1949ರಲ್ಲಿ ಮಹಾತ್ಮ ಗಾಂಧಿಯವರನ್ನು ಹತ್ಯೆಗೈದ ಹಂತಕ ನಾಥೂರಾಂ ಗೋಡ್ಸೆಯ ಪ್ರತಿಮೆ ನಿರ್ಮಾಣಕ್ಕೆ ಹಿಂದೂ ಮಹಾಸಭಾ ಮುಂದಾಗಿದೆ. ಗೋಡ್ಸೆಯನ್ನು ಗಲ್ಲಿಗೇರಿಸಿದ ಹರಿಯಾಣದ ಅಂಬಾಲಾ ಸೆಂಟ್ರಲ್ ಜೈಲಿನಿಂದ ಮಣ್ಣನ್ನು ತಂದು ಗೋಡ್ಸೆಯ ಪ್ರತಿಮೆಯನ್ನು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಿರ್ಮಿಸುವುದಾಗಿ ಹಿಂದೂ ಮಹಾಸಭಾ ಹೇಳಿದೆ.
ಸೋಮವಾರ ಗೋಡ್ಸೆಯ ಗಲ್ಲಿಗೇರಿಸಿದ ದಿನವನ್ನು ಆಚರಣೆ ನಡೆಸಿದ ಬಲಪಂಥೀಯ ಸಂಘಟನೆಯು ಆತನ ಪ್ರತಿಮೆಯನ್ನು ನಿರ್ಮಿಸುವುದಾಗಿ ಹೇಳಿದೆ.
ಕಳೆದ ವಾರ ಮಹಾಸಭಾ ಕಾರ್ಯಕರ್ತರು ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ಗಲ್ಲಿಗೇರಿಸಿದ ಅಂಬಾಲಾ ಜೈಲಿನಿಂದ ಮಣ್ಣನ್ನು ತಂದಿದ್ದಾರೆ. ಈ ಮಣ್ಣನ್ನು ಗೋಡ್ಸೆ ಮತ್ತು ಆಪ್ಟೆ ಅವರ ಪ್ರತಿಮೆಗಳನ್ನು ತಯಾರಿಸಲು ಬಳಸಲಾಗುವುದು. ಆ ಪ್ರತಿಮೆಗಳನ್ನು ಗ್ವಾಲಿಯರ್ನಲ್ಲಿರುವ ಮಹಾಸಭಾದ ಕಚೇರಿಯಲ್ಲಿ ಸ್ಥಾಪಿಸಲಾಗುವುದು ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ತಿಳಿಸಿದ್ದಾರೆ.
ಮಹಾಸಭಾ ಕಾರ್ಯಕರ್ತರು ಸೋಮವಾರ ಮೀರತ್ನ (ಉತ್ತರ ಪ್ರದೇಶ) ‘ಬಲಿಧಾನ್ ಧಾಮ’ದಲ್ಲಿ ಗೋಡ್ಸೆ ಮತ್ತು ಆಪ್ಟೆ ಅವರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ನಾವು ಪ್ರತಿ ರಾಜ್ಯದಲ್ಲೂ ಅಂತಹ ಬಲಿದಾನ್ ಧಾಮವನ್ನು ನಿರ್ಮಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಾನೇ ಒಂದು ಜುಮ್ಲಾ : ಗೋಡ್ಸೆ ಜೊತೆ ಒಂದು ಕಾಲ್ಪನಿಕ ಸಂದರ್ಶನ
ಗ್ವಾಲಿಯರ್ ಜಿಲ್ಲಾಡಳಿತವು 2017ರಲ್ಲಿ ಮಹಾಸಭಾದ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ಗೋಡ್ಸೆಯ ಪ್ರತಿಮೆಯನ್ನು ವಶಪಡಿಸಿಕೊಂಡಿದೆ. ಆದರೆ, ಅದನ್ನು ಇಲ್ಲಿಯವರೆಗೆ ಹಿಂತಿರುಗಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಗೋಡ್ಸೆಯನ್ನು ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂದು ಕಾಂಗ್ರೆಸ್ ಕರೆದಿದೆ. ದೇಶದ ಸ್ವಾತಂತ್ರ್ಯ ನೇತಾರ ಗಾಂಧೀಜಿಯವರನ್ನು ಕೊಂದ ಭಯೋತ್ಪಾದಕನ್ನು ಆರಾಧಿಸುವುದು ಅವರ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇಲ್ಲಿಯವರೆಗೆ ಯಾವುದೇ ಪ್ರತಿಮೆಯನ್ನು ಸ್ಥಾಪಿಸಲಾಗಿಲ್ಲ. ಪ್ರತಿಮೆಯ ನಿರ್ಮಾಣ ಚಟುವಟಿಕೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದು ಗ್ವಾಲಿಯರ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಇದನ್ನೂ ಓದಿ: ಕುರಿ-ಆಡು ರಕ್ತದ ಫ್ರೈ ಲಾಕಿ ಮಾಡುವುದು ಹೇಗೆ?: ಇಲ್ಲಿದೆ ಬೊಂಬಾಟ್ ರೆಸಿಪಿ


