Homeಮುಖಪುಟವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

- Advertisement -
- Advertisement -

ಕೆಲವು ದಿನಗಳಿಂದ ದಿನಪತ್ರಿಕೆಗಳಿಂದ ದೇಶದ ಆಗುಹೋಗುಗಳನ್ನು ಗಮನಿಸುತ್ತಾ ಹೋದಂತೆ, ಹಲವು ವಿಷಯಗಳು ನನ್ನಲ್ಲಿ ಭಯ, ಆತಂಕ, ತಲ್ಲಣಗಳನ್ನು ಉಂಟುಮಾಡುತ್ತಿದ್ದವು. ಹೀಗೆ ಕೆಲವು ದಿನಗಳ ಹಿಂದೆ, ಕುವೆಂಪು ಅವರ ಒಂದು ಪುಸ್ತಕ ತೆರೆದು ’ಓ, ಬನ್ನಿ, ಸೋದರರೆ, ಬೇಗ ಬನ್ನಿ!’ ಕವಿತೆಯ ಸಾಲುಗಳನ್ನು ಗಮನಿಸುತ್ತಿದ್ದೆ..

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ.
ಓ, ಬನ್ನಿ, ಸೋದರರೆ, ವಿಶ್ವಪಥಕೆ!

ಎನ್ನುವ ಕೊನೆಯ ಸಾಲುಗಳನ್ನು ಓದಿ ಏಕೋ ಮನಸ್ಸು ಕದಡಿದಂತಾಗಿ ಪುಸ್ತಕವನ್ನು ಮುಚ್ಚಿದೆ; ಯಾವುದೋ ಆಲೋಚನೆಯಲ್ಲಿ ಮುಳುಗಿದಂತೆ ನನ್ನ ಕಣ್ಣು ಪುಸ್ತಕದ ಮೇಲಿದ್ದ ಕುವೆಂಪು ಚಿತ್ರವನ್ನೇ ದೃಷ್ಟಿಸುತ್ತಿತ್ತು. ನಮ್ಮ ಮನೆಯ ಪುಟ್ಟ ಪಾಪು ಬಂದು, ’ಯಾಕೆ ಮಾಮ, ಕುವೆಂಪು ತಾತನ್ನ ಅಂಗೆ ನೋಡ್ತಾಯಿದ್ದಿ?’ ಎಂದು ತನ್ನ ತೊದಲು ನುಡಿಯ ಮೂಲಕ ಪ್ರಶ್ನಾಯುಧವನ್ನು ಹಿಡಿದು ನಿಂತಿತು. ಆ ಕ್ಷಣಕ್ಕೆ ಕೆಲವು ದಿನಗಳಿಂದ ಕಾಡುತ್ತಿದ್ದ ಭಯ, ಆತಂಕ, ತಲ್ಲಣಗಳು ತಟ್ಟನೆ ಕಣ್ಣೆದುರು ಬಂದು ಅಣಕಮಾಡತೊಡಗಿದವು! ಮರುಕ್ಷಣವೆ ಏನೋ ಹೊಳೆದಂತಾಗಿ ನಿರಾಯುಧನಾಗಿಬಿಟ್ಟೆ.

ಒಂದುಕಡೆ ಇನ್ನು ಲೋಕವನ್ನರಿಯದ ಪುಟ್ಟ, ಮತ್ತೊಂದು ಕಡೆ ಲೋಕದ ಆಂತರ್ಯವನ್ನು ಅರಿತ ಪುಟ್ಟಪ್ಪ; ಮಗದೊಂದು ಕಡೆ ವರ್ತಮಾನದ ತಲ್ಲಣಗಳು. ಎದುರಾಳಿಗಳಾಗಿ ನಿಂತು ಚಿಂತನಯುದ್ಧಕ್ಕೆ ಆಹ್ವಾನವನ್ನೀಯುವಂತೆ ಕಂಡಿತು. ಈ ಪುಟ್ಟ ಕಣ್ಮುಂದೆ ತಂದ ತಲ್ಲಣಗಳು ಪುಟ್ಟಪ್ಪನ ಮೂಲಕ ಬಗೆಹರಿಯಬಹುದೆ? ಎಂದುಕೊಳ್ಳುತ್ತಿರುವಾಗ ನನ್ನ ಸ್ಮೃತಿಪಟಲದಲ್ಲಿ ಕುವೆಂಪುವಿನ ಬಗೆಗಿನ ವಿಚಾರಸುರುಳಿ ಎಳೆಎಳೆಯಾಗಿ ಬಿಚ್ಚಿಕೊಳ್ಳತೊಡಗಿತು. ಇದೇ ಕಾರಣವಾಗಿ ಶಾಂತವಾಗಿದ್ದ ನನ್ನ ತಲೆ ಪ್ರಶ್ನೋತ್ತರಗಳ ಯುದ್ಧಕಣವಾಗಿ ಮಾರ್ಪಟ್ಟಿತು.

ಪ್ರಶ್ನೆಗೆ ಪ್ರಶ್ನೆ ಎನ್ನುವಂತೆ, ಪುಟ್ಟ ಹಾಕಿದ ಪ್ರಶ್ನೆ ನನ್ನಲ್ಲಿ ಮತ್ತೊಂದು ಪ್ರಶ್ನೆಗೆ ದಾರಿಮಾಡಿಕೊಟ್ಟಿತು. ನನ್ನನ್ನು ಕಾಡುತ್ತಿರುವ ತಲ್ಲಣಗಳನ್ನು ಈ ಪುಟ್ಟನಿಗೆ ಆರ್ಥಮಾಡಿಸುವುದಾದರೂ ಹೇಗೆ? ಎಂದು. ಏಕೆಂದರೆ, ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇನ್ನೂ ಅವನ ಅರಿವಿಗೆ ನಿಲುಕದವು. ಮತವೆಂದರೆ ಏನು ಎಂಬುವುದೆ ತಿಳಿಯದ ಕಂದನಿಗೆ, ಮತದ್ವೇಷ, ಮತಾಂಧತೆ, ಮತಾಂತರ, ಮತಾಂತರ ನಿಷೇಧ ಕಾನೂನು, ಜಾತಿ, ಜಾತೀಯತೆ, ಜಾತ್ಯತೀತತೆ, ಆಹಾರ ರಾಜಕಾರಣ, ಭ್ರಷ್ಟಾಚಾರ, ಮೌಢ್ಯತೆ, ಏಕರಾಷ್ಟ್ರಭಾಷೆ, ರೈತ ಮರಣಶಾಸನಗಳು- ಹೀಗೆ ನನ್ನನ್ನು ಕಾಡುತ್ತಿರುವ ತಲ್ಲಣಗಳನ್ನು ಅರ್ಥೈಸಲು ಸಾಧ್ಯವೇ? ಜತೆಗೆ ಇವುಗಳ ಯಾವ ಬಂಧನದ ಗೊಡವೆಯೂ ಇಲ್ಲದೆ ಸ್ವತಂತ್ರವಾಗಿರುವ ಮಗುವನ್ನು ಇವನ್ನೆಲ್ಲ ಹೇಳಿ ನಾನೇ ಬಂಧನಕ್ಕೆ ತಳ್ಳಿಬಿಟ್ಟರೆ ಎನ್ನುವ ಭಯವೂ ಶುರುವಾಯಿತು. ಆದರೂ ವರ್ತಮಾನದ ತಲ್ಲಣಗಳ ವಿರುದ್ಧ ಯುದ್ಧಮಾಡಲು ನಿರಾಯುಧನಾಗಿ ನಿಂತಿದ್ದ ನನ್ನ ಸೇನೆಗೆ ಕುವೆಂಪು ಅವರ ’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’, ’ವಿಚಾರಕ್ರಾಂತಿಗೆ ಆಹ್ವಾನ’, ’ಓ, ಬನ್ನಿ, ಸೋದರರೆ, ಬೇಗ ಬನ್ನಿ’, ’ಇಂದಿನ ದೇವರು’, ’ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’, ’ಹೊಸಬಾಳಿನ ಗೀತೆ’, ’ನೇಗಿಲಯೋಗಿ’, ’ಕಲ್ಕಿ’, ’ಪಾಂಚಜನ್ಯ-ಈ ಎಲ್ಲಾ ಸಾಹಿತ್ಯ ಬರಹಗಳು ರಥ, ಆನೆ, ಕುದುರೆ, ಕಾಲಾಳುಗಳಾಗಿ ಬಂದು ಸೇರಿದವು. ಇದೇ ಆವೇಶದಲ್ಲಿ:

’ಈವೊತ್ತು ಎಲ್ಲ ಮತ ಮತ ಅಂತ ಬಾಯಿ ಬಡ್ಕೊಳ್ತಿದ್ದಾರಲ್ಲ’ ಅಂದೆ.
ಪಿಳಿಪಿಳನ ಕಣ್ಣು ಬಿಡುತ್ತಾ ಪುಟ್ಟ, ’ಮತ’ ಅಂದ್ರೆ? ಅಂದ.

ಅವನ ಮಾತುಕೇಳಿ ಬೆರಗಾಯಿತು. ಎಲ್ಲವನ್ನೂ ಪ್ರಶ್ನಿಸುವ ಸರ್ವಸ್ವತಂತ್ರನಾಗಿರುವವನಿಗೆ ಎಲ್ಲವನ್ನೂ ಉತ್ತರಿಸಲು, ಅರ್ಥೈಸಲು ಇದೇ ಸರಿಯಾದ ಕಾಲ! ಎಂದುಕೊಳ್ಳುತ್ತಿರುವಂತೆಯೇ ಮನೋವೇದಿಕೆಯಲ್ಲಿ ಗುರು-ಶಿಷ್ಯರಿಬ್ಬರು ಗೋಚರಿಸಿದಂತಾಯ್ತು. ಗುರುವಿನ ಬಾಯಿಯಿಂದ ಅಸ್ಪಷ್ಟವಾದ ಮಾತುಗಳು ಕೇಳಿಸತೊಡಗಿದವು. “ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ. ಪರಮಶಾಂತಿಯೂ ಆಗಿರುವ ಪರಮೇಶರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೆ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟು ಕಟ್ಟಳೆಗಳ ಕಾಟವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರ ಬರಗೊಡಿಸುವುದು; ಹಾಗೆ ಬರಗೊಡಿಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು; – ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಮತವನ್ನು ಕುರಿತು ನಮ್ಮಲ್ಲಿ ಯಾವ ಸ್ಪಷ್ಟತೆಯೂ ಇಲ್ಲ. ಎಲ್ಲಾ ಗೋಜಲು ಗೋಜಲಾಗಿದೆ. ಮತದ ಗುರಿ ಸಮಸ್ತ ಸೃಷ್ಟಿಯ ಸಾಮೂಹಿಕ ಪ್ರಜ್ಞೆಯ ವಿಕಾಸ, ಇಡೀ ವಿಶ್ವದ, ಮಾನವಕುಲದ ಆಧ್ಯಾತ್ಮಿಕ ವಿಕಾಸವಾಗಬೇಕಿತ್ತು. ಆದರೆ, ಯಾವುದು ಬಿಡುಗಡೆಗೆ ಸಾಧನವಾಗಬೇಕಿತ್ತೊ ಅದು ಹಿಂದೆಂದಿಗಿಂತಲೂ ಹೆಚ್ಚು ಬಂಧನವಾಗಿ ರೂಪುಗೊಳ್ಳುತ್ತಿದೆ. ವಿವೇಕವನ್ನು ಹೇಳಬೇಕಾದ ಮತಗಳು ದ್ವೇಷ ಅಸೂಯೆಯನ್ನು ಬಿತ್ತುತ್ತಿವೆ. ಧರ್ಮಸಂತತಿಯ ಅಭಿವೃದ್ಧಿಗಾಗಿ ಹಣ, ಅಧಿಕಾರ ಎಲ್ಲವನ್ನೂ ಬಳಸುತ್ತಿರುವವರು ಮಾನವೀಯತೆಯನ್ನು ಮಾತ್ರ ಗಂಟಲು ಕಟ್ಟಿ ರೇಷ್ಮೆವಸ್ತ್ರದಲ್ಲಿ ಸುತ್ತಿ ಯಾವುದೋ ಮೂಲೆಯಲ್ಲಿ ಬಿಸಾಡಿದ್ದಾರೆ. ಹೀಗೆ ಮತಿಹೀನವಾಗಿರುವ ಮತದಿಂದಾಗಿ ಜ್ಞಾನದ ಪ್ರಗತಿಯೂ ಕುಂಠಿತವಾಗಿದೆ. ಆದ್ದರಿಂದ ನಾವೆಲ್ಲರೂ ಮತಿಗೆಟ್ಟ ಮತವನ್ನು ತೊರೆದು ಆತ್ಮೋದ್ಧಾರಕ್ಕಾಗಿ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಬೇಕು” ಎನ್ನುತ್ತ ಆ ಗುರುವಾಣಿ ಆವೇಶಭರಿತವಾಗಿಯೇ ನುಡಿಯುತ್ತಿತ್ತು.

ಪುಟ್ಟ ಕೈಹಿಡಿದು ಅಲುಗಾಡಿಸಿದ್ದರಿಂದಾಗಿ ಮನೋವೇದಿಕೆಯ ಗುರು-ಶಿಷ್ಯರು ಮರೆಯಾದರು.

’ಯಾಕೆ?’ ಎಂದು ಪುಟ್ಟ ನಾನು ಮರೆತುಹೋಗಿದ್ದ ಪ್ರಶ್ನೆಯನ್ನು ನೆನಪಿಸಿದ. ಕುವೆಂಪು ಚಿತ್ರದಿಂದ ದೃಷ್ಟಿ ತೆಗೆದು, ’ಕುವೆಂಪು ತಾತನ ದೃಷ್ಟಿಯಲ್ಲಿ ಸೃಷ್ಟಿ ಇದೆಯಪ್ಪಾ’ ಎಂದೆ.

ಮತ್ತೆ ’ಅಂಗಂದ್ರೆ?’ ಎಂದ,

ಮತ್ತೆ ಕುವೆಂಪು ಅವರ ವಿಚಾರಗಳು, ವರ್ತಮಾನದ ತಲ್ಲಣಗಳು ಒಂದಿನಿತೂ ವ್ಯತ್ಯಾಸವಿಲ್ಲದೆ ನನ್ನ ಮುಂದೆ ನಿರೂಪಣೆಗೊಳ್ಳತೊಡಗಿದವು.

ಈಗಿನ ನಮ್ಮ ರಾಜಕೀಯ ರಂಗವಂತೂ ಹೇಗಾಗಿದೆ ಎಂದರೆ, ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ಪಕ್ಷವೂ ಅಧಿಕಾರಕ್ಕಾಗಿ ಬಾಯಿಬಿಡುವಂತಾಗಿದೆ. “ನಿಜವಾದ ಪ್ರಜಾಸತ್ತೆ ಎಂದರೆ ಅನಿರ್ಬಾಧಿತ ಇಚ್ಛಾ ಸ್ವಾತಂತ್ರ್ಯದಿಂದ ಪ್ರಜೆಗಳು ಆಯುವ ಪ್ರಾಮಾಣಿಕ ವ್ಯಕ್ತಿಗಳಿಂದ ಸರ್ವರ ಅಭ್ಯುದಯಕ್ಕಾಗಿ ನಡೆಯುವ ರಾಜ್ಯಭಾರ. ಆ ದೃಷ್ಟಿಯಿಂದ ನೋಡಿದರೆ ಈಗ ನಡೆಯುವ ಚುನಾವಣೆಗಳು ಪ್ರಜಾಸತ್ತಾತ್ಮಕ ಎಂದು ಹೇಳಲಾಗುತ್ತದೆಯೆ?” ಎಂಬ ಗುರುವಾಣಿ ನೆನಪಿಗೆ ಬಂದು, ಈಗ ನಡೆಯುವ ಚುನಾವಣೆಗಳಲ್ಲಂತೂ ಹಣದ ಹೊಳೆಯೆ ಹರಿಯುತ್ತಿರುವುದು, ಇನ್ನೂ ಬದಲಾಗದೆ ಹೋಗಿರುವ ಸಂಗತಿಗೆ ಮರುಗುವಂತಾಯಿತು. ಒಮ್ಮೆ ಅಧಿಕಾರಕ್ಕೆ ಬಂದವರು ತಮ್ಮ ಅಧಿಕಾರಾವಧಿ ಮುಗಿಯುವ ವೇಳೆಗೆ ಅವರ ಆಸ್ತಿ ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತಿರುವುದರಿಂದ, ಹೊಸಬರೂ, ಪ್ರಾಮಾಣಿಕರೂ, ಸಂಭಾವಿತರೂ ಈ ರಂಗದ ಹತ್ತಿರಕ್ಕೆ ಸುಳಿಯಲೂ ಸಾಧ್ಯವಾಗುತ್ತಿಲ್ಲ. ಏನೋ ಪ್ರಯತ್ನಪಟ್ಟು ಅವರೂ ಹಣದ ಹೊಳೆಹರಿಸಿ ಬಂದರೆ ಭ್ರಷ್ಟಾಚಾರಕ್ಕೆ ಬಲಿಯಾಗದೇ ಇರಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಅಧಿಕಾರದ ಪ್ರಹಸನಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರದರ್ಶನ ಕಾಣುತ್ತಿವೆ. ಹೀಗೆ ಆಯ್ಕೆಯಾದವರು ಅಧಿಕಾರದ ಆಸೆಯಿಂದಾಗಿ ನಮ್ಮ ನಾಡು ನುಡಿಯೊಂದಿಗೆ ತಮ್ಮತನವನ್ನೂ ಈ ನೆಲದ ಸಂಸ್ಕೃತಿ, ಅಸ್ಮಿತೆಯನ್ನೂ ಬಲಿಗೊಡುತ್ತಿದ್ದಾರೆ.

ಅಂತೆಯೇ ನಮ್ಮ ಇಂದಿನ ಆಹಾರ ರಾಜಕಾರಣವಂತೂ ಗಂಭೀರ ಸ್ಥಿತಿಯಲ್ಲಿದೆ. ಆರೋಗ್ಯವಂತ ಸಮಾಜದ ಹೊಣೆಹೊತ್ತಿರುವ ಸರ್ಕಾರಗಳು ಕೆಲವು ಮಠಮಾನ್ಯ ಸಂಸ್ಥೆಗಳ ಕೈಗೊಂಬೆಯಾಗಿವೆ. ವಿಜ್ಞಾನಕ್ಕಿಂತಲೂ ಹೆಚ್ಚಾಗಿ ಮಠಮಾನ್ಯಗಳು, ಸಂಸ್ಥೆಗಳು ಒಬ್ಬ ವ್ಯಕ್ತಿ ಎಷ್ಟು ಪ್ರಮಾಣದ ಕ್ಯಾಲರಿ ಇರುವ ಆಹಾರವನ್ನು ಸೇವಿಸಬೇಕೆಂದು ನಿರ್ಧರಿಸುತ್ತಿವೆ. ಯಾವ ಯಾವ ಆಹಾರದಲ್ಲಿ ಎಷ್ಟೆಷ್ಟು ಪ್ರಮಾಣದ ಕ್ಯಾಲರಿಯಿದೆ ಎನ್ನುವ ಪ್ರಮಾಣಪತ್ರವನ್ನು ನೀಡುವುದರ ಜತೆಗೆ ಯಾರ್‍ಯಾರು ಯಾವ್ಯಾವ ಆಹಾರವನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಯಾವಾಗ ಸೇವಿಸಬೇಕೆಂಬುದನ್ನೂ ನಿರ್ದೇಶಿಸುತ್ತಿವೆ.

ಕುವೆಂಪು ಧನ್ವಂತರಿ ಚಿಕಿತ್ಸೆಯ ಮೂಲಕ ಪ್ರತಿಮಾತ್ಮಕವಾಗಿ ತೋರಿಸಿದ ರೈತನ ಬದುಕು ಇಂದು ನಿಜವಾಗಿದೆ. ನೇಗಿಲ ಮೇಲೆ ನಿಂತಿದ್ದ ಧರ್ಮ ಇಂದು ಕಾಣದಾಗಿದೆ. ಇಡೀ ದೇಶದ ಬೆನ್ನೆಲುಬಾಗಿದ್ದ ನೇಗಿಲಿಡಿದ ರೈತನ ಬೆನ್ನು ಬಾಗಿದೆ; ತಾನೂ ಬದುಕಿ ಎಲ್ಲರನ್ನೂ ಬದುಕಿಸುವ, ಪೋಷಿಸುವ ಹೊಣೆಹೊತ್ತಿದ್ದ ರೈತನ ಬೆನ್ನುಮೂಳೆ ಮುರಿದು ಅವನನ್ನ ಬಲಹೀನನ್ನಾಗಿಸಿ ಅನಾಥನನ್ನಾಗಿಸಿದ್ದಾರೆ. ಇಂದಿನ ಅತಿಯಾದ ಮಾನವನ ದುರಾಸೆಯಿಂದಾಗಿ ಪ್ರಭುತ್ವದೊಂದಿಗೆ ಪ್ರಕೃತಿಯೂ ರೈತನಿಗೆ ವಿರುದ್ಧವಾಗಿ ನಿಂತಿದೆ. ಇಂದಿನ ಸರ್ಕಾರಗಳು ಜಾರಿಗೆ ತರುತ್ತಿರುವ ಶಾಸನಗಳು ರೈತರ ಮರಣಶಾಸನಗಳಾಗುತ್ತಿವೆ. ಅವುಗಳಿಗೆ ಪ್ರತಿರೋಧ ಒಡ್ಡಿದ್ದಕ್ಕಾಗಿ ಅವರ ಪ್ರಾಣಗಳನ್ನೇ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಕುಚೋದ್ಯವೆಂಬತೆ ಹಲವಾರು ರೈತರ ಶವದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವ ಮತ್ತು ಸಾವನ್ನು ಸಂಭ್ರಮಿಸಿ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ನಮ್ಮ ರಾಜಕೀಯ ವ್ಯವಸ್ಥೆ ಇಳಿದಿವೆ. ಪ್ರಸ್ತುತದಲ್ಲಿ ಯಾರೂ ಅರಿಯದ ನೇಗಿಲಯೋಗಿ ಲೋಕಕ್ಕೆ ಅನ್ನ ನೀಡಲು ತನ್ನ ರಕ್ತವನ್ನು ಸುರಿಸಿ, ಪ್ರಾಣವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ನೇಗಿಲ ಧರ್ಮ ಲೋಕವನ್ನು ಕಾಯುತ್ತಿತ್ತೋ ಅದರ ಗೋಣುಮುರಿಯುವ ಕಾರ್ಯ ತುಂಬ ನಾಜೂಕಾಗಿಯೇ ಸಾಗಿದೆ.

ನಮ್ಮನ್ನು ಇಂದು ಕೂಡ ಬಾಧಿಸುತ್ತಿರುವ ಹಲವು ಸಮಸ್ಯೆಗಳನ್ನು ಕುರಿತು ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಬಹಳಷ್ಟು ಮಾತನಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದಕ್ಕೆ ಹಲವು ಬಗೆಗಳ ಪರಿಹಾರವನ್ನೂ ಸೂಚಿಸಿದ್ದಾರೆ. ಅವುಗಳನ್ನು ನಾವು ಸರಿಯಾಗಿ ಗಮನಿಸಿ, ಸಂವಾದ ನಡೆಸಿ, ಉಳಿದ ಮಹಾನ್ ಚಿಂತಕರ ಚಿಂತನೆಗಳೊಂದಿಗೆ ಮಂಥನ ಮಾಡಿ, ಅವುಗಳನ್ನು ಕಾರ್ಯರೂಪುಗೊಳಿಸುವತ್ತ ಪ್ರಾಮಾಣಿಕವಾಗಿ ಹೆಜ್ಜೆ ಇಟ್ಟಲ್ಲಿ ಒಂದು ಮಟ್ಟಿಗೆ ಸುಧಾರಣೆಯಂತೂ ಖಂಡಿತ ಆದೀತು. ಕುವೆಂಪು ಓದು, ಮರು ಓದು, ಯುವಕರ ಜೊತೆಗೆ ಕುವೆಂಪು ಮಾತು-ಕಾವ್ಯ-ಬರಹಗಳ ಸಂವಾದ ಅದಕ್ಕೆ ಅವಕಾಶ ಕೊಟ್ಟೀತು!

ಕವಿವೇದ

ಕವಿವೇದ
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿವರಾಜ್, ಕವಿವೇದ ಹೆಸರಿನಲ್ಲಿ ಬರವಣಿಗೆ ಮಾಡುತ್ತಾರೆ. ಕುವೆಂಪು ಅವರ ಸಾಹಿತ್ಯದ ಬಗ್ಗೆ ಸಂಶೋಧನಾ ಪ್ರಬಂಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕವಿ ವೇದ ಅವರ, ‘ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು’ ನೋಡಿದೆ. ಮಗು ಮನಸ್ಸಿನ, ಚಿಕಿತ್ಸಕ ದೃಷ್ಟಿಯ ಕುವೆಂಪುರನ್ನು ನೆನೆದು ಬರೆದ ಇಂದಿನ ಮಾನವ ಮನಸ್ಥಿತಿಯ ಅವಲೋಕನ ಚೆನ್ನಾಗಿ ಮೂಡಿಬಂದಿದೆ. ಪ್ರಶ್ನಿಸುವ ಮಗು ಬೌದ್ಧಿಕವಾಗಿ ಬೆಳೆಯುತ್ತದೆ; ಪ್ರಶ್ನೆ ಎದುರಿಸದ ಧರ್ಮ ಚಲನಶೀಲತೆ ಕಳೆದುಕೊಳ್ಳುತ್ತವೆ. ಮತಧರ್ಮಗಳು ನಿಂತ ನೀರಾದಾಗ, ಕೇವಲ ಡಾಗ್ಮಾಗಳಾಗಿ, ಬಲಿಷ್ಠರ ಕೈಯಲ್ಲಿನ ಆಯುಧಗಳಾಗುತ್ತವೆ. ಇವುಗಳ ಪ್ರಭಾವವನ್ನು – ಅದು ಧರ್ಮದಲ್ಲಿ ಇರಲಿ, ರಾಜಕೀಯದಲ್ಲಿ ಇರಲಿ – ‘ಸಾಗರಗಳನ್ನು ದಾಟಿ, ಚಕ್ರವರ್ತಿಗಳ ನೆತ್ತಿಯ ಕುಕ್ಕಿ’ ಅಪ್ರಸ್ತುತ ಮಾಡುವ ಶಕ್ತಿ ಕಾಲಕ್ಕಿದೆ! ಈ ಭೂಮಂಡಲದಲ್ಲಿ ಬಂದುಹೋದ ಎಲ್ಲಾ ಮತಧರ್ಮಗಳ, ರಾಜ ಮಹಾರಾಜರ ಮತ್ತು, ಚಕ್ರವರ್ತಿಗಳಂತೆ ಮೆರೆದ, ಮೆರೆಯುತ್ತಿರುವ ಡಿಕ್ಟೇಟರ್ಗಳ ಹಣೆಬರಹವೂ ಇದೇ ಆಗಿದೆ.
    ಮತಧರ್ಮಗಳ ಅಂತಃಸತ್ವವನ್ನು ಅರಿತವ ಮಾತ್ರ ವಿಶ್ವಮಾನವನಾಗುತ್ತಾನೆ ಮತ್ತು ಅದನ್ನೇ ಹೇಳುತ್ತಾನೆ.
    ಮತಧರ್ಮಗಳ ಇಂದಿನ ಉಡಾಫೆಯನ್ನು ನೋಡಿ, ಕುವೆಂಪುರನ್ನು ಅರಿಯಲು, ಇದು ಸೂಕ್ತ ಕಾಲ.
    ಇಂದು ನಮಗೆ ಕುವೆಂಪು ಆತ್ಮೀಯರಾಗುವುದು ಮತ್ತು ಅವರ ಬಗ್ಗೆ ಗೌರವ ಹೆಚ್ಚುವುದು ಈ ಕಾರಣದಿಂದ.

    ಧನ್ಯವಾದ, ಕವಿ ವೇದ ಮತ್ತು ಪ್ರಕಟಿಸಿದ ಗೌರಿಕಾಂ ಗೆ.

  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...