ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ರೈತರ ಹತ್ಯಾಕಾಂಡದ ಬಳಿಕ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ಕಾರು ಚಾಲಕ ಮತ್ತು ಇಬ್ಬರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರ ಸಾವಿಗೆ ಸಂಬಂಧಿಸಿದಂತೆ ಏಳು ಮಂದಿ ರೈತರ ವಿರುದ್ಧ ಎರಡನೇ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಬಿಜೆಪಿ ಕಾರ್ಯಕರ್ತ ಸುಮಿತ್ ಜೈಸ್ವಾಲ್ ದಾಖಲಿಸಿದ್ದ ಎಫ್ಐಆರ್ಗೆ ಸಂಬಂಧಿಸಿದಂತೆ ಎಸ್ಐಟಿ ತನಿಖಾಧಿಕಾರಿ ಶುಕ್ರವಾರ 500 ಪುಟಗಳ ಚಾರ್ಜ್ಶೀಟ್ ಅನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕಳೆದ ವರ್ಷ ಲಖಿಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಮಗ ಆಶಿಶ್ ಮಿಶ್ರಾ ತೆನಿಯ ಕಾರು ಹರಿದು ನಾಲ್ವರು ರೈತರು, ಒಬ್ಬ ಪತ್ರಕರ್ತ ಸಾವನ್ನಪ್ಪಿದ್ದರು. ಇದು ಮೊದಲ ಚಾರ್ಜ್ಶೀಟ್ನಲ್ಲಿ ದಾಖಲಿಸಲಾಗಿದೆ.
ಬಳಿಕ ನಡೆದ ಹಿಂಸಾಚಾರ ಪ್ರಕರಣದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಎಸ್ಯುವಿ ಚಾಲಕ ಸಾವನ್ನಪ್ಪಿದ್ದರು. ಇದು ಎರಡನೇ ಚಾರ್ಜಶೀಟ್ನಲ್ಲಿದ್ದು ಏಳು ಮಂದಿ ರೈತರನ್ನು ಆರೋಪಿಗಳನ್ನಾಗಿಸಲಾಗಿದೆ. ಈ ಪ್ರಕರಣದಲ್ಲಿ ಏಳು ರೈತರನ್ನು ಪೊಲೀಸರು ತಮ್ಮ ತನಿಖೆಯ ಸಮಯದಲ್ಲಿ ಬಂಧಿಸಿದ್ದಾರೆ, ಆದರೆ ಅವರೆಲ್ಲರ ಮೇಲೆಯೂ ಕೊಲೆ ಆರೋಪ ಹೊರಿಸಲಾಗಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಸಚಿವರ ವಜಾ, ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಎಸ್ಕೆಎಂ ಸಜ್ಜು
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋಗಳಲ್ಲಿ ಸುಮಿತ್ ಜೈಸ್ವಾಲ್ ರೈತರ ಮೇಲೆ ಹರಿದ ಎಸ್ಯುವಿ ಒಂದರಿಂದ ಇಳಿದು ಓಡುತ್ತಿರುವುದನ್ನು ಕಾಣಬಹುದು. ಇದರ ಆಧಾರದಲ್ಲಿ ಗೃಹ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರಕರಣದಲ್ಲಿ ಸಹ ಆರೋಪಿಯಾಗಿ ಬಂಧಿಸಲಾಗಿದೆ.
ಆಶಿಶ್ ಮಿಶ್ರಾ ಮೋನು ಸೇರಿದಂತೆ 14 ಜನರ ವಿರುದ್ಧ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡ (ಎಸ್ಐಟಿ) ಇದೇ ತಿಂಗಳ ಆರಂಭದಲ್ಲಿ 5,000 ಪುಟಗಳ ಮೊದಲ ಚಾರ್ಜ್ಶೀಟ್ ಅನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಆರೋಪಿಗಳಾದ ಆಶಿಶ್ ಮಿಶ್ರಾ, ವೀರೇಂದ್ರ ಶುಕ್ಲಾ ಮತ್ತು ಅಂಕಿತ್ ದಾಸ್ ನಂದನ್ ದಾಸ್ ಭಿಸ್ಟ್, ಸತ್ಯಂ ತ್ರಿಪಾಠಿ ಅಲಿಯಾಸ್ ಸತ್ಯ ಪ್ರಕಾಶ್ ತ್ರಿಪಾಠಿ, ಲತೀಫ್ ಅಲಿಯಾಸ್ ಕಲ್ಲೆ, ಶೇಖರ್ ಭಾರತಿ, ಸುಮಿತ್ ಜೈಸ್ವಾಲ್, ಆಶಿಶ್ ಪಾಂಡೆ, ಲುವ್ಕುಶ್, ಶಿಶುಪಾಲ್, ಉಲ್ಲಾಸ್ ಕುಮಾರ್ ತ್ರಿವೇದಿ, ಉಲ್ಲಾಸ್ ಕುಮಾರ್ ತ್ರಿವೇದಿ, ರಿಂಕು ರಾಣಾ ಮತ್ತು ಧರ್ಮೇಂದ್ರ ಕುಮಾರ್ ಬಂಜಾರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಆಶಿಶ್ ಮಿಶ್ರಾ ಸೇರಿದಂತೆ 13 ಜನರ ವಿರುದ್ಧ ಐಪಿಸಿ ಸೆಕ್ಷನ್ಗಳಾದ 147 (ಗಲಭೆ), 148 (ಗಲಭೆ, ಮಾರಣಾಂತಿಕ ಶಸ್ತ್ರಾಸ್ತ್ರ), 149 (ಕಾನೂನುಬಾಹಿರ ಸಭೆಯ ಪ್ರತಿಯೊಬ್ಬ ಸದಸ್ಯರು ಸಾಮಾನ್ಯ ವಸ್ತುವಿನ ವಿಚಾರಣೆಯಲ್ಲಿ ಮಾಡಿದ ಅಪರಾಧ), 302 (ಕೊಲೆ), 307 (ಕೊಲೆಯ ಯತ್ನ), 326 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಗಾಯಗೊಳಿಸುವುದು), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು), 427 (ಐವತ್ತು ರೂಪಾಯಿಗಳ ಮೊತ್ತಕ್ಕೆ ಹಾನಿ ಉಂಟುಮಾಡುವ ಕಿಡಿಗೇಡಿತನ), 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ವೀರೇಂದ್ರ ಕುಮಾರ್ ಶುಕ್ಲಾ ವಿರುದ್ಧ ಐಪಿಸಿ ಸೆಕ್ಷನ್ 201 (ಸಾಕ್ಷ್ಯಾನಾಶ) ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಇದನ್ನೂ ಓದಿ: ಲಖಿಂಪುರ್ಖೇರಿ ಪ್ರಕರಣ: 14 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ