Homeಮುಖಪುಟವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

- Advertisement -
- Advertisement -

ಕೆಲವು ದಿನಗಳಿಂದ ದಿನಪತ್ರಿಕೆಗಳಿಂದ ದೇಶದ ಆಗುಹೋಗುಗಳನ್ನು ಗಮನಿಸುತ್ತಾ ಹೋದಂತೆ, ಹಲವು ವಿಷಯಗಳು ನನ್ನಲ್ಲಿ ಭಯ, ಆತಂಕ, ತಲ್ಲಣಗಳನ್ನು ಉಂಟುಮಾಡುತ್ತಿದ್ದವು. ಹೀಗೆ ಕೆಲವು ದಿನಗಳ ಹಿಂದೆ, ಕುವೆಂಪು ಅವರ ಒಂದು ಪುಸ್ತಕ ತೆರೆದು ’ಓ, ಬನ್ನಿ, ಸೋದರರೆ, ಬೇಗ ಬನ್ನಿ!’ ಕವಿತೆಯ ಸಾಲುಗಳನ್ನು ಗಮನಿಸುತ್ತಿದ್ದೆ..

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ.
ಓ, ಬನ್ನಿ, ಸೋದರರೆ, ವಿಶ್ವಪಥಕೆ!

ಎನ್ನುವ ಕೊನೆಯ ಸಾಲುಗಳನ್ನು ಓದಿ ಏಕೋ ಮನಸ್ಸು ಕದಡಿದಂತಾಗಿ ಪುಸ್ತಕವನ್ನು ಮುಚ್ಚಿದೆ; ಯಾವುದೋ ಆಲೋಚನೆಯಲ್ಲಿ ಮುಳುಗಿದಂತೆ ನನ್ನ ಕಣ್ಣು ಪುಸ್ತಕದ ಮೇಲಿದ್ದ ಕುವೆಂಪು ಚಿತ್ರವನ್ನೇ ದೃಷ್ಟಿಸುತ್ತಿತ್ತು. ನಮ್ಮ ಮನೆಯ ಪುಟ್ಟ ಪಾಪು ಬಂದು, ’ಯಾಕೆ ಮಾಮ, ಕುವೆಂಪು ತಾತನ್ನ ಅಂಗೆ ನೋಡ್ತಾಯಿದ್ದಿ?’ ಎಂದು ತನ್ನ ತೊದಲು ನುಡಿಯ ಮೂಲಕ ಪ್ರಶ್ನಾಯುಧವನ್ನು ಹಿಡಿದು ನಿಂತಿತು. ಆ ಕ್ಷಣಕ್ಕೆ ಕೆಲವು ದಿನಗಳಿಂದ ಕಾಡುತ್ತಿದ್ದ ಭಯ, ಆತಂಕ, ತಲ್ಲಣಗಳು ತಟ್ಟನೆ ಕಣ್ಣೆದುರು ಬಂದು ಅಣಕಮಾಡತೊಡಗಿದವು! ಮರುಕ್ಷಣವೆ ಏನೋ ಹೊಳೆದಂತಾಗಿ ನಿರಾಯುಧನಾಗಿಬಿಟ್ಟೆ.

ಒಂದುಕಡೆ ಇನ್ನು ಲೋಕವನ್ನರಿಯದ ಪುಟ್ಟ, ಮತ್ತೊಂದು ಕಡೆ ಲೋಕದ ಆಂತರ್ಯವನ್ನು ಅರಿತ ಪುಟ್ಟಪ್ಪ; ಮಗದೊಂದು ಕಡೆ ವರ್ತಮಾನದ ತಲ್ಲಣಗಳು. ಎದುರಾಳಿಗಳಾಗಿ ನಿಂತು ಚಿಂತನಯುದ್ಧಕ್ಕೆ ಆಹ್ವಾನವನ್ನೀಯುವಂತೆ ಕಂಡಿತು. ಈ ಪುಟ್ಟ ಕಣ್ಮುಂದೆ ತಂದ ತಲ್ಲಣಗಳು ಪುಟ್ಟಪ್ಪನ ಮೂಲಕ ಬಗೆಹರಿಯಬಹುದೆ? ಎಂದುಕೊಳ್ಳುತ್ತಿರುವಾಗ ನನ್ನ ಸ್ಮೃತಿಪಟಲದಲ್ಲಿ ಕುವೆಂಪುವಿನ ಬಗೆಗಿನ ವಿಚಾರಸುರುಳಿ ಎಳೆಎಳೆಯಾಗಿ ಬಿಚ್ಚಿಕೊಳ್ಳತೊಡಗಿತು. ಇದೇ ಕಾರಣವಾಗಿ ಶಾಂತವಾಗಿದ್ದ ನನ್ನ ತಲೆ ಪ್ರಶ್ನೋತ್ತರಗಳ ಯುದ್ಧಕಣವಾಗಿ ಮಾರ್ಪಟ್ಟಿತು.

ಪ್ರಶ್ನೆಗೆ ಪ್ರಶ್ನೆ ಎನ್ನುವಂತೆ, ಪುಟ್ಟ ಹಾಕಿದ ಪ್ರಶ್ನೆ ನನ್ನಲ್ಲಿ ಮತ್ತೊಂದು ಪ್ರಶ್ನೆಗೆ ದಾರಿಮಾಡಿಕೊಟ್ಟಿತು. ನನ್ನನ್ನು ಕಾಡುತ್ತಿರುವ ತಲ್ಲಣಗಳನ್ನು ಈ ಪುಟ್ಟನಿಗೆ ಆರ್ಥಮಾಡಿಸುವುದಾದರೂ ಹೇಗೆ? ಎಂದು. ಏಕೆಂದರೆ, ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇನ್ನೂ ಅವನ ಅರಿವಿಗೆ ನಿಲುಕದವು. ಮತವೆಂದರೆ ಏನು ಎಂಬುವುದೆ ತಿಳಿಯದ ಕಂದನಿಗೆ, ಮತದ್ವೇಷ, ಮತಾಂಧತೆ, ಮತಾಂತರ, ಮತಾಂತರ ನಿಷೇಧ ಕಾನೂನು, ಜಾತಿ, ಜಾತೀಯತೆ, ಜಾತ್ಯತೀತತೆ, ಆಹಾರ ರಾಜಕಾರಣ, ಭ್ರಷ್ಟಾಚಾರ, ಮೌಢ್ಯತೆ, ಏಕರಾಷ್ಟ್ರಭಾಷೆ, ರೈತ ಮರಣಶಾಸನಗಳು- ಹೀಗೆ ನನ್ನನ್ನು ಕಾಡುತ್ತಿರುವ ತಲ್ಲಣಗಳನ್ನು ಅರ್ಥೈಸಲು ಸಾಧ್ಯವೇ? ಜತೆಗೆ ಇವುಗಳ ಯಾವ ಬಂಧನದ ಗೊಡವೆಯೂ ಇಲ್ಲದೆ ಸ್ವತಂತ್ರವಾಗಿರುವ ಮಗುವನ್ನು ಇವನ್ನೆಲ್ಲ ಹೇಳಿ ನಾನೇ ಬಂಧನಕ್ಕೆ ತಳ್ಳಿಬಿಟ್ಟರೆ ಎನ್ನುವ ಭಯವೂ ಶುರುವಾಯಿತು. ಆದರೂ ವರ್ತಮಾನದ ತಲ್ಲಣಗಳ ವಿರುದ್ಧ ಯುದ್ಧಮಾಡಲು ನಿರಾಯುಧನಾಗಿ ನಿಂತಿದ್ದ ನನ್ನ ಸೇನೆಗೆ ಕುವೆಂಪು ಅವರ ’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’, ’ವಿಚಾರಕ್ರಾಂತಿಗೆ ಆಹ್ವಾನ’, ’ಓ, ಬನ್ನಿ, ಸೋದರರೆ, ಬೇಗ ಬನ್ನಿ’, ’ಇಂದಿನ ದೇವರು’, ’ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’, ’ಹೊಸಬಾಳಿನ ಗೀತೆ’, ’ನೇಗಿಲಯೋಗಿ’, ’ಕಲ್ಕಿ’, ’ಪಾಂಚಜನ್ಯ-ಈ ಎಲ್ಲಾ ಸಾಹಿತ್ಯ ಬರಹಗಳು ರಥ, ಆನೆ, ಕುದುರೆ, ಕಾಲಾಳುಗಳಾಗಿ ಬಂದು ಸೇರಿದವು. ಇದೇ ಆವೇಶದಲ್ಲಿ:

’ಈವೊತ್ತು ಎಲ್ಲ ಮತ ಮತ ಅಂತ ಬಾಯಿ ಬಡ್ಕೊಳ್ತಿದ್ದಾರಲ್ಲ’ ಅಂದೆ.
ಪಿಳಿಪಿಳನ ಕಣ್ಣು ಬಿಡುತ್ತಾ ಪುಟ್ಟ, ’ಮತ’ ಅಂದ್ರೆ? ಅಂದ.

ಅವನ ಮಾತುಕೇಳಿ ಬೆರಗಾಯಿತು. ಎಲ್ಲವನ್ನೂ ಪ್ರಶ್ನಿಸುವ ಸರ್ವಸ್ವತಂತ್ರನಾಗಿರುವವನಿಗೆ ಎಲ್ಲವನ್ನೂ ಉತ್ತರಿಸಲು, ಅರ್ಥೈಸಲು ಇದೇ ಸರಿಯಾದ ಕಾಲ! ಎಂದುಕೊಳ್ಳುತ್ತಿರುವಂತೆಯೇ ಮನೋವೇದಿಕೆಯಲ್ಲಿ ಗುರು-ಶಿಷ್ಯರಿಬ್ಬರು ಗೋಚರಿಸಿದಂತಾಯ್ತು. ಗುರುವಿನ ಬಾಯಿಯಿಂದ ಅಸ್ಪಷ್ಟವಾದ ಮಾತುಗಳು ಕೇಳಿಸತೊಡಗಿದವು. “ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ. ಪರಮಶಾಂತಿಯೂ ಆಗಿರುವ ಪರಮೇಶರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೆ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟು ಕಟ್ಟಳೆಗಳ ಕಾಟವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರ ಬರಗೊಡಿಸುವುದು; ಹಾಗೆ ಬರಗೊಡಿಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು; – ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಮತವನ್ನು ಕುರಿತು ನಮ್ಮಲ್ಲಿ ಯಾವ ಸ್ಪಷ್ಟತೆಯೂ ಇಲ್ಲ. ಎಲ್ಲಾ ಗೋಜಲು ಗೋಜಲಾಗಿದೆ. ಮತದ ಗುರಿ ಸಮಸ್ತ ಸೃಷ್ಟಿಯ ಸಾಮೂಹಿಕ ಪ್ರಜ್ಞೆಯ ವಿಕಾಸ, ಇಡೀ ವಿಶ್ವದ, ಮಾನವಕುಲದ ಆಧ್ಯಾತ್ಮಿಕ ವಿಕಾಸವಾಗಬೇಕಿತ್ತು. ಆದರೆ, ಯಾವುದು ಬಿಡುಗಡೆಗೆ ಸಾಧನವಾಗಬೇಕಿತ್ತೊ ಅದು ಹಿಂದೆಂದಿಗಿಂತಲೂ ಹೆಚ್ಚು ಬಂಧನವಾಗಿ ರೂಪುಗೊಳ್ಳುತ್ತಿದೆ. ವಿವೇಕವನ್ನು ಹೇಳಬೇಕಾದ ಮತಗಳು ದ್ವೇಷ ಅಸೂಯೆಯನ್ನು ಬಿತ್ತುತ್ತಿವೆ. ಧರ್ಮಸಂತತಿಯ ಅಭಿವೃದ್ಧಿಗಾಗಿ ಹಣ, ಅಧಿಕಾರ ಎಲ್ಲವನ್ನೂ ಬಳಸುತ್ತಿರುವವರು ಮಾನವೀಯತೆಯನ್ನು ಮಾತ್ರ ಗಂಟಲು ಕಟ್ಟಿ ರೇಷ್ಮೆವಸ್ತ್ರದಲ್ಲಿ ಸುತ್ತಿ ಯಾವುದೋ ಮೂಲೆಯಲ್ಲಿ ಬಿಸಾಡಿದ್ದಾರೆ. ಹೀಗೆ ಮತಿಹೀನವಾಗಿರುವ ಮತದಿಂದಾಗಿ ಜ್ಞಾನದ ಪ್ರಗತಿಯೂ ಕುಂಠಿತವಾಗಿದೆ. ಆದ್ದರಿಂದ ನಾವೆಲ್ಲರೂ ಮತಿಗೆಟ್ಟ ಮತವನ್ನು ತೊರೆದು ಆತ್ಮೋದ್ಧಾರಕ್ಕಾಗಿ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಬೇಕು” ಎನ್ನುತ್ತ ಆ ಗುರುವಾಣಿ ಆವೇಶಭರಿತವಾಗಿಯೇ ನುಡಿಯುತ್ತಿತ್ತು.

ಪುಟ್ಟ ಕೈಹಿಡಿದು ಅಲುಗಾಡಿಸಿದ್ದರಿಂದಾಗಿ ಮನೋವೇದಿಕೆಯ ಗುರು-ಶಿಷ್ಯರು ಮರೆಯಾದರು.

’ಯಾಕೆ?’ ಎಂದು ಪುಟ್ಟ ನಾನು ಮರೆತುಹೋಗಿದ್ದ ಪ್ರಶ್ನೆಯನ್ನು ನೆನಪಿಸಿದ. ಕುವೆಂಪು ಚಿತ್ರದಿಂದ ದೃಷ್ಟಿ ತೆಗೆದು, ’ಕುವೆಂಪು ತಾತನ ದೃಷ್ಟಿಯಲ್ಲಿ ಸೃಷ್ಟಿ ಇದೆಯಪ್ಪಾ’ ಎಂದೆ.

ಮತ್ತೆ ’ಅಂಗಂದ್ರೆ?’ ಎಂದ,

ಮತ್ತೆ ಕುವೆಂಪು ಅವರ ವಿಚಾರಗಳು, ವರ್ತಮಾನದ ತಲ್ಲಣಗಳು ಒಂದಿನಿತೂ ವ್ಯತ್ಯಾಸವಿಲ್ಲದೆ ನನ್ನ ಮುಂದೆ ನಿರೂಪಣೆಗೊಳ್ಳತೊಡಗಿದವು.

ಈಗಿನ ನಮ್ಮ ರಾಜಕೀಯ ರಂಗವಂತೂ ಹೇಗಾಗಿದೆ ಎಂದರೆ, ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ಪಕ್ಷವೂ ಅಧಿಕಾರಕ್ಕಾಗಿ ಬಾಯಿಬಿಡುವಂತಾಗಿದೆ. “ನಿಜವಾದ ಪ್ರಜಾಸತ್ತೆ ಎಂದರೆ ಅನಿರ್ಬಾಧಿತ ಇಚ್ಛಾ ಸ್ವಾತಂತ್ರ್ಯದಿಂದ ಪ್ರಜೆಗಳು ಆಯುವ ಪ್ರಾಮಾಣಿಕ ವ್ಯಕ್ತಿಗಳಿಂದ ಸರ್ವರ ಅಭ್ಯುದಯಕ್ಕಾಗಿ ನಡೆಯುವ ರಾಜ್ಯಭಾರ. ಆ ದೃಷ್ಟಿಯಿಂದ ನೋಡಿದರೆ ಈಗ ನಡೆಯುವ ಚುನಾವಣೆಗಳು ಪ್ರಜಾಸತ್ತಾತ್ಮಕ ಎಂದು ಹೇಳಲಾಗುತ್ತದೆಯೆ?” ಎಂಬ ಗುರುವಾಣಿ ನೆನಪಿಗೆ ಬಂದು, ಈಗ ನಡೆಯುವ ಚುನಾವಣೆಗಳಲ್ಲಂತೂ ಹಣದ ಹೊಳೆಯೆ ಹರಿಯುತ್ತಿರುವುದು, ಇನ್ನೂ ಬದಲಾಗದೆ ಹೋಗಿರುವ ಸಂಗತಿಗೆ ಮರುಗುವಂತಾಯಿತು. ಒಮ್ಮೆ ಅಧಿಕಾರಕ್ಕೆ ಬಂದವರು ತಮ್ಮ ಅಧಿಕಾರಾವಧಿ ಮುಗಿಯುವ ವೇಳೆಗೆ ಅವರ ಆಸ್ತಿ ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತಿರುವುದರಿಂದ, ಹೊಸಬರೂ, ಪ್ರಾಮಾಣಿಕರೂ, ಸಂಭಾವಿತರೂ ಈ ರಂಗದ ಹತ್ತಿರಕ್ಕೆ ಸುಳಿಯಲೂ ಸಾಧ್ಯವಾಗುತ್ತಿಲ್ಲ. ಏನೋ ಪ್ರಯತ್ನಪಟ್ಟು ಅವರೂ ಹಣದ ಹೊಳೆಹರಿಸಿ ಬಂದರೆ ಭ್ರಷ್ಟಾಚಾರಕ್ಕೆ ಬಲಿಯಾಗದೇ ಇರಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಅಧಿಕಾರದ ಪ್ರಹಸನಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರದರ್ಶನ ಕಾಣುತ್ತಿವೆ. ಹೀಗೆ ಆಯ್ಕೆಯಾದವರು ಅಧಿಕಾರದ ಆಸೆಯಿಂದಾಗಿ ನಮ್ಮ ನಾಡು ನುಡಿಯೊಂದಿಗೆ ತಮ್ಮತನವನ್ನೂ ಈ ನೆಲದ ಸಂಸ್ಕೃತಿ, ಅಸ್ಮಿತೆಯನ್ನೂ ಬಲಿಗೊಡುತ್ತಿದ್ದಾರೆ.

ಅಂತೆಯೇ ನಮ್ಮ ಇಂದಿನ ಆಹಾರ ರಾಜಕಾರಣವಂತೂ ಗಂಭೀರ ಸ್ಥಿತಿಯಲ್ಲಿದೆ. ಆರೋಗ್ಯವಂತ ಸಮಾಜದ ಹೊಣೆಹೊತ್ತಿರುವ ಸರ್ಕಾರಗಳು ಕೆಲವು ಮಠಮಾನ್ಯ ಸಂಸ್ಥೆಗಳ ಕೈಗೊಂಬೆಯಾಗಿವೆ. ವಿಜ್ಞಾನಕ್ಕಿಂತಲೂ ಹೆಚ್ಚಾಗಿ ಮಠಮಾನ್ಯಗಳು, ಸಂಸ್ಥೆಗಳು ಒಬ್ಬ ವ್ಯಕ್ತಿ ಎಷ್ಟು ಪ್ರಮಾಣದ ಕ್ಯಾಲರಿ ಇರುವ ಆಹಾರವನ್ನು ಸೇವಿಸಬೇಕೆಂದು ನಿರ್ಧರಿಸುತ್ತಿವೆ. ಯಾವ ಯಾವ ಆಹಾರದಲ್ಲಿ ಎಷ್ಟೆಷ್ಟು ಪ್ರಮಾಣದ ಕ್ಯಾಲರಿಯಿದೆ ಎನ್ನುವ ಪ್ರಮಾಣಪತ್ರವನ್ನು ನೀಡುವುದರ ಜತೆಗೆ ಯಾರ್‍ಯಾರು ಯಾವ್ಯಾವ ಆಹಾರವನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಯಾವಾಗ ಸೇವಿಸಬೇಕೆಂಬುದನ್ನೂ ನಿರ್ದೇಶಿಸುತ್ತಿವೆ.

ಕುವೆಂಪು ಧನ್ವಂತರಿ ಚಿಕಿತ್ಸೆಯ ಮೂಲಕ ಪ್ರತಿಮಾತ್ಮಕವಾಗಿ ತೋರಿಸಿದ ರೈತನ ಬದುಕು ಇಂದು ನಿಜವಾಗಿದೆ. ನೇಗಿಲ ಮೇಲೆ ನಿಂತಿದ್ದ ಧರ್ಮ ಇಂದು ಕಾಣದಾಗಿದೆ. ಇಡೀ ದೇಶದ ಬೆನ್ನೆಲುಬಾಗಿದ್ದ ನೇಗಿಲಿಡಿದ ರೈತನ ಬೆನ್ನು ಬಾಗಿದೆ; ತಾನೂ ಬದುಕಿ ಎಲ್ಲರನ್ನೂ ಬದುಕಿಸುವ, ಪೋಷಿಸುವ ಹೊಣೆಹೊತ್ತಿದ್ದ ರೈತನ ಬೆನ್ನುಮೂಳೆ ಮುರಿದು ಅವನನ್ನ ಬಲಹೀನನ್ನಾಗಿಸಿ ಅನಾಥನನ್ನಾಗಿಸಿದ್ದಾರೆ. ಇಂದಿನ ಅತಿಯಾದ ಮಾನವನ ದುರಾಸೆಯಿಂದಾಗಿ ಪ್ರಭುತ್ವದೊಂದಿಗೆ ಪ್ರಕೃತಿಯೂ ರೈತನಿಗೆ ವಿರುದ್ಧವಾಗಿ ನಿಂತಿದೆ. ಇಂದಿನ ಸರ್ಕಾರಗಳು ಜಾರಿಗೆ ತರುತ್ತಿರುವ ಶಾಸನಗಳು ರೈತರ ಮರಣಶಾಸನಗಳಾಗುತ್ತಿವೆ. ಅವುಗಳಿಗೆ ಪ್ರತಿರೋಧ ಒಡ್ಡಿದ್ದಕ್ಕಾಗಿ ಅವರ ಪ್ರಾಣಗಳನ್ನೇ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಕುಚೋದ್ಯವೆಂಬತೆ ಹಲವಾರು ರೈತರ ಶವದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವ ಮತ್ತು ಸಾವನ್ನು ಸಂಭ್ರಮಿಸಿ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ನಮ್ಮ ರಾಜಕೀಯ ವ್ಯವಸ್ಥೆ ಇಳಿದಿವೆ. ಪ್ರಸ್ತುತದಲ್ಲಿ ಯಾರೂ ಅರಿಯದ ನೇಗಿಲಯೋಗಿ ಲೋಕಕ್ಕೆ ಅನ್ನ ನೀಡಲು ತನ್ನ ರಕ್ತವನ್ನು ಸುರಿಸಿ, ಪ್ರಾಣವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ನೇಗಿಲ ಧರ್ಮ ಲೋಕವನ್ನು ಕಾಯುತ್ತಿತ್ತೋ ಅದರ ಗೋಣುಮುರಿಯುವ ಕಾರ್ಯ ತುಂಬ ನಾಜೂಕಾಗಿಯೇ ಸಾಗಿದೆ.

ನಮ್ಮನ್ನು ಇಂದು ಕೂಡ ಬಾಧಿಸುತ್ತಿರುವ ಹಲವು ಸಮಸ್ಯೆಗಳನ್ನು ಕುರಿತು ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಬಹಳಷ್ಟು ಮಾತನಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದಕ್ಕೆ ಹಲವು ಬಗೆಗಳ ಪರಿಹಾರವನ್ನೂ ಸೂಚಿಸಿದ್ದಾರೆ. ಅವುಗಳನ್ನು ನಾವು ಸರಿಯಾಗಿ ಗಮನಿಸಿ, ಸಂವಾದ ನಡೆಸಿ, ಉಳಿದ ಮಹಾನ್ ಚಿಂತಕರ ಚಿಂತನೆಗಳೊಂದಿಗೆ ಮಂಥನ ಮಾಡಿ, ಅವುಗಳನ್ನು ಕಾರ್ಯರೂಪುಗೊಳಿಸುವತ್ತ ಪ್ರಾಮಾಣಿಕವಾಗಿ ಹೆಜ್ಜೆ ಇಟ್ಟಲ್ಲಿ ಒಂದು ಮಟ್ಟಿಗೆ ಸುಧಾರಣೆಯಂತೂ ಖಂಡಿತ ಆದೀತು. ಕುವೆಂಪು ಓದು, ಮರು ಓದು, ಯುವಕರ ಜೊತೆಗೆ ಕುವೆಂಪು ಮಾತು-ಕಾವ್ಯ-ಬರಹಗಳ ಸಂವಾದ ಅದಕ್ಕೆ ಅವಕಾಶ ಕೊಟ್ಟೀತು!

ಕವಿವೇದ

ಕವಿವೇದ
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿವರಾಜ್, ಕವಿವೇದ ಹೆಸರಿನಲ್ಲಿ ಬರವಣಿಗೆ ಮಾಡುತ್ತಾರೆ. ಕುವೆಂಪು ಅವರ ಸಾಹಿತ್ಯದ ಬಗ್ಗೆ ಸಂಶೋಧನಾ ಪ್ರಬಂಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕವಿ ವೇದ ಅವರ, ‘ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು’ ನೋಡಿದೆ. ಮಗು ಮನಸ್ಸಿನ, ಚಿಕಿತ್ಸಕ ದೃಷ್ಟಿಯ ಕುವೆಂಪುರನ್ನು ನೆನೆದು ಬರೆದ ಇಂದಿನ ಮಾನವ ಮನಸ್ಥಿತಿಯ ಅವಲೋಕನ ಚೆನ್ನಾಗಿ ಮೂಡಿಬಂದಿದೆ. ಪ್ರಶ್ನಿಸುವ ಮಗು ಬೌದ್ಧಿಕವಾಗಿ ಬೆಳೆಯುತ್ತದೆ; ಪ್ರಶ್ನೆ ಎದುರಿಸದ ಧರ್ಮ ಚಲನಶೀಲತೆ ಕಳೆದುಕೊಳ್ಳುತ್ತವೆ. ಮತಧರ್ಮಗಳು ನಿಂತ ನೀರಾದಾಗ, ಕೇವಲ ಡಾಗ್ಮಾಗಳಾಗಿ, ಬಲಿಷ್ಠರ ಕೈಯಲ್ಲಿನ ಆಯುಧಗಳಾಗುತ್ತವೆ. ಇವುಗಳ ಪ್ರಭಾವವನ್ನು – ಅದು ಧರ್ಮದಲ್ಲಿ ಇರಲಿ, ರಾಜಕೀಯದಲ್ಲಿ ಇರಲಿ – ‘ಸಾಗರಗಳನ್ನು ದಾಟಿ, ಚಕ್ರವರ್ತಿಗಳ ನೆತ್ತಿಯ ಕುಕ್ಕಿ’ ಅಪ್ರಸ್ತುತ ಮಾಡುವ ಶಕ್ತಿ ಕಾಲಕ್ಕಿದೆ! ಈ ಭೂಮಂಡಲದಲ್ಲಿ ಬಂದುಹೋದ ಎಲ್ಲಾ ಮತಧರ್ಮಗಳ, ರಾಜ ಮಹಾರಾಜರ ಮತ್ತು, ಚಕ್ರವರ್ತಿಗಳಂತೆ ಮೆರೆದ, ಮೆರೆಯುತ್ತಿರುವ ಡಿಕ್ಟೇಟರ್ಗಳ ಹಣೆಬರಹವೂ ಇದೇ ಆಗಿದೆ.
    ಮತಧರ್ಮಗಳ ಅಂತಃಸತ್ವವನ್ನು ಅರಿತವ ಮಾತ್ರ ವಿಶ್ವಮಾನವನಾಗುತ್ತಾನೆ ಮತ್ತು ಅದನ್ನೇ ಹೇಳುತ್ತಾನೆ.
    ಮತಧರ್ಮಗಳ ಇಂದಿನ ಉಡಾಫೆಯನ್ನು ನೋಡಿ, ಕುವೆಂಪುರನ್ನು ಅರಿಯಲು, ಇದು ಸೂಕ್ತ ಕಾಲ.
    ಇಂದು ನಮಗೆ ಕುವೆಂಪು ಆತ್ಮೀಯರಾಗುವುದು ಮತ್ತು ಅವರ ಬಗ್ಗೆ ಗೌರವ ಹೆಚ್ಚುವುದು ಈ ಕಾರಣದಿಂದ.

    ಧನ್ಯವಾದ, ಕವಿ ವೇದ ಮತ್ತು ಪ್ರಕಟಿಸಿದ ಗೌರಿಕಾಂ ಗೆ.

  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...