ಕಾಗೋಡು ತಿಮ್ಮಪ್ಪನವರು ನಮ್ಮ ನಡುವಿನ ವಿಶಿಷ್ಟ ರಾಜಕಾರಣಿ. ಚುನಾವಣೆಯ ಸೋಲು ಗೆಲುವುಗಳನ್ನ ಬದಿಗಿಟ್ಟು, ಈ ವ್ಯವಸ್ಥೆಯ ಬಗ್ಗೆ ಗಾಢವಾಗಿ ಚಿಂತಿಸುವವರು. ಆ ಕಾರಣಕ್ಕೆ ಇವರನ್ನು ಕಂಡರೆ ಪಾರ್ಟಿಯ ಕಾರ್ಯಕರ್ತರಿಗೆ ಮತ್ತು ಸರಕಾರದ ಕರ್ಮಾಚಾರಿಗಳಿಗೆ ಅಷ್ಟೊಂದು ಇಷ್ಟವಿಲ್ಲ. ಪಾರ್ಟಿ ಕಾರ್ಯಕರ್ತರಿಂದ ಇವರು ನಿರೀಕ್ಷಿಸುವುದು ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ. ಆದ್ದರಿಂದ ವಿನಾಕಾರಣದ ಕಾಡುಹರಟೆಗೆ ಅಲ್ಲಿ ಅವಕಾಶವಿಲ್ಲ. ಇನ್ನ ಸರ್ಕಾರದ ಕರ್ಮಾಚಾರಿಗಳು ಬಂದರೆ ಆಗುತ್ತಿರುವ ಕೆಲಸದ ಪ್ರಗತಿ ಎಲ್ಲಿಗೆ ಬಂತು, ನಿಂತಿದ್ದರೆ ಆದ ತೊಡಕೇನು, ಮುಂದೇನು ಮಾಡಬೇಕು ಎಂಬ ಸಲಹೆ. ಈ ಸಮಯದಲ್ಲಿ ಅಧಿಕಾರಿಯ ದಕ್ಷತೆ ಅದಕ್ಷತೆ ಗುರುತಿಸಿಬಿಡುವ ತಿಮ್ಮಪ್ಪನವರು ಕೆಲಸಗಾರನಿಗೆ ಮಾತ್ರ ಮನ್ನಣೆ ಕೊಡುತ್ತಾರೆ. ಇಲ್ಲವಾದರೆ ಬೈಗುಳ ಗ್ಯಾರಂಟಿ ಅವರೆಂದೂ ಮತದಾರನನ್ನ ಓಲೈಸಿದವರಲ್ಲ. ಓಟಿಗಾಗಿ ಹಲ್ಲು ಗಿಂಜಿದವರಲ್ಲ. ಚುನಾವಣೆ ಸಮಯದಲ್ಲಿ ಎದುರು ಸಿಕ್ಕವರ ಯೋಗಕ್ಷೇಮ ವಿಚಾರಿಸಬೇಕೆಂಬ ಸಲಹೆ ಕೇಳಿ ನಕ್ಕಂತವರು. ರಾಜಕಾರಣ ಆರಂಭವಾದದ್ದು ಸಮಾಜವಾದಿ ಪಾರ್ಟಿ ಮುಖಾಂತರ ದೇವರಾಜ ಅರಸು ಇಷ್ಟವಾದರೂ ಅವರ ಪಾರ್ಟಿ ಸೇರಲಿಲ್ಲ. ಆದರೂ ಗುಂಡೂರಾಯರ ಕಾಲದಲ್ಲಿ ಕಾಂಗ್ರೆಸ್ ಸೇರಿದ ತಿಮ್ಮಪ್ಪ ಇಂದಿಗೂ ಮನಸ್ಸು ಬದಲಿಸಿದವರಲ್ಲ. ಪಾರ್ಟಿ ಮತ್ತು ಕಾರ್ಯಕ್ರಮ ಬದ್ಧತೆ ಎಂದರೇನೆಂದು ತಿಮ್ಮಪ್ಪನವರನ್ನ ನೋಡಿದರೆ ತಿಳಿಯುತ್ತದೆ. ಒಬ್ಬ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಅನುಭವಗಳಿದ್ದರೂ ತಮ್ಮ ಭಾಗದ ಕೆಲಸ ನಿರ್ವಹಿಸಿದವರು. ಎಷ್ಟೇ ಸವಲತ್ತುಗಳನ್ನು ತಂದುಕೊಟ್ಟರೂ, ದ್ರೋಹ ಬಗೆಯುವ ಸಾಮಾನ್ಯ ಜನರ ನಡವಳಿಕೆ ಬಗ್ಗೆ ಎಂದೂ ಅಚ್ಚರಿಗೊಳ್ಳದವರು. ಜನರೇನೆಂಬುದನ್ನು ಲೋಹಿಯಾ, ಗೋಪಾಲಗೌಡರಿಂದ ತಿಳಿದವರು. ಆದ್ದರಿಂದ ಚುನಾವಣೆಯ ಸೋಲು ಅವರನ್ನು ಕಂಗೆಡಿಸಿಲ್ಲ. ದೇಶ ಮತ್ತು ಕರ್ನಾಟಕ ಹತ್ತಿ ಉರಿಯುತ್ತಿರುವ ಈ ಸಮಯದಲ್ಲಿ ಅವರನ್ನ ಮಾತನಾಡಿಸಬೇಕೆನಿಸಿತು. ಸಾಗರದ ಅವರ ಮನೆಗೆ ಹೋದಾಗ ಈ ಹಿಂದಿನಂತೆ ಹಲವಾರು ಕಾರುಗಳು ನಿಂತಿರಲಿಲ್ಲ. ಆ ಸಾಲಿನಲ್ಲಿ ಅವರದ್ದೂ ಒಂದು ಸಾಮಾನ್ಯ ಮನೆಯಂತೆ ಕಂಡಿತು. ಒಳಗೋದಾಗ ಆರಾಮವಾಗಿ ಟಿವಿ ನೋಡುತ್ತಾ ಕುಳಿತಿದ್ದರು.
ನನ್ನನ್ನು ಕಂಡು, “ಬನ್ರೀ” ಎಂದರು. ನಂತರ ‘ಯೇಯ್’ ಎಂದರು. ಹಾಗೆಂದರೆ ಸಹಾಯಕ ಬಂದು ಟಿವಿ ಆಫ್ ಮಾಡಬೇಕು. ಅದನ್ನು ಆತ ಮಾಡಿದ. ಈ ಹಿಂದೆ ಮನೆಗೋದಾಗ ‘ಯೇಯ್’ ಎನ್ನುತ್ತಿದ್ದರು. ಹಾಗಂದರೆ ಕಾಫಿ ತಂದು ಕೊಡು ಅಂತ. ಹೀಗೆ ತಿಮ್ಮಪ್ಪನವರ ಏಕಕ್ಷರದ ಸೂಚನೆಯಲ್ಲಿ ಒಂದೊಂದು ಸಲಹೆ ಸೂಚನೆ ವಾಕ್ಯಗಳೇ ಅಡಗಿರುತ್ತವೆ. ಇಲ್ಲಿ ಮೌನದ ಭಾಷೆಯೂ ಅಧಿಕ, ಕೆಲವೊಂದು ಪ್ರಶ್ನೆಗೆ ಅವರು ಉತ್ತರಿಸುವುದಿಲ್ಲ. ಮೌನವೇ ಉತ್ತರ ನೀಡುತ್ತದೆ.
ಪ್ರಶ್ನೆ: ಏನ್ ಸಾರ್ ದೇಶ ಹಿಂಗೆ ಮಾಡಿದ್ರು?
ಉತ್ತರ: ಮಾಡ್ತರೆ, ಅವುರಿಬ್ರು ಜೊತೆಯಾಗ್ಯವುರೆ, ಅವುರ್ಯಂಗೆ ಜೊತೆಯಾಗ್ಯವುರೆ ಅಂದ್ರೇ ಅವುರಿಗೆ ಕೌಂಟ್ರು ಕೊಡಕ್ಕೆ ನಮ್ಮಲ್ಯಾರು ಇಲ್ಲ. ಪಾಪ ಆ ಯಮ್ಮ ಮಮತಾ ಬ್ಯಾನರ್ಜಿ ಒಬ್ಬಳೆ ಎಷ್ಟು ಅಂತ ಹೋರಾಟ ಕೊಡಕ್ಕಾಯ್ತದೆ. ಒಂದು ಎಂಟತ್ತು ಸ್ಟೇಟಲ್ಲಿ ಅವುಳ ತರ ಹೋರಾಟ ಕೊಡೋರಿದ್ರೆ ಇವುರಿಂಗಾಡಕ್ಕಾಯ್ತಿರಲಿಲ್ಲ.
ಪ್ರಶ್ನೆ: ಕಾಂಗ್ರೆಸ್ ಏನ್ ಸಾರ್ ಹಿಂಗಾಯ್ತು?
ಉತ್ತರ: ಬಣ ಮಾಡಿಕಂಡು ಕಿತ್ತಾಡ್ತಾ ಅವೆ. ಮೋದಿಗೆ ಉತ್ತರ ಕೊಡೋನು ಯಾರು ಇಲ್ಲ. ಕಾಂಗ್ರೆಸ್ ಅಧೋಗತಿಗಿಳಿದದೆ ಏನು ಮಾಡದು. ಆಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹತ್ತು ವರ್ಷ ಪ್ರಧಾನಿಯಾಗಿದ್ದೋರು. ಮೋದಿ ಎದುರಿಗೆ ಮಾತಾಡಲಿಲ್ಲ. ಈಗ್ಲು ಯಾರೂ ಮಾತಾಡಲಿಲ್ಲ.
ಪ್ರಶ್ನೆ: ಜನಗಳಿಗೆ ದುಡ್ಡು ಕೊಡ್ತಾ ಅವುರೆ ಸಾರ್, ದುಡ್ಡು ತಗಂಡು ಓಟು ಮಾಡ್ತರೆ, ಇನ್ನ ನಿಮ್ಮಂಥೋರು ಗೆಲ್ಲಕ್ಕಾಗಲ್ಲ ಅಲವೆ?
ಉತ್ತರ: ದುಡ್ಡು ತಗೋಬ್ಯಾಡಿ ಅಂತ ಹೇಳಬೇಕು. ಒಂಥರದ ಜನಾಂದೋಲನ ನ್ಯಡಿ ಬೇಕು. ಆಗ ದುಡ್ಡಿದ್ದೋರ ಸೋಲಸಬವುದು.
ಪ್ರಶ್ನೆ: ಜನ ಸಾರ್, ನಾನು ಮಂಡ್ಯದ ಲೋಕಸಭಾ ಚುನಾವಣೆ ನೋಡಿದೆ. ಕಾಂಗ್ರೆಸ್ಸಿನೋರು ನೋರ್ರುಪಾಯಿ ಕೊಟ್ಟು ಕುಮಾರಸ್ವಾಮಿ ಕಡಿಯೋರು ಐದು ನೂರ್ರುಪಾಯಿ ಕೊಟ್ರು. ಆದ್ರು ಜನ ನೂರ್ರುಪಾಯಿ ಕಡಿಕೆ ಓಟು ಮಾಡಿದ್ರು. (ನಗು)
ಉತ್ತರ: ಥೂ ಅವ್ಯಲ್ಲ ಅಲ್ಲ, ಹಣ ತಗಂಡು ಓಟು ಮಾಡಿದ ಅಪಾಯನ ನಮ್ಮ ಜನಗಳಿಗೆ ಹೇಳಬೇಕು ಕೇಳ್ತರೆ.
ಪ್ರಶ್ನೆ: ಎಡೂರಪ್ಪನ ಆಡಳಿತದ ಬಗ್ಗೆ ಏನನ್ನಸತ್ತೆ ಸಾರ್?
ಉತ್ತರ: ಅವುನ ರಾಜಕಾರಣನೆ ಬೇರೆ ಕಂಡ್ರೀ ಮೊನ್ನೆ ಅವುನ್ಯಾರೋ ಸ್ವಾಮಿ ಯಾರವುನು?
ನಾನು: ವಚನಾನಂದ
ಉತ್ತರ: ಹಾ| ಅವನು ಏನೊ ಅಂದ ಅಂತ ಉಳದೋರೆಲ್ಲ ಯಂಗೆ ಮ್ಯಾಲೆ ಬಿದ್ರು. ಅಂಗೆ ಮಠಮಾನ್ಯ ಎಡೂರಪ್ಪನ ಬೆನ್ನಿಗವೆ. ಟೀಕೆ ಮಾಡಿದೊರು ಓಲೈಸೋರು ಯಲ್ರು ಅವುನ ಕಡಿಕವುರೆ ಆದ್ರಿಂದ ಆತನ ರಾಜಕಾರಣದ ಆಲೋಚನೆ ಬೇರೆ. ನಾವು ನಿರೀಕ್ಷೆ ಮಾಡೋದೆ ಬೇರೆ.
ಪ್ರಶ್ನೆ: ಮಂತ್ರಿಗಳು ಎಮ್ಮೆಲ್ಲೆಗಳು ನೇರವಾಗಿ ಮತೀಯವಾಗಿ ಮಾತಾಡ್ತರಲ್ಲ ಸಾರ್?
ಉತ್ತರ: ಮಾತಾಡ್ತರೆ, ಅವುರ ಮನಸಲ್ಲಿ ಇದ್ದದ್ದೇ ಅದಲ್ವ. ಈಗ ಬಾಯಿ ಬಿಡ್ತರಷ್ಟೇಯ ಯಾವನಾದ್ರು ಎಂಪಿ ಬಾಯಿ ಬಿಡ್ತನ ಮೋದಿ ಶಾ ಇಬ್ರೆ ಇರದೀಗ, ಏನು ಮಾಡಿದ್ರು ಜೊತೆಲಿ ಮಾಡ್ತರೆ, ಈ ದೇಶಕ್ಕೆ ಏನು ಮಾಡದಕ್ಕೂ ಜೊತೆಯಾಗ್ಯವುರೆ, ನೋಡನ ಇರಿ ಅದೇನಾಯ್ತದೊ ನೋಡನ.”
ನಾನು: ನಮಸ್ಕಾರ ಸರ್ ಬರ್ತೀನಿ.
ತಿಮ್ಮಪ್ಪನವರು: ಆಯ್ತು ಹೋಗಿ ಬನ್ನಿ.
ಬಿ.ಚಂದ್ರೇಗೌಡ


