Homeಕರ್ನಾಟಕಕರಾವಳಿಯಲ್ಲಿ ಕೋಮುಗಲಭೆಗಳ ಇತಿಹಾಸ - ನಿಖಿಲ್‌ ಕೋಲ್ಪೆ

ಕರಾವಳಿಯಲ್ಲಿ ಕೋಮುಗಲಭೆಗಳ ಇತಿಹಾಸ – ನಿಖಿಲ್‌ ಕೋಲ್ಪೆ

- Advertisement -
- Advertisement -

1968ರಲ್ಲಿ ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕನ್ನಡದಲ್ಲಿ ಕೋಮು ಉದ್ರಿಕ್ತತೆ ಹೆಚ್ಚಿತ್ತು. ಸುಳ್ಳು ವದಂತಿಗಳು ದಕ್ಷಿಣ ಕನ್ನಡ ಜಿಲ್ಲೆಗೂ ತಲಪಿದವು. ಆ ಸಂದರ್ಭದಲ್ಲಿಯೇ ಮಂಗಳೂರಿನಲ್ಲಿ ಮಟನ್ ಖಾದರ್ ಎಂಬಾತನಿಗೂ, ಮೀನು ಮಾರುವ ಮೊಗವೀರ ಮಹಿಳೆಗೂ ಪ್ರೇಮಸಂಬಂಧವಿದೆ ಎಂಬ ವದಂತಿ ಗಲಭೆಗೆ ಕಾರಣವಾಯಿತು. ಈ ಗಲಭೆಯಲ್ಲಿ ಬಂದರು ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾದ ಬಗ್ಗೆ ಮಾಹಿತಿ ಸಿಗುತ್ತದೆ.

ಮತ್ತೆ 1979ರಲ್ಲಿ ಖ್ಯಾತ ಚಿತ್ರ ನಿರ್ದೇಶಕ, ಲೇಖಕ ವಿಶುಕುಮಾರ್ ಅವರ ಕನ್ನಡ ಚಿತ್ರ ‘ಕರಾವಳಿ’ಯ ಕಾರಣದಿಂದ ಗಲಭೆ ಉಂಟಾಯಿತು. ಅದು ಮೀನುಗಾರ ಮುಸ್ಲಿಂ ಯುವಕ ಮತ್ತು ಮೊಗವೀರ ಸಮುದಾಯದ ಮಹಿಳೆಯ ನಡುವಿನ ಪ್ರೇಮಕತೆಯಾಗಿದ್ದುದೇ ಇದಕ್ಕೆ ಕಾರಣ. ಈ ಗಲಭೆಗಳು ಹೊಯ್ಗೆಬಜಾರ್, ಕುದ್ರೋಳಿ, ಬಂದರು ಮುಂತಾದ ಪ್ರದೇಶಗಳಲ್ಲಿ ತೀವ್ರವಾಗಿತ್ತು. ಈ ಘಟನೆಯಲ್ಲಿ ಕೆಲವರು ಪ್ರಾಣಕಳೆದುಕೊಂಡರು ಎಂದು ಹೇಳಲಾಗುತ್ತದೆಯಾದರೂ, ನಿಖರ ಮಾಹಿತಿ ಲಭ್ಯವಿಲ್ಲ. ಈ ಘಟನೆಯಲ್ಲಿ ಮುಸ್ಲಿಮರ ಮತ್ತು ಗೌಡ ಸಾರಸ್ವತ ಸಮುದಾಯದವರ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕೋಮುವಾದದ ಸಾಮಾಜಿಕ ಹಿನ್ನೆಲೆ; ಮೊದಲ ಕೋಮುಗಲಭೆ!

ಹಿಂದೆಲ್ಲಾ ಉಳ್ಳಾಲ ಪ್ರದೇಶವು ಕೋಮುಸೌಹಾರ್ದಕ್ಕೆ ಹೆಸರಾಗಿತ್ತು. ಇದಕ್ಕೆ ದೊಡ್ಡ ಇತಿಹಾಸವಿದ್ದು, ಆ ಕುರಿತು ಈಗಾಗಲೇ ಬರೆಯಲಾಗಿದೆ. ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ಮುಸ್ಲಿಮರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. 1980ರ ದಶಕದಲ್ಲಿ ಮಲ್ಲಕಂಭಕ್ಕೆ ಹಂದಿಯ ಕೊಬ್ಬನ್ನು ಸವರಲಾಗುತ್ತದೆ ಎಂದು ಇಂತಹಾ ಉತ್ಸವಗಳಲ್ಲಿ ಭಾಗವಹಿಸುವುದನ್ನು ‘ಶಿರ್ಕ್’ ಎಂದು ಕರೆಯುವ ಕೆಲವು ಸಂಪ್ರದಾಯವಾದಿ ಮುಸ್ಲಿಮರು ವದಂತಿ ಹಬ್ಬಿದರು. ಆಗಿನಿಂದ ಮುಸ್ಲಿಮರ ಭಾಗವಹಿಸುವಿಕೆ ಕಡಿಮೆಯಾಗುತ್ತಾ ಹೋಯಿತು. ಇಂದು ಸಾಮಾನ್ಯ ಸ್ಥಿತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದದಿಂದಲೇ ಸಹಬಾಳ್ವೆ ನಡೆಸುತ್ತಿದ್ದರೂ, ಸದಾ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ಸ್ಫೋಟಕ ಸ್ಥಿತಿ ತಲಪುತ್ತದೆ.

ನಂತರ, 1989ರಲ್ಲಿ ಬೈಕಂಪಾಡಿ, ಹೊಸಬೆಟ್ಟು- ಹೀಗೆ ದಕ್ಷಿಣ ಕನ್ನಡದ ಕಡಲತಡಿಯ ಉದ್ದಕ್ಕೂ ಕೋಮುಗಲಭೆ ಉಂಟಾಗಿತ್ತಾದರೂ, ಅದು ಮುಖ್ಯವಾಗಿ ಭಾರೀ ಪ್ರಮಾಣದಲ್ಲಿ ಅಂಗಡಿಗಳ ಲೂಟಿ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಲ್ಲಿಯೇ ಕೊನೆಗೊಂಡಿತು.

ನಂತರ ಸಣ್ಣಪುಟ್ಟ ಸಂಘರ್ಷಗಳು ಅಲ್ಲಲ್ಲಿ ನಡೆದೇ ಇದ್ದರೂ, ಇತಿಹಾಸದ ಅತೀ ದೊಡ್ಡ ಕೋಮುಗಲಭೆ ನಡೆದದ್ದು 1998-99ರಲ್ಲಿ. 1998ರ ಡಿಸೆಂಬರ್ 29ರಂದು ಆರಂಭವಾದ ಈ ಗಲಭೆ ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಆರಂಭವಾಗಿ ನಂತರದಲ್ಲಿ ಸುತ್ತಲಿನ ಕೃಷ್ಣಾಪುರ, ಬೈಕಂಪಾಡಿ, ಕುಳಾಯಿ, ಹೊಸಬೆಟ್ಟು, ತಡಂಬೈಲ್, ಕಾನ, ಕಾಟಿಪಳ್ಳ, ನಂತರ ಮಂಗಳೂರು ನಗರ, ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳಿಗೆ ವ್ಯಾಪಿಸಿತ್ತು. ಈ ಗಲಭೆಯಲ್ಲಿ ಎಂಟು ಮಂದಿ ಅಧಿಕೃತ ಮೂಲಗಳ ಪ್ರಕಾರ ಪ್ರಾಣ ಕಳೆದುಕೊಂಡಿದ್ದರು. ಇವರಲ್ಲಿ ಆರು ಮಂದಿ ಮುಸ್ಲಿಮರು ಮತ್ತು ಇಬ್ಬರು ಹಿಂದೂಗಳು. ಅನಧಿಕೃತ ವರದಿಗಳ ಪ್ರಕಾರ ಈ ಸಂಖ್ಯೆ 16 ಆಗಿತ್ತು. 100ಕ್ಕೂ ಹೆಚ್ಚು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಮನೆಗೆ ನುಗ್ಗಿ ಹೆಂಗಸರು, ಮಕ್ಕಳು, ವೃದ್ಧರ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅಮಾನುಷ ಘಟನೆಗಳೂ ನಡೆದಿದ್ದವು. ಘಟನೆಯಲ್ಲಿ ಭಾರೀ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, 165 ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಇವುಗಳಲ್ಲಿ 98 ಮುಸ್ಲಿಮರು ಮತ್ತು 67 ಹಿಂದೂಗಳ ಮನೆಗಳಾಗಿದ್ದವು. ಮುಸ್ಲಿಮರ ನಾಲ್ಕು ಪೂಜಾಸ್ಥಳಗಳನ್ನು ಧ್ವಂಸ ಮಾಡಲಾಗಿತ್ತು. ಈ ಅಂಕಿ-ಅಂಶಗಳನ್ನು ನೀಡುತ್ತಿರುವ ಕಾರಣವೆಂದರೆ- ಕಾರಣ ಏನೇ ಇರಲಿ, ಯಾರೇ ಇರಲಿ- ಎರಡೂ ಕಡೆಗಳವರು ಧರ್ಮಗಳ ಹೆಸರಿನಲ್ಲಿ ಮನುಷ್ಯತ್ವ ಮರೆತು ಪಶುಗಳ ರೀತಿ ಕಾದಾಡಿದ್ದರು ಎಂಬುದನ್ನು ಸೂಚಿಸುವುದಾಗಿದೆ.‌‌‌

ಗಲಭೆ ಕಾರಣ ಕ್ಷುಲ್ಲಕವಾದದ್ದು. ಚೊಕ್ಕಬೆಟ್ಟುವಿನಲ್ಲಿ ಗುಜರಿ ಮಾರುವವನೊಬ್ಬ ಒಂದು ಮನೆಯಿಂದ ಗುಜರಿ ಕದ್ದಿದ್ದ. ಆತನನ್ನು ಹಿಡಿದ ಮನೆಯವರು, ನೆರೆಯವರು ಆತನಿಗೆ ಥಳಿಸಿದ್ದರು. ಇದು ಒಂದು ಸಮುದಾಯದ ಕೆಲವರು, ಕಲ್ಲೆಸೆತ ಆರಂಭಿಸುವುದಕ್ಕೆ ಕಾರಣವಾಗಿತ್ತು. ಆದರೆ, ಇದು ಕೇವಲ ನೆಪವಾಗಿತ್ತು. ಇದಕ್ಕಿಂತಲೂ ಮೊದಲು ಬೇರೆ ಮೂರು ಪ್ರತ್ಯೇಕ ಘಟನೆಗಳು ನಡೆದಿದ್ದವು.

1998ರ ನವೆಂಬರ್‌ನಲ್ಲಿ ಕುಳಾಯಿಯಲ್ಲಿ ಕ್ರೈಸ್ತರ ಸಣ್ಣ ಪಂಥವಾದ ಇವಾಂಜಲಿಕ್ ಚರ್ಚಿಗೆ ನುಗ್ಗಿದ ಹಿಂದೂತ್ವವಾದಿಗಳು ರಾಜಾರೋಷವಾಗಿ ನುಗ್ಗಿ ಎಲ್ಲರನ್ನು ಥಳಿಸಿ, ಅದನ್ನು ಧ್ವಂಸಗೊಳಿಸಿದ್ದರು. ಇದು ದೇಶದಾದ್ಯಂತ ಕ್ರೈಸ್ತ ಧಾರ್ಮಿಕ ಸಂಸ್ಥೆಗಳ ಮೇಲೆ ನಡೆಯುತ್ತಿದ್ದ ದಾಳಿಗಳ ಭಾಗವಾಗಿತ್ತು. ಇಲ್ಲಿ ಕೆಥೋಲಿಕರ ಮೇಲೆ ಯಾವುದೇ ದಾಳಿಗಳು ನಡೆದಿರಲಿಲ್ಲವಾದರೂ (ನಂತರ ನಡೆದವು) ಇಂತಹಾ ಭಯಹುಟ್ಟಿಸುವ ಕೃತ್ಯ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆತಂಕ ಸೃಷ್ಟಿಸಿತ್ತು.

ಇನ್ನೊಂದು ಘಟನೆ ಎಂದರೆ, ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ ಎಂಬ ಆರೋಪದಲ್ಲಿ ಆತನಿಗೆ ಹಿಂದೂತ್ವವಾದಿಗಳ ಗುಂಪೊಂದು ಥಳಿಸಿದ್ದು. ಅದರ ಆರೋಪಿಗಳನ್ನು ಪೊಲೀಸರು ಬಂಧಿಸಿದಾಗ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಪೊಲೀಸರ ಕೆಲಸವನ್ನು ತಾವೇ ಮಾಡುತ್ತೇವೆ, ತಮ್ಮನ್ನು ಅವರು ಬಂಧಿಸುವಂತಿಲ್ಲ ಎಂಬ ಮನೋಭಾವ ಹುಟ್ಟಿ ಇಂದಿನ ವರೆಗೆ ಬೆಳೆದುಬಂದಿರುವುದು ಬಹುಶಃ ಇದೇ ಘಟನೆಯಿಂದ. ಈ ಘಟನೆ ಕೂಡಾ ಕಂದರವನ್ನು ಆಳಗೊಳಿಸಿತ್ತು.

ಆಗಲೇ ಇನ್ನೊಂದು ಘಟನೆಯೂ ನಡೆದಿತ್ತು. ಸುರತ್ಕಲ್‌ನಲ್ಲಿ ಹಾಕಿದ್ದ ಯಕ್ಷಗಾನದ ಬ್ಯಾನರ್ ಒಂದನ್ನು ಕಿಡಿಗೇಡಿಗಳು ಹರಿದುಹಾಕಿದ್ದರು. ಆಗ ಉಂಟಾದ ಉದ್ವಿಗ್ನತೆಯಿಂದ ಯಕ್ಷಗಾನ ಪ್ರದರ್ಶನವೇ ನಿಂತಿತ್ತು. ಇದು ಕೂಡಾ ಧಾರ್ಮಿಕ ಭಾವನೆಗೆ ನೋವುಂಟುಮಾಡುವ ಕೆಲಸವೇ ಆಗಿತ್ತು. ಕೆಲವೇ ಕಿಡಿಗೇಡಿ ಕೃತ್ಯಗಳು, ಪರಿಸ್ಥಿತಿ ಅರಿಯುವುದರಲ್ಲಿ ಪೊಲೀಸ್ ಗುಪ್ತಚರ್ಯೆಯ ವೈಫಲ್ಯ, ಪೊಲೀಸರ ಕಾರ್ಯದಲ್ಲಿ ರಾಜಕಾರಣದ ಹಸ್ತಕ್ಷೇಪ, ಕಾನೂನನ್ನು ಕೈಗೆತ್ತಿಕೊಳ್ಳುವುದು ಇತ್ಯಾದಿಗಳು ಹೇಗೆ ಪರಿಸ್ಥಿತಿಯನ್ನು ಹದಗೆಡಿಸಬಲ್ಲವು ಎಂಬುದನ್ನು ಈ ಘಟನೆ ತೋರಿಸುತ್ತದೆ.

ಇದನ್ನೂ ಓದಿ: ಕರಾವಳಿಯ ಕೋಮು ಸಂಘಟನೆಗಳ ನಿಜಬಣ್ಣ! ಅವುಗಳ ಕಾರ್ಯವಿಧಾನ…

ಈ ಗಲಭೆ ಹರಡುವುದಕ್ಕೆ ವದಂತಿಗಳೂ ಕಾರಣವಾಗಿದ್ದವು. ಇವುಗಳನ್ನು ಹರಡುವುದಕ್ಕೆ ರಾಜಕೀಯ ಹಿತಾಸಕ್ತಿಗಳ ಪ್ರೇರಣೆಯೂ ಇತ್ತು. ವದಂತಿಯ ಸ್ವರೂಪಗಳು ಉಳಿದ ಕಡೆಗಳಂತೆಯೇ ಇದ್ದವು; ಈಗಲೂ ಇವೆ. ‘ನಮ್ಮವರ’ ಮೇಲೆ ದಾಳಿ ಮಾಡುತ್ತಿದ್ದಾರೆ, ನಮ್ಮವರ ಮನೆಗೆ ನುಗ್ಗಿ ಹೊಡೆದಿದ್ದಾರೆ, ನಮ್ಮ ಹೆಣ್ಣು ಮಕ್ಕಳ ಮೇಲೆ, ಅಕ್ಕತಂಗಿಯರ ಮೇಲೆ ಅತ್ಯಾಚಾರ ಮಾಡಿದ್ದಾರೆ, ನಮ್ಮ ತಂದೆ ತಾಯಿಯ ಮೇಲೆ ಕೈ ಹಾಕಿದ್ದಾರೆ, ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ, ನಮ್ಮವರಿಗೆ ಹೊಡೆದಿದ್ದಾರೆ- ಇವು ಹಿಂದೆ ನಡೆಯುತ್ತಿದ್ದವು, ಇಂದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಕ್ಷಣಮಾತ್ರದಲ್ಲಿ ನಡೆಯುತ್ತಿವೆ.

ಇಲ್ಲಿ ಆರಂಭವಾದ ಗಲಭೆಗಳ ಪರಿಣಾಮ ಇಲ್ಲಿಗೇ ನಿಲ್ಲಲಿಲ್ಲ. ಸುರತ್ಕಲ್ ಪರಿಸರದಲ್ಲಿಯೇ ಹಲವಾರು ಕೊಲೆಗಳು, ಪ್ರತೀಕಾರಗಳು ನಡೆದವು, ಈಗಲೂ ಮುಂದುವರಿಯುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...