ರೆಮ್ಡಿಸಿವಿರ್ ಪೂರೈಕೆಯ ಕುರಿತ ವಿವಾದವೀಗ ಮಹಾರಾಷ್ಟ್ರದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದು, ‘ಕೊರೋನಾ ವೈರಸ್ ಏನಾದ್ರೂ ನನ್ ಕೈಗೆ ಸಿಕ್ರೆ ಅದನ್ನ ದೇವೇಂದ್ರ ಫಢ್ನವೀಸ್ ಬಾಯೊಳಗೆ ತುರುಕುತ್ತೇನೆ’ ಎಂದು ಶಿವಸೇನಾದ ಶಾಸಕ ಸಂಜಯ್ ಗಾಯಕವಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದು ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಪ್ರತಿಭಟನೆಗೆ ನಾಂದಿ ಹಾಡಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಬೇಡಿಕೆಯಿರುವ ರೆಮ್ಡೆಸಿವಿರ್ನ ಬಾಟಲುಗಳನ್ನು ದಾಸ್ತಾನು ಮಾಡಲಾಗಿದೆಯೆಂದು ಆರೋಪಿಸಿ ಫಾರ್ಮಾ ಕಂಪನಿಯ ಉನ್ನತ ಕಾರ್ಯನಿರ್ವಾಹಕ ಒಬ್ಬರನ್ನು ಮುಂಬೈ ಪೊಲೀಸರು ವಿಚಾರಣೆ ಮಾಡಿದ್ದನ್ನು ಆಕ್ಷೇಪಿಸಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಫಡ್ನವೀಸ್ ಅವರನ್ನು ಗುರಿಯಾಗಿಸಿಕೊಂಡು ಮಹಾರಾಷ್ಟ್ರದ ಆಡಳಿತ ಪಕ್ಷಗಳು ಟೀಕೆ ಮಾಡುತ್ತಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬುಲ್ಖಾನಾ ಶಾಸಕರಾದ ಸಂಜಯ್ ಗಾಯಕವಾಡ್, ಸಾಂಕ್ರಾಮಿಕ ರೋಗದ ಈ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದರೆ ಫಡ್ನವೀಸ್ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸಚಿವರನ್ನು ಬೆಂಬಲಿಸುವ ಬದಲು, ಬಿಜೆಪಿ ನಾಯಕರು ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಮತ್ತು ಈ ಸರ್ಕಾರ (ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿರುವ) ಹೇಗೆ ವಿಫಲಗೊಳ್ಳುತ್ತದೆ ಎಂಬುದನ್ನು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.
“ಆದ್ದರಿಂದ, ಆಕಸ್ಮಾತ್ ಕೊರೊನಾ ವೈರಸ್ ನನ್ನ ಕೈಗೆ ಸಿಕ್ಕರೆ ನಾನು ಅದನ್ನು ದೇವೇಂದ್ರ ಫಡ್ನವೀಸ್ ಅವರ ಬಾಯಿಗೆ ಹಾಕುತ್ತಿದ್ದೆ” ಎಂದು ಅವರು ಹೇಳಿದರು.
ಫಡ್ನವಿಸ್ ಮತ್ತು ಬಿಜೆಪಿ ನಾಯಕರಾದ ಪ್ರವೀಣ್ ದಾರೇಕರ್ ಮತ್ತು ಚಂದ್ರಕಾಂತ್ ಪಾಟೀಲ್ ಅವರು ರೆಮ್ಡಿಸಿವಿರ್ ಚುಚ್ಚುಮದ್ದಿನ ವಿತರಣೆಯ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಗಾಯಕವಾಡ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ರೆಮ್ಡೆಸಿವಿರ್ ಉತ್ಪಾದನಾ ಕಂಪನಿಗಳಿಗೆ ರಾಜ್ಯಕ್ಕೆ ಔಷಧಿ ಸರಬರಾಜು ಮಾಡದಂತೆ ಕೇಂದ್ರ ಹೇಳಿದೆ. ಅವರು ಮಹಾರಾಷ್ಟ್ರಕ್ಕೆ ಅಗತ್ಯವಾದ ವೈದ್ಯಕೀಯ ಆಮ್ಲಜನಕವನ್ನು ಸಹ ನೀಡುತ್ತಿಲ್ಲ ಎಂದು ಶಾಸಕ ಗಾಯಕವಾಡ್ ಹೇಳಿದ್ದಾರೆ.
ಅವರು ಗುಜರಾತ್ಗೆ ರೆಮ್ಡೆಸಿವಿರ್ ಚುಚ್ಚುಮದ್ದನ್ನು ನೀಡುತ್ತಿದ್ದಾರೆ ಮತ್ತು ಮಹಾರಾಷ್ಟ್ರದ ಬಿಜೆಪಿ ಕಚೇರಿಯಿಂದ 50,000 ಔಷಧದ ಬಾಟಲುಗಳನ್ನು ಆ ರಾಜ್ಯಕ್ಕೆ ಉಚಿತವಾಗಿ ಪೂರೈಸುತ್ತಿದ್ದಾರೆ, ಆದರೆ ಮಹಾರಾಷ್ಟ್ರದಲ್ಲಿ ಜನರು ಸಾಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ರಾಜಕೀಯ ಮಾಡಲು ಇದು ಸಮಯವೇ? ಕೇಂದ್ರ ಮತ್ತು ಫಡ್ನವೀಸ್ ಅವರ ಕೃತ್ಯಗಳಿಗೆ ನಾಚಿಕೆಪಡಬೇಕು ಎಂದು ಅವರು ಹೇಳಿದರು. ಗಾಯಕವಾಡ್ ಅವರ ಟೀಕೆಗಳ ನಂತರ, ಬಿಜೆಪಿ ಕಾರ್ಯಕರ್ತರು ಭಾನುವಾರ ಬುಲ್ಖಾನಾದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು ಮತ್ತು ಶಾಸಕರ ಪ್ರತಿಕೃತಿಗಳನ್ನು ಸುಟ್ಟುಹಾಕಿದರು.
ತಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ತನ್ನ ವಿರುದ್ಧ ಯಾವುದೇ ವಿಚಾರಣೆಗೆ ಹೆದರುವುದಿಲ್ಲ ಎಂದು ಫಡ್ನವೀಸ್ ಭಾನುವಾರ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಕೊರೋನಾ ಪಾಲಿಟಿಕ್ಸ್: ಬಿಜೆಪಿ ಮುಖಂಡರಿಂದ 4.75 ಕೋಟಿ ರೂ. ಮೌಲ್ಯದ ರೆಮ್ಡಿಸಿವಿರ್ ಅಕ್ರಮ ಸಂಗ್ರಹ ಆರೋಪ


