Homeಕರ್ನಾಟಕಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿ.ವಿ: ಒಳಜಗಳದ ಒಳಸುಳಿಗಳು

ಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿ.ವಿ: ಒಳಜಗಳದ ಒಳಸುಳಿಗಳು

- Advertisement -
- Advertisement -

ಮುತ್ತುರಾಜ್ |

ಶೈಕ್ಷಣಿಕವಾಗಿ ಹಿಂದುಳಿದಿರುವ ಬಳ್ಳಾರಿ ಜಿಲ್ಲೆಯಲ್ಲಿ ಹೊಸ ಶಿಕ್ಷಣ ಕ್ರಾಂತಿಯನ್ನು ಮಾಡಬೇಕೆಂಬ ಆಶಯದೊಂದಿಗೆ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವನ್ನು 2010ರಲ್ಲಿ ಆರಂಭಿಸಲಾಯಿತು. ಕೊಪ್ಪಳ ಮತ್ತು ಬಳ್ಳಾರಿ ಎರಡು ಜಿಲ್ಲೆಗಳಲ್ಲಿ ಅಧಿಕಾರ ವ್ಯಾಪ್ತಿ ಹೊಂದಿರುವ, ಬಳ್ಳಾರಿಯ ವಿನಾಯಕನಗರದಲ್ಲಿ 100 ಎಕರೆ ವಿಶಾಲ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಈ ವಿ.ವಿಯು ಶುರುವಾಗಿ 9 ವರ್ಷ ಆದರೂ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಸಫಲವಾಗಿಲ್ಲ. ಅಷ್ಟರಲ್ಲಾಗಲೇ ವಿ.ವಿಯು ನೇಮಕಾತಿ ಗೊಂದಲದಿಂದ ನಲುಗುತ್ತಿದ್ದು ಇಲ್ಲಿನ ಒಳಜಗಳ ಬೀದಿಗೆ ಬಂದುನಿಂತಿದೆ. ಗುಣಮಟ್ಟದ ಉನ್ನತ ಶಿಕ್ಷಣದ ಕನಸೊತ್ತು ಬರುವ ವಿದ್ಯಾರ್ಥಿಗಳ ಪಾಲಿಗೆ ಇದು ನಿಜವಾಗಲೂ ಸಮಗ್ರ ವಿ.ವಿ ಅನಿಸಿಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಕಳೆದ ಹದಿನೈದು ದಿನಗಳಿಂದ ಕೃಷ್ಣದೇವರಾಯ ವಿ.ವಿಯಲ್ಲಿ ನಡೆಯುವ ಜಗಳಗಳು ದಿನಪತ್ರಿಕೆ, ಟಿವಿಗಳಿಗೆ ಆಹಾರವಾಗತೊಡಗಿವೆ. ಕುಲಪತಿ ಪ್ರೊ.ಎಂ.ಎಸ್ ಸುಭಾಷ್‍ರವರು ಕುಲಸಚಿವರಾದ ಪ್ರೊ.ಬಿ.ಕೆ ತುಳಸಿಮಾಲರವರನ್ನು ಪತ್ರಿಕಾಗೋಷ್ಠಿಯಿಂದ ಎದ್ದು ನಡಿಯಿರಿ ಎಂದದ್ದು ಇನ್ನು ಚರ್ಚೆಯಾಗುತ್ತಲೆ ಇದೆ. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ನೇಮಕಾತಿ ವಿಚಾರದಲ್ಲಿ ದೊಡ್ಡ ಮಾರಾಮಾರಿಯೆ ನಡೆಯುತ್ತಿದೆ.

ಏನಿದು ವಿವಾದ?
ವಿ.ವಿಯು 2012 ರಲ್ಲಿ 134 ಬೋಧಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಮುಂದಾಗಿತ್ತು. 80% ಹೈದರಾಬಾದ್ ಕರ್ನಾಟಕದವರಿಗೆ ಮತ್ತು ಉಳಿದ ಹುದ್ದೆಗಳು ಜನರಲ್ ಮೆರಿಟ್ ಎಂದು ನಿರ್ಧರಿಸಲಾಗಿತ್ತು. ಶೇ.20 ಜನರಲ್ ಹುದ್ದೆಗಳು ನೇಮಕಗೊಂಡವೇ ಹೊರತು ಹೈ.ಕ ಭಾಗದವರಿಗೆ ದಕ್ಕಬೇಕಾಗಿದ್ದ 80% ಹುದ್ದೆಗಳು ಹಾಗೆ ಉಳಿದವು. ಹೈ.ಕ ದವರಿಗೆ ದಕ್ಕಬೇಕಿದ್ದ ಜೊತೆಗೆ 45 ಬೋಧಕೇತರ ಸಿಬ್ಬಂದಿ ನೇಮಕಾತಿಯೂ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಕುಲಪತಿಗಳು ಈ ಹುದ್ದೆಗಳ ಭರ್ತಿಗೆ ಮುಂದಾಗಿದ್ದು 2018ರಲ್ಲೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದರು. ಆಗ ಮಧ್ಯ ಪ್ರವೇಶಿಸಿದ ಕೆಲವರು ಕುಲಪತಿಗಳ ಹುದ್ದೆ ಇನ್ನೇನು ಮುಗಿಯಲಿದೆ, ಚುನಾವಣೆ ಹತ್ತಿರ ಬಂದಿರುವಾಗ ನೇಮಕಾತಿ ನಡೆಯಬಾರದೆಂದು ಕೊಕ್ಕು ಹಾಕಿದರು.
ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಕುಲಪತಿಗಳು ಸರ್ಕಾರಕ್ಕೆ ಪತ್ರ ಬರೆದು 371ಜೆ ಮೀಸಲಾತಿಗೆ ಅನ್ಯಾಯವಾಗುತ್ತಿದೆ, ಹಾಗಾಗಿ ತುರ್ತು ನೇಮಕಾತಿ ನಡೆಯಬೇಕೆಂದು ಕೋರಿದರು. ಇದಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಸಿರು ನಿಶಾನೆ ತೋರಿದ್ದರು. ಅಷ್ಟು ಮಾತ್ರವಲ್ಲ ಈ ವಿಷಯಕ್ಕೆ ಚುನಾವಣಾ ಆಯೋಗ ಸಲ್ಲಿಸಿದ್ದ ನೀತಿಸಂಹಿತೆ ಉಲ್ಲಂಘನೆಯ ಅರ್ಜಿಯನ್ನು ಹೈ ಕೋರ್ಟ್ ವಜಾ ಮಾಡಿ ನೇಮಕಾತಿಗೆ ಚುನಾವಣಾ ನೀತಿಸಂಹಿತೆ ಅಡ್ಡಿ ಬರುವುದಿಲ್ಲ ಎಂದು ತೀರ್ಪು ನೀಡಿತ್ತು. ಇದರಿಂದ ಬೋಧಕ ಸಿಬ್ಬಂದಿಯ ನೇಮಕಾತಿಯು ನಡೆಯಿತು. ಈಗ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯೂ ಚಾಲನೆಯಲ್ಲಿದ್ದು ಇನ್ನೊಂದು ವಾರದಲ್ಲಿ ಮುಗಿಯಲಿದೆ. ತಾನು ಕುಲಪತಿ ಹುದ್ದೆಯಿಂದ ನಿರ್ಗಮಿಸುವುದರೊಳಗೆ ನೇಮಕಾತಿ ಮುಗಿಸಲೇಬೇಕೆಂದು ಪ್ರೊ.ಸುಭಾಷ್‍ರವರು ಹಠತೊಟ್ಟರೆ, ಕುಲಸಚಿವೆ ಪ್ರೊ.ಬಿ.ಕೆ ತುಳಸಿಮಾಲರವರು ನಿಯಮಾವಳಿಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪ ಮಾಡಿದರು. ಜೊತೆಗೆ ತಾನು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯುವುದಾಗಿ ಘೋಷಿಸಿದ್ದರು. ಇನ್ನೊಂದಿಷ್ಟು ಜನ ನೇಮಕಾತಿಯಲ್ಲಿ ಭ್ರಷ್ಟಾಚಾರವೂ ನಡೆಯುತ್ತಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಟಿಯೆಂಬ ಡ್ರಾಮ
ವಿ.ವಿಯ 7 ಘಟಿಕೋತ್ಸವದ ನಿಮಿತ್ತ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಕುಲಪತಿ ಪ್ರೊ.ಎಂ.ಎಸ್ ಸುಭಾಷ್ ಮತ್ತು ಕುಲಸಚಿವೆ ಪ್ರೊ.ಬಿ.ಕೆ ತುಳಸಿಮಾಲ ಉಪಸ್ಥಿತರಿದ್ದರು. ಪತ್ರಕರ್ತರೊಬ್ಬರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕದ ಕುರಿತು ಪ್ರಶ್ನೆ ಎತ್ತಿದ್ದರು. ಆಗ ಪ್ರೊ.ಬಿ.ಕೆ ತುಳಸಿಮಾಲರವರು ಉತ್ತರಿಸಿ ನೇಮಕಾತಿಯಲ್ಲಿ ಹಲವು ಗೊಂದಲಗಳಾಗಿವೆ, ಹಾಗಾಗಿ ನಾನು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿದಿದ್ದೆ ಎನ್ನುತ್ತಿದ್ದಂತೆ ಪ್ರೊ.ಎಂ.ಎಸ್ ಸುಭಾಷ್‍ರವರು ಮಾತನಾಡಿ “ದಯವಿಟ್ಟು ನೀವು ಇಲ್ಲಿಂದ ಎದ್ದು ಹೋಗಿ, ನಿಮ್ಮ ಬಗ್ಗೆಯೇ ನಾನೊಂದಿಷ್ಟು ಮಾತಾಡಬೇಕಿದೆ. ನೀವಿದ್ದರೆ ಅದು ಸಾಧ್ಯವಿಲ್ಲ” ಎಂದು ಖಾರವಾಗಿ ನುಡಿದಿದ್ದಾರೆ. ನೊಂದ ತುಳಿಸಿಮಾಲರವರು ತಕ್ಷಣವೇ ಸುದ್ದಿಗೋಷ್ಠಿಯಿಂದ ಹೊರನಡೆದಿದ್ದು ಆ ಫೋಟೋ ಎಲ್ಲಾ ಕಡೆ ವೈರಲ್ ಆಗಿದೆ.
ನೇಮಕಾತಿ ಪ್ರಕ್ರಿಯೆಗೆ ನನಗೆ ಯಾವುದೇ ಆಕ್ಷೇಪವಿಲ್ಲ, ಕುಲಪತಿಗಳು ನನ್ನನ್ನು ಕುಲಸಚಿವೆಯನ್ನಾಗಿ ನೋಡುತ್ತಿಲ್ಲ. ತರಾತುರಿಯಲ್ಲಿ 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ ಎಂದು ಪ್ರೊ.ಬಿ.ಕೆ ತುಳಸಿಮಾಲ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು, ಮೈಸೂರು ಸೇರಿ ದಕ್ಷಿಣ ಕರ್ನಾಟಕದವರಿಗೆ ಉತ್ತರ ಕರ್ನಾಟಕದ ಜನರ ಕಷ್ಟಗಳು ಅರ್ಥವಾಗುತ್ತಿಲ್ಲ. ಒಂದು ವೇಳೆ ನೇಮಕಾತಿ ಪ್ರಕ್ರಿಯೆ ನಿಂತರೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ದೊಡ್ಡ ಅನ್ಯಾಯವಾಗುತ್ತದೆ. ನನ್ನ ಅವಧಿಯಲ್ಲಿ ಈ ಕೆಲಸ ಮುಗಿದು ಹೈ.ಕ ಭಾಗದವರಿಗೆ ಉದ್ಯೋಗ ಸಿಗಬೇಕೆಂಬುದು ನನ್ನ ಆಶಯ ಎಂದು ಪ್ರೊ.ಎಂ.ಎಸ್ ಸುಭಾಷ್ ಹೇಳುತ್ತಾರೆ.
ಇನ್ನು ಈ ವಿಚಾರವಾಗಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸಿರಿಗೇರಿ ಪನ್ನರಾಜ್‍ರವರು 371ಜೆ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಹಿಂದೆ ಕುಲಪತಿಯಾಗಿದ್ದ ಮೈಸೂರು ಭಾಗದ ಮಂಜಪ್ಪ ಹೊಸಮನಿಯವರು 371ಜೆ ಮೀಸಲಾತಿಯನ್ನು ಪಾಲಿಸದೇ ಸ್ಥಳಿಯೇತರರನ್ನು ಮಾತ್ರ ನೇಮಕಾತಿ ಮಾಡಿದ್ದರು. ಆಗ ಹೈ.ಕ ದ ಅಭ್ಯರ್ಥಿಗಳು ಆಯ್ಕೆಯಾಗಿದ್ದರೆ ಇಂದಿಗೆ ಅವರಿಗೆ 7 ವರ್ಷಗಳ ಸೇವಾ ಹಿರಿತನ ಲಭಿಸುತ್ತಿತ್ತು. ಅವರು ಮಾಡಿದ ಅನ್ಯಾಯದಿಂದ 7 ವರ್ಷಗಳ ಸೇವಾ ಹಿರಿತನವನ್ನು ಕಳೆದುಕೊಂಡಿರುವ ಈ ಭಾಗದ ಅರ್ಹ ಅಭ್ಯರ್ಥಿಗಳಿಗೆ ಈಗಲಾದರೂ ನ್ಯಾಯ ಸಿಗಬೇಕು ಹಾಗಾಗಿ ನೇಮಕಾತಿ ಪ್ರಕ್ರಿಯೆ ಬೇಗ ಮುಗಿಯಬೇಕೆಂದು ಹೇಳಿದ್ದಾರೆ. ಇದೇ ವೇಳೆ ಭ್ರಷ್ಟಾಚಾರಕ್ಕೆ ಅವಕಾಶವಿರಬಾರದು ಈ ಕುರಿತು ತನಿಖೆಯೂ ನಡೆಯಬೇಕೆಂದು ಅಭಿಪ್ರಾಯಪಡುತ್ತಾರೆ.

ಮರೀಚಿಕೆಯಾದ ಗುಣಮಟ್ಟದ ಶಿಕ್ಷಣ
ಬಳ್ಳಾರಿ ನಗರದಲ್ಲಿದ್ದರೂ ಬಹುತೇಕ ವಿದ್ಯಾರ್ಥಿಗಳು ವಿ.ವಿ ಸೇರಲು ಹಿಂದೇಟು ಹಾಕುತ್ತಿದ್ದಾರೆ. ನೂರು ಎಕರೆಗಳ ವಿಶಾಲತೆಯಿದ್ದರೂ ಇದು ಒಂದು ಸಾಮಾನ್ಯ ಪದವಿ ಕಾಲೇಜಿಗಿಂತಲೂ ಕಳಪೆಯಾಗಿ ಕಾಣುತ್ತಿದೆ ಎಂಬುದು ಅವರ ಆರೋಪ. ಆರೋಪಕ್ಕೆ ಸಾಕ್ಷಿಯೆಂಬಂತೆ ವಿವಿಯಲ್ಲಿ ಅತ್ಯುತ್ತಮ ಬೋಧನೆ, ಪಾರದರ್ಶಕ ಪರೀಕ್ಷೆ, ಉತ್ತಮ ಫಲಿತಾಂಶವೂ ಕಂಡುಬರುತ್ತಿಲ್ಲ. ಮೂಲಭೂತ ಸೌಲಭ್ಯಗಳ ಕೊರತೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕೊರತೆ, ಅಸಮರ್ಪಕ ಆಡಳಿತ, ಕೆಟ್ಟು ನಿಂತ ಹಾಸ್ಟೆಲ್‍ಗಳು, ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣವಾಗಿದೆ. ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿರುವ ಹಂಪಿ ಕನ್ನಡ ವಿ.ವಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದರೆ ಬಳ್ಳಾರಿ ಕೃಷ್ಣದೇವರಾಯ ವಿ.ವಿ ಮಾತ್ರ ಅರಾಜಕತೆಗೆ ಕುಖ್ಯಾತಿಯಾಗುತ್ತಿದೆ.

ಕಳಪೆ ಆಹಾರದ ಕೊಂಪೆಗಳಾದ ಹಾಸ್ಟೆಲ್‍ಗಳು
ಇನ್ನು ಕಾಲೇಜಿಗೆ ಸೇರಿದರೂ ಕೂಡ ಯಾವುದೇ ಕಾರಣಕ್ಕೂ ಹಾಸ್ಟೆಲ್‍ಗಳಿಗೆ ಸೇರುವುದಿಲ್ಲ ಎಂಬುದು ಎಲ್ಲಾ ವಿದ್ಯಾರ್ಥಿಗಳ ಸಾಮಾನ್ಯ ದೂರು. ಅಪರಿಮಿತ ಭ್ರಷ್ಟಾಚಾರದ ಕಾರಣಕ್ಕೆ ಇಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ. ಶುಚಿತ್ವದ ಬಗ್ಗೆ ಕೇಳಲೇಬೇಕಿಲ್ಲ. ಈ ಕಷ್ಟವನ್ನು ಸಹಿಸಿಕೊಳ್ಳಲಾಗದೇ ಬಹಳಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಸೇರಿ ನಂತರ ಬಿಟ್ಟು ಬಿಟ್ಟಿದ್ದಾರೆ. ಹಾಸ್ಟೆಲ್ ಸರಿಯಿಲ್ಲದ್ದಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಿದ ಎಸ್‍ಎಫ್‍ಐ ವಿದ್ಯಾರ್ಥಿಯೊಬ್ಬನಿಗೆ ಪ್ರಾಧ್ಯಾಪಕರೊಬ್ಬರು ಹಲ್ಲೆ ನಡೆಸಿದ ಘಟನೆ ನಡೆದು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಡಾ.ಮೋಹನ್ ದಾಸ್ ಎಂಬ ಪ್ರಾಧ್ಯಾಪಕರು ಎಸ್‍ಎಫ್‍ಐ ಪದಾಧಿಕಾರಿ ಬಸವರಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಮತ್ತು ಹಾಸ್ಟೆಲ್‍ಗಳನ್ನು ಸಂಬಂಧಿಸಿದ ಇಲಾಖೆಗಳೆ ನಡೆಸುವಂತೆ ಆಗ್ರಹಿಸಿ ಕಳೆದ ವರ್ಷ ಸೆಪ್ಟಂಬರ್‍ನಲ್ಲಿ ವಿ.ವಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು.
ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಅಭಿವೃದ್ದಿಯತ್ತ ಸಾಗಬೇಕಿದ್ದ ವಿ.ವಿ ಕೆಲವು ವ್ಯಕ್ತಿಗಳ ನಡುವಿನ ವೈಯಕ್ತಿಕ ಇಗೋ, ಅಧಿಕಾರದ ಮದ, ಭ್ರಷ್ಟಾಚಾರ, ಸರ್ಕಾರದ ನಿರ್ಲಕ್ಷ್ಯದ ಕಾರಣಕ್ಕಾಗಿ ದಿನೇ ದಿನೇ ಕುಸಿಯುತ್ತಿದೆ. ಇದರಿಂದ ಸಾವಿರಾರು ಅಮಾಯಕ ವಿದ್ಯಾರ್ಥಿಗಳ ಭವಿಷ್ಯ ಕಮರಿಹೋಗುತ್ತಿದೆ. ಅತಿಹೆಚ್ಚು ಬಡತನವಿರುವ, ಅನಕ್ಷರತೆ ಇರುವ, ನಿರುದ್ಯೋಗವಿರುವ ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಇರುವುದು ನಾಡಿನ ದುರಂತವಾಗಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ವಿ.ವಿಯನ್ನು ಗುಣಮಟ್ಟದತ್ತ ತೆಗೆದುಕೊಂಡು ಹೋಗಬೇಕಿದೆ. ಅದಕ್ಕಾಗಿ ಜನಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಅಲ್ಲಿನ ವಿದ್ಯಾರ್ಥಿಗಳು ದನಿಯೆತ್ತಬೇಕಿದೆ, ದಿಟ್ಟ ಹೋರಾಟ ನಡೆಯಬೇಕಿದೆ. ಅಂತಹ ಹೋರಾಟದ ಸಂದರ್ಭ ಬೇಗ ಬರಲೆಂದು ಪತ್ರಿಕೆ ಆಶಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...