Homeಮುಖಪುಟವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

- Advertisement -
- Advertisement -

ಕೆಲವು ದಿನಗಳಿಂದ ದಿನಪತ್ರಿಕೆಗಳಿಂದ ದೇಶದ ಆಗುಹೋಗುಗಳನ್ನು ಗಮನಿಸುತ್ತಾ ಹೋದಂತೆ, ಹಲವು ವಿಷಯಗಳು ನನ್ನಲ್ಲಿ ಭಯ, ಆತಂಕ, ತಲ್ಲಣಗಳನ್ನು ಉಂಟುಮಾಡುತ್ತಿದ್ದವು. ಹೀಗೆ ಕೆಲವು ದಿನಗಳ ಹಿಂದೆ, ಕುವೆಂಪು ಅವರ ಒಂದು ಪುಸ್ತಕ ತೆರೆದು ’ಓ, ಬನ್ನಿ, ಸೋದರರೆ, ಬೇಗ ಬನ್ನಿ!’ ಕವಿತೆಯ ಸಾಲುಗಳನ್ನು ಗಮನಿಸುತ್ತಿದ್ದೆ..

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ.
ಓ, ಬನ್ನಿ, ಸೋದರರೆ, ವಿಶ್ವಪಥಕೆ!

ಎನ್ನುವ ಕೊನೆಯ ಸಾಲುಗಳನ್ನು ಓದಿ ಏಕೋ ಮನಸ್ಸು ಕದಡಿದಂತಾಗಿ ಪುಸ್ತಕವನ್ನು ಮುಚ್ಚಿದೆ; ಯಾವುದೋ ಆಲೋಚನೆಯಲ್ಲಿ ಮುಳುಗಿದಂತೆ ನನ್ನ ಕಣ್ಣು ಪುಸ್ತಕದ ಮೇಲಿದ್ದ ಕುವೆಂಪು ಚಿತ್ರವನ್ನೇ ದೃಷ್ಟಿಸುತ್ತಿತ್ತು. ನಮ್ಮ ಮನೆಯ ಪುಟ್ಟ ಪಾಪು ಬಂದು, ’ಯಾಕೆ ಮಾಮ, ಕುವೆಂಪು ತಾತನ್ನ ಅಂಗೆ ನೋಡ್ತಾಯಿದ್ದಿ?’ ಎಂದು ತನ್ನ ತೊದಲು ನುಡಿಯ ಮೂಲಕ ಪ್ರಶ್ನಾಯುಧವನ್ನು ಹಿಡಿದು ನಿಂತಿತು. ಆ ಕ್ಷಣಕ್ಕೆ ಕೆಲವು ದಿನಗಳಿಂದ ಕಾಡುತ್ತಿದ್ದ ಭಯ, ಆತಂಕ, ತಲ್ಲಣಗಳು ತಟ್ಟನೆ ಕಣ್ಣೆದುರು ಬಂದು ಅಣಕಮಾಡತೊಡಗಿದವು! ಮರುಕ್ಷಣವೆ ಏನೋ ಹೊಳೆದಂತಾಗಿ ನಿರಾಯುಧನಾಗಿಬಿಟ್ಟೆ.

ಒಂದುಕಡೆ ಇನ್ನು ಲೋಕವನ್ನರಿಯದ ಪುಟ್ಟ, ಮತ್ತೊಂದು ಕಡೆ ಲೋಕದ ಆಂತರ್ಯವನ್ನು ಅರಿತ ಪುಟ್ಟಪ್ಪ; ಮಗದೊಂದು ಕಡೆ ವರ್ತಮಾನದ ತಲ್ಲಣಗಳು. ಎದುರಾಳಿಗಳಾಗಿ ನಿಂತು ಚಿಂತನಯುದ್ಧಕ್ಕೆ ಆಹ್ವಾನವನ್ನೀಯುವಂತೆ ಕಂಡಿತು. ಈ ಪುಟ್ಟ ಕಣ್ಮುಂದೆ ತಂದ ತಲ್ಲಣಗಳು ಪುಟ್ಟಪ್ಪನ ಮೂಲಕ ಬಗೆಹರಿಯಬಹುದೆ? ಎಂದುಕೊಳ್ಳುತ್ತಿರುವಾಗ ನನ್ನ ಸ್ಮೃತಿಪಟಲದಲ್ಲಿ ಕುವೆಂಪುವಿನ ಬಗೆಗಿನ ವಿಚಾರಸುರುಳಿ ಎಳೆಎಳೆಯಾಗಿ ಬಿಚ್ಚಿಕೊಳ್ಳತೊಡಗಿತು. ಇದೇ ಕಾರಣವಾಗಿ ಶಾಂತವಾಗಿದ್ದ ನನ್ನ ತಲೆ ಪ್ರಶ್ನೋತ್ತರಗಳ ಯುದ್ಧಕಣವಾಗಿ ಮಾರ್ಪಟ್ಟಿತು.

ಪ್ರಶ್ನೆಗೆ ಪ್ರಶ್ನೆ ಎನ್ನುವಂತೆ, ಪುಟ್ಟ ಹಾಕಿದ ಪ್ರಶ್ನೆ ನನ್ನಲ್ಲಿ ಮತ್ತೊಂದು ಪ್ರಶ್ನೆಗೆ ದಾರಿಮಾಡಿಕೊಟ್ಟಿತು. ನನ್ನನ್ನು ಕಾಡುತ್ತಿರುವ ತಲ್ಲಣಗಳನ್ನು ಈ ಪುಟ್ಟನಿಗೆ ಆರ್ಥಮಾಡಿಸುವುದಾದರೂ ಹೇಗೆ? ಎಂದು. ಏಕೆಂದರೆ, ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇನ್ನೂ ಅವನ ಅರಿವಿಗೆ ನಿಲುಕದವು. ಮತವೆಂದರೆ ಏನು ಎಂಬುವುದೆ ತಿಳಿಯದ ಕಂದನಿಗೆ, ಮತದ್ವೇಷ, ಮತಾಂಧತೆ, ಮತಾಂತರ, ಮತಾಂತರ ನಿಷೇಧ ಕಾನೂನು, ಜಾತಿ, ಜಾತೀಯತೆ, ಜಾತ್ಯತೀತತೆ, ಆಹಾರ ರಾಜಕಾರಣ, ಭ್ರಷ್ಟಾಚಾರ, ಮೌಢ್ಯತೆ, ಏಕರಾಷ್ಟ್ರಭಾಷೆ, ರೈತ ಮರಣಶಾಸನಗಳು- ಹೀಗೆ ನನ್ನನ್ನು ಕಾಡುತ್ತಿರುವ ತಲ್ಲಣಗಳನ್ನು ಅರ್ಥೈಸಲು ಸಾಧ್ಯವೇ? ಜತೆಗೆ ಇವುಗಳ ಯಾವ ಬಂಧನದ ಗೊಡವೆಯೂ ಇಲ್ಲದೆ ಸ್ವತಂತ್ರವಾಗಿರುವ ಮಗುವನ್ನು ಇವನ್ನೆಲ್ಲ ಹೇಳಿ ನಾನೇ ಬಂಧನಕ್ಕೆ ತಳ್ಳಿಬಿಟ್ಟರೆ ಎನ್ನುವ ಭಯವೂ ಶುರುವಾಯಿತು. ಆದರೂ ವರ್ತಮಾನದ ತಲ್ಲಣಗಳ ವಿರುದ್ಧ ಯುದ್ಧಮಾಡಲು ನಿರಾಯುಧನಾಗಿ ನಿಂತಿದ್ದ ನನ್ನ ಸೇನೆಗೆ ಕುವೆಂಪು ಅವರ ’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’, ’ವಿಚಾರಕ್ರಾಂತಿಗೆ ಆಹ್ವಾನ’, ’ಓ, ಬನ್ನಿ, ಸೋದರರೆ, ಬೇಗ ಬನ್ನಿ’, ’ಇಂದಿನ ದೇವರು’, ’ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’, ’ಹೊಸಬಾಳಿನ ಗೀತೆ’, ’ನೇಗಿಲಯೋಗಿ’, ’ಕಲ್ಕಿ’, ’ಪಾಂಚಜನ್ಯ-ಈ ಎಲ್ಲಾ ಸಾಹಿತ್ಯ ಬರಹಗಳು ರಥ, ಆನೆ, ಕುದುರೆ, ಕಾಲಾಳುಗಳಾಗಿ ಬಂದು ಸೇರಿದವು. ಇದೇ ಆವೇಶದಲ್ಲಿ:

’ಈವೊತ್ತು ಎಲ್ಲ ಮತ ಮತ ಅಂತ ಬಾಯಿ ಬಡ್ಕೊಳ್ತಿದ್ದಾರಲ್ಲ’ ಅಂದೆ.
ಪಿಳಿಪಿಳನ ಕಣ್ಣು ಬಿಡುತ್ತಾ ಪುಟ್ಟ, ’ಮತ’ ಅಂದ್ರೆ? ಅಂದ.

ಅವನ ಮಾತುಕೇಳಿ ಬೆರಗಾಯಿತು. ಎಲ್ಲವನ್ನೂ ಪ್ರಶ್ನಿಸುವ ಸರ್ವಸ್ವತಂತ್ರನಾಗಿರುವವನಿಗೆ ಎಲ್ಲವನ್ನೂ ಉತ್ತರಿಸಲು, ಅರ್ಥೈಸಲು ಇದೇ ಸರಿಯಾದ ಕಾಲ! ಎಂದುಕೊಳ್ಳುತ್ತಿರುವಂತೆಯೇ ಮನೋವೇದಿಕೆಯಲ್ಲಿ ಗುರು-ಶಿಷ್ಯರಿಬ್ಬರು ಗೋಚರಿಸಿದಂತಾಯ್ತು. ಗುರುವಿನ ಬಾಯಿಯಿಂದ ಅಸ್ಪಷ್ಟವಾದ ಮಾತುಗಳು ಕೇಳಿಸತೊಡಗಿದವು. “ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ. ಪರಮಶಾಂತಿಯೂ ಆಗಿರುವ ಪರಮೇಶರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೆ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟು ಕಟ್ಟಳೆಗಳ ಕಾಟವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರ ಬರಗೊಡಿಸುವುದು; ಹಾಗೆ ಬರಗೊಡಿಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು; – ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಮತವನ್ನು ಕುರಿತು ನಮ್ಮಲ್ಲಿ ಯಾವ ಸ್ಪಷ್ಟತೆಯೂ ಇಲ್ಲ. ಎಲ್ಲಾ ಗೋಜಲು ಗೋಜಲಾಗಿದೆ. ಮತದ ಗುರಿ ಸಮಸ್ತ ಸೃಷ್ಟಿಯ ಸಾಮೂಹಿಕ ಪ್ರಜ್ಞೆಯ ವಿಕಾಸ, ಇಡೀ ವಿಶ್ವದ, ಮಾನವಕುಲದ ಆಧ್ಯಾತ್ಮಿಕ ವಿಕಾಸವಾಗಬೇಕಿತ್ತು. ಆದರೆ, ಯಾವುದು ಬಿಡುಗಡೆಗೆ ಸಾಧನವಾಗಬೇಕಿತ್ತೊ ಅದು ಹಿಂದೆಂದಿಗಿಂತಲೂ ಹೆಚ್ಚು ಬಂಧನವಾಗಿ ರೂಪುಗೊಳ್ಳುತ್ತಿದೆ. ವಿವೇಕವನ್ನು ಹೇಳಬೇಕಾದ ಮತಗಳು ದ್ವೇಷ ಅಸೂಯೆಯನ್ನು ಬಿತ್ತುತ್ತಿವೆ. ಧರ್ಮಸಂತತಿಯ ಅಭಿವೃದ್ಧಿಗಾಗಿ ಹಣ, ಅಧಿಕಾರ ಎಲ್ಲವನ್ನೂ ಬಳಸುತ್ತಿರುವವರು ಮಾನವೀಯತೆಯನ್ನು ಮಾತ್ರ ಗಂಟಲು ಕಟ್ಟಿ ರೇಷ್ಮೆವಸ್ತ್ರದಲ್ಲಿ ಸುತ್ತಿ ಯಾವುದೋ ಮೂಲೆಯಲ್ಲಿ ಬಿಸಾಡಿದ್ದಾರೆ. ಹೀಗೆ ಮತಿಹೀನವಾಗಿರುವ ಮತದಿಂದಾಗಿ ಜ್ಞಾನದ ಪ್ರಗತಿಯೂ ಕುಂಠಿತವಾಗಿದೆ. ಆದ್ದರಿಂದ ನಾವೆಲ್ಲರೂ ಮತಿಗೆಟ್ಟ ಮತವನ್ನು ತೊರೆದು ಆತ್ಮೋದ್ಧಾರಕ್ಕಾಗಿ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಬೇಕು” ಎನ್ನುತ್ತ ಆ ಗುರುವಾಣಿ ಆವೇಶಭರಿತವಾಗಿಯೇ ನುಡಿಯುತ್ತಿತ್ತು.

ಪುಟ್ಟ ಕೈಹಿಡಿದು ಅಲುಗಾಡಿಸಿದ್ದರಿಂದಾಗಿ ಮನೋವೇದಿಕೆಯ ಗುರು-ಶಿಷ್ಯರು ಮರೆಯಾದರು.

’ಯಾಕೆ?’ ಎಂದು ಪುಟ್ಟ ನಾನು ಮರೆತುಹೋಗಿದ್ದ ಪ್ರಶ್ನೆಯನ್ನು ನೆನಪಿಸಿದ. ಕುವೆಂಪು ಚಿತ್ರದಿಂದ ದೃಷ್ಟಿ ತೆಗೆದು, ’ಕುವೆಂಪು ತಾತನ ದೃಷ್ಟಿಯಲ್ಲಿ ಸೃಷ್ಟಿ ಇದೆಯಪ್ಪಾ’ ಎಂದೆ.

ಮತ್ತೆ ’ಅಂಗಂದ್ರೆ?’ ಎಂದ,

ಮತ್ತೆ ಕುವೆಂಪು ಅವರ ವಿಚಾರಗಳು, ವರ್ತಮಾನದ ತಲ್ಲಣಗಳು ಒಂದಿನಿತೂ ವ್ಯತ್ಯಾಸವಿಲ್ಲದೆ ನನ್ನ ಮುಂದೆ ನಿರೂಪಣೆಗೊಳ್ಳತೊಡಗಿದವು.

ಈಗಿನ ನಮ್ಮ ರಾಜಕೀಯ ರಂಗವಂತೂ ಹೇಗಾಗಿದೆ ಎಂದರೆ, ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ಪಕ್ಷವೂ ಅಧಿಕಾರಕ್ಕಾಗಿ ಬಾಯಿಬಿಡುವಂತಾಗಿದೆ. “ನಿಜವಾದ ಪ್ರಜಾಸತ್ತೆ ಎಂದರೆ ಅನಿರ್ಬಾಧಿತ ಇಚ್ಛಾ ಸ್ವಾತಂತ್ರ್ಯದಿಂದ ಪ್ರಜೆಗಳು ಆಯುವ ಪ್ರಾಮಾಣಿಕ ವ್ಯಕ್ತಿಗಳಿಂದ ಸರ್ವರ ಅಭ್ಯುದಯಕ್ಕಾಗಿ ನಡೆಯುವ ರಾಜ್ಯಭಾರ. ಆ ದೃಷ್ಟಿಯಿಂದ ನೋಡಿದರೆ ಈಗ ನಡೆಯುವ ಚುನಾವಣೆಗಳು ಪ್ರಜಾಸತ್ತಾತ್ಮಕ ಎಂದು ಹೇಳಲಾಗುತ್ತದೆಯೆ?” ಎಂಬ ಗುರುವಾಣಿ ನೆನಪಿಗೆ ಬಂದು, ಈಗ ನಡೆಯುವ ಚುನಾವಣೆಗಳಲ್ಲಂತೂ ಹಣದ ಹೊಳೆಯೆ ಹರಿಯುತ್ತಿರುವುದು, ಇನ್ನೂ ಬದಲಾಗದೆ ಹೋಗಿರುವ ಸಂಗತಿಗೆ ಮರುಗುವಂತಾಯಿತು. ಒಮ್ಮೆ ಅಧಿಕಾರಕ್ಕೆ ಬಂದವರು ತಮ್ಮ ಅಧಿಕಾರಾವಧಿ ಮುಗಿಯುವ ವೇಳೆಗೆ ಅವರ ಆಸ್ತಿ ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತಿರುವುದರಿಂದ, ಹೊಸಬರೂ, ಪ್ರಾಮಾಣಿಕರೂ, ಸಂಭಾವಿತರೂ ಈ ರಂಗದ ಹತ್ತಿರಕ್ಕೆ ಸುಳಿಯಲೂ ಸಾಧ್ಯವಾಗುತ್ತಿಲ್ಲ. ಏನೋ ಪ್ರಯತ್ನಪಟ್ಟು ಅವರೂ ಹಣದ ಹೊಳೆಹರಿಸಿ ಬಂದರೆ ಭ್ರಷ್ಟಾಚಾರಕ್ಕೆ ಬಲಿಯಾಗದೇ ಇರಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಅಧಿಕಾರದ ಪ್ರಹಸನಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರದರ್ಶನ ಕಾಣುತ್ತಿವೆ. ಹೀಗೆ ಆಯ್ಕೆಯಾದವರು ಅಧಿಕಾರದ ಆಸೆಯಿಂದಾಗಿ ನಮ್ಮ ನಾಡು ನುಡಿಯೊಂದಿಗೆ ತಮ್ಮತನವನ್ನೂ ಈ ನೆಲದ ಸಂಸ್ಕೃತಿ, ಅಸ್ಮಿತೆಯನ್ನೂ ಬಲಿಗೊಡುತ್ತಿದ್ದಾರೆ.

ಅಂತೆಯೇ ನಮ್ಮ ಇಂದಿನ ಆಹಾರ ರಾಜಕಾರಣವಂತೂ ಗಂಭೀರ ಸ್ಥಿತಿಯಲ್ಲಿದೆ. ಆರೋಗ್ಯವಂತ ಸಮಾಜದ ಹೊಣೆಹೊತ್ತಿರುವ ಸರ್ಕಾರಗಳು ಕೆಲವು ಮಠಮಾನ್ಯ ಸಂಸ್ಥೆಗಳ ಕೈಗೊಂಬೆಯಾಗಿವೆ. ವಿಜ್ಞಾನಕ್ಕಿಂತಲೂ ಹೆಚ್ಚಾಗಿ ಮಠಮಾನ್ಯಗಳು, ಸಂಸ್ಥೆಗಳು ಒಬ್ಬ ವ್ಯಕ್ತಿ ಎಷ್ಟು ಪ್ರಮಾಣದ ಕ್ಯಾಲರಿ ಇರುವ ಆಹಾರವನ್ನು ಸೇವಿಸಬೇಕೆಂದು ನಿರ್ಧರಿಸುತ್ತಿವೆ. ಯಾವ ಯಾವ ಆಹಾರದಲ್ಲಿ ಎಷ್ಟೆಷ್ಟು ಪ್ರಮಾಣದ ಕ್ಯಾಲರಿಯಿದೆ ಎನ್ನುವ ಪ್ರಮಾಣಪತ್ರವನ್ನು ನೀಡುವುದರ ಜತೆಗೆ ಯಾರ್‍ಯಾರು ಯಾವ್ಯಾವ ಆಹಾರವನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಯಾವಾಗ ಸೇವಿಸಬೇಕೆಂಬುದನ್ನೂ ನಿರ್ದೇಶಿಸುತ್ತಿವೆ.

ಕುವೆಂಪು ಧನ್ವಂತರಿ ಚಿಕಿತ್ಸೆಯ ಮೂಲಕ ಪ್ರತಿಮಾತ್ಮಕವಾಗಿ ತೋರಿಸಿದ ರೈತನ ಬದುಕು ಇಂದು ನಿಜವಾಗಿದೆ. ನೇಗಿಲ ಮೇಲೆ ನಿಂತಿದ್ದ ಧರ್ಮ ಇಂದು ಕಾಣದಾಗಿದೆ. ಇಡೀ ದೇಶದ ಬೆನ್ನೆಲುಬಾಗಿದ್ದ ನೇಗಿಲಿಡಿದ ರೈತನ ಬೆನ್ನು ಬಾಗಿದೆ; ತಾನೂ ಬದುಕಿ ಎಲ್ಲರನ್ನೂ ಬದುಕಿಸುವ, ಪೋಷಿಸುವ ಹೊಣೆಹೊತ್ತಿದ್ದ ರೈತನ ಬೆನ್ನುಮೂಳೆ ಮುರಿದು ಅವನನ್ನ ಬಲಹೀನನ್ನಾಗಿಸಿ ಅನಾಥನನ್ನಾಗಿಸಿದ್ದಾರೆ. ಇಂದಿನ ಅತಿಯಾದ ಮಾನವನ ದುರಾಸೆಯಿಂದಾಗಿ ಪ್ರಭುತ್ವದೊಂದಿಗೆ ಪ್ರಕೃತಿಯೂ ರೈತನಿಗೆ ವಿರುದ್ಧವಾಗಿ ನಿಂತಿದೆ. ಇಂದಿನ ಸರ್ಕಾರಗಳು ಜಾರಿಗೆ ತರುತ್ತಿರುವ ಶಾಸನಗಳು ರೈತರ ಮರಣಶಾಸನಗಳಾಗುತ್ತಿವೆ. ಅವುಗಳಿಗೆ ಪ್ರತಿರೋಧ ಒಡ್ಡಿದ್ದಕ್ಕಾಗಿ ಅವರ ಪ್ರಾಣಗಳನ್ನೇ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಕುಚೋದ್ಯವೆಂಬತೆ ಹಲವಾರು ರೈತರ ಶವದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವ ಮತ್ತು ಸಾವನ್ನು ಸಂಭ್ರಮಿಸಿ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ನಮ್ಮ ರಾಜಕೀಯ ವ್ಯವಸ್ಥೆ ಇಳಿದಿವೆ. ಪ್ರಸ್ತುತದಲ್ಲಿ ಯಾರೂ ಅರಿಯದ ನೇಗಿಲಯೋಗಿ ಲೋಕಕ್ಕೆ ಅನ್ನ ನೀಡಲು ತನ್ನ ರಕ್ತವನ್ನು ಸುರಿಸಿ, ಪ್ರಾಣವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ನೇಗಿಲ ಧರ್ಮ ಲೋಕವನ್ನು ಕಾಯುತ್ತಿತ್ತೋ ಅದರ ಗೋಣುಮುರಿಯುವ ಕಾರ್ಯ ತುಂಬ ನಾಜೂಕಾಗಿಯೇ ಸಾಗಿದೆ.

ನಮ್ಮನ್ನು ಇಂದು ಕೂಡ ಬಾಧಿಸುತ್ತಿರುವ ಹಲವು ಸಮಸ್ಯೆಗಳನ್ನು ಕುರಿತು ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಬಹಳಷ್ಟು ಮಾತನಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದಕ್ಕೆ ಹಲವು ಬಗೆಗಳ ಪರಿಹಾರವನ್ನೂ ಸೂಚಿಸಿದ್ದಾರೆ. ಅವುಗಳನ್ನು ನಾವು ಸರಿಯಾಗಿ ಗಮನಿಸಿ, ಸಂವಾದ ನಡೆಸಿ, ಉಳಿದ ಮಹಾನ್ ಚಿಂತಕರ ಚಿಂತನೆಗಳೊಂದಿಗೆ ಮಂಥನ ಮಾಡಿ, ಅವುಗಳನ್ನು ಕಾರ್ಯರೂಪುಗೊಳಿಸುವತ್ತ ಪ್ರಾಮಾಣಿಕವಾಗಿ ಹೆಜ್ಜೆ ಇಟ್ಟಲ್ಲಿ ಒಂದು ಮಟ್ಟಿಗೆ ಸುಧಾರಣೆಯಂತೂ ಖಂಡಿತ ಆದೀತು. ಕುವೆಂಪು ಓದು, ಮರು ಓದು, ಯುವಕರ ಜೊತೆಗೆ ಕುವೆಂಪು ಮಾತು-ಕಾವ್ಯ-ಬರಹಗಳ ಸಂವಾದ ಅದಕ್ಕೆ ಅವಕಾಶ ಕೊಟ್ಟೀತು!

ಕವಿವೇದ

ಕವಿವೇದ
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿವರಾಜ್, ಕವಿವೇದ ಹೆಸರಿನಲ್ಲಿ ಬರವಣಿಗೆ ಮಾಡುತ್ತಾರೆ. ಕುವೆಂಪು ಅವರ ಸಾಹಿತ್ಯದ ಬಗ್ಗೆ ಸಂಶೋಧನಾ ಪ್ರಬಂಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕವಿ ವೇದ ಅವರ, ‘ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು’ ನೋಡಿದೆ. ಮಗು ಮನಸ್ಸಿನ, ಚಿಕಿತ್ಸಕ ದೃಷ್ಟಿಯ ಕುವೆಂಪುರನ್ನು ನೆನೆದು ಬರೆದ ಇಂದಿನ ಮಾನವ ಮನಸ್ಥಿತಿಯ ಅವಲೋಕನ ಚೆನ್ನಾಗಿ ಮೂಡಿಬಂದಿದೆ. ಪ್ರಶ್ನಿಸುವ ಮಗು ಬೌದ್ಧಿಕವಾಗಿ ಬೆಳೆಯುತ್ತದೆ; ಪ್ರಶ್ನೆ ಎದುರಿಸದ ಧರ್ಮ ಚಲನಶೀಲತೆ ಕಳೆದುಕೊಳ್ಳುತ್ತವೆ. ಮತಧರ್ಮಗಳು ನಿಂತ ನೀರಾದಾಗ, ಕೇವಲ ಡಾಗ್ಮಾಗಳಾಗಿ, ಬಲಿಷ್ಠರ ಕೈಯಲ್ಲಿನ ಆಯುಧಗಳಾಗುತ್ತವೆ. ಇವುಗಳ ಪ್ರಭಾವವನ್ನು – ಅದು ಧರ್ಮದಲ್ಲಿ ಇರಲಿ, ರಾಜಕೀಯದಲ್ಲಿ ಇರಲಿ – ‘ಸಾಗರಗಳನ್ನು ದಾಟಿ, ಚಕ್ರವರ್ತಿಗಳ ನೆತ್ತಿಯ ಕುಕ್ಕಿ’ ಅಪ್ರಸ್ತುತ ಮಾಡುವ ಶಕ್ತಿ ಕಾಲಕ್ಕಿದೆ! ಈ ಭೂಮಂಡಲದಲ್ಲಿ ಬಂದುಹೋದ ಎಲ್ಲಾ ಮತಧರ್ಮಗಳ, ರಾಜ ಮಹಾರಾಜರ ಮತ್ತು, ಚಕ್ರವರ್ತಿಗಳಂತೆ ಮೆರೆದ, ಮೆರೆಯುತ್ತಿರುವ ಡಿಕ್ಟೇಟರ್ಗಳ ಹಣೆಬರಹವೂ ಇದೇ ಆಗಿದೆ.
    ಮತಧರ್ಮಗಳ ಅಂತಃಸತ್ವವನ್ನು ಅರಿತವ ಮಾತ್ರ ವಿಶ್ವಮಾನವನಾಗುತ್ತಾನೆ ಮತ್ತು ಅದನ್ನೇ ಹೇಳುತ್ತಾನೆ.
    ಮತಧರ್ಮಗಳ ಇಂದಿನ ಉಡಾಫೆಯನ್ನು ನೋಡಿ, ಕುವೆಂಪುರನ್ನು ಅರಿಯಲು, ಇದು ಸೂಕ್ತ ಕಾಲ.
    ಇಂದು ನಮಗೆ ಕುವೆಂಪು ಆತ್ಮೀಯರಾಗುವುದು ಮತ್ತು ಅವರ ಬಗ್ಗೆ ಗೌರವ ಹೆಚ್ಚುವುದು ಈ ಕಾರಣದಿಂದ.

    ಧನ್ಯವಾದ, ಕವಿ ವೇದ ಮತ್ತು ಪ್ರಕಟಿಸಿದ ಗೌರಿಕಾಂ ಗೆ.

  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...