ಜಪಾನ್ನ ಫುಕುಶಿಮಾ ಪರಮಾಣು ಸ್ಥಾವರದಿಂದ ಒಂದು ದಶಲಕ್ಷ ಟನ್ಗಿಂತಲೂ ಹೆಚ್ಚು ಸಂಸ್ಕರಿಸಿದ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ಇದನ್ನು ಚೀನಾ ಸೇರಿದಂತೆ ಸ್ಥಳೀಯ ಮೀನುಗಾರಿಕಾ ಸಮುದಾಯಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಪ್ರಕ್ರಿಯೆಯು ಪ್ರಾರಂಭವಾಗಲು ಇನ್ನೂ ಹಲವಾರು ವರ್ಷಗಳು ಬೇಕಾಗಿದ್ದು, ಪೂರ್ಣಗೊಳ್ಳಲು ದಶಕಗಳೇ ಬೇಕಾಗುತ್ತದೆ ಎನ್ನಲಾಗಿದೆ. ಆದರೆ ಯೋಜನೆಯ ವಿರುದ್ದ ವಿವಾದಗಳು ಮತ್ತು ವಿರೋಧಗಳು ಈಗಾಲೇ ಪ್ರಾರಂಭವಾಗಿದೆ.
ಜಪಾನ್ ಯೋಜನೆಯನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಚೀನಾ ಈ ನಿರ್ಧಾರವನ್ನು “ಅತ್ಯಂತ ಬೇಜವಾಬ್ದಾರಿಯುತ” ಎಂದು ಕರೆದಿದೆ. ಆದರೆ ಜಪಾನ್ ಸರ್ಕಾರ ತನ್ನ ಯೋಜನೆಯನ್ನು ಸಮರ್ಥಿಸಿಕೊಂಡಿದ್ದು, ನೀರು ಬಿಡುಗಡೆ ಸುರಕ್ಷಿತವಾಗಿರುತ್ತದೆ ಎಂದು ವಾದಿಸಿದೆ. ಯಾಕೆಂದರೆ ನೀರಿನಲ್ಲಿ ಇರುವ ಎಲ್ಲಾ ವಿಕಿರಣದ ಅಂಶಗಳನ್ನು ಸಂಸ್ಕರಿಸಿ, ದುರ್ಬಲಗೊಳಿಸಿ, ತೆಗೆದುಹಾಕಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಗೌರಿ ಕಾರ್ನರ್: ಕೋಮುವಾದಿಗಳ ನಡುವೆ ಇಂಥವರೂ ಉಂಟು; ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉದಾಹರಣೆಗಳು ಅಸಂಖ್ಯಾತ
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಯು ನೀರು ಬಿಡುಗಡೆಯನ್ನು ಅನುಮೋದಿಸಿದೆ, ಇದು ವಿಶ್ವದ ಬೇರೆಡೆ ಪರಮಾಣು ಸ್ಥಾವರಗಳಲ್ಲಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವಂತೆಯೇ ಇದೆ ಎಂದು ಹೇಳಿದೆ.
2011 ರ ಸುನಾಮಿಯ ನಂತರ ದುರ್ಬಲಗೊಂಡಿರುವ ಪರಮಾಣು ಸ್ಥಾವರವನ್ನು ನಿರ್ಮೂಲನೆ ಮಾಡುವ ದಶಕಗಳ ಪ್ರಕ್ರಿಯೆಯಲ್ಲಿ ನೀರನ್ನು ವಿಲೇವಾರಿ ಮಾಡುವುದು “ಅನಿವಾರ್ಯ ಕಾರ್ಯ” ಎಂದು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಸಚಿವರ ಸಭೆಯಲ್ಲಿ ಹೇಳಿದ್ದಾರೆ.
ಆ ಪರಮಾಣು ಸ್ಥಾವರದಲ್ಲಿ ಸುಮಾರು 1.25 ದಶಲಕ್ಷ ಟನ್ ನೀರು ಟ್ಯಾಂಕ್ಗಳಲ್ಲಿ ಸಂಗ್ರಹವಾಗಿದೆ ಎನ್ನಲಾಗಿದೆ.
ದೇಶದ ಮೀನುಗಾರಿಕಾ ಸಮುದಾಯಗಳು ನೀರನ್ನು ಬಿಡುಗಡೆ ಮಾಡುವುದರಿಂದ ಈ ಪ್ರದೇಶದಿಂದ ಸಮುದ್ರಾಹಾರದ ಮೇಲೆ ಹೊಡೆತ ಬೀಳುತ್ತದೆ ಮತ್ತುಅದನ್ನು ಮರು ಸ್ಥಾಪಿಸಲು ಹಲವು ವರ್ಷಗಳೆ ಹಿಡಿಯುತ್ತದೆ ಎಂದು ವಾದಿಸಿದೆ.
ಇದನ್ನೂ ಓದಿ: ಬಂಗಾಳ ಚುನಾವಣೆ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರು
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ವಿಜ್ಞಾನಿ, ಲೇಖಕ ನಾಗೇಶ್ ಹೆಗಡೆ, “ಜಪಾನ್ ಫುಕೋಶಿಮಾದ ನೀರನ್ನು ಕಳೆದ ಏಳು ವರ್ಷದಿಂದ ಸಮುದ್ರಕ್ಕೆ ಬಿಡುತ್ತಿದ್ದಾರೆ. ಒಂದು ಕಡೆ ಅಮೆರಿಕಾ ಒತ್ತಡವಿದ್ದರೆ, ಇನ್ನೊಂದು ಕಡೆ ದಿನ ದಿನ ಫುಕೋಷಿಮಾದ ನೀರು ಜಾಸ್ತಿಯಾಗುತ್ತಿರುವುದರಿಂದ ಜಪಾನ್ಗೂ ಅದನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಇದೀಗ ಅನಿವಾರ್ಯವಾಗಿ ನೀರು ಬಿಡುಗಡೆ ಬಗ್ಗೆ ಹೇಳುತ್ತಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಈ ನೀರಿನಲ್ಲಿರುವ ವಿಕಿರಣವನ್ನು ಸಂಸ್ಕರಣೆ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ ಎಂಬುದು ಸುಳ್ಳು, ಅದನ್ನು ಸಂಸ್ಕರಣೆ ಮಾಡುವ ತಂತ್ರಜ್ಞಾನವೇ ಇಲ್ಲ” ಎಂದು ಅವರು ತಿಳಿಸಿದ್ದಾರೆ.
“ಜಪಾನ್ ನಮ್ಮ ದೇಶಕ್ಕಿಂತ ದೂರವಿರುವುರಿಂದ ಈ ನೀರಿನಿಂದ ಭಾರತಕ್ಕೆ ನೇರ ಪರಿಣಾಮ ಬೀರುವುದಿಲ್ಲ. ಅಮೆರಿಕಾ ಮತ್ತು ಜಪಾನ್ ಈ ವಿಚಾರದಲ್ಲಿ ಜಗಳ ಮಾಡಿದರೆ ನಮ್ಮ ಅಣುಸ್ಥಾವರವನ್ನು ಸುರಕ್ಷಿತವಾಗಿ ಇಡಲು ಅನುಕೂಲವಾಗುತ್ತದೆ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಜಪಾನ್ ದೇಶದವರೇ ಸಮುದ್ರಕ್ಕೆ ನೀರು ಬಿಡುತ್ತಿದ್ದಾರೆ, ನಾವು ಯಾಕೆ ಕೈಗಾ ಅಣುಸ್ಥಾವರದ್ದು, ಕೊಡಂಕುಳಂನ ಅಣುಸ್ಥಾವರದ ನೀರು ಸಮುದ್ರಕ್ಕೆ ಬಿಡಬಾರದು ಎಂದು ಕೇಳುವ ಅನಾನುಕೂಲ ಕೂಡಾ ಆಗುವ ಸಾಧ್ಯತೆಯಿದೆ” ಎಂದು ನಾಗೇಶ್ ಹೆಗಡೆ ಹೇಳಿದ್ದಾರೆ.
ಭಾರತದಲ್ಲೂ ಇಂತಹ ನೀರನ್ನು ಸಮುದ್ರಕ್ಕೆ ಬಿಡುತ್ತಿದ್ದಾರೆ ಆದರೆ ಅದು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾರಿಗೆ ಮುಷ್ಕರ ಮುಂದುವರಿಕೆ – ಯುಗಾದಿಗೆ ನೌಕರರಿಂದ ಭಿಕ್ಷಾಟನೆ ಪ್ರತಿಭಟನೆ!