ಮಹಾರಾಷ್ಟ್ರ ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಾಡ್ಸೆ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಶುಕ್ರವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಎನ್ಸಿಪಿ ನಾಯಕ ಜಯಂತ್ ಪಾಟೀಲ್ ಮಾಹಿತಿ ನೀಡಿದ್ದಾರೆ.
“ಮಹಾರಾಷ್ಟ್ರದ ಬಿಜೆಪಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಹಿರಿಯ ಬಿಜೆಪಿ ನಾಯಕ ಏಕನಾಥ್ ಖಾಡ್ಸೆ ತಮ್ಮ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ. ಸ್ವಲ್ಪ ಸಮಯದ ಹಿಂದೆ ಅವರು ತಮ್ಮ ನಿರ್ಧಾರದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಇದು ಎನ್ಸಿಪಿಯಲ್ಲಿ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ಶುಕ್ರವಾರ ಮಧ್ಯಾಹ್ನ ಖಾಡ್ಸೆ ಪಕ್ಷಕ್ಕೆ ಸೇರುತ್ತಾರೆ ”ಎಂದು ಪಾಟೀಲ್ ಹೇಳಿದ್ದಾರೆ.
स्व. गोपीनाथ मुंडे साहेबांच्या खांद्याला खांदा लावून गेली तीन दशके भाजपचे नेतृत्व करणारे ज्येष्ठ नेते एकनाथ खडसे यांनी भाजपचा त्याग केला आहे. त्यांनी भाजपच्या सदस्यत्वाचा राजीनामा दिला आहे. म्हणून येत्या २३ ऑक्टोबर रोजी त्यांना @NCPspeaks पार्टीमध्ये प्रवेश दिला जाणार आहे. pic.twitter.com/O7j4cyyNLH
— Jayant Patil (@Jayant_R_Patil) October 21, 2020
ಬುಧವಾರ ರಾಜೀನಾಮೆ ನೀಡಿದ ನಂತರ ಖಾಡ್ಸೆ, ತಾವು ಪಕ್ಷವನ್ನು ತೊರೆಯಲು ಪ್ರಮುಖ ಕಾರಣ ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಎಂದು ಹೇಳಿದ್ದಾರೆ. ತಾವು ಮಾತ್ರ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದು, ಬೇರೆ ಯಾವುದೇ ಪಕ್ಷದ ಶಾಸಕರು ಅಥವಾ ಸಂಸದರು ಅವರೊಂದಿಗೆ ಎನ್ಸಿಪಿಗೆ ಸೇರ್ಪಡೆಯಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ರಾಜ್ಯಪಾಲರ ಮಾತಿನಲ್ಲಿ ನಿಯಂತ್ರಣ ಇರಬೇಕಿತ್ತು: ಅಮಿತ್ ಶಾ!
ಕಂದಾಯ ಸಚಿವ ಮತ್ತು ಇತರ 11 ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದ ಖಾಡ್ಸೆ, 2016 ರ ಜೂನ್ನಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸಿದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಾಲ್ಕು ದಶಕಗಳ ಕಾಲ ಪಕ್ಷದೊಂದಿಗೆ ಕೆಲಸ ಮಾಡಿ, ಇಂದು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಫಡ್ನವೀಸ್ ಹೊರತುಪಡಿಸಿ ಪಕ್ಷದ ಬೇರೆ ಯಾವುದೇ ಮುಖಂಡರೊಂದಿಗೆ ಅಸಮಾಧಾನ ಹೊಂದಿಲ್ಲ ಎಂದು ಖಾಡ್ಸೆ ಹೇಳಿದ್ದಾರೆ. “ರಾಷ್ಟ್ರೀಯ ಅಥವಾ ರಾಜ್ಯ ನಾಯಕತ್ವದಿಂದ ಬೇರೆ ಯಾವುದೇ ನಾಯಕರ ವಿರುದ್ಧ ನನಗೆ ಯಾವುದೇ ಸಮಸ್ಯೆಯಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಗ್ಗೆ ಅಸಮಾಧಾನವಿದೆ. ಅವರು ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು. ಎಷ್ಟೂ ಪ್ರಕರಣಗಳಿಂದ ನಾನಿನ್ನು ಹೊರ ಬಂದಿಲ್ಲ. ಈ ರೀತಿಯ ಶಿಕ್ಷೆಗೆ ಕಾರಣ ನೀಡುವಂತೆ ಫಡ್ನವೀಸ್ ಅವರನ್ನು ವಿವಿಧ ವೇದಿಕೆಗಳಲ್ಲಿ ಒತ್ತಾಯಿಸಿದ್ದೇನೆ. ಆದರೆ ನನಗೆ ಯಾವತ್ತೂ ಉತ್ತರ ಸಿಕ್ಕಿಲ್ಲ” ಎಂದು ಅವರು ಹೇಳಿದರು.
ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಏಕನಾಥ್ ಖಾಡ್ಸೆ ಅವರಿಗೆ ಚುನಾವಣಾ ಟಿಕೆಟ್ ನಿರಾಕರಿಸಲಾಗಿತ್ತು.
ರಾಜ್ಯ ಬಿಜೆಪಿಯ ವಕ್ತಾರ ಕೇಶವ್ ಉಪಾಧ್ಯಾಯ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ನಾವು ಅವರೊಂದಿಗೆ ಸಂವಾದದ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೇವೆ. ಆದರೆ ಅದು ಸಫಲವಾಗಲಿಲ್ಲ. ಅವರಿಗೆ ಶುಭವಾಗಲಿ. ಪಕ್ಷದ ಸಣ್ಣ ಕಾರ್ಯಕರ್ತರೂ ಬಿಜೆಪಿಯನ್ನು ತೊರೆಯುವುದು ಪಕ್ಷಕ್ಕೆ ನಷ್ಟ” ಎಂದಿದ್ದಾರೆ.
ಫಡ್ನವೀಸ್ ವಿರುದ್ಧ ಏಕನಾಥ್ ಖಾಡ್ಸೆ ಅವರ ಆರೋಪಗಳು ಆಧಾರ ರಹಿತವಾಗಿವೆ ಎಂದು ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಈ ನಿರ್ಧಾರ ದುರದೃಷ್ಟಕರ, ಆದರೆ ಖಾಡ್ಸೆ ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ ಎಂದಿದ್ದಾರೆ.