Homeಮುಖಪುಟದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟ ನರಮನುಷ್ಯರು!

ದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟ ನರಮನುಷ್ಯರು!

- Advertisement -
- Advertisement -

ದೇವರಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟಮ್ಮಾ!
-ಕುವೆಂಪು (ಅರ್ಧಚಂದ್ರ)

“ಮಗುವಿನ ಪಾಲಿಗೆ ಗಗನದೊಳಲೆಯುವ ಚಂದಿರನು ದೇವರ ಪೆಪ್ಪರಮೆಂಟು! ಅದು ಎಷ್ಟೇ ತಿಂದರು ಖರ್ಚೇ ಆಗದು..”- ಮಗುವಿನ ಕಲ್ಪನಾ ವಿಲಾಸಕ್ಕೆ ಕುವೆಂಪು ಕೊಟ್ಟ ಅಮೃತ ರೂಪಕ ದೇವರ ಪೆಪ್ಪರಮೆಂಟು! ಆದರೆ ಇದೀಗ ಈ ಭೂತಳದ ಮನುಷ್ಯರು ಆ ದೇವರ ಪೆಪ್ಪರಮೆಂಟನ್ನೂ ಮುಕ್ಕಲು ಹೊರಟಿದ್ದಾರೆ.

ಬಹುಶಃ ಮಾನವನ ಇತಿಹಾಸದಲ್ಲಿ ಚಂದ್ರನ ಕುರಿತು ಬರೆದಿರುವಷ್ಟು ವಿಪುಲ ಸಾಹಿತ್ಯ ಬೇರಾವ ಆಕಾಶಕಾಯಗಳ ಬಗ್ಗೆಯೂ ಇಲ್ಲ. ಕವಿ ಸಮಯಕ್ಕೆ ಚಂದ್ರನೇ ಪ್ರಥಮ ಪುರುಷ. ಚಕೋರ ಪಕ್ಷಿಗೆ ಚಂದ್ರಮನ ಚಿಂತೆ; ಚಂದ್ರನ ಬೆಳಕಿಲ್ಲದೆ ಪ್ರಣಯಿಗಳು ಹಾಡಿ ನಲಿಯರು. ಕಬ್ಬಿನ ತೋಟಕ್ಕೆ ಬೆಳದಿಂಗಳ ಬೆಳಕನ್ನು ಹಾಯಿಸುತ್ತಿದ್ದಾರೆಂದು ಕವಿಯೊಬ್ಬನ ಉತ್ಪ್ರೇಕ್ಷೆ! ಮಂಥರೆ ಮುಕುರದಲ್ಲಿ ತೋರಿಸಿದ ಚಂದ್ರನನ್ನು ಕಂಡು ರಚ್ಚೆ ಹಿಡಿದಿದ್ದ ಶಿಶು ರಾಮ ನಲಿದನಂತೆ. (ಕುವೆಂಪು ರಾಮಾಯಣ)

ಹೀಗೆ ಸೂರ್ಯನ ಸುಡುಬಿಸಿಲನ್ನು ಪ್ರತಿಫಲಿಸಿ ಇಳೆಗೆ ತಿಂಗಳಾಗುವ ಚಂದ್ರ ಕತ್ತಲೆ ಲೋಕದ ಕಣ್ಣು! ಕವಿಗಳು, ವಿಜ್ಞಾನಿಗಳು ಕಾಲಕಾಲಕ್ಕೆ ಚಂದ್ರನ ಬಗ್ಗೆ ವಿಪುಲ ಸಾಹಿತ್ಯವನ್ನು ರಚಿಸಿದ್ದಾರೆ. ಇಂತಪ್ಪ ಚಂದ್ರನಲ್ಲಿಗೆ ಹೋಗಿ ಅಲ್ಲಿಯೂ ತಂತಮ್ಮ ವಸಾಹತುಗಳನ್ನು ಸ್ಥಾಪಿಸಿ, ಗಣಿಗಾರಿಕೆ ನಡೆಸಿ, ಕೈಗಾರಿಕೆಗಳನ್ನು ವಿಸ್ತರಿಸಿ ಆ ನೈಸರ್ಗಿಕ ಉಪಗ್ರಹವನ್ನೂ ಮುಕ್ಕು ಮಾಡಲು ಹೊರಟಿದ್ದಾರೆ ಈ ನರಮಾನವರು. ಭೂಮಿಯ ಮೇಲ್ಮೈಯ ಹಾಗೂ ಅಂತರ್ಗತ ನಿಸರ್ಗ ಸಂಪನ್ಮೂಲಗಳನ್ನು ಬರಿದು ಮಾಡಿದ್ದಾಯಿತು; ಸಮುದ್ರ ತಳಕ್ಕೆ ಕೊರೆದು ಪೆಟ್ರೋಲ್ ಖನಿಜಗಳನ್ನು ಹೀರಿದ್ದಾಯಿತು; ಈಗ ಗ್ರಹ ತಾರಾನಕ್ಷತ್ರ ಮಂಡಲದಲ್ಲಿ ಏನಾದರೂ ಉಂಟೆ ಎಂದು ಅನ್ವೇಷಣೆಗೆ ಹೊರಟಿದ್ದಾರೆ. ಈ ನಿಟ್ಟಿನ ಅನ್ವೇಷಣೆಯಲ್ಲಿ ಇವರ ಕೈಯೆಟಕಿನಲ್ಲಿ ಮೊದಲು ಸಿಕ್ಕಿದವ ಚಂದ್ರ. ಪ್ರಾಚೀನಕಾಲದಿಂದಲೂ ಸೌರವ್ಯೂಹದ ಗ್ರಹತಾರಾ ನಕ್ಷತ್ರ ಮಂಡಲಗಳ ಚಲನವಲನಗಳ ವಿವರಗಳನ್ನು ಕಂಡುಕೊಂಡ ಮನುಷ್ಯ ತನ್ನ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದ.

17ನೇ ಶತಮಾನದಲ್ಲಿ ಗೆಲಿಲಿಯೋ ದೂರದರ್ಶಕದ ಮೂಲಕ ಈ ಅನ್ವೇಷಣೆಗೆ ನಾಂದಿ ಹಾಡಿದ. ಅಲ್ಲಿಂದ ಇಲ್ಲಿಯವರೆಗೂ ಚಂದ್ರನ ಬಗ್ಗೆ ಊಹಾಪೋಹಗಳು, ಕಲ್ಪನೆಗಳು ಸೃಷ್ಟಿಯಾಗುತ್ತಲೇ ಇವೆ. ಮೊದಮೊದಲಿಗೆ ಭೂಮಿಯ ಮೇಲಿನಂತೆ ಅಲ್ಲಿಯೂ ಗಾಳಿ, ಬೆಳಕು, ಮಳೆ, ಬಿಸಿಲು, ಚಂಡಮಾರುತ, ಜ್ವಾಲಾಮುಖಿಯಂತಹ ನೈಸರ್ಗಿಕ ಕ್ರಿಯೆಗಳೆಲ್ಲಾ ಸಂಭವಿಸುತ್ತವೆ ಎಂದೂ ಅಲ್ಲಿಯೂ ಸಮುದ್ರಗಳಿವೆ, ಜೀವ ಜಂತುಗಳಿವೆ, ಬೆಟ್ಟಗುಡ್ಡಗಳಿವೆ ಎಂದು ಊಹಿಸಿಕೊಳ್ಳಲಾಗಿತ್ತು. ಆದರೆ, ಅಂತಿಮವಾಗಿ ತಿಳಿದುಬಂದುದೇನೆಂದರೆ ಚಂದ್ರನಲ್ಲಿ ಭೂಮಿಯಲ್ಲಿರುವಂತೆ ವಾತಾವರಣವೇ ಇಲ್ಲ ಎನ್ನುವುದು. ಸೋವಿಯತ್ ರಷ್ಯಾ ಮೊಟ್ಟಮೊದಲು ಚಂದ್ರನ ಮೇಲೆ ಸ್ಪುಟ್ನಿಕ್ ಇಳಿಸಿದಾಗ (1959) ಅದರ ಮೇಲ್ಮೈ ಗಟ್ಟಿಯಾಗಿದೆ ಎಂಬುದು ತಿಳಿದು ಬಂತು. ಇದಾದನಂತರ ಆರೇಳು ದಶಕಗಳಿಂದ ರಷ್ಯಾ, ಅಮೆರಿಕ, ಚೀನಾ, ಜಪಾನ್, ಮತ್ತು ಭಾರತವೂ ಸೇರಿದಂತೆ ಚಂದ್ರಾನ್ವೇಷಣೆಗೆ ತೊಡಗಿಕೊಂಡವು.

1969ರಲ್ಲಿ ಅಮೆರಿಕದ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ಼್ ಆಲ್ಡ್ರೀನ್-ಇವರು ಮೊದಲ ಬಾರಿಗೆ ಚಂದ್ರನ ಮೇಲೆ ಕಾಲೂರಿದರು. (ಅಪೊಲೋ-11) ಸುಮಾರು 2-3 ಗಂಟೆಗಳ ಕಾಲ ಇವರು ಚಂದ್ರನ ಮೇಲೆ ನಡೆದಾಡಿ ಅದರ ಮೇಲ್ಮೈನ ಕಲ್ಲು-ಮಣ್ಣುಗಳನ್ನು ಸಂಗ್ರಹಿಸಿಕೊಂಡು, ಆ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದ ಮೈಕ್‌ಕಾಲಿನ್ಸ್ ಜೊತೆಗೂಡಿ ಮೂವರೂ ಸುರಕ್ಷಿತವಾಗಿ ವಾಪಾಸಾದದ್ದು ಒಂದು ಮಹಾದ್ಭುತ! ಇಲ್ಲಿಗೆ ಚಂದ್ರನ ಮೇಲ್ಮೈನ ಕೆಲವು ಖಚಿತ ಮಾಹಿತಿಗಳು ಸಿಕ್ಕಂತಾಯಿತು. ಇವುಗಳ ಆಧಾರದಿಂದ ಭೂಮಿಯ ಮೇಲೆ ಸಿಕ್ಕುವ ಎಲ್ಲಾ ಖನಿಜ-ಲೋಹ ಸಂಪನ್ಮೂಲಗಳು ಚಂದ್ರನಲ್ಲೂ ಇರಬಹುದು ಎಂದಾಯಿತು. ಆದರೆ ಯಾವುದೇ ಜೀವಜಂತುಗಳು ಅರಣ್ಯಗಳು ಅಲ್ಲಿಲ್ಲ ಎಂಬುದೂ ಖಾತರಿಯಾಯಿತು. ಆದರೂ ಚಂದ್ರನಲ್ಲಿ ಮಂಜುಗಡ್ಡೆ ಕಟ್ಟಿಕೊಂಡಿರುವ ನೀರ್‍ದಾಣಗಳ ಆಳದಲ್ಲಿ ಹುದುಗಿರಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಅಲ್ಲಿ ಮುಖ್ಯವಾಗಿ ಗಾಳಿಯೇ ಇಲ್ಲ. ಜೀವಕ್ಕೆ ಉಸಿರೇ ಇಲ್ಲದಮೇಲೆ ಜೀವಿಗಳು ಬದುಕುವುದಾದರೂ ಹೇಗೆ? ಆದ್ದರಿಂದ ಮನುಷ್ಯ ಜೀವಿ ಅಲ್ಲಿ ಬದುಕಲಾರ. ಹೀಗಿದ್ದೂ ಸಹ ಅಲ್ಲಿಗೆ ಹೋಗಿ ಕೃಷಿ, ಗಣಿಗಾರಿಕೆ ಮಾಡಲು ಯೋಚಿಸಿರುತ್ತಾನೆ. ಇನ್ನು ಚಂದ್ರನ ಮೇಲ್ಮೈಯಲ್ಲಿ ಕೆಲವು ಲೋಹಗಳು ಖನಿಜಗಳು ಕಲ್ಲು ಮಣ್ಣುಗಳಲ್ಲಿ ಸಮ್ಮಿಶ್ರಗೊಂಡಿವೆ ಎಂಬುದು ಅಪೊಲೋ-17 ಅನ್ವೇಷಣೆಯಿಂದ ತಿಳಿದು ಬಂತು. ಇದು ಎರಡನೇ ಮಜಲು.

ಚಂದ್ರನ ಹೊರಮೈ ವಾತಾವರಣದಲ್ಲಿ ಜಲಜನಕ, ಹೀಲಿಯಂ, ಅಮೋನಿಯಾ, ಇಂಗಾಲದ ಡೈ ಆಕ್ಸೈಡ್ ಮತ್ತು ಮಿಥೇನ್ ಮುಂತಾಗಿ ಇರಬಹುದೆಂದು ಕಂಡುಬಂದಿದೆ. ಆದರೂ ಭೂಮಿಯ ಮೇಲಿರುವಂತೆ ಸಾರಜನಕ ಮಾತ್ರ ಇಲ್ಲದೆ ಇರುವುದು ವಿಜ್ಞಾನಿಗಳಿಗೆ ಆಶ್ಚರ್ಯ. ಅಲ್ಲದೆ ಅತ್ಯಂತ ಕಡಿಮೆ ಸಾಂದ್ರತೆಯುಳ್ಳ ಅಪರೂಪದ ಅನಿಲಗಳು ಚಂದ್ರನಲ್ಲಿ ಉಂಟೆಂದೂ ಹೇಳಲಾಗುತ್ತಿದೆ. ಮತ್ತೊಂದು ವಿಶೇಷವೆಂದರೆ ಭುವಿಯಲ್ಲಿರುವಂತೆ ಚಂದ್ರನಲ್ಲೂ ಚಿನ್ನ, ವಜ್ರ, ಕಬ್ಬಿಣದ ಅದಿರು, ಕಲ್ಲಿದ್ದಲು ಮುಂತಾದ ಅಪರೂಪದ ಖನಿಜ ನಿಕ್ಷೇಪಗಳು, ಅದರ ಆಳದಲ್ಲಿ ಹುದುಗಿರಬಹುದು. ಆದರೆ ಅವುಗಳನ್ನು ಹುಡುಕಿ ತೆಗೆದು ಸಂಸ್ಕರಿಸಿ ಭೂಮಿಗೆ ರವಾನಿಸುವುದು ಹೇಗೆ? ಇದಕ್ಕೆ ತಗಲುವ ಖರ್ಚು ಎಷ್ಟಾಗಬಹುದು? ಇದೆಲ್ಲಾ ಗುಡ್ಡ ಕಡಿದು ಇಲಿ ಹಿಡಿಯುವ ಅನ್ವೇಷಣೆ ಎಂಬುದು ಕೆಲವರು ಅಂಬೋಣ!

ಇದನ್ನೂ ಓದಿ: ಚಂದ್ರಯಾನ-3 ಉಡಾವಣೆ ಮತ್ತು ಬಾಹ್ಯಾಕಾಶಯಾನ ಇತಿಹಾಸದ ಪಕ್ಷಿನೋಟ

ಇಷ್ಟಾಗಿಯೂ ಚಂದ್ರನ ಮೇಲಿರುವ ಸಂಪನ್ಮೂಲಗಳಿಗೆ ಮೋಹಗೊಂಡಿರುವ ಶ್ರೀಮಂತ ರಾಷ್ಟ್ರಗಳಿಗೆ ನಿದ್ದೆ ಹತ್ತದು. ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಆ ಖನಿಜ ಸಂಪನ್ಮೂಲಗಳನ್ನು ಮುಕ್ಕಿ ಮುಗಿಸಿಬಿಡುವ ತರಾತುರಿಯಲ್ಲಿ ಇವೆ. ಇದು “ನಿಂತ ನೆಲವೆಂದು ಕಡಿಲ್ಯಾಕೊ ಹಡಿಲ್ಯಾಕೊ ಒಡಿಲ್ಯಾಕೊ ಒಡವ್ಯಲ್ಲೋ ಮಗನೆ ಉಸಿರಿದ್ದೊಡಲಂತಾ” (ದ.ರಾ.ಬೇಂದ್ರೆ) ಭೂಮಿತಾಯಿ ಚೀರಿಡುತ್ತಿದ್ದರೂ ಬಿಡದೆ ಬರಿದು ಮಾಡಿದರಲ್ಲ- ಈ ಆಸೆಬುರಕ ಮನುಷ್ಯರು. ಈ ಕ್ಯಾಪಿಟಲಿಸ್ಟರಿಗೆ ಇನ್ನು ಆ ಚಂದ್ರ ಯಾವ ಲೆಕ್ಕ? ಮಲೆನಾಡಿನ ’ಬೃಹತ್ ಗಾತ್ರದ ಹೆಮ್ಮರಗಳನ್ನು ಕಂಡರೆ ನಾಟಾ ಕಳ್ಳರಿಗೆ ತಿಜೋರಿಯ ಹಣ ಕಂಡಂತೆ’ ಎಂದರು ತೇಜಸ್ವಿ. ಹಾಗೆ ಗುರುವಾದರೇನು ಚಂದ್ರನಾದರೇನು? ಮಂಗಳ ಗ್ರಹಕ್ಕೂ ದಾಳಿ ಇಡಬಲ್ಲರು ಇವರು. ಈಗ ಚಂದ್ರನಲ್ಲಿ ಖನಿಜಗಳಿವೆ ಎಂದು ಕೇಳಿಬಂದೊಡನೆ ಬಹುರಾಷ್ಟ್ರೀಯ ಕಂಪನಿಯ ಖದೀಮರು ಅಲ್ಲಿಗೆ ದಾಳಿಯಿಡಲು ಧಾವಂತಪಡುತ್ತಿದ್ದಾರೆ.

ಹಿಂದೆ ಕೊಲಂಬಸ್ ವಾಸ್ಕೋಡಿಗಾಮರು ನೌಕಾಯಾನದಲ್ಲಿ ಹೊಸಹೊಸ ಭೂಖಂಡಗಳನ್ನು ಕಂಡುಕೊಂಡರು. ಅಲ್ಲೆಲ್ಲಾ ಅವರಿಗೆ ಬೇಕಾದ ಹಾಗೆ ನೈಸರ್ಗಿಕ ಸಂಪನ್ಮೂಲಗಳು ಖನಿಜಗಳು ಇವೆಯೆಂದು ಗೊತ್ತಾಯಿತು. ಅವುಗಳ ಕೊಳ್ಳೆಗೆ ಯುರೋಪಿಯನ್ ರಾಷ್ಟ್ರಗಳು ಸಾಲುಗಟ್ಟಿ ಹೊರಟರು. ಅವರ ಲೂಟಿಗೆ ಸಿಕ್ಕಿದ ಲ್ಯಾಟಿನ್ ಅಮೆರಿಕ, ಆಫ್ರಿಕಾ ಹಾಗೂ ಆಗ್ನೇಯ ಏಷಿಯನ್ ರಾಷ್ಟ್ರಗಳು ಬರಿದಾಗಿ ಈಗ ಬರಡು ಗೋವಿನಂತಾಗಿವೆ. ಇಲ್ಲಿನ ಸಮೃದ್ಧ ಖನಿಜಗಳು ಹಾಗೂ ಅರಣ್ಯ ಸಂಪನ್ಮೂಲಗಳನ್ನು ಅಗೆದೂ ಬಗೆದೂ ಕಡಿದೂ ಬರಿದುಮಾಡಿದರು. ಸ್ವಾತಂತ್ರ್ಯಾನಂತರ ಸ್ಥಳೀಯ ಬಂಡವಾಳಶಾಹೀ ಪ್ರಜಾಪ್ರಭುತ್ವದ ಪ್ರಭುಗಳು ಇದೇ ಕೆಲಸವನ್ನು ಮುಂದುವರಿಸಿದರು. ಪರಿಣಾಮವಾಗಿ ಸದ್ಯ ಅತಿವೃಷ್ಟಿ ಅನಾವೃಷ್ಟಿ ಅಧಿಕ ತಾಪಮಾನ ಹಾಗೂ ಜನಸಂಖ್ಯೆಯ ಬಾಹುಳ್ಯದಿಂದ ಈ ಬಡ ರಾಷ್ಟ್ರಗಳು ದಣಿದುಹೋಗುತ್ತಿವೆ. ಇರುವುದೊಂದೇ ಭೂಮಿ ಇನ್ನು ಅಡಗಲು ಸ್ಥಳವೆಲ್ಲಿ? ವಿಜ್ಞಾನ ಮತ್ತು ತಂತ್ರಜ್ಞಾನ ವರವೂ ಆಯಿತು ಶಾಪವೂ ಆಯಿತು.

ಆದರೂ ಈ ರಾಷ್ಟ್ರಗಳೂ ಸಹ ಅಮೆರಿಕ ರಷ್ಯಾ ಮುಂತಾದ ದೇಶಗಳನ್ನೇ ಅನುಸರಿಸಿ ತಾವೂ ಚಂದ್ರನ ಮೇಲೆ ದಾಳಿ ಇಡಲು ಪ್ರಯತ್ನಿಸುತ್ತಿವೆ. ಈ ದಿಸೆಯಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಜುಲೈ 14, 2023ರಂದು ನಮ್ಮ ಚಂದ್ರಯಾನ-3 ನಭೋಮಂಡಲಕ್ಕೆ ಚಿಮ್ಮಿತು. ಈ ಗಗನನೌಕೆ ದೀರ್ಘ ಪಯಣದ ಬಳಿಕ ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯುತ್ತದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಇನ್ನು ಮುಂದೆ ಬಾಹ್ಯಾಕಾಶ ನಿಲ್ದಾಣಗಳು, ಬಾಹ್ಯಾಕಾಶದಲ್ಲಿ ರಿಯಲ್ ಎಸ್ಟೇಟ್ ದಂಧೆಗಳು, ಪ್ರವಾಸ ಕೇಂದ್ರಗಳು ಆರಂಭವಾಗುವವೇನೋ! ಅಲ್ಲಿಯೂ ವರ್ಗ, ವರ್ಣ, ಪುರುಷ ಪಾರಮ್ಯ, ಜಾತಿ-ಜನಾಂಗಗಳ ದೇವರು ಧರ್ಮ ಗುಡಿಗೋಪುರಗಳು ನಿರ್ಮಾಣವಾಗಬಹುದು. ಕಡೆಗೆ ಅಲ್ಲಿಯೂ ಜನಾಂಗ ಶ್ರೇಷ್ಠತೆಯ ವ್ಯಸನವು ಮೈತಳೆದು ಫ್ಯಾಸಿಸ್ಟ್ ಮನೋಧರ್ಮದ ಹಿಟ್ಲರ್, ಮುಸಲೋನಿಗಳಂತಹ ಸರ್ವಾಧಿಕಾರಿಗಳೂ ಹುಟ್ಟಿಕೊಳ್ಳಬಹುದು.

ಕುರುಕುಲ ಸಾರ್ವಭೌಮ ದುರ್ಯೋಧನನು ಕುರುಕ್ಷೇತ್ರ ಯುದ್ಧದಲ್ಲಿ ಸೋತು ತಾತ ಭೀಷ್ಮನ ಆದೇಶದಂತೆ ವೈಶಂಪಾಯನ ಸರೋವರದಲ್ಲಿ ಒಂದು ದಿನ ಮುಳುಗಿ ತಲೆಮರೆಸಿಕೊಳ್ಳಲು ಅತ್ತ ಆಗಮಿಸುತ್ತಾನೆ. ಅವನ ಆಗಮಿಕೆಯನ್ನು ಕಂಡು ’ಅಲ್ಲಿ ಮನುಕುಲವನ್ನು ಸರ್ವನಾಶ ಮಾಡಿದ ನೀನು ಇಲ್ಲಿಗೂ ಬಂದು ಇಲ್ಲಿ ನೆಮ್ಮದಿಯಿಂದ ಬಾಳ್ವರಂ ಆಳ್ವರಂ ಕದಡದಿರ್ ಇತ್ತ ಬಾರದಿರ್ ಸಾರದಿರ್’ ಎಂಬಂತೆ ಬಕ ಬಾಳಾಕಾನೇಕ ನೀರ್‍ವಕ್ಕಿಗಳು ಉಯ್ಯಲಿಡುತ್ತಾ ಹಾರಿಹೋದುವಂತೆ. (ಪಂಪಭಾರತ) ಮನುಷ್ಯನ ದುರಾಸೆಯ ಫಲ ಹೀಗಾಗುತ್ತದೆ.

ಮಕ್ಕಳ ಪೆಪ್ಪರಮೆಂಟಿನಂತೆ ‘ನಿಚ್ಚಂ ಪೊಸತಾದ ಚಂದ್ರ’ ಇನ್ನು ಮೇಲೆ ಗಣಿಗಾರಿಕೆಗಳಿಂದ ಧೂಳೆದ್ದು ಮುಕ್ಕಾಗಿ ಹೋಗುವುದರಲ್ಲಿ ಸಂಶಯವಿಲ್ಲ. ಮಿಲಿಯನ್‌ಗಟ್ಟಲೆ ವರ್ಷಗಳಿಂದ ಚಂದ್ರತಾರಾದಿ ಗ್ರಹನಕ್ಷತ್ರಗಳೆಲ್ಲ ಬಾಹ್ಯಾಕಾಶದಲ್ಲಿ ತೇಲಾಡುತ್ತಿದ್ದವು. ಇನ್ನು ಮುಂದೆ ಮನುಷ್ಯರು ಹಾರಿಸುವ ರಾಕೆಟ್ಟುಗಳು ಬಾಹ್ಯಾಕಾಶ ನೌಕೆಗಳು, ಅಂತರಿಕ್ಷ ನಿಲ್ದಾಣಗಳು ಮುಂತಾದವುಗಳಿಂದ ನಭೋಮಂಡಲದಲ್ಲೂ ಟ್ರಾಫಿಕ್ ಜಾಮ್ ಆಗಿ ಸೌರವ್ಯೂಹದ ನಡೆ ನಿಯಂತ್ರಣವೇ ದಿಕ್ಕೆಟ್ಟುಅಸ್ತವ್ಯಸ್ತವಾಗಬಹುದೇನೋ!

ಒಟ್ಟಾರೆ ಮನುಷ್ಯನ ಈ ವಿನಾಶದ ಬುದ್ಧಿ ಎಲ್ಲಿಗೆ ಮುಟ್ಟಬಹುದು? ಅದನ್ನು ತಡೆಯುವ ಬಗೆ ಎಂತು? ಎಂದು ಲೋಕಕಾರುಣ್ಯ ಉಳ್ಳವರು ಚಿಂತಿಸುವ ಕಾಲ ಬಂದಿದೆ. ಹಾಗಾದರೆ ಇದನ್ನು ತಡೆಯುವುದಾದರೂ ಹೇಗೆ? ಹೇಗೆಂದರೆ ಇಲ್ಲಿ ರಾಹು ಕೇತುಗಳಂತೆ ಚಂದ್ರಸೂರ್ಯರನ್ನೂ ನುಂಗಲು ಹೊರಟಿರುವ ಕ್ಯಾಪಿಟಲಿಸಂಗೆ ತಡೆ ಒಡ್ಡಲು ವಿಶ್ವರಾಷ್ಟ್ರಗಳೆಲ್ಲ ಒಂದಾಗಬೇಕು; ವಸುದೈವ ಕುಟುಂಬದ ಕಣ್ಣು ತೆರೆಯ ಬೇಕು! ಆದರೆ ಇದು ಸಾಧ್ಯವಾಗಬೇಕಾದರೆ ವಿಶ್ವನಾಯಕರಿಗೆ ಬ್ರಹ್ಮಾಂಡ ಇಚ್ಛಾಶಕ್ತಿ ಬೇಕು! ಇಲ್ಲವಾದರೆ ನಾಗಸಾಕಿ, ಹಿರೋಶಿಮಾ ನೆನಪಿದೆ ತಾನೆ? ಜಗತ್ಪ್ರಳಯ!

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...