ಬಿಹಾರದ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದ್ದು, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಂತ್ರಣ ನಿಯಮಗಳ ಉಲ್ಲಂಘನೆಯನ್ನು ಗಮನಿಸಿದ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.
ಚುನಾವಣಾ ರ್ಯಾಲಿ, ಪ್ರಚಾರಗಳ ಸಮಯದಲ್ಲಿ ಅತ್ಯಂತ ಜಾಗರೂಕತೆ ಮತ್ತು ಕಾಳಜಿಯನ್ನು ಪ್ರದರ್ಶಿಸುವಂತೆ ಚುನಾವಣಾ ಆಯೋಗ ಎಲ್ಲಾ ಪಕ್ಷಗಳಿಗೂ ಆದೇಶಿಸಿದೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಬಗ್ಗೆ ಅಸಡ್ಡೆ ಮಾಡದಂತೆ ಎಚ್ಚರಿಕೆ ನೀಡಿದ ನಂತರ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ.
ಚುನಾವಣಾ ಸಮಾವೇಶಗಳಲ್ಲಿ, ರ್ಯಾಲಿಗಳಲ್ಲಿ ಜನಸಮೂಹ ಶಿಸ್ತು ಕಾಪಾಡಿಕೊಳ್ಳಲು ವಿಫಲವಾದರೆ, ಅಭ್ಯರ್ಥಿಗಳು ಮತ್ತು ಸಂಘಟಕರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಆಯೋಗವು ರಾಜ್ಯ ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳಿಗೆ ಆದೇಶ ನೀಡಿದೆ.
ಜನಸಮೂಹವು ಶಿಸ್ತು ಕಾಪಾಡುವ ದೃಷ್ಟಿಯಿಂದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮೇಲೆ ಆಯೋಗವು ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮತ್ತು ಚುನಾವಣಾ ಸಮಯದಲ್ಲಿ ಅತ್ಯಂತ ಜಾಗರೂಕತೆ ಮತ್ತು ಕಾಳಜಿಯನ್ನು ಪ್ರದರ್ಶಿಸಬೇಕು ಎಂದು ಚುನಾವಣಾ ಆಯೋಗ ಬಿಹಾರದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳಿಗೂ ಪತ್ರ ಬರೆದಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಚಿರಾಗ್ ಪಾಸ್ವಾನ್ ಪರ ನಿಂತ ತೇಜಸ್ವಿ ಯಾದವ್ – ನಿತೀಶ್ ಕುಮಾರ್ಗೆ ತಲೆನೋವು!
ಸಿಇಒಗಳು ಮತ್ತು ಜಿಲ್ಲಾ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸುವ ಅಭ್ಯರ್ಥಿಗಳ ವಿರುದ್ಧ ಮತ್ತು ಅಂತಹ ಉಲ್ಲಂಘನೆಗಳಿಗೆ ಕಾರಣವಾದ ಸಂಘಟಕರ ವಿರುದ್ಧ ಸೂಕ್ತ ಕ್ರಮ ಮತ್ತು ಸೂಕ್ತವಾದ ದಂಡ ವಿಧಿಸಿ ಶಿಸ್ತುಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಯೋಗವು ಹೇಳಿದೆ.
ಅಕ್ಟೋಬರ್ 9 ರಂದು, ಕೊರೊನಾಗೆ ಸಂಬಂಧಿಸಿದ ಸೂಚನೆಗಳನ್ನು ಎಲ್ಲಾ ಹಂತಗಳಲ್ಲಿ ಅನುಸರಿಸಲು ಚುನಾವಣಾ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಿತ್ತು. ಮಾಸ್ಕ್ಗಳನ್ನು ಧರಿಸುವುದು, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸಲು ತಿಳಿಸಿತ್ತು. ಇಲ್ಲದಿದ್ದರೇ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ಕೂಡ ನೀಡಿತ್ತು.
ಆದರೂ ಕೂಡ, ಸಾರ್ವಜನಿಕ ಸಭೆಗಳು, ಸಮಾವೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ಜನಸಮೂಹವು ಸಾಮಾಜಿಕ ದೂರವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ರಾಜಕೀಯ ಮುಖಂಡರು, ಪ್ರಚಾರಕರು ಮಾಸ್ಕ್ಗಳನ್ನು ಧರಿಸದೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಚುನಾವಣಾ ಆಯೋಗ ಹೊರಡಿಸಿದ ಮಾರ್ಗಸೂಚಿಗಳ ಸಂಪೂರ್ಣ ಉಲ್ಲಂಘನೆಯಾಗಿರುವುದು ಆಯೋಗ ಗಮನಿಸಿದೆ ಎಂದು ತಿಳಿಸಿದೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಮಾತ್ರವಲ್ಲದೆ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸೋಂಕು ಹಬ್ಬಲು ಮತ್ತಷ್ಟು ಕಾರಣವಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.