ಬಿಜೆಪಿ ಬೆಂಬಲಿತ ಸಂಘಟನೆಯಾದ ವಿಎಚ್ಪಿಯ ಕಾರ್ಯಕರ್ತರು ಮಧ್ಯಪ್ರದೇಶದ ಉಜ್ಜಯಿನಿ ರೈಲ್ವೇ ನಿಲ್ದಾಣದಲ್ಲಿ ಅಜ್ಮೀರ್ಗೆ ತೆರಳುತ್ತಿದ್ದ ರೈಲಿನಿಂದ ಮುಸ್ಲಿಂ ಯುವಕ ಮತ್ತು ಆತನೊಂದಿಗೆ ಪ್ರಯಾಣಿಸುತ್ತಿದ್ದ ಹಿಂದೂ ಯುವತಿಯನ್ನು ರೈಲಿನಿಂದ ಹೊರಗೆ ಎಳೆದು ಹಾಕಿದ್ದರು. ಜನವರಿ 14ರ ಸಂಜೆ ಈ ಘಟನೆ ನಡೆದಿದ್ದು, ಈ ವೇಳೆ ದುಷ್ಕರ್ಮಿಗಳು ಲವ್ ಜಿಹಾದ್ ಎಂದು ಆರೋಪಿಸಿ ಯುವಕನಿಗೆ ಹಲ್ಲೆ ಕೂಡಾ ನಡೆಸಿದ್ದಾರೆ.
ಮೂವತ್ತು ವರ್ಷದ ಆಸಿಫ್ ಶೇಖ್ ತನ್ನ ಕುಟುಂಬದ ಸ್ನೇಹಿತರಾದ 26 ವರ್ಷದ ಸಾಕ್ಷಿ ಜೈನ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ವಿಎಚ್ಪಿ ದುಷ್ಕರ್ಮಿಗಳು ಅವರನ್ನು ರೈಲಿನಿಂದ ಹೊರಗೆ ಎಳೆದು ಹಾಕಿದ್ದಾರೆ. ಈ ಇಬ್ಬರೂ ಇಂದೋರ್ ನಿವಾಸಿಗಳಾಗಿದ್ದಾರೆ.
ವಿಎಚ್ಪಿ ದುಷ್ಕರ್ಮಿಗಳು ಅವರನ್ನು ಬಲವಂತವಾಗಿ ಉಜ್ಜಯಿನಿ ರೈಲ್ವೆ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಸಹೋದರ ಸಂಬಂಧಿಗಳ ಪ್ರೇಮ ಪ್ರಕರಣಕ್ಕೆ ‘ಲವ್ ಜಿಹಾದ್’ ಪಟ್ಟ ಕಟ್ಟಿದ ಬಿಜೆಪಿ ಪರ ಸಂಘಟನೆ ಮತ್ತು ಮಾಧ್ಯಮಗಳು
ಪೊಲೀಸರು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು, ಅವರಿಬ್ಬರೂ ಕುಟುಂಬ ಸ್ನೇಹಿತರು ಎಂದು ಪತ್ತೆ ಹಚ್ಚಿದ್ದಾರೆ. ಇದರ ನಂತರ ಅವರನ್ನು ಹೋಗಲು ಬಿಟ್ಟಿದ್ದಾರೆ. ಇಬ್ಬರು ಪ್ರಯಾಣಿಕರು ಕೂಡಾ ದೂರುಗಳನ್ನು ದಾಖಲಿಸಲು ನಿರಾಕರಿಸಿದ್ದರು ಮತ್ತು ರೈಲ್ವೆ ಪೊಲೀಸರು ಕೂಡಾ VHP ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ.
“ಆಸಿಫ್ ಇಂದೋರ್ನಲ್ಲಿ ಸ್ಟಿಕ್ಕರ್ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ವಿವಾಹಿತರಾಗಿದ್ದಾರೆ. ಸಾಕ್ಷಿ ಜೈನ್ ಕೂಡಾ ವಿವಾಹಿತೆಯಾಗಿದ್ದು, ಇಂದೋರ್ನ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದಾರೆ. ಅವರಿಬ್ಬರೂ ಫ್ಯಾಮಿಲಿ ಸ್ನೇಹಿತರಾಗಿದ್ದು, ಪುಷ್ಕರ್ ಮೇಳದಲ್ಲಿ ಪಾಲ್ಗೊಳ್ಳಲು ಅಜ್ಮೀರ್ಗೆ ತೆರಳುತ್ತಿದ್ದರು” ಎಂದು ಉಜ್ಜಯಿನಿ ರೈಲ್ವೆ ಪೊಲೀಸರು ಹೇಳಿದ್ದಾರೆ.
ಈ ಘಟನೆಯ ವೀಡಿಯೊವನ್ನು ಬಲಪಂಥೀಯ ಹ್ಯಾಂಡಲ್ಗಳು ತಪ್ಪಾಗಿ ಬಿಂಬಿಸಿ ವೈರಲ್ ಮಾಡಿದ ನಂತರ ಈ ವಿಷಯವು ಜನವರಿ 18 ರಂದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:ಗುಂಪು ಹಲ್ಲೆ ಸರಣಿ ಮುಂದುವರಿಕೆ – ‘ಲವ್ ಜಿಹಾದ್’ ಆರೋಪದಲ್ಲಿ ಅಪ್ರಾಪ್ತ ಹಿಂದೂ ಬಾಲಕನಿಗೆ ಥಳಿತ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ವಿಎಚ್ಪಿ ಕಾರ್ಯಕರ್ತರು ಅಜ್ಮೀರ್ಗೆ ಹೋಗುವ ರೈಲಿನ ಎಸಿ ಕೋಚ್ನಿಂದ ಪೊಲೀಸ್ ಠಾಣೆಗೆ ಹೋಗುವ ದಾರಿಯಲ್ಲಿ, ಆಸಿಫ್ ಶೇಖ್ನನ್ನು ಎಳೆದುಕೊಂಡು ಹೋಗುತ್ತಿರುವಾಗ ಥಳಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಅವರ ಲಗೇಜ್ಗಳನ್ನು ಹಿಡಿದ ಮತ್ತಿಬ್ಬರು ಕಾರ್ಯಕರ್ತರು ಸಾಕ್ಷಿ ಜೈನ್ ಅವರನ್ನು ಹಿಂಬಾಲಿಸಿದ್ದಾರೆ.
ಘಟನೆಯ ಮತ್ತೊಂದು ವೀಡಿಯೊದಲ್ಲಿ, ಯುವತಿಯು ತನ್ನನ್ನು ಚಿತ್ರೀಕರಣ ಮಾಡುವುದನ್ನು ನಿಲ್ಲಿಸುವಂತೆ ಪೊಲೀಸ್ ಠಾಣೆಯೊಳಗೆ ವಿಎಚ್ಪಿ ದುಷ್ಕರ್ಮಿಗಳಲ್ಲಿ ಕೇಳಿಕೊಂಡಿದ್ದಾರೆ.
ಈ ವಿಡಿಯೊದಲ್ಲಿ ಅವರು, “ನೀವು ನಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೀರಿ, ಇದರಿಂದ ನನ್ನ ಜೀವನ ನಾಶವಾಗುತ್ತದೆ. ನನ್ನನ್ನು ವಿಡಿಯೊ ಮಾಡುತ್ತಿದ್ದೀರಿ, ನನ್ನ ಮಾತು ಕೇಳಿ… ನಾನು ವಯಸ್ಕಳಿದ್ದೇನೆ, ನಾನು ಏನು ಮಾಡುತ್ತಿದ್ದೇನೆಂದು ನನಗೆ ತಿಳಿದಿದೆ…ನಾನು ಶಿಕ್ಷಕಿ…” ಎಂದು ಹೇಳುತ್ತಾರೆ. ಯುವತಿಯು ಕಿರುಚುತ್ತಿರುವುದನ್ನು ಕೇಳಿಸಿಕೊಂಡರೂ ಸಹ, ಪೊಲೀಸರು ಅವರನ್ನು ನೋಡುತ್ತಾ ಕುಳಿತಿರುವುದನ್ನು ಕಾಣಬಹುದು.
ದಿ ವೈರ್ ಜೊತೆ ಮಾತನಾಡಿದ ಉಜ್ಜಯಿನಿಯ ಜಿಆರ್ಪಿ ಇನ್ಸ್ಪೆಕ್ಟರ್ ಆರ್.ಎಸ್. ಮಹಾಜನ್, ‘‘ಲವ್ ಜಿಹಾದ್ ಎಂದು ಶಂಕಿಸಿ ಜನವರಿ 14 ರಂದು ವಿಎಚ್ಪಿ ಕಾರ್ಯಕರ್ತರು ಇಬ್ಬರು ಪ್ರಯಾಣಿಕರನ್ನು ಕರೆತಂದರು, ಅವರನ್ನು ವಿಚಾರಿಸಿದಾಗ ಅದು ಸುಳ್ಳು ಎಂದು ತಿಳಿದುಬಂದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಲವ್ ಜಿಹಾದ್, ಗೋ ಹತ್ಯೆ ನಿಷೇಧದಂತಹ ನಾಟಕಗಳು ಬಿಜೆಪಿಯನ್ನು ಗೆಲ್ಲಿಸುವುದಿಲ್ಲ- RLD ಮುಖ್ಯಸ್ಥ ಜಯಂತ್ ಚೌಧರಿ
ಅವರಿಬ್ಬರು ಒಟ್ಟಿಗೆ ಪ್ರಯಾಣಿಸುತ್ತಿರುವುದು ಅವರ ಕುಟುಂಬಗಳಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಅದಾಗಿಯು, ಅಸಿಫ್ ಮತ್ತು ಸಾಕ್ಷಿ ಅವರ ಪೋಷಕರು 65 ಕಿಮೀ ದೂರದ ಇಂದೋರ್ನಿಂದ ಉಜ್ಜಯಿನಿಗೆ ಬರುವವರೆಗೆ ಪೊಲೀಸ್ ಠಾಣೆಯಲ್ಲಿ ಅವರನ್ನು ಕಾಯುವಂತೆ ಮಾಡಲಾಯಿತು ಎಂದು ವೈರ್ ಉಲ್ಲೇಖಿಸಿದೆ.
ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತು ಪ್ರಯಾಣಿಕರನ್ನು ಎಳೆದೊಯ್ದು ಹಲ್ಲೆ ಮಾಡಿದ ವಿಎಚ್ಪಿ ದುಷ್ಕರ್ಮಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ವೈರ್ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಅಧೀಕ್ಷಕ ನಿವೇದಿತಾ ಗುಪ್ತಾ, “ಉಜ್ಜಯಿನಿ ಘಟನೆಯಲ್ಲಿ ಪ್ರಯಾಣಿಕರೊಬ್ಬರನ್ನು ಅನುಚಿತವಾಗಿ ನಡೆಸಿಕೊಂಡ ಘಟನೆ ನಮಗೆ ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರವೇ ವಿಎಚ್ಪಿಯವರಿಗೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಪ್ರಶ್ನಿಸಿದಾಗ, ಇಬ್ಬರೂ ಪ್ರಯಾಣಿಕರು ಒಂದೇ ದಿನದಲ್ಲಿ ಬಿಡುಗಡೆಗೊಂಡು ಅಲ್ಲಿಂದ ತೆರಳಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ಅವರು ವಿಎಚ್ಪಿ ಕಾರ್ಯಕರ್ತರ ವಿರುದ್ಧ ಯಾವುದೇ ದೂರು ನೀಡಿಲ್ಲ” ಎಂದು ಹೇಳಿದ್ದಾರೆ.
ಈ ಮಧ್ಯೆ, ವಿಎಚ್ಪಿಯ ಮಾಲ್ವಾ ಪ್ರಾಂತ್ನ ಪ್ರಚಾರ್ ಪ್ರಮುಖ್ ಕುಂದನ್ ಚಂದ್ರಾಕರ್, “ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಆಮಿಷವೊಡ್ಡುತ್ತಿದ್ದಾನೆ ಮತ್ತು ಮದುವೆಗಾಗಿ ಅಜ್ಮೀರ್ಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ನಮ್ಮ ಮೂಲಗಳು ತಿಳಿಸಿವೆ. ‘ ಲವ್ ಜಿಹಾದ್ ’ ಎಂದು ಶಂಕಿಸಿ ನಮ್ಮ ಕಾರ್ಯಕರ್ತರು ಅವರನ್ನು ಹಿಡಿದು ಜಿಆರ್ಪಿ ಪೊಲೀಸ್ ಠಾಣೆಗೆ ಕರೆದೊಯ್ದು ಬಿಟ್ಟರು. ನಂತರ ಪೊಲೀಸರು ಏನು ಮಾಡಿದರು ಎಂಬುದು ನಮಗೆ ತಿಳಿದಿಲ್ಲ” ಎಂದು ತಿಳಿಸಿದ್ದಾರೆ.
ಯುವತಿಯು ಮುಸ್ಲಿಂ ಯುವಕನೊಂದಿಗೆ ಆಕರ್ಷಿತಳಾಗಿದ್ದಾಳೆ ಎಂದು ಅವರಿಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆಗೆ, “ನಮ್ಮ ಹಿಂದೂ ಹೆಣ್ಣುಮಕ್ಕಳು ‘ಲವ್ ಜಿಹಾದ್’ ಮಾಡುವ ಮುಸ್ಲಿಂ ಪುರುಷರಿಂದ ಶೋಷಣೆಗೆ ಒಳಗಾಗುತ್ತಿರುವ ಬಗ್ಗೆ ಜನರು ಕಾಳಜಿ ವಹಿಸುವ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ನಮ್ಮ ಸಹೋದರಿಯರ ಮೇಲಿನ ಕಾಳಜಿಯಿಂದ ನಮ್ಮ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದಾರೆ” ಎಂದು ಚಂದ್ರಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಫ್ಯಾಕ್ಟ್ಚೆಕ್: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?
Don’t go to join or support such cruel organization