ಹೊಸದಾಗಿ ತೆರೆಯಲಾದ ಲುಲು ಮಾಲ್ಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದವನ್ನು ಬಹಳ ಗಂಭೀರವಾಗಿ ಪರಿಗಣಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
ಕೆಲವರು ಅನಗತ್ಯ ಟೀಕೆಗಳನ್ನು ಮಾಡಿ ಜನರಿಗೆ ಅಡ್ಡಿಪಡಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದಿರುವ ಅವರು ಇಂತಹ ಅನಾಹುತ ಸೃಷ್ಟಿಸಲು ಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ವ್ಯಾಪಾರ ಚಟುವಟಿಕೆ ನಡೆಸುತ್ತಿರುವ ಲುಲು ಮಾಲ್ ರಾಜಕೀಯ ಕೇಂದ್ರವಾಗಿ ಮಾರ್ಪಟ್ಟಿದೆ. ಕೆಲವು ವ್ಯಕ್ತಿಗಳು ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ ಮಾಲ್ಗೆ ಭೇಟಿ ನೀಡುವ ಜನರ ಸಂಚಾರಕ್ಕೆ ಅಡ್ಡಿಪಡಿಸಲು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಸಿಎಂ ಹೇಳಿರುವುದಾಗಿ ವರದಿಯಾಗಿದೆ.
“ಲಕ್ನೋ ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅಂತಹ ಅಸ್ವಸ್ಥತೆಯನ್ನು ಸಹಿಸಲಾಗುವುದಿಲ್ಲ. ಮಾಲ್ನಲ್ಲಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು” ಎಂದು ತಿಳಿಸಿದ್ದಾರೆ.
“ಪ್ರಾರ್ಥನೆ ಅಥವಾ ಇತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಲು ಯಾರಿಗೂ ಅನುಮತಿ ನೀಡಬಾರದು. ಅಧಿಕಾರಿಗಳು ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು” ಎಂದು ಆದೇಶಿಸಿದ್ದಾರೆ.
ಇದನ್ನೂ ಓದಿರಿ: ನಮ್ಮ ಉದ್ಯೋಗಿಗಳಲ್ಲಿ ಶೇ.80ರಷ್ಟು ಹಿಂದೂಗಳಿದ್ದಾರೆ: ‘ಲವ್ ಜಿಹಾದ್’ ಆರೋಪಕ್ಕೆ ಲುಲು ಮಾಲ್ ಸ್ಪಷ್ಟನೆ
ಲುಲು ಮಾಲ್ಗೆ ನುಗ್ಗಿ ಹನುಮಾನ್ ಚಾಲೀಸಾ ಪಠಿಸಲು ಆರಂಭಿಸಿದ ಇಬ್ಬರ ಬಂಧನವನ್ನು ಪೊಲೀಸರು ಖಚಿತಪಡಿಸಿದ ಒಂದು ದಿನದ ನಂತರ ಯೋಗಿ ಆದಿತ್ಯನಾಥ್ ಹೇಳಿಕೆ ಹೊರಬಿದ್ದಿದೆ.
ಇಬ್ಬರ ಬಂಧನದ ಸ್ವಲ್ಪ ಸಮಯದ ನಂತರ, ಶಾಪಿಂಗ್ ಮಾಲ್ಗೆ ಪ್ರವೇಶಿಸಲು ಪ್ರಯತ್ನಿಸಿ ಗಲಾಟೆ ಮಾಡಿದ್ದಕ್ಕಾಗಿ ಬಲಪಂಥೀಯ ಗುಂಪಿನ ಕನಿಷ್ಠ 15 ಸದಸ್ಯರನ್ನು ಬಂಧಿಸಲಾಯಿತು. ಗಲಾಟೆ ಸೃಷ್ಟಿಸದಂತೆ ಎಚ್ಚರಿಕೆ ನೀಡಿ ಅಂತಿಮವಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ.
“ಇಬ್ಬರು ಮಾಲ್ಗೆ ಪ್ರವೇಶಿಸಿ, ನೆಲದ ಮೇಲೆ ಕುಳಿತು ಧಾರ್ಮಿಕ ಪ್ರಾರ್ಥನೆ ಮಾಡಲು ಪ್ರಾರಂಭಿಸಿದರು. ಮಾಲ್ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ ನಂತರ ಅವರನ್ನು ಬಂಧಿಸಲಾಯಿತು” ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಗೋಪಾಲ್ ಕೃಷ್ಣ ಚೌಧರಿ ತಿಳಿಸಿದ್ದಾರೆ.
ಮಾಲ್ನಲ್ಲಿ ಜನರ ಗುಂಪೊಂದು ನಮಾಜ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ನಮಾಜ್ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಈ ವಿವಾದದ ಬಳಿ ಹಿಂದುತ್ವ ಮೂಲಭೂತವಾದಿಗಳು ಮಾಲ್ನಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಕೋರಿದ್ದಾರೆ. ಆದರೆ ಪೊಲೀಸರು ಇದಕ್ಕೆ ಅನುಮತಿ ನೀಡಿಲ್ಲ.
ಸಂಚಾರಕ್ಕೆ ಅಡ್ಡಿಯಾಗುವ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸುವಂತೆಯೂ ಯುಪಿ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿರಿ: ಲುಲುಮಾಲ್: ಬೇಕಂತಲೇ ನಮಾಜ್ ಮಾಡಿ ವಿವಾದ ಸೃಷ್ಟಿ; ಪಿತೂರಿಯ ಹಿಂದೆ ಯಾರಿದ್ದಾರೆ?
ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಧಾರ್ಮಿಕ ಯಾತ್ರೆಗಳು ಮತ್ತು ಮೆರವಣಿಗೆಗಳಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ ಇರದಂತೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
“ರಸ್ತೆಗಳು ಜನರ ಪ್ರಯಾಣಕ್ಕೆ ಯೋಗ್ಯವಾಗಿಬೇಕು. ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಸಂಚಾರಕ್ಕೆ ಅಡ್ಡಿಯಾಗಬಾರದು. ಈ ನಿಟ್ಟಿನಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಶ್ರಾವಣ ಮಾಸದಲ್ಲಿ ಶಿವನ ದೇವಾಲಯಗಳಲ್ಲಿ ಜನಸಂದಣಿ ಇರುತ್ತದೆ, ಪರಿಸ್ಥಿತಿಯನ್ನು ನಿಭಾಯಿಸಲು ದೇವಾಲಯದ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಬೇಕು ಎಂದಿದ್ದಾರೆ.
ಲುಲು ಮಾಲ್ ಉದ್ಘಾಟನೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್
ಜುಲೈ 10ರಂದು ರಾಜ್ಯದ ರಾಜಧಾನಿ ಲಕ್ನೋದಲ್ಲಿ ಲುಲು ಗ್ರೂಪ್ ಅಧ್ಯಕ್ಷ ಯೂಸುಫಲಿ ಎಂಎ ಅವರು ಆಯೋಜಿಸಿದ್ದ ಬೃಹತ್ ಸಮಾರಂಭದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರೂ ಪಾಲ್ಗೊಂಡು, ಲುಲು ಮಾಲ್ ಉದ್ಘಾಟಿಸಿದ್ದರು. ಮುಖ್ಯಮಂತ್ರಿಯವರ ಚಿತ್ರಗಳನ್ನು ಹೊಂದಿರುವ ಪೂರ್ಣ ಪುಟದ ಜಾಹೀರಾತನ್ನು ಲುಲು ಗ್ರೂಪ್ ರಾಜ್ಯದ ಎಲ್ಲ ಪ್ರಮುಖ ಪತ್ರಿಕೆಗಳಿಗೆ ನೀಡಿತ್ತು. ಉದ್ಘಾಟನಾ ಸಮಾರಂಭದಲ್ಲಿ ಯುಪಿ ಅಸೆಂಬ್ಲಿಯ ಸ್ಪೀಕರ್ ಸತೀಶ್ ಮಹಾನಾ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ. ದಿನೇಶ್ ಶರ್ಮಾ ಹಾಜರಿದ್ದರು.
ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಪ್ರಯಾಗರಾಜ್, ವಾರಣಾಸಿ, ಗೋರಖ್ಪುರ ಮತ್ತು ಕಾನ್ಪುರ ಸೇರಿದಂತೆ ರಾಜ್ಯದ ಇತರ ಪಟ್ಟಣಗಳಲ್ಲಿ ಲುಲು ಗ್ರೂಪ್ ಹೂಡಿಕೆ ಮಾಡಲು ಮುಂದಾಗಿರುವುದು ಸಂತಸ ತಂದಿದೆ” ಎಂದಿದ್ದರು.


