ಏಪ್ರಿಲ್ 6 ರಂದು ಕೇರಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಹೆಸರು ಕೇಳಿಬಂದಿದೆ. ಅಭಿವೃದ್ದಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಎಲ್ಡಿಎಫ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಹಿಂದೂಗಳ ಮೇಲೆ ಈ ಸರ್ಕಾರ ದೌರ್ಜನ್ಯ ನಡೆಸುತ್ತಿದೆ. ಈ ಎಲ್ಲಾ ಕಾರಣದಿಂದ ಜನ ಬಿಜೆಪಿ ಕಡೆ ವಾಲುತ್ತಿದ್ದು ಈ ಚುನಾವಣೆಯಲ್ಲಿ ನಾವು 10 ಕ್ಕೂ ಅಧಿಕ ಸ್ಥಾನಗಳಲ್ಲಿ ಜಯ ಗಳಿಸುತ್ತೇವೆ” ಎಂದಿದ್ದಾರೆ.
ಕಳೆದೆರಡು ಚುಣಾವಣೆಗಳಲ್ಲಿ ಕೇರಳದ ಉಸ್ತುವಾರಿ ವಹಿಸಿಕೊಂಡು ಬಹಳ ಹತ್ತಿರದಿಂದ ನೋಡಿದ ಕಾರಣಕ್ಕೆ ನಾನು ಈ ಮಾತು ಹೇಳುತ್ತಿದ್ದೇನೆ. ಈ ಬಾರಿ ಜನ ಎಲ್ಡಿಎಫ್ ಮತ್ತು ಯುಡಿಎಫ್ ಎರಡನ್ನು ತಿರಸ್ಕರಿಸುತ್ತಾರೆ ಎಂದು ಕಟೀಲ್ ಹೇಳಿದ್ದಾರೆ.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಸರ್ಕಾರದ ಸೋಲಾರ್ ಹಗರಣನ್ನು ಮುಂದಿಟ್ಟುಕೊಂಡು ಎಡಪಕ್ಷಗಳು ಉತ್ತಮ ಸಾಧನೆ ಮಾಡಿದ್ದವು. ಆದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದ ಎಡಪಕ್ಷಗಳು ನಿರಂತರ ಭ್ರಷ್ಟಾಚಾರದಲ್ಲೇ ತೊಡಗಿಕೊಂಡಿವೆ. ಹಾಗಾಗಿ ಅವರು ಈ ಬಾರಿ ಸೋಲಲಿದ್ದಾರೆ ಎಂದಿದ್ದಾರೆ.
ಇನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಇ. ಶ್ರೀಧರನ್ ಕೆಲದಿನಗಳ ಹಿಂದೆ “ಬಿಜೆಪಿಗೆ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವ ಉತ್ತಮ ನಿರೀಕ್ಷೆಗಳಿವೆ. ಇದು ಸಂಪೂರ್ಣ ಬಹುಮತವಾಗಿರಬಹುದು ಅಥವಾ ಕಿಂಗ್ಮೇಕರ್ಗಳಾಗುವಷ್ಟು ಸಂಖ್ಯೆಯಲ್ಲಿ ಶಾಸಕಕರು ಇಲ್ಲಿ ಗೆಲ್ಲಲಿದ್ದಾರೆ” ಎಂದು ಹೇಳಿದ್ದರು.
ಕೇರಳ ಬಿಜೆಪಿಯ ಮುಖಂಡ ಹಾಗೂ ಪಕ್ಷದ ಏಕೈಕ ಶಾಸಕ ಒ. ರಾಜಗೋಪಾಲ್ ಮಾತನಾಡಿ “ಕೇರಳವು ಬೇರೆಯೆ ರೀತಿಯ ರಾಜ್ಯವಾಗಿದೆ. ಕೇರಳದ ಸಾಕ್ಷರತೆಯ ಪ್ರಮಾಣ 90% ಆಗಿದ್ದು, ಅವರು ಯೋಚಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ. ಇವು ವಿದ್ಯಾವಂತರ ಅಭ್ಯಾಸಗಳಾಗಿದ್ದು, ಅದೂ ಕೂಡ ಇಲ್ಲಿ ಬಿಜೆಪಿ ಬೆಳೆಯದಿರಲು ಒಂದು ಸಮಸ್ಯೆಯಾಗಿದೆ’’ ಎಂಬ ಹೇಳಿಕೆ ನೀಡುವ ಮೂಲಕ ಗಮನಸೆಳೆದಿದ್ದರು.
ಇದನ್ನೂ ಓದಿ: ಕೇರಳದಲ್ಲಿ ಸಾಕ್ಷರತೆಯಿದೆ, ಜನ ಯೋಚಿಸುತ್ತಾರೆ ಹಾಗಾಗಿ ಪಕ್ಷ ಬೆಳೆದಿಲ್ಲ: ಬಿಜೆಪಿಯ ಏಕೈಕ ಶಾಸಕ