Homeಮುಖಪುಟದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟ ನರಮನುಷ್ಯರು!

ದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟ ನರಮನುಷ್ಯರು!

- Advertisement -
- Advertisement -

ದೇವರಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟಮ್ಮಾ!
-ಕುವೆಂಪು (ಅರ್ಧಚಂದ್ರ)

“ಮಗುವಿನ ಪಾಲಿಗೆ ಗಗನದೊಳಲೆಯುವ ಚಂದಿರನು ದೇವರ ಪೆಪ್ಪರಮೆಂಟು! ಅದು ಎಷ್ಟೇ ತಿಂದರು ಖರ್ಚೇ ಆಗದು..”- ಮಗುವಿನ ಕಲ್ಪನಾ ವಿಲಾಸಕ್ಕೆ ಕುವೆಂಪು ಕೊಟ್ಟ ಅಮೃತ ರೂಪಕ ದೇವರ ಪೆಪ್ಪರಮೆಂಟು! ಆದರೆ ಇದೀಗ ಈ ಭೂತಳದ ಮನುಷ್ಯರು ಆ ದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟಿದ್ದಾರೆ.

ಬಹುಶಃ ಮಾನವನ ಇತಿಹಾಸದಲ್ಲಿ ಚಂದ್ರನ ಕುರಿತು ಬರೆದಿರುವಷ್ಟು ವಿಪುಲ ಸಾಹಿತ್ಯ ಬೇರಾವ ಆಕಾಶಕಾಯಗಳ ಬಗ್ಗೆಯೂ ಇಲ್ಲ. ಕವಿ ಸಮಯಕ್ಕೆ ಚಂದ್ರನೇ ಪ್ರಥಮ ಪುರುಷ. ಚಕೋರ ಪಕ್ಷಿಗೆ ಚಂದ್ರಮನ ಚಿಂತೆ; ಚಂದ್ರನ ಬೆಳಕಿಲ್ಲದೆ ಪ್ರಣಯಿಗಳು ಹಾಡಿ ನಲಿಯರು. ಕಬ್ಬಿನ ತೋಟಕ್ಕೆ ಬೆಳದಿಂಗಳ ಬೆಳಕನ್ನು ಹಾಯಿಸುತ್ತಿದ್ದಾರೆಂದು ಕವಿಯೊಬ್ಬನ ಉತ್ಪ್ರೇಕ್ಷೆ! ಮಂಥರೆ ಮುಕುರದಲ್ಲಿ ತೋರಿಸಿದ ಚಂದ್ರನನ್ನು ಕಂಡು ರಚ್ಚೆ ಹಿಡಿದಿದ್ದ ಶಿಶು ರಾಮ ನಲಿದನಂತೆ. (ಕುವೆಂಪು ರಾಮಾಯಣ)

ಹೀಗೆ ಸೂರ್ಯನ ಸುಡುಬಿಸಿಲನ್ನು ಪ್ರತಿಫಲಿಸಿ ಇಳೆಗೆ ತಿಂಗಳಾಗುವ ಚಂದ್ರ ಕತ್ತಲೆ ಲೋಕದ ಕಣ್ಣು! ಕವಿಗಳು, ವಿಜ್ಞಾನಿಗಳು ಕಾಲಕಾಲಕ್ಕೆ ಚಂದ್ರನ ಬಗ್ಗೆ ವಿಪುಲ ಸಾಹಿತ್ಯವನ್ನು ರಚಿಸಿದ್ದಾರೆ. ಇಂತಪ್ಪ ಚಂದ್ರನಲ್ಲಿಗೆ ಹೋಗಿ ಅಲ್ಲಿಯೂ ತಂತಮ್ಮ ವಸಾಹತುಗಳನ್ನು ಸ್ಥಾಪಿಸಿ, ಗಣಿಗಾರಿಕೆ ನಡೆಸಿ, ಕೈಗಾರಿಕೆಗಳನ್ನು ವಿಸ್ತರಿಸಿ ಆ ನೈಸರ್ಗಿಕ ಉಪಗ್ರಹವನ್ನೂ ಮುಕ್ಕು ಮಾಡಲು ಹೊರಟಿದ್ದಾರೆ ಈ ನರಮಾನವರು. ಭೂಮಿಯ ಮೇಲ್ಮೈಯ ಹಾಗೂ ಅಂತರ್ಗತ ನಿಸರ್ಗ ಸಂಪನ್ಮೂಲಗಳನ್ನು ಬರಿದು ಮಾಡಿದ್ದಾಯಿತು; ಸಮುದ್ರ ತಳಕ್ಕೆ ಕೊರೆದು ಪೆಟ್ರೋಲ್ ಖನಿಜಗಳನ್ನು ಹೀರಿದ್ದಾಯಿತು; ಈಗ ಗ್ರಹ ತಾರಾನಕ್ಷತ್ರ ಮಂಡಲದಲ್ಲಿ ಏನಾದರೂ ಉಂಟೆ ಎಂದು ಅನ್ವೇಷಣೆಗೆ ಹೊರಟಿದ್ದಾರೆ. ಈ ನಿಟ್ಟಿನ ಅನ್ವೇಷಣೆಯಲ್ಲಿ ಇವರ ಕೈಯೆಟಕಿನಲ್ಲಿ ಮೊದಲು ಸಿಕ್ಕಿದವ ಚಂದ್ರ. ಪ್ರಾಚೀನಕಾಲದಿಂದಲೂ ಸೌರವ್ಯೂಹದ ಗ್ರಹತಾರಾ ನಕ್ಷತ್ರ ಮಂಡಲಗಳ ಚಲನವಲನಗಳ ವಿವರಗಳನ್ನು ಕಂಡುಕೊಂಡ ಮನುಷ್ಯ ತನ್ನ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದ.

17ನೇ ಶತಮಾನದಲ್ಲಿ ಗೆಲಿಲಿಯೋ ದೂರದರ್ಶಕದ ಮೂಲಕ ಈ ಅನ್ವೇಷಣೆಗೆ ನಾಂದಿ ಹಾಡಿದ. ಅಲ್ಲಿಂದ ಇಲ್ಲಿಯವರೆಗೂ ಚಂದ್ರನ ಬಗ್ಗೆ ಊಹಾಪೋಹಗಳು, ಕಲ್ಪನೆಗಳು ಸೃಷ್ಟಿಯಾಗುತ್ತಲೇ ಇವೆ. ಮೊದಮೊದಲಿಗೆ ಭೂಮಿಯ ಮೇಲಿನಂತೆ ಅಲ್ಲಿಯೂ ಗಾಳಿ, ಬೆಳಕು, ಮಳೆ, ಬಿಸಿಲು, ಚಂಡಮಾರುತ, ಜ್ವಾಲಾಮುಖಿಯಂತಹ ನೈಸರ್ಗಿಕ ಕ್ರಿಯೆಗಳೆಲ್ಲಾ ಸಂಭವಿಸುತ್ತವೆ ಎಂದೂ ಅಲ್ಲಿಯೂ ಸಮುದ್ರಗಳಿವೆ, ಜೀವ ಜಂತುಗಳಿವೆ, ಬೆಟ್ಟಗುಡ್ಡಗಳಿವೆ ಎಂದು ಊಹಿಸಿಕೊಳ್ಳಲಾಗಿತ್ತು. ಆದರೆ, ಅಂತಿಮವಾಗಿ ತಿಳಿದುಬಂದುದೇನೆಂದರೆ ಚಂದ್ರನಲ್ಲಿ ಭೂಮಿಯಲ್ಲಿರುವಂತೆ ವಾತಾವರಣವೇ ಇಲ್ಲ ಎನ್ನುವುದು. ಸೋವಿಯತ್ ರಷ್ಯಾ ಮೊಟ್ಟಮೊದಲು ಚಂದ್ರನ ಮೇಲೆ ಸ್ಪುಟ್ನಿಕ್ ಇಳಿಸಿದಾಗ (1959) ಅದರ ಮೇಲ್ಮೈ ಗಟ್ಟಿಯಾಗಿದೆ ಎಂಬುದು ತಿಳಿದು ಬಂತು. ಇದಾದನಂತರ ಆರೇಳು ದಶಕಗಳಿಂದ ರಷ್ಯಾ, ಅಮೆರಿಕ, ಚೀನಾ, ಜಪಾನ್, ಮತ್ತು ಭಾರತವೂ ಸೇರಿದಂತೆ ಚಂದ್ರಾನ್ವೇಷಣೆಗೆ ತೊಡಗಿಕೊಂಡವು.

1969ರಲ್ಲಿ ಅಮೆರಿಕದ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ಼್ ಆಲ್ಡ್ರೀನ್-ಇವರು ಮೊದಲ ಬಾರಿಗೆ ಚಂದ್ರನ ಮೇಲೆ ಕಾಲೂರಿದರು. (ಅಪೊಲೋ-11) ಸುಮಾರು 2-3 ಗಂಟೆಗಳ ಕಾಲ ಇವರು ಚಂದ್ರನ ಮೇಲೆ ನಡೆದಾಡಿ ಅದರ ಮೇಲ್ಮೈನ ಕಲ್ಲು-ಮಣ್ಣುಗಳನ್ನು ಸಂಗ್ರಹಿಸಿಕೊಂಡು, ಆ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದ ಮೈಕ್‌ಕಾಲಿನ್ಸ್ ಜೊತೆಗೂಡಿ ಮೂವರೂ ಸುರಕ್ಷಿತವಾಗಿ ವಾಪಾಸಾದದ್ದು ಒಂದು ಮಹಾದ್ಭುತ! ಇಲ್ಲಿಗೆ ಚಂದ್ರನ ಮೇಲ್ಮೈನ ಕೆಲವು ಖಚಿತ ಮಾಹಿತಿಗಳು ಸಿಕ್ಕಂತಾಯಿತು. ಇವುಗಳ ಆಧಾರದಿಂದ ಭೂಮಿಯ ಮೇಲೆ ಸಿಕ್ಕುವ ಎಲ್ಲಾ ಖನಿಜ-ಲೋಹ ಸಂಪನ್ಮೂಲಗಳು ಚಂದ್ರನಲ್ಲೂ ಇರಬಹುದು ಎಂದಾಯಿತು. ಆದರೆ ಯಾವುದೇ ಜೀವಜಂತುಗಳು ಅರಣ್ಯಗಳು ಅಲ್ಲಿಲ್ಲ ಎಂಬುದೂ ಖಾತರಿಯಾಯಿತು. ಆದರೂ ಚಂದ್ರನಲ್ಲಿ ಮಂಜುಗಡ್ಡೆ ಕಟ್ಟಿಕೊಂಡಿರುವ ನೀರ್‍ದಾಣಗಳ ಆಳದಲ್ಲಿ ಹುದುಗಿರಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಅಲ್ಲಿ ಮುಖ್ಯವಾಗಿ ಗಾಳಿಯೇ ಇಲ್ಲ. ಜೀವಕ್ಕೆ ಉಸಿರೇ ಇಲ್ಲದಮೇಲೆ ಜೀವಿಗಳು ಬದುಕುವುದಾದರೂ ಹೇಗೆ? ಆದ್ದರಿಂದ ಮನುಷ್ಯ ಜೀವಿ ಅಲ್ಲಿ ಬದುಕಲಾರ. ಹೀಗಿದ್ದೂ ಸಹ ಅಲ್ಲಿಗೆ ಹೋಗಿ ಕೃಷಿ, ಗಣಿಗಾರಿಕೆ ಮಾಡಲು ಯೋಚಿಸಿರುತ್ತಾನೆ. ಇನ್ನು ಚಂದ್ರನ ಮೇಲ್ಮೈಯಲ್ಲಿ ಕೆಲವು ಲೋಹಗಳು ಖನಿಜಗಳು ಕಲ್ಲು ಮಣ್ಣುಗಳಲ್ಲಿ ಸಮ್ಮಿಶ್ರಗೊಂಡಿವೆ ಎಂಬುದು ಅಪೊಲೋ-17 ಅನ್ವೇಷಣೆಯಿಂದ ತಿಳಿದು ಬಂತು. ಇದು ಎರಡನೇ ಮಜಲು.

ಚಂದ್ರನ ಹೊರಮೈ ವಾತಾವರಣದಲ್ಲಿ ಜಲಜನಕ, ಹೀಲಿಯಂ, ಅಮೋನಿಯಾ, ಇಂಗಾಲದ ಡೈ ಆಕ್ಸೈಡ್ ಮತ್ತು ಮಿಥೇನ್ ಮುಂತಾಗಿ ಇರಬಹುದೆಂದು ಕಂಡುಬಂದಿದೆ. ಆದರೂ ಭೂಮಿಯ ಮೇಲಿರುವಂತೆ ಸಾರಜನಕ ಮಾತ್ರ ಇಲ್ಲದೆ ಇರುವುದು ವಿಜ್ಞಾನಿಗಳಿಗೆ ಆಶ್ಚರ್ಯ. ಅಲ್ಲದೆ ಅತ್ಯಂತ ಕಡಿಮೆ ಸಾಂದ್ರತೆಯುಳ್ಳ ಅಪರೂಪದ ಅನಿಲಗಳು ಚಂದ್ರನಲ್ಲಿ ಉಂಟೆಂದೂ ಹೇಳಲಾಗುತ್ತಿದೆ. ಮತ್ತೊಂದು ವಿಶೇಷವೆಂದರೆ ಭುವಿಯಲ್ಲಿರುವಂತೆ ಚಂದ್ರನಲ್ಲೂ ಚಿನ್ನ, ವಜ್ರ, ಕಬ್ಬಿಣದ ಅದಿರು, ಕಲ್ಲಿದ್ದಲು ಮುಂತಾದ ಅಪರೂಪದ ಖನಿಜ ನಿಕ್ಷೇಪಗಳು, ಅದರ ಆಳದಲ್ಲಿ ಹುದುಗಿರಬಹುದು. ಆದರೆ ಅವುಗಳನ್ನು ಹುಡುಕಿ ತೆಗೆದು ಸಂಸ್ಕರಿಸಿ ಭೂಮಿಗೆ ರವಾನಿಸುವುದು ಹೇಗೆ? ಇದಕ್ಕೆ ತಗಲುವ ಖರ್ಚು ಎಷ್ಟಾಗಬಹುದು? ಇದೆಲ್ಲಾ ಗುಡ್ಡ ಕಡಿದು ಇಲಿ ಹಿಡಿಯುವ ಅನ್ವೇಷಣೆ ಎಂಬುದು ಕೆಲವರು ಅಂಬೋಣ!

ಇದನ್ನೂ ಓದಿ: ಚಂದ್ರಯಾನ-3 ಉಡಾವಣೆ ಮತ್ತು ಬಾಹ್ಯಾಕಾಶಯಾನ ಇತಿಹಾಸದ ಪಕ್ಷಿನೋಟ

ಇಷ್ಟಾಗಿಯೂ ಚಂದ್ರನ ಮೇಲಿರುವ ಸಂಪನ್ಮೂಲಗಳಿಗೆ ಮೋಹಗೊಂಡಿರುವ ಶ್ರೀಮಂತ ರಾಷ್ಟ್ರಗಳಿಗೆ ನಿದ್ದೆ ಹತ್ತದು. ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಆ ಖನಿಜ ಸಂಪನ್ಮೂಲಗಳನ್ನು ಮುಕ್ಕಿ ಮುಗಿಸಿಬಿಡುವ ತರಾತುರಿಯಲ್ಲಿ ಇವೆ. ಇದು “ನಿಂತ ನೆಲವೆಂದು ಕಡಿಲ್ಯಾಕೊ ಹಡಿಲ್ಯಾಕೊ ಒಡಿಲ್ಯಾಕೊ ಒಡವ್ಯಲ್ಲೋ ಮಗನೆ ಉಸಿರಿದ್ದೊಡಲಂತಾ” (ದ.ರಾ.ಬೇಂದ್ರೆ) ಭೂಮಿತಾಯಿ ಚೀರಿಡುತ್ತಿದ್ದರೂ ಬಿಡದೆ ಬರಿದು ಮಾಡಿದರಲ್ಲ- ಈ ಆಸೆಬುರಕ ಮನುಷ್ಯರು. ಈ ಕ್ಯಾಪಿಟಲಿಸ್ಟರಿಗೆ ಇನ್ನು ಆ ಚಂದ್ರ ಯಾವ ಲೆಕ್ಕ? ಮಲೆನಾಡಿನ ’ಬೃಹತ್ ಗಾತ್ರದ ಹೆಮ್ಮರಗಳನ್ನು ಕಂಡರೆ ನಾಟಾ ಕಳ್ಳರಿಗೆ ತಿಜೋರಿಯ ಹಣ ಕಂಡಂತೆ’ ಎಂದರು ತೇಜಸ್ವಿ. ಹಾಗೆ ಗುರುವಾದರೇನು ಚಂದ್ರನಾದರೇನು? ಮಂಗಳ ಗ್ರಹಕ್ಕೂ ದಾಳಿ ಇಡಬಲ್ಲರು ಇವರು. ಈಗ ಚಂದ್ರನಲ್ಲಿ ಖನಿಜಗಳಿವೆ ಎಂದು ಕೇಳಿಬಂದೊಡನೆ ಬಹುರಾಷ್ಟ್ರೀಯ ಕಂಪನಿಯ ಖದೀಮರು ಅಲ್ಲಿಗೆ ದಾಳಿಯಿಡಲು ಧಾವಂತಪಡುತ್ತಿದ್ದಾರೆ.

ಹಿಂದೆ ಕೊಲಂಬಸ್ ವಾಸ್ಕೋಡಿಗಾಮರು ನೌಕಾಯಾನದಲ್ಲಿ ಹೊಸಹೊಸ ಭೂಖಂಡಗಳನ್ನು ಕಂಡುಕೊಂಡರು. ಅಲ್ಲೆಲ್ಲಾ ಅವರಿಗೆ ಬೇಕಾದ ಹಾಗೆ ನೈಸರ್ಗಿಕ ಸಂಪನ್ಮೂಲಗಳು ಖನಿಜಗಳು ಇವೆಯೆಂದು ಗೊತ್ತಾಯಿತು. ಅವುಗಳ ಕೊಳ್ಳೆಗೆ ಯುರೋಪಿಯನ್ ರಾಷ್ಟ್ರಗಳು ಸಾಲುಗಟ್ಟಿ ಹೊರಟರು. ಅವರ ಲೂಟಿಗೆ ಸಿಕ್ಕಿದ ಲ್ಯಾಟಿನ್ ಅಮೆರಿಕ, ಆಫ್ರಿಕಾ ಹಾಗೂ ಆಗ್ನೇಯ ಏಷಿಯನ್ ರಾಷ್ಟ್ರಗಳು ಬರಿದಾಗಿ ಈಗ ಬರಡು ಗೋವಿನಂತಾಗಿವೆ. ಇಲ್ಲಿನ ಸಮೃದ್ಧ ಖನಿಜಗಳು ಹಾಗೂ ಅರಣ್ಯ ಸಂಪನ್ಮೂಲಗಳನ್ನು ಅಗೆದೂ ಬಗೆದೂ ಕಡಿದೂ ಬರಿದುಮಾಡಿದರು. ಸ್ವಾತಂತ್ರ್ಯಾನಂತರ ಸ್ಥಳೀಯ ಬಂಡವಾಳಶಾಹೀ ಪ್ರಜಾಪ್ರಭುತ್ವದ ಪ್ರಭುಗಳು ಇದೇ ಕೆಲಸವನ್ನು ಮುಂದುವರಿಸಿದರು. ಪರಿಣಾಮವಾಗಿ ಸದ್ಯ ಅತಿವೃಷ್ಟಿ ಅನಾವೃಷ್ಟಿ ಅಧಿಕ ತಾಪಮಾನ ಹಾಗೂ ಜನಸಂಖ್ಯೆಯ ಬಾಹುಳ್ಯದಿಂದ ಈ ಬಡ ರಾಷ್ಟ್ರಗಳು ದಣಿದುಹೋಗುತ್ತಿವೆ. ಇರುವುದೊಂದೇ ಭೂಮಿ ಇನ್ನು ಅಡಗಲು ಸ್ಥಳವೆಲ್ಲಿ? ವಿಜ್ಞಾನ ಮತ್ತು ತಂತ್ರಜ್ಞಾನ ವರವೂ ಆಯಿತು ಶಾಪವೂ ಆಯಿತು.

ಆದರೂ ಈ ರಾಷ್ಟ್ರಗಳೂ ಸಹ ಅಮೆರಿಕ ರಷ್ಯಾ ಮುಂತಾದ ದೇಶಗಳನ್ನೇ ಅನುಸರಿಸಿ ತಾವೂ ಚಂದ್ರನ ಮೇಲೆ ದಾಳಿ ಇಡಲು ಪ್ರಯತ್ನಿಸುತ್ತಿವೆ. ಈ ದಿಸೆಯಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಜುಲೈ 14, 2023ರಂದು ನಮ್ಮ ಚಂದ್ರಯಾನ-3 ನಭೋಮಂಡಲಕ್ಕೆ ಚಿಮ್ಮಿತು. ಈ ಗಗನನೌಕೆ ದೀರ್ಘ ಪಯಣದ ಬಳಿಕ ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯುತ್ತದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಇನ್ನು ಮುಂದೆ ಬಾಹ್ಯಾಕಾಶ ನಿಲ್ದಾಣಗಳು, ಬಾಹ್ಯಾಕಾಶದಲ್ಲಿ ರಿಯಲ್ ಎಸ್ಟೇಟ್ ದಂಧೆಗಳು, ಪ್ರವಾಸ ಕೇಂದ್ರಗಳು ಆರಂಭವಾಗುವವೇನೋ! ಅಲ್ಲಿಯೂ ವರ್ಗ, ವರ್ಣ, ಪುರುಷ ಪಾರಮ್ಯ, ಜಾತಿ-ಜನಾಂಗಗಳ ದೇವರು ಧರ್ಮ ಗುಡಿಗೋಪುರಗಳು ನಿರ್ಮಾಣವಾಗಬಹುದು. ಕಡೆಗೆ ಅಲ್ಲಿಯೂ ಜನಾಂಗ ಶ್ರೇಷ್ಠತೆಯ ವ್ಯಸನವು ಮೈತಳೆದು ಫ್ಯಾಸಿಸ್ಟ್ ಮನೋಧರ್ಮದ ಹಿಟ್ಲರ್, ಮುಸಲೋನಿಗಳಂತಹ ಸರ್ವಾಧಿಕಾರಿಗಳೂ ಹುಟ್ಟಿಕೊಳ್ಳಬಹುದು.

ಕುರುಕುಲ ಸಾರ್ವಭೌಮ ದುರ್ಯೋಧನನು ಕುರುಕ್ಷೇತ್ರ ಯುದ್ಧದಲ್ಲಿ ಸೋತು ತಾತ ಭೀಷ್ಮನ ಆದೇಶದಂತೆ ವೈಶಂಪಾಯನ ಸರೋವರದಲ್ಲಿ ಒಂದು ದಿನ ಮುಳುಗಿ ತಲೆಮರೆಸಿಕೊಳ್ಳಲು ಅತ್ತ ಆಗಮಿಸುತ್ತಾನೆ. ಅವನ ಆಗಮಿಕೆಯನ್ನು ಕಂಡು ’ಅಲ್ಲಿ ಮನುಕುಲವನ್ನು ಸರ್ವನಾಶ ಮಾಡಿದ ನೀನು ಇಲ್ಲಿಗೂ ಬಂದು ಇಲ್ಲಿ ನೆಮ್ಮದಿಯಿಂದ ಬಾಳ್ವರಂ ಆಳ್ವರಂ ಕದಡದಿರ್ ಇತ್ತ ಬಾರದಿರ್ ಸಾರದಿರ್’ ಎಂಬಂತೆ ಬಕ ಬಾಳಾಕಾನೇಕ ನೀರ್‍ವಕ್ಕಿಗಳು ಉಯ್ಯಲಿಡುತ್ತಾ ಹಾರಿಹೋದುವಂತೆ. (ಪಂಪಭಾರತ) ಮನುಷ್ಯನ ದುರಾಸೆಯ ಫಲ ಹೀಗಾಗುತ್ತದೆ.

ಮಕ್ಕಳ ಪೆಪ್ಪರಮೆಂಟಿನಂತೆ ‘ನಿಚ್ಚಂ ಪೊಸತಾದ ಚಂದ್ರ’ ಇನ್ನು ಮೇಲೆ ಗಣಿಗಾರಿಕೆಗಳಿಂದ ಧೂಳೆದ್ದು ಮುಕ್ಕಾಗಿ ಹೋಗುವುದರಲ್ಲಿ ಸಂಶಯವಿಲ್ಲ. ಮಿಲಿಯನ್‌ಗಟ್ಟಲೆ ವರ್ಷಗಳಿಂದ ಚಂದ್ರತಾರಾದಿ ಗ್ರಹನಕ್ಷತ್ರಗಳೆಲ್ಲ ಬಾಹ್ಯಾಕಾಶದಲ್ಲಿ ತೇಲಾಡುತ್ತಿದ್ದವು. ಇನ್ನು ಮುಂದೆ ಮನುಷ್ಯರು ಹಾರಿಸುವ ರಾಕೆಟ್ಟುಗಳು ಬಾಹ್ಯಾಕಾಶ ನೌಕೆಗಳು, ಅಂತರಿಕ್ಷ ನಿಲ್ದಾಣಗಳು ಮುಂತಾದವುಗಳಿಂದ ನಭೋಮಂಡಲದಲ್ಲೂ ಟ್ರಾಫಿಕ್ ಜಾಮ್ ಆಗಿ ಸೌರವ್ಯೂಹದ ನಡೆ ನಿಯಂತ್ರಣವೇ ದಿಕ್ಕೆಟ್ಟುಅಸ್ತವ್ಯಸ್ತವಾಗಬಹುದೇನೋ!

ಒಟ್ಟಾರೆ ಮನುಷ್ಯನ ಈ ವಿನಾಶದ ಬುದ್ಧಿ ಎಲ್ಲಿಗೆ ಮುಟ್ಟಬಹುದು? ಅದನ್ನು ತಡೆಯುವ ಬಗೆ ಎಂತು? ಎಂದು ಲೋಕಕಾರುಣ್ಯ ಉಳ್ಳವರು ಚಿಂತಿಸುವ ಕಾಲ ಬಂದಿದೆ. ಹಾಗಾದರೆ ಇದನ್ನು ತಡೆಯುವುದಾದರೂ ಹೇಗೆ? ಹೇಗೆಂದರೆ ಇಲ್ಲಿ ರಾಹು ಕೇತುಗಳಂತೆ ಚಂದ್ರಸೂರ್ಯರನ್ನೂ ನುಂಗಲು ಹೊರಟಿರುವ ಕ್ಯಾಪಿಟಲಿಸಂಗೆ ತಡೆ ಒಡ್ಡಲು ವಿಶ್ವರಾಷ್ಟ್ರಗಳೆಲ್ಲ ಒಂದಾಗಬೇಕು; ವಸುದೈವ ಕುಟುಂಬದ ಕಣ್ಣು ತೆರೆಯ ಬೇಕು! ಆದರೆ ಇದು ಸಾಧ್ಯವಾಗಬೇಕಾದರೆ ವಿಶ್ವನಾಯಕರಿಗೆ ಬ್ರಹ್ಮಾಂಡ ಇಚ್ಛಾಶಕ್ತಿ ಬೇಕು! ಇಲ್ಲವಾದರೆ ನಾಗಸಾಕಿ, ಹಿರೋಶಿಮಾ ನೆನಪಿದೆ ತಾನೆ? ಜಗತ್ಪ್ರಳಯ!

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...