Homeಕರ್ನಾಟಕಕೋಲಾರ ಮರ್ಯಾದೆಗೇಡು ಹತ್ಯೆ: ಬೆಚ್ಚಿಬೀಳಿಸಿದ ಹೀನಕೃತ್ಯ

ಕೋಲಾರ ಮರ್ಯಾದೆಗೇಡು ಹತ್ಯೆ: ಬೆಚ್ಚಿಬೀಳಿಸಿದ ಹೀನಕೃತ್ಯ

- Advertisement -
- Advertisement -

ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕತ್ತುಹಿಸುಕಿ ಕೊಂದ ಹೃದಯಹೀನ ತಂದೆ, ಸುದ್ದಿ ತಿಳಿದು ರೈಲು ಹಳಿಗೆ ತಲೆಕೊಟ್ಟ ಪ್ರಿಯಕರ.

ಕೋಲಾರ ದಲಿತ ಮತ್ತು ಅಹಿಂದ ಚಳವಳಿಗಳ ನೆಲೆ. ದಲಿತ ಸಂಘರ್ಷ ಸಮಿತಿ ಹಲವು ವರ್ಷಗಳ ಕಾಲ ಸಕ್ರಿಯವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಪ್ರದೇಶವಿದು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಶೋಷಕರ ಜಾತಿ ಅಹಂಕಾರ ಕೊನೆಯಾಗಿಲ್ಲ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ, ತನ್ನ ಮಗಳು ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನುಷ ಮರ್ಯಾದೆಗೇಡು ಹತ್ಯೆ ನಡೆದಿದೆ. ಪ್ರೇಯಸಿಯ ಸಾವಿನ ಸುದ್ದಿ ತಿಳಿದ ಪ್ರಿಯಕರ ರೈಲಿನ ಹಳಿಗೆ ತಲೆ ಕೊಟ್ಟು ಆತನೂ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆಗೆ ಕೋಲಾರ ಸಾಕ್ಷಿಯಾಗಿದೆ.

ಬೋಡಗುರ್ಕಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಯುವಕ ಗಂಗಾಧರ (23) ಮತ್ತು ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ದಲಿತ ಸಮುದಾಯದ ಹುಡುಗನನ್ನು ಮಗಳು ಪ್ರೀತಿಸಿದ್ದಾಳೆ ಎನ್ನುವ ಕಾರಣಕ್ಕೆ ಕುಪಿತಗೊಂಡ ಹೀನ ಜಾತಿವಾದಿ ಮನಸ್ಥಿತಿಯ ತಂದೆ ಕೃಷ್ಣಮೂರ್ತಿ ಜೂನ್ 26ರಂದು ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿದ ಯುವಕ ಜೂನ್ 27ರಂದು ಬಂಗಾರಪೇಟೆ ಬಳಿಯ ಪುರ ಎಂಬಲ್ಲಿ ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕೃಷ್ಣಮೂರ್ತಿಯನ್ನು ಬಂಧಿಸಿದ್ದು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಲೆಯಾದ ಕೀರ್ತಿ ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ಇನ್ನು ದ್ವಿತೀಯ ಪಿಯುಸಿ ಅನುತ್ತೀರ್ಣನಾಗಿದ್ದ ಗಂಗಾಧರ, ತಮಟೆ ಬಾರಿಸುವ ಕಲಾವಿದನಾಗಿದ್ದು ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ. ಅವರಿಬ್ಬರ ಮನೆಗಳು ಒಂದೇ ಬೀದಿಯಲ್ಲಿವೆ. ಬಾಳಿ ಬದುಕಬೇಕಾದ ಎರಡು ಅಮೂಲ್ಯ ಜೀವಗಳು ಕ್ರೂರ ಜಾತಿವ್ಯವಸ್ಥೆಗೆ ಬಲಿಯಾಗಿವೆ. ಎರಡು ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಹುಡುಗಿಯ ಮನೆಯಲ್ಲಿ ಕೊಲೆಗೆ ಸಮರ್ಥನೆಗಳನ್ನು ಹುಡುಕುತ್ತ ಮನಸ್ಸುಗಳು ಗಲಿಬಿಲಿಗೊಂಡಿವೆ. ತಮ್ಮದಲ್ಲದ ತಪ್ಪಿಗೆ ಮನೆಮಗನನ್ನು ಕಳೆದುಕೊಂಡ ಗಂಗಾಧರನ ಮನೆಯಲ್ಲಿ ದುಃಖ ಮಡುಗಟ್ಟಿದೆ.

ಜಾತಿಪ್ರತಿಷ್ಠೆಯ ಹೀನ ಘಟನೆಯ ವಿವರ ಹೀಗಿದೆ..

ದಲಿತ ಸಮುದಾಯಕ್ಕೆ ಸೇರಿದ ಗಂಗಾಧರನ ಕುಟುಂಬದವರು ಸ್ಥಿತಿವಂತರೇನಲ್ಲ; ಎಲ್ಲರೂ ಕೂಲಿಕೆಲಸ ಮಾಡುವವರಾಗಿದ್ದಾರೆ. ಆದರೆ ಯುವತಿ ಕೀರ್ತಿ ಗೊಲ್ಲ ಸಮುದಾಯಕ್ಕೆ ಸೇರಿದ್ದು ಸ್ವಲ್ಪ ಮಟ್ಟಿಗೆ ಸ್ಥಿತಿವಂತರಾಗಿದ್ದಾರೆ. ಇಬ್ಬರೂ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮನೆಯಲ್ಲೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಘಟನೆ ನಡೆಯುವ ಎರಡು ದಿನಗಳ ಮುನ್ನ, ಯುವತಿಯ ಮನೆಯಲ್ಲಿ ಆಕೆಯ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೃಷ್ಣಮೂರ್ತಿ ತನ್ನ ತಂಗಿಯ ಮಗನಿಗೆ ಕೀರ್ತಿಯನ್ನು ಕೊಟ್ಟು ಮದುವೆ ಮಾಡಬೇಕು ಎಂದು ಪ್ರಸ್ತಾಪ ಮಾಡಿದ್ದಾನೆ. ಆಗ ಕೀರ್ತಿ ತಾನು ಗಂಗಾಧರನನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿದ್ದಾಳೆ. ಆಗ ಮನೆಯವರು ವಿರೋಧ ವ್ಯಕ್ತಪಡಿಸಿ ಕೋಲಾಹಲ ಸೃಷ್ಟಿಸಿದ್ದಾರೆ. ಆತ ಜಾತಿಯಿಂದ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದಾನೆ, ಹಾಗೇ ಅವರು ಸ್ಥಿತಿವಂತರೂ ಅಲ್ಲ. ನಿನ್ನನ್ನು ಹೇಗೆ ಸಾಕುತ್ತಾನೆ ಎಂದು ಮಗಳ ಮೇಲೆ ತಂದೆ ಕೃಷ್ಣಮೂರ್ತಿ ಗದರಿದ್ದಾನೆ.

ಜೂನ್ 26ರ ಸೋಮವಾರ ಬೆಳಿಗ್ಗೆ ಕೀರ್ತಿ ತನ್ನ ಪ್ರಿಯಕರ ಗಂಗಾಧರನ ಮನೆ ಬಳಿ ಹೋಗಿ ನಾವಿಬ್ಬರು ಮದುವೆ ಆಗೋಣ, ಮನೆ ಬಿಟ್ಟು ಹೋಗೋಣ ಎಂದು ಕಣ್ಣೀರು ಹಾಕಿದ್ದಾಳೆ. ಇಬ್ಬರ ಮನೆಗಳು ಹತ್ತಿರದಲ್ಲೇ ಇರುವುದರಿಂದ, ತಮ್ಮ ಮಗಳು ಆ ಯುವಕನನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರುವುದನ್ನು ಕಂಡ ಕೀರ್ತಿ ಮನೆಯವರು ಕೋಪಗೊಂಡು ಆಕೆಗೆ ಹೊಡೆದುಬಡಿದು ಮನೆಗೆ ಎಳೆದು ತಂದಿದ್ದಾರೆ. ಆಗಲೇ ಈ ಪ್ರೀತಿಯ ವಿಚಾರ ಯುವಕನ ಮನೆಯಲ್ಲಿ ಗೊತ್ತಾಗಿದೆ. ಆದರೆ ಯುವಕನ ಮನೆಯವರು ಈ ಬಗ್ಗೆ ಏನೂ ಮಾತನಾಡದೇ ಸುಮ್ಮನಾಗಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಪರಿಶಿಷ್ಟ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ; ಯುವಕ ಆತ್ಮಹತ್ಯೆ

ಕೀರ್ತಿ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿ ಗಂಗಾಧರನನ್ನು ಮರೆತುಬಿಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಆದರೆ ಆಕೆ ಗಂಗಾಧರನಿಂದ ದೂರವಾಗಲು ಒಪ್ಪಿರಲಿಲ್ಲ. ಸೋಮವಾರ ಸಂಜೆ ಕೀರ್ತಿ ಹಾಗೂ ಗಂಗಾಧರ ಮನೆ ಬಿಟ್ಟು ಓಡಿಹೋಗುವ ಯೋಜನೆ ಮಾಡಿದ್ದರು ಎನ್ನಲಾಗಿದೆ. ’ನಾಳೆ ನಾವಿಬ್ಬರೂ ಮನೆ ಬಿಟ್ಟು ಓಡಿಹೋಗೋಣ ನಮ್ಮನ್ನು ಒಂದಾಗಲು ಇವರು ಬಿಡುವುದಿಲ್ಲ’ ಎಂದು ಕೀರ್ತಿ ಹೇಳಿದ್ದಾಳೆ. ಈ ಬಗ್ಗೆ ತಿಳಿದ ಆಕೆಯ ತಂದೆ-ತಾಯಿ ಆಕೆಯನ್ನು ತಡೆಯಲೇಬೇಕು ಎಂದು ಹಠಕ್ಕೆ ಬಿದ್ದಿದ್ದರು.

ಸಂಜೆ ಕೀರ್ತಿಯ ತಾಯಿ ಹಸುವಿನ ಹಾಲು ಕರೆಯಲೆಂದು ಹೊರಗಡೆ ಹೋದ ಸಂದರ್ಭದಲ್ಲಿ ಕೀರ್ತಿ ಮನೆ ಬಿಟ್ಟು ಹೋಗಲು ತಯಾರಿ ನಡೆಸಿದ್ದಳು. ಇದನ್ನು ಕಂಡ ತಂದೆ ಕೃಷ್ಣಮೂರ್ತಿ ಮನೆ ಬಿಟ್ಟು ಹೋಗದಂತೆ ತಡೆಯಲು ಪ್ರಯತ್ನಿಸಿದ್ದಾನೆ; ಆದರೆ ಕೀರ್ತಿ ಮಾತ್ರ ಗಂಗಾಧರನ ಜೊತೆಗೆ ಹೋಗುವುದಾಗಿ ಹಟ ಹಿಡಿದಿದ್ದಾಳೆ. ಆಗ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಆ ಬಳಿಕ ಕೃಷ್ಣಮೂರ್ತಿ ತನ್ನ ಅಕ್ಕನ ಗಂಡನಿಗೆ ಕರೆ ಮಾಡಿ, ಮಗಳು ಮೂರು ದಿನದಿಂದ ಊಟ ಮಾಡಿರಲಿಲ್ಲ, ಸುಸ್ತಾಗಿ ಮಲಗಿದ್ದಾಳೆ, ಎದ್ದೇಳುತ್ತಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಮನೆಗೆ ಬಾ ಎಂದು ಹೇಳಿದ್ದಾನೆ. ಊರಿನ ಯಾರಿಂದಲೋ ಮಾಹಿತಿ ಪಡೆದ ಪೊಲೀಸರು ಅಷ್ಟರಲ್ಲಾಗಲೇ ಅಲ್ಲಿಗೆ ಬಂದಿದ್ದಾರೆ. ಕೀರ್ತಿ ಸಾವಿಗೀಡಾಗಿರುವುದನ್ನು ತಿಳಿದು, ಮೃತದೇಹವನ್ನು ಪರೀಕ್ಷೆಗೆ ಕಳುಹಿಸಿ, ಕೃಷ್ಣಮೂತಿಯನ್ನು ಬಂಧಿಸಿದ್ದಾರೆ.

ಮಂಗಳವಾರ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಗಂಗಾಧರನಿಗೆ ತನ್ನ ಪ್ರೇಯಸಿಯ ಕೊಲೆಯಾಗಿರುವ ವಿಚಾರ ತಿಳಿಯುತ್ತದೆ. ಅದೇ ದಿನ ಸಮೀಪದ ಊರಲ್ಲಿದ್ದ ಆತನ ದೊಡ್ಡಮ್ಮನ ಸಾವಾಗಿರುತ್ತದೆ. ಮನೆಯವರೆಲ್ಲ ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದರು. ಗಂಗಾಧರನ ತಂದೆ ತಾಯಿ ಅತ್ತಿಗೆ ಎಲ್ಲರೂ ಅಟೋದಲ್ಲಿ ಹೋಗುತ್ತಿದ್ದರು. ಗಂಗಾಧರ ಹಾಗೂ ಆತನ ಸಹೋದರ ಶ್ರೀನಿವಾಸ ಇಬ್ಬರು ಬೈಕ್ ಮೇಲೆ ಹೋಗಿದ್ದಾರೆ. ದಾರಿ ಮಧ್ಯೆ ರೈಲ್ವೆ ಟ್ರ್ಯಾಕ್ ಸಮೀಪದಲ್ಲಿ ಬೈಕ್‌ನಿಂದ ಇಳಿದ ಗಂಗಾಧರನು ಅಪ್ಪ ಅಮ್ಮನನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾನೆ. ಆಗ ಶ್ರೀನಿವಾಸನು ಮನೆಯವರನ್ನು ಕರೆದುಕೊಂಡು ಬರುವಷ್ಟರಲ್ಲಿ, ಪಕ್ಕದಲ್ಲಿನ ಕಾಡಿನೊಳಗೆ ಗಂಗಾಧರ ಕಾಣೆಯಾಗಿದ್ದಾನೆ. ಶ್ರೀನಿವಾಸ ಹಾಗೂ ಅವರ ತಂದೆ ಗಂಗಾಧರನಿಗಾಗಿ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಕಾಣಿಸಿಲ್ಲ.

ಆನಂತರ ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಬರುವ ಸಂದರ್ಭಕ್ಕೆ ಗಂಗಾಧರ ಕಾಡಿನಿಂದ ಹೊರಬಂದಿದ್ದಾನೆ. ಆಗ ಗಂಗಾಧರನನ್ನು ನೋಡಿದ ಶ್ರೀನಿವಾಸ ಮತ್ತು ಅವರ ತಂದೆ ಗಂಗಾಧರನನ್ನು ಕೂಗಿ ಕರೆದಿದ್ದಾರೆ. ಆದರೆ ಗಂಗಾಧರ ಓಡಿಹೋಗಿ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಗಾಧರನ ಸಾವನ್ನು ಕಣ್ಣಮುಂದೆಯೇ ನೋಡಿದ ಮನೆಯವರು ಆಘಾತಕೊರಳಗಾಗಿದ್ದಾರೆ.

ಈ ಬಗ್ಗೆ ಇತ್ತಿಚೆಗೆ ಕೋಲಾರದಿಂದ ವರ್ಗಾವಣೆಗೊಂಡ ಎಸ್‌ಪಿ ಧರಣಿದೇವಿ ಮಾಲಗತ್ತಿ ಮಾಹಿತಿ ನೀಡಿದ್ದು, “ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಕೀರ್ತಿ ಹಠ ಹಿಡಿದಿದ್ದಳು. ಈ ಸಂಬಂಧ ಯುವತಿಯ ಮನೆಯಲ್ಲಿ ಸೋಮವಾರ ರಾತ್ರಿ ಜಗಳ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಕೃಷ್ಣಮೂರ್ತಿ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದು ಗೊತ್ತಾಗಿ ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಹೇಳಿದ್ದಾರೆ.

ಜಾತಿ, ಅಂತಸ್ತು, ಪ್ರತಿಷ್ಠೆ, ಅಹಂಕಾರ ಮುಂತಾದ ಮನೋವಿಕಾರಗಳಿಂದ ಬಂಧಿಯಾಗಿರುವ ಜನರಿಗೆ ಈ ರಕ್ತ ಸಂಬಂಧ, ಒಡಹುಟ್ಟಿದವರು, ಕರುಳಕುಡಿಗಳು ಎಂಬ ಭಾವನಾತ್ಮಕ ಸಂಬಂಧಗಳು ಕೂಡ ಮರೆಗೆ ಸರಿಯುವುದು ಜಾತಿ ವ್ಯವಸ್ಥಯೆ ಕ್ರೂರ ವಾಸ್ತವ. ಇಂತಹ ಮರ್ಯಾದೆಗೇಡು ಪ್ರಕರಣಗಳಿಗೆ ಕೊನೆಯೇ ಇಲ್ಲವೆಂಬಂತೆ ಹೆಚ್ಚಾಗುತ್ತಿವೆ.

ಭಾರತದಂತಹ ಜಾತಿ ಸಮಾಜದಲ್ಲಿ ನೆಲೆಯೂರಿರುವ ಮರ್ಯಾದಾಹೀನ ಹತ್ಯೆಗಳ ಜಾಢ್ಯದಿಂದ ಹೊರಬರದಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಅರಿವು-ಜಾಗೃತಿಯ ಜೊತೆಜೊತೆಗೆ ಕಾಯ್ದೆ ಕಾನೂನುಗಳನ್ನು ಬಲಗೊಳಿಸಬೇಕಿದೆ. ಈಗಾಗಲೇ ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ಮರ್ಯಾದೆ ಹತ್ಯೆ, ಗುಂಪು ಹಲ್ಲೆ-ಕೊಲೆಗಳನ್ನು ತಡೆಯುವ ಉದ್ದೇಶದಿಂದ ಹೊಸ ಕಾನೂನನ್ನು ರೂಪಿಸಲಾಗಿದೆ. ಮರ್ಯಾದೆ ಹೆಸರಿನಲ್ಲಿ ನಡೆಯುವ ಘಟನೆಗಳಿಗೆ ಜಾಮೀನು ರಹಿತ, 5 ಲಕ್ಷದವರೆಗಿನ ದಂಡ ವಿಧಿಸುವ ಜೊತೆಗೆ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವಿದೆ. ಮರ್ಯಾದೆ ಹೆಸರಿನ ಹಿಂಸಾಚಾರ ಮತ್ತು ಕ್ರಿಮಿನಲ್ ಬೆದರಿಕೆಗಳನ್ನು ಕಠಿಣವಾಗಿ ಶಿಕ್ಷಿಸುವುದು ಇದರ ಉದ್ದೇಶ ಎಂದು ಅಲ್ಲಿನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದೇ ರೀತಿಯ ಕಾನೂನುಗಳನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸುವ ತುರ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...