ಇವತ್ತು ‘ಹೆಂಗ್ ಪುಂಗ್ ಲೀ’ ಅನ್ನೋದು ಚಕ್ರವರ್ತಿ ಸೂಲಿಬೆಲೆಯವರ ಹೆಸರಿಗೆ ಸಮನಾರ್ಥಕನಾಮವಾಗಿ ಬಳಸುವಷ್ಟು ಪ್ರಸಿದ್ದವಾಗಿದೆ. ಕರ್ನಾಟಕದಲ್ಲಿ ಸುಳ್ಳು ಹೇಳುವವರಿಗೆ ಅನ್ವರ್ಥನಾಮವಾಗಿ ಈ ಪದವನ್ನು ಬಳಸಲಾಗುತ್ತಿದೆ. ಇಷ್ಟು ಸಹಜವಾಗಿ ಬಳಕೆಯಾಗುತ್ತಿರುವ ಈ ಪದದ ಸೃಷ್ಟಿಕರ್ತರು ಮತ್ತು ಮೊದಲು ಬಳಸಿದ್ದು ಕರ್ನಾಟಕ ಕ್ರಾಂತಿಕಾರಿ ಪಡೆ.
ಹೌದು, ‘ಒಟ್ಟಿನಲ್ಲಿ ಕ್ರಾಂತಿಯಾಗಬೇಕು’ ಎಂಬ ಟ್ಯಾಗ್ಲೈನ್ನೊಂದಿಗೆ ಗುರುತಿಸಿಕೊಂಡಿರುವ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಕರ್ನಾಟಕ ಕ್ರಾಂತಿಕಾರಿ ಪಡೆ ವಿದ್ಯಾವಂತ, ಉತ್ಸಾಹಿ ಯುವಜನರ ಒಂದು ತಂಡ. ಎಂಜಿನಿಯರ್ಗಳು, ಡಾಕ್ಟರ್ಗಳು, ವಕೀಲರು ಸೇರಿದಂತೆ ಐಟಿ ವಲಯದಲ್ಲಿ ಕೆಲಸ ಮಾಡುವವರು ಈ ಪಡೆಯ ಸಕ್ರಿಯ ಕಾರ್ಯಕರ್ತರು. ಅಧಿಕೃತವಾಗಿ 50 ಜನರಿರುವ ಈ ತಂಡದಲ್ಲಿ ತಮ್ಮ ಹೆಸರು ಗುರುತಿಸಿಕೊಳ್ಳಲು ಇಚ್ಛಿಸದೇ ಪಡೆಗಾಗಿ ಕೆಲಸ ಮಾಡುವವರು 2000 ಕ್ಕೂ ಹೆಚ್ಚು ಜನರಿದ್ದಾರೆ.
2014 ರ ಬಳಿಕ ದೇಶದಲ್ಲಿ ನಡೆಯುತ್ತಿರುವ ಘಟನೆಗಳು ನಮ್ಮನ್ನು ಚಿಂತೆಗೀಡುಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ತೊಡಗಿಸಿಕೊಂಡಿರುವ ಯುವ ಜನತೆಯನ್ನು ಸುಳ್ಳುಗಳು, ಕಟ್ಟುಕಥೆಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಹಾಗಾಗಿ ಅದೇ ಸಾಮಾಜಿಕ ಜಾಲತಾಣದ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ಸಮಾಜಕ್ಕೆ ಏನಾದರೂ ಕೊಡಗು ನೀಡಬೇಕು ಎಂದು ಈ ತಂಡ ಕಟ್ಟಿದ್ದೇವೆ ಎನ್ನುತ್ತಾರೆ ಕರ್ನಾಟಕ ಕ್ರಾಂತಿಕಾರಿ ಪಡೆ ಸದಸ್ಯರು.
ಟ್ವಿಟ್ಟರ್ ಮೂಲಕ ಜನಾಭಿಪ್ರಾಯ ಮೂಡಿಸುವಲ್ಲಿ ಈ ಪಡೆ ಕಾರ್ಯನಿರತವಾಗಿದೆ. ಸಾಮಾಜಿಕ ಕಳಕಳಿಯ ವಿಷಯಗಳನ್ನು ಟ್ರೆಂಡ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವುದು, ಸಾರ್ವಜನಿಕರಿಗೆ ವಿಷಯ ಮುಟ್ಟಿಸುವುದು ಇವರ ಆದ್ಯತೆ. ಹಾಗಂತ ಅವರು ಟ್ವಿಟರ್ಗೆ ಮಾತ್ರ ಸೀಮಿತವಾಗದೆ ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಆಹಾರ ಧಾನ್ಯಗಳ ವಿತರಣೆ, ಅಗತ್ಯವಿದ್ದವರಿಗೆ ತಕ್ಷಣ ರಕ್ತದಾನ ಮಾಡುವುದು, ಬೀದಿ ಬದಿಯಲ್ಲಿ ಮಲಗುವವರಿಗೆ ಊಟ, ಹೊದಿಕೆ ನೀಡುವ ಕಾಯಕದಲ್ಲಿಯೂ ತೊಡಗಿಸಿಕೊಂಡು ಅಭಿನಂದನೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣೆ ಪ್ರಚಾರ: ಮಮತಾ ಬ್ಯಾನರ್ಜಿಗೆ ಸಾಥ್ ನೀಡಲಿರುವ ಹಿರಿಯ ನಟಿ ಜಯಾ ಬಚ್ಚನ್
‘ಹೆಂಗ್ ಪುಂಗ್ಲಿ’ಯಿಂದ ಶುರುವಾದ ಇವರ ಟ್ವಿಟರ್ ಅಭಿಯಾನ, ಸುದ್ದಿ ಮಾಧ್ಯಮದಲ್ಲಿ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದವರನ್ನು ವಿರೋಧಿಸಿ ಏಜೆಂಟ್ ಅಜಿತ್ ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡುವವರೆಗೂ ಹೇಗಿದೆ. ಹಿಂದಿ ಹೇರಿಕೆಯನ್ನು ವಿರೋಧಿಸಿದ ತಂಡ ರಾಜ್ಯ ಸರ್ಕಾರ ಜಾತಿ ಆಧಾರದ ಮೇಲೆ ಪ್ರಾಧಿಕಾರಗಳಿಗೆ ಅನುದಾನ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ #CasteMinisterBSY #ಜಾತಿಗಿಷ್ಟುಸವಲತ್ತು_ಒಡೆದುಆಳುವದೌಲತ್ತು ಎನ್ನುವ ಹ್ಯಾಷ್ಟ್ಯಾಗ್ಗಳನ್ನು ಟ್ರೆಂಡ್ ಮಾಡಿತ್ತು. ಕರ್ನಾಟಕದಲ್ಲಿ ಹೊಸ ಭೂಸುಧಾರಣೆ ಕಾಯ್ದೆ ಪುನಃ ಜಮೀನ್ದಾರಿ ಪದ್ಧತಿ ತರಲು ಹೊರಟಿದೆ ಎಂದು ವಿರೋಧಿಸಿ ರಾಜ್ಯಪಾಲರನ್ನು ಗುರಿಯಾಗಿಸಿಕೊಂಡು #GovernorDontSignKLRA2020 #ರಾಜ್ಯಪಾಲರೇಮಾತುಉಳಿಸಿಕೊಳ್ಳಿ ಹ್ಯಾಷ್ಟ್ಯಾಗ್ ಮೂಲಕ ಆಗ್ರಹಿಸಿದೆ.
ಕೆಟ್ಟ ಆರ್ಥಿಕ ಸ್ಥಿತಿಗೆ ಖಾಸಗೀಕರಣ ಮಾಡಿ ಬಂಡವಾಳಶಾಹಿಗಳಿಗೆ ಮಣೆ ಹಾಕಿ ಸರ್ಕಾರಿ ಕಂಪನಿಗಳನ್ನು ಮುಗಿಸಿ ಮೀಸಲಾತಿ ಸೌಲಭ್ಯ ವಂಚಿತರನ್ನಾಗಿ ಮಾಡಿ ಸರ್ಕಾರ ದೇಶದ ಸಂಪತ್ತುಗಳನ್ನು ಮಾರತೊಡಗಿದೆ ಇದರ ವಿರುದ್ಧ ನಮ್ಮ ಈ ಟ್ವಿಟ್ಟರ್ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಸಹಕರಿಸಿ ಸರ್ಕಾರದ ವಿರುದ್ಧ ಧ್ವನಿಗೂಡಿಸಿ ಎಂದು ವಿನಂತಿ.#TeamKranthi pic.twitter.com/UtFzswtLeC
— #ಕರ್ನಾಟಕ_ಕ್ರಾಂತಿಕಾರಿ_ಪಡೆ (@Kranthikaripade) April 2, 2021
ಸದ್ಯ ಖಾಸಗೀಕರಣವನ್ನು ವಿರೋಧಿಸಿ ಏಪ್ರೀಲ್ 2 ರಂದು ನಡೆಸಿರುವ ಟ್ವಿಟರ್ ಅಭಿಯಾನ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದ್ದು, ಅಂದು ಹಲವು ಗಂಟೆಗಳ ಕಾಲ #ಕಾಸಿಗಾಗಿ_ಖಾಸಗೀಕರಣ #GOI_PVT_LTD ರಾಜ್ಯದಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿ ಇದ್ದ ಹ್ಯಾಶ್ಟ್ಯಾಗ್ ಆಗಿದೆ.
ನಾನುಗೌರಿ.ಕಾಂ ಜೊತೆ ತಮ್ಮ ತಂಡದ ಕೆಲಸಗಳ ಬಗ್ಗೆ ಮಾತನಾಡಿರುವ ರವಿ ಕಿರಣ್, “ಇಂದಿನ ಯುವ ಜನತೆ ಹೆಚ್ಚು ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದಾರೆ. ಅದರಲ್ಲಿ ಬರುವ ಸುದ್ದಿಯನ್ನು ನಿಜ ಎಂದು ತಿಳಿಯುತ್ತಾರೆ. ಇದನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಚಕ್ರವರ್ತಿ ಸೂಲಿಬೆಲೆಯಂತಹ ವ್ಯಕ್ತಿಗಳು ಸುಳ್ಳುಗಳನ್ನು ತುಂಬಲು, ಧರ್ಮದ ಅಫೀಮು ತುಂಬಲು ಬಳಸುತ್ತಿದ್ದಾರೆ. ದೇಶ, ಸೈನಿಕರು ಎಂಬಂತಹ ವಿಚಾರಗಳ ಮೂಲಕ ಯುವಜನರನ್ನು ಭಾವನಾತ್ಮಕವಾಗಿ ಹಿಡಿದಿಟ್ಟು ನಂತರ ತಮ್ಮ ಆರ್ಎಸ್ಎಸ್ ಸಿದ್ಧಾಂತಗಳನ್ನು ತುಂಬುತ್ತಾರೆ. ಇದನ್ನು ನಂಬಿದ ಯುವಕರು ಏನ್ ಏನೋ ಮಾಡಲು ಹೊರಡುತ್ತಾರೆ. ಇದರ ವಿರುದ್ಧ ನಾವು ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡು ಅವರ ಮುಖವಾಡಗಳನ್ನು ಕಳಚುವ ಕೆಲಸ ಮಾಡುತ್ತೇವೆ” ಎನ್ನುತ್ತಾರೆ.
ಕರ್ನಾಟಕದ ಹಿತವನ್ನು ವಿರೋಧಿಸುವ ವ್ಯಕ್ತಿ ಎಷ್ಟೇ ದೊಡ್ಡ ರಾಷ್ಟಭಕ್ತನಾದರು ಅವನನ್ನು ಕನ್ನಡಿಗರು ನಿರಾಕರಿಸಬೇಕು,
ಕರ್ನಾಟಕವನ್ನು ಕಾಪಾಡಿಕೊಳ್ಳಲಾರದ ರಣಹೇಡಿ ಕನ್ನಡಿಗರು ಭಾರತದ ಉದ್ಧಾರಕ್ಕೆ ಯಾವ ರೀತಿಯಲ್ಲೂ ನೆರವಾಗಲಾರರೆಂಬುದು ಇಡೀ ಭಾರತವೇ ನೆನಪಿಟ್ಟುಕೊಳ್ಳಬೇಕು.#stopHindiImposition #NoToHindiSlavery #ಹಿಂದಿಗುಲಾಮಗಿರಿಬೇಡ— #ಕರ್ನಾಟಕ_ಕ್ರಾಂತಿಕಾರಿ_ಪಡೆ (@Kranthikaripade) January 17, 2021
’ಹೆಂಗ್ ಪುಂಗ್ ಲೀ ಎಂಬುದನ್ನು ಆರಂಭಿಸುವ ಮುನ್ನ ಜನ ಅವರು ಹೇಳುವುದನ್ನೇ ನಂಬುತ್ತಿದ್ದರು. ಅವರು ಹೇಳಿದನ್ನು ಸತ್ಯ ಎನ್ನುತ್ತಿದ್ದರು. ಈಗ ನೋಡಿ ಜನ ಅವರ ಮಾತನ್ನು ಕೇಳಿ ನಗುತ್ತಾರೆ. ಅವರು ಹೇಳುವುದು ಸುಳ್ಳು ಎಂಬುದು ಜನರಿಗೆ ತಿಳಿಯಿತು. ನೂರು ಜನರನ್ನು ಬದಲಿಸುತ್ತೇವೆ ಎಂಬ ಭ್ರಮೆ ನಮಗಿಲ್ಲ. ಆದರೆ ಹತ್ತು ಜನರಾದರೂ ಬದಲಾಗಬೇಕು ಎಂಬುದು ನಮ್ಮ ಆಶಯ” ಎನ್ನುತ್ತಾರೆ ರವಿಕಿರಣ್.
ಇದನ್ನೂ ಓದಿ: ಮಹಿಳೆಯರ ಗೌರವದ ಬದುಕಿಗಾಗಿ ಜಾಗೃತಿ ಮೂಡಿಸುವ ರಾಯಚೂರಿನ ಚಿನ್ನಮ್ಮ
“ಎಷ್ಟೋ ಜನರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಚಳವಳಿ, ಹೋರಾಟವನ್ನು ಮುನ್ನಡೆಸುತ್ತಿರುತ್ತಾರೆ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಲು ಅವರಿಗೆ ಸಾಧ್ಯವಾಗುವುದಿಲ್ಲ. ಅಂತಹವರಿಗೆ ನಾವು ಬೆಂಬಲ ನೀಡುತ್ತೇವೆ. ರೈತ ಹೋರಾಟಗಳಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ರೈತ ಪ್ರತಿಭಟನೆಗೆ ಬೆಂಬಲ ನೀಡಿದ್ದೇವೆ. ಕರ್ನಾಟಕದಲ್ಲಿ ನಡೆಯುತ್ತಿರುವ ಐಕ್ಯ ಹೋರಾಟದಲ್ಲಿ ನಾವು ಭಾಗವಾಗಿದ್ದೇವೆ” ಎನ್ನುತ್ತಾರೆ.
ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್ಪಂಚ್ ಆದ ಕಥೆ