ಸೆನ್ಸಾರ್ ಮಂಡಳಿಯಿಂದ ‘ಯು’ (ಎಲ್ಲರೂ ನೋಡಬಹುದು) ಪ್ರಮಾಣಪತ್ರ ಪಡೆದಿರುವ 1983 ರ ಚಲನಚಿತ್ರದ ಸ್ಕ್ರೀನ್ಶಾಟ್ ಅನ್ನು ಹಂಚಿದ್ದಕ್ಕಾಗಿ ದೆಹಲಿ ಪೊಲೀಸರು ತನ್ನನ್ನು ಬಂಧಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರು ನ್ಯಾಯಾಲಯಕ್ಕೆ ಮಂಗಳವಾರ ತಿಳಿಸಿದ್ದಾರೆ.
ಜುಬೇರ್ ಅವರು ಈ ಟ್ವೀಟ್ ಅನ್ನು 2018 ರಲ್ಲಿ ಟ್ವೀಟ್ ಮಾಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅನಾಮಧೇಯ ಟ್ವಿಟರ್ ಖಾತೆಯೊಂದು ದೆಹಲಿ ಪೊಲೀಸರಿಗೆ ದೂರಿಕೊಂಡಿತ್ತು. ಇದರ ನಂತರ ಪ್ರಕರಣ ದಾಖಲಿಸಿರುವ ದೆಹಲಿ ಪೊಲೀಸರು ಅವರನ್ನು ಸೋಮವಾರ ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜುಬೇರ್ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ಖ್ಯಾತ ವಕೀಲೆ ವೃಂದಾ ಗ್ರೋವರ್, “ಇದೇ ರೀತಿಯ ಟ್ವೀಟ್ಅನ್ನು ಅನೇಕರು ಮಾಡಿದ್ದಾರೆ. ಆದರೆ ಆ ಖಾತೆ ಮತ್ತು ನನ್ನ ನಡುವಿನ ಏಕೈಕ ವ್ಯತ್ಯಾಸವೆಂದರೆ ನನ್ನ ಧರ್ಮ, ನನ್ನ ಹೆಸರು ಮತ್ತು ನನ್ನ ವೃತ್ತಿ” ಎಂದು ಜುಬೇರ್ ಮುಸ್ಲಿಂ ಮತ್ತು ಪತ್ರಕರ್ತ ಎಂದು ಉಲ್ಲೇಖಿಸಿ ಹೇಳಿದ್ದಾರೆ.
ಇದನ್ನೂ ಓದಿ: ‘ಕಿಸಿ ಸೆ ನಾ ಕೆಹನಾ’: ಮೊಹಮ್ಮದ್ ಜುಬೇರ್ ಬಂಧನಕ್ಕೆ ಕಾರಣವಾದ ಹಳೆಯ ಹಿಂದಿ ಸಿನಿಮಾ ದೃಶ್ಯ!
ಜುಬೈರ್ ಅವರು ಟ್ವೀಟ್ ಮಾಡಿದ್ದ ಚಿತ್ರ, 1983ರ ಹೃಷಿಕೇಶ್ ಮುಖರ್ಜಿ ಅವರ ‘ಕಿಸಿ ಸೆ ನಾ ಕೆಹನಾ’ ಚಲನಚಿತ್ರದ ಸ್ಕ್ರೀನ್ ಶಾರ್ಟ್ ಆಗಿದೆ. ಅವರು ಮಾಡಿದ್ದ ಟ್ವೀಟ್ನಲ್ಲಿ, ‘ಹನಿಮೂನ್ ಹೋಟೆಲ್’ ಎಂಬ ಬೋರ್ಡಿಗೆ ಬಣ್ಣ ಬಳಿದು, ‘ಹನುಮಾನ್ ಹೋಟೆಲ್’ ಎಂದು ಹಿಂದಿಯಲ್ಲಿ ಬರೆದಂತೆ ತೋರಿಸುವ ಚಿತ್ರಣವಿದೆ.
ಈ ಚಿತ್ರವನ್ನು ಜುಬೇರ್ ಎಡಿಟ್ ಮಾಡಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ಅವರ ವಕೀಲರು ತಳ್ಳಿಹಾಕಿದ್ದು, ‘ಇದರಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಅಥವಾ ದ್ವೇಷವನ್ನು ಉತ್ತೇಜಿಸುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ’ ಎಂದು ಹೇಳಿದ್ದಾರೆ.
“ಅದು ಪೂಜಾ ಸ್ಥಳವಲ್ಲ, ಇದು ಹನಿಮೂನ್ ಮೇಲೆ ಮಾಡಲಾಗಿರುವ ತಮಾಷೆಯಾಗಿದೆ…ಇಡೀ ಪ್ರಕರಣವು ಅಸಂಬದ್ಧತೆಯಿಂದ ಕೂಡಿದೆ” ಎಂದು ಅವರು ಹೇಳಿದ್ದಾರೆ.
ಜುಬೇರ್ಗೆ ಜಾಮೀನು ನೀಡುವಂತೆ ವಾದ ಮಂಡಿಸಿದ ಅವರು, “ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಟ್ವೀಟ್ನಿಂದಾಗಿ 2018ರಿಂದ 2022 ರ ನಡುವೆ ಏನಾದರೂ ನಡೆಯಿತೆ?… ನನ್ನ ಕಕ್ಷಿದಾರ ತಾನು ಮಾಡುವ ಕೆಲಸದಿಂದಾಗಿ ಗುರಿಯಾಗಿದ್ದಾರೆ. ಅವರು ಶಕ್ತಿಶಾಲಿ ಜನರ ವಿರುದ್ಧ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕಿರುಕುಳಕ್ಕೆ ಒಳಪಡಿಸಬಾರದು” ಎಂದ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ರಕರ್ತ ಜುಬೇರ್ ಬಂಧನವನ್ನು ಖಂಡಿಸಿ, ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಎಡಿಟರ್ಸ್ ಗಿಲ್ಡ್
ಜುಬೇರ್ ‘ಜನಪ್ರಿಯತೆಗಾಗಿ ಫ್ಯಾಕ್ಟ್ಚೆಕ್’ ಮಾಡುತ್ತಿದ್ದಾರೆ ಎಂದು ದೆಹಲಿ ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದು, ಅವರ ವಿರುದ್ಧ ದಾಖಲಾಗಿರುವ ಇತರ ಎಫ್ಐಆರ್ಗಳನ್ನು ಉಲ್ಲೇಖಿಸಿ ಐದು ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ ನ್ಯಾಯಾಲಯವು ಅವರನ್ನು ಮತ್ತೇ ನಾಲ್ಕು ದಿನಗಳ ಕಾಲ ವಶಕ್ಕೆ ನೀಡಿದೆ.
“ಇದು ಅಪರಾಧದ ಮುಂದುವರಿಕೆಯಾಗಿದ್ದು, ಹನುಮಂತನನ್ನು ಪ್ರಾರ್ಥಿಸಿ, ಕೋತಿಗಳು ನಿಮಗೆ ತೊಂದರೆ ನೀಡುವುದಿಲ್ಲ” ಎಂದು ಜುಬೇರ್ ಟ್ವೀಟ್ ಮಾಡಿದ್ದಾರೆ ಎಂದು ಪೋಲೀಸರ ವಕೀಲರು ವಾದಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಜುಬೇರ್ ಪರ ವಕೀಲರು, “ಅದ ಮುಖ್ಯಮಂತ್ರಿಯೊಬ್ಬರ (ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್) ಹೇಳಿಕೆಯಾಗಿದ್ದು, ಅದನ್ನು ಜುಬೇರ್ ಪುನರುಚ್ಚರಿಸಿದ್ದರು” ಎಂದು ಹೇಳಿದ್ದಾರೆ.
ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳ ವೀಡಿಯೊವನ್ನು ಜುಬೇರ್ ಎತ್ತಿ ತೋರಿಸಿದ್ದರು. ಇದಾಗಿ ಕೆಲವು ದಿನಗಳ ನಂತರ ಜುಬೇರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಡ್ಯೂಟಿ ಮ್ಯಾಜಿಸ್ಟ್ರೇಟ್ ನಿನ್ನೆ ರಾತ್ರಿ ಅವರನ್ನು ಪೊಲೀಸರಿಗೆ ಒಂದು ದಿನದ ಕಸ್ಟಡಿ ನೀಡಿದ್ದರು.
ಇದನ್ನೂ ಓದಿ: ಒಂದು ದಿನದ ಪೊಲೀಸ್ ಕಸ್ಟಡಿಗೆ ಜುಬೇರ್: ಬಂಧನಕ್ಕೆ ಕಾರಣವಾದ ಟ್ವೀಟ್, ದೂರುದಾರರು ಯಾರು?
2020 ರ ಪ್ರಕರಣದಲ್ಲಿ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು ಎಂದು ಅವರ ವಕೀಲರು ಒತ್ತಿಹೇಳಿದ್ದಾರೆ. ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಈಗಾಗಲೇ ಬಂಧನದ ವಿರುದ್ಧ ರಕ್ಷಣೆ ನೀಡಿದೆ. ಆದರೆ ಪೊಲೀಸ್ ಅಧಿಕಾರಿಯ ದೂರಿನ ಆಧಾರದ ಮೇಲೆ ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.
2017 ರಲ್ಲಿ ಲಾಭರಹಿತವಾಗಿ ಸ್ಥಾಪಿತವಾದ ಆಲ್ಟ್ ನ್ಯೂಸ್ ವಿಶ್ವದ ಅತ್ಯಂತ ಪ್ರಮುಖವಾದ ಫ್ಯಾಕ್ಟ್ಚೆಕ್ ಔಟ್ಲೆಟ್ಗಳಲ್ಲಿ ಒಂದಾಗಿದೆ.



ಜುಬೇರ್ ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.
ಇಂದು ರಾಜಸ್ತಾನದ ಕನಯ್ಯಲಾಲ್ ಅವರ ಹತ್ಯೆಯ ವಿಡಿಯೋವನ್ನು ಯಾರೂ ಶೇರ್ ಮಾಡಬೇಡಿ ಗಲಭೆ ಆಗತ್ತೆ , ಶೇರ್ ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಅಂತಿವೆ ಸರಕಾರಗಳು. ಹಾಗೇ ಹಿಂದೆ ನೂಪುರ ಶರ್ಮಾ ಕೊಟ್ಟಿರುವ ಹೇಳಿಕೆಯ ವಿಡಿಯೋವನ್ನು ಇಡೀ ಪ್ರಪಂಚಕ್ಕೆ ಗೊತ್ತಾಗಿ ಪ್ರಚಾರವಾಗಿ ಇಡೀ ಜಗತ್ತೇ ಭಾರತದ ವಿರುದ್ಧ ಪ್ರತಿಭಟನೆ ಗಲಭೆ ಆಗುವಂತೆ ಪ್ರೇರೇಪಿಸಿದ್ದು ಕೂಡಾ ಈ ಆಲ್ಟ್ ನ್ಯೂಸ್ ಅಂದಮೇಲೆ ಇವರ ಮೇಲೂ ಕೇಸ್ ಆಗ್ಲೇಬೇಕಲ್ವಾ…… ರಾಜಸ್ತಾನದ ಟೈಲರ್ ಕೊಲೆಗೆ ಪರೋಕ್ಷ ಕಾರಣ ಈ ಜುಬೈರ್ ಆಗೋದಿಲ್ವಾ….. ನೂಪುರ್ ಶರ್ಮಾ ವಿಚಾರ ಇಷ್ಟೊಂದು ದೊಡ್ಡದಾದ ಕಾರಣ ನಿನ್ನೆಯ ಪ್ರತೀಕಾರಕ್ಕೆ ಕಾರಣ ಅಲ್ವಾ…..