Homeಮುಖಪುಟಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ’ಬ್ಲಾಸಂ ಬುಕ್ ಹೌಸ್'ಗೆ 20ರ ಪ್ರಾಯ: ಪುಸ್ತಕಗಳ ಸುಗಂಧ ಪಸರಿಸಿದ ಮಾಯಿಗೌಡ

ಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ’ಬ್ಲಾಸಂ ಬುಕ್ ಹೌಸ್’ಗೆ 20ರ ಪ್ರಾಯ: ಪುಸ್ತಕಗಳ ಸುಗಂಧ ಪಸರಿಸಿದ ಮಾಯಿಗೌಡ

- Advertisement -
- Advertisement -

ನಾವು ಇಂದು ಆನ್‌ಲೈನ್ ಕಾಲದಲ್ಲಿದ್ದೇವೆ. ಬಹುತೇಕ ಯಾವುದೇ ಪುಸ್ತಕವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಆದರೂ ನಾನು ಪುಸ್ತಕದ ಅಂಗಡಿಗಳಿಗೆ ಎಡತಾಕುವುದೇಕೆ? ಕಳೆದು ಇಪ್ಪತ್ತು ವರುಷಗಳಿಂದ ನಾನು ಬೆಂಗಳೂರಿನಲ್ಲಿರುವ ಎಲ್ಲ ಬಗೆಯ ಪುಸ್ತಕದ ಅಂಗಡಿಗಳಿಗೆ ಅಲೆದಿದ್ದೇನೆ. ಸೆಕೆಂಡ್‌ಹ್ಯಾಂಡ್ ಪುಸ್ತಕಗಳಿಗಾಗಿ ಓಡಾಡಿದ್ದೇ ಹೆಚ್ಚು. ಇಪ್ಪತ್ತು ವರುಷಗಳ ಹಿಂದೆ ಅವೆನ್ಯೂ ರಸ್ತೆ, ಉಪ್ಪಾರ ಪೇಟೆ, ಬಳೆಪೇಟೆಯ ಫುಟ್‌ಪಾತುಗಳ ಮೇಲೆ ಅಪರೂಪದ ಹಳೆಯ ಪುಸ್ತಕಗಳು ಸಿಗುತ್ತಿದ್ದವು. ಈಗಲ್ಲಿ ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳೇ ತುಂಬಿ ಹೋಗಿವೆ. ನಾನು ಬೆಂಗಳೂರಿನಲ್ಲಿ ಅತಿಹೆಚ್ಚು ಜಾಲಾಡುವ ಅಂಗಡಿಗಳೆಂದರೆ ರಾಜಾಜಿನಗರದಲ್ಲಿರುವ ’ಲಾವಣ್ಯ ಪುಸ್ತಕ’, ’ಆಕೃತಿ ಪುಸ್ತಕ’, ಮಲ್ಲೇಶ್ವರಂನ ’ಸೂರ್ಯ ಬುಕ್ಸ್’, ಬ್ರಿಗೇಡ್ ರಸ್ತೆಯ ’ಸೆಲೆಕ್ಟ್ ಬುಕ್ಸ್’, ಚರ್ಚ್ ಸ್ಟ್ರೀಟ್‌ನ ’ಬುಕ್‌ವರ್ಮ್’, ’ಬುಕ್ ಹೈವ್’ ಹಾಗೂ ’ಬ್ಲಾಸಂ ಬುಕ್ ಹೌಸ್’. ಪ್ರತಿಯೊಂದು ಪುಸ್ತಕದ ಅಂಗಡಿಗಳು ತಮ್ಮದೇ ಬಗೆಯಲ್ಲಿ ವಿಶಿಷ್ಟವಾಗಿರುತ್ತವೆ. ಒಂದು ಅಂಗಡಿಯಲ್ಲಿ ಸಿಗುವ ಪುಸ್ತಕಗಳು ಮತ್ತೊಂದು ಅಂಗಡಿಯಲ್ಲಿ ಸಿಗುವುದಿಲ್ಲ. ಆದರೆ ಮಾಯಿಗೌಡ ಅವರ ’ಬ್ಲಾಸಂ’ನ ಎರಡು ಬೃಹತ್ ಮಳಿಗೆಗಳು ಪುಸ್ತಕಪ್ರಿಯರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆದುಕೊಂಡಿರುವುದು ದಿಟ. ಕೇವಲ ಎರಡು ದಶಕಗಳ ಅವಧಿಯಲ್ಲಿ ’ಬ್ಲಾಸಂ’ ಬೆಳೆದಿರುವ ಪರಿಯನ್ನು ಕಂಡರೆ ಯಾರಿಗಾದರೂ
ಅಚ್ಚರಿಯಾಗದಿರದು. ಪುಸ್ತಕ ಪ್ರೇಮಿಗಳ ಪಾಲಿಗೆ ಇದು ಸ್ವರ್ಗವೇ ಸರಿ.

2002ರಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟಿನಲ್ಲಿ ಆರಂಭವಾದ ’ಬ್ಲಾಸಂ ಬುಕ್ ಹೌಸ್’ಗೆ ಈಗ ಇಪ್ಪತ್ತು ವರ್ಷಗಳ ಸಂಭ್ರಮ. ಜಗತ್ತಿನ ವೈವಿಧ್ಯಮಯ ಪುಸ್ತಕಗಳ ಓದಿನ ರುಚಿಯನ್ನು ಹೊಂದಿದವರಿಗೆ ಹಾಗೂ ಅಪರೂಪದ ಕ್ಲಾಸಿಕ್ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸದವರಿಗೆ ಈ ’ಬ್ಲಾಸಂ’ ಪುಸ್ತಕದ ಅಂಗಡಿ ಅತ್ಯಂತ ನೆಚ್ಚಿನ ತಾಣವಾಗಿದೆ. ಜಗತ್ತಿನ ಹೆಸರಾಂತ ಲೇಖಕ/ಲೇಖಕಿಯರ ಬಹುತೇಕ ಪುಸ್ತಕಗಳು ಸಿಗುತ್ತವೆ ಎಂಬ ನಂಬಿಕೆಯಿಂದಲೇ ಜನರು ಇಲ್ಲಿಗೆ ಬರುತ್ತಾರೆ. ಈ ಬೃಹತ್ ಮಳಿಗೆ ಐದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದೆ. ಇಲ್ಲಿ ನೂರಾರು ಪ್ರಕಾರಗಳಲ್ಲಿ ಹಳೆಯ, ಬಳಸಿದ ಹಾಗೂ ಇತ್ತೀಚೆಗೆ ಪ್ರಕಟವಾಗಿರುವ ಹೊಸ ಪುಸ್ತಕಗಳು ಕೂಡ ಲಭ್ಯವಿರುತ್ತವೆ. ಈ ’ಬ್ಲಾಸಂ’ ಬೆಂಗಳೂರಿಗೆ ಒಂದು ಸಾಂಸ್ಕೃತಿಕ ಮೆರಗನ್ನು ನೀಡಿದೆ. ಇದು ಬೆಂಗಳೂರು ಅಥವಾ ಕರ್ನಾಟಕ ಮಾತ್ರವಲ್ಲ; ಇಡೀ ಭಾರತದಲ್ಲಿಯೇ ಅತಿ ದೊಡ್ಡ ಪುಸ್ತಕ ಮಾರಾಟ ಕೇಂದ್ರವಾಗಿ ಹೊರಹೊಮ್ಮಿದೆ. ಇಂತಹ ಸಾಹಸಕ್ಕೆ ಕೈಹಾಕಿದವರು ಹಾಗೂ ’ಬ್ಲಾಸಂ’ ಎಂಬ ಬ್ರ್ಯಾಂಡ್ ಅನ್ನು ನಿರ್ಮಿಸಿದವರು ಮಾಯಿಗೌಡ ಎಂಬ ಶ್ರಮಜೀವಿ. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಪುಸ್ತಕ ವ್ಯಾಪಾರದ ಜೊತೆಯಲ್ಲಿ ಪುಸ್ತಕ ಸಂಸ್ಕೃತಿಯನ್ನು ಹಬ್ಬಿಸುವುದರಲ್ಲಿ ಕೂಡ ಅವರ ಪಾತ್ರ ಮಹತ್ವದ್ದಾಗಿದೆ.

’ಬ್ಲಾಸಂ’ ಎಂಬ ಅದ್ಭುತ ಸಂಸ್ಥೆಯ ಹಿಂದಿನ ಚಾಲಕಶಕ್ತಿಯೇ ಸರಳ ಸಜ್ಜನಿಕೆಯ ನಲವತ್ತೇಳರ ಕ್ರಿಯಾಶೀಲ ತರುಣ ಮಾಯಿಗೌಡ. ಅದ್ಯಾವ ಮಾಯಾಶಕ್ತಿಯಿಂದ ಈ ಪುಸ್ತಕ ಉದ್ಯಮವನ್ನು ಕಟ್ಟಿದರು ಎಂಬುದರ ಹಿನ್ನೆಲೆಯು ಕುತೂಹಲಕಾರಿಯಾಗಿದೆ. ಮಾಯಿಗೌಡ ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ರಂಗಸಮುದ್ರ ಎಂಬ ಹಳ್ಳಿಯವರು. ಮೈಸೂರಲ್ಲಿ ಡಿಪ್ಲೋಮಾ ಓದಿದರು. ರಾಜ್ಯಕ್ಕೆ ಏಳನೇ ರ್‍ಯಾಂಕ್ ಪಡೆದುಕೊಂಡಿದ್ದರು. ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು 1995ರಲ್ಲಿ ಬೆಂಗಳೂರಿಗೆ ಬಂದರು. ಹಗಲು ಹೊತ್ತಿನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಆರ್ಥಿಕ ದುಸ್ಥಿತಿಯಿಂದಾಗಿ
ಫ್ಯಾಕ್ಟರಿಯೊಂದರಲ್ಲಿ ರಾತ್ರಿ ಪಾಳಿಯ ಕೆಲಸಕ್ಕೆ ಸೇರಿಕೊಂಡಿದ್ದರು.

ಮಾಯಿಗೌಡ ಅವರ ವಿದ್ಯಾರ್ಥಿನಿಲಯವು ಮೆಜೆಸ್ಟಿಕ್ ಸಮೀಪದಲ್ಲಿಯೇ ಇತ್ತು. ಉಪ್ಪಾರಪೇಟೆ ಪೊಲೀಸ್ ಠಾಣೆಯ ಹತ್ತಿರ ಪಾದಚಾರಿಗಳ ರಸ್ತೆಯ ಮೇಲೆ ಹಳೆಯ ಪುಸ್ತಕಗಳ ಮಾರಾಟವು ಮಾಯಿಗೌಡರ ಕಣ್ಣಿಗೆ ಬಿತ್ತು. ಒಂದು ದಿನ ಅಲ್ಲಿಯ ಪುಸ್ತಕಗಳನ್ನು ತೆಗೆದುಕೊಂಡು ಎಂ.ಜಿ. ರಸ್ತೆಯ ಹಿಗ್ಗಿನ್ ಭಾಥಮ್ಸ್ ಅಂಗಡಿಯ ಮುಂದಿನ ರಸ್ತೆಯಲ್ಲಿ ಮಾರಾಟ ಮಾಡಿದರು. ಇದು ಅವರ ಮುಂದಿನ ಗುರಿ ಮತ್ತು ಕನಸಿಗೆ ದಾರಿ ಮಾಡಿಕೊಟ್ಟಿತು. ಅವರ ಭವಿಷ್ಯದ ದಿಕ್ಕನ್ನು ಬದಲಿಸಿತು. ಆದರೆ ಅದು ಸುಲಭದ ದಾರಿಯಾಗಿರಲಿಲ್ಲ. ಆರು ವರ್ಷಗಳ ಕಾಲ ಅವರು ಎಂ.ಜಿ. ರಸ್ತೆಯ ಬೀದಿಗಳಲ್ಲಿಯೇ ಪುಸ್ತಕ ಮಾರಾಟ ಮಾಡಿದರು. ಚರ್ಚ್ ಸ್ಟ್ರೀಟಿನ ಜನನಿಬಿಡ ಪ್ರದೇಶದಲ್ಲಿ 2002ರಲ್ಲಿ ಪುಸ್ತಕದ ಅಂಗಡಿ ತೆರೆದರು. 200 ಚದುರಡಿಯಲ್ಲಿ 1500 ಪುಸ್ತಕಗಳೊಂದಿಗೆ ’ಬ್ಲಾಸಂ ಬುಕ್ ಹೌಸ್’ಗೆ ಅಡಿಪಾಯ ಹಾಕಿದರು. ಅಂದು ಮಾರಾಟ ಮಾಡಿದ ಮೊದಲ ಪುಸ್ತಕ ಡೇಲ್ ಕಾರ್ನೆಗಿಯವರ ’ಹೌ ಟು ವಿನ್ ಫ್ರೆಂಡ್ಸ್ ಅಂಡ್ ಇನ್‌ಫ್ಲುಯೆನ್ಸ್ ಪೀಪಲ್’ ಎಂದು ಮಾಯಿಗೌಡ ಇಂದು ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ಅಂಗಡಿಯಲ್ಲಿ ’ಕ್ಯಾಚರ್ ಇನ್ ದಿ ರೈ’, ’ಎನಿಮಲ್ ಫಾರ್ಮ್’, ’ಇಲಿಯಡ್’, ’ಔಟ್‌ಸೈಡರ್’ ’ಪ್ಲೇಗ್’ ಹಾಗೂ ’ಕ್ಯಾಚ್ 22’ ಪುಸ್ತಕಗಳು ಹೆಚ್ಚು ಮಾರಾಟವಾಗಿವೆ ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಾಯಿಗೌಡ ಅವರು ಬೆಂಗಳೂರಿನಲ್ಲಿ ಒಂದು ನೆಲೆಯನ್ನು ಕಂಡುಕೊಳ್ಳಲು ಅನುಭವಿಸಿದ ಕಷ್ಟಕೋಟಲೆಗಳನ್ನು ಹಾಗೂ ತಾನು ಪುಸ್ತಕಗಳನ್ನು ಮಾರುತ್ತಿದ್ದ ಸಂಗತಿಯನ್ನು ತಮ್ಮ ತಂದೆ ತಾಯಿಗೆ ಹೇಳಿರಲಿಲ್ಲ. ಅವರಿಗೆ ತಮ್ಮ ಮಗ ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಆಸೆಯಿತ್ತು. ಆದರೆ
ಮಾಯಿಗೌಡ ಅವರು ಪುಸ್ತಕಗಳನ್ನು ಮಾರುವುದರಲ್ಲಿ ಅತಿಯಾದ ಸಂತೋಷ ಹಾಗೂ ಆತ್ಮತೃಪ್ತಿಯನ್ನು ಕಂಡುಕೊಂಡಿದ್ದರು. ಕೃಷಿ ಕುಟುಂಬದಿಂದ ಬಂದಿರುವ ಅವರು ಇಂಜಿನಿಯರ್ ಆಗಿ ವೃತ್ತಿಯನ್ನು ಆಯ್ದುಕೊಂಡಿದ್ದರೆ ಬೆಂಗಳೂರಿನಲ್ಲಿ ’ಬ್ಲಾಸಂ’ ಎಂಬ ಸಾಂಸ್ಕೃತಿಕ ಹೆಗ್ಗುರುತು ಇರುತ್ತಿರಲಿಲ್ಲ.

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಎಂದರೆ ಮೊದಲೆಲ್ಲ ’ಫುಡ್ ಸ್ಟ್ರೀಟ್’ ಎಂದೇ ಕರೆಯಲಾಗುತ್ತಿತ್ತು. ನಂತರದಲ್ಲಿ ಕುಡಿಯುವವರ ಪಾಲಿಗೆ ’ಪಬ್ ಸ್ಟ್ರೀಟ್’ ಎಂಬ ಖ್ಯಾತಿಯನ್ನು ಪಡೆದುಕೊಂಡಿತು. ಆದರೆ ಈಗ ಅದನ್ನು ’ಬುಕ್ಸ್ ಸ್ಟ್ರೀಟ್’ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಯಾಕೆಂದರೆ ಈ ಬೀದಿಯಲ್ಲಿಯೇ ಹೆಚ್ಚು ಪುಸ್ತಕದ ಅಂಗಡಿಗಳಿವೆ. ಕಾಫಿ ಹೌಸ್ ಎದುರಲ್ಲಿ ’ಬ್ಲಾಸಂ ಬುಕ್ ಹೌಸ್’ ಮೂರು ಮಹಡಿಗಳಲ್ಲಿ ಆವರಿಸಿಕೊಂಡಿದೆ. ಮೆಟ್ರೋದಿಂದ ಇಳಿದು ಚರ್ಚ್ ಸ್ಟ್ರೀಟಿಗೆ ಇಳಿದರೆ ಎದುರಿನಲ್ಲಿ ’ಬ್ಲಾಸಂ ಬುಕ್ ಹೌಸ್’ (2016ರಲ್ಲಿ ತೆರೆದಿದ್ದು) ಎರಡನೆಯ ಅಂಗಡಿಯು ಇದೆ. ಇದರ ಎಡಭಾಗದಲ್ಲಿ ’ಬುಕ್ ವರ್ಲ್ಡ್’ ಹಾಗೂ ಬಲಭಾಗದಲ್ಲಿ ’ಗಂಗಾರಾಮ್ಸ್’ ಇದೆ. ಇತ್ತೀಚೆಗೆ ಇದರ ಎದುರಲ್ಲಿಯೇ ’ಬುಕ್ ಹೈವ್’ ಶುರುವಾಗಿದೆ. ಕಾಫಿ ಹೌಸ್ ಸಮೀಪದಲ್ಲಿಯೇ ಕೃಷ್ಣೇಗೌಡ ಅವರ ’ಬುಕ್ ವರ್ಮ್’ ಕೂಡ ಸಾಕಷ್ಟು ದೊಡ್ಡ ಪ್ರಮಾಣದ ಪುಸ್ತಕಗಳನ್ನು ಹೊಂದಿದೆ. ಚರ್ಚ್ ಸ್ಟ್ರೀಟಿನ ಪಕ್ಕದ ಬ್ರಿಗೇಡ್ ರಸ್ತೆಯಲ್ಲಿ 1945ರಲ್ಲಿ ಆಂಧ್ರ ಮೂಲದ ವಕೀಲರಾದ ಕೆ.ಬಿ.ಕೆ. ರಾವ್ ಅವರಿಂದ ಆರಂಭವಾದ ’ಸೆಲೆಕ್ಟ್ ಬುಕ್ಸ್’ ಅಂಗಡಿ ಇದೆ. ಅವರ ಮಗ ಕೆ.ಕೆ.ಎಸ್. ಮೂರ್ತಿ (90 ವರ್ಷ ದಾಟಿದೆ) ಅವರು ಇಂದಿಗೂ ಮುಂದುವರೆಸಿದ್ದಾರೆ. ಅವರ ಮಗ ಸಂಜಯ್ ಅವರು ಮೂರನೆಯ ತಲೆಮಾರಿನಲ್ಲಿ ಈ ಅಂಗಡಿಯನ್ನು ಮುನ್ನಡೆಸಿದ್ದಾರೆ. ಆದರೆ ಕಾಲದ ಅಗತ್ಯ ಹಾಗೂ ಓದುಗರ ಅಭಿರುಚಿ, ಬೇಡಿಕೆಗೆ ತಕ್ಕ ಹಾಗೆ ಬೃಹತ್ ಪ್ರಮಾಣದಲ್ಲಿ ಪುಸ್ತಕ ಉದ್ಯಮವನ್ನು ಕಟ್ಟಿದವರಲ್ಲಿ ಮಾಯಿಗೌಡ ಮುಖ್ಯರಾಗಿದ್ದಾರೆ.

ಇಂದು ’ಬ್ಲಾಸಂ’ ಅಂಗಡಿಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ. ಎಲ್ಲ ಬಗೆಯ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಮಾಯಿಗೌಡ ಅವರು ತಮ್ಮ ಅಂಗಡಿಯಲ್ಲಿ 25 ಜನರಿಗೆ ಉದ್ಯೋಗ ನೀಡಿದ್ದಾರೆ. ಹಾಗಾಗಿ ಅವರೊಬ್ಬ ಯಶಸ್ವಿ ಪುಸ್ತಕೋದ್ಯಮಿಯಾಗಿ ಬೆಳೆದಿದ್ದಾರೆ. ಅತ್ಯಂತ ವಿಶಾಲವಾದ ಮಹಡಿಗಳಲ್ಲಿ ಕ್ಲಾಸಿಕ್ ಪುಸ್ತಕಗಳನ್ನು ಲೇಖಕರ ಅಕಾರಾದಿಯಲ್ಲಿ ಪುಸ್ತಕಗಳನ್ನು ಜೋಡಿಸಲಾಗಿದೆ. ಇದರಿಂದಾಗಿ ಪುಸ್ತಕ ಪ್ರಿಯರು ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳನ್ನು ಹುಡುಕಲು ಪರದಾಡಬೇಕಾಗಿಲ್ಲ. ಅಲ್ಲಲ್ಲಿಯೇ ಕುಳಿತುಕೊಂಡು ಪುಸ್ತಕದ ಪುಟಗಳನ್ನು ತಿರುವಿ ಹಾಕಬಹುದು. ಇಂತಹದ್ದೇ ನಿರ್ದಿಷ್ಟ ಪುಸ್ತಕ ಅಥವಾ ಲೇಖಕರ ಹೆಸರನ್ನು ಹೇಳಿದರೆ ಕೆಲವೇ ನಿಮಿಷಗಳಲ್ಲಿ ಅದರ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ ಅಲ್ಲಿ ಕೆಲಸ ಮಾಡುವ ಸಂಗಾತಿಗಳು.

ಪ್ರತಿನಿತ್ಯ ’ಬ್ಲಾಸಂ’ಗೆ 200 ರಿಂದ 300 ಜನ ಭೇಟಿ ನೀಡುತ್ತಾರೆ. ವಾರಾಂತ್ಯದ ಶನಿವಾರ ಹಾಗೂ ಭಾನುವಾರಗಳಂದು ಕಾಲಿಡಲು ತೆರಪಿಲ್ಲದಷ್ಟು ಜನರಿಂದ ಅಂಗಡಿಯು ತುಂಬಿ ಹೋಗಿರುತ್ತದೆ. ಮಾಯಿಗೌಡರು ಹೇಳುವ ಹಾಗೆ ಇಂದಿಗೂ ಕಮು, ಕಾಫ್ಕ, ಜಾರ್ಜ್ ಆರ್ವೆಲ್, ಅರ್ನೆಸ್ಟ್ ಹೆಮಿಂಗ್ವೆ, ಮಾರ್ಕ್ ಟ್ವೇನ್, ಜೆ.ಡಿ. ಸ್ಯಾಲಿಂಜರ್, ಚಿನುವಾ ಅಚೀಬೆ, ಮುರಾಕಾಮಿ, ಟಾಲ್‌ಸ್ಟಾಯ್-ಇವರ ಪುಸ್ತಕಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ಸೆಲ್ಪ್ ಹೆಲ್ಪ್ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹತ್ತು ವರ್ಷಗಳ ಹಿಂದೆ ಚೇತನ್ ಭಗತ್ ಹಾಗೂ ಅಯನ್ ರ್‍ಯಾಂಡ್ ಅವರ ಪುಸ್ತಕಗಳನ್ನು ಹೆಚ್ಚಿನ ಜನ ಕೊಂಡುಕೊಳ್ಳುತ್ತಿದ್ದರು. ಆದರೆ ಇಂದು ಓದುಗರು ಕೂಡ ಬೌದ್ಧಿಕವಾಗಿ ಬೆಳೆದಿದ್ದಾರೆ; ಅವರು ಕ್ಲಾಸಿಕ್ ಪುಸ್ತಕಗಳನ್ನು ಕೊಳ್ಳುತ್ತಿದ್ದಾರೆ ಎಂದರು ಮಾಯಿಗೌಡ. ಓದುಗರು ತಮ್ಮಲ್ಲಿ ಕೊಂಡ ಪುಸ್ತಕಗಳನ್ನು ವಾಪಸ್ಸು ಮಾರಬಹುದು; ಅವುಗಳ ಬದಲಿಗೆ ಬೇರೆ ಪುಸ್ತಕಗಳನ್ನು ಕೂಡ ಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

ನಾನು ಹಲವು ಬಾರಿ ಮಕ್ಕಳನ್ನು ಬ್ಲಾಸಂಗೆ ಕರೆದುಕೊಂಡು ಹೋಗಿದ್ದೇನೆ. ನನ್ನ ಅಪ್ಪನನ್ನು ಒಂದು ಸಲ ಕರೆದುಕೊಂಡು ಹೋದಾಗ ಅವರು ಇಷ್ಟೊಂದು ಪುಸ್ತಕಗಳನ್ನು ಕಂಡು ದಂಗಾಗಿ ಹೋಗಿದ್ದರು. ನನ್ನ ಹಲವು ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದೇನೆ. ಆದರೆ ಪುಸ್ತಕದ ಅಂಗಡಿಗೆ ಒಬ್ಬಂಟಿಗನಾಗಿಯೇ ಹೋಗುವುದು ಸರಿಯಾದ ನಿಯಮ ಎಂಬುದು ನನಗೆ ಖಾತ್ರಿಯಾಗಿದೆ. ಯಾಕೆಂದರೆ ಪುಸ್ತಕಗಳನ್ನು ನೋಡಲು, ಹುಡುಕಲು, ಅಲ್ಲಲ್ಲಿ ಓದುವುದಕ್ಕೆ ಭಂಗ ಬರಬಾರದು. ಇದಕ್ಕೆ ಕನಿಷ್ಟ ಒಂದು ಗಂಟೆಯ ಸಮಯವಾದರೂ ಬೇಕಾಗುತ್ತದೆ. ನನಗೆ ವೈಯಕ್ತಿಕವಾಗಿ ಬ್ಲಾಸಂ ಹೆಚ್ಚು ಖುಷಿಯನ್ನು ನೀಡುವ ಜಾಗವಾಗಿದೆ. ನಾನು ಮೊದಲು ಹೋಗುವುದೇ ಕನ್ನಡ ಪುಸ್ತಕಗಳ ರ್‍ಯಾಕ್ ಬಳಿಗೆ. ಇಂಗ್ಲಿಷ್ ಪುಸ್ತಕಗಳಿಗೆ ಹೋಲಿಸಿದರೆ ಕನ್ನಡ ಪುಸ್ತಕಗಳು ತೀರ ಕಡಿಮೆಯೇ. ಆದರೂ ಕೆಲವೊಮ್ಮೆ ಹಳೆಯ ಕ್ಲಾಸಿಕ್‌ಗಳು ಸಿಕ್ಕಿವೆ.

’ಬ್ಲಾಸಂ’ಗೆ ಭೇಟಿ ನೀಡುವ ಎಷ್ಟೋ ಜನರಿಗೆ ಮಾಯಿಗೌಡ ಇವರೇ ಅಂತ ಗೊತ್ತಿರುವುದಿಲ್ಲ. ಅವರು ’ಬ್ಲಾಸಂ’ ಅಂಗಡಿಯನ್ನು ಹುಡುಕಿಕೊಂಡು ಬಂದಿರುತ್ತಾರೆ. ಆದರೆ ಮಾಯಿಗೌಡ ಅವರು ಕೆಲಸಗಾರರೊಂದಿಗೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿಯೇ ಪುಸ್ತಕಗಳನ್ನು ಜೋಡಿಸುವುದರಲ್ಲಿ ಹಾಗೂ ಬಿಲ್ ಹಾಕುವುದರಲ್ಲಿ ನಿರತರಾಗಿರುತ್ತಾರೆ. ಅವರಿಗೆ ತಾನೊಬ್ಬ ಈ ಬೃಹತ್ ಮಳಿಗೆಯ ಸ್ಥಾಪಕ ಹಾಗೂ ಮಾಲಿಕನೆನ್ನುವ ಯಾವ ಹಮ್ಮು ಬಿಮ್ಮು ಕೂಡ ಇಲ್ಲ. ಮಾಯಿಗೌಡರು ಸದಾ ಗಂಭೀರವಾಗಿಯೇ ಇರುವಂತೆ ಕಂಡರೂ, ಪರಿಚಯದವರನ್ನು ಕಂಡಾಕ್ಷಣ ಅವರ ಮುಖದಲ್ಲಿ ಮುಗ್ಧ ನಸುನಗು ಮೂಡಿ ಮಾಯವಾಗುತ್ತದೆ; ಅವರದ್ದು ಹಿತಮಿತ ಮೃದು ವಚನ. ಆದರೆ ಅವರು ಸೂಕ್ಷ್ಮವಾಗಿ ಎಲ್ಲರನ್ನು ಗಮನಿಸುತ್ತಾರೆ. ದಿನಕ್ಕೆ ನೂರಾರು ಜನ ಈ ಪುಸ್ತಕದ ಅಂಗಡಿಗೆ ಭೇಟಿ ನೀಡುತ್ತಾರೆ. ಎಷ್ಟೋ ಸಲ ಅವರಾಗಿಯೇ ನನ್ನ ಬಳಿ ಬಂದು ಟಾಲ್‌ಸ್ಟಾಯ್, ಟರ್ಗೆನೀವ್, ದಾಸ್ತೋವ್‌ಸ್ಕಿಯ ಪುಸ್ತಕಗಳು ರೆಡ್ ಹಾರ್ಡ್‌ಬೌಂಡ್‌ನಲ್ಲಿ ಬಂದಿವೆ ಅಂತ ಹೇಳಿದ್ದಿದೆ. ಕೆಲವು ಸಲ ಅವರಾಗಿಯೇ ಬಂದು ಹುಡುಕಿ ಕೊಟ್ಟಿರುವ ಪ್ರಸಂಗಗಳು ಇವೆ.

’ಬ್ಲಾಸಂ’ ಎಂದರೆ ಮೊಗ್ಗು ಹೂವಾಗಿ ಸುಗಂಧವನ್ನು ಬೀರುತ್ತ ಅರಳುವುದು ಎಂದರ್ಥ. ಹೂವುಗಳಂತೆ ಪುಸ್ತಕಗಳಿಗೂ ಬಣ್ಣ, ಆಕಾರ, ರೂಪ ಹಾಗೂ ವಾಸನೆಗಳಿವೆ. 25 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಬಂದ ಹುಡುಗನೊಬ್ಬ ಕೇವಲ ಎರಡು ದಶಕಗಳಲ್ಲಿ ನಾಡಿನಾದ್ಯಂತ ಪುಸ್ತಕಗಳ ಸುಗಂಧವನ್ನು ಬೀರುವಂತೆ ಮಾಡಿದ್ದು ಸಾಮಾನ್ಯ ಸಂಗತಿಯೇನಲ್ಲ; ಇದು ಮಾಯಿಗೌಡರ ಸತತ ಪರಿಶ್ರಮ, ಅಚಲ ನಂಬಿಕೆ ಹಾಗೂ ಪ್ರೀತಿ ವಿಶ್ವಾಸಗಳಿಂದ ಸಾಧ್ಯವಾಗಿದೆ. ನನ್ನ ನಂತರವೂ ಬ್ಲಾಸಂ ಅರಳುತ್ತಲೇ ಇರಬೇಕೆಂದು ಆಶಿಸುತ್ತಾರೆ ಮಾಯಿಗೌಡ.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ರಾಜಾರಾಂ ತಲ್ಲೂರು ಅವರ ’ಕರಿಡಬ್ಬಿ ಪುಸ್ತಕದಿಂದ ಆಯ್ದ ಅಧ್ಯಾಯ; #WHOCARES

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...