Homeಕರ್ನಾಟಕಕೋಲಾರ ಮರ್ಯಾದೆಗೇಡು ಹತ್ಯೆ: ಬೆಚ್ಚಿಬೀಳಿಸಿದ ಹೀನಕೃತ್ಯ

ಕೋಲಾರ ಮರ್ಯಾದೆಗೇಡು ಹತ್ಯೆ: ಬೆಚ್ಚಿಬೀಳಿಸಿದ ಹೀನಕೃತ್ಯ

- Advertisement -
- Advertisement -

ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕತ್ತುಹಿಸುಕಿ ಕೊಂದ ಹೃದಯಹೀನ ತಂದೆ, ಸುದ್ದಿ ತಿಳಿದು ರೈಲು ಹಳಿಗೆ ತಲೆಕೊಟ್ಟ ಪ್ರಿಯಕರ.

ಕೋಲಾರ ದಲಿತ ಮತ್ತು ಅಹಿಂದ ಚಳವಳಿಗಳ ನೆಲೆ. ದಲಿತ ಸಂಘರ್ಷ ಸಮಿತಿ ಹಲವು ವರ್ಷಗಳ ಕಾಲ ಸಕ್ರಿಯವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಪ್ರದೇಶವಿದು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಶೋಷಕರ ಜಾತಿ ಅಹಂಕಾರ ಕೊನೆಯಾಗಿಲ್ಲ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ, ತನ್ನ ಮಗಳು ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನುಷ ಮರ್ಯಾದೆಗೇಡು ಹತ್ಯೆ ನಡೆದಿದೆ. ಪ್ರೇಯಸಿಯ ಸಾವಿನ ಸುದ್ದಿ ತಿಳಿದ ಪ್ರಿಯಕರ ರೈಲಿನ ಹಳಿಗೆ ತಲೆ ಕೊಟ್ಟು ಆತನೂ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆಗೆ ಕೋಲಾರ ಸಾಕ್ಷಿಯಾಗಿದೆ.

ಬೋಡಗುರ್ಕಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಯುವಕ ಗಂಗಾಧರ (23) ಮತ್ತು ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ದಲಿತ ಸಮುದಾಯದ ಹುಡುಗನನ್ನು ಮಗಳು ಪ್ರೀತಿಸಿದ್ದಾಳೆ ಎನ್ನುವ ಕಾರಣಕ್ಕೆ ಕುಪಿತಗೊಂಡ ಹೀನ ಜಾತಿವಾದಿ ಮನಸ್ಥಿತಿಯ ತಂದೆ ಕೃಷ್ಣಮೂರ್ತಿ ಜೂನ್ 26ರಂದು ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿದ ಯುವಕ ಜೂನ್ 27ರಂದು ಬಂಗಾರಪೇಟೆ ಬಳಿಯ ಪುರ ಎಂಬಲ್ಲಿ ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕೃಷ್ಣಮೂರ್ತಿಯನ್ನು ಬಂಧಿಸಿದ್ದು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಲೆಯಾದ ಕೀರ್ತಿ ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ಇನ್ನು ದ್ವಿತೀಯ ಪಿಯುಸಿ ಅನುತ್ತೀರ್ಣನಾಗಿದ್ದ ಗಂಗಾಧರ, ತಮಟೆ ಬಾರಿಸುವ ಕಲಾವಿದನಾಗಿದ್ದು ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ. ಅವರಿಬ್ಬರ ಮನೆಗಳು ಒಂದೇ ಬೀದಿಯಲ್ಲಿವೆ. ಬಾಳಿ ಬದುಕಬೇಕಾದ ಎರಡು ಅಮೂಲ್ಯ ಜೀವಗಳು ಕ್ರೂರ ಜಾತಿವ್ಯವಸ್ಥೆಗೆ ಬಲಿಯಾಗಿವೆ. ಎರಡು ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಹುಡುಗಿಯ ಮನೆಯಲ್ಲಿ ಕೊಲೆಗೆ ಸಮರ್ಥನೆಗಳನ್ನು ಹುಡುಕುತ್ತ ಮನಸ್ಸುಗಳು ಗಲಿಬಿಲಿಗೊಂಡಿವೆ. ತಮ್ಮದಲ್ಲದ ತಪ್ಪಿಗೆ ಮನೆಮಗನನ್ನು ಕಳೆದುಕೊಂಡ ಗಂಗಾಧರನ ಮನೆಯಲ್ಲಿ ದುಃಖ ಮಡುಗಟ್ಟಿದೆ.

ಜಾತಿಪ್ರತಿಷ್ಠೆಯ ಹೀನ ಘಟನೆಯ ವಿವರ ಹೀಗಿದೆ..

ದಲಿತ ಸಮುದಾಯಕ್ಕೆ ಸೇರಿದ ಗಂಗಾಧರನ ಕುಟುಂಬದವರು ಸ್ಥಿತಿವಂತರೇನಲ್ಲ; ಎಲ್ಲರೂ ಕೂಲಿಕೆಲಸ ಮಾಡುವವರಾಗಿದ್ದಾರೆ. ಆದರೆ ಯುವತಿ ಕೀರ್ತಿ ಗೊಲ್ಲ ಸಮುದಾಯಕ್ಕೆ ಸೇರಿದ್ದು ಸ್ವಲ್ಪ ಮಟ್ಟಿಗೆ ಸ್ಥಿತಿವಂತರಾಗಿದ್ದಾರೆ. ಇಬ್ಬರೂ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮನೆಯಲ್ಲೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಘಟನೆ ನಡೆಯುವ ಎರಡು ದಿನಗಳ ಮುನ್ನ, ಯುವತಿಯ ಮನೆಯಲ್ಲಿ ಆಕೆಯ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೃಷ್ಣಮೂರ್ತಿ ತನ್ನ ತಂಗಿಯ ಮಗನಿಗೆ ಕೀರ್ತಿಯನ್ನು ಕೊಟ್ಟು ಮದುವೆ ಮಾಡಬೇಕು ಎಂದು ಪ್ರಸ್ತಾಪ ಮಾಡಿದ್ದಾನೆ. ಆಗ ಕೀರ್ತಿ ತಾನು ಗಂಗಾಧರನನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿದ್ದಾಳೆ. ಆಗ ಮನೆಯವರು ವಿರೋಧ ವ್ಯಕ್ತಪಡಿಸಿ ಕೋಲಾಹಲ ಸೃಷ್ಟಿಸಿದ್ದಾರೆ. ಆತ ಜಾತಿಯಿಂದ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದಾನೆ, ಹಾಗೇ ಅವರು ಸ್ಥಿತಿವಂತರೂ ಅಲ್ಲ. ನಿನ್ನನ್ನು ಹೇಗೆ ಸಾಕುತ್ತಾನೆ ಎಂದು ಮಗಳ ಮೇಲೆ ತಂದೆ ಕೃಷ್ಣಮೂರ್ತಿ ಗದರಿದ್ದಾನೆ.

ಜೂನ್ 26ರ ಸೋಮವಾರ ಬೆಳಿಗ್ಗೆ ಕೀರ್ತಿ ತನ್ನ ಪ್ರಿಯಕರ ಗಂಗಾಧರನ ಮನೆ ಬಳಿ ಹೋಗಿ ನಾವಿಬ್ಬರು ಮದುವೆ ಆಗೋಣ, ಮನೆ ಬಿಟ್ಟು ಹೋಗೋಣ ಎಂದು ಕಣ್ಣೀರು ಹಾಕಿದ್ದಾಳೆ. ಇಬ್ಬರ ಮನೆಗಳು ಹತ್ತಿರದಲ್ಲೇ ಇರುವುದರಿಂದ, ತಮ್ಮ ಮಗಳು ಆ ಯುವಕನನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರುವುದನ್ನು ಕಂಡ ಕೀರ್ತಿ ಮನೆಯವರು ಕೋಪಗೊಂಡು ಆಕೆಗೆ ಹೊಡೆದುಬಡಿದು ಮನೆಗೆ ಎಳೆದು ತಂದಿದ್ದಾರೆ. ಆಗಲೇ ಈ ಪ್ರೀತಿಯ ವಿಚಾರ ಯುವಕನ ಮನೆಯಲ್ಲಿ ಗೊತ್ತಾಗಿದೆ. ಆದರೆ ಯುವಕನ ಮನೆಯವರು ಈ ಬಗ್ಗೆ ಏನೂ ಮಾತನಾಡದೇ ಸುಮ್ಮನಾಗಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಪರಿಶಿಷ್ಟ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ; ಯುವಕ ಆತ್ಮಹತ್ಯೆ

ಕೀರ್ತಿ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿ ಗಂಗಾಧರನನ್ನು ಮರೆತುಬಿಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಆದರೆ ಆಕೆ ಗಂಗಾಧರನಿಂದ ದೂರವಾಗಲು ಒಪ್ಪಿರಲಿಲ್ಲ. ಸೋಮವಾರ ಸಂಜೆ ಕೀರ್ತಿ ಹಾಗೂ ಗಂಗಾಧರ ಮನೆ ಬಿಟ್ಟು ಓಡಿಹೋಗುವ ಯೋಜನೆ ಮಾಡಿದ್ದರು ಎನ್ನಲಾಗಿದೆ. ’ನಾಳೆ ನಾವಿಬ್ಬರೂ ಮನೆ ಬಿಟ್ಟು ಓಡಿಹೋಗೋಣ ನಮ್ಮನ್ನು ಒಂದಾಗಲು ಇವರು ಬಿಡುವುದಿಲ್ಲ’ ಎಂದು ಕೀರ್ತಿ ಹೇಳಿದ್ದಾಳೆ. ಈ ಬಗ್ಗೆ ತಿಳಿದ ಆಕೆಯ ತಂದೆ-ತಾಯಿ ಆಕೆಯನ್ನು ತಡೆಯಲೇಬೇಕು ಎಂದು ಹಠಕ್ಕೆ ಬಿದ್ದಿದ್ದರು.

ಸಂಜೆ ಕೀರ್ತಿಯ ತಾಯಿ ಹಸುವಿನ ಹಾಲು ಕರೆಯಲೆಂದು ಹೊರಗಡೆ ಹೋದ ಸಂದರ್ಭದಲ್ಲಿ ಕೀರ್ತಿ ಮನೆ ಬಿಟ್ಟು ಹೋಗಲು ತಯಾರಿ ನಡೆಸಿದ್ದಳು. ಇದನ್ನು ಕಂಡ ತಂದೆ ಕೃಷ್ಣಮೂರ್ತಿ ಮನೆ ಬಿಟ್ಟು ಹೋಗದಂತೆ ತಡೆಯಲು ಪ್ರಯತ್ನಿಸಿದ್ದಾನೆ; ಆದರೆ ಕೀರ್ತಿ ಮಾತ್ರ ಗಂಗಾಧರನ ಜೊತೆಗೆ ಹೋಗುವುದಾಗಿ ಹಟ ಹಿಡಿದಿದ್ದಾಳೆ. ಆಗ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಆ ಬಳಿಕ ಕೃಷ್ಣಮೂರ್ತಿ ತನ್ನ ಅಕ್ಕನ ಗಂಡನಿಗೆ ಕರೆ ಮಾಡಿ, ಮಗಳು ಮೂರು ದಿನದಿಂದ ಊಟ ಮಾಡಿರಲಿಲ್ಲ, ಸುಸ್ತಾಗಿ ಮಲಗಿದ್ದಾಳೆ, ಎದ್ದೇಳುತ್ತಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಮನೆಗೆ ಬಾ ಎಂದು ಹೇಳಿದ್ದಾನೆ. ಊರಿನ ಯಾರಿಂದಲೋ ಮಾಹಿತಿ ಪಡೆದ ಪೊಲೀಸರು ಅಷ್ಟರಲ್ಲಾಗಲೇ ಅಲ್ಲಿಗೆ ಬಂದಿದ್ದಾರೆ. ಕೀರ್ತಿ ಸಾವಿಗೀಡಾಗಿರುವುದನ್ನು ತಿಳಿದು, ಮೃತದೇಹವನ್ನು ಪರೀಕ್ಷೆಗೆ ಕಳುಹಿಸಿ, ಕೃಷ್ಣಮೂತಿಯನ್ನು ಬಂಧಿಸಿದ್ದಾರೆ.

ಮಂಗಳವಾರ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಗಂಗಾಧರನಿಗೆ ತನ್ನ ಪ್ರೇಯಸಿಯ ಕೊಲೆಯಾಗಿರುವ ವಿಚಾರ ತಿಳಿಯುತ್ತದೆ. ಅದೇ ದಿನ ಸಮೀಪದ ಊರಲ್ಲಿದ್ದ ಆತನ ದೊಡ್ಡಮ್ಮನ ಸಾವಾಗಿರುತ್ತದೆ. ಮನೆಯವರೆಲ್ಲ ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದರು. ಗಂಗಾಧರನ ತಂದೆ ತಾಯಿ ಅತ್ತಿಗೆ ಎಲ್ಲರೂ ಅಟೋದಲ್ಲಿ ಹೋಗುತ್ತಿದ್ದರು. ಗಂಗಾಧರ ಹಾಗೂ ಆತನ ಸಹೋದರ ಶ್ರೀನಿವಾಸ ಇಬ್ಬರು ಬೈಕ್ ಮೇಲೆ ಹೋಗಿದ್ದಾರೆ. ದಾರಿ ಮಧ್ಯೆ ರೈಲ್ವೆ ಟ್ರ್ಯಾಕ್ ಸಮೀಪದಲ್ಲಿ ಬೈಕ್‌ನಿಂದ ಇಳಿದ ಗಂಗಾಧರನು ಅಪ್ಪ ಅಮ್ಮನನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾನೆ. ಆಗ ಶ್ರೀನಿವಾಸನು ಮನೆಯವರನ್ನು ಕರೆದುಕೊಂಡು ಬರುವಷ್ಟರಲ್ಲಿ, ಪಕ್ಕದಲ್ಲಿನ ಕಾಡಿನೊಳಗೆ ಗಂಗಾಧರ ಕಾಣೆಯಾಗಿದ್ದಾನೆ. ಶ್ರೀನಿವಾಸ ಹಾಗೂ ಅವರ ತಂದೆ ಗಂಗಾಧರನಿಗಾಗಿ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಕಾಣಿಸಿಲ್ಲ.

ಆನಂತರ ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಬರುವ ಸಂದರ್ಭಕ್ಕೆ ಗಂಗಾಧರ ಕಾಡಿನಿಂದ ಹೊರಬಂದಿದ್ದಾನೆ. ಆಗ ಗಂಗಾಧರನನ್ನು ನೋಡಿದ ಶ್ರೀನಿವಾಸ ಮತ್ತು ಅವರ ತಂದೆ ಗಂಗಾಧರನನ್ನು ಕೂಗಿ ಕರೆದಿದ್ದಾರೆ. ಆದರೆ ಗಂಗಾಧರ ಓಡಿಹೋಗಿ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಗಾಧರನ ಸಾವನ್ನು ಕಣ್ಣಮುಂದೆಯೇ ನೋಡಿದ ಮನೆಯವರು ಆಘಾತಕೊರಳಗಾಗಿದ್ದಾರೆ.

ಈ ಬಗ್ಗೆ ಇತ್ತಿಚೆಗೆ ಕೋಲಾರದಿಂದ ವರ್ಗಾವಣೆಗೊಂಡ ಎಸ್‌ಪಿ ಧರಣಿದೇವಿ ಮಾಲಗತ್ತಿ ಮಾಹಿತಿ ನೀಡಿದ್ದು, “ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಕೀರ್ತಿ ಹಠ ಹಿಡಿದಿದ್ದಳು. ಈ ಸಂಬಂಧ ಯುವತಿಯ ಮನೆಯಲ್ಲಿ ಸೋಮವಾರ ರಾತ್ರಿ ಜಗಳ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಕೃಷ್ಣಮೂರ್ತಿ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದು ಗೊತ್ತಾಗಿ ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಹೇಳಿದ್ದಾರೆ.

ಜಾತಿ, ಅಂತಸ್ತು, ಪ್ರತಿಷ್ಠೆ, ಅಹಂಕಾರ ಮುಂತಾದ ಮನೋವಿಕಾರಗಳಿಂದ ಬಂಧಿಯಾಗಿರುವ ಜನರಿಗೆ ಈ ರಕ್ತ ಸಂಬಂಧ, ಒಡಹುಟ್ಟಿದವರು, ಕರುಳಕುಡಿಗಳು ಎಂಬ ಭಾವನಾತ್ಮಕ ಸಂಬಂಧಗಳು ಕೂಡ ಮರೆಗೆ ಸರಿಯುವುದು ಜಾತಿ ವ್ಯವಸ್ಥಯೆ ಕ್ರೂರ ವಾಸ್ತವ. ಇಂತಹ ಮರ್ಯಾದೆಗೇಡು ಪ್ರಕರಣಗಳಿಗೆ ಕೊನೆಯೇ ಇಲ್ಲವೆಂಬಂತೆ ಹೆಚ್ಚಾಗುತ್ತಿವೆ.

ಭಾರತದಂತಹ ಜಾತಿ ಸಮಾಜದಲ್ಲಿ ನೆಲೆಯೂರಿರುವ ಮರ್ಯಾದಾಹೀನ ಹತ್ಯೆಗಳ ಜಾಢ್ಯದಿಂದ ಹೊರಬರದಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಅರಿವು-ಜಾಗೃತಿಯ ಜೊತೆಜೊತೆಗೆ ಕಾಯ್ದೆ ಕಾನೂನುಗಳನ್ನು ಬಲಗೊಳಿಸಬೇಕಿದೆ. ಈಗಾಗಲೇ ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ಮರ್ಯಾದೆ ಹತ್ಯೆ, ಗುಂಪು ಹಲ್ಲೆ-ಕೊಲೆಗಳನ್ನು ತಡೆಯುವ ಉದ್ದೇಶದಿಂದ ಹೊಸ ಕಾನೂನನ್ನು ರೂಪಿಸಲಾಗಿದೆ. ಮರ್ಯಾದೆ ಹೆಸರಿನಲ್ಲಿ ನಡೆಯುವ ಘಟನೆಗಳಿಗೆ ಜಾಮೀನು ರಹಿತ, 5 ಲಕ್ಷದವರೆಗಿನ ದಂಡ ವಿಧಿಸುವ ಜೊತೆಗೆ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವಿದೆ. ಮರ್ಯಾದೆ ಹೆಸರಿನ ಹಿಂಸಾಚಾರ ಮತ್ತು ಕ್ರಿಮಿನಲ್ ಬೆದರಿಕೆಗಳನ್ನು ಕಠಿಣವಾಗಿ ಶಿಕ್ಷಿಸುವುದು ಇದರ ಉದ್ದೇಶ ಎಂದು ಅಲ್ಲಿನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದೇ ರೀತಿಯ ಕಾನೂನುಗಳನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸುವ ತುರ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...