Homeಕರ್ನಾಟಕಹಿಂಜಾವೇ ಕಾರ್ತಿಕ್ ಕಗ್ಗೊಲೆಯೂ ಸಂಘಿಗಳ ಮುಗಮ್ ಮೌನವೂ!!

ಹಿಂಜಾವೇ ಕಾರ್ತಿಕ್ ಕಗ್ಗೊಲೆಯೂ ಸಂಘಿಗಳ ಮುಗಮ್ ಮೌನವೂ!!

- Advertisement -
- Advertisement -

| ಶುದ್ದೋಧನ |

ಪುತ್ತೂರು ಹೇಳಿಕೇಳಿ ಸಂಘಪರಿವಾರದ ಆಡಂಬೋಲ. ಸಣ್ಣಪುಟ್ಟ ವೈಯಕ್ತಿಕ ತಂಟೆ-ತಕರಾರಿಗೂ ಕೋಮುದ್ವೇಷದ ಕಲರ್ ಬಳಿದು ಬಿಜೆಪಿಯ ಮಾತೃ “ಸಂಘ” ಧರ್ಮಕಾರಣದ ಮೈಲೇಜ್ ಪಡೆಯುತ್ತಲೇ ಇದೆ. ಮಾಯಾಭಟ್ ಎಂಬ ಹವ್ಯಕರ ಹೆಣ್ಣಿನ ಪ್ರೇಮ್ ಕಹಾನಿಗೆ ಮತೀಯ ವೈಷಮ್ಯದ ಆಯಾಮ ಕೊಟ್ಟು ಹಲವು ವರ್ಷ ಕೇಸರಿ ಬೆಳೆ ತೆಗೆದ ಪರಿವಾರಕ್ಕೆ ಸೌಮ್ಯಭಟ್ ಎಂಬ ಮತ್ತೊಂದು ಹಾರವ ಹುಡುಗಿಯನ್ನು ಸಾಬರ ವಿಕೃತ ಹುಡುಗನೊಬ್ಬ ಕೊಂದು ಹಾಕಿದ್ದು “ಅಗತ್ಯವಿದ್ದಾಗೆಲ್ಲ” ಪುತ್ತೂರಿಗೆ ಬೆಂಕಿಹಾಕಲು ನೆಪವಾಗಿತ್ತು.

ಇಂದು ಕೇಂದ್ರ ಮಂತ್ರಿಯಾಗಿರುವ ಸುಳ್ಯದ ಸದಾನಂದಗೌಡ ಅಂದು ಪುತ್ತೂರಿನಲ್ಲಿ ಶಾಸಕರಾದದ್ದಾಗಲಿ, ಸದ್ಯ ಕಾಂಗ್ರೆಸ್‍ನಲ್ಲಿರುವ ಶಕುಂತಲಾ ಶೆಟ್ಟಿ ಹಿಂದೆ ಬಿಜೆಪಿಯಿಂದ ಗೆದ್ದದ್ದಾಗಲಿ, ಮತ್ತೀಗ ಎಮ್ಮೆಲ್ಲೆ ದರ್ಬಾರು ನಡೆಸಿರುವ ಸಂಜೀವ ಮಠಂದೂರು ಎಂಬ ಸದಾನಂದ ಗೌಡರ ನೆಂಟ ವಿಧಾನಸೌಧದ ಭಾಗ್ಯ ಕಂಡಿರುವುದಾಗಲಿ ಎಲ್ಲವೂ ಸಂಘ ಸಾಹಸದಿಂದಲೇ!!

ಹಿಂದೂತ್ವದ ಹೆಸರಲ್ಲಿ ಬಿಲ್ಲವರು, ಬಂಟರಂತಹ ಶೂದ್ರ ಸಮುದಾಯದ ಬಿಸಿರಕ್ತದ ಯುವಕರ ತಲೆಕೆಡಿಸಿ ಅವರಿಂದ ಗಲಾಟೆ, ದೊಂಬಿ ಮಾಡಿಸುವ ಬಿಜೆಪಿಗರು ಹೆಣಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಸರ್ಕಾರವಿದ್ದಾಗ ಪರೇಶ್ ಮೇಸ್ತನ ಸಾವನ್ನು ಮುಂದಿಟ್ಟುಕೊಂಡು `ಇಡೀ ಕರಾವಳಿಗೆ ಬೆಂಕಿಹಚ್ಚುತ್ತೇವೆ’ ಎಂಬಂತೆ ಮಾತನಾಡಿ, ಹಿಂದೂತ್ವ ಸಂಘಟನೆಗಳ ಕಾರ್ಯಕರ್ತರ ಮಾರಣಹೋಮ ನಡೆಯುತ್ತಿದೆ ಅಂತೆಲ್ಲ ಬೊಬ್ಬಿಟ್ಟು ಕೇಂದ್ರಕ್ಕೆ ದೂರು ಕೊಡುವಷ್ಟರಮಟ್ಟಿಗೆ ಬಿಜೆಪಿಗರು ಹಾರಾಡಿದ್ದು ನೆನಪಿರಬಹುದು. ಆದರೆ ಅದೇ ಕರಾವಳಿಯಲ್ಲಿ ಈಗ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿಯನ್ನೇ ಹತ್ಯೆ ಮಾಡಲಾಗಿದೆ. ಕಾರಣ ಏನೇ ಇರಲಿ, ತನಿಖೆಗೂ ಮೊದಲೇ ಬೀದಿಗಿಳಿದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಬೆಂಕಿ ಹಚ್ಚುತ್ತಿದ್ದ ಸಂಘ ಪರಿವಾರ ಇದೀಗ ತುಟಿ ಎರಡು ಮಾಡುತ್ತಿಲ್ಲ. ಯಾಕೆಂದರೆ, ಈಗ ರಾಜ್ಯದಲ್ಲಿ ಅಧಿಕಾರದಲ್ಲಿರೋದು ಅವರದೇ ಬಿಜೆಪಿ ಸರ್ಕಾರ! ಧರ್ಮವನ್ನು ನೆಪ ಮಾಡಿಕೊಳ್ಳುವ ಇವರ ರಾಜಕಾರಣದ ವರಸೆ ಇಂತದ್ದು!

ಪುತ್ತೂರಿನ ಕಾರ್ತಿಕ್ ಸುವರ್ಣ ಆ ದುರ್ದೈವಿ. ಹಿಂದೂ ಜಾಗರಣಾ ವೇದಿಕೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆಗಿದ್ದವ. ಅವನನ್ನು ಪೊಲೀಸ್ ಠಾಣೆಯ ಬಳಿಯೇ ಸಾರ್ವಜನಿಕರ ಕಣ್ಣೆದುರೇ ಚಾಕುವಿನಿಂದ ಬರ್ಬರವಾಗಿ ಇರಿದು ಸಾಯಿಸಲಾಗಿದೆ. ಆದರೆ ಹಿಂದೂ ಸಂಘಟನೆಯ ಪ್ರಮುಖ ಮುಂದಾಳಿನ ಹತ್ಯೆಯಾದರೂ ಸಂಘ ಪರಿವಾರದ ರಣಧೀರರ ಅಡ್ರಸ್ಸೇ ಇಲ್ಲಾ! ಕೊಲೆಯಾದವನು ಅಲ್ಪಸಂಖ್ಯಾತ ಸಮುದಾಯದವನೆಂಬಂತೆ ಪುತ್ತೂರು ತಣ್ಣಗಿದೆ!! ಹತ್ತಿರದಲ್ಲೇ ಇರುವ ಕಲ್ಲಡ್ಕದ ಕೇಸರಿ ಕಮಾಂಡರ್ ಪ್ರಭಾಕರ ಭಟ್, ಇದೇ ಏರಿಯಾದ ಕೂಗುಮಾರಿ ಶೋಭಾ ಕರಂದ್ಲಾಜೆ ಮತ್ತು ಸದಾನಂದಗೌಡರು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ!!

ಹಿಂದೂ ಗಂಡಿನ ಜೀವ, ಹಿಂದೂ ಹೆಣ್ಣಿನ ಮಾನ ಬಂಡವಾಳ ಮಾಡಿಕೊಂಡು ರಾಜಕಾರಣ ಮಾಡುವ ಸಂಘಪರಿವಾರದ ಘಟಾನುಘಟಿ ಬೆಂಕಿ ನವಾಬರೆಲ್ಲಾ ಏಕಿಂಥ ಘನಘೋರ ಮೌನದಲ್ಲಿದ್ದಾರೆ. ಹಿಂದೂ ಹೆಣ ಬಿದ್ದಾಗ ಧರ್ಮ ರಕ್ಷಣೆಯ ದೈವ ಆವಾಹನೆಯಾದಂತೆ ಹಾರಾಡುತ್ತಿದ್ದ ಬಿಜೆಪಿ-ಆರೆಸ್ಸೆಸ್-ಹಿಂಜಾವೇ…… ಮುಂತಾದ ಗ್ಯಾಂಗಿನ ಭಜರಂಗ ಬಲಿಗಳ ನಿಗೂಢ ಮೌನದ ಜಾಡು ಹಿಡಿದು ಹೊರಟರೆ ಕಾರ್ತಿಕ್‍ನನ್ನು ಕೊಂದ ಕೊಲೆಗಡುಕರು ಹಿಂದೂತ್ವದ ಅಭಿಯಾನದಲ್ಲಿ ಅರ್ಪಣಾಭಾವದಿಂದ ತೊಡಗಿಸಿಕೊಂಡವರೇ ಆಗಿದ್ದಾರೆಂಬ ಅಚ್ಚರಿ ಬೆಳಕಿಗೆ ಬರುತ್ತದೆ. ಪಾತಕಿಗಳಾದ ಕಿರಣ್ ರೈ ಮತ್ತು ಚರಣ್ ರೈ ಸಹೋದರರು ಹಾಗೂ ಪ್ರಿತೇಶ್ ಶೆಟ್ಟಿಗೆ ಬಿಜೆಪಿಯ ಆಯಕಟ್ಟಿನ ಅಧಿಕಾರಸ್ಥರ ಸಂಪರ್ಕವೂ ಇದೆಯೆಂಬ ಪುಕಾರುಗಳು ಎದ್ದಿವೆ. ಪವರ್‍ಫುಲ್ ಹಿಂಜಾವೇ ನಾಯಕ ತಾನೆಂಬ ಹುಂಬ ಅಹಮಿಕೆಯಲ್ಲಿ ಲೇವಾದೇವಿ, ಕೌಟುಂಬಿಕ ವ್ಯಾಜ್ಯ, ಚಿಟ್‍ಫಂಡ್, ಹೊಡಪೆಟ್‍ಗಳಲ್ಲಿ ಸಂಧಾನಕಾರನಾಗಿ ಮೂಗುತೂರಿಸುತ್ತಿದ್ದ ಕಾರ್ತಿಕ್‍ನ ಹತ್ಯೆ ಸುತ್ತ ಮೂರು ಸಾಧ್ಯತೆಯನ್ನು ಪೊಲೀಸರು ತರ್ಕಿಸುತ್ತಿದ್ದಾರೆ.

ಪೊಲೀಸರು ಅಂದಾಜಿಸಿರುವಂತೆ ಚಿಟ್‍ಫಂಡ್ ವ್ಯವಹಾರದ ಸೇಡು ಬರೀ ಇಪ್ಪತ್ತೇಳು ವರ್ಷದ ಕಾರ್ತಿಕ್‍ನನ್ನು ಬಲಿ ಹಾಕಿದೆ. ಪುತ್ತೂರಿನ ದರ್ಬೆಯಲ್ಲಿ ಮಾತೃಛಾಯ ಎಂಬ ಹೆಸರಿನ ಚಿಟ್‍ಫಂಡ್ ದಂಧೆ ಕಿರಣ್-ಚರಣ್ ಸಹೋದರರು ನಡೆಸಿಕೊಂಡಿದ್ದರು. ಕಿಶೋರ್ ಎಂಬಾತ ಬರೋಬ್ಬರಿ ನಾಲ್ಕು ಲಕ್ಷ ಹಣವನ್ನು ಚರಣ್ ರೈಗೆ ಕೊಡಬೇಕಿತ್ತು. ಆದರೆ ಆತ ಕೊಡದೆ ಸತಾಯಿಸುತ್ತಿದ್ದ. ಹಾಗಾಗಿ ಚರಣ್ ಆತನಿಗೆ ಲಾಯರ್ ನೋಟಿಸ್ ಕೊಟ್ಟಿದ್ದ. ಇದರಿಂದ ಕೆರಳಿದ ಕಿಶೋರ್ ಸುಜಿತ್ ಬಂಗೇರ, ಮನೀಶ್ ಕುಮಾರ್, ಪ್ರೀತಮ್ ಶೆಟ್ಟಿಯೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಚರಣ್‍ಗೆ ಹಲ್ಲೆ ಮಾಡಿ ಹೆದರಿಸಿದ್ದ. ಈ ಪುಂಡರ ಪಟಾಲಂಗೆ ಹಿಂಜಾವೇ ಕಿಂಗ್ ಕಾರ್ತಿಕ್ ಸುವರ್ಣ ತನ್ನ ರಾಜಕೀಯ ಬಲದಿಂದ ನೆರವಾಗುತ್ತಿದ್ದ. ಹೀಗಾಗಿ ಕಿರಣ್-ಚರಣ್ ತಂಡ ಮತ್ತು ಕಾರ್ತಿಕ್ ಗುಂಪಿನ ನಡುವೆ 2018ರ ಜನವರಿಯಿಂದ ಆಗಾಗ ಜಗಳ-ಕದನ ಆಗುತ್ತಲೇ ಇತ್ತು. ಮೊನ್ನೆ ಸೆಪ್ಟೆಂಬರ್ 3ರಂದು ಚೌತಿಯ ಗಣೇಶ ವಿಸರ್ಜನೆ ಬಳಿಕ ಸಂಪ್ಯದಲ್ಲಿ ನಡೆದ ಯಕ್ಷಗಾನ ನೋಡುತ್ತಾ ನಿಂತಿದ್ದ ಕಾರ್ತಿಕ್ ಸುವರ್ಣನ ಮುಂದೆ ಕಿರಣ್-ಚರಣ್ ಪ್ರತ್ಯಕ್ಷರಾಗಿದ್ದಾರೆ. ಎರಡೂ ಕಡೆಯವರು ಗುರಾಯಿಸಿದ್ದಾರೆ. ಮಾತಿಗೆ ಮಾತಾಗಿದೆ. ಇದೇ ಸಂದರ್ಭವೆಂದು ವೈರಿ ಪಡೆ ಕಾರ್ತಿಕ್‍ನನ್ನು ಇರಿದು ಕೊಂದು ಪರಾರಿಯಾಗಿದ್ದಾರೆ.

ಮತ್ತೊಂದು ಅನುಮಾನದ ಸಾಧ್ಯತೆಯಲ್ಲಿ ಗಾಂಜಾ ದಂಧೆಯ ಅಮಲೇರಿದೆ! ಗಾಂಜಾ ವ್ಯವಹಾರದ ವೈಷಮ್ಯದಿಂದ ಕಿರಣ್-ಚರಣ್ ಮತ್ತು ಕಾರ್ತಿಕ್ ಸುವರ್ಣ ಬದ್ಧವೈರಿಗಳಾಗಿದ್ದರೆಂಬ ಮಾತು ಪುತ್ತೂರಲ್ಲಿ ಪಿಸುಗುಡುತ್ತಿದೆ. ಕಾರ್ತಿಕ್‍ಗೆ ರಾಜಕೀಯ ಪ್ರಭಾವ ಇದ್ದುದರಿಂದ ಆತನದೇ ಮೇಲುಗೈ ಆಗುತ್ತಿದ್ದುದು ಎದುರಾಳಿಗಳನ್ನು ಕೊಲೆ ಸ್ಕೆಚ್‍ಗೆ ಪ್ರಚೋದಿಸಿರಬಹುದೆಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಆದರೆ ಕಾರ್ತಿಕ್‍ನ ತಾಯಿ ಆಡಿರುವ ಮಾತುಗಳು ಸಂಘಪರಿವಾರದ ಜನಿವಾರಿಗಳು ಶೂದ್ರ ಹುಡುಗರನ್ನು ಬೇಕಾದಂತೆ ಬಳಸಿಕೊಂಡು ಬಲಿ ಹಾಕುತ್ತಿರುವ ಧರ್ಮೋನ್ಮಾದ ಹಿಕಮತ್ತುಗಳನ್ನು ಬಿಚ್ಚಿಟ್ಟಿದೆ!! “ನನ್ನ ಮಗ ಅಮಾಯಕ. ಯಾರ ತಂಟೆಗೂ ಹೋದವನಲ್ಲ. ಆದರೆ ಯಾವಾಗ ಹಿಂದೂ ಜಾಗರಣ ವೇದಿಕೆ ಸೇರಿಕೊಂಡನೋ, ಬಿಜೆಪಿ ರಾಜಕಾರಣಿಗಳೊಂದಿಗೆ ಒಡನಾಟ ತೊಡಗಿದನೋ ಆಗಾತ ಕೆಲವರ ಕೆಂಗಣ್ಣಿಗೆ ತುತ್ತಾಗಿದ್ದ; ವೈಷಮ್ಯ ಬೆಳೆಸಿಕೊಂಡಿದ್ದ….. ಆತ ಸಂಘಟನೆ(ಹಿಂಜಾವೇ) ರಾಜಕೀಯ(ಬಿಜೆಪಿ) ಸೇರಿಕೊಂಡು ಒಂದಿಷ್ಟು ದ್ವೇಷ, ಹಗೆತನ ಸಂಪಾದಿಸಿದ್ದನಷ್ಟೇ… ಅದೇ ಆತನ ಕೊಲೆ ಮಾಡಲಾಗಿದೆ….. ಪೊಲೀಸ್ ಠಾಣೆ ಎದುರೇ ಕೊಲೆ ಮಾಡುತ್ತಾರೆಂದರೆ ರಾಜಕಾರಣಿಗಳ ಬೆಂಬಲ ಇರಲೇಬೇಕು…. ಇಲ್ಲದಿದ್ದರೆ ಪಾತಕಿಗಳಿಗೆ ಅಷ್ಟು ಧೈರ್ಯ ಎಲ್ಲಿಂದ ಬರಬೇಕು?” ಎಂದು ಬಿಕ್ಕುತ್ತಾರೆ ಕಾರ್ತಿಕ್‍ನ ತಾಯಿ.

ದಕ್ಷಿಣ ಕನ್ನಡದ ಸಂಘಪರಿವಾರದ ಭಜರಂಗದಳ, ಆರೆಸ್ಸೆಸ್, ಹಿಂಜಾವೇ, ವಿಶ್ವ ಹಿಂದೂ ಪರಿಷತ್, ಮಹಿಳಾ ಸಂಘಟನೆಗಳಲ್ಲಿ ಲೀಡರಿಕೆ, ಹಿಡಿತ ಸಾಧಿಸುವಿಕೆಯ ಮೇಲಾಟದ ಸಂಘರ್ಷ ಮಾಮೂಲಿ ಎಂಬಂತಾಗಿದೆ. ಪಾಪದ ಶೂದ್ರ ಹುಡುಗ, ಹುಡುಗಿಯರಿಗೆ ಹಿಂದೂತ್ವದ ಪುಂಡಾಟದಿಂದ ಪ್ರಾಪ್ತವಾಗುವ ಸಾಮಾಜಿಕ ಇಮೇಜ್‍ನ ಆಕರ್ಷಣೆಗೆ ಒಳಗಾಗುವಂತೆ ಮಾಡಲಾಗುತ್ತದೆ. ಈ ಆ್ಯಂಟಿ ಹೀರೋಯಿಸಮ್ ಜತೆಗೆ ರಾಜಕೀಯ ಗೌರವ, ಹಣಕಾಸಿನ ಲಾಭ, ತಾಪಂ-ಜಿಪಂ ಮುಂತಾದ ಸ್ಥಳೀಯ ಸಂಸ್ಥೆ ಸದಸ್ಯರ ಸೆಳೆತಕ್ಕೆ ಹಿಂದುಳಿದ ವರ್ಗದ ತರುಣ-ತರುಣಿಯರು ಬೀಳುವಂತೆ ನಾಜೂಕಾಗಿ ಮಾಡಲಾಗುತ್ತಿದೆ. ಈ ಆಮಿಷ ಸಂಘಪರಿವಾರದ ತರಹೇವಾರಿ ತಂಡಗಳಲ್ಲಿ ಸೇಡು-ದ್ವೇಷ-ಹಗೆತನದ ಶೀತಲ ಸಂಘರ್ಷವಾಗಿ ಮಾರ್ಪಟ್ಟಿದೆ. ಇದು ಕಾರ್ತಿಕ್ ಸುವರ್ಣನಂಥ ಧಾಡಸಿ ಯುವಕರನ್ನು ಆಪೋಷನ ಪಡೆಯುತ್ತಿದೆ! ಕರಾವಳಿಯ ಕೇಸರಿ ಪರಿವಾರದ ಯಾವ್ಯಾವ ಪಡೆಯಲ್ಲಿ ಯಾರ್ಯಾರಿಗೆ ಎಂತೆಂಥ ಕೇಡು ಕಾದಿದೆಯೋ?!!

ಅದೇನೇ ಇರಲಿ, ಒಂದಂತೂ ಸತ್ಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಲ್ಲದೇ, ಕಾಂಗ್ರೆಸ್ಸೊ, ಜೆಡಿಎಸ್ಸೊ ಅಥವಾ ಮೈತ್ರಿ ಸರ್ಕಾರವೋ ಇದ್ದಿದ್ದರೆ ಕಾರ್ತಿಕ್ ಕೊಲೆಯಾದ ಇಷ್ಟೊತ್ತಿಗಾಗಲೇ ಬಿಜೆಪಿ-ಸಂಘ ಪರಿವಾರದ ಜಂಟಿ `ಬೆಂಕಿ’ ಕಾರ್ಯಾಚರಣೆಗಳು ಶುರುವಾಗಿರುತ್ತಿತ್ತು. ಪೊಲೀಸರು ಇದೇ ಆರೋಪಿಗಳನ್ನು ಬಂಧಿಸಿದ್ದರೂ `ಸಾಬರನ್ನು ಬಚಾವು ಮಾಡುವ ಸಲುವಾಗಿ ಅಮಾಯಕ ಹಿಂದೂ ಹುಡುಗರನ್ನು ಫಿಟ್ ಮಾಡಿದ್ದಾರೆ’ ಅಂತ ಭೀಕರ ಭಾಷಣಗಳು ಉದುರುತ್ತಿದ್ದವು. ಹಿಂದೂಗಳ ಮಾರಣಹೋಮ ನಡೆಯುತ್ತಿದೆ ಅಂತ ಬದುಕಿರುವವರ ಹೆಸರನ್ನೂ ಸೇರಿಸಿ ಒಂದು `ಹುತಾತ್ಮರ ಪಟ್ಟಿ’ ತಯಾರಿಸಿಕೊಂಡು ಊರೂರು ಅಲೆದಾಡುತ್ತಿದ್ದರು. ಆದರೀಗ ಗಪ್‍ಚುಪ್. ಇದು ಸಂಘ ಪರಿವಾರಕ್ಕೆ ಹೊಸದೇನೂ ಅಲ್ಲ. ತೀರ ಈಚೆಗೆ ವಿವೇಕಾನಂದ ಕಾಲೇಜಿನ ಎಬಿವಿಪಿಯ ನಾಲ್ಕೈದು ನೀಚ ಹುಡುಗರು ಪಾಪದ ಬುಡಕಟ್ಟು ಹುಡುಗಿಯನ್ನು ಕಾಡಿಗೆ ಕರೆದೊಯ್ದು ಕಾರಲ್ಲೇ ಸರದಿಯಲ್ಲಿ ರೇಪ್ ಮಾಡಿದಾಗಲೂ ಎಬಿವಿಪಿಗಳು `ಈ ರೇಪಿಸ್ಟ್‍ಗಳು ತಮ್ಮವರಲ್ಲ’ ಎಂದಿದ್ದಷ್ಟೇ ಅಲ್ಲ, ಆ ಹುಡುಗಿಯ ನಡತೆಯೇ ಸರಿ ಇಲ್ಲ ಎಂದು ಸಮರ್ಥನೆಗೆ ಇಳಿದಿದ್ದರು. ತಮ್ಮ ಮಕ್ಕಳನ್ನು ಬೇಕಾದಂತೆ ಬಳಸಿಕೊಂಡು ಅವರ ಭವಿಷ್ಯವನ್ನೇ ಹಾಳುಗೆಡಹುವ ಇವರ ಹುನ್ನಾರಗಳನ್ನು ಹೆತ್ತವರು ಈಗಲಾದರು ಅರ್ಥಮಾಡಿಕೊಳ್ಳದಿದ್ದರೆ ಕಾರ್ತಿಕ್‍ನ ತಾಯಿಯಂತೆ ತಮ್ಮದೇ ಮಕ್ಕಳ ಹೆಣದ ಮುಂದೆ ಗೋಳಾಡುವಂತಹ ದುರ್ವಿಧಿಯೇ ಗತಿ!

 

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...