Homeಕರ್ನಾಟಕಕನ್ನಡ ಸಂಘಟನೆಗಳು v/s BJP, RSS ಆದ ಸಂಸ್ಕೃತ ವಿವಿ ವಿವಾದ: ದಿ ಪ್ರಿಂಟ್ ವರದಿ

ಕನ್ನಡ ಸಂಘಟನೆಗಳು v/s BJP, RSS ಆದ ಸಂಸ್ಕೃತ ವಿವಿ ವಿವಾದ: ದಿ ಪ್ರಿಂಟ್ ವರದಿ

ಕರ್ನಾಟಕದಲ್ಲಿ ನಡೆಯುತ್ತಿರುವ ‘ಎಲ್ಲರ ಕನ್ನಡ’ ಚರ್ಚೆಯ ಬಗ್ಗೆಯೂ ‘ದಿ ಪ್ರಿಂಟ್‌’ ಜಾಲತಾಣ ಪ್ರಸ್ತಾಪ ಮಾಡಿದೆ.

- Advertisement -
- Advertisement -

ರಾಜ್ಯದ ಬಿಜೆಪಿ ಸರ್ಕಾರವು ರಾಮನಗರ ಜಿಲ್ಲೆಯ ಮಾಗಡಿ ಬಳಿಯಲ್ಲಿ 350 ಕೋಟಿ ರೂ. ಅನುದಾನದೊಂದಿಗೆ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲು ಮುಂದಾಗಿದೆ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಕನ್ನಡಪರ ಹೋರಾಟಗಾರರು ಸಂಸ್ಕೃತ ವಿವಿ ಮತ್ತು ಸಂಸ್ಕೃತ ಪದಗಳನ್ನು ತಿರಸ್ಕರಿಸುವ ಆಂದೋಲನವನ್ನು ನಡೆಸುತ್ತಿದ್ದಾರೆ.

ಕಳೆದ ಎರಡು ವಾರಗಳಿಂದ, ಸಂಸ್ಕೃತವನ್ನು ತಿರಸ್ಕರಿಸುವ ಅಭಿಯಾನಗಳು ಕನ್ನಡದ ಚರ್ಚೆಯನ್ನು ಆಕ್ರಮಿಸಿಕೊಂಡಿವೆ. ರಾಜಕಾರಣಿಗಳು ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳುವಂತೆ ಒತ್ತಾಯಿಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಅಭಿಯಾನಗಳ ಸರಣಿಯಲ್ಲಿ ಸಂಸ್ಕೃತ ತಿರಸ್ಕಾರ ಮತ್ತು ಪ್ರಾದೇಶಿಕ ಗುರುತಿನ ಭಾಷಾ ಅಭಿಯಾನ ಮೊದಲ ಸಾಲಿಗೆ ಸೇರುತ್ತಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಪದವಿ ಕೋರ್ಸ್‌ಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧಿರಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಸಂಸ್ಕೃತ ಸಂಶೋಧನೆ ಮತ್ತು ಅಧ್ಯಯನ ಸಂಸ್ಥೆಗಳು ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಕಳೆದ ವರ್ಷ ಅರ್ಜಿಯನ್ನು ಸಲ್ಲಿಸಿದ್ದವು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷಾ ಕೋರ್ಸ್‌ಗಳನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಡಿಸೆಂಬರ್‌ನಲ್ಲಿ ತಡೆ ನೀಡಿದೆ. ಈ ನಡುವೆ ಸರ್ಕಾರ ಸಂಸ್ಕೃತ ವಿವಿಯ ನಿರ್ಮಾಣಕ್ಕೆ ಮುಂದಾಗಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಏಕೈಕ ಕನ್ನಡ ವಿವಿಯಾದ ಹಂಪಿ ವಿಶ್ವವಿದ್ಯಾಲಯವು ಹಣಕ್ಕಾಗಿ ಪರದಾಡುತ್ತಿರುವಾಗ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಅನುದಾನ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಭಾನುವಾರ ಟ್ವಿಟರ್ ಅಭಿಯಾನ ಆರಂಭಿಸಿವೆ.

ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಕ್ಯಾಂಪಸ್ ಸ್ಥಾಪಿಸಲು 100 ಎಕರೆ ಭೂಮಿ ಮತ್ತು 359 ಕೋಟಿ ರೂ.ಗೆ ಸರ್ಕಾರ ಅನುಮೋದನೆ ನೀಡಿದೆ. ಆದರೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 2 ಕೋಟಿ ರೂ. ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರ ಯಾರಿಗೆ ಭೂಮಿ ಮತ್ತು ಹಣವನ್ನು ನೀಡುತ್ತಿದೆ? ಪದವಿಪೂರ್ವ ಕೋರ್ಸ್‌ಗಳಲ್ಲಿ ಕನ್ನಡ ಭಾಷೆಯನ್ನು ವಿರೋಧಿಸುತ್ತಿರುವವರಿಗೆ ನೀಡುತ್ತಿದೆ. ಅವರು ನಮ್ಮ ಭಾಷೆಯನ್ನು ತಿರಸ್ಕರಿಸುತ್ತಾರೆ, ಆದರೆ ನಾವು ಅವರಿಗೆ ನಮ್ಮ ಹಣ, ನಮ್ಮ ಭೂಮಿ ಮತ್ತು ನಮ್ಮ ಸಂಪನ್ಮೂಲಗಳನ್ನು ನೀಡಬೇಕೇ? ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಸಂಸ್ಕೃತ ಕಲಿತು ಮೇಷ್ಟ್ರಾಗಬೇಕಷ್ಟೇ, ಬೇರೆ ಅವಕಾಶಗಳಿಲ್ಲ: ಸಂಸ್ಕೃತ ಪ್ರಾಧ್ಯಾಪಕ ವೇಣುಗೋಪಾಲ್

SayNoToSanskrit ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಕನ್ನಡಿಗರು ತಮ್ಮ ಪ್ರದೇಶಿಕ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಸಂಸ್ಕೃತ ವಿರುದ್ದ ತಮ್ಮ ಆಕ್ರೋಶವನ್ನು ದಾಖಲಿಸಿದ್ದಾರೆ. ಸಂಸ್ಕೃತ ವಿರೋಧಿ ಮನಸ್ಥಿತಿಯನ್ನು ಬಿಜೆಪಿ ಖಂಡಿಸುತ್ತದೆ.

SayNoToSanskrit ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದ್ದು, ಸಾವಿರಾರು ಕನ್ನಡ ಪರ ಟ್ವಿಟರ್ ಹ್ಯಾಂಡಲ್‌ಗಳು ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ವಿರೋಧಿಸಿದ್ದಾರೆ. ಈ ಬಳಿಕ ಬಿಜೆಪಿ ನಾಯಕರು ಈ ಅಭಿಯಾನವನ್ನು ಖಂಡಿಸಿದ್ದಾರೆ. ಇದು ನೇರ-ನೇರಾ ‘ಕನ್ನಡ ಸಂಘಟನೆಗಳು ವರ್ಸಸ್ ಬಿಜೆಪಿ/ಆರ್‌ಎಸ್‌ಎಸ್’ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.

“ಸಂಸ್ಕೃತವು ನಮ್ಮ ದೈನಂದಿನ ಜೀವನದ ಭಾಗವಾಗಿದೆ, ಅದರ ಪ್ರಭಾವವು ಸಂಸ್ಕೃತಿ, ಆಚರಣೆಗಳು ಮತ್ತು ಭಾಷೆಯಲ್ಲಿಯೂ ಇದೆ. ಇದು ಸಮಸ್ಯೆಯಲ್ಲ. ಸಂಸ್ಕೃತದ ವಿರುದ್ಧ ದ್ವೇಷ ಸಾಧಿಸುವ ಅಗತ್ಯವಿಲ್ಲ” ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ಟೀಕಿಸಲು ಕನ್ನಡ ಪರ ಸಂಘಟನೆಗಳು ಈ ವಿಷಯವನ್ನು ತೆಗೆದುಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಪ್ರತಾಪ್ ಸಿಂಹ ತಮ್ಮ ಹೇಳಿಕೆಯ ಸಂದರ್ಭದಲ್ಲಿ ಸ್ಥಳೀಯ ಕನ್ನಡ ಹೆಸರುಗಳನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕರ್ನಾಟಕ ಕ್ಯಾಬಿನೆಟ್ ಸಚಿವ ಸಿ.ಎನ್. ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಧನಸಹಾಯ ನೀಡುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅವರೆಲ್ಲರೂ, ಸಂಸ್ಕೃತ ಭಾಷೆಯನ್ನು ಭಾರತೀಯ ಸಂಸ್ಕೃತಿಯ ಪ್ರತಿನಿಧಿ ಎಂದು ಪರಿಗಣಿಸಿದ್ದಾರೆ.

ಆದಾಗ್ಯೂ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ: “ಬಿಜೆಪಿಯಲ್ಲಿರುವ ಹೆಚ್ಚಿನವರಿಗೆ ದ್ರಾವಿಡ ಭಾಷೆಗಳು ಅಥವಾ ಶಾಸ್ತ್ರೀಯ ಭಾಷೆಗಳು ಸಂಸ್ಕೃತದಿಂದ ಹುಟ್ಟಿಕೊಂಡಿಲ್ಲ ಎಂಬುದು ತಿಳಿದಿಲ್ಲ. ಇದು ದೇವಭಾಷೆ, ದೇವರ ಭಾಷೆ ಎಂದು ಬಿಜೆಪಿಗರು ಕರೆದುಕೊಳ್ಳುತ್ತಾರೆ – ಸಾಮಾನ್ಯ ಜನರಲ್ಲ” ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯಕ್ಕೆ ಸರ್ಕಾರದಿಂದ ಮಂಜೂರಾದ ಭೂಮಿ, ನೀಲನಕ್ಷೆ

ಜನವರಿ 3 ರಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮನಗರ ಜಿಲ್ಲೆಯಲ್ಲಿ ಬಹು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಅವುಗಳಲ್ಲಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಕ್ಯಾಂಪಸ್ ಸ್ಥಾಪನೆಗೆ ಅಧಿಕೃತ ಚಾಲನೆ ನೀಡಿದ್ದೂ ಒಂದು. ಹೊಸ ಕ್ಯಾಂಪಸ್ – ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ – ಮಾಗಡಿ ತಾಲೂಕಿನಲ್ಲಿ ಸರ್ಕಾರದಿಂದ ಮಂಜೂರಾದ 100 ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿದೆ. ಈ ಜಾಗವು ರಾಮನಗರ ಜಿಲ್ಲೆಯ ಪ್ರಸಿದ್ಧ ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿ ಹಿಂದಿ ಬ್ಲಾಕ್‌ಬಸ್ಟರ್ ಚಲನಚಿತ್ರ ‘ಶೋಲೆ’ಯನ್ನು ಚಿತ್ರೀಕರಿಸಲಾಗಿದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವನ್ನು 2010ರಲ್ಲಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಯಿತು. ಆದಾಗ್ಯೂ, ವಿಶ್ವವಿದ್ಯಾನಿಲಯವು ತನ್ನದೇ ಆದ ಶಾಶ್ವತ ಕ್ಯಾಂಪಸ್ ಅನ್ನು ಹೊಂದಿಲ್ಲ ಮತ್ತು ಪ್ರಸ್ತುತ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶ್ರೀ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರಸ್ತುತ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರಾಮನಗರದಲ್ಲಿ ಅಂದಾಜು 359 ಕೋಟಿ ರೂ.ಗಳಲ್ಲಿ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ಭೂಮಿ ಹಾಗೂ ನೀಲನಕ್ಷೆಗೆ ಅನುಮೋದನೆ ನೀಡಿದೆ.

ಇದನ್ನೂ ಓದಿರಿ: ಸಂಸ್ಕೃತ ವಿವಿಗೆ ದುಡ್ಡು ಸುರಿಯುವ ಬದಲು ಸರ್ಕಾರಿ ಶಾಲೆ ಉಳಿಸಿ: ಕನ್ನಡಿಗರ ಆಗ್ರಹ

ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾಮಗಾರಿಗಳ ನೀಲನಕ್ಷೆ ಮತ್ತು ಅಂದಾಜು ವೆಚ್ಚವನ್ನು ಮಾತ್ರ ಅನುಮೋದಿಸಲಾಗಿದೆ. ಆದರೆ ಸರ್ಕಾರವು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಯಾವುದೇ ಹಣವನ್ನು ವರ್ಗಾಯಿಸಿಲ್ಲ. ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿಯಾಗಿದ್ದು, ಭಾಷೆಯ ಪುನರುಜ್ಜೀವನದ ಬಗ್ಗೆ ವ್ಯಕ್ತವಾಗುತ್ತಿರುವ ವಿರೋಧ ನನಗೆ ಅರ್ಥವಾಗುತ್ತಿಲ್ಲ ಎಂದು ಸಂಸ್ಕೃತ ಭಾರತಿ ಟ್ರಸ್ಟ್‌ನ ಕಾರ್ಯದರ್ಶಿ ಸತ್ಯನಾರಾಯಣ ಭಟ್ ತಿಳಿಸಿದ್ದಾರೆ.

ಸಂಸ್ಕೃತವನ್ನು ಕಲಿಯಲು ಜನರಲ್ಲಿ ಹೆಚ್ಚಿನ ಆಸಕ್ತಿ ಇದೆ. ಕರ್ನಾಟಕದಲ್ಲಿ 45,000 ವಿದ್ಯಾರ್ಥಿಗಳು ವೇದ ಮತ್ತು ಸಂಸ್ಕೃತ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದಾರೆ. 5 ರಿಂದ 12 ನೇ ತರಗತಿಯವರೆಗೆ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡುತ್ತಾರೆ ಎಂದು ಭಟ್ ಪ್ರತಿಪಾದಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಸೊರಗುತ್ತಿದೆ: ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿ ಎಂಬ ವಾದವನ್ನು ಕನ್ನಡ ಪರ ಹೋರಾಟಗಾರರು ಮತ್ತು ಸಂಶೋಧಕರು ಕಟುವಾಗಿ ತಿರಸ್ಕರಿಸುತ್ತಾರೆ.

“ನಾವು ಕನ್ನಡವನ್ನು ವಿರೋಧಿಸುತ್ತಿರುವ ಸಂಸ್ಕೃತ ಭಾರತಿ ಮತ್ತು ಇತರ ಅರ್ಜಿದಾರರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ ಮತ್ತು ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕರ್ನಾಟಕದ ತೆರಿಗೆದಾರರ ಹಣವನ್ನು ನೀಡುತ್ತಿದ್ದೇವೆ. ಸರ್ಕಾರ ಮೊದಲು ಕನ್ನಡ ವಿಶ್ವವಿದ್ಯಾಲಯಕ್ಕೆ ಹಣ ನೀಡಲಿ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಟಿ.ಎಸ್. ನಾಗಾಭರಣ ತಿಳಿಸಿದ್ದಾರೆ.

ವಾಸ್ತವವಾಗಿ, ಹಂಪಿಯಲ್ಲಿರುವ ಏಕೈಕ ಕನ್ನಡ ವಿಶ್ವವಿದ್ಯಾಲಯವು ಕಳೆದ ಕೆಲವು ವರ್ಷಗಳಿಂದ ಸಂಪನ್ಮೂಲಗಳಿಗಾಗಿ ಹೆಣಗಾಡುತ್ತಿದೆ. ಆರ್ಥಿಕ ನಿಧಿಯ ಕೊರತೆಯಿಂದಾಗಿ ವಿಶ್ವವಿದ್ಯಾನಿಲಯವು ಹೊಸ ಸಂಶೋಧಕರನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸಿದೆ.

“ನಾವು ವಾರ್ಷಿಕವಾಗಿ ಸುಮಾರು 50 ಲಕ್ಷ ರೂಪಾಯಿಗಳನ್ನು ಸರ್ಕಾರದಿಂದ ಪಡೆಯುತ್ತೇವೆ. ಆದರೆ ಇದು ವಿಶ್ವವಿದ್ಯಾನಿಲಯದ ನಿರ್ವಹಣೆ ಮತ್ತು ಸಂಬಳಕ್ಕೆ ಸಾಕಾಗುವುದಿಲ್ಲ. ಅತಿಥಿ ಉಪನ್ಯಾಸಕರಿಗೆ ವೇತನ ಮತ್ತು ವಿದ್ಯಾರ್ಥಿಗಳಿಗೆ ವಿಶೇಷವಾಗಿ SC/ST ವಿದ್ಯಾರ್ಥಿಗಳಿಗೆ ಸ್ಟೈಫಂಡ್/ಸ್ಕಾಲರ್‌ಶಿಪ್‌ಗಳ ದೊಡ್ಡ ಕೊರತೆಯನ್ನು ನಾವು ಎದುರಿಸುತ್ತೇವೆ. 25 ಕೋಟಿ ತುರ್ತು ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಇದೂವರೆಗೂ ನೆರವು ಸಿಕ್ಕಿಲ್ಲ” ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಅವರು ‘ದಿ ಪ್ರಿಂಟ್’ಗೆ ತಿಳಿಸಿದ್ದಾರೆ.

ಕನ್ನಡ ಪದಗಳ ಪ್ರಚಾರ: ಸಂಸ್ಕೃತ ವಿಶ್ವವಿದ್ಯಾನಿಲಯದ ವಿರುದ್ಧದ ಅಭಿಯಾನದ ಪೂರ್ವಭಾವಿಯಾಗಿ ಕನ್ನಡ ಶಬ್ದಕೋಶವನ್ನು ಶುದ್ಧೀಕರಿಸುವ ಮತ್ತು ಸಂಸ್ಕೃತ ಪದಗಳ ಬದಲಾಗಿ ಸರಳವಾದ ಕನ್ನಡ ಪದಗಳನ್ನು ಬಳಸುವ ಅಭಿಯಾನವು ನಡೆಯುತ್ತಿದೆ. ‘ಎಲ್ಲರ ಕನ್ನಡ’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಅಭಿಯಾನವು ವ್ಯಂಜನಗಳು ಅಥವಾ ‘ಮಹಾಪ್ರಾಣಗಳನ್ನು’ ತೊಡೆದುಹಾಕುವ ಮೂಲಕ ಭಾಷೆಯನ್ನು ಸರಳೀಕರಿಸಲು ಪ್ರಯತ್ನಿಸುತ್ತಿದೆ. ಸಂಕೀರ್ಣವಾದ ಸಂಕೃತ ಪದಗಳನ್ನು – ವಿಶೇಷವಾಗಿ ವಿಜ್ಞಾನ ಮತ್ತು ಗಣಿತದಲ್ಲಿ – ಸರಳವಾದ ಸ್ಥಳೀಯ ಕನ್ನಡ ಪದಗಳನ್ನು ಬಳಸಲು ಅಭಿಯಾನವು ಪ್ರಯತ್ನಿಸುತ್ತಿದೆ.

“ದೇಶದಾದ್ಯಂತ 18 ಸಂಸ್ಕೃತ ವಿಶ್ವವಿದ್ಯಾನಿಲಯಗಳಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೂರಾರು ಕೋಟಿ ವೆಚ್ಚ ಮಾಡುತ್ತಿವೆ. ದೇಶದಲ್ಲಿ ಒಂದೇ ಕನ್ನಡ ಮಾತನಾಡುವ ರಾಜ್ಯವಿದ್ದು, ಒಂದೇ ಕನ್ನಡ ವಿಶ್ವವಿದ್ಯಾಲಯವಿದೆ. ಕರ್ನಾಟಕ ಸರ್ಕಾರವು ಅದಕ್ಕೆ (ಸಂಸ್ಕೃತ) ಅರ್ಹತೆಗಿಂತ ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ” ಎಂದು ಕನ್ನಡದ ಖ್ಯಾತ ಲೇಖಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆ.ಮರುಳಸಿದ್ದಪ್ಪ ತಿಳಿಸಿದ್ದಾರೆ.

ಫೆಬ್ರವರಿ 2020 ರಲ್ಲಿ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಕಳೆದ ಮೂರು ವರ್ಷಗಳಲ್ಲಿ ಸಂಸ್ಕೃತದ ಪ್ರಚಾರಕ್ಕಾಗಿ 643.84 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಸಂಸತ್ತಿಗೆ ತಿಳಿಸಿದೆ. ಈ ಅಂಕಿ ಅಂಶವು ಇತರ ಐದು ಶಾಸ್ತ್ರೀಯ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳ ಅಭಿವೃದ್ದಿಗೆ ಖರ್ಚು ಮಾಡಿದ ನಿಧಿಗಿಂತ (ರೂ. 29 ಕೋಟಿ) 22 ಪಟ್ಟು ಹೆಚ್ಚಾಗಿದೆ.

“ಎಲ್ಲರ ಕನ್ನಡ ಚಳವಳಿ ದೋಷಪೂರಿತವಾಗಿದೆ,” ಎಂದು ಮರುಳಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ. “ಪ್ರತಿಯೊಂದು ಭಾಷೆಯೂ ಮಾತನಾಡುವ ಶೈಲಿ ಮತ್ತು ಬರವಣಿಗೆಯ ಶೈಲಿಯನ್ನು ಹೊಂದಿದೆ. ಅದನ್ನು ಸಂಪೂರ್ಣವಾಗಿ ವಿಲೀನಗೊಳಿಸಲಾಗುವುದಿಲ್ಲ. ಒಬ್ಬರ ಆಡುಭಾಷೆ ಮತ್ತು ಉಚ್ಚಾರಣೆಯನ್ನು ಮತ್ತೊಬ್ಬರು ಅಪಹಾಸ್ಯ ಮಾಡಬಾರದು. ಆದರೆ ಮಾತನಾಡುವ ಮತ್ತು ಬರೆಯುವ ಭಾಷೆಗಳನ್ನು ವಿಲೀನಗೊಳಿಸುವುದು ಕನ್ನಡ ಸಾಹಿತ್ಯವನ್ನು ನಾಶಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.

(ಮೂಲ ಲೇಖನದ ಶೀರ್ಷಿಕೆಯನ್ನು ಬದಲಿಸಲಾಗಿದೆ.)

ಮೂಲ: ದಿ ಪ್ರಿಂಟ್ (ಅನುಷಾ ರವಿ ಸೂ)

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿರಿ: ‘ಶುದ್ಧ ಕನ್ನಡ’ ವಿವಾದ: ಪೋಸ್ಟರ್‌ ಡಿಲೀಟ್ ಮಾಡಿದ ಕನ್ನಡ-ಸಂಸ್ಕೃತಿ ಇಲಾಖೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹು ಸಂಖ್ಯಾತರ ಮಾತ್ಯಭಾಷೆ ಕನ್ನಡ , ಕನ್ನಡ ವಿವಿ ಅಬಿವ್ರುದ್ದಿಗೆ ಸರ್ಕಾರವು ಪ್ರಯತ್ನ ಮಾಡಿಲಿ .
    ಈಗ ದೇಶದಲ್ಲಿ‌ ಇರುವ ಸಂಸ್ಕೃತ ವಿ.ವಿಗಳು, ಪಾಠ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಇಲ್ಲ.
    ಇದುವರೆಗೂ ಸಂಸ್ಕೃತ ಕಲಿತ ಎಷ್ಟು ಮಂದಿಗೆ ಜಾಭ್ ಸಿಕ್ಕಿದೆ?

    ಅನವಶ್ಯಕ ಸಾರ್ವಜನಿಕ ಹಣ ಪೋಲ್ ಮಾಡುವ ಅಗತ್ಯವಿಲ್ಲ.

    ಸರ್ಕಾರ ಮಾತ್ತೋಮ್ಮೆ ಯೋಚಿಸಿಲಿ.

    ಬಹುಸಂಖ್ಯಾತ ಜನರನ್ನು ತುಳಿದ ಈ ದೇಶದ ಪರಂಪರೆಯನ್ನು ಕನ್ನಡಿಗರು ಈಗಲಾದರು ಪ್ರಶ್ನಿಸುವ ಮೂಲಕ ದಿಟ್ಟತನವನ್ನು ತೋರಿಸುವ ಮೂಲಕ ಪ್ರಶ್ನಿಸುವ ಪ್ರಯತ್ನ ಪ್ರಶಂಸಿನೀಯ.

  2. ಸಂಸ್ಕೃತ ಭಾಷೆಯಲ್ಲಿ ಹಲವಾರು ಗ್ರಂಥಗಳ, ತಾಳೇಗರಿಗಳ, ಸಂಶೋಧನೆ ಆಗಬೇಕಾಗಿದೆ, ನಮ್ಮ ಪೂರ್ವಜರು ಕೊಟ್ಟ ಅಪಾರ ವಿದ್ಯಾನಿಧಿ, ಇದನ್ನು ಹೊರ ತರಲು ಸಂಸ್ಕೃತ ವಿ.ವಿ. ಕೆಲಸ ಮಾಡಬೇಕಾಗಿದೆ. ಕನ್ನಡ, ಸಂಸ್ಕೃತ ಎಂದು ವಾದ ವಿವಾದ ಮಾಡದೇ ಸಂಸ್ಕೃತ ವಿವಿಗೆ ಸಹಕರಿಸಿ, ವಿದೇಶಿಯರು ಸಂಸ್ಕೃತ ಕಲಿತು ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ನಮಗೆ ಕೊಡುತ್ತಾರೆ, ಆದರೆ ನಮ್ಮದೇ ಆದ ಸಂಸ್ಕೃತ ನಮಗೆ ಅನಾದಾರವೇ, ಹಣದ ದೃಷ್ಟಿಯಿಂದ ಸಂಸ್ಕೃತ ನೋಡಬೇಡಿ, ಜಾಬ್ ದೃಷ್ಟಿಯಿಂದ ಸಂಸ್ಕೃತ ನೋಡಬೇಡಿ, ಸಂಸ್ಕೃತ ವನ್ನು ವಿಜ್ಞಾನದ ದೃಷ್ಟಿಯಿಂದ ನೋಡಿ.

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...