ಬುಧವಾರ (ಫೆ.16) ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಟಿ -20 ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ, ಪತ್ರಕರ್ತರು ವಿರಾಟ್ ಕೊಹ್ಲಿ ಅವರ ಆಟದ ಫಾರ್ಮ್ ಬಗ್ಗೆ ಪ್ರಶ್ನಿಸಿದಾಗ ರೋಹಿತ್ ಪತ್ರಕರ್ತರ ಮೇಲೆ ಸಿಟ್ಟಾಗಿದ್ದಾರೆ.
“ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಫಾರ್ಮ್ ಇತ್ತೀಚೆಗೆ ಕಡಿಮೆಯಾಗಿದೆ. ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆಯೇ ಅಥವಾ ಸದೃಢರಾಗಿದ್ದಾರೆ” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಖಾರವಾಗಿಯೇ ಉತ್ತರಿಸಿದ ರೋಹಿತ್, “ನೀವು ಸ್ವಲ್ಪ ಸಮಯದವರೆಗೆ ಸುಮ್ಮನಿದ್ದರೆ, ಅವರು ಚೆನ್ನಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ರೋಹಿತ್ ಶರ್ಮಾ, “ನಾವು ನಿಮ್ಮೊಂದಿಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ನಮ್ಮ ತಂಡದಲ್ಲಿ ಎಲ್ಲರ ಬಗ್ಗೆಯೂ ಕಾಳಜಿ ಇದೆ. ಅವರು ಯಾವುದಾದರೂ ಮಾನಸಿಕ ದೃಢತೆ ಕಳೆದುಕೊಂಡಿದ್ದರೆ, ನಾವು ಅವರನ್ನು ನೋಡಿಕೊಳ್ಳುತ್ತೇವೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಈ ತಂಡದ ಭಾಗವಾಗಿದ್ದಾರೆ. ಯಾರಾದರೂ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಷ್ಟು ಸಮಯವನ್ನು ಕಳೆದಿದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ. ಅವರಿಗೆ ಒತ್ತಡದ ಸಂದರ್ಭಗಳು, ವಾತಾವರಣ, ಎಲ್ಲವನ್ನೂ ಹೇಗೆ ನಿಭಾಯಿಸಬೇಕೆಂದು ತಿಳಿದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಜೆಟ್ನಲ್ಲಿ ಘೋಷಿಸಿ ಪ್ರಚಾರ ಪಡೆದು ನಂತರ ಸದ್ದಿಲ್ಲದೆ ಕೈಬಿಟ್ಟ ಸಾಲು ಸಾಲು ಯೋಜನೆಗಳಿವು!
“ಇಂತಹ ಊಹಾಪೋಹಗಳು, ಚರ್ಚೆಗಳು ನಿಮ್ಮಿಂದಲೇ ಪ್ರಾರಂಭವಾಗುತ್ತವೆ. ನೀವು ಸ್ವಲ್ಪ ಸಮಯದವರೆಗೆ ಸುಮ್ಮನಿರಲು ಸಾಧ್ಯವಾದರೆ, ನಂತರ ಎಲ್ಲವೂ ಸರಿಯಾಗಿರುತ್ತದೆ” ಎಂದು ಮಾಧ್ಯಮಗಳ ವಿರುದ್ದ ರೋಹಿತ್ ಶರ್ಮಾ ಕಿಡಿಕಾರಿದ್ದಾರೆ.
ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ T20 ಸರಣಿಯಲ್ಲಿ ಸೆಣೆಸಾಡಲಿದೆ. ಬುಧವಾರದಿಂದ (ಫೆ.16) ಪಂದ್ಯ ಪ್ರಾರಂಭವಾಗುತ್ತದೆ. ಭಾರತವು ಕಳೆದ ವಾರ ಒನ್ಡೇ ಸರಣಿಯಲ್ಲಿ ಭಾರತ 3-0 ರಿಂದ ವಿಂಡೀಸ್ ಅನ್ನು ವೈಟ್ವಾಶ್ ಮಾಡಿತ್ತು.
ಬುಧವಾರ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಶುಕ್ರವಾರ ಮತ್ತು ಭಾನುವಾರ ನಡೆಯಲಿವೆ. ಎಲ್ಲಾ ಮೂರು ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿವೆ.
ಇದನ್ನೂ ಓದಿ: ತಲೆಯ ಮೇಲೆ ಬಟ್ಟೆ, ಹಣೆಯ ಮೇಲೆ ಶ್ರೀಗಂಧ ಇದ್ದರೆ ಸಮಸ್ಯೆಯೇನು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನೆ