ಬಿಜೆಪಿಗೆ ಕಷ್ಟದ ನೆಲೆ ಎನ್ನಲಾಗುವ ಬೆಂಗಳೂರು ಗ್ರಾಮಾಂತರದಲ್ಲಿ 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಎರಡು ಸ್ಥಾನಗಳಲ್ಲಿ ಗೆದ್ದಿತ್ತು. ಹೊಸಕೇಟೆ ಕ್ಷೇತ್ರದಲ್ಲಿ ಗೆದ್ದಿದ್ದ ಎಂಟಿಬಿ ನಾಗರಾಜ್ 2019ರ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಹೋಗಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಎದುರು ಸೋಲು ಅನುಭವಿಸಿದ್ದರು. 2023ರ ಸದರಿ ಚುನಾವಣೆಯಲ್ಲಿಯೂ ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ಎದುರು ಸೋಲು ಕಂಡಿದ್ದಾರೆ.
ಈ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನದಲ್ಲಿ ಗೆಲುವು ಕಂಡಿದ್ದರೆ ಬಿಜೆಪಿ 1 ಕ್ಷೇತ್ರದಲ್ಲಿ ಗೆದ್ದಿದೆ. ಜೆಡಿಎಸ್ ತನ್ನ ಕ್ಷೇತ್ರಗಳನ್ನು ಕಳೆದುಕೊಂಡಿದೆ.
1. ಹೊಸಕೋಟೆ: ಕಾಂಗ್ರೆಸ್ ಪಕ್ಷದ ಶರತ್ ಬಚ್ಚೇಗೌಡ ಬಿಜೆಪಿಯ ಎನ್ ನಾಗರಾಜ್ (ಎಂಟಿಬಿ) ವಿರುದ್ಧ ಗೆಲುವು ಸಾಧಿಸಿದ್ದಾರೆ.
2. ದೊಡ್ಡಬಳ್ಳಾಪುರ: ಕ್ಷೇತ್ರಕ್ಕೆ ಅಚ್ಚರಿ ಎಂಟ್ರಿ ನೀಡಿದ್ದ ಧೀರಜ್ ಮುನಿರಾಜ್ (82371) ಕಾಂಗ್ರೆಸ್ನ ವೆಂಕಟರಮಣಯ್ಯನವರನ್ನು (51039) 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಜೆಡಿಎಸ್ನ ಮುನೇಗೌಡ (37616) ಮೂರನೇ ಸ್ಥಾನದಲ್ಲಿದ್ದಾರೆ.
3. ದೇವನಹಳ್ಳಿ: ದೀರ್ಘ ಕಾಲದವರೆಗೆ ಸಂಸದರಾಗಿದ್ದ ಕೆ ಎಚ್ ಮುನಿಯಪ್ಪನವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ದೇವನಹಳ್ಳಿಯಿಂದ ಸ್ಪರ್ಧಿಸಿದ್ದ ಅವರು ಜೆಡಿಎಸ್ನ ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿಯವರಿಂದ (65048) ತೀವ್ರ ಪೈಪೋಟಿ ಎದುರಿಸಿದ್ದರು. ಕೊನೆಗೂ ಮುನಿಯಪ್ಪನವರು ಗೆಲುವಿನ (69324) ನಗೆ ಬೀರಿದ್ದಾರೆ. ಕೆ ಎಚ್ ಮುನಿಯಪ್ಪನವರ ಮಗಳು ರೂಪಕಲಾ ಶಶಿಧರ್ ಅವರು ಕೋಲಾರ ಜಿಲ್ಲೆಯ ಕೆಜಿಎಫ್ನಿಂದ ಕಾಂಗ್ರೆಸ್ ಶಾಸಕಿಯಾಗಿ ಗೆದ್ದಿರುವುದು ವಿಶೇಷ. ಬಿಜೆಪಿಯ ಪಿಳ್ಳ ಮುನಿಶಾಮಪ್ಪ (33331) ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
4. ನೆಲಮಂಗಲ: ಕಾಂಗ್ರೆಸ್ನ ಎನ್ ಶ್ರೀನಿವಾಸಯ್ಯ (80537) ಜೆಡಿಎಸ್ನ ಹಾಲಿ ಶಾಸಕ ಕೆ ಶ್ರೀನಿವಾಸಮೂರ್ತಿ (49806) ಎದುರು ಸುಲಭ ಗೆಲುವು ಕಂಡಿದ್ದಾರೆ. ಬಿಜೆಪಿಯ ಸಪ್ತಗಿರಿ ಶಂಕರ್ (29279) ಮೂರನೇ ಸ್ಥಾನದಲ್ಲಿದ್ದಾರೆ.