ಎಸ್ಸಿಎಸ್ಪಿ, ಟಿಎಸ್ಪಿ (ಪರಿಶಿಷ್ಟ ಜಾತಿ ಉಪಯೋಜನೆ/ ಪರಿಶಿಷ್ಟ ಪಂಗಡ ಉಪಯೋಜನೆ) ಯೋಜನೆಯ ಸೆಕ್ಷನ್ 7D ಯನ್ನು ತೆಗೆದುಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ದಲಿತರ ಜನಸಂಖ್ಯೆಯನ್ನು ಆಧರಿಸಿ ಅನುದಾನ ನೀಡುವುದಕ್ಕಾಗಿ ಈ ಉಪ ಹಂಚಿಕೆ ಅಧಿನಿಯಮ 2013 ಅನ್ನು ಜಾರಿಗೆ ತಂದ ಶ್ರೇಯ ನಮ್ಮದು. ಇದರ ಅನ್ವಯ ಎಲ್ಲಾ ಇಲಾಖೆಗಳಲ್ಲಿ 24.1% ರಷ್ಟು ಹಣವನ್ನು ಪ.ಜಾ ಮತ್ತು ಪ. ಪಂಗಡದ ಜನರ ಕಲ್ಯಾಣಕ್ಕೆ ಮೀಸಲಿಡಬೇಕು. ಆರಂಭದಲ್ಲಿ 8,908 ಕೋಟಿ ರೂ ಇದ್ದ ಹಂಚಿಕೆ 23ರ ಫೆಬ್ರವರಿಯಲ್ಲಿ ಅಂದರೆ ಹಿಂದಿನ ಸರ್ಕಾರದ ಬಜೆಟ್ ನಲ್ಲಿ 30,215 ಕೋಟಿ ರೂ ಹಂಚಿಕೆ ಮಾಡಿತ್ತು.
ನಮ್ಮ ಈ ಆಯವ್ಯಯದಲ್ಲಿ ಪ.ಜಾತಿಗಳಿಗೆ 24,333 ಹಾಗೂ ಪ.ಪಂಗಡಗಳಿಗೆ 9,960 ಕೋಟಿ ರೂ ಮೀಸಲಿಡುತ್ತಿದ್ದೇವೆ. ಹಾಗಾಗಿ ಒಟ್ಟು 34,294 ಕೋಟಿ ರೂ ಅನುದಾನ ಮೀಸಲಿಟ್ಟಿದ್ದು ನಮ್ಮ ಸರ್ಕಾರ 4,079 ಕೋಟಿ ರೂ ಹೆಚ್ಚುವರಿ ಅನುದಾನ ಒದಗಿಸುತ್ತೇನೆ. ದಲಿತರ ಅಭ್ಯುದಯಕ್ಕೆ ಇದು ನಮ್ಮ ಆದ್ಯತೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಎಸ್ಸಿಪಿ, ಟಿಎಸ್ಪಿ ಅನುದಾಯ ದಲಿತ ಸಮುದಾಯದ ಒಳಿತಿಗೆ ಬಳಕೆಯಾಗಬೇಕು. ಆದರೆ 7ಡಿ ಹೆಸರಲ್ಲಿ ದುರುಪಯೋಗವಾಗುತ್ತಿದೆ ಎಂದು ದಲಿತ ಸಂಘಟನೆಗಳು ಮತ್ತು ಚಿಂತಕರ ಒತ್ತಾಯದ ಅನ್ವಯ ಸೆಕ್ಷನ್ 7 ಡಿಯನ್ನು ಕೈಬಿಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಏನಿದು 7ಡಿ?
ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಂದು ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆ ಹೇಳುತ್ತದೆ. ಆದರೆ ಅದೇ ಕಾಯ್ದೆಯಲ್ಲಿನ ಸೆಕ್ಷನ್ 7(ಡಿ) ಅಂದರೆ ಡೀಮ್ಡ್ ಎಕ್ಸ್ಪೆಂಡೆಚರ್ ಎಂದು ಅನುದಾನವನ್ನು ಸಬ್ ಅಲೋಕೇಷನ್ ಮಾಡುವುದಾಗಿದೆ. ಅದರ ಅಡಿಯಲ್ಲಿ ಬೇರೆ ಉದ್ದೇಶಗಳಿಗೆ ಹಣ ದುರ್ಬಳಕೆಯಾಗುತ್ತಿರುವುದು ಹೆಚ್ಚುತ್ತಿದೆ. ರಸ್ತೆ, ನೀರಾವರಿಯಂತಹ ಯೋಜನೆಗಳಿಗೆ ಅನುದಾನವನ್ನು ಬಳಸಿ ಆ ರಸ್ತೆಗಳನ್ನು ದಲಿತರು ಸಹ ಬಳಸುತ್ತಾರೆ ಎಂದು ಸಮಜಾಯಿಸಿ ಕೊಡಲಾಗುತ್ತಿತ್ತು. ಹಾಗಾಗಿ ಈ ಸೆಕ್ಷನ್ 7ಡಿಯನ್ನು ತೆಗೆದುಹಾಕಬೇಕೆಂದು ದಲಿತ ಸಂಘಟನೆಗಳು ಒತ್ತಾಯಿಸುತ್ತಿದ್ದರು.
ಇದನ್ನೂ ಓದಿ: ’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!