Homeಕರ್ನಾಟಕಕರಾವಳಿಯಲ್ಲಿ ಕೋಮುಗಲಭೆಗಳ ಇತಿಹಾಸ - ನಿಖಿಲ್‌ ಕೋಲ್ಪೆ

ಕರಾವಳಿಯಲ್ಲಿ ಕೋಮುಗಲಭೆಗಳ ಇತಿಹಾಸ – ನಿಖಿಲ್‌ ಕೋಲ್ಪೆ

- Advertisement -
- Advertisement -

1968ರಲ್ಲಿ ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕನ್ನಡದಲ್ಲಿ ಕೋಮು ಉದ್ರಿಕ್ತತೆ ಹೆಚ್ಚಿತ್ತು. ಸುಳ್ಳು ವದಂತಿಗಳು ದಕ್ಷಿಣ ಕನ್ನಡ ಜಿಲ್ಲೆಗೂ ತಲಪಿದವು. ಆ ಸಂದರ್ಭದಲ್ಲಿಯೇ ಮಂಗಳೂರಿನಲ್ಲಿ ಮಟನ್ ಖಾದರ್ ಎಂಬಾತನಿಗೂ, ಮೀನು ಮಾರುವ ಮೊಗವೀರ ಮಹಿಳೆಗೂ ಪ್ರೇಮಸಂಬಂಧವಿದೆ ಎಂಬ ವದಂತಿ ಗಲಭೆಗೆ ಕಾರಣವಾಯಿತು. ಈ ಗಲಭೆಯಲ್ಲಿ ಬಂದರು ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾದ ಬಗ್ಗೆ ಮಾಹಿತಿ ಸಿಗುತ್ತದೆ.

ಮತ್ತೆ 1979ರಲ್ಲಿ ಖ್ಯಾತ ಚಿತ್ರ ನಿರ್ದೇಶಕ, ಲೇಖಕ ವಿಶುಕುಮಾರ್ ಅವರ ಕನ್ನಡ ಚಿತ್ರ ‘ಕರಾವಳಿ’ಯ ಕಾರಣದಿಂದ ಗಲಭೆ ಉಂಟಾಯಿತು. ಅದು ಮೀನುಗಾರ ಮುಸ್ಲಿಂ ಯುವಕ ಮತ್ತು ಮೊಗವೀರ ಸಮುದಾಯದ ಮಹಿಳೆಯ ನಡುವಿನ ಪ್ರೇಮಕತೆಯಾಗಿದ್ದುದೇ ಇದಕ್ಕೆ ಕಾರಣ. ಈ ಗಲಭೆಗಳು ಹೊಯ್ಗೆಬಜಾರ್, ಕುದ್ರೋಳಿ, ಬಂದರು ಮುಂತಾದ ಪ್ರದೇಶಗಳಲ್ಲಿ ತೀವ್ರವಾಗಿತ್ತು. ಈ ಘಟನೆಯಲ್ಲಿ ಕೆಲವರು ಪ್ರಾಣಕಳೆದುಕೊಂಡರು ಎಂದು ಹೇಳಲಾಗುತ್ತದೆಯಾದರೂ, ನಿಖರ ಮಾಹಿತಿ ಲಭ್ಯವಿಲ್ಲ. ಈ ಘಟನೆಯಲ್ಲಿ ಮುಸ್ಲಿಮರ ಮತ್ತು ಗೌಡ ಸಾರಸ್ವತ ಸಮುದಾಯದವರ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕೋಮುವಾದದ ಸಾಮಾಜಿಕ ಹಿನ್ನೆಲೆ; ಮೊದಲ ಕೋಮುಗಲಭೆ!

ಹಿಂದೆಲ್ಲಾ ಉಳ್ಳಾಲ ಪ್ರದೇಶವು ಕೋಮುಸೌಹಾರ್ದಕ್ಕೆ ಹೆಸರಾಗಿತ್ತು. ಇದಕ್ಕೆ ದೊಡ್ಡ ಇತಿಹಾಸವಿದ್ದು, ಆ ಕುರಿತು ಈಗಾಗಲೇ ಬರೆಯಲಾಗಿದೆ. ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ಮುಸ್ಲಿಮರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. 1980ರ ದಶಕದಲ್ಲಿ ಮಲ್ಲಕಂಭಕ್ಕೆ ಹಂದಿಯ ಕೊಬ್ಬನ್ನು ಸವರಲಾಗುತ್ತದೆ ಎಂದು ಇಂತಹಾ ಉತ್ಸವಗಳಲ್ಲಿ ಭಾಗವಹಿಸುವುದನ್ನು ‘ಶಿರ್ಕ್’ ಎಂದು ಕರೆಯುವ ಕೆಲವು ಸಂಪ್ರದಾಯವಾದಿ ಮುಸ್ಲಿಮರು ವದಂತಿ ಹಬ್ಬಿದರು. ಆಗಿನಿಂದ ಮುಸ್ಲಿಮರ ಭಾಗವಹಿಸುವಿಕೆ ಕಡಿಮೆಯಾಗುತ್ತಾ ಹೋಯಿತು. ಇಂದು ಸಾಮಾನ್ಯ ಸ್ಥಿತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದದಿಂದಲೇ ಸಹಬಾಳ್ವೆ ನಡೆಸುತ್ತಿದ್ದರೂ, ಸದಾ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ಸ್ಫೋಟಕ ಸ್ಥಿತಿ ತಲಪುತ್ತದೆ.

ನಂತರ, 1989ರಲ್ಲಿ ಬೈಕಂಪಾಡಿ, ಹೊಸಬೆಟ್ಟು- ಹೀಗೆ ದಕ್ಷಿಣ ಕನ್ನಡದ ಕಡಲತಡಿಯ ಉದ್ದಕ್ಕೂ ಕೋಮುಗಲಭೆ ಉಂಟಾಗಿತ್ತಾದರೂ, ಅದು ಮುಖ್ಯವಾಗಿ ಭಾರೀ ಪ್ರಮಾಣದಲ್ಲಿ ಅಂಗಡಿಗಳ ಲೂಟಿ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಲ್ಲಿಯೇ ಕೊನೆಗೊಂಡಿತು.

ನಂತರ ಸಣ್ಣಪುಟ್ಟ ಸಂಘರ್ಷಗಳು ಅಲ್ಲಲ್ಲಿ ನಡೆದೇ ಇದ್ದರೂ, ಇತಿಹಾಸದ ಅತೀ ದೊಡ್ಡ ಕೋಮುಗಲಭೆ ನಡೆದದ್ದು 1998-99ರಲ್ಲಿ. 1998ರ ಡಿಸೆಂಬರ್ 29ರಂದು ಆರಂಭವಾದ ಈ ಗಲಭೆ ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಆರಂಭವಾಗಿ ನಂತರದಲ್ಲಿ ಸುತ್ತಲಿನ ಕೃಷ್ಣಾಪುರ, ಬೈಕಂಪಾಡಿ, ಕುಳಾಯಿ, ಹೊಸಬೆಟ್ಟು, ತಡಂಬೈಲ್, ಕಾನ, ಕಾಟಿಪಳ್ಳ, ನಂತರ ಮಂಗಳೂರು ನಗರ, ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳಿಗೆ ವ್ಯಾಪಿಸಿತ್ತು. ಈ ಗಲಭೆಯಲ್ಲಿ ಎಂಟು ಮಂದಿ ಅಧಿಕೃತ ಮೂಲಗಳ ಪ್ರಕಾರ ಪ್ರಾಣ ಕಳೆದುಕೊಂಡಿದ್ದರು. ಇವರಲ್ಲಿ ಆರು ಮಂದಿ ಮುಸ್ಲಿಮರು ಮತ್ತು ಇಬ್ಬರು ಹಿಂದೂಗಳು. ಅನಧಿಕೃತ ವರದಿಗಳ ಪ್ರಕಾರ ಈ ಸಂಖ್ಯೆ 16 ಆಗಿತ್ತು. 100ಕ್ಕೂ ಹೆಚ್ಚು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಮನೆಗೆ ನುಗ್ಗಿ ಹೆಂಗಸರು, ಮಕ್ಕಳು, ವೃದ್ಧರ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅಮಾನುಷ ಘಟನೆಗಳೂ ನಡೆದಿದ್ದವು. ಘಟನೆಯಲ್ಲಿ ಭಾರೀ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, 165 ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಇವುಗಳಲ್ಲಿ 98 ಮುಸ್ಲಿಮರು ಮತ್ತು 67 ಹಿಂದೂಗಳ ಮನೆಗಳಾಗಿದ್ದವು. ಮುಸ್ಲಿಮರ ನಾಲ್ಕು ಪೂಜಾಸ್ಥಳಗಳನ್ನು ಧ್ವಂಸ ಮಾಡಲಾಗಿತ್ತು. ಈ ಅಂಕಿ-ಅಂಶಗಳನ್ನು ನೀಡುತ್ತಿರುವ ಕಾರಣವೆಂದರೆ- ಕಾರಣ ಏನೇ ಇರಲಿ, ಯಾರೇ ಇರಲಿ- ಎರಡೂ ಕಡೆಗಳವರು ಧರ್ಮಗಳ ಹೆಸರಿನಲ್ಲಿ ಮನುಷ್ಯತ್ವ ಮರೆತು ಪಶುಗಳ ರೀತಿ ಕಾದಾಡಿದ್ದರು ಎಂಬುದನ್ನು ಸೂಚಿಸುವುದಾಗಿದೆ.‌‌‌

ಗಲಭೆ ಕಾರಣ ಕ್ಷುಲ್ಲಕವಾದದ್ದು. ಚೊಕ್ಕಬೆಟ್ಟುವಿನಲ್ಲಿ ಗುಜರಿ ಮಾರುವವನೊಬ್ಬ ಒಂದು ಮನೆಯಿಂದ ಗುಜರಿ ಕದ್ದಿದ್ದ. ಆತನನ್ನು ಹಿಡಿದ ಮನೆಯವರು, ನೆರೆಯವರು ಆತನಿಗೆ ಥಳಿಸಿದ್ದರು. ಇದು ಒಂದು ಸಮುದಾಯದ ಕೆಲವರು, ಕಲ್ಲೆಸೆತ ಆರಂಭಿಸುವುದಕ್ಕೆ ಕಾರಣವಾಗಿತ್ತು. ಆದರೆ, ಇದು ಕೇವಲ ನೆಪವಾಗಿತ್ತು. ಇದಕ್ಕಿಂತಲೂ ಮೊದಲು ಬೇರೆ ಮೂರು ಪ್ರತ್ಯೇಕ ಘಟನೆಗಳು ನಡೆದಿದ್ದವು.

1998ರ ನವೆಂಬರ್‌ನಲ್ಲಿ ಕುಳಾಯಿಯಲ್ಲಿ ಕ್ರೈಸ್ತರ ಸಣ್ಣ ಪಂಥವಾದ ಇವಾಂಜಲಿಕ್ ಚರ್ಚಿಗೆ ನುಗ್ಗಿದ ಹಿಂದೂತ್ವವಾದಿಗಳು ರಾಜಾರೋಷವಾಗಿ ನುಗ್ಗಿ ಎಲ್ಲರನ್ನು ಥಳಿಸಿ, ಅದನ್ನು ಧ್ವಂಸಗೊಳಿಸಿದ್ದರು. ಇದು ದೇಶದಾದ್ಯಂತ ಕ್ರೈಸ್ತ ಧಾರ್ಮಿಕ ಸಂಸ್ಥೆಗಳ ಮೇಲೆ ನಡೆಯುತ್ತಿದ್ದ ದಾಳಿಗಳ ಭಾಗವಾಗಿತ್ತು. ಇಲ್ಲಿ ಕೆಥೋಲಿಕರ ಮೇಲೆ ಯಾವುದೇ ದಾಳಿಗಳು ನಡೆದಿರಲಿಲ್ಲವಾದರೂ (ನಂತರ ನಡೆದವು) ಇಂತಹಾ ಭಯಹುಟ್ಟಿಸುವ ಕೃತ್ಯ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆತಂಕ ಸೃಷ್ಟಿಸಿತ್ತು.

ಇನ್ನೊಂದು ಘಟನೆ ಎಂದರೆ, ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ ಎಂಬ ಆರೋಪದಲ್ಲಿ ಆತನಿಗೆ ಹಿಂದೂತ್ವವಾದಿಗಳ ಗುಂಪೊಂದು ಥಳಿಸಿದ್ದು. ಅದರ ಆರೋಪಿಗಳನ್ನು ಪೊಲೀಸರು ಬಂಧಿಸಿದಾಗ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಪೊಲೀಸರ ಕೆಲಸವನ್ನು ತಾವೇ ಮಾಡುತ್ತೇವೆ, ತಮ್ಮನ್ನು ಅವರು ಬಂಧಿಸುವಂತಿಲ್ಲ ಎಂಬ ಮನೋಭಾವ ಹುಟ್ಟಿ ಇಂದಿನ ವರೆಗೆ ಬೆಳೆದುಬಂದಿರುವುದು ಬಹುಶಃ ಇದೇ ಘಟನೆಯಿಂದ. ಈ ಘಟನೆ ಕೂಡಾ ಕಂದರವನ್ನು ಆಳಗೊಳಿಸಿತ್ತು.

ಆಗಲೇ ಇನ್ನೊಂದು ಘಟನೆಯೂ ನಡೆದಿತ್ತು. ಸುರತ್ಕಲ್‌ನಲ್ಲಿ ಹಾಕಿದ್ದ ಯಕ್ಷಗಾನದ ಬ್ಯಾನರ್ ಒಂದನ್ನು ಕಿಡಿಗೇಡಿಗಳು ಹರಿದುಹಾಕಿದ್ದರು. ಆಗ ಉಂಟಾದ ಉದ್ವಿಗ್ನತೆಯಿಂದ ಯಕ್ಷಗಾನ ಪ್ರದರ್ಶನವೇ ನಿಂತಿತ್ತು. ಇದು ಕೂಡಾ ಧಾರ್ಮಿಕ ಭಾವನೆಗೆ ನೋವುಂಟುಮಾಡುವ ಕೆಲಸವೇ ಆಗಿತ್ತು. ಕೆಲವೇ ಕಿಡಿಗೇಡಿ ಕೃತ್ಯಗಳು, ಪರಿಸ್ಥಿತಿ ಅರಿಯುವುದರಲ್ಲಿ ಪೊಲೀಸ್ ಗುಪ್ತಚರ್ಯೆಯ ವೈಫಲ್ಯ, ಪೊಲೀಸರ ಕಾರ್ಯದಲ್ಲಿ ರಾಜಕಾರಣದ ಹಸ್ತಕ್ಷೇಪ, ಕಾನೂನನ್ನು ಕೈಗೆತ್ತಿಕೊಳ್ಳುವುದು ಇತ್ಯಾದಿಗಳು ಹೇಗೆ ಪರಿಸ್ಥಿತಿಯನ್ನು ಹದಗೆಡಿಸಬಲ್ಲವು ಎಂಬುದನ್ನು ಈ ಘಟನೆ ತೋರಿಸುತ್ತದೆ.

ಇದನ್ನೂ ಓದಿ: ಕರಾವಳಿಯ ಕೋಮು ಸಂಘಟನೆಗಳ ನಿಜಬಣ್ಣ! ಅವುಗಳ ಕಾರ್ಯವಿಧಾನ…

ಈ ಗಲಭೆ ಹರಡುವುದಕ್ಕೆ ವದಂತಿಗಳೂ ಕಾರಣವಾಗಿದ್ದವು. ಇವುಗಳನ್ನು ಹರಡುವುದಕ್ಕೆ ರಾಜಕೀಯ ಹಿತಾಸಕ್ತಿಗಳ ಪ್ರೇರಣೆಯೂ ಇತ್ತು. ವದಂತಿಯ ಸ್ವರೂಪಗಳು ಉಳಿದ ಕಡೆಗಳಂತೆಯೇ ಇದ್ದವು; ಈಗಲೂ ಇವೆ. ‘ನಮ್ಮವರ’ ಮೇಲೆ ದಾಳಿ ಮಾಡುತ್ತಿದ್ದಾರೆ, ನಮ್ಮವರ ಮನೆಗೆ ನುಗ್ಗಿ ಹೊಡೆದಿದ್ದಾರೆ, ನಮ್ಮ ಹೆಣ್ಣು ಮಕ್ಕಳ ಮೇಲೆ, ಅಕ್ಕತಂಗಿಯರ ಮೇಲೆ ಅತ್ಯಾಚಾರ ಮಾಡಿದ್ದಾರೆ, ನಮ್ಮ ತಂದೆ ತಾಯಿಯ ಮೇಲೆ ಕೈ ಹಾಕಿದ್ದಾರೆ, ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ, ನಮ್ಮವರಿಗೆ ಹೊಡೆದಿದ್ದಾರೆ- ಇವು ಹಿಂದೆ ನಡೆಯುತ್ತಿದ್ದವು, ಇಂದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಕ್ಷಣಮಾತ್ರದಲ್ಲಿ ನಡೆಯುತ್ತಿವೆ.

ಇಲ್ಲಿ ಆರಂಭವಾದ ಗಲಭೆಗಳ ಪರಿಣಾಮ ಇಲ್ಲಿಗೇ ನಿಲ್ಲಲಿಲ್ಲ. ಸುರತ್ಕಲ್ ಪರಿಸರದಲ್ಲಿಯೇ ಹಲವಾರು ಕೊಲೆಗಳು, ಪ್ರತೀಕಾರಗಳು ನಡೆದವು, ಈಗಲೂ ಮುಂದುವರಿಯುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...