Homeಅಂಕಣಗಳುನೂರರ ನೋಟ: ಕಾಡುಗಳ್ಳರ ಅಟ್ಟಹಾಸ; ನಿಲ್ಲದ ಗಣಿಗಾರಿಕೆ; ಹೆಚ್ಚಿದ ವನ್ಯಜೀವ-ಮನುಷ್ಯ ಸಂಘರ್ಷ

ನೂರರ ನೋಟ: ಕಾಡುಗಳ್ಳರ ಅಟ್ಟಹಾಸ; ನಿಲ್ಲದ ಗಣಿಗಾರಿಕೆ; ಹೆಚ್ಚಿದ ವನ್ಯಜೀವ-ಮನುಷ್ಯ ಸಂಘರ್ಷ

- Advertisement -
- Advertisement -

ಕಾಡಿನಲ್ಲಿ ವಾಸ ಮಾಡುವ ಹುಲಿ, ಚಿರತೆ, ಆನೆ ಪದೇ ಪದೇ ಅರಣ್ಯದ ಹತ್ತಿರ ಇರುವ ಗ್ರಾಮಗಳಿಗೆ ಬರುತ್ತಿವೆ. ಆನೆ ಬೆಳೆ ನಾಶ ಮಾಡುತ್ತದೆ, ಜನರ ಮೇಲೆ ದಾಳಿ ಮಾಡಿ ಕೊಲ್ಲುತ್ತದೆ. ಹುಲಿ ಚಿರತೆಗಳು ನಾಯಿ, ಹಸು, ಕರು, ಕೋಳಿಗಳನ್ನು ತಿಂದು ಹಾಕುವುದಲ್ಲದೆ ಮನುಷ್ಯರ ಮೇಲೂ ಬಿದ್ದು ಹಾನಿ ಮಾಡುತ್ತಿವೆ. ಪ್ರತಿದಿನ ಈ ವನ್ಯಜೀವಿ ಮತ್ತು ಮನುಷ್ಯರ ಸಂಘರ್ಷದ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಸರ್ಕಾರವೇ ಆಗಲಿ, ಅರಣ್ಯ ಇಲಾಖೆಯಾಗಲಿ ಆತಂಕಗೊಳ್ಳುತ್ತಿಲ್ಲ. ಅದರ ಬಗೆಗೆ ಚರ್ಚೆಯೂ ಆಗುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಒಂದು ದಿನ ಅರಣ್ಯದ ಪ್ರಾಣಿಗಳೆಲ್ಲ ಗ್ರಾಮಗಳನ್ನು ಆವರಿಸಿಕೊಂಡು ಭಯ ಭೀತನಾದ ಮನುಷ್ಯ ತನ್ನ ರಕ್ಷಣೆಗಾಗಿ ಅರಣ್ಯ ಸೇರುವುದು ಅನಿವಾರ್ಯವಾಗುತ್ತದೆ.

ಹಿಂದೆ ಎಂದೋ ಒಂದೊಂದು ಸಾರಿ ಹಳ್ಳಿಗಳಿಗೆ ಬರುತ್ತಿದ್ದ ಕಾಡುಪ್ರಾಣಿಗಳು ಈಗ ಪದೇಪದೇ ಹೊರಟಹತ್ತಿವೆ. ಇದಕ್ಕೆ ಕಾರಣವೇನಿರಬಹುದು ಎಂದು ಜರೂರಾಗಿ ಯೋಚಿಸಬೇಕಾದ ಸಮಯ ಇದು.

ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದೆ. ಕಾಡುಪ್ರಾಣಿಗಳಿಗೆ ಇದರಿಂದ ನೆಲಸಲು ಸ್ಥಳದ ಅಭಾವ ಕಾಣಿಸಿಕೊಳ್ಳುತ್ತಿರಬಹುದು. ಆಹಾರ ಮತ್ತು ನೀರಿನ ಅಭಾವ ಇದಕ್ಕೆ ಕಾರಣವಿರಬಹುದು. ಅರಣ್ಯ ನಾಶಕ್ಕೆ ಮುಖ್ಯ ಕಾರಣ ಹಲವು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಸರ್ಕಾರ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವುದು. ಪಶ್ಚಿಮಘಟ್ಟ ಮೊದಲುಗೊಂಡು ಎಲ್ಲೆಲ್ಲಿ ಬೆಟ್ಟದ ಸಾಲುಗಳಿವೆಯೋ ಅಲ್ಲೆಲ್ಲ ಸರ್ಕಾರದ ಒಪ್ಪಿಗೆ ಪಡೆದು ಅಥವಾ ಅಕ್ರಮವಾಗಿ ಕಲ್ಲುಗಣಿ ಕಾರ್ಯ ಅವ್ಯಾಹತವಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು, ಕಾಡಿನಲ್ಲಿ ಬೆಳೆದಿರುವ ಉತ್ಕೃಷ್ಟವಾದ ಮರಗಳನ್ನು ಕಳ್ಳತನದಿಂದ ಮತ್ತು ಅರಣ್ಯಾಧಿಕಾರಿಗಳ ನೆರವಿನಿಂದ ಕಡಿದು ದುಡ್ಡು ಮಾಡಿಕೊಳ್ಳುವ ಮರಗಳ್ಳರಿಂದ ಮತ್ತು ಅರಣ್ಯ ಮಧ್ಯದಲ್ಲಿ ಶ್ರೀಮಂತರ ಮೋಜಿಗಾಗಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವ ಧನಪಿಶಾಚಿಗಳಿಂದಾಗಿ ಅರಣ್ಯ ಭೂಮಿ ಕಿರಿದಾಗುತ್ತಿದೆ. ಒಟ್ಟು ಭೂಮಿಯ 1/3ಭಾಗ ಅರಣ್ಯ ಪ್ರದೇಶ ಇರಬೇಕೆಂದು ಇಂಗ್ಲಿಷರ ಕಾಲದಲ್ಲಿ ನಿಯಮ ಇತ್ತು. ಜನಸಂಖ್ಯೆ ಸ್ಫೋಟವಾದಂತೆ ಹಳ್ಳಿಯವರು ತಮ್ಮ ಹಳ್ಳಿಗಳ ವಿಸ್ತರಣೆಗಾಗಿ ಕಾಡನ್ನು ಕಬಳಿಸುತ್ತಾ ಬಂದರು. ನಗರಗಳ, ಪಟ್ಟಣಗಳ ಜನಸಂಖ್ಯೆ ಹೆಚ್ಚಿದಂತೆ ಮುನಿಸಿಪಾಲಿಟಿಗಳು, ಜಿಲ್ಲಾ ಬೋರ್ಡುಗಳು ಸರ್ಕಾರದ ಸಹಕಾರದೊಂದಿಗೆ ಅರಣ್ಯ ಭೂಮಿಯನ್ನೇ ಕಬಳಿಸುವ ಹವ್ಯಾಸಕ್ಕೆ ಬಿದ್ದವು. ಅರಣ್ಯ ಪ್ರದೇಶದಲ್ಲಿ ಕಾರ್ಖಾನೆಗಳನ್ನೂ ಸ್ಥಾಪಿಸಲಾಯಿತು.

ಬೆಂಗಳೂರಿನಂತಹ ಪಟ್ಟಣಗಳು ಬೆಳೆದಂತೆ ಪಟ್ಟಣದ ಸರಹದ್ದಿನಲ್ಲಿದ್ದ ಅರಣ್ಯಗಳ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತು. ಹೀಗಾಗಿ 33% ಇದ್ದ ಅರಣ್ಯ ಪ್ರದೇಶ ಈಗ ಶೇ,18ಕ್ಕೆ ಇಳಿದಿದೆ. ಕೆಲವು ವರ್ಷಗಳ ಹಿಂದೆ ಅರಣ್ಯಪ್ರದೇಶ ಶೇ,23ರಷ್ಟಿತ್ತು. ಆಗಲೇ ಎಚ್ಚೆತ್ತುಕೊಂಡು ಸರ್ಕಾರ ಅರಣ್ಯಪ್ರದೇಶವನ್ನು ವಿಸ್ತರಿಸುವಂತಹ ಕೆಲಸ ಆರಂಭಿಸಬೇಕಾಗಿತ್ತು. ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಅರಣ್ಯ ಈ ದುರವಸ್ಥೆ ಮುಟ್ಟಿದೆ. ಲೋಕಸಭೆಯ, ಶಾಸನಸಭೆಯ ಹಲವು ಸದಸ್ಯರು ಕಲ್ಲಿನ ವ್ಯಾಪಾರ, ಮ್ಯಾಂಗನೀಸ್, ಕಬ್ಬಿಣ ಮುಂತಾದ ಲೋಹಗಳ ವ್ಯಾಪಾರದಲ್ಲಿ ತೊಡಗಿಕೊಂಡು ಅರಣ್ಯ ಪ್ರದೇಶಗಳಲ್ಲಿ, ನದಿತಟಗಳ ಪ್ರದೇಶಗಳ ಆಸುಪಾಸಿನಲ್ಲೂ ಅಕ್ರಮ ಗಣಿಗಾರಿಕೆ ಮಾಡಲುತೊಡಗಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಯ್ತು ದೇಶದ ಪರಿಸ್ಥಿತಿ. ’ಹರ ಕೊಲ್ಲಲು ಪರಕಾಯ್ವನೇ’ ಎಂಬ ದುಸ್ಥಿತಿಗೆ ನಾವು ತಲುಪಿದ್ದೇವೆ. ಜನಾರ್ದನ ರೆಡ್ಡಿ, ಶ್ರೀರಾಮುಲು, ಸಂತೋಷ್ ಲಾಡ್, ಆನಂದ್ ಸಿಂಗ್ ಮುಂತಾದವರು ಗಣಿಗಾರಿಕೆಯಲ್ಲಿ ತೊಡಗಿ ಅದಿರನ್ನು ದೋಚಿದ ಪ್ರಕರಣಗಳನ್ನು ಬಯಲಿಗೆಳೆದ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು, ಬಳ್ಳಾರಿಯನ್ನೇ ಈ ಖದೀಮರು ತಮ್ಮ ವಶವರ್ತಿ ಮಾಡಿಕೊಂಡಿದ್ದರಿಂದ ಅದನ್ನು ಈ ಖದೀಮರ ರಿಪಬ್ಲಿಕ್ ಎಂದು ಕರೆದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಹಿಂದೆ ಒಮ್ಮೆ ಜನಾದನ ರೆಡ್ಡಿಯವರ ಮೇಲೆ ಮುನಿಸಿಕೊಂಡು ಬಳ್ಳಾರಿಯ ಜಿಲ್ಲಾಧಿಕಾರಿಗಳು, ಗಣಿ ಅಧಿಕಾರಿಗಳು, ಎಸ್‌ಪಿ ಎಲ್ಲರನ್ನೂ ಏಕಕಾಲಕ್ಕೆ ವರ್ಗಾವಣೆ ಮಾಡಿದರು. ಈ ವಿಷಯ ತಿಳಿದ ಜನಾರ್ದನ ರೆಡ್ಡಿಯವರು ಯಡಿಯೂರಪ್ಪನವರಿಗೆ ಫೋನ್ ಮಾಡಿ ’ಈ ಕೂಡಲೇ ನೀವು ವರ್ಗ ಮಾಡಿರುವ ಅಧಿಕಾರಿಗಳನ್ನು ಬಳ್ಳಾರಿಗೆ ವಾಪಸ್ ಕಳುಹಿಸದಿದ್ದರೆ ನೀವು ಕುರ್ಚಿ ಬಿಟ್ಟು ಇಳಿಯಬೇಕಾದೀತು’ ಎಂದು ಬೆದರಿಕೆ ಹಾಕಿದರು. ಯಡಿಯೂರಪ್ಪನವರು ಮರು ಮಾತಾಡದೆ ಆ ಅಧಿಕಾರಿಗಳ ವರ್ಗಾವಣೆ ಆರ್ಡರನ್ನು ಹಿಂಪಡೆದರು. ಜನಾದನ ರೆಡ್ಡಿಯವರು ಈ ಬಳ್ಳಾರಿ ರಿಪಬ್ಲಿಕ್ಕಿನ ಅನಭಿಷಕ್ತ ಚಕ್ರವರ್ತಿ ಆಗಿದ್ದರು.

ಈ ಲೇಖನದ ಸಾರಾಂಶ ಇಷ್ಟೇ: ಅರಣ್ಯ ಭೂಮಿ ಕಿರಿದಾಗುತ್ತಿದೆ. ಹೀಗೆ ಮುಂದುವರೆದರೆ ಅರಣ್ಯದಲ್ಲಿರುವ ಪ್ರಾಣಿಗಳು ಆಹಾರ ಹುಡುಕಿಕೊಂಡು ಗ್ರಾಮಗಳಿಗೆ, ನಗರಗಳಿಗೆ ದಾಳಿ ಇಡುತ್ತವೆ. ಮಾನವ ರಕ್ತದ ರುಚಿ ನೋಡಿದ ಮೇಲೆ ಅವು ಆಡು, ಹಸುಗಳನ್ನು ತಿನ್ನುವುದು ಬಿಟ್ಟು ಮನುಷ್ಯನ ಮಾಂಸಕ್ಕೇ ಪಳಗಿಕೊಳ್ಳುತ್ತವೆ. ಆಗ ಯಾವ ಹಳ್ಳಿಯೂ, ಪಟ್ಟಣವೂ ಸುರಕ್ಷಿತವಾಗಿರುವುದಿಲ್ಲ. ಮನುಷ್ಯ ಊರು ಬಿಟ್ಟು ಕಾಡಿಗೆ ವಲಸೆ ಹೋಗುವುದೊಂದೇ ತನಗಿರುವ ಏಕೈಕ ಮಾರ್ಗ ಎಂದು ತೀರ್ಮಾನಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ.

ಈ ಅನಾಹುತ ಸಂಭವಿಸುವ ಮೊದಲೇ ಸರ್ಕಾರ ಅರಣ್ಯವನ್ನು ಉಳಿಸುವ ಕಾರ್ಯ ಕೈಗೊಂಡೀತೆ?


ಇದನ್ನೂ ಓದಿ:  ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...