ಉತ್ತರ ಪ್ರದೇಶದ ಉದ್ಯಮಿ ಪಿಯೂಷ್ ಜೈನ್ ಮೇಲಿನ ದಾಳಿಗೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ. ಬಿಜೆಪಿ, ಸಮಾಜವಾದಿ ಪಕ್ಷಗಳು ಪರಸ್ಪರ ಕೆಸರೆರಚಾಟ ನಡೆಸುತ್ತಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಏಜೆನ್ಸಿಯ ಮೂಲಗಳು, ಇದು ತಪ್ಪಾಗಿ ನಡೆದ ದಾಳಿ ಪ್ರಕರಣವಲ್ಲ ಎಂದಿವೆ.
ಜಿಎಸ್ಟಿ ವಂಚನೆಗಳ ತನಿಖೆ ನಡೆಸುತ್ತಿರುವ ಏಜೆನ್ಸಿಯು ಉದ್ಯಮಿ ಪಿಯೂಷ್ ಜೈನ್ ಅವರ ಮನೆಯಿಂದ ಲೆಕ್ಕಕ್ಕೆ ಸಿಗದ ಹಣದ ರಾಶಿಯನ್ನು ಪತ್ತೆಹಚ್ಚಿದೆ. ಆದಾಯ ತೆರಿಗೆ ಇಲಾಖೆ ಸುಗಂಧ ದ್ರವ್ಯದ ಉದ್ಯಮಿ ಪಿಯೂಷ್ ಜೈನ್ ಅವರ ಮೇಲೆ ನಡೆಸಿದ ದಾಳಿಯಲ್ಲಿ 200 ಕೋಟಿ ರೂ.ಗೂ ಹೆಚ್ಚು ನಗದು ಮತ್ತು ದೊಡ್ಡ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದೆ.
ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇದು ಯಾರ ಮೇಲೋ ದಾಳಿ ನಡೆಸಲು ಹೋಗಿ ಮತ್ತೊಬ್ಬರ ಮೇಲೆ ನಡೆಸಿರುವ ದಾಳಿಯಲ್ಲ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: 5 ನೇ ದಿನವೂ ಮುಂದುವರೆದ ಐಟಿ ದಾಳಿ; 200 ಕೋಟಿ ರೂ. ನಗದು ವಶಕ್ಕೆ!
ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆ ಈ ದಾಳಿ ಕೂಡ ರಾಜಕೀಯ ನಾಯಕರಿಗೆ ವಿಪಕ್ಷಗಳ ವಿರುದ್ಧ ಬಳಸಲು ದಾಳವಾಗಿದೆ. ಬಿಜೆಪಿ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ರ್ಯಾಲಿಗಳ ಭಾಷಣಗಳಲ್ಲಿ ಈ ವಿಷಯ ಮುಖ್ಯವಾಗುತ್ತಿದೆ.
ನಿನ್ನೆ ಕಾನ್ಪುರದಲ್ಲಿ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, “ನೋಟು ತುಂಬಿದ ಬಾಕ್ಸ್ಗಳು ಹೊರಬಂದಿವೆ. ಕಾನ್ಪುರದ ಜನರು ವ್ಯಾಪಾರ ಮತ್ತು ವ್ಯಾಪಾರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. 2017 ರ ಮೊದಲು ಅವರು ಉತ್ತರದಾದ್ಯಂತ ಎರಚಿದ್ದ ಭ್ರಷ್ಟಾಚಾರದ ಸುಗಂಧ ದ್ರವ್ಯ ಇದು” ಎಂದು ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಅಖಿಲೇಶ್ ಯಾದವ್, ’ಬಿಜೆಪಿಯು ಉದ್ಯಮಿ ಪಿಯೂಷ್ ಜೈನ್ ಅವರನ್ನು ಸಮಾಜವಾದಿ ಪಕ್ಷದ ಪುಷ್ಪರಾಜ್ ಜೈನ್ ಅವರು ಎಂದು ಗೊಂದಲ ಮಾಡಿಕೊಂಡಿದೆ. ತಮ್ಮದೆ ಉದ್ಯಮಿ ಮೇಲೆ ತಪ್ಪಾಗಿ ದಾಳಿ ನಡೆಸಿದೆ’ ಎಂದು ಹೇಳಿದ್ದಾರೆ.
ಇವರ ರಾಜಕೀಯ ಕೆಸರೆರಚಾಟದ ಮಧ್ಯೆ ಬಂದಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ, “ಈ ಕಾಮಿಡಿ ಇಲ್ಲಿಗೆ ಮುಗಿಯುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಬಿಜೆಪಿ ಮತ್ತು ಎಸ್ಪಿ ನಡುವೆ ಹೆಚ್ಚಿನ ಆರೋಪಗಳು ಹೆಚ್ಚಾದಹಾಗೆ ಇನ್ನಷ್ಟು ಪಾತ್ರಗಳು ಹೊರಹೊಮ್ಮುತ್ತವೆ” ಎಂದಿದ್ದಾರೆ.