರಣ ಭೌತವಿಜ್ಞಾನ ಕಲಿಸುವ ಶಿಕ್ಷಕರು ಅವರ ಕುರಿತು ತಮಾಷೆಯನ್ನೂ ಮಾಡುತ್ತಿರುತ್ತಾರೆ. “ಏನ್ರಿ ಈ ವಯಸ್ಸಿನಲ್ಲಿ ಭೌತವಿಜ್ಞಾನ ಕಲಿಯೋದು ಅಂದರೆ ಹೇಗೆ? ನಿಮ್ಮ ವಯಸ್ಸಿನವರು ಈಗಾಗಲೇ ಭೌತವಿಜ್ಞಾನದಲ್ಲಿ ಸಾಧನೆ ಮಾಡಿರುವವರು ಇದ್ದಾರಲ್ಲವೇ?” ಎಂದು ಹಾಸ್ಯ ಮಾಡಿದ್ದೂ ಇದೆ. ಇವೆಲ್ಲದರ ನಡುವೆಯೇ ಜಾನ್ ಅವರಿಗೆ ಸಂಶೋಧನೆ ಮುಗಿಸಿ ಪಿಎಚ್.ಡಿ ಪದವಿ ಪಡೆಯಲು ಸಾಧ್ಯವಾಯಿತು.

ಕಳೆದ ಹಲವು ದಶಕಗಳಿಂದ ವಿಜ್ಞಾನ ಜಗತ್ತು ಬಗೆಬಗೆಯ ಪದಾರ್ಥಗಳ ಬೆನ್ನು ಹತ್ತಿದೆ. ಹೊಸ ಹೊಸ ವಸ್ತುಗಳ ಹುಡುಕಾಟದಲ್ಲಿ ನಿರತವಾಗಿದೆ. ಇದು ಹಿಂದಿನಿಂದಲೂ ನಡೆದುಬಂದಿದೆ. ಹಾಗಾಗಿಯೇ ಹಿತ್ತಾಳೆಯಂತಹ ಅಲಾಯ್ಗಳೂ, ಪಿಂಗಾಣಿ, ಗಾಜಿನಂತಹ ವಸ್ತುಗಳೂ ಬಹಳ ಹಿಂದೆಯೇ ನಮಗೆ ಲಭ್ಯವಾಗಿವೆ. ಈಗಂತೂ ಲಭ್ಯ ಪದಾರ್ಥಗಳ ಪಟ್ಟಿಯೇ ಬಲು ದೊಡ್ಡದಿದ್ದರೆ ಆಶ್ಚರ್ಯವೇನಲ್ಲ. ಅವುಗಳ ಜಾಲ ದೊಡ್ಡ ದೊಡ್ಡ ಕಟ್ಟಡ ಕಟ್ಟುವ ಪದಾರ್ಥಗಳಿಂದ ಹಿಡಿದು ವಿದ್ಯುತ್ ಸಂಪರ್ಕಿಸುವ ಸಣ್ಣ ತಂತಿಯವರೆಗೂ ಹಬ್ಬಿದೆ. ಹಾಗಾಗಿ ಇಂತಹ ಪದಾರ್ಥಗಳ ಹುಡುಕಾಟದ ಹಿಂದೆ ಸಂಶೋಧಕರ ದೊಡ್ಡ ಹಿಂಡೇ ಇದೆ. ಅನೇಕ ಕಂಪನಿಗಳೂ ಇವೆ. ಬ್ಯಾಟರಿ ರೂಪಿಸುವ ಪದಾರ್ಥಗಳನ್ನು ಅರ್ಥೈಸಿಕೊಂಡು ನಿರ್ವಹಿಸಲು ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವರಿತ ತಿಳಿವಳಿಕೆಯ ಅವಶ್ಯಕತೆಯಿರುತ್ತದೆ. ಏಕೆಂದರೆ ಬ್ಯಾಟರಿಯಲ್ಲಿ ಇಲೆಕ್ಟ್ರೋ ಕೋಡ್‌ಗಳಿರುತ್ತವೆ ಮತ್ತು ಅವುಗಳ ಮಧ್ಯೆ ಪ್ರವಹಿಸಲು ಆಯಾನುಗಳಿರಬೇಕಿರುತ್ತದೆ. ವಿದ್ಯುದಂಶದ ಉತ್ಪಾದನೆ ಹಾಗೂ ಪ್ರವಹಿಸುವ ಮಾಧ್ಯಮದಲ್ಲಿ ಆಯಾನುಗಳ ಚಲನೆ. ಇವೆಲ್ಲಾ ಅರ್ಥವಾಗಲು ಪದಾರ್ಥದ ಅಣುಸ್ವರೂಪದ ಲಕ್ಷಣಗಳ ಜತೆಗೆ ಪದಾರ್ಥದ ವರ್ತನೆಯ ತಿಳಿವಳಿಕೆಯೂ ಇರಬೇಕಿರುತ್ತದೆ. ವಿವಿಧ ಆಕ್ಸೈಡ್‌ಗಳ ಮಿಶ್ರಣದಿಂದ ಉನ್ನತವಾಗಿರುವುದನ್ನೂ ಮತ್ತು ಅದು ಹಗುರವಾಗಿಯೂ ಬಹುಕಾಲ ತಡೆಯಬಲ್ಲದ್ದಾಗಿಯೂ ಇರುವ ಹುಡುಕಾಟಕ್ಕೆ ಮೂಲವಸ್ತುಗಳ ರಚನೆ ಮತ್ತು ವರ್ತನೆಗಳ ಪಕ್ವವಾದ ಊಹೆಯು ತಿಳಿವಳಿಕೆಯ ಭಾಗವಾಗಿರಬೇಕು. ವಿದ್ಯುತ್ ಪ್ರವಹಿಸಲು ಲೋಹವೇ ಆಗಬೇಕು. ಲೋಹಗಳು ಹೇಳಿಕೇಳಿ ಸಾಂದ್ರವಾದವು, ಹೆಚ್ಚು ಭಾರವಾದವು. ಲಿತಿಯಂ ಲೋಹಗಳಲ್ಲೆಲ್ಲಾ ಹಗುರವಾದದ್ದು. ಅದಕ್ಕೆ ಸರಿಯಾದ ಮಿಶ್ರಣವನ್ನು ಸಾಧಿಸಿ ಇಲೆಕ್ಟ್ರೋಡ್ ಸಾಧಿಸಿದ್ದು ಜಾನ್ ಅವರ ಜಾಣ್ಮೆ. ಅಷ್ಟೇ ಅಲ್ಲ, ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸಲೂ ಆಗವಂತೆ ಮಾಡಿದ್ದು ಹಿರಿಯ ಸಾಧನೆ. ಅದಕ್ಕೇ ನಾವು ದಿನವೂ ಮೊಬೈಲ್ ಚಾರ್ಜ್ ಮಾಡುವುದನ್ನು ಒಂದು ಕಾಯಕ ಮಾಡಿಕೊಂಡಿದ್ದೇವೆ. ಸಾಲದ್ದಕ್ಕೆ ಎಲ್ಲಿಗಾದರೂ ಹೊರಟರೆ ತೆಗೆದುಕೊಂಡೊಯ್ಯುವ ಚಾರ್ಜರ್ ಕೂಡ ನಮ್ಮ ಹೊಸ ಸಂಗಾತಿ ಆಗಿದೆ.

ಹೀಗೆ ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸುವ ಬ್ಯಾಟರಿಗಳ ಮರುಬಳಕೆ ಮಾಡುವ ಗುಣವು ಪದಾರ್ಥಗಳ ಜಾಣತನದ ಬಳಕೆಗೂ ಸಹಾಯವಾಗುತ್ತವೆ. ಇಂತಹ ಅನ್ವೇಷಣೆಯಲ್ಲಿ ಮಹತ್ವವಾದದ್ದು ಲಿತಿಯಂ ಬ್ಯಾಟರಿ. ಏಕೆಂದರೆ ಇವನ್ನು ನಾವು ಎಲ್ಲೆಲ್ಲಿ ಎಲೆಕ್ಟ್ರಾನಿಕ್ ಆಕರಗಳನ್ನು ಕಾಣುತ್ತೇವೆಯೋ, ಅವುಗಳೆಲ್ಲದರ ಒಳಗಡೆ ಕಾಣದಂತಹ ಪುಟ್ಟ ಲಿತಿಯಂ ಬ್ಯಾಟರಿಯು ಕುಳಿತಿರುತ್ತದೆ. ಅದು ಕುಳಿತಿದ್ದು ಆ ಪರಿಕರವನ್ನು ಚಲನೆಗೂ ಒಳಪಡಿಸಿ ಎಲ್ಲಿಗೆ ಬೇಕಾದರೂ ಒಯ್ಯಬಲ್ಲಂತೆ ಮಾಡುವಲ್ಲಿ ಸಹಾಯವಾಗುತ್ತದೆ. ಅದು ನಮ್ಮೆಲ್ಲರ ಕೈಯಲ್ಲಿರುವ ಮೊಬೈಲ್ ಫೋನಿರಬಹುದು ಅಥವಾ ನಮ್ಮ ನಭೋಮಂಡಲದಲ್ಲಿ ತೇಲಾಡುತ್ತಿರುವ ಉಪಗ್ರಹಗಳ ನಿರ್ವಹಿಸುವ ಸಾಧನಗಳಲ್ಲಿಯೂ ಇರಬಹುದು.

ಕಾಣದಂತೆ ಅಡಗಿ ಕುಳಿತ ಮಾಯಾಪೆಟ್ಟಿಗೆಯ ಇಲೆಕ್ಟ್ರೋಡ್ ಅನ್ವೇಷಕ ಜಾನ್ ಬದುಕು ಸಹ ಮಾಯಾಜಾಲವೆ. ತನ್ನ ಹೆತ್ತಮ್ಮನಿಗೆ ಬೇಡವಾದ ಮಗುವಾಗಿ ಹುಟ್ಟಿದ ಜಾನ್, ಅಮ್ಮನ ಪ್ರೀತಿಯನ್ನೇ ಅನುಭವಿಸಲಿಲ್ಲ. ಅಪ್ಪನೂ ಪರಿಚಿತನಂತಹ ಬದುಕನ್ನೇ ಕೊಟ್ಟವರು. ಅದಕ್ಕೆ ತಮ್ಮ ಪುಟ್ಟ ಆತ್ಮಕತೆಯಲ್ಲಿ ಎಲ್ಲಿಯೂ ಅಮ್ಮ-ಅಪ್ಪನ ಹೆಸರನ್ನೂ ಹೇಳಿಲ್ಲ! ಇದೀಗ ಕಡೆಗಾಲದಲ್ಲಿ ಹೆಂಡತಿಯೂ ತೀರಿಹೋಗಿದ್ದಾರೆ. ಸಹೋದರರೊಬ್ಬರು ತಮ್ಮ 90ರ ಇಳಿವಯಸ್ಸಿನಲ್ಲಿ ಜೀವನಯಾತ್ರೆ ಮುಗಿಸಿದ್ದಾರೆ. ಸ್ವತಃ ಜಾನ್ 97 ವಸಂತಗಳ ಕಂಡು ಲವಲವಿಕೆಯ ಅಧ್ಯಯನ, ಸಂಶೋಧನೆ ನಡೆಸುತ್ತಾ, ಇಡೀ ನಾಗರಿಕ ಬದುಕನ್ನು ಚಲನೆಯಾಗಿಸುವ ಕನಸುಗಳ ನನಸಾಗಿಸುವಲ್ಲಿ ನಿರತರಾಗಿದ್ದಾರೆ. ಅವರ ಹೊಸ ಕನಸು, ನಮ್ಮ ಮಾಮೂಲಿ ಪೆಟ್ರೋಲ್ ಕಾರುಗಳ ಕಂಬಶ್ಚನ್ ಯಂತ್ರದ ಮಾದರಿಯ ವಿದ್ಯುತ್ ಕಾರು ರಸ್ತೆಯಲ್ಲಿ ಓಡಿಸುವುದಾಗಿದೆ.

ಹೊಸತೊಂದನ್ನು ಕೊಡುವ ಉತ್ಸಾಹದ ದಣಿವರಿಯದ ವಿಜ್ಞಾನದ ಅಜ್ಜನಿಗೆ ಹಲವಾರು ಗೌರವಗಳು. ಕಳೆದ 2009ರ ಎನ್ರಿಕೋ ಫರ್ಮಿ ಪುರಸ್ಕಾರದ ಜತೆಗೆ 2013ರಲ್ಲಿ ಅಮೆರಿಕಾದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಲಭಿಸಿದೆ. ರಸಾಯನಶಾಸ್ತ್ರದ ರಾಯಲ್ ಸೊಸೈಟಿಯು ಜಾನ್ ಗುಡ್‌ಎನಫ್ ಹೆಸರಲ್ಲಿ ರಸಾಯನವಿಜ್ಞಾನದ ಬಹುಮಾನವನ್ನು ಸ್ಥಾಪಿಸಿದೆ. ಭೌತಶಾಸ್ತ್ರ ಮತ್ತು ರಸಾಯನವಿಜ್ಞಾನದ ಸರಿಯಾದ ಮಿಳಿತವಾದ ಸಂಶೋಧನೆಯನ್ನು ಮಾಡಿದ ಹಿರಿಯಜ್ಜನಿಗೆ 90ರ ನಂತರ ಹೆಚ್ಚೂಕಡಿಮೆ ಪ್ರತೀವರ್ಷ ನೊಬೆಲ್ ಪುರಸ್ಕಾರಕ್ಕೆ ಹೆಸರು ಸೂಚಿಸಲಾಗಿತ್ತು. ಇಡೀ ಇಲೆಕ್ಟ್ರಾನಿಕ್ ಜಗತ್ತನ್ನು ಕ್ರಾಂತಿಕಾರಿಯಾಗಿಸುವ ಶೋಧಕ್ಕೆ ನೊಬೆಲ್ ಬಹುಮಾನ ಯೋಗ್ಯವೆಂದು ಹಲವಾರು ವಿಜ್ಞಾನಿಗಳ ಅನಿಸಿಕೆಯಾಗಿತ್ತು. ಕಡೆಗೂ 2019ನೆಯ ವರ್ಷದ ಅಕ್ಟೋಬರ್‌ನಲ್ಲಿ ಘೋಷಿಸಲಾದ ಪುರಸ್ಕಾರದಲ್ಲಿ ಜಾನ್ ಗುಡ್‌ಎನಫ್ ಕೇಳಿಬಂದು, ಅವರ ಅಭಿಮಾನಿಗಳಲ್ಲಿ ಪುಳಕವನ್ನು ಉಂಟುಮಾಡಿತ್ತು. 98 ರ ಹರೆಯದ ತಾತನ ಆಯುಷ್ಯ ಹೆಚ್ಚಲಿ, ವಿಶ್ವಾಸದ ಕಣಜವಾಗಿರುವ ಹಿರಿಯ ವಿಜ್ಞಾನಿಯಿಂದ ಎಳೆಯರಿಗೆ ಹುರುಪು ಬರಲಿ ಎಂಬುದು ಹಲವಾರು ವಿಜ್ಞಾನಪ್ರಿಯರ ಅಭಿಲಾಷೆ.

ಗುಡ್‌ಎನಫ್ ಅಂದರೆ ಸಹಜವಾಗಿ ಅಷ್ಟು ಸಾಕು, ಎಂದರ್ಥ. ಜಾನ್ ಅವರಿಗೆ ಅದು ಅವರ ಹೆಸರು ಮಾತ್ರ. ತೊಂಭತ್ತೆಂಟು ವರ್ಷಗಳ ಸಮೀಪದ ಹಿರಿಯಜ್ಜನಿಗೆ ತಾನು ಮಾಡಿದ್ದೇನೂ ಸಾಕಾಗಿಲ್ಲ. “It is not enough for Goodenough”.

  • ಡಾ. ಟಿ.ಎಸ್. ಚನ್ನೇಶ್

ಸೆಂಟರ್ ಫಾರ್ ಪಬ್ಲಿಕ್ ಅಂಡರ್ ಸ್ಟ್ಯಾಂಡಿಂಗ್ ಆಫ್ ಸೈನ್ಸ್, ಬೆಂಗಳೂರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...