ಮಣಿಪುರದಲ್ಲಿ ಹಿಂಸಾಚಾರದ ವೇಳೆ ನಡೆದ ಮತ್ತೊಂದು ಅತ್ಯಾಚಾರ ಪ್ರಕರಣ ಇದೀಗ ಬಯಲಾಗಿದೆ. 37 ವರ್ಷದ ಮಹಿಳೆಯ ಮೇಲೆ ಬಿಷ್ನುಪುರದ ಚುರಚಂದ್ಪುರದಲ್ಲಿ ಗುಂಪೊಂದು ಅತ್ಯಾಚಾರ ಮಾಡಿದ್ದು, ನಿನ್ನೆ ಸಂತ್ರಸ್ತೆ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.
ಸಂತ್ರಸ್ತೆ ತನ್ನ ಇಬ್ಬರು ಪುತ್ರರು, ಸೋದರೆ ಸೊಸೆ ಮತ್ತು ಅತ್ತಿಗೆ ಜೊತೆ ಸುರಕ್ಷಿತ ಸ್ಥಳಕ್ಕೆ ತೆರಳುವಾಗ ಪುರುಷರ ಗುಂಪೊಂದು ಆಕೆಯನ್ನು ತಡೆದು ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಿದೆ ಎಂದು ಆರೋಪಿಸಿದ್ದಾರೆ.
ಚುರಚಂದ್ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಅಪರಿಚಿತ ಕುಕಿ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರ, ಹಲ್ಲೆ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದಾರೆ.
ಕುಟುಂಬದ ಮರ್ಯಾದೆಗೆ ಅಂಜಿ ಇಲ್ಲಿಯ ತನಕ ದೂರು ನೀಡಿರಲಿಲ್ಲ. ನನ್ನ ಜೀವ ಕಳೆದುಕೊಳ್ಳಬೇಕೆಂದು ಬಯಸಿದ್ದೆ ಎಂದು ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೇ 3ರಂದು ಸಂಜೆ 6.30ಕ್ಕೆ ದುಷ್ಕರ್ಮಿಗಳು ಆಕೆಯ ಮನೆಗೆ ಬೆಂಕಿ ಹಚ್ಚಿದ ನಂತರ ಆಕೆ ಸೋದರಸೊಸೆಯೊಂದಿಗೆ ಇಬ್ಬರು ಪುತ್ರರನ್ನು ಕೈಯ್ಯಲ್ಲಿ ಗಟ್ಟಿಯಾಗಿ ಹಿಡಿದು ಅತ್ತಿಗೆಯೊಂದಿಗೆ ಓಡಲು ಪ್ರಾರಂಭಿಸಿದ್ದರು. ಆಗ ರಸ್ತೆಯಲ್ಲಿ ಎಡವಿ ಬಿದಿದ್ದಾರೆ. ಆಕೆ ಬಿದ್ದ ಜಾಗದಿಂದ ಮೇಲೇಳಲು ಯತ್ನಿಸಿದಾಗ ಐದಾರು ಮಂದಿ ಆಕೆಯನ್ನು ನಿಂದಿಸಿ ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆಕೆ ಹೇಳಿದ್ದಾರೆ.
ಘಟನೆ ಬಳಿಕ ತನ್ನ ಆರೋಗ್ಯ ಕ್ಷೀಣಿಸಲಾರಂಭಿಸಿತ್ತು, ಇಂಫಾಲದ ಜೆಎನ್ಐಎಂಎಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದೆ ಎಂದು ಸಂತ್ರಸ್ತೆ ಇದೀಗ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಬಯಲಿಗೆಳೆದಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರ:ಪತ್ರಕರ್ತನ ಮೇಲೆ ಶಾಸಕನ ಬೆಂಬಲಿಗರಿಂದ ಹಲ್ಲೆ