Homeಅಂಕಣಗಳುಕೃಷಿ ಕಥನಕೃಷಿಕಥನ -06: ನೀರ ಸಂಕಷ್ಟದ ಹೆಜ್ಜೆಗಳು

ಕೃಷಿಕಥನ -06: ನೀರ ಸಂಕಷ್ಟದ ಹೆಜ್ಜೆಗಳು

- Advertisement -
- Advertisement -

ಮಳೆನೀರು ಸಂಗ್ರಹದ ಸಾಂಪ್ರದಾಯಿಕ ವಿಧಾನಗಳಾದ ಕೆರೆಗಳು, ಬಾವಿಗಳು, ಚೆಕ್‍ಡ್ಯಾಂಗಳು, ಗುಂಡಿಗೊಟರುಗಳು, ಹಳ್ಳಕೊಳ್ಳಗಳು 20ನೆಯ ಶತಮಾನದ ಅರ್ಧಭಾಗದವರೆಗೂ ತಮ್ಮ ಕರ್ತವ್ಯ ನಿರ್ವಹಿಸಿದವು. ದೇಸಿ ತತ್ವಜ್ಞಾನಗಳ ನೆಲೆಯಲ್ಲಿ ರೂಪುಗೊಂಡಿದ್ದ ಈ ಬಗೆಯ ನೀರ ನೆಲೆಗಳು ಬಹು ಉಪಯೋಗಿಯೂ, ಸುಸ್ಥಿರವೂ ಆಗಿದ್ದವು. ಆದರೀಗ ಮನುಷ್ಯರ ವೇಗ ಮತ್ತು ಅವೇಗದ ಕಾರಣದಿಂದಾಗಿ ಈ ಬಗೆಯ ಸಾಂಪ್ರದಾಯಿಕ ನೀರ ನೆಲೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಆಧುನಿಕ ತಂತ್ರಜ್ಞಾನಗಳ ಜೊತೆಗೆ ಸಾಂಪ್ರದಾಯಕ ನೀರ ನೆಲೆಗಳನ್ನು ಉಳಿಸಿಕೊಂಡು ಅವುಗಳ ರೂಪುರೇಷೆಗಳನ್ನು ಬದಲಿಸಿ ಬಳಸಿಕೊಳ್ಳಬೇಕಾಗಿದೆ. ಎಲ್ಲಿ ಮಳೆ ಬೀಳುತ್ತದೆಯೋ ಅಲ್ಲೇ ನೀರು ಸಂಗ್ರಹಿಸಲು ಇರುವ ಅತ್ಯುತ್ತಮ ಜನಪದ ಜ್ಞಾನ ಮಾರ್ಗಗಳಾಗಿ ಇವುಗಳನ್ನು ಅರ್ಥೈಸಬೇಕಾಗಿದೆ.

ಮನುಷ್ಯರ ನೀರದಾಹ ಹೆಚ್ಚಿದಂತೆ ಭೂಮಿಯ ಮೇಲಿನ ಮತ್ತು ಭೂಮಿಯೊಳಗಿನ ನೀರಿನ ಬಳಕೆ ಗಡಿ ಮೀರಿದೆ. ಪರಿಸ್ಥಿತಿ  ಹೀಗಿರುವಾಗ ಕೆರೆ ಕಟ್ಟೆ ಬಾವಿಗಳ ನೀರು ಇವರಿಗೆ ಯಾವ ಲೆಕ್ಕ ಎಂಬಂತಾಗಿದೆ. ಇದರ ಪರಿಣಾಮವಾಗಿ ಸಾಂಪ್ರದಾಯಿಕ ನೀರ ತಾಣಗಳು ತೀವ್ರ ಉದಾಸೀನಕ್ಕೆ ಒಳಗಾಗಿ ಕಣ್ಮರೆಯಾಗುತ್ತಿವೆ.

ಅವು ಇದ್ದ ಜಾಗಗಳು ಬಡಾವಣೆ, ಅಪಾರ್ಟ್‍ಮೆಂಟ್‍ಗಳಾಗಿ ಬದಲಾಗಿವೆ. ನಗರಗಳ ಯದ್ವಾತದ್ವಾ ಬೆಳವಣಿಗೆಯ ಆಕ್ರಮಣಕ್ಕೆ ಸಿಕ್ಕಿದ ಈ ಜಲತಾಣಗಳು ಖಾಸಗಿ ಒಡೆತನಕ್ಕೆ ಕಾನೂನು ಬಾಹಿರವಾಗಿ ವರ್ಗಾವಣೆಯಾಗಿವೆ. ಅಳಿದುಳಿದಿರುವ ಕೆರೆಕಟ್ಟೆಗಳ ನಗರಗಳ ಕಿಸುಬಾಯಿಗೆ ಅರೆಕಾಸಿನ ಮಜ್ಜಿಗೆಯಂತಾಗಿವೆ. ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಗ್ರಾಮಾಂತರ ಭಾಗಗಳಲ್ಲಿ ಕೆರೆ ಕಟ್ಟೆ, ಹಳ್ಳಗಳು ಆಕ್ರಮಣಕ್ಕೊಳಗಾಗಿವೆ, ಇಲ್ಲವೆ ಅನಾಥವಾಗಿವೆ.

ನೀರಿನ ತೀವ್ರ ಅಭಾವವು ಈ ಸಾಂಪ್ರದಾಯಿಕ ಜಲತಾಣಗಳ ಕಡೆಗೆ ಸಮುದಾಯ ಮತ್ತು ಸರ್ಕಾರಗಳು ಗಮನ ಹರಿಸಲೇಬೇಕಾದ ಒತ್ತಡಕ್ಕೆ ಒಳಗಾಗಿವೆ. ಇದರ ಪರಿಣಾಮವಾಗಿ ಅನೇಕ ಸರ್ಕಾರಿ ಯೋಜನೆಗಳು ಲೆಕ್ಕವಿಲ್ಲದಷ್ಟು ಹಣ ವ್ಯಯಿಸುತ್ತಿರುವುದು ನಿಜವೆ.

ಈಗ ಅಳಿದುಳಿದಿರುವ ಈ ಜಲತಾಣಗಳನ್ನು ಉಳಿಸುವ, ಅಭಿವೃದ್ಧಿಪಡಿಸುವ ಉದ್ದೇಶ ಈ ಯೋಜನೆಗಳ ಹಿಂದಿನ ಆಶಯವಾಗಿದ್ದರೂ ಫಲಿತಾಂಶ ಆಶಾದಾಯಕವಾಗಿಲ್ಲ. ನೀರಿನ ಕೊರತೆಯ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿರುವುದು ನೀರ ತಾಣಗಳ ಮತ್ತು ಒಟ್ಟು ನೀರಿನ ನಿರ್ವಹಣೆಯಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತಿದೆ.

ಎಲ್ಲೆಲ್ಲಿ ಜಲತಾಣಗಳ ನಿರ್ವಹಣೆ ಉತ್ತಮವಾಗಿದೆಯೋ ಅಲ್ಲಿ ಸಮುದಾಯಗಳ ಕೃಷಿ ಮತ್ತು ಪಶುಪಾಲನೆ ಆಧಾರಿತ ಬದುಕು ಸಹ್ಯವಾಗಿದೆ. ಮಿಕ್ಕೆಡೆಗಳಲ್ಲಿ ಬೇಸಿಗೆಯ ದಿನಗಳು ಅತ್ಯಂತ ಧಾರುಣ ಸ್ಥಿತಿಗೆ ಕಾರಣವಾಗಿದೆ.

ಈ ನಡುವೆ ಸ್ವಯಂ ಸೇವಾ ಸಂಸ್ಥೆಗಳು ಎರಡು ಮೂರು ದಶಕಗಳಿಂದ ಕೈಗೊಂಡ ನೀರಿನ ಚಳವಳಿಗಳ ಪರಿಣಾಮ ಸಾಂಪ್ರದಾಯಿಕ ಜಲತಾಣಗಳು ಅಲ್ಪಸ್ವಲ್ಪವಾದರೂ ಉಸಿರಾಡುವಂತಾಗಿದೆ. ಕೆರೆಕಟ್ಟೆ ಹಳ್ಳಗಳ ಪ್ರಾಮುಖ್ಯತೆಯನ್ನು ಸಾರುವ ಅನೇಕ ಕಾರ್ಯಕ್ರಮಗಳು ಸರ್ಕಾರದ ಯೋಜನೆಗಳ ಭಾಗವಾಗಿ ಸಾಕಾರಗೊಳ್ಳುತ್ತಿವೆ.

ನಗರ ಪ್ರದೇಶಗಳಲ್ಲಿ ಮಳೆನೀರಿನ ಸಂಗ್ರಹದ ಬಗೆಗಿನ ಅರಿವು ಹೆಚ್ಚುತ್ತಿದೆ. ನೀರಿನ ಮಿತ ಬಳಕೆ ಮತ್ತು ಮರುಬಳಕೆಯ ಕಡೆಗೂ ಗಮನ ಹರಿಯಬೇಕಾಗಿದೆ. ನೀರು ಶುದ್ಧೀಕರಣ ಘಟಕಗಳನ್ನು ಎಲ್ಲೆಡೆಯೂ ಸ್ಥಾಪಿಸುತ್ತಿರುವುದು, ಸಾಂಪ್ರದಾಯಿಕ ನೀರ ತಾಣಗಳನ್ನು ರಕ್ಷಿಸಬೇಕೆಂಬ ಸ್ಥಳೀಯ ಸಂಸ್ಥೆಗಳ ಕಾಳಜಿ ಆಶಾದಾಯಕವಾದ ಬೆಳವಣಿಗೆಯಾಗಿದೆ. ನಗರ ಪ್ರದೇಶಗಳಲ್ಲಿ ಪಾತಾಳ ಮುಟ್ಟಿದ ಅಂತರ್ಜಲ ಸ್ಥಿತಿ ನಗರ ಪ್ರದೇಶದ ಜನರು ಮಳೆ ನೀರಿಗೆ ನೇರವಾಗಿ ಕೈಯೊಡ್ಡಿ ನೀರ ಭಿಕ್ಷೆಯನ್ನು ಸಂಗ್ರಹಿಸುವ ಒತ್ತಡಕ್ಕೆ ಒಳಗಾಗುವಂತೆ ಮಾಡಿದೆ. ನೀರಿನ ಗುಣಮಟ್ಟ ಅಧೋಗತಿಗೆ ಇಳಿದಿರುವುದು ಇದಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಸ್ವಂತ ಖರ್ಚಿನಲ್ಲಿ ಮಳೆನೀರು ಸಂಗ್ರಹಿಸಲು ನೀರಿನ ಸಂಪುಗಳನ್ನು ನಿರ್ಮಿಸಿಕೊಳ್ಳುತ್ತಿರುವುದು ನೀರ ಬಳಕೆಗೆ ಮಿತವ್ಯಯದ ಕ್ರಮಗಳನ್ನು ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಪೂರಕವಾಗಿ ನೀರು ಶುದ್ದೀಕರಣಕ್ಕೆ ಮಳೆ ನೀರು ಸಂಗ್ರಹಕ್ಕೆ ನೀರಿನ ಮರುಬಳಕೆಗೆ ಬೇಕಾದ ತಾಂತ್ರಿಕತೆಯನ್ನೂ ಮಾರುಕಟ್ಟೆ ಒದಗಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ತಕ್ಷಣಕ್ಕೆ ನೀರಿಗಾಗಿ ಯುದ್ದಗಳು ಆಗಿಬಿಡುತ್ತವೆಂದೋ, ನಗರಗಳ ಜನಕ್ಕೆ ನಾಳೆಯೇ ನೀರಿಲ್ಲದಂತಾಗಿ ಅವರು ದಿಕ್ಕಾಪಾಲಾಗುತ್ತಾರೆಂದೊ ಹೇಳಲು ಈಗಲೇ ಸಾಧ್ಯವಿಲ್ಲ. ಆದರೆ ನೀರಿನ ಕೊರತೆ ನಗರ, ಪಟ್ಟಣ, ಹಳ್ಳಿಗಳೆಂಬ ಬೇಧವಿಲ್ಲದೆ ದಿನದಿಂದ ದಿನಕ್ಕೆ ತೀವ್ರವಾಗಿ ಕಾಡುತ್ತಿದೆ ಎಂಬುದಂತೂ ಸ್ಪಷ್ಟ. ಅತಿಹೆಚ್ಚು ಮಳೆ ಬೀಳುವ ಅಸ್ಸಾಂ, ಅತಿ ಕಡಿಮೆ ಮಳೆ ಬೀಳುವ ರಾಜಸ್ಥಾನ, ಎರಡೂ ಕಡೆಗಳಲ್ಲಿ ನೀರಿನ ಸಂಕಟ ಎದುರಾಗಿದೆ. ಕೈಗಾರಿಕೆ, ಕೃಷಿಗೆ ನೀರಿನ ಬಳಕೆ ಮಾಡುವುದರ ಜೊತೆಗೆ ನೀರು ಕಲುಷಿತಗೊಳಿಸುತ್ತಿರುವುದು ಇನ್ನೊಂದು ದೊಡ್ಡ ದುರಂತ ಕತೆ. ಹವಾಮಾನ ಬದಲಾವಣೆಯ ಪರಿಣಾಮವೆಂಬಂತೆ ಅತಿವೃಷ್ಟಿ, ಅನಾವೃಷ್ಟಿಗಳು ವಕ್ಕರಿಸುತ್ತಿವೆ.

ಇನ್ನೊಂದು ಸಮಾಧಾನ ವಿಷಯವೆಂದರೆ ನೀರು ಎಲ್ಲಿಯೋ ಹೋಗಿ ಅಡಗಿ ಕೂರುವುದಿಲ್ಲ. ಅದು ಪ್ರತಿ ವರ್ಷವೂ ಭೂಮಿಗೆ ಸುರಿದೇ ಸುರಿಯುತ್ತದೆ. ಮಳೆಯ ರೂಪದಲ್ಲಿ, ಹಿಮದಲ್ಲಿ ಇದಕ್ಕೆ ಪೂರಕವೆಂಬಂತೆ ಬಳಕೆಯಾಗುವ ನೀರು ಪೂರ್ಣವಾಗಿ ಅದಕ್ಕೆ ಬಳಸಲ್ಪಟ್ಟು ಇಲ್ಲವಾಗಿ ಬಿಡುವುದಿಲ್ಲ. ಆ ನೀರನ್ನು ಮರು ಬಳಸಬಹುದು, ಹಿಂಗಿಸಬಹುದು, ಶುದ್ದೀಕರಿಸಬಹುದು. ಆದರೆ ಕೃಷಿ ಕ್ಷೇತ್ರದಲ್ಲಿ ನೀರಿನ ಸದ್ಭಳಕೆ ಮತ್ತು ಮಿತ ಬಳಕೆ ಆಗುತ್ತಿಲ್ಲವೆಂಬುದು ಆಡಳಿತವ್ಯವಸ್ಥೆಯ ದೋಷವಾಗಿದೆ. ಈಗಿಂದೀಗಲೇ ಕೃಷಿ ಸಮುದಾಯಗಳನ್ನು ಒಳಗೊಂಡಂತೆ ಕ್ರಿಯಾ ಯೋಜನೆ ಜಾರಿಯಾಗಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ನೀರಿನ ಬಗೆಗೆ ಅರಿವು ಹೆಚ್ಚಿದೆ. ನೀರು ಎಂದರೇನು? ನೀರಿನ ದುರ್ಬಳಕೆ ಹೇಗೆ ಆಗುತ್ತದೆ? ನೀರಿನ ಹಂಚಿಕೆಯ ದೋಷಗಳಾವುವು? ನೀರಿನ ಮೂಲಗಳು ಹೇಗೆ ಕಡೆಗಣಿಸಲ್ಪಟ್ಟವು? ಮಳೆ ನೀರನ್ನು ಅದು ಎಲ್ಲಿ ಬೀಳುತ್ತದೆಯೋ ಅಲ್ಲಿ ಯಾಕೆ ಹಿಡಿಯಬೇಕು? ನಗರಗಳ ನೀರ ದಾಹಕ್ಕೆ ತೆರಬೇಕಾದ ಬೆಲೆ ಏನು? ಎಂಬಿತ್ಯಾದಿ ಪ್ರಶ್ನೆಗಳು ಮೇಲೆದ್ದು ಚರ್ಚೆಗೆ ತನ್ಮೂಲಕ ನೀರ ತಿಳುವಳಿಕೆಗೆ ಕಾರಣವಾಗಿದೆ. ನೀರ ಸಾಕ್ಷರತೆ ಇದ್ದಕ್ಕಿದ್ದಂತೆ ಆದ ಜ್ಞಾನೋದಯವೇನಲ್ಲ. ಸಾಕಷ್ಟು ಏಟು ತಿಂದ ಮೇಲೆ ಪ್ರತಿಯೊಬ್ಬರ ಬುಡಕ್ಕೆ ಬೆಂಕಿ ಹೊತ್ತಿದ ಮೇಲೆ ಆದ ಬದಲಾವಣೆ.

ಎಪ್ಪತ್ತು ಎಂಬತ್ತರ ದಶಕಗಳಲ್ಲಿನ ನೀರ ಕಾಳಜಿ ಕೇವಲ ಬೃಹತ್ ನೀರಾವರಿ ಯೋಜನೆಗಳನ್ನು ಕೈಗೊಳ್ಳುವುದು, ಡ್ಯಾಂ ಮತ್ತು ಚಾನಲ್ ನಿರ್ಮಾಣ, ಡ್ಯಾಂಗಳಿಂದ ದೂರದೂರದ ಪ್ರದೇಶಗಳಿಗೆ ನೀರನ್ನು ಹರಿಸುವುದು ಮುಂತಾದ ವಿಚಾರಗಳಿಗೆ ಸೀಮಿತವಾಗಿತ್ತು. 80ರ ದಶಕದ ಕೊನೆಯಲ್ಲಿ ಅಪ್ಪಳಿಸಿದ ಬರಗಾಲವು ಕೇವಲ ಡ್ಯಾಂ ಮತ್ತು ಚಾನಲ್‍ಗಳು ನೀರಿನ ಬರವನ್ನು ಹಿಂಗಿಸಲು ಸಾಲದು ಎಂಬ ಸತ್ಯವನ್ನು ಬಯಲು ಮಾಡಿತು. ಆಗ ದೆಹಲಿ ಮೂಲದ `ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವಿರಾನ್‍ಮೆಂಟ್’ ಸಂಸ್ಥೆಯು ಸಾಂಪ್ರದಾಯಿಕ ಜಲ ಸಂಗ್ರಹಣೆಯ ವಿಧಾನಗಳ ಕಡೆಗೆ ಗಮನ ಸೆಳೆಯಿತು. ಆಗ ಆರಂಭವಾದದ್ದು ಮಳೆ ನೀರಿನ ಸಂಗ್ರಹ ಚಳವಳಿ. ಮಳೆ ಎಲ್ಲಿ ಬೀಳುತ್ತದೆಯೋ ಅಲ್ಲಿಯೇ ಮಳೆ ನೀರನ್ನು ಸಂಗ್ರಹಿಸಬೇಕೆಂಬ ದೇಸೀ ಜ್ಞಾನ ಪ್ರಚಾರ ಪಡೆದು ಮುನ್ನೆಲೆಗೆ ಬಂದಿತು. ಈ ಕ್ರಿಯಾ ಆಂದೋಲನವನ್ನು ದೇಶವ್ಯಾಪಿಯಾಗಿ ಕೈಗೆತ್ತಿಕೊಂಡ ಎರಡು ಸಂಸ್ಥೆಗಳೆಂದರೆ `ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ’ ಮತ್ತು ರಾಜೇಂದ್ರಸಿಂಗ್ ನೇತೃತ್ವದ `ತರುಣ ಭಾರತ ಸಂಘ’. ಇದರ ಪರಿಣಾಮವಾಗಿ ದೇಶದಾದ್ಯಂತ ಕೆರೆ, ಕಟ್ಟೆ, ಕೃಷಿ ಹೊಂಡಗಳ, ಚೆಕ್‍ಡ್ಯಾಂಗಳ ಕಡೆಗಿನ ಗಮನ ಹಬ್ಬಿತು.

1990ರ ದಶಕಗಳಲ್ಲಿ ಸಂಭವಿಸಿದ ಬರಗಾಲಗಳು ಸರ್ಕಾರವನ್ನು ಎಚ್ಚರಿಸಿ ಕೃಷಿ ಹೊಂಡ, ಚೆಕ್‍ಡ್ಯಾಂ, ಕೆರೆಕಟ್ಟೆ ಉಡಾವಣೆಯ ಭಜನೆ ಆರಂಭಿಸುವಂತೆ ಮಾಡಿದವು. ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆ ಇದಕ್ಕೆ ಬಳಕೆಯಾಯಿತು.

70ರ ದಶಕದಲ್ಲಿ ನಿಧಾನವಾಗಿ ಆರಂಭವಾಗಿ 80 ಮತ್ತು 90ರ ದಶಕದ ಹೊತ್ತಿಗೆ ತೀವ್ರವಾಗಿ ಹೊತ್ತಿಕೊಂಡ ಬೋರ್‍ವೆಲ್ ಕ್ರಾಂತಿ ಅಂತರ್ಜಲಕ್ಕೆ ಕನ್ನ ಹಾಕಿತು. ನೂರು ಅಡಿ ಆಳದಿಂದ ಆರಂಭವಾದ ಈ ಬೋರ್‍ವೆಲ್‍ಗಳು ಎರಡು ದಶಕಗಳಲ್ಲಿ 1200 ಅಡಿ ಆಳಕ್ಕೆ ತಲುಪಿದ್ದು ಈಗ ಅದರ ತೀವ್ರ ಪರಿಣಾಮಗಳು ಇಕ್ಕಡಿಸುತ್ತಿವೆ.

ಆಳದ ನೀರಿನಲ್ಲಿರುವ ಅತಿಯಾ ಲವಣಾಂಶಗಳು ಸಮುದಾಯಗಳ ಆರೋಗ್ಯವನ್ನು ಅಧೋಗತಿಗೆ ಒಯ್ದಿವೆ. ಬೋರ್‍ವೆಲ್ ನೀರು ಶುದ್ಧವಾದ ನೀರು ಎಂಬ ಗ್ರಹಿಕೆ ತಪ್ಪೆಂದು ಬಹುಬೇಗ ಗೊತ್ತಾಗಿದೆ. ಹಾಗೆಯೇ ಕೃಷಿ ತೋಟಗಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಬಳಕೆಯಾದ ಈ ನೀರು ಹಿಂದೆಂದೂ ಕಂಡರಿಯದ ರೋಗಗಳಿಗೆ ಕಾರಣವಾಗಿದೆ.

ಅತಿಯಾದ ಅಂತರ್ಜಲ ಬಳಕೆಯಿಂದ ಅಂತರ್ಜಲ ಬರಿದಾಗುವ ಜೊತೆಗೆ ನೀರಿನ ಪಸೆಯನ್ನು ನಿರ್ನಾಮ ಮಾಡುತ್ತಿದೆ. ಇದರಿಂದ ಶೇ 53ರಷ್ಟು ಮಳೆ ಆಶ್ರಯದಲ್ಲೇ ನಡೆಯುವ ಕೃಷಿಗೆ ಭಾರಿ ಹೊಡೆತ ಬಿದ್ದಿದೆ. ಭೂಮಿಯ ಮೇಲ್ಪದರದ ನೀರು ವಾತಾವರಣವನ್ನು ತಂಪಾಗಿ ಇಟ್ಟರೆ ಮಾತ್ರ ಮಳೆ ಆಶ್ರಿತ ಕೃಷಿ ಸಾಧ್ಯ. ಇಲ್ಲದಿದ್ದರೆ ಮಳೆ ಬೀಳುವಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳೆ ವಿಫಲವಾಗುವುದು ಶತಸಿದ್ಧ. ಮಳೆ ನೀರನ್ನು ಹಿಂಗಿಸುವ ಗೋಜಿಗೆ ಹೋಗದೆ ಹಾಗೆ ಮಾಡುವ ನಾಟಕವಾಡಿದ ಪರಿಣಾಮ ಇಂದು ಮಳೆ ಆಶ್ರಿತ ಕೃಷಿ ಸರ್ವನಾಶದ ಅಂಚಿಗೆ ತಲುಪಿದೆ.

ನಗರ ಪ್ರದೇಶದ ಜನ ತಮ್ಮ ಮನೆಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಲು ನಿರಾಕರಿಸುತ್ತಾ ದೂರದ ಕಾವೇರಿ, ಗಂಗಾ ನದಿಗಳ ಪೂರ್ಣ ನೀರು ತಮಗೇ ಬೇಕೆಂದು ನಾಚಿಕೆಯಿಲ್ಲದೆ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಇವರಿಗೆ ನೀರಿನ ಬಳಕೆಯಲ್ಲಿ ಸಂಯಮವಿಲ್ಲ. ಮಳೆ ನೀರು ಹಿಡಿದಿಟ್ಟುಕೊಳ್ಳುವ ವಿವೇಕವೂ ಇಲ್ಲ. ಇವರ ತಿಕ ಮಕ, ಬಟ್ಟೆ ಕಾರುಗಳನ್ನು ತೊಳೆಯಲು ಎಷ್ಟು ನೀರಾದರೂ ಸಾಲದಾಗಿದೆ. ನಗರಗಳಲ್ಲೇ ಬಡಪಾಯಿಗಳ ಪಾಡು ಹೇಳ ತೀರದಾಗಿದೆ. ಈ ಪರಿಸ್ಥಿತಿ ಬಹುಬೇಗ ಬದಲಾಗಬೇಕು.  ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಕಟ್ಟಡಗಳಿವೆ. ಇವುಗಳಲ್ಲಿ ಕೇವಲ ಒಂದೂವರೆ ಲಕ್ಷ ಮನೆಗಳು ಮಾತ್ರ ಮಳೆ ನೀರು ಸಂಗ್ರಹಿಸಿ ಬಳಸುತ್ತಿವೆ. ಇದು ನೀರ ನಿರ್ಲಕ್ಷ್ಯವಲ್ಲ, ಊರ ನಿರ್ಲಕ್ಷ್ಯ. ಇಂಥವರಿಗೆ ಚುರುಕು ಮುಟ್ಟಿಸಬೇಕು.

ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೃಷಿ ಕ್ಷೇತ್ರದಲ್ಲೂ ತೀವ್ರ ಬದಲಾವಣೆಗಳನ್ನು ತರಬೇಕಾಗಿದೆ. ಡ್ಯಾಂಗಳ ನೀರನ್ನು ನಿರ್ಲಜ್ಜವಾಗಿ ಬಳಸುವುದು ಈಗಾಗಲೇ ರೂಡಿಯಾಗಿರುವ ಚಾಳಿ. ಈ ಚಾಳಿ ಹೇಗೆ ಯಾರಿಂದ ಆರಂಭವಾಯಿತು? ನೀರ ನಿರ್ಲಜ್ಜ ಬಳಕೆಯ ಹಿಂದಿನ ಮನೋಸ್ಥಿತಿ ಎಂತಹುದು ಎಂಬುದಿಲ್ಲ ಚರ್ಚೆಗೆ ಹೊರತಾದ ವಿಷಯ.

ಕಬ್ಬು ಮತ್ತು ಭತ್ತ ಈ ಎರಡೂ ಬೆಳೆಗಳನ್ನು ಡ್ಯಾಂ ನೀರಿನಲ್ಲಿ ಬೆಳೆಯುವುದು ಕಡ್ಡಾಯವೇನೋ ಎಂಬಂತಾಗಿದೆ. ಅತಿ ನೀರಿನ ಬಳಕೆಯಿಂದಾಗಿ ನಾಲಾ ಬಯಲುಗಳು ಚೌಳು ಭೂಮಿಯಾಗಿ ಬದಲಾಗುತ್ತಿದ್ದರೂ ಎಚ್ಚರವನ್ನೂ ಮಾಡಿಲ್ಲ. ರೈತರು ಕಬ್ಬು ಮತ್ತು ಭತ್ತ ಬೆಳೆದು ಸುಖವಾಗಿರುವುದು ಅಷ್ಟರಲ್ಲೇ ಇದೆ. ಬೆಳೆ ಪರ್ಯಾಯ ಪದ್ಧತಿ ಜಾರಿಯಾಗಬೇಕು, ನೀರಿನ ಮಿತಬಳಕೆ ಕಡ್ಡಾಯವಾಗಬೇಕು.

ಅತಿಯಾದ ಅಂತರ್ಜಲ ಬಳಕೆಗೆ ಈ ನಾಲಾ ಬಯಲುಗಳಲ್ಲಿ ಆಗುತ್ತಿರುವ ನೀರ ನಿರ್ಲಜ್ಜ ಬಳಕೆಯೇ ಪ್ರೇರಣೆಯಾಗಿದೆ. ಬೋರ್‍ವೆಲ್ ನೀರಾವರಿ ಆತಂಕಕಾರಿಯಾಗಿ ಬೆಳೆದು ಇದೀಗ ದುರಂತ ಅಂತ್ಯದತ್ತ ಸಾಗಿದೆ. ಬೆಳೆ ಪದ್ಧತಿಗಳ ಅವೈಜ್ಞಾನಿಕ ಅಳವಡಿಕೆ ಅಂತರ್ಜಲ ಅಂತ್ಯಕ್ಕೆ ಕಾರಣವಾಗಿದೆ. ಉದಾಹರಣೆಗೆ ಬಯಲು ಸೀಮೆಗಳಲ್ಲಿ ಹಬ್ಬಿರುವ ತೆಂಗು ಮತ್ತು ಅಡಕೆ ತೋಟಗಳು.

ಇದೇ ಹೊತ್ತಿನಲ್ಲಿ ಕೆರೆಗಳು ಹೂಳು ತುಂಬುತ್ತಿವೆ, ಇಲ್ಲವೇ ಒತ್ತುವರಿಯಾಗಿ ಕಣ್ಮರೆಯಾಗುತ್ತಿವೆ. ಹಳ್ಳಗಳು, ರಾಜಕಾಲುವೆಗಳು ಹೇಳ ಹೆಸರಿಲ್ಲದಂತೆ ನುಂಗಲ್ಪಟ್ಟಿವೆ. ಯಾವ ಅಡೆತಡೆಯಿಲ್ಲದೆ ಲಕ್ಷಾಂತರ ಬೋರ್‍ವೆಲ್‍ಗಳು ಕೊರೆಯಲ್ಪಡುತ್ತಿವೆ. ಕೊನೆಯುಸಿರೆಳೆಯುತ್ತಿರುವ ಬೋರ್‍ವೆಲ್‍ಗಳಿಗೆ ಲೆಕ್ಕವಿಲ್ಲ. ನಾಲಾ ಬಯಲುಗಳಲ್ಲಿ ನೀರಿನ ಚೆಲ್ಲಾಟ ಯಥಾಸ್ಥಿತಿ ಮುಂದುವರಿಯುತ್ತಿದೆ. ಇಷ್ಟಾದರು ನೀರ ನಿಯಂತ್ರಣಕ್ಕೆ, ನೀರ ಹಂಚಿಕೆಗೆ ತೀವ್ರ ಕ್ರಮಗಳೇನೂ ಜಾರಿಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಿಮಗಿದು ಗೊತ್ತೆ? ಎಳನೀರು ಕಿತ್ತರೆ ಫಸಲು ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...