Homeಕರ್ನಾಟಕಹರ್ಷ ಕೊಲೆ ಪ್ರಕರಣ: ಸರ್ಕಾರ ಎಸಗುತ್ತಿರುವ ಲೋಪಗಳತ್ತ ಜನಾಕ್ರೋಶ

ಹರ್ಷ ಕೊಲೆ ಪ್ರಕರಣ: ಸರ್ಕಾರ ಎಸಗುತ್ತಿರುವ ಲೋಪಗಳತ್ತ ಜನಾಕ್ರೋಶ

ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳೇ ಕೋಮುಗಲಭೆಗೆ ಪ್ರೇರಣೆ ನೀಡುತ್ತಿರುವುದನ್ನು, ಹಿಂಸಾಚಾರಕ್ಕೆ ಸರ್ಕಾರವೇ ಆಸ್ಪದ ನೀಡುತ್ತಿರುವುದನ್ನು ಪ್ರಜ್ಞಾವಂತರು ಖಂಡಿಸಿದ್ದಾರೆ. ಆಯ್ದ ಅಭಿಪ್ರಾಯಗಳು ಇಲ್ಲಿವೆ...

- Advertisement -
- Advertisement -

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಉದ್ವಿಗ್ನವಾಗಿರುವುದನ್ನು ಗಮನಿಸುತ್ತಿರುವ ಜನರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಗುರುತಿಸುತ್ತಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಸಚಿವರು, ಶಾಸಕರೇ ತರಹೇವಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು, ಕೊಲೆಯಾದ ವ್ಯಕ್ತಿಯ ಶವದ ಮೆರವಣಿಗೆಗೆ ಅವಕಾಶ ನೀಡಿರುವುದನ್ನು, ಇನ್ನೂ ಪೂರ್ಣ ತನಿಖೆಯಾಗದೆ ಇರುವ ಪ್ರಕರಣವನ್ನು ಅನ್ಯಕೋಮಿನ ತಲೆಗೆ ಕಟ್ಟುತ್ತಿರುವ ವಿದ್ಯಮಾನಗಳನ್ನು ಪ್ರಜ್ಞಾವಂತರು ಖಂಡಿಸಿದ್ದಾರೆ. ಬಿಜೆಪಿ ಸರ್ಕಾರ ಶವದ ರಾಜಕಾರಣ ಮಾಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸುನಿಲ್‌ ಬಜಿಲಕೇರಿ

“ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಂದೂಗಳ ಕೊಲೆಯಾಗುತ್ತಿದೆ ಎಂದು ಬಿಜೆಪಿ ರಾಜಕಾರಣ ಮಾಡುತ್ತಿತ್ತು. ಈಗ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹಿಂದೂಗಳ ಕೊಲೆಯಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕು ಎನ್ನೋಣವೇ” ಎಂದು ಸಂಘಪರಿವಾರದ ಮಾಜಿ ನಾಯಕ ಸುನಿಲ್‌ ಬಜಿಲಕೇರಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿರಿ: ಬಜರಂಗದಳ ಸದಸ್ಯನ ಕೊಲೆಯ ಹಿಂದೆ ಸಂಘಟನೆಗಳಿರುವ ಮಾಹಿತಿ ಸಿಕ್ಕಿಲ್ಲ: ಗೃಹಸಚಿವ

“ಶಿವಮೊಗ್ಗದಲ್ಲಿ ಹಿಂದುಳಿದ ಹಿಂದೂ ಕಾರ್ಯಕರ್ತನ ಕೊಲೆ, ಚುನಾವಣೆ ಹತ್ತಿರ ಬಂದಾಗ ಇದು ಕರಾವಳಿ ಮತ್ತು ಶಿವಮೊಗ್ಗ ಭಾಗದಲ್ಲಿ ಸಾಮಾನ್ಯ. ಕೇಂದ್ರದಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಬಿಜೆಪಿ ಸರಕಾರ. ಈ ಕೊಲೆಯಾದದ್ದು ಸಿದ್ದರಾಮಯ್ಯ ಸರಕಾರದಲ್ಲಿ ಅಲ್ಲ. ಕಾಂಗ್ರೆಸ್ ಸರಕಾರದಲ್ಲಿ ಹಿಂದುಗಳಿಗೆ ಭದ್ರತೆಯಿಲ್ಲ ಅಂತ ಹೇಳುವ ನಾಯಕರು, ಇವಾಗ ಯಾರ ವೈಫಲ್ಯ ಎತ್ತಿ ತೋರಿಸುತ್ತಾರೆ” ಎಂದು ಅವರು ಪ್ರಶ್ನಿಸಿದ್ದಾರೆ.

“ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಸಿದ್ದರಾಮಯ್ಯರನ್ನು ರಾಜೀನಾಮೆ ಕೊಡಲು ಒತ್ತಾಯ ಮುಗಿಲು ಮುಟ್ಟುತ್ತಿತ್ತು. ಇದಕ್ಕೆ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ- ಕೂಡಲೇ ರಾಜೀನಾಮೆ ಕೊಡಲಿ ಅಂತ ಕೇಳೋಣವೇ?” ಎಂದು ಅವರು ಕುಟುಕಿದ್ದಾರೆ.

ಶವದ ಮೇಲಿನ ರಾಜಕಾರಣ: ಶ್ರೀನಿವಾಸ ಕಾರ್ಕಳ

“ವ್ಯಕ್ತಿ ಯಾವ ಸಮುದಾಯಕ್ಕೇ ಸೇರಿರಲೀ, ಆತನ ಹತ್ಯೆ ದುಃಖದ ಸಂಗತಿ ಮತ್ತು ಅದು ಖಂಡನೀಯ. (ಇಂಥ ಸಾವಿನಿಂದ ಆಗುವ ನಷ್ಟದ ನೋವು ಆತನ ಮನೆಯವರಿಗೆ ಮಾತ್ರ ಗೊತ್ತು. ಅವರ ಶೋಕ ನಿರಂತರ). ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅದಕ್ಕಿಂತಲೂ ಖಂಡನೀಯ ಇಂತಹ ದುರದೃಷ್ಟಕರ ಘಟನೆಯನ್ನು ಹಿಂಸಾಚಾರ ಪ್ರಚೋದಿಸಲು, ದ್ವೇಷ ಹರಡಲು ರಾಜಕಾರಣಿಗಳು ಬಳಸಿಕೊಳ್ಳುವುದು. ಹೀಗೆ ಶವದ ಮೇಲೆ ರಾಜಕಾರಣ ಮಾಡುವವರು ದುಷ್ಟರು ಮತ್ತು ಮಹಾ ನೀಚರು” ಎಂದು ಚಿಂತಕ ಶ್ರೀನಿವಾಸ ಕಾರ್ಕಳ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ಹಿಜಾಬ್ – ಮಧ್ಯಂತರ ಆದೇಶದ ಅತಿಕ್ರಮದ ಬಗ್ಗೆ ಕ್ರಮಕೈಗೊಳ್ಳುತ್ತೇವೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ

ನಾವು ಉತ್ತರ ಪ್ರದೇಶ ಆಗುವುದು ಬೇಡ: ಆದಿತ್ಯ ಭಾರದ್ವಾಜ್‌

ಪತ್ರಕರ್ತ ಆದಿತ್ಯ ಭಾರದ್ವಾಜ್‌ ಅವರು ಸರ್ಕಾರ ಲೋಪದೋಷವನ್ನು ತಮ್ಮ ಅನುಭವದ ಹಿನ್ನೆಲೆಯಲ್ಲಿ ಬಿಚ್ಚಿಟ್ಟಿದ್ದಾರೆ. ಅವರ ಮಾತುಗಳು ಹೀಗಿವೆ:

ಹನ್ನೊಂದು ವರ್ಷಗಳ ನನ್ನ ಕ್ರೈಂ ವರದಿಗಾರಿಕೆಯ ಅನುಭವದಲ್ಲಿ ಹೇಳಬಲ್ಲೆ: ಕೋಮು ಸೂಕ್ಷ್ಮ ಪ್ರದೇಶದಲ್ಲಿ ಗಲಭೆಗೆ ಪ್ರಚೋದನೆ ನೀಡಬಲ್ಲ ಒಂದು ಸಾವು ಸಂಭಿವಿಸಿದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳುವ ಮೊದಲ ಕ್ರಮ ಮೃತದೇಹದ ಮೆರವಣಿಗೆಯನ್ನು ತಡೆಯುವುದು, ಆದಷ್ಟು ಬೇಗ ಜನ ಜಂಗುಳಿ ಇಲ್ಲದೆ ಅಂತ್ಯಸಂಸ್ಕಾರ ನಡೆಸಿಬಿಡುವುದು.

ಆದರೆ ಇವತ್ತು ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮೃತದೇಹದ ಮೆರವಣಿಗೆ ಮಾಡಲಾಗಿದೆ. ಹಿರಿಯ ಸಚಿವರಾದ ಈಶ್ವರಪ್ಪನವರು, ಮತ್ತು ಶಿವಮೊಗ್ಗದ ಸಂಸದರಾದ ರಾಘವೇಂದ್ರ ಅವರೇ ಈ ಮೆರವಣಿಗೆಯ ನೇತೃತ್ವ ವಹಿಸಿದ್ದರು! ಈ ಮೆರವಣಿಗೆ ಸಾಗಿದ ದಾರಿಯಲ್ಲೇ ದೊಂಬಿ ನಡೆದಿದೆ.

2002ರಲ್ಲಿ ಗೋಧ್ರಾದಲ್ಲಿ ಸತ್ತ ಕರಸೇವಕರ ಶವಗಳ ಮೆರವಣಿಗೆಯೇ ಕೋಮುಗಲಭೆಯನ್ನು ರಾಜ್ಯಕ್ಕೆಲ್ಲಾ ಹಬ್ಬಿಸಿತು. ಕಳೆದ ವರ್ಷ ಡಿಜೆ ಹಳ್ಳಿಯ ಗಲಭೆಯಲ್ಲಿ ಮೂರು ಜನ ಪೋಲೀಸ್ ಫೈರಿಂಗ್ ಅಲ್ಲಿ ಸತ್ತರು. ಮರುದಿನ ಈ ಮೂರು ಕುಟುಂಬಗಳನ್ನು ಸದ್ದುಗದ್ದಲವಿಲ್ಲದೆ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಪೋಲೀಸರು ಅಂತ್ಯಕ್ರಿಯೆ ನಡೆಸಿಕೊಟ್ಟರು. ಅವತ್ತು ಅಲ್ಲಿ ಆ ಮೂವರ ಮೃತದೇಹಗಳು ಡಿಜೆ ಹಳ್ಳಿಯಲ್ಲಿ ಇದ್ದಿದ್ದರೆ, ಸಾವಿರಾರು ಜನ ಸೇರಿದ್ದರೆ! ನೆನೆಸಿಕೊಳ್ಳಲೂ ಭಯ ಆಗುತ್ತೆ. ಹಾಥ್ರಸ್ ಅಲ್ಲಿ ಆ ನತದೃಷ್ಟ ಹುಡುಗಿಯ ಅಂತ್ಯಕ್ರಿಯೆಯೂ ಹೀಗೆ ಅವಸರದಲ್ಲಿ ನಡೆಯಿತು, ಆದರೆ ಅದರ ಉದ್ದೇಶ ಒಳ್ಳೆಯದಿರಲಿಲ್ಲ. ಸಾಕ್ಷಿ ನಾಶವೇ ಪ್ರಮುಖವಾಗಿತ್ತು. ಕುಟುಂಬಸ್ಥರ ಕೈಲಿ ಅಂತ್ಯಕ್ರಿಯೆ ನಡೆಸುವ ಮಾನವೀಯತೆಯೂ ಇಲ್ಲದಾಯಿತು.

ಇವತ್ತು ಮೃತದೇಹದ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದು ಅಕ್ಷರಶಃ ಅಪರಾಧ. ರಾಜಕಾರಣಿಗಳು ನೂರು ಹೇಳ್ತಾರೆ. ಆದರೆ ಶಿವಮೊಗ್ಗದ ಕಾನೂನು ಸುವ್ಯವಸ್ಥೆಗೆ ಜವಾಬ್ದಾರರಾದ ಪೋಲೀಸ್ ಅಧಿಕಾರಿಗಳು ವೃತ್ತಿಪರರಾಗಿದ್ದರೆ ಇದಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ.

ಇನ್ನು ಗೃಹಮಂತ್ರಿ ಆರಗ ಜ್ಞಾನೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೊಂದು ಕಿವಿ ಮಾತು. ಆಡಳಿತದ ಜವಾಬ್ದಾರಿ ಹೊತ್ತವರು ಎಲ್ಲಿ ರಾಜಕಾರಣವನ್ನು ನಿಲ್ಲಿಸಿಕೊಂಡು, ಆಡಳಿತಗಾರರಾಗಬೇಕು ಎಂಬ ಸ್ಪಷ್ಟತೆ ಹೊಂದಿರಬೇಕು. ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಕರ್ನಾಟಕ by and large ಉತ್ತಮವಾಗಿದೆ. ಈಗಾಗಲೇ ನಮ್ಮನ್ನು ದಕ್ಷಿಣದ ಉತ್ತರಪ್ರದೇಶ ಎಂದು ಕರೆಯುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯಲ್ಲೂ ನಾವು ಉತ್ತರಪ್ರದೇಶ ಆಗುವುದು ಬೇಡ. ಶಾಲೆ ಕಾಲೇಜುಗಳ ಕ್ಯಾಂಪಸ್ಸುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದೆ ರಾಜ್ಯಾದ್ಯಂತ ರಜೆ ಘೋಷಿಸಿದಾಗಲೇ ಆಡಳಿತ ನಡೆಸುವವರಿಗೆ ಲಜ್ಜೆ ಮೂಡಬೇಕಿತ್ತು. ಈಗ ಶಿವಮೊಗ್ಗದ ಗಲಭೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗದ ಯಾವುದೇ ಸರ್ಕಾರವನ್ನು, ಪಕ್ಷಾತೀತವಾಗಿ, ನಮ್ಮ ನಾಡು ತಿರಸ್ಕರಿಸಿದೆ ಎಂಬುದನ್ನು ಮುಖ್ಯಮಂತ್ರಿಗಳು ಗುರುತಿಸಬೇಕು.

ಇದನ್ನೂ ಓದಿರಿ: ಹಿಜಾಬ್-ಕೇಸರಿ ಶಾಲು ವಿವಾದ: ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ನಿಷೇದಾಜ್ಞೆ ಮುಂದುವರಿಕೆ

ಸಮೀರ್ ಹತ್ಯೆಯಾದಾಗ ಹಿಂಸಾಚಾರ ನಡೆದಿರಲಿಲ್ಲ: ಮನೀರ್‌

“ತಿಂಗಳ ಹಿಂದೆ ನರಗುಂದದಲ್ಲಿ ಬಜರಂಗದಳದ ಕಾರ್ಯಕರ್ತರಿಂದ ಸಮೀರ್ ಹತ್ಯೆ ನಡೆದಾಗ ಯಾವ ಹಿಂಸಾಚಾರವೂ ನಡೆದಿರಲಿಲ್ಲ. ಸ್ಥಳೀಯ ಶಾಸಕ / ಸಚಿವ ಸಿ ಸಿ ಪಾಟೀಲ್ ಇಲ್ಲಿಯವರೆಗೂ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲಿಲ್ಲ. ಇಂದು ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಯಾದಾಗ ಶಿವಮೊಗ್ಗದಲ್ಲಿ ಹಿಂಸೆ ಭುಗಿಲೆದ್ದಿದೆ (ಕೊಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ). ಸ್ವತಹ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಉದ್ರಿಕ್ತ ಜನಜಂಗುಳಿಯ ನೇತೃತ್ವ ವಹಿಸಿದ್ದಾರೆ. ಸರಕಾರ ನಡೆಸುವವರ ಉದ್ದೇಶ ಏನು?” ಎಂದು ಹೋರಾಟಗಾರ ಮುನೀರ್‌ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಹರಕು ಬಾಯಿಯ ಶಾಸಕರು ಮಾಸ್ಕ್‌ ತಗೆಯದಿರಲಿ: ನಾ.ದಿವಾಕರ

“ಹಂತಕರು ಯಾರು ಎಂದು ಊಹಿಸಿ, ಹುಯಿಲೆಬ್ಬಿಸಿ, ದೋಷಾರೋಪ ಮಾಡುವುದರಿಂದ ಮತ್ತಷ್ಟು ಅಮಾಯಕರು ಬಲಿಯಾಗುತ್ತಾರೆ. ಈ ಹುಡುಗ ಕೋಮುದ್ವೇಷಕ್ಕೇ ಬಲಿಯಾಗಿರಲಿ, ಇತರ ವೈಷಮ್ಯಗಳ ಬಲಿಪಶುಗಳೇ ಆಗಿರಲಿ, ಈತನ ಶವ ಕೋಮುವಾದಿ ಸಂಘಟನೆಗಳ ರಾಜಕೀಯ ಲಾಭದ, ಮತೀಯ ಲಾಭದ ಸರಕಾಗುವುದು ಬೇಡ. ಹೀಗಾಗದಿರುವಂತೆ ಎಚ್ಚರ ವಹಿಸಬೇಕಾದ್ದು ಜಿಲ್ಲಾಡಳಿತ ಮತ್ತು ನಮ್ಮ ಹರಕು ಬಾಯಿ ಶಾಸಕರು. ಇದು ” ಕ್ರಿಯೆ ಪ್ರತಿಕ್ರಿಯೆ”ಯ ಪ್ರಮೇಯವನ್ನೂ ಮೀರಿದ ಒಂದು ದುಷ್ಟ ವ್ಯವಸ್ಥೆಯ ಪರಿಣಾಮ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮಾನ್ಯ ಮುಖ್ಯಮಂತ್ರಿಗಳು, ಸರ್ಕಾರ ಕೂಡಲೇ ಶಾಂತಿ ಸೌಹಾರ್ದತೆ ಕಾಪಾಡಲು ಮುಂದಾಗಬೇಕಿದೆ. ಹರಕುಬಾಯಿ ಶಾಸಕರು , ಸಂಸದರು ಮಾಸ್ಕ್ ತೆಗೆಯದಿದ್ದರೆ ಎಲ್ಲರಿಗೂ ಕ್ಷೇಮ” ಎಂದು ಚಿಂತಕ ನಾ.ದಿವಾಕರ ಅವರು ಎಚ್ಚರಿಸಿದ್ದಾರೆ.

ಸಂವಿಧಾನ ಧಿಕ್ಕರಿಸುವ ಭಾಜಪ: ಕೆ.ಪಿ.ಸುರೇಶ್‌

ಸಾಂವಿಧಾನಿಕ ಜವಾಬ್ದಾರಿಎನ್ನುವುದನ್ನು ಎಳ್ಳಿನಷ್ಟೂ ಭಾಜಪದ ಭಂಡರು ಯಾಕೆ ಪಾಲಿಸುತ್ತಿಲ್ಲ ಎಂದು ಕೇಳುವುದೇ ಮೂರ್ಖತನ. ಕೊಂಚ ಘನತೆ ಉಳಿಸಿಕೊಂಡಿರುವ ಸಂಸದೀಯ ಚುನಾವಣೆ ಮೂಲಕ ಗೆದ್ದಾಗಲೂ ಅವರು ಸಂವಿಧಾನವನ್ನು ಧಿಕ್ಕರಿಸುವ ಮನೋಧರ್ಮ ಇರುವವರೇ ಎಂದು ಚಿಂತಕ ಕೆ.ಪಿ.ಸುರೇಶ್‌ ಬರೆದಿದ್ದಾರೆ.

ಎಲ್ಲಾ ಚುನಾವಣೆಗಳಲ್ಲೂ ಬಹುತೇಕ ನಮ್ಮ ಜನ ಗೆಲ್ಲಿಸುವುದು ಅಭಿವೃದ್ಧಿ, ನೆಮ್ಮೆದಿಯ ಭರವಸೆಗೆ. ಭಾಜಪ ಸದಾ ಈ ವಿಚಾರದಲ್ಲಿ ವಿಶ್ವಾಸದ್ರೋಹ ಮಾಡುತ್ತಾ ಬಂದಿದೆ. ಕೋಮು ದ್ವೇಷದ ಬೆಂಕಿ ಹಚ್ಚಿ ಮತ ಸೆಳೆಯಬಹುದು ಎಂಬ ಭಂಡ ನಂಬಿಕೆ ಅದಕ್ಕಿದೆ. 2014ರ ವೇಳೆಗೆ ನಮ್ಮ ಜನಸಂಖ್ಯೆಯ ಅರ್ಧಕ್ಕರ್ಧ ಮತದಾರರು ಯುವಕರೇ. ಅವರಿಗಿದ್ದ ಕನಸು ಉದ್ಯೋಗದ ಭರವಸೆ. ಇನ್ನೆರಡು ವರ್ಷಕ್ಕೆ ಅವರಲ್ಲಿ ಬಹುತೇಕರಿಗೆ 30 ಆಗಿರುತ್ತೆ. ಭ್ರಮ ನಿರಸನ ಆದ ಈ ಯುವಕರು ನೀಡುವ ಏಟು ಎಂಥಾದ್ದು ಎಂದು ಭಾಜಪಕ್ಕಿನ್ನೂ ಅರಿವಾಗಿಲ್ಲ. ಭಾಜಪದ ರಥದ ಚಕ್ರಗಳು ಪಂಕ್ಚರ್‌ ಆಗುವ ಪ್ರಕ್ರಿಯೆ ಯುಪಿಯಿಂದ ಆರಂಭವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ನೆನಪಿಡಿ ಕರ್ನಾಟಕದಲ್ಲಿ ವಿರೋಧ ಪಕ್ಷದ ಅನುಕೂಲ, ಯೆಡಿಯ ನೇತೃತ್ವ, ಸಿಕಂದರ್‌ ಮೋದಿ, ಚಾಣಕ್ಯ ಅಮಿತ್‌ ಶಾ ಇದ್ದೂ ಭಾಜಪದ ಸಂಖ್ಯೆ ಈ ಹಿಂದೆ ಯೆಡ್ಡಿ ಏಕಾಂಗಿಯಾಗಿ ಗೆದ್ದ ಸ್ಥಾನಗಳನ್ನು ಮೀರಲಿಲ್ಲ. ಮೂರು ಕಾಸಿನ ಅಭಿವೃದ್ಧೀ ಮಾಡದೇ ಜನರ ಗಮನ ಎತ್ತಲೋ ಸೆಳೆಯಲು ಬಡಪಾಯಿಗಳ ಬಲಿಯ ಸುತ್ತ ರಾಜಕೀಯ ಮಾಡುವ ಸ್ವನಾಶದ ಕೆಲಸ ಭಾಜಪ ಮುಂದುವರಿಸುತ್ತೆ. ಈ ನಾಯಕರ ಮಕ್ಕಳು ಯಾರೂ ಈ ಭಜರಂಗ ದಳ ಇತ್ಯಾದಿಗಳಲ್ಲಿಇಲ್ಲ. ಅದಕ್ಕೆ ಮತ್ತೆಒಬಿಸಿ ಬಡ ಹುಡುಗರೇ ಬೇಕು. ಈ ಸತ್ಯಗಳನ್ನು ಇನ್ನಷ್ಟು ಗಟ್ಟಿಯಾಗಿ ಹೇಳುತ್ತಾ ಹೋಗಬೇಕಿದೆ.

ಕೊಲೆಯಾದ ಹರ್ಷನ ಸಹೋದರಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಿಂದೂ ಮುಸ್ಲಿಂ ಸಹೋದರರಲ್ಲಿ ಮನವಿ ಮಾಡಿರುವ ವಿಡಿಯೊ ತುಣುಕನ್ನು ಅನೇಕರು ಹಂಚಿಕೊಂಡಿದ್ದಾರೆ. ವಿಡಿಯೊ ವೈರಲ್‌ ಆಗಿದೆ.


ಇದನ್ನೂ ಓದಿರಿ: ಹರ್ಷ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಹೆಸರು ಬಹಿರಂಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...