ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಜನತಾ ದಳ (ಯುನೈಟೆಡ್) ಘೋಷಿಸಿದೆ. ಬಿಹಾರದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ ನಡೆಸುತ್ತಿರುವ ಜೆಡಿಯು ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನನ್ನು ಮಿತ್ರಪಕ್ಷ ಎಂದು ಹೆಸರಿಸದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದೆ.
ಜೆಡಿಯು ರಾಷ್ಟ್ರೀಯ ವಕ್ತಾರ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ, ಯುಪಿ ಚುನಾವಣಾ ರಂಗದಲ್ಲಿ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದಿದ್ದು, ಉತ್ತರ ಪ್ರದೇಶದಲ್ಲಿ ನ್ಯಾಯದೊಂದಿಗೆ ಅಭಿವೃದ್ಧಿ ಎಂಬ ‘ಬಿಹಾರ ಮಾದರಿ ಆಡಳಿತ’ವನ್ನು ಜಾರಿಗೆ ತರಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.
“ನಮ್ಮ ಪಕ್ಷದ ಸಹೋದ್ಯೋಗಿ ಆರ್ಸಿಪಿ ಸಿಂಗ್ ಅವರು ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಮತ್ತು ಯುಪಿ ವಿಧಾನಸಭಾ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರೊಂದಿಗೆ ಮಾತನಾಡಿದ್ದರು. ಅವರು ಯಾವುದೇ ಹಂತದಲ್ಲೂ ನಮ್ಮೊಂದಿಗೆ ಮೈತ್ರಿಯನ್ನು ಯಾರೂ ನಿರಾಕರಿಸಿರಲಿಲ್ಲ. ಆದರೆ, ಬಿಜೆಪಿ ಮೂರು ದಿನಗಳ ಹಿಂದೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಅಪ್ನಾ ದಳ ಮತ್ತು ನಿಶಾದ್ ಪಕ್ಷವು ಅದರ ಮಿತ್ರಪಕ್ಷಗಳು ಎಂದು ಹೇಳಿದೆ. ಇದರಿಂದ ಜೆಡಿಯು ಮೈತ್ರಿಕೂಟದ ಭಾಗವಾಗಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ವಿಶ್ಲೇಷಣೆ: ಆದಿತ್ಯನಾಥ್ ಅಯೋಧ್ಯೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿದ್ದೇಕೆ?
ಮುಂದುವರೆದು, “ಬಿಜೆಪಿಯಿಂದ ನಾವು ಕೋಪಗೊಂಡಿಲ್ಲ ಆದರೆ ನಿರಾಶೆಗೊಂಡಿದ್ದೇವೆ. ಹೀಗಾಗಿ ಏಕಾಂಗಿಯಾಗಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಈ ಬೆಳವಣಿಗೆಯು ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಕೆ.ಸಿ ತ್ಯಾಗಿ ಹೇಳಿದ್ದಾರೆ.
ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜನತಾ ದಳ (ಯು)ಈ ಹಿಂದೆ ಯುಪಿಯಲ್ಲಿ 3 ರಿಂದ 4 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿತ್ತು. ಆದರೆ, ಈಗ ಬಿಜೆಪಿ ತನನ್ ಮಿತ್ರಪಕ್ಷಗಳ ಪಟ್ಟಿಯಲಿ ಸೇರಿಸದೆ ಇರುವುದರಿಂದ ಸ್ಪತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದೆ.