ಪ್ರತಿಭಾನ್ವಿತ ನಟ, ಕನ್ನಡಿಗರ ಅಪ್ಪು ನಮ್ಮನ್ನು ಅಗಲಿ ನಾಲ್ಕು ದಿನಗಳಾಗಿವೆ. ಪುನೀತ್ ಭೌತಿಕವಾಗಿ ನಮ್ಮ ಜೊತೆಗೆ ಇಲ್ಲ ಎಂಬುದನ್ನು ನಂಬುವುದೂ ಕೂಡ ಅಸಾಧ್ಯವೆನಿಸುತ್ತಿದೆ. ಇಂತಹ ಸಮಯದಲ್ಲಿ ಕಿಡಿಗೇಡಿಯೊಬ್ಬ ಪುನೀತ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುನೀತ್ ನಿಧನರಾದ ದಿನದಿಂದ ಅಂತ್ಯ ಸಂಸ್ಕಾರದ ದಿನದ ವರೆಗೂ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಡಾ. ರಾಜಕುಮಾರ್ ಸಾವನ್ನಪ್ಪಿದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳು ಮತ್ತೆ ನಡೆಯಬಾರದು, ಅಭಿಮಾನಿಗಳು ಮದ್ಯ ಸೇವಿಸಿ, ಅಚಾತುರ್ಯಗಳನ್ನು ಮಾಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು.
ಇದನ್ನು ವಿರೋಧಿಸಿದ್ದ ರಿತ್ವಿಕ್ ಎಂಬಾತ, ಹೇಗೋ ಮದ್ಯ ಪಡೆದುಕೊಂಡಿದ್ದ, ತನಗೆ ಮದ್ಯ ಸಿಕ್ಕಿರುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದ ಆತ, ರಾಜ್ಕುಮಾರ್ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ’ ಎಂದು ಬರೆದು ಅವಮಾನ ಮಾಡಿದ್ದರು.
ಇದನ್ನೂ ಓದಿ: ಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ
We have informed to cyber crime wing, necessary action will be taken.
— BengaluruCityPolice (@BlrCityPolice) October 31, 2021
ರಿತ್ವಿಕ್ ಪೋಸ್ಟ್ನಿಂದ ಆಕ್ರೋಶಗೊಂಡಿದ್ದ ಅಭಿಮಾನಿಗಳು ಆತನ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಆರೋಪಿಯ ವಿರುದ್ದ ಬೆಂಗಳೂರು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
The accused has been arrested and further legal action is being taken. https://t.co/uIEHFryfUk
— Kamal Pant, IPS (@CPBlr) November 1, 2021
ಆರೋಪಿ ರಿತ್ವಿಕ್ ಪೋಸ್ಟ್ ವಿರುದ್ದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಕೇವಲ ಆಲ್ಕೋಹಾಲ್ಗಾಗಿ ಪುನೀತ್ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ?’ ಎಂದು ಸಾನ್ವಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ. ಇದರಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗ ಶೆಟ್ಟಿ ಸೋಮವಾರ ತಿಳಿಸಿದ್ದರು.
ಇದನ್ನೂ ಓದಿ: ನಾಲ್ವರಿಗೆ ಬೆಳಕಾದ ನಟ ಪುನೀತ್ ಕಣ್ಣುಗಳು: ರಾಜ್ಯದಲ್ಲಿ ಮೊದಲ ಬಾರಿಗೆ ಹೊಸ ತಂತ್ರ ಬಳಕೆ