Homeಮುಖಪುಟಲೋಕಸಭಾ ಕ್ಷೇತ್ರಗಳ ಮರುಹಂಚಿಕೆ; ಪ್ರಜಾಪ್ರಭುತ್ವ-ಒಕ್ಕೂಟ ತತ್ವಗಳ ಅಪಾಯಕಾರಿ ತಾಕಲಾಟ

ಲೋಕಸಭಾ ಕ್ಷೇತ್ರಗಳ ಮರುಹಂಚಿಕೆ; ಪ್ರಜಾಪ್ರಭುತ್ವ-ಒಕ್ಕೂಟ ತತ್ವಗಳ ಅಪಾಯಕಾರಿ ತಾಕಲಾಟ

- Advertisement -
- Advertisement -

ಹೊಸದಾಗಿ ಉದ್ಘಾಟಿಸಲಾಗಿರುವ ಲೋಕಸಭೆಯಲ್ಲಿ ಆಸನಗಳ ಸಂಖ್ಯೆಯನ್ನು 888ಕ್ಕೆ ವಿಸ್ತರಿಸಲಾಗಿದೆ. ಕ್ಷುಲ್ಲಕವೆಂದು ಕಾಣಬಹುದಾದ ಈ ವಿವರವು ಒಂದು ರಾಜಕೀಯ ಹಿಮಪಾತವನ್ನೇ ಸೃಷ್ಟಿಸಬಹುದಾದ ಸಾಧ್ಯತೆಯನ್ನು ಹೊಂದಿದೆ. ಬಿಜೆಪಿಯು ಮುಂದಿನ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆಯಲ್ಲಿ ಪ್ರತಿಯೊಂದು ರಾಜ್ಯದ ಸ್ಥಾನಗಳ ಪಾಲನ್ನು ಏರಿಳಿಕೆ ಮಾಡಲು ಕಾತುರವಾಗಿದೆ ಎಂಬ ಊಹೆಗೆ ಇದು ಈಗಾಗಲೇ ಮರುಜೀವ ನೀಡಿದೆ. ಇದು ಕೇವಲ ಹುರುಳೇ ಇಲ್ಲದ ಊಹಾಪೋಹವಲ್ಲ, ಬದಲಾಗಿ ದೂರದ ಸಾಧ್ಯತೆ ಮಾತ್ರವೇ ಆಗಿದ್ದರೂ, ನಿಜವಾದ ಊಹಾಪೋಹವಂತೂ ಆಗಿದೆ. ಇದು ಕೇವಲ ಹುಚ್ಚುತನದ ಪ್ರಸ್ತಾಪವೂ ಅಲ್ಲ; ವಾಸ್ತವಿಕ ಮತ್ತು ತಾತ್ವಿಕವಾದ ಸಮರ್ಥನೆಯ ಬೆಂಬಲವನ್ನೂ ಹೊಂದಿದೆ. ಆದರೂ, ಇದು ಈ ಹಂತದಲ್ಲಿ ಭಾರತಕ್ಕೆ ಅಗತ್ಯವಿರುವಂತದಲ್ಲ.

ಮೊದಲಿಗೆ ಈ ಊಹಾಪೋಹಗಳೇನು ಎಂಬುದನ್ನು ಆರ್ಥಮಾಡಿಕೊಳ್ಳೋಣ. ಲೋಕಸಭೆಯು ಪ್ರಸ್ತುತ 543 ಸ್ಥಾನಗಳನ್ನು ಹೊಂದಿದೆ (ಜೊತೆಗೆ ಎರಡು ಆಂಗ್ಲೋ ಇಂಡಿಯನ್ ಮೀಸಲಾತಿ ಸ್ಥಾನಗಳೂ ಇವೆ). ಸಂವಿಧಾನದಲ್ಲಿ ಅವಕಾಶವಿರುವ ಗರಿಷ್ಠ ಸ್ಥಾನಗಳು ಎಂದರೆ 552. ಆಯಾ ರಾಜ್ಯಗಳ ಜನಸಂಖ್ಯೆಯ ಪಾಲಿಗೆ ಅನುಗುಣವಾಗಿ ವಿವಿಧ ರಾಜ್ಯಗಳ ನಡುವೆ ಈ ಸ್ಥಾನಗಳನ್ನು ಹೇಗೆ ಹಂಚಬೇಕು ಎಂಬುದನ್ನೂ ಸಂವಿಧಾನವು ವಿಧಿಸಿದೆ. ಪ್ರಶ್ನೆ ಎಂದರೆ, ದೇಶದ ಜನಸಂಖ್ಯೆಯಲ್ಲಿ ಬದಲಾವಣೆಯಾದಾಗ, ರಾಜ್ಯಗಳ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ವಿವಿಧ ರಾಜ್ಯಗಳ ಲೋಕಸಭಾ ಸೀಟುಗಳ ಪಾಲಿನಲ್ಲಿ ಬದಲಾವಣೆ ಹೇಗಾಗುತ್ತದೆ? ಇತ್ತೀಚಿನ ದಶವಾರ್ಷಿಕ ಜನಗಣತಿಯಲ್ಲಿನ ಜನಸಂಖ್ಯೆಯಲ್ಲಿ ರಾಜ್ಯಗಳ ಪಾಲಿಗೆ ಅನುಗುಣವಾಗಿ ಪ್ರತೀ ಹತ್ತು ವರ್ಷಗಳಿಗೆ ಒಮ್ಮೆ ಪುನರ್ವಿಮರ್ಶೆ ಮಾಡುವುದಕ್ಕೆ ಸಂವಿಧಾನವು ಅವಕಾಶ ಒದಗಿಸುತ್ತದೆ. ಈ ಮರುವಿಂಗಡಣೆಯನ್ನು 1961 ಮತ್ತು 1971ರ ಜನಗಣತಿಯ ಬಳಿಕ ಮಾಡಲಾಗಿತ್ತು. ಆದರೆ 1973ರಲ್ಲಿ-2001ರ ಜನಗಣತಿಯ ಮಾಡುವ ತನಕ ಈ ಮರುವಿಂಗಡಣೆಯನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸ್ಥಗಿತಗೊಳಿಸಲಾಗಿತ್ತು. ಆ ಸಮಯ ಮುಗಿದಾಗ, ಈ ನಿಲುಗಡೆಯನ್ನು 2026ರ ತನಕ ವಿಸ್ತರಿಸಲಾಯಿತು.

ಕೊನೆಯ ವಿಸ್ತರಣೆಯ ನಂತರ, ಈ ಮರುವಿಂಗಡಣೆಯ ಸ್ಥಗಿತ ಶಾಶ್ವತವಾಗಿ ಮುಂದುವರಿಯಲಿದೆ ಎಂದು ವ್ಯಾಪಕವಾಗಿ ನಂಬಲಾಗಿತ್ತು. ಆದರೆ, ಇತ್ತೀಚೆಗೆ ಬಿಜೆಪಿಯು ಹೊಸ ವಿಂಗಡನೆಯ ಪ್ರಸ್ತಾಪವನ್ನು ಮತ್ತೆ ಪರಿಗಣಿಸುವ ಕುರಿತು ಒಲವು ತೋರಿಸುತ್ತಿದೆ. ಇದನ್ನು ಎರಡು ರೀತಿಗಳಲ್ಲಿ ಮಾಡಲಾಗಬಹುದು. ಒಂದೋ ಕೆಲವು ರಾಜ್ಯಗಳ ಸ್ಥಾನವನ್ನು ಕಡಿತಗೊಳಿಸಿ, ಇತರ ಕೆಲವು ರಾಜ್ಯಗಳಿಗೆ ಹೆಚ್ಚುವರಿ ಸ್ಥಾನಗಳನ್ನು ನೀಡಲು ಅವಕಾಶ ಕಲ್ಪಿಸಬಹುದು ಅಥವಾ ಯಾವುದೇ ರಾಜ್ಯದ ಸ್ಥಾನಗಳನ್ನು ಕಡಿತಗೊಳಿಸದೆ, ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿ, ಅದರ ಗಾತ್ರವನ್ನು ವಿಸ್ತರಿಸುವುದರ ಮೂಲಕ ಇದೇ ಫಲಿತಾಂಶವನ್ನು ಪಡೆಯಬಹುದು. ಆಗ, ಜನಸಂಖ್ಯೆಯಲ್ಲಿ ಹೆಚ್ಚಳವಾಗಿರುವ ರಾಜ್ಯಗಳಿಗೆ ಈ ಹೆಚ್ಚುವರಿ ಸ್ಥಾನಗಳು ಸಿಗುತ್ತವೆ. ಈ ಎರಡನೇ ಹಾದಿಯನ್ನು ನೀವು ಅನುಸರಿಸಲು ಬಯಸಿದರೆ ಮತ್ತು ಕೇರಳವು ಈಗಿರುವ 20 ಸ್ಥಾನಗಳನ್ನು ಉಳಿಸಿಕೊಳ್ಳುವುದನ್ನು ಖಾತರಿಪಡಿಸಲು ನೀವು ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು 866ಕ್ಕೆ ಏರಿಸಬೇಕಾಗುತ್ತದೆ. ಇದಕ್ಕಾಗಿಯೇ, ಹೊಸ ಲೋಕಸಭಾ ಕಟ್ಟಡದಲ್ಲಿನ ಆಸನಗಳ ಹೆಚ್ಚಿದ ಸಂಖ್ಯೆಯು ಹುಬ್ಬು ಮೇಲೇರುವಂತೆ ಮಾಡಿರುವುದು.

ಈ ಪ್ರಸ್ತಾಪದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳೋಣ. 2026ರಲ್ಲಿನ ಪ್ರತಿಯೊಂದು ರಾಜ್ಯದ ಜನಸಂಖ್ಯೆಯ ಪಾಲಿಗೆ ಅನುಗುಣವಾಗಿ ನಾವು ಲೋಕಸಭಾ ಸ್ಥಾನಗಳನ್ನು ಮರುಹಂಚಿಕೆ ಮಾಡಿದಲ್ಲಿ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಸ್ಥಾನಗಳನ್ನು ಕಳೆದುಕೊಳ್ಳುತ್ತವೆ. ಅತ್ಯಂತ ಹೆಚ್ಚು ಬಾಧಿತವಾಗುವ ರಾಜ್ಯ ಕೇರಳವಾಗಿದ್ದು, ಅದು ಎಂಟು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ (ಈಗಿರುವ 20 ಸ್ಥಾನಗಳಿಂದ ಕೇವಲ 12 ಸ್ಥಾನಗಳಿಗೆ ಇಳಿಕೆ). ದೊಡ್ಡ ಪ್ರಮಾಣದಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿರುವ ರಾಜ್ಯಗಳಲ್ಲಿ- ತಮಿಳುನಾಡು (8 ಸ್ಥಾನಗಳು), ಆಂಧ್ರಪ್ರದೇಶ ಮತ್ತು ತೆಲಂಗಾಣ ಜೊತೆಗೆ (8 ಸ್ಥಾನಗಳು), ಪಶ್ಚಿಮ ಬಂಗಾಳ (4 ಸ್ಥಾನಗಳು), ಒಡಿಶಾ (3 ಸ್ಥಾನಗಳು) ಮತ್ತು ಕರ್ನಾಟಕ (2 ಸ್ಥಾನಗಳು), ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಾ ಖಂಡ (ತಲಾ 1 ಸ್ಥಾನ) ಪ್ರಮುಖವಾಗಿವೆ. ಇದರಿಂದ ಲಾಭ ಪಡೆಯುವ ರಾಜ್ಯಗಳು ಹಿಂದಿ ಮಾತನಾಡುವ ಉತ್ತರ ಪ್ರದೇಶದ ರಾಜ್ಯಗಳಾಗಿರುತ್ತವೆ: ಉತ್ತರ ಪ್ರದೇಶ (11 ಸ್ಥಾನಗಳು), ಬಿಹಾರ (10 ಸ್ಥಾನಗಳು), ರಾಜಸ್ಥಾನ (6 ಸ್ಥಾನಗಳು) ಮತ್ತು ಮಧ್ಯಪ್ರದೇಶ (4 ಸ್ಥಾನಗಳು). ದಿಲ್ಲಿ, ಹರ್ಯಾಣ, ಗುಜರಾತ್, ಛತ್ತೀಸಗಢ, ಜಾರ್ಖಂಡ್ ಒಂದೊಂದು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯಲಿವೆ. ಮಹಾರಾಷ್ಟ್ರ, ಅಸ್ಸಾಂ, ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ.

ಇದು ಈ ವಿಷಯದ ಮುಖ್ಯಾಂಶ. ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಎಂಬುದರ ಅರ್ಥವೆಂದರೆ, ಹಿಂದಿ ಮಾತನಾಡುವ ರಾಜ್ಯಗಳು- ಹಿಂದಿ ಮಾತನಾಡದ ರಾಜ್ಯಗಳ ನಷ್ಟದಲ್ಲಿ- 33 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯುತ್ತವೆ. ಈಗಾಗಲೇ 543 ಸ್ಥಾನಗಳಲ್ಲಿ 226ನ್ನು ನಿಯಂತ್ರಿಸುತ್ತಿರುವ “ಹಿಂದಿ ಹೃದಯಭಾಗ” ಎಂದು ಕರೆಯಲಾಗುವ ಪ್ರದೇಶಗಳು ಮುಂದೆ 259 ಸ್ಥಾನಗಳು ಅಂದರೆ, ಹೆಚ್ಚುಕಡಿಮೆ ಬಹುಮತದ (ಅಥವಾ, ಹಿಂದಿ ಮಾತನಾಡದ ರಾಜ್ಯಗಳ ಕೆಲವು ದೊಡ್ಡ ನಗರಗಳಲ್ಲಿ ಹಿಂದಿ ಮಾತನಾಡುವವರ ಸಂಖ್ಯೆಯನ್ನು ಪರಿಗಣಿಸಿದರೆ, ಸ್ಪಷ್ಟ ಬಹುಮತದ) ಸ್ಥಾನಗಳನ್ನು ನಿಯಂತ್ರಿಸಲಿದೆ.

ಇದನ್ನೂ ಓದಿ: 2026ರ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ- ಕುಗ್ಗಲಿರುವ ರಾಜಕೀಯ ಪ್ರಾತಿನಿಧ್ಯ

ಸದನದ ಗಾತ್ರವನ್ನು ವಿಸ್ತರಿಸುವುದರಿಂದ ಅದರ ತೋರಿಕೆ ಬದಲಾಗಬಹುದು, ಹೂರಣ ಬದಲಾಗುವುದಿಲ್ಲ. ಒಂದು ವೇಳೆ ಸದನದ ಬಲವನ್ನು 848ಕ್ಕೆ ಏರಿಸಿದರೆ, ಕೇರಳವು 20 ಸ್ಥಾನಗಳನ್ನು ಉಳಿಸಿಕೊಂಡ ಸಮಾಧಾನವನ್ನಷ್ಟೇ ಹೊಂದಬಹುದು; ಆದರೆ, ಆದೇ ಹೊತ್ತಿಗೆ ಉತ್ತರಪ್ರದೇಶವು 143 ಸ್ಥಾನಗಳನ್ನು ಹೊಂದಿರುತ್ತದೆ, ಬಿಹಾರದ ಸ್ಥಾನಗಳು 79ಕ್ಕೂ, ರಾಜಸ್ಥಾನದ ಸ್ಥಾನಗಳು 50ಕ್ಕೂ ಏರಿರುತ್ತವೆ. ಅಂದರೆ, ಹಿಂದಿ ಪ್ರದೇಶವು ಹೆಚ್ಚುಕಡಿಮೆ ಬಹುಮತವನ್ನು ಹೊಂದಿರುವ ಸ್ಥಿತಿಯು ಆಗಲೂ ಮುಂದುವರಿಯುತ್ತದೆ. ಈ ಹೊಸ ಮರುವಿಂಗಡಣೆಯಿಂದ ಲಾಭ ಪಡೆಯುವವರು ಯಾರಾಗಬಹುದು ಎಂದು ಊಹಿಸಿದ್ದಕ್ಕೆ ಬಹುಮಾನವೇನೂ ಇಲ್ಲ. 2021ರ ಜನಗಣತಿಯ ಬಳಿಕದ ಬಿಜೆಪಿಯ ಸ್ಥಾನಗಳನ್ನು ಪರಿಗಣಿಸಿದರೆ, ಅದು ನಿರ್ಣಾಯಕವಾದ 17 ಹೆಚ್ಚುವರಿ ಸ್ಥಾನಗಳನ್ನು ಪಡೆಯಲಿದೆ. ಹೆಚ್ಚಾಗಿ ಇವು ಪ್ರಾದೇಶಿಕ ಪಕ್ಷಗಳ ನಷ್ಟಗಳಾಗಿರುತ್ತವೆ.

ನಿಷ್ಪಕ್ಷಪಾತವಾಗಿ ಹೇಳುವುದಾದಲ್ಲಿ, ಈ ಪ್ರಸ್ತಾವನೆಯು ತರ್ಕವಿಲ್ಲದ್ದಲ್ಲ. ನೇರವಾಗಿ ಹೇಳಬೇಕೆಂದರೆ, ಅದು ಒಬ್ಬ ವ್ಯಕ್ತಿ- ಒಂದು ಮತ- ಒಂದು ಮೌಲ್ಯದ ಅತ್ಯುನ್ನತ ಪ್ರಜಾಸತ್ತಾತ್ಮಕ ತತ್ವಕ್ಕೆ ಅನುಗುಣವಾಗಿಯೇ ಇದೆ. ಈಗಿನ ಸ್ಥಾನ ಹಂಚಿಕೆಯು ಆ ತತ್ವದ ಗಂಭೀರವಾದ ಉಲ್ಲಂಘನೆ ಎಂದು ವಾದಿಸಲು ಸಾಧ್ಯವಿದೆ. ಪ್ರಸ್ತುತ ಉತ್ತರಪ್ರದೇಶದ- ಹತ್ತಿರಹತ್ತಿರ ಪ್ರತೀ 30 ಲಕ್ಷ- ಮತದಾರರಿಗೆ ಒಬ್ಬ ಸಂಸದರು ಇದ್ದರೆ, ತಮಿಳುನಾಡಿನಲ್ಲಿ ಪ್ರತೀ 18 ಲಕ್ಷಕ್ಕೆ ಒಬ್ಬ ಸಂಸದರಿದ್ದಾರೆ. ಆದುದರಿಂದ, ತಮಿಳುನಾಡಿನ ಒಬ್ಬ ನಾಗರಿಕ/ಮತದಾರರ ರಾಜಕೀಯ ಮೌಲ್ಯವು- ಉತ್ತರಪ್ರದೇಶದಲ್ಲಿ ವಾಸಿಸುವ ಯಾರೇ ಒಬ್ಬರಿಗಿಂತ ದ್ವಿಗುಣವಾಗಿದೆ. ಇದು ಅಪೇಕ್ಷಣೀಯ ವಿಷಯವಲ್ಲ. ಅದಕ್ಕಾಗಿಯೇ ನಮ್ಮ ಸಂವಿಧಾನವು ರಾಜ್ಯವಾರು ಸ್ಥಾನಗಳ ಹಂಚಿಕೆಯ ದಶವಾರ್ಷಿಕ ಮರುವಿಮರ್ಶೆಗೆ ಅವಕಾಶ ಒದಗಿಸಿರುವುದು. ಸಾಮಾನ್ಯವಾಗಿ ಒಬ್ಬ ಪ್ರಜಾಪ್ರಭುತ್ವವಾದಿಯು ಈ ಅವಕಾಶ ಮತ್ತು ಪಾಲಿನ ಮರುಹಂಚಿಕೆಯನ್ನು ಬೆಂಬಲಿಸಬೇಕಾಗುತ್ತದೆ.

ಕುಟುಂಬ ಯೋಜನೆಯಲ್ಲಿ ಯಶಸ್ವಿಯಾದ ರಾಜ್ಯಗಳಿಗೆ ಈ ಮರುಹಂಚಿಕೆಯಿಂದ ಅನ್ಯಾಯವಾಗುತ್ತದೆ ಎಂಬ ಸಾಮಾನ್ಯವಾದ ವಾದವು ತಪ್ಪು ತರ್ಕದಿಂದ ಕೂಡಿದ್ದು, ನ್ಯಾಯಯುತವಾದದ್ದಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕು. ಜನನ ಮತ್ತು ಮರಣದ ದರಗಳ ಪ್ರವೃತ್ತಿಗಳು ಸಮೃದ್ಧಿ ಮತ್ತು ಸಾಕ್ಷರತೆಯ ಪರಿಣಾಮಗಳಾಗಿದ್ದು ಕುಟುಂಬ ಯೋಜನೆಗಳ ಫಲವಲ್ಲ. ಜೊತೆಗೆ, ಇದೇ ವಾದವನ್ನು ಹೆಚ್ಚಿನ ಜನಸಂಖ್ಯಾ ಬೆಳವಣಿಗೆ ದರ ಹೊಂದಿರುವ ಸಮಾಜದ ದುರ್ಬಲ ವರ್ಗಗಳ- ಎಸ್‌ಸಿ, ಎಸ್‌ಟಿ, ಮುಸ್ಲಿಮರು ಅಥವಾ ಬಡವರ ವಿರುದ್ಧವೂ ಬಳಸಬಹುದು ಅಥವಾ ಜಾಗತಿಕ ಪ್ರಮಾಣದಲ್ಲಿ, ಭಾರತದಂಥ ಹೆಚ್ಚು ಜನಸಂಖ್ಯೆಯ ಬಡ ರಾಷ್ಟ್ರಗಳ ವಿರುದ್ಧವೂ ಬಳಸಬಹುದು.

ಹೀಗಿದ್ದರೂ, ಅದು ನಮ್ಮ ಸಂವಿಧಾನದ “ಮೂಲ ಸಂರಚನೆ”ಯ ಒಂದು ಮುಖ್ಯ ಘಟಕವೆಂದು ದೀರ್ಘಕಾಲದಿಂದ ಒಪ್ಪಿತವಾದ ಇನ್ನೊಂದು ತತ್ವಕ್ಕೆ- ಅಂದರೆ, ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ ಎಂಬ ಕಾರಣಕ್ಕಾಗಿ ಈ ಪ್ರಸ್ತಾಪವನ್ನು ವಿರೋಧಿಸಬೇಕಾಗಿದೆ. ಇದು ಹೇಗಾಗಿಬಿಟ್ಟಿದೆಯೆಂದರೆ- ಲಾಭ ಪಡೆಯುವವರು ಮತ್ತು ನಷ್ಟ ಅನುಭವಿಸುವವರು ಸ್ಪಷ್ಟವಾಗಿ ಭೌಗೋಳಿಕವಾದ, ಭಾಷಾವಾರು, ಆರ್ಥಿಕವಾದ ಮತ್ತು ರಾಜಕೀಯವಾದ ಬಿರುಕಿನ ಗೆರೆಯ ಆ ಕಡೆ, ಈ ಕಡೆ ನಿಲ್ಲುವಂತಾಗಿದೆ. ಲಾಭ ಪಡೆಯುವವರು ಉತ್ತರ ಭಾರತದಲ್ಲಿ ನೆಲೆಸಿದ್ದರೆ, ನಷ್ಟ ಅನುಭವಿಸುವವರು ದಕ್ಷಿಣ ಮತ್ತು ಪೂರ್ವದವರು. ಬಹುತೇಕ ಲಾಭಪಡೆಯುವವರು ಹಿಂದಿ ಭಾಷಿಕರಾಗಿದ್ದರೆ, ಬಹುತೇಕ ಹಿಂದಿಯೇತರ ಭಾಷೆ ಮಾತನಾಡುವವರು (ಒಡಿಯಾ, ಬಂಗಾಳಿ ಮತ್ತು ಪಂಜಾಬಿ ಭಾಷೆ ಮಾತನಾಡುವವರು ಸೇರಿದಂತೆ) ನಷ್ಟ ಅನುಭವಿಸುವವರ ಕಡೆಯಲ್ಲಿ ಇರುತ್ತಾರೆ. ಈ ರಾಜ್ಯಗಳ ಗುಂಪು- ದೇಶದ ಆರ್ಥಿಕ ಬೆಳವಣಿಗೆಯ ಇಂಜಿನ್‌ಗಳಾಗಿರುವ ಮತ್ತು ಮುಖ್ಯವಾಗಿ ಜಿಎಸ್‌ಟಿ ಬಳಿಕ- ತಾರತಮ್ಯದ್ದೆಂದು ತಾವು ಭಾವಿಸುವ ತೆರಿಗೆ ವ್ಯವಸ್ಥೆಯ ಬಗ್ಗೆ ಹಳೆಯ ಸಿಟ್ಟು ಹೊಂದಿರುವ- ರಾಜ್ಯಗಳನ್ನು ಅತಿಕ್ರಮಿಸುತ್ತದೆ.

ಅಂತಿಮವಾಗಿ, ಹೆಚ್ಚುವರಿ ಸ್ಥಾನಗಳ ಲಾಭ ಗಳಿಸಲಿರುವ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ (ಅಥವಾ ಪ್ರಾದೇಶಿಕ ಸಿದ್ಧಾಂತ ಹೊಂದಿರದಿದ್ದರೂ, ಆಯಾ ರಾಜ್ಯಗಳ ನಿರ್ದಿಷ್ಟ ಪಕ್ಷಗಳ ವಿರುದ್ಧ ಬಿಜೆಪಿ) ಸ್ಪರ್ಧೆ ಹೊಂದಿದೆ. ಅದೇ ಹೊತ್ತಿಗೆ ಸ್ಥಾನಗಳ ನಷ್ಟ ಅನುಭವಿಸುವ ಹೆಚ್ಚಿನ ರಾಜ್ಯಗಳು ಪ್ರಾದೇಶಿಕ ಪಕ್ಷಗಳ ಕುರಿತು ಒಲವು ಹೊಂದಿವೆ. ಜನಸಂಖ್ಯಾಧಾರಿತ ಕ್ಷೇತ್ರಗಳ ಹಂಚಿಕೆಯು ಈಗಾಗಲೇ ಇರುವ- ಬೇರೆ ರಾಜ್ಯಗಳ ಮೇಲೆ ಉತ್ತರ ಭಾರತದ, ಹಿಂದಿ ಮಾತನಾಡುವ ರಾಜ್ಯಗಳ ಪ್ರಾಬಲ್ಯ, ಹೇರಿಕೆಗಳ ಭಾವನೆಯನ್ನು ಇನ್ನಷ್ಟು ಎದ್ದುಕಾಣುವಂತೆ ಮಾಡಲಿದೆ.

ಇದು ಭಾರತ ದೇಶವನ್ನು ಜೊತೆಗೆ ಕಟ್ಟಿಡುವ ಅಲಿಖಿತ ಬಂಧ ಒಂದನ್ನು-ಎಂದರೆ, ಒಕ್ಕೂಟ ತತ್ವವನ್ನು ಉಲ್ಲಂಘಿಸುತ್ತದೆ. ಈ ಬಂಧವು ದೇಶದ ಯಾವುದೇ ಒಂದು ಘಟಕವು ಇನ್ನೊಂದರ ಮೇಲೆ ಸವಾರಿ ಮಾಡದಿರುವುದರ ಮೇಲೆ ನಿಂತಿದೆ. ಈಗಿರುವಂತೆ ಹಿಂದಿ ಮಾತನಾಡುವ ರಾಜ್ಯಗಳ ಸಂಖ್ಯಾತ್ಮಕ ಪ್ರಾಬಲ್ಯವು ಒಕ್ಕೂಟದ ಸಮಾನತೆಯ ಅಂಶಕ್ಕೆ ಬೆದರಿಕೆಯೊಡ್ಡುತ್ತಿದೆ. ಇದನ್ನು ಇನ್ನಷ್ಟು ಎದ್ದುಕಾಣುವಂತೆ ಮಾಡುವುದು ಮತ್ತು ಹಿಂದಿ ಭಾಷಿಕ ರಾಜ್ಯಗಳು ಸಂಸತ್ತಿನ ಕೆಳಮನೆಯಲ್ಲಿ ಬಹುಮತದ ಗೆರೆಯನ್ನು ಮುಟ್ಟಲು ಅವಕಾಶ ಮಾಡಿಕೊಡುವುದು ಹಲವಾರು ಹಿಂದಿಯೇತರ ಭಾಷಿಕರ ಕಣ್ಣಿಗೆ ಅಪಾಯದ ಕೆಂಪು ಗೆರೆಯನ್ನು ದಾಟಿದಂತೆ ಕಾಣಿಸಬಹುದು. ಆದುದರಿಂದ, ಈಗ ಇದಕ್ಕೆ ತಡೆ ಹಾಕುವುದು ಮತ್ತು ಉತ್ತರ-ದಕ್ಷಿಣದ (ಅಥವಾ ಹಿಂದಿ-ಹಿಂದಿಯೇತರ ಎಂಬುದು ಹೆಚ್ಚು ಸೂಕ್ತ) ಒಂದು ಬಂಧವನ್ನು ಸಂವಿಧಾನದಲ್ಲಿ ಬರೆದಿದೆ ಎಂಬಂತೆ ಕಾರ್ಯಾಚರಿಸುವುದು ಅತ್ಯಂತ ವಿವೇಚನಾಶೀಲ ನಡೆ.

ರಾಜಕೀಯವು ಬರೇ ಒಂದು ಒಂಟಿ ತತ್ವವನ್ನು ಸರಳವಾಗಿ ಆನ್ವಯಿಸುವುದಲ್ಲ. ಎಲ್ಲಾ ಗಂಭೀರವಾದ ನೈತಿಕ ಆಯ್ಕೆಗಳು- ಹಲವು ಪ್ರತಿಸ್ಪರ್ಧಿ ತತ್ವಗಳ ನಡುವೆ ನ್ಯಾಯ ನಿರ್ಣಯ ಮಾಡುವುದನ್ನು ಒಳಗೊಂಡಿರುತ್ತದೆ. ಇಲ್ಲಿ ಪ್ರಜಾಪ್ರಭುತ್ವದ ತತ್ವಗಳನ್ನು ಒಕ್ಕೂಟ ತತ್ವದೊಂದಿಗೆ ತೂಗಿನೋಡಬೇಕಾಗಿದೆ. ನಮ್ಮ ರಾಷ್ಟ್ರೀಯ ಇತಿಹಾಸದ ಈ ಸಂಧಿಕಾಲದಲ್ಲಿ ಒಕ್ಕೂಟ ತತ್ವವು ಗೆಲ್ಲಬೇಕಾಗಿದೆ. ಈ ಹೊತ್ತಿನಲ್ಲಿ ಇದರ ತಿರಸ್ಕಾರ, ಇಲ್ಲವೇ ಇಬ್ಬಂದಿತನ ಅಥವಾ ಅನಿರ್ಧಾರ ಕೂಡಾ ಭಾರತದ ಏಕತೆಯನ್ನು ಹಾಳುಗೆಡವಬಲ್ಲದು. ನಾವು ಈಗಾಗಲೇ ಹಿಂದೂ-ಮುಸ್ಲಿಂ ವಿಭಜನೆಯನ್ನು ಉಂಟುಮಾಡುವ ರಾಜಕೀಯ ಅಭಿಯಾನದ ವಿರುದ್ಧ ಹೋರಾಡುತ್ತಿರುವಾಗ, ನಮಗೀಗ ಬೇಕಾಗಿರುವ ಕಟ್ಟಕಡೆಯ ವಿಷಯವೆಂದರೆ ಇನ್ನೊಂದು ವಿಭಜನಕಾರಿ ನಡೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...