Homeಮುಖಪುಟಬಸವಕಲ್ಯಾಣ: ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಪಡೆಯುವ ಮತಗಳ ಮೇಲೆ ಇತರರ ಗೆಲುವು ನಿರ್ಧಾರ!

ಬಸವಕಲ್ಯಾಣ: ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಪಡೆಯುವ ಮತಗಳ ಮೇಲೆ ಇತರರ ಗೆಲುವು ನಿರ್ಧಾರ!

- Advertisement -
- Advertisement -

ಮೂರು ಉಪಚುನಾವಣೆಗಳ ಪೈಕಿ ಮುಖ್ಯ ಮಾಧ್ಯಮ ವಾಹಿನಿಗಳು ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಕ್ಷೇತ್ರ ಬಸವಕಲ್ಯಾಣ. ಇಲ್ಲಿ ಮೇಲುಸ್ಥರದಲ್ಲಿ ಜಿದ್ದಾಜಿದ್ದಿ ಜೋರಾಗಿಯೇ ಇದೆ. ಶಿರಾ ಮತ್ತು ಇತರ ಉಪ ಚುನಾವಣೆಗಳನ್ನು ‘ಗೆಲ್ಲಿಸಿಕೊಂಡು’ ಬಂದ ವಿಜಯೇಂದ್ರ ಇಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಎಸಿ ರೂಮುಗಳಲ್ಲೇ ಕುಳಿತು ಅವರು ಕೆಲವು ಸಮುದಾಯಗಳನ್ನು ಸೆಳೆಯುವ, ಎದುರಾಳಿ ಪಕ್ಷಗಳಿಂದಲೂ ಸಹಾಯ ಪಡೆಯುವ ಕೆಲಸವನ್ನು ಸಮರ್ಥವಾಗಿಯೇ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ.

ಅನುದಾನ, ಘೋಷಣೆ ವರ್ಸಸ್ ಸೊಷಿಯಲ್ ಇಂಜಿನಿಯರಿಂಗ್

ಇದನ್ನು ಅರಿಯುವ ಮೊದಲು ಇಲ್ಲಿನ ಈಗಿನ ಚುನಾವಣಾ ಪರಿಸ್ಥಿತಿಯ ಬಗ್ಗೆ ಇನ್ನೊಮ್ಮೆ ಅವಲೋಕಿಸೋಣ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಲಾ (ಮಲ್ಲಮ್ಮ) ನಾರಾಯಣರಾವ್ ಅವರು ದಿವಂಗತ ಶಾಸಕ ನಾರಾಯಣರಾವ್ ಪತ್ನಿ. ಬಿಜೆಪಿಯಿಂದ ಸ್ಪರ್ಧಿಸಿರುವ ಶರಣು ಸಲಗಾರ ಕಾಂಗ್ರೆಸ್‌ನಿಂದ ಬಂದಿರುವವರು ಮತ್ತು ಕಲಬುರಗಿ ಜಿಲ್ಲೆಯವರು (ಬಸವಕಲ್ಯಾಣ ಬೀದರ್ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ). ಬಿಜೆಪಿ ಸರ್ಕಾರ ಇಲ್ಲಿ ಅನುದಾನದ ಹೊಳೆ ಹರಿಸುವ ಭರವಸೆ ನೀಡಿದೆ.

ಇಷ್ಟಕ್ಕೆ ಕತೆ ನಿಲ್ಲಲ್ಲ. ಇಲ್ಲಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಎಂಬ ಗಟ್ಟಿ ಕುಳ ಕಣದಲ್ಲಿದೆ. ಇವರು 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕ ಆಗಿದ್ದರು. ಆದರೆ ಈ ಸಿಟ್ಟಿಂಗ್ ಎಂಎಲ್‌ಎಗೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಸೀಟು ನಿರಾಕರಿಸಿದ ಜೆಡಿಎಸ್, ‘ರಾಜ್ಯ ನಾಯಕ’ ಪಿಜಿಆರ್ ಸಿಂಧ್ಯಾರಿಗೆ ಟಿಕೇಟ್ ಕೊಟ್ಟಿತ್ತು. ಆಗ ಶಾಸಕನಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರನ್ನು ಬಿಜೆಪಿ ಎತ್ತಿಕೊಂಡು ಟಿಕೆಟ್ ಕೊಟ್ಟಿತ್ತು. ಈ ಎಲ್ಲ ರಾಜಕೀಯ ಅಂಧಾದುಂಧಿಯ ಮಧ್ಯೆ ಸಿದ್ದರಾಮಯ್ಯ ನಾರಾಯಣರಾವ್ ಅವರಿಗೆ ಟಿಕೆಟ್ ಕೊಟ್ಟರು. ಲಿಂಗಾಯತರು, ಮುಸ್ಲಿಮರು ಮತ್ತು ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರದಲ್ಲಿ ಒಂದು ಸಣ್ಣ ಸಮುದಾಯದ ವ್ಯಕ್ತಿಯೊಬ್ಬರಿಗೆ ಅವರು ಕಾಂಗ್ರೆಸ್ ಟಿಕೆಟ್ ಕೊಟ್ಟರು.

ಪುಟ್ಟ ಅಂಬಿಗ (ಕೋಲಿ ಅಥವಾ ಕಬ್ಬಿಗ) ಸಮುದಾಯಕ್ಕೆ ಸೇರಿದ ನಾರಾಯಣರಾವ್ ಗೆದ್ದಿದ್ದು ಅವರ ಹತ್ತಾರು ವರ್ಷಗಳ ಹೋರಾಟದಿಂದ. ಅವರು ತಮ್ಮ ಅಂಬಿಗ ಸಮುದಾಯದಂತೆ ಜನಸಂಖ್ಯೆಯಲ್ಲಿ ಕಡಿಮೆ ಇರುವ (ಕ್ಷೇತ್ರದಲ್ಲಿ 5-6 ಸಾವಿರ ಅಷ್ಟೇ) ಜನಸಮುದಾಯಗಳನ್ನು ಬೆಸಿದಿದ್ದರು. ಕ್ಷೇತ್ರದಲ್ಲಿ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಇರುವ ಮುಸ್ಲಿಂ ಸಮುದಾಯದ ಒಲವು ಗಳಿಸಿದ್ದರು. ಸದಾ ಬಸವಣ್ಣನ ಆಶಯಗಳನ್ನು ಪ್ರತಿಪಾದಿಸುತ್ತಿದ್ದ ಅವರು, ಬಹುಪಾಲು ಲಿಂಗಾಯತರ ಒಲವನ್ನು ಗಳಿಸಿದ್ದರು. ಎಲ್ಲಕ್ಕೂ ಮುಖ್ಯವಾಗಿ ಅವರು ಸೀದಾಸಾದಾ ಆಗಿದ್ದರು. ಇದು ರಾಜಕಾರಣಿಗಳಲ್ಲಿ ಕಾಣುವ ಅಪರೂಪದ ಗುಣ. ಇಂಥದ್ದನ್ನು ಜನ ಸುಲಭಕ್ಕೆ ತಿರಸ್ಕರಿಸುವುದಿಲ್ಲ. ಹಾಗಾಗಿಯೇ ಅವರು ಗೆದ್ದಿದ್ದರು. ಈ ಸಲ ನಾರಾಯಣರಾವ್ ಪತ್ನಿ ಅವರಿಗೆ ಆ ಅನುಕಂಪದ ಅಲೆ ಮತಗಳಾಗಿ ಪರಿವರ್ತನೆ ಆಗುತ್ತದೆಯೆ? ಕಾದು ನೋಡಬೇಕಿದೆ.

ಬಿಜೆಪಿ ನೆರವಿಗೆ ಜೆಡಿಎಸ್?

‘ಸಂಪನ್ಮೂಲ’ದ ಕೊರತೆಯ ಕಾರಣಕ್ಕೆ ಇತರ ಉಪ ಚುನಾವಣೆಗಳಲ್ಲಿ ಕ್ಯಾಂಡಿಡೇಟ್ ಹಾಕುವುದಿಲ್ಲ ಎಂದಿದ್ದ ಜೆಡಿಎಸ್ ಇಲ್ಲಿ ಯಸ್ರಬ್ ಅಲಿ ಖಾದ್ರಿ ಎಂಬ ಕ್ಯಾಂಡಿಡೇಟನ್ನು ಹಾಕಿದೆ. ಮತದಾರರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಸ್ಲಿಂರ ಓಟು ಬಾಚಿ ಬಿಜೆಪಿಗೆ ನೆರವು ನೀಡುವ ಉದ್ದೇಶ ಇದರಿಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಯಸ್ರಬ್ ಅಲಿ ಮೂಲ ಕಾಂಗ್ರೆಸ್ ಪಕ್ಷವೇ ಎಂಬುದನ್ನು ಮರೆಯಬಾರದು.

ಖೂಬಾ ಕೊಡಲಿರುವ ಏಟು!

2013ರ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲವು ಸಾಧಿಸಿದ್ದ, ಅದರ ಹಿಂದಿನ ಚುನಾವಣೆಯಲ್ಲೂ ಜೆಡಿಎಸ್‌ನಿಂದಲೇ ಗೆದ್ದಿದ್ದ ಮಲ್ಲಿಕಾರ್ಜುನ ಖೂಬಾ ಈಗ ಬಿಜೆಪಿ ಬಂಡಾಯ ಅಭ್ಯರ್ಥಿ. ಕಳೆದ ಸಲ 2018ರಲ್ಲಿ ಜೆಡಿಎಸ್ ಟಿಕೆಟ್ ಕೊಡದ ಪರಿಣಾಮ ಮಲ್ಲಿಕಾರ್ಜುನ್ ಖೂಬಾ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಈ ಸಲ ಅವರು ಎಷ್ಟು ಬಿಜೆಪಿ ಓಟ್ ಕೀಳುತ್ತಾರೆ ಎಂಬುದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಬಿಜೆಪಿ ವರಿಷ್ಠರಿಗೆ ಯಾರಿಗೂ ನಮ್ಮ ಮನೆಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕುವ ಮೂಲಕ ಅವರು ತಮ್ಮ ಕೋಪ ಪ್ರದರ್ಶಿಸಿದ್ದಾರೆ.

ಮರಾಠಿ ಭಾಷಿಕರ ವೋಟು

ಲಿಂಗಾಯತರ ವೋಟುಗಳ ಜೊತೆಗೆ ಮರಾಠಿ ಭಾಷಿಕರ ಓಟುಗಳನ್ನು ಬಿಜೆಪಿ ನೆಚ್ಚಿದೆ. ಇಲ್ಲಿ ಲಿಂಗಾಯತರ ಮತಗಳು ಸುಮಾರು 60 ಸಾವಿರದಷ್ಟಿದ್ದರೆ, ಮರಾಠಿ ಭಾಷಿಕರ ಮತಗಳ ಸಂಖ್ಯೆ 25-30 ಸಾವಿರ. ಮುಸ್ಲಿಮರ ಮತಗಳ ಸಂಖ್ಯೆ 35 ಸಾವಿರದಷ್ಟು ಇದೆ.
ಮರಾಠ ಮತಗಳ ಮೇಲೆ ಕಣ್ಣಿಟ್ಟು ಎನ್‌ಸಿಪಿಯಿಂದ ಎಂ.ಜಿ ಮೂಳೆ ಇಲ್ಲಿ ನಾಮಪತ್ರ ಹಾಕಿ ಕೊನೆ ಕ್ಷಣದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿ ಕಣದಿಂದ ಹೊರ ನಡೆದಿದ್ದಾರೆ. ಇದೇನೂ ಚುನಾವಣೆಯ ಮೇಲೆ ಗಾಢ ಪರಿಣಾಮ ಬೀರದು ಎನ್ನಲಾಗುತ್ತಿದೆ.

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...