ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು “ಒಂದು ವರ್ಷ ಚಿನ್ನ ಖರೀದಿಸಬೇಡಿ” ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕೂಡ ಇಂತಹುದೇ ಮನವಿ ಮಾಡಿದ್ದರು ಎಂಬರ್ಥದ ‘ದಿ ಹಿಂದೂ’ ಪತ್ರಿಕೆಯ ಮುಖಪುಟವೊಂದು ವೈರಲ್ ಆಗುತ್ತಿದೆ. ಬಿಜೆಪಿ ನಾಯಕರು ಮತ್ತು ಕೆಲವು ಮಾಧ್ಯಮಗಳು ಮೋದಿಯವರ ನಡೆಯನ್ನು ಸಮರ್ಥಿಸಿಕೊಳ್ಳಲು ಇದನ್ನು ಬಳಸುತ್ತಿವೆ.
ಪ್ರಧಾನಿ ಮೋದಿಯವರ ಇತ್ತೀಚಿನ ಮನವಿಯ ಬೆನ್ನಲ್ಲೇ, 1967ರ ಜೂನ್ 6ರ ‘ದಿ ಹಿಂದೂ’ ಪತ್ರಿಕೆಯ ತುಣುಕೊಂದು ವೈರಲ್ ಆಗುತ್ತಿದೆ. ಅದರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ವಿದೇಶಿ ವಿನಿಮಯದ ಬಿಕ್ಕಟ್ಟಿನ ಕಾರಣದಿಂದ ಜನರಲ್ಲಿ “ಚಿನ್ನ ಖರೀದಿಸಬೇಡಿ” ಎಂದು ಮನವಿ ಮಾಡಿದ್ದರು ಎಂಬ ಸುದ್ದಿಯ ತುಣುಕನ್ನು ಕಾಣಬಹುದು.
ಚಿಕ್ಕಬಳ್ಳಾಪುರದ ಸಂಸದ ಡಾ. ಕೆ ಸುಧಾಕರ್ ತಮ್ಮ ಎಕ್ಸ್ ಖಾತೆಯ ಮೂಲಕ ಪೋಸ್ಟ್ಅನ್ನು ಹಂಚಿಕೊಂಡಿದ್ದು ಪ್ರಧಾನಿ ಮೋದಿ ಮಾಡಿರುವ ಮನವಿಯನ್ನು ಸಮರ್ಥಿಸಿಕೊಂಡಿದ್ದಾರೆ.
“1967ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ನಮ್ಮ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸಲು ಚಿನ್ನ ಖರೀದಿಸುವುದನ್ನು ನಿಲ್ಲಿಸುವಂತೆ ಭಾರತೀಯರಲ್ಲಿ ‘ರಾಷ್ಟ್ರೀಯ ಶಿಸ್ತಿಗಾಗಿ’ (National Discipline) ಕಳಕಳಿಯ ಮನವಿ ಮಾಡಿದ್ದರು.
2013ರಲ್ಲಿ ಅಂದಿನ ಹಣಕಾಸು ಸಚಿವ ಶ್ರೀ ಪಿ. ಚಿದಂಬರಂ ಅವರು ಹೆಚ್ಚಾಗುತ್ತಿರುವ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ತಡೆಯಲು “ಚಿನ್ನ ಖರೀದಿಸುವ ಆಸೆಯನ್ನು ತಡೆಹಿಡಿಯಿರಿ” ಎಂದು ನಾಗರಿಕರಲ್ಲಿ ಪದೇ ಪದೇ ವಿನಂತಿಸಿದ್ದರು.
ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅದೇ ಆರ್ಥಿಕ ತರ್ಕದ ಅಡಿಯಲ್ಲಿ ಅಂತಹದ್ದೇ ಮನವಿಯನ್ನು ಮಾಡಿದಾಗ, ಕಾಂಗ್ರೆಸ್ ಪಕ್ಷವು ಅದನ್ನು ಅಣಕಿಸಲು ಧಾವಿಸುತ್ತಿದೆ.
ಇದು ವಿರೋಧವಲ್ಲ, ಇದು ಅವಕಾಶವಾದ. ಇತಿಹಾಸ ಅಥವಾ ಆರ್ಥಿಕ ತಾರ್ಕಿಕತೆಯ ತಿಳುವಳಿಕೆಯಿಲ್ಲದೆ, ಕೇವಲ ವಿರೋಧಿಸಬೇಕೆಂಬ ಕಾರಣಕ್ಕಾಗಿ ವಿರೋಧಿಸುವುದು ಕೇವಲ ಕೆಟ್ಟ ರಾಜಕಾರಣವಲ್ಲ, ಇದು ರಾಷ್ಟ್ರಕ್ಕೆ ಮಾಡುವ ದ್ರೋಹವಾಗಿದೆ.
ಪಕ್ಷದ ಹಿತಕ್ಕಿಂತ ರಾಷ್ಟ್ರದ ಹಿತಾಸಕ್ತಿ ಮುಖ್ಯವಾಗಿರುವ ಇಂತಹ ಸಮಯದಲ್ಲಿ, ಕಾಂಗ್ರೆಸ್ ನಾಯಕರು ಕ್ಷುಲ್ಲಕ ರಾಜಕಾರಣದಿಂದ ಮೇಲೆದ್ದು ರಾಷ್ಟ್ರದ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ತಪ್ಪೇ?”
Don’t buy gold said Indira Gandhi while asking for “national discipline” in 1967 pic.twitter.com/LslKCJUADQ
— Shashank Shekhar Jha (@shashank_ssj) May 12, 2026
ಬಿಜೆಪಿ ಹಲವು ಬೆಂಬಲಿಗರು ಇದೇ ಪೋಸ್ಟ್ಅನ್ನು ಪ್ರಧಾನಿ ಮೋದಿಯವರ ಮನವಿಯನ್ನು ಸಮರ್ಥಿಸಿ, ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿಯ ಮಾತುಗಳನ್ನು ಅಣಕಿಸುತ್ತಿದ್ದು, ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಅವರೂ ದೇಶದ ಹಿತ ದೃಷ್ಟಿಯಿಂದ ಇಂತಹದ್ದೆ ಮನವಿ ಮಾಡಿದ್ದರು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ BJP ಬೆಂಬಲಿಗರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಹಲವು ಪೋಸ್ಟ್ಗಳನ್ನ ನೀವು ಇಲ್ಲಿ ನೋಡಬಹುದು.
ಹಾಗಿದ್ದರೆ ಇಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಗಳಲ್ಲಿ ಇರುವ ಪತ್ರಿಕಾ ತಣುಕು ಮತ್ತು ಬಿಜೆಪಿ ಬೆಂಬಲಿಗರು ಇಂದಿರಾ ಗಾಂಧಿ ಮೇಲೆ ಮಾಡಲಾಗುತ್ತಿರುವ ಪ್ರತಿಪಾದನೆಯಲ್ಲಿ ಸತ್ಯಾಂಶ ಇದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಗಳನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಇಂದಿರಾ ಗಾಂಧಿ 1967ರಲ್ಲಿ ಹೇಳಿದ್ದಾರೆ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ಪತ್ರಿಕಾ ತುಣುಕು ಸಂಪೂರ್ಣ ಸುಳ್ಳು ಮತ್ತು ಎಡಿಟ್ ಮಾಡಲಾದ (Fabricated) ಚಿತ್ರವಾಗಿದೆ.
ದಿ ಹಿಂದೂ’ ಪತ್ರಿಕೆಯ ಸ್ಪಷ್ಟನೆ:
ವೈರಲ್ ಚಿತ್ರದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿರುವ ‘ದಿ ಹಿಂದೂ’ ಸಂಸ್ಥೆ, “ಜೂನ್ 6, 1967ರ ಮುಖಪುಟ ಎಂದು ಹರಿದಾಡುತ್ತಿರುವ ಚಿತ್ರವು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ. ಇದು ನಮ್ಮ ಪತ್ರಿಕೆಯ ಇತಿಹಾಸದಲ್ಲಿ ಪ್ರಕಟವಾಗಿಲ್ಲ. ಓದುಗರು ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರದಿಂದಿರಿ” ಎಂದು ‘X‘ (ಟ್ವಿಟರ್) ಮೂಲಕ ಸ್ಪಷ್ಟಪಡಿಸಿದೆ.
ಅಸಲಿ ಮುಖಪುಟದ ಪರಿಶೀಲನೆ:
ಪತ್ರಿಕೆಯ ಹಳೆಯ ದಾಖಲೆಗಳನ್ನು (Archives) ಪರಿಶೀಲಿಸಿದಾಗ, ಜೂನ್ 6, 1967ರ ಅಸಲಿ ಮುಖಪುಟದಲ್ಲಿ ಇಂತಹ ಯಾವುದೇ ಸುದ್ದಿ ಇರಲಿಲ್ಲ ಎಂಬುದು ಸಾಬೀತಾಗಿದೆ. ಪತ್ರಕರ್ತ ಬಿ. ಕೋಲಪ್ಪನ್ ಅವರು ಅಂದಿನ ಅಸಲಿ ಮುಖಪುಟವನ್ನು ಹಂಚಿಕೊಂಡಿದ್ದಾರೆ.
1968ರಲ್ಲಿ ಇಂದಿರಾ ಗಾಂಧಿಯವರ ಸರ್ಕಾರದ ಅವಧಿಯಲ್ಲಿ, ಅಂದಿನ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರು ‘ಗೋಲ್ಡ್ ಕಂಟ್ರೋಲ್ ಆಕ್ಟ್’ (ಚಿನ್ನದ ನಿಯಂತ್ರಣ ಕಾಯ್ದೆ) ಅನ್ನು ಜಾರಿಗೆ ತಂದರು. ಈ ಕಾನೂನಿನ ಪ್ರಕಾರ ನಾಗರಿಕರು ಚಿನ್ನದ ಗಟ್ಟಿ ಅಥವಾ ನಾಣ್ಯಗಳನ್ನು ಹೊಂದುವುದನ್ನು ನಿಷೇಧಿಸಲಾಗಿತ್ತು. ಈ ಕಾಯ್ದೆಯನ್ನು 1990ರಲ್ಲಿ ರದ್ದುಗೊಳಿಸಲಾಯಿತು.
ಇಂದಿರಾ ಗಾಂಧಿಯವರು 1967ರಲ್ಲಿ ಜನರಲ್ಲಿ ಚಿನ್ನ ಖರೀದಿಸಬೇಡಿ ಎಂದು ಮನವಿ ಮಾಡಿದ್ದರು ಎನ್ನಲಾದ ಪತ್ರಿಕಾ ತುಣುಕು ನಕಲಿ. ಬಿಜೆಪಿಯ ಐಟಿ ಸೆಲ್ ಮತ್ತು ಕೆಲವು ಮಾಧ್ಯಮಗಳು ಹಳೆಯ ಇತಿಹಾಸವನ್ನು ತಿರುಚಿದ ಚಿತ್ರದ ಮೂಲಕ ಜನರ ಮುಂದೆ ಇಡುತ್ತಿವೆ.
ಇಂದಿರಾ ಗಾಂಧಿ ವಿದೇಶಿ ವಿನಿಮಯ ಬಿಕ್ಕಟ್ಟು ಎದುರಿಸಲು ‘ಕಾನೂನು’ ಜಾರಿ ಮಾಡಿದ್ದರು. ಆದರೆ ನರೇಂದ್ರ ಮೋದಿ ಸಾರ್ವಜನಿಕ ಸಭೆಯಲ್ಲಿ ‘ಮನವಿ’ ಮಾಡುತ್ತಿದ್ದಾರೆ. ಮೋದಿಯವರ ಇಂದಿನ ನಡೆಯನ್ನು ಸಮರ್ಥಿಸಲು ಹಳೆಯ ಪತ್ರಿಕೆಯ ಹೆಸರಿನಲ್ಲಿ ಸುಳ್ಳು ಚಿತ್ರವನ್ನು ಸೃಷ್ಟಿಸಲಾಗಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದ ಆರ್ಥಿಕತೆಯನ್ನು ಕಾಪಾಡುವ ದೃಷ್ಟಿಯಿಂದ ಜನತೆ “ರೂಪಾಯಿಯ ರಕ್ಷಕರು” (Guardians of the Rupee) ಆಗಬೇಕು ಎಂದು ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ‘ವರ್ಕ್ ಫ್ರಮ್ ಹೋಮ್’ಗೆ ಆದ್ಯತೆ ನೀಡಿ, ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ತಡೆಯಿರಿ, ಪೆಟ್ರೋಲ್, ಡೀಸೆಲ್ ಬಳಕೆ ತಗ್ಗಿಸಲು ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆ ಬಳಸಿ, ಅಡುಗೆ ಎಣ್ಣೆ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ರಾಸಾಯನಿಕ ಗೊಬ್ಬರ ಅವಲಂಬನೆ ತಗ್ಗಿಸಿ, ನೈಸರ್ಗಿಕ ಕೃಷಿಯತ್ತ ಮುಖಮಾಡಿ, ವಿದೇಶಿ ಬ್ರ್ಯಾಂಡ್ ವಸ್ತುಗಳ ಬಳಕೆ ಕಡಿಮೆ ಮಾಡಿ, ‘ಸ್ವದೇಶಿ’ ಅಳವಡಿಸಿಕೊಳ್ಳಿ, ಒಂದು ವರ್ಷದವರೆಗೆ ಅನಗತ್ಯ ವಿದೇಶಿ ಪ್ರಯಾಣವನ್ನು ಕೈಬಿಡಿ ಎಂದು ಏಳು ಸಲಹೆಗಳನ್ನು ನೀಡಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿ ಹೇಳಿಕೆಗೆ ದೇಶದೆಲ್ಲಡೆ ಪರ ವಿರೋಧದ ಚರ್ಚೆಯಾಗುತ್ತಿರುವ ಹೊತ್ತಲ್ಲಿ ಅದನ್ನು ಸಮರ್ಥಿಸಲು ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಇಂದಿರಾ ಗಾಂಧಿ 1967ರಲ್ಲಿ ಇದನ್ನೆ ಹೇಳಿದ್ದರು ಎಂಬ ಫೇಕ್ ನೆರೇಷನ್ ರೂಪಿಸಲು ಸುಳ್ಳು ಪೋಸ್ಟ್ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.


