ಆರನೇ ವೇತನ ಆಯೋಗದ ವರದಿ ಜಾರಿ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಸಾರಿಗೆ ನೌಕರರು ಆರು ದಿನದಿಂದ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರ ನಾಳೆಯು ಮುಂದುವರೆಯಲಿದ್ದು, ಯುಗಾದಿಗೆ ತಟ್ಟೆ ಹಿಡಿದು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೋಮವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾಳೆ ಯುಗಾದಿ ಹಬ್ಬ ಆಚರಿಸಬೇಕು, ಆದರೆ ಮಾರ್ಚ್ ತಿಂಗಳ ವೇತನ ನೀಡದೇ ಸರ್ಕಾರ ವಂಚನೆ ಮಾಡಿದೆ. ಸರ್ಕಾರಕ್ಕೆ ಉಪ ಚುನಾವಣೆ ಮುಖ್ಯವಾಗಿದೆ. 1.30 ಲಕ್ಷ ನೌಕರರ ಜೀವನ ನೋಡುತ್ತಿಲ್ಲ. ಮಾತುಕತೆ ಮಾಡಲ್ಲ, ಸಮಸ್ಯೆ ಕೇಳಲ್ಲ ಎನ್ನುವುದು ತಪ್ಪು ನಿರ್ಧಾರ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಾರಿಗೆ ಮುಷ್ಕರ ಆರನೇ ದಿನಕ್ಕೆ-ತಟ್ಟೆ, ಲೋಟ ಬಡಿದು ನೌಕರರ ಪ್ರತಿಭಟನೆ!
“ನೌಕರರ ಕುಟುಂಬದ ಸದಸ್ಯರೆಲ್ಲ ಇಂದು ತಟ್ಟೆ, ಲೋಟ ಬಾರಿಸಿ ಹೋರಾಟ ಮಾಡಿದ್ದಾರೆ. ಈ ಅಹಿಂಸಾತ್ಮಕ ಚಳುವಳಿ ಮುಂದುವರೆಯುತ್ತದೆ. ನಾಳೆ ಯುಗಾದಿ ಹಬ್ಬದ ದಿನ ತಟ್ಟೆ ಹಿಡಿದು ಭಿಕ್ಷೆ ಬೇಡುವ ಮೂಲಕ ಹೋರಾಟ ಮಾಡಲಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕುಟುಂಬದ ಸದಸ್ಯರಿಂದ ಭಿಕ್ಷಾಟನೆ ನಡೆಸಲಾಗುವುದು” ಎಂದು ಹೇಳಿದ್ದಾರೆ.
“ಹಬ್ಬ ಮಾಡಲು ವೇತನ ನೀಡುವುದಿಲ್ಲ ಎಂದರೆ ಹೇಗೆ? ಅದ್ಯಾವ ಹಿಂದು ಪರಿಪಾಲಕರು ನೀವು? ಹಿಂದೂ ಧರ್ಮ ಪ್ರತಿಪಾದಕರೇ ಎಲ್ಲಿದ್ದೀರಿ? ಸಚಿವರೇ, ಹಿಂದೂ ಮುಖಂಡರೇ ಮುಂದೆ ಬನ್ನಿ, ನಮ್ಮ ಸಮಸ್ಯೆ ಬಗೆಹರಿಸಿ. ಕೆಲಸ ಮಾಡಿದ ವೇತನ ಯಾಕೆ ಕೊಡುತ್ತಿಲ್ಲ. ಮುಖ್ಯಮಂತ್ರಿಗೆ ಹೇಳಿ ವೇತನ ಕೊಡಿಸಿ ಸಮಸ್ಯೆ ಬಗೆಹರಿಸಿ. ಮಾತು ಕೊಟ್ಟಿದ್ದೀರಿ, ಲಿಖಿತವಾಗಿ ಸರಕಾರದ ಪ್ರತಿನಿಧಿಗಳು ಬರೆದುಕೊಟ್ಟಿದ್ದೀರಿ, ಅದರಂತೆ ನಡೆದುಕೊಳ್ಳಿ” ಎಂದು ಅವರು ಆಗ್ರಹಿಸಿದರು.
“ಮುಖ್ಯಮಂತ್ರಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು. ಅದು ಬಿಟ್ಟು ಕೆಲಸಕ್ಕೆ ಬರುವವರಿಗೆ ಮಾತ್ರ ವೇತನ ನೀಡುವುದು ಸರಿಯಲ್ಲ. ಮುಖ್ಯಮಂತ್ರಿಗಳೇ ಈ ತಪ್ಪು ಮಾಡಬಾರದು. ಡಿಪೋ ಮ್ಯಾನೇಜರ್ ವಿರುದ್ದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಾರ್ಚ್ ತಿಂಗಳ ವೇತನ ಕೊಟ್ಟಿಲ್ಲ ಎಂದು ನಾಳೆ ದೂರು ದಾಖಲಿಸುತ್ತೇವೆ” ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರವನ್ನು ಮುರಿಯಲು ಪ್ರಯತ್ನಿಸುತ್ತಿರುವ ಸರ್ಕಾರ?; ಗೃಹ ಸಚಿವ ಹೇಳಿದ್ದೇನು?