Homeಮುಖಪುಟಲುಲುಮಾಲ್: ಬೇಕಂತಲೇ ನಮಾಜ್‌ ಮಾಡಿ ವಿವಾದ ಸೃಷ್ಟಿ; ಪಿತೂರಿಯ ಹಿಂದೆ ಯಾರಿದ್ದಾರೆ?

ಲುಲುಮಾಲ್: ಬೇಕಂತಲೇ ನಮಾಜ್‌ ಮಾಡಿ ವಿವಾದ ಸೃಷ್ಟಿ; ಪಿತೂರಿಯ ಹಿಂದೆ ಯಾರಿದ್ದಾರೆ?

- Advertisement -
- Advertisement -

ಲಕ್ನೋದಲ್ಲಿ ಹೊಸದಾಗಿ ತೆರೆಯಲಾದ ಲುಲು ಮಾಲ್‌ನಲ್ಲಿ ಕೆಲವರು ನಮಾಜ್ ಮಾಡುತ್ತಿರುವ ವಿಡಿಯೊ ವೈರಲ್ ಆದ ಕುರಿತು ವಿವಾದ ಸೃಷ್ಟಿಯಾಗಿದೆ. ಆದರೆ ಇದೊಂದು ಪಿತೂರಿ ಕೃತ್ಯವಾಗಿದ್ದು, ಬೇಕಂತಲೇ ಕಿಡಿಗೇಡಿಗಳು ದ್ವೇಷ ಹರಡಲು ಯತ್ನಿಸಿದ್ದಾರೆಂಬ ಸಂಗತಿ ಬಯಲಾಗಿದೆ.

ನಮಾಜ್‌ ವಿಡಿಯೊ ವೈರಲ್‌ ಆದ ತಕ್ಷಣ ಹಿಂದುತ್ವ ಸಂಘಟನೆಯಾದ ಅಖಿಲ ಭಾರತೀಯ ಹಿಂದೂ ಮಹಾಸಭಾ ಪ್ರತಿಭಟನೆ ನಡೆಸುವುದಾಗಿ ಹೇಳಿತು. ಉತ್ತರ ಪ್ರದೇಶದ ಪೊಲೀಸರು ನಮಾಜ್‌ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದರು. ‘ಧಾರ್ಮಿಕ ಗುಂಪುಗಳ ನಡುವಿನ ದ್ವೇಷ ಬೆಳೆಸುವ ಯತ್ನ’ ಆರೋಪವನ್ನು ಹೊರಿಸಲಾಗಿದೆ.

ಮಾಲ್‌ನ ಅಂಗಳದಲ್ಲಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ ಎಂದು ಲುಲು ಗ್ರೂಪ್ ಮತ್ತು ಅದರ ಮಾಲೀಕ ಯೂಸುಫಲಿ ಎಂ.ಎ. ವಿರುದ್ಧ ಹಿಂದೂ ಮಹಾಸಭಾ ಲಕ್ನೋದಲ್ಲಿ ಪ್ರತಿಭಟನೆ ಆರಂಭಿಸಿತು. ಮಾಲ್‌ನ ಆಡಳಿತ ಮಂಡಳಿ ಹಾಗೂ ವಿಡಿಯೊದಲ್ಲಿ ಸೆರೆಯಾಗಿರುವ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಾಸಭಾ ಕಾರ್ಯಕರ್ತರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಾಲ್‌ನ ಅಧಿಕಾರಿಗಳು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಸುಶಾಂತ್ ಗಾಲ್ಫ್ ಸಿಟಿ ಪೊಲೀಸರಿಗೆ ಪತ್ರವನ್ನೂ ಕಳುಹಿಸಿದ್ದಾರೆ. “ನಮಾಜ್ ಮಾಡಿರುವವರು ಮಾಲ್‌ನ ಉದ್ಯೋಗಿಗಳಲ್ಲ. ಮಾಲ್‌ಗೆ ಭೇಟಿ ನೀಡಿದವರು ನಮಾಜ್‌ ಮಾಡಿದ್ದಾರೆ” ಎಂದು ಆಡಳಿತ ವಿಭಾಗ ಸ್ಪಷ್ಟಪಡಿಸಿದೆ. “ಅಂತಹ ಯಾವುದೇ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ. ಮಾಲ್‌ನಲ್ಲಿ ಯಾವುದೇ ಧಾರ್ಮಿಕ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ” ಎಂದು ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.

ಮಾಲ್ ಮ್ಯಾನೇಜ್‌ಮೆಂಟ್‌ ಸ್ಪಷ್ಟೀಕರಣ ನೀಡಿದರೂ ಹಿಂದುತ್ವ ಗ್ರೂಪ್‌ಗಳು ಸಮಾಧಾನವಾಗಿಲ್ಲ. ಲುಲು ಗ್ರೂಪ್‌ ಮಾಲೀಕ ಯೂಸುಫಲಿ ಮುಸ್ಲಿಂ ಆಗಿರುವ ಕಾರಣ ನೇರವಾಗಿ ಮಾಲೀಕನನ್ನೇ ಈ ಹಿಂದುತ್ವ ಗ್ರೂಪ್‌ಗಳು ಟಾರ್ಗೆಟ್ ಮಾಡಿವೆ.

‘ಲುಲು ಮಾಲ್ ಮಾಲೀಕ ಕೇವಲ ಮುಸ್ಲಿಮರನ್ನು ನೇಮಿಸಿಕೊಂಡಿದ್ದಾರೆ. ಭಾರತದಲ್ಲಿ ಗಳಿಸಿದ ಲಾಭವನ್ನು ದುಬೈಗೆ ಕಳುಹಿಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವ ಶೇ. 70ರಷ್ಟು ಪುರುಷರು ಮುಸ್ಲಿಮರಾಗಿದ್ದಾರೆ. ಶೇ. 30ರಷ್ಟು ಹಿಂದೂ ಮಹಿಳೆಯರಿದ್ದಾರೆ. ಲವ್‌ ಜಿಹಾದ್‌ ನಡೆಸಲು ಸಂಚು ರೂಪಿಸಲಾಗಿದೆ” ಎಂದು ಹಿಂದೂ ಮಹಾಸಭಾ ಆರೋಪಿಸಿತು.

ಮಹಾಸಭಾದ ಸದಸ್ಯರು ಕೂಡ ಲಕ್ನೋದ ಗಾಲ್ಫ್ ಸಿಟಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಾಲ್‌ನಲ್ಲಿ ರಾಮಾಯಣ ಪಠಿಸಲು ಅನುಮತಿ ನೀಡಬೇಕು ಎಂದಿರುವ ಅವರು, ‘ಲವ್ ಜಿಹಾದ್’ಅನ್ನು ಪ್ರಚಾರ ಮಾಡಲು ಲುಲು ಮಾಲ್ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿರಿ: ಮುಸ್ಲಿಂ ಮಹಿಳೆಯರನ್ನು ರೇಪ್‌ ಮಾಡಲು ಕರೆ ನೀಡಿದ್ದ ‘ಬಜರಂಗಮುನಿ’ಯನ್ನು ‘ಗೌರವಾನ್ವಿತ’ ಎಂದ ಸರ್ಕಾರ!

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಹೊಸ ವಿಚಾರಗಳು ಮುನ್ನೆಲೆಗೆ ಬಂದಿವೆ. ಈ ಪ್ರಕರಣ ಒಂದು ಪಿತೂರಿಯದ್ದಾಗಿದೆ. ನಮಾಜ್ ಮಾಡಿದವರಿಗೆ ವಾಸ್ತವವಾಗಿ ನಮಾಜ್‌ ಸಲ್ಲಿಸುವುದು ಹೇಗೆಂಬ ಅರಿವು ಕೂಡ ಇರಲಿಲ್ಲ ಎಂದು ‘ನ್ಯಾಷನಲ್‌ ಹೆರಾಲ್ಡ್‌’ ವರದಿ ಮಾಡಿದೆ. ಇದರ ಹಿಂದೆ ಯಾವ ಕಾಣದ ಕೈಗಳು ಕೆಲಸ ಮಾಡುತ್ತಿವೆ?

ನ್ಯಾಷನಲ್‌ ಹೆರಾಲ್ಡ್‌ ವರದಿ ಹೇಳುವುದೇನು?

ಲುಲು ಮಾಲ್‌ನ ಹೆಸರು ಕೆಡಿಸಲು, ಸಮುದಾಯಗಳ ನಡುವೆ ದ್ವೇಷ ಬಿತ್ತಲು ಉದ್ದೇಶಪೂರ್ವಕವಾಗಿ ಮಾಡಿದ ಕಿಡಿಗೇಡಿ ಕೃತ್ಯ ಇದಾಗಿದೆ ಎಂಬ ವಿಷಯ ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬರುತ್ತದೆ.

ಮಾಲ್‌ ಮ್ಯಾನೇಜ್‌ಮೆಂಟ್‌ ಹಂಚಿಕೊಂಡಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎಂಟು ಪುರುಷರು ಒಟ್ಟಿಗೆ ಮಾಲ್‌ಗೆ ಪ್ರವೇಶಿಸುವುದನ್ನು ಕಾಣಬಹುದು. ಅವರಲ್ಲಿ ಯಾರೊಬ್ಬರೂ ಮಾಲ್‌ನ ಒಳಗೆ ಸುತ್ತಾಡುವುದಿಲ್ಲ. ಯಾವುದೇ ಶೋರೂಂಗೆ ಭೇಟಿ ನೀಡುವ ಪ್ರಯತ್ನವನ್ನೂ ಮಾಡುವುದಿಲ್ಲ. ಅವರು ಏನನ್ನೂ ಖರೀದಿಸುವುದಿಲ್ಲ. ಮಾಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಆಸಕ್ತಿಯನ್ನೂ ತೋರುವುದಿಲ್ಲ.

ಆತುರಾತುರವಾಗಿ ಕೂತು ನಮಾಜ್ ಮಾಡಲು ಸ್ಥಳ ಹುಡುಕತೊಡಗುತ್ತಾರೆ. ಅವರು ಮೊದಲು ನೆಲಮಾಳಿಗೆಯನ್ನು ಪ್ರಯತ್ನಿಸುತ್ತಾರೆ. ನೆಲ ಮಹಡಿ ಮತ್ತು ಮೊದಲ ಮಹಡಿಯಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆಯುತ್ತಾರೆ. ನಂತರ ಅವರು ಎರಡನೇ ಮಹಡಿಗೆ ತೆರಳುತ್ತಾರೆ. ಅಲ್ಲಿ ಕಡಿಮೆ ಜನರಿದ್ದರು. ಆರು ಜನರು ತಕ್ಷಣ ನಮಾಜ್ ಮಾಡಲು ಕುಳಿತುಕೊಳ್ಳುತ್ತಾರೆ. ಉಳಿದ ಇಬ್ಬರು ವೀಡಿಯೊಗಳನ್ನು ರೆಕಾರ್ಡ್ ಮಾಡುವುದರಲ್ಲಿ, ಛಾಯಾಚಿತ್ರಗಳನ್ನು ತೆಗೆಯುವಲ್ಲಿ ನಿರತರಾಗುತ್ತಾರೆ.

‘ನಮಾಜ್ ಹೇಗೆ ಸಲ್ಲಿಸಲಾಗುತ್ತದೆ ಎಂಬ ಪ್ರಾಥಮಿಕ ತಿಳಿವಳಿಕೆ ಇಲ್ಲಿ ನಮಾಜ್‌ ಮಾಡಿದವರಿಗೆ ಇರಲಿಲ್ಲ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ಸ್ಪಷ್ಟವಾಗುತ್ತದೆ’ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ದಕ್ಷಿಣ) ರಾಜೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ‘ಶೀಘ್ರವೇ ಕಿಡಿಗೇಡಿಗಳನ್ನು ಬಂಧಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

‘ನಮಾಜ್ ಪೂರ್ಣಗೊಳಿಸಲು ಏಳರಿಂದ ಎಂಟು ನಿಮಿಷಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಇವರು ಆತುರಾತುರವಾಗಿ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸುತ್ತಾರೆ.

ವಿವಾದದ ಆರಂಭದಲ್ಲಿಯೇ ಪಿತೂರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತೆ ತಾಹಿರಾ ಹಸನ್, “ಕಾಬಾದ ಕಡೆ ಮುಖ ಮಾಡಿ ನಮಾಜ್‌ ಸಲ್ಲಿಸಲಾಗುತ್ತದೆ ಎಂಬುದು ಇಲ್ಲಿ ನಮಾಜ್‌ ಮಾಡಿದವರಿಗೆ ತಿಳಿದಿಲ್ಲ. ಉತ್ತರ ಭಾರತದಲ್ಲಿ ನಮಾಜ್‌ ಮಾಡುವಾಗ ಪಶ್ಚಿಮ ದಿಕ್ಕಿಗೆ ಮುಖ ಮಾಡಲಾಗುತ್ತದೆ. ಅಲ್ಲಿ ನಮಾಜ್‌ ಮಾಡಿದವರಲ್ಲಿ ಎಲ್ಲರೂ ಪಶ್ಚಿಮದ ಕಡೆಗೆ ಮುಖ ಮಾಡಿದರೆ, ಅವರಲ್ಲಿ ಒಬ್ಬನು ತನ್ನ ಮುಖವನ್ನು ಬೇರೆ ದಿಕ್ಕಿಗೆ ತಿರುಗಿಸಿದ್ದಾನೆ” ಎಂದಿದ್ದಾರೆ.

ಇದನ್ನೂ ಓದಿರಿ: ಮುಸ್ಲಿಂ ವಿದ್ಯಾರ್ಥಿಗೆ ಕಿರುಕುಳ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಎಬಿವಿಪಿ ಕಾರ್ಯಕರ್ತ ಅಮಾನತು

ತರಾತುರಿಯಲ್ಲಿ ನಮಾಜ್ ಮಾಡಿ ವೀಡಿಯೋ ರೆಕಾರ್ಡ್ ಮಾಡಿದ ನಂತರ ಅವರು ಮಾಲ್‌ನಿಂದ ತಕ್ಷಣವೇ ನಿರ್ಗಮಿಸುತ್ತಾರೆ. ಮಾಲ್‌ನಲ್ಲಿ ಸುತ್ತಾಡುವುದನ್ನಾಗಲೀ, ಅಲ್ಲೇ ಸ್ವಲ್ಪ ಹೊತ್ತು ನಿಲ್ಲುವ ಪ್ರಯತ್ನವನ್ನಾಗಲೀ ನಮಾಜ್‌ ಮಾಡಿದವರು ಮಾಡಿಲ್ಲ.

ಡಿಸಿಪಿ (ದಕ್ಷಿಣ) ಮತ್ತು ಸುಶಾಂತ್ ಗಾಲ್ಫ್ ಸಿಟಿ ಇನ್ಸ್‌ಪೆಕ್ಟರ್ ವಿವಾದದ ಆರಂಭದಲ್ಲಿ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಲು ವಿಫಲವಾದ ಕಾರಣ ಅವರನ್ನು ಬದಲಾಯಿಸಲಾಗಿದೆ. ಮಾಲ್ ಮ್ಯಾನೇಜ್‌ಮೆಂಟ್ ದೃಶ್ಯಗಳನ್ನು ಸ್ಕ್ಯಾನ್ ಮಾಡಲು ಸಮಯ ಕೇಳಿದೆ. ವಿವಾದ ಸೃಷ್ಟಿಸಿರುವ ದೃಶ್ಯಗಳನ್ನು ಪೊಲೀಸರೊಂದಿಗೆ ಮಾಲ್‌ ಮ್ಯಾನೇಜ್‌ಮೆಂಟ್ ಹಂಚಿಕೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...