Homeಮುಖಪುಟಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

- Advertisement -
- Advertisement -

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಭಗೀರತ್ ಕಳೆದ ಆರು ತಿಂಗಳಿನಿಂದ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಹೈದರಾಬಾದ್‌ನ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ಹೈದರಾಬಾದ್‌ನ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

2025ರ ಡಿಸೆಂಬರ್ 31ರಂದು ಫಾರ್ಮ್‌ಹೌಸ್‌ನಲ್ಲಿ ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರು ಆಧರಿಸಿ ಭಗೀರತ್ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 11 ಮತ್ತು 12 (ಲೈಂಗಿಕ ಕಿರುಕುಳ) ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 74 ಮತ್ತು 75ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಆರೋಪಗಳನ್ನು ನಿರಾಕರಿಸಿರುವ ಭಗೀರತ್, ಬಾಲಕಿ ಮತ್ತು ಆಕೆಯ ಪೋಷಕರು ತನ್ನಿಂದ 5 ಕೋಟಿ ರೂಪಾಯಿ ಹಣಕ್ಕಾಗಿ ಬೇಡಿಕೆಯಿಟ್ಟು ಬೆದರಿಕೆ ಹಾಕುತ್ತಿದ್ದಾರೆ. ಇದು ಹನಿಟ್ರ್ಯಾಪ್ ಪ್ರಕರಣ ಎಂದು ಕರೀಂ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾನೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಪ್ರಕರಣದ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಡಿಜಿಪಿಗೆ ಆದೇಶಿಸಿದ್ದಾರೆ.

ವಿರೋಧ ಪಕ್ಷವಾದ ಬಿಆರ್‌ಎಸ್, ಬಂಡಿ ಸಂಜಯ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ. ಒಟ್ಟಿನಲ್ಲಿ ಈ ಪ್ರಕರಣ ತೆಲಂಗಾಣದಲ್ಲಿ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಗಮನಾರ್ಹ ವಿಷಯವೆಂದರೆ, ತನ್ನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗುವ ಕೆಲವೇ ಗಂಟೆಗಳ ಮೊದಲು, ಭಗೀರತ್ ಕರೀಂ ನಗರ ಪೊಲೀಸರಿಗೆ ಬಾಲಕಿಯ ಕುಟುಂಬದ ವಿರುದ್ಧ ದೂರು ನೀಡಿದ್ದ.

“ತನ್ನನ್ನು ಹನಿ ಟ್ರ್ಯಾಪ್ ಮೂಲಕ ಸಿಲುಕಿಸಿ, ಮದುವೆಯಾಗುವಂತೆ ಒತ್ತಡ ಹೇರಲಾಗುತ್ತಿದೆ. 5 ಕೋಟಿ ರೂಪಾಯಿ ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ” ಎಂದು ಆರೋಪಿಸಿರುವ ಆರೋಪಿ ಭಗೀರತ್, ಭಯದಿಂದ ತಾನು ಈಗಾಗಲೇ 50,000 ರೂಪಾಯಿ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಪ್ರಕರಣದ ಗಂಭೀರತೆ ಪರಿಗಣಿಸಿ ಮತ್ತು ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆ ಸಿಎಂ ಆದೇಶದಂತೆ ಡಿಜಿಪಿ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿದ್ದಾರೆ. ಈ ತಂಡದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಕುಕಟ್‌ಪಲ್ಲಿಯ ಮಹಿಳಾ ಐಪಿಎಸ್ ಅಧಿಕಾರಿ ಡಿಸಿಪಿ ರಿತಿರಾಜ್ ಗಾಯಕ್ವಾಡ್ ಅವರಿಗೆ ವಹಿಸಲಾಗಿದೆ.

ಪೊಲೀಸರು ಎರಡೂ ದೂರುಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನ ಮೇಲೆ ಹೈದರಾಬಾದ್‌ನ ಪೆಟ್ ಬಶೀರಾಬಾದ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ (FIR No. 684/2026) ದಾಖಲಾಗಿದೆ. ಅದೇ ರೀತಿ, ಭಗೀರತ್ ನೀಡಿದ ದೂರಿನ ಮೇಲೆ ಕರೀಂ ನಗರದಲ್ಲಿ ಬಾಲಕಿಯ ಕುಟುಂಬದ ವಿರುದ್ಧ ಸುಲಿಗೆ ಮತ್ತು ಬೆದರಿಕೆ ಪ್ರಕರಣ ದಾಖಲಾಗಿದೆ.

ಪೊಲೀಸರು ಈಗಾಗಲೇ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮತ್ತೊಮ್ಮೆ ಹೇಳಿಕೆ ಪಡೆಯುವ ಸಾಧ್ಯತೆಯಿದೆ. ಜೊತೆಗೆ, ಆರೋಪಿಯ ಮೊಬೈಲ್ ಕರೆ ವಿವರಗಳನ್ನು (ಸಿಡಿಆರ್) ತನಿಖಾ ತಂಡವು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.  

ಪೊಲೀಸರ ಪ್ರಕಾರ, ಕಳೆದ ಮೂರ್ನಾಲ್ಕು ದಿನಗಳಿಂದ ಭಗೀರತ್‌ನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಆತನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.

“ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು” ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಸಿ.ವಿ. ಆನಂದ್ ಹೇಳಿದ್ದಾರೆ.

ಆದರೆ, ಪ್ರಕರಣ ದಾಖಲಿಸಲು ವಿಳಂಬವೇಕಾಯಿತು ಎಂಬ ಪ್ರಶ್ನೆಗೆ, ಹೈದರಾಬಾದ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಭದ್ರತಾ ವ್ಯವಸ್ಥೆಯಲ್ಲಿ ಇಡೀ ಪೊಲೀಸ್ ಪಡೆ ಕಾರ್ಯನಿರತವಾಗಿತ್ತು ಎಂದು ಡಿಜಿಪಿ ಸಮಯಜಾಯಿಸಿ ನೀಡಿದ್ದಾರೆ.

ಭಗೀರತ್ ವಿರುದ್ದ ಪ್ರಕರಣ ದಾಖಲಿಸುವಲ್ಲಿ ವಿಳಂಬ

ಬಾಲಕಿಯ ತಾಯಿ ನೀಡಿದ ದೂರಿನ ಪ್ರಕಾರ, ಲೈಂಗಿಕ ದೌರ್ಜನ್ಯದ ಘಟನೆಯು 2025ರ ಡಿಸೆಂಬರ್ 31ರಂದು ಮೊಯಿನಾಬಾದ್‌ನ ಫಾರ್ಮ್‌ಹೌಸ್‌ನಲ್ಲಿ ನಡೆದಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಪೋಕ್ಸೋ ಪ್ರಕರಣ ದಾಖಲಾಗಿರುವುದು 2026ರ ಮೇ 8ರಂದು. ಅಂದರೆ, ಘಟನೆ ನಡೆದ ಸುಮಾರು ನಾಲ್ಕು ತಿಂಗಳ ನಂತರ ಪ್ರಕರಣ ದಾಖಲಾಗಿದೆ.

ಮೇ 8ರಂದು ಎಫ್‌ಐಆರ್ ದಾಖಲಾದರೂ, ಮೇ 11ರವರೆಗೆ ಆರೋಪಿಯ ವಿರುದ್ಧ ಯಾವುದೇ ಕಠಿಣ ಕ್ರಮ ಅಥವಾ ತನಿಖೆ ವೇಗವಾಗಿ ನಡೆದಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಈ ವಿಳಂಬಕ್ಕೆ ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ. ಆನಂದ್ ಅವರು ನೀಡಿದ ವಿವರಣೆಯೆಂದರೆ, ಮೇ 9 ಮತ್ತು 10ರಂದು ಹೈದರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಇದ್ದ ಕಾರಣ ಸುಮಾರು 10,000ಕ್ಕೂ ಹೆಚ್ಚು ಪೊಲೀಸರು ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದರು. ಈ ಕಾರಣದಿಂದಾಗಿ ಪ್ರಕರಣದ ತನಿಖೆ ತಡವಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯ ಈ ಸಮಜಾಯಿಸಿ ನಗು ತರಿಸುವಂತಿದೆ. ಪ್ರಧಾನಿ ಬಂದರೆ ಪೊಲೀಸರು ಎಲ್ಲಾ ಕೆಲಸ ಬಿಟ್ಟು ಪ್ರಧಾನಿಗೆ ಭದ್ರತೆ ಕೊಡುವ ಬಗ್ಗೆ ಮಾತ್ರ ಯೋಚಿಸಬೇಕೆ? ಯಾವುದೇ ಅಪರಾಧಗಳು, ಅವಘಡಗಳು ನಡೆದರೂ, ಕಾನೂನು ಸುವ್ಯವಸ್ಥೆ ಹಾಳಾದರೂ ತಲೆ ಕೆಡಿಸಿಕೊಳ್ಳುವುದು ಬೇಡವೇ? ಎಂಬ ಪ್ರಶ್ನೆ ಮೂಡುತ್ತದೆ.

ಕೋರ್ಟ್ ಮೊರೆ ಹೋದ ಆರೋಪಿ ಭಗೀರತ್

ತನ್ನ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದ ಪಾರಾಗಲು ಭಗೀರತ್ ತೆಲಂಗಾಣ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾನೆ ಎಂದು ವರದಿಯಾಗಿದೆ. ಈ ಅರ್ಜಿಯ ವಿಚಾರಣೆಯು ಮೇ 14ರಂದು ಹೈಕೋರ್ಟ್‌ನ ರಜಾಕಾಲದ ಪೀಠದ ಮುಂದೆ ನಡೆಯಲಿದೆ.

ಮೇ 12ರಂದು ಟೈಮ್ಸ್ ಆಫ್ ಇಂಡಿಯಾ ಮಾಡಿರುವ ವರದಿಯ ಪ್ರಕಾರ, ತನ್ನ ಅರ್ಜಿಯಲ್ಲಿ 23 ವರ್ಷದ ಭಗೀರತ್, ತಾನು ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಆರೋಪಿಸಲಾದ ಹುಡುಗಿಯು ಘಟನೆ ನಡೆದ ಸಮಯದಲ್ಲಿ ಅಪ್ರಾಪ್ತೆಯಾಗಿರಲಿಲ್ಲ ಮತ್ತು ತನ್ನ ವಿರುದ್ಧ ಮಾಡಲಾದ ಆರೋಪಗಳು ಸುಳ್ಳಾಗಿದ್ದು, ತನ್ನ ಕುಟುಂಬ ಹಾಗೂ ಸಂತ್ರಸ್ತೆಯ ಕುಟುಂಬದ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಪ್ರೇರಿತವಾಗಿವೆ ಎಂದು ವಾದಿಸಿದ್ದಾನೆ.

ಅಲ್ಲದೆ, ತಾನು ಮತ್ತು ಹುಡುಗಿಯ ನಡುವಿನ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ಕೂಡಿದ್ದು, ಯಾವುದೇ ದೂರು ದಾಖಲಾಗದೆ ಸುದೀರ್ಘ ಅವಧಿಯವರೆಗೆ ಮುಂದುವರಿದಿತ್ತು ಎಂದು ಹೇಳಿದ್ದಾನೆ. ಜನವರಿ 2026ರಲ್ಲಿ ಹುಡುಗಿಯ ಕುಟುಂಬಕ್ಕೆ ಈ ಸಂಬಂಧದ ಬಗ್ಗೆ ತಿಳಿದ ನಂತರವೂ ತಕ್ಷಣವೇ ಯಾವುದೇ ಪೊಲೀಸ್ ದೂರು ದಾಖಲಾಗಿರಲಿಲ್ಲ ಮತ್ತು ಎರಡು ಕಡೆಯವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ನಂತರವಷ್ಟೇ, ಅಂದರೆ ಮೇ 2026ರಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾನೆ. ಅಲ್ಲದೆ, ಹಣ ಸುಲಿಗೆಯ ಬೇಡಿಕೆಗಳು ಮತ್ತು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆಗಳ ವಿರುದ್ಧ ತಾನು ಈಗಾಗಲೇ ಹುಡುಗಿಯ ಕುಟುಂಬದವರ ಮೇಲೆ ಹಿಂದೆಯೇ ದೂರುಗಳನ್ನು ದಾಖಲಿಸಿದ್ದಾಗಿ ತಿಳಿಸಿದ್ದಾನೆ. ಪ್ರಸ್ತುತ ಎಫ್‌ಐಆರ್ ಅನ್ನು ಪ್ರತಿಕಾರದ ಕ್ರಮವಾಗಿ ದಾಖಲಿಸಲಾಗಿದೆ ಎಂದು ಪ್ರತಿಪಾದಿಸಿರುವ ಭಗೀರತ್, ಬಂಧನದಿಂದ ರಕ್ಷಣೆ ಕೋರಿದ್ದಾನೆ.

2021ರಲ್ಲಿ ಸಂತ್ರಸ್ತ ಬಾಲಕಿಯ ವಿರುದ್ಧ ದಾಖಲಾಗಿದ್ದ ‘ಅಪ್ರಾಪ್ತ ವಯಸ್ಸಿನ ಚಾಲನೆ’ (Under-age driving) ಪ್ರಕರಣದಲ್ಲಿ ಆಕೆಯ ವಯಸ್ಸು 15 ವರ್ಷ ಹಾಗೂ ಆಕೆ 9ನೇ ತರಗತಿ ಓದುತ್ತಿದ್ದಳು ಎಂದು ದಾಖಲಾಗಿದೆ. ಆ ಲೆಕ್ಕಾಚಾರದ ಪ್ರಕಾರ ಪ್ರಸ್ತುತ ಆಕೆಗೆ 19 ರಿಂದ 20 ವರ್ಷ ವಯಸ್ಸಾಗಿರಬೇಕು. ಹೀಗಾಗಿ ಆಕೆ ಅಪ್ರಾಪ್ತೆಯಲ್ಲದ ಕಾರಣ ಈ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಭಗೀರತ್ ವಾದಿಸಿದ್ದಾನೆ.

ಇದಲ್ಲದೆ, ಬಾಲಕಿಯ ತಾಯಿ ನೀಡಿದ ದೂರಿನಲ್ಲೇ ವಿರೋಧಾಭಾಸಗಳಿವೆ. ಡಿಸೆಂಬರ್ 31 ರಂದು ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದ್ದರೂ, ಜನವರಿ 7ರವರೆಗೂ ಇಬ್ಬರ ನಡುವೆ ಸಂಬಂಧ ಮುಂದುವರಿದಿತ್ತು ಎಂದು ದೂರಿನಲ್ಲೇ ಹೇಳಲಾಗಿದೆ. ಹಾಗಾಗಿ, ತನ್ನ ಮತ್ತು ಆ ಹುಡುಗಿ ನಡುವೆ ಇದ್ದದ್ದು ಪರಸ್ಪರ ಸಮ್ಮತಿಯಿಂದ ಕೂಡಿದ ದೀರ್ಘಾವಧಿಯ ಸಂಬಂಧವಾಗಿತ್ತು. ಆ ಸಮಯದಲ್ಲಿ ಯಾವುದೇ ದೂರುಗಳು ಇರಲಿಲ್ಲ ಎಂದು ಹೇಳಿದ್ದಾನೆ.

ಸರ್ಕಾರದ ನಡೆಯ ವಿರುದ್ದ ಆಕ್ರೋಶ

ತೆಲಂಗಾಣ ಟುಡೇ ಮೇ 12ರಂದು ಮಾಡಿರುವ ವರದಿಯ ಪ್ರಕಾರ, ಭಗೀರತ್ ವಿರುದ್ದದ ಗಂಭೀರ ಪ್ರಕರಣದಲ್ಲಿ ತೆಲಂಗಾಣದ ಕಾಂಗ್ರೆಸ್ ಸರ್ಕಾರದ ನಡೆ ಸ್ವತಃ ಕಾಂಗ್ರೆಸ್‌ ನಾಯಕರಲ್ಲೇ ಅಸಮಾಧಾನ ಉಂಟು ಮಾಡಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಕೇಂದ್ರ ಸಚಿವನ ಮಗನ ವಿರುದ್ಧದ ಪ್ರಕರಣ ಎಂದು ಮೃದು ಧೋರಣೆ ತೋರುತ್ತಿದೆ ಎಂಬ ದಾಟಿಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಲು ಶುರು ಮಾಡಿದ್ದಾರೆ.

ಆರಂಭದಲ್ಲಿ ಮೌನವಹಿಸಿ, ಪ್ರಕರಣ ದಾಖಲಾದ ಮೂರು ದಿನಗಳ ನಂತರ ಸಿಎಂ ರೇವಂತ್ ರೆಡ್ಡಿ ಮಾತನಾಡಿರುವುದು ಕೂಡ ಅಸಮಧಾನಕ್ಕೆ ಕಾರಣವಾಗಿದೆ.

ಸೋಮವಾರ ಸಿಎಂಒ (ಮುಖ್ಯಮಂತ್ರಿಗಳ ಕಚೇರಿ) ಪ್ರಕಟಣೆ ಹೊರಡಿಸಿದ್ದು, ಎಫ್‌ಐಆರ್ ದಾಖಲಾದ ನಂತರವೂ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣ ಏನೆಂದು ಡಿಜಿಪಿ ಸಿವಿ ಆನಂದ್ ಅವರನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ ಎಂದು ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಸರ್ಕಾರದ ನಡೆಯ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಪ್ರೊಫೈಲ್ ಸ್ಟೇಟಸ್‌ನಲ್ಲಿ “ಆರ್‌ಜಿ (ರಾಹುಲ್ ಗಾಂಧಿ) ಅವರ ಒಳಗೊಳ್ಳುವಿಕೆಯ ದೃಷ್ಟಿಕೋನದಿಂದ ಪ್ರೇರಿತ” ಎಂದು ಬರೆದುಕೊಂಡಿರುವ, ಎಕ್ಸ್ ಬಳಕೆದಾರರಾದ ಅಮಾಕ್, ಮಂಗಳವಾರ ಸಿಎಂಗೆ ಟ್ಯಾಗ್ ಮಾಡಿ, “ಅವರನ್ನು (ಆರೋಪಿ ಭಗೀರತ್‌) ಯಾವಾಗ ಬಂಧಿಸುತ್ತೀರಿ” ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸರ್ಕಾರ ಪೊಲೀಸರ ಕೈ ತೋರಿಸುತ್ತಿದೆ.

“ಪೋಕ್ಸೊ ಪ್ರಕರಣದಲ್ಲಿ ರೇವಂತ್ ರೆಡ್ಡಿ ಅವರಿಗೆ ಕೆಟ್ಟ ಪ್ರಚಾರ (Bad PR) ಸಿಗುತ್ತಿದೆ. ಬಿಜೆಪಿ ಕೇಂದ್ರ ಸಚಿವರ ಮಗನನ್ನು ಸರ್ಕಾರ ಬೆಂಬಲಿಸುತ್ತಿರುವುದರ ವಿರುದ್ಧ ಪಕ್ಷದೊಳಗಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ” ಎಂದು ಎಕ್ಸ್ ಬಳಕೆದಾರರಾದ ಪ್ರವೀಣ್ ಹೇಳಿದ್ದಾರೆ.

“ಗೂಂಡಾಗಳು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಹರಡುತ್ತಿದ್ದರೂ, ಪೊಲೀಸರು ಅವರಿಗೆ ಒಂದು ಎಚ್ಚರಿಕೆಯನ್ನೂ ನೀಡುವಲ್ಲಿ ವಿಫಲರಾಗಿದ್ದಾರೆ. ಇದರ ಮೂಲಕ ಪೊಲೀಸರು ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ” ಎಂದು ಪ್ರವೀಣ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯು ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕು. ದಯವಿಟ್ಟು ಸಾರ್ವಜನಿಕರ ಬೆಂಬಲವನ್ನು ಲಘುವಾಗಿ ತೆಗೆದುಕೊಳ್ಳಬೇಡಿ” ಎಂದು ಮತ್ತೊಬ್ಬ ಎಕ್ಸ್ ಬಳಕೆದಾರರಾದ ತುಷಾರ್ ಮಂಗಲ್ ಹೇಳಿದ್ದಾರೆ.

ಪ್ರಸ್ತುತ ಭಗೀರತ್ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾನೆ. ಆತನಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಹಾಗಾಗಿ, ಬಂಧಿಸಲು ಪೊಲೀಸರಿಗೆ ಇನ್ನೂ ಅವಕಾಶವಿದೆ. ಮೇ 8ರಂದು ಎಫ್‌ಐಆರ್‌ ದಾಖಲಾಗಿರುವುದನ್ನು ಲೆಕ್ಕ ಹಾಕಿದರೆ ಇಂದಿಗೆ 5 ದಿನಗಳಾಯಿತು. ಇದುವರೆಗೆ ಪೊಲೀಸರು ಆತನ ಬಂಧನದ ಬಗ್ಗೆ ಗಂಭೀರವಾಗಿ ಪ್ರಯತ್ನಿಸಿದಂತೆ ತೋರುತ್ತಿಲ್ಲ. ಪೊಲೀಸರ ನಡೆ ಆತ ನಿರೀಕ್ಷಣಾ ಜಾಮೀನು ಪಡೆಯಲು ಸಮಯವಕಾಶ ನೀಡಿದಂತಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.

ಅಂತರ ಕಾಯ್ದಕೊಂಡ ಬಿಜೆಪಿ

ಭಗೀರತ್ ವಿರುದ್ದದ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಕೈ ತೊಳೆದುಕೊಂಡಿದೆ. ಈ ಪ್ರಕರಣದಲ್ಲಿ ಬಿಜೆಪಿ ಮೌನ ವಹಿಸಿದೆ ಅಥವಾ ದೂರ ಸರಿದಿದೆ ಎಂಬ ಚರ್ಚೆಗಳ ಬೆನ್ನಲ್ಲೇ, ತೆಲಂಗಾಣ ರಾಜ್ಯ ಬಿಜೆಪಿ ಘಟಕವು ಈ ವಿಷಯದ ಕುರಿತು ತನ್ನ ನಿಲುವನ್ನು ಬಹಿರಂಗಪಡಿಸಿದೆ.

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಎನ್. ರಾಮಚಂದ್ರ ರಾವ್ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣವು ಕೇವಲ ಬಂಡಿ ಸಂಜಯ್ ಅವರ ವೈಯಕ್ತಿಕ ಹಾಗೂ ಕೌಟುಂಬಿಕ ವಿಷಯವಾಗಿದ್ದು, ಇದಕ್ಕೆ ಪಕ್ಷವನ್ನು ಜೋಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ವಿವಾದಕ್ಕೂ ಕೇಂದ್ರ ಸಚಿವ ಬಂಡಿ ಸಂಜಯ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ. ಅವರ ಮಗನ ವಿರುದ್ಧದ ಆರೋಪಗಳಿಗೆ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಪಕ್ಷ ತಿಳಿಸಿದೆ.

ಕಾನೂನಿನ ಮುಂದೆ ಎಲ್ಲರೂ ಒಂದೇ ಆಗಿದ್ದು, ಪೊಲೀಸರು ಈ ಬಗ್ಗೆ ಯಾವುದೇ ರಾಜಕೀಯ ಪ್ರಭಾವವಿಲ್ಲದೆ ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. 



 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...