Homeರಾಜಕೀಯಸತ್ತಮೇಲೂ ಬಿಡದೆ ಕಾಡುವ ಜಾತಿಕ್ರೌರ್ಯ: ಮನುಸಂಗಡ ಚಿತ್ರ ತೆರೆದಿಡುವ ಸತ್ಯ

ಸತ್ತಮೇಲೂ ಬಿಡದೆ ಕಾಡುವ ಜಾತಿಕ್ರೌರ್ಯ: ಮನುಸಂಗಡ ಚಿತ್ರ ತೆರೆದಿಡುವ ಸತ್ಯ

- Advertisement -
- Advertisement -

ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇಲ್ಲಿವೆ. ಸತ್ತಮೇಲೆಯೂ ಸಾಮಾಜಿಕ ಅಂತರಗಳನ್ನು ಕಾಪಾಡಲಾಗುತ್ತದೆ. ಇವೆಲ್ಲದರ ನಡುವೆ ದಲಿತ (ಎಲ್ಲ ಕೆಳಜಾತಿಗಳು ಸೇರಿ) ಸಮುದಾಯದ ವ್ಯಕ್ತಿಗಳು ಸತ್ತಾಗ ಅವರ ಅಂತ್ಯಕ್ರಿಯೆ ನೆರವೇರಿಸಲು ಹಲವೆಡೆ ಅವರಿಗೆ ಸ್ಮಶಾನಗಳಿಲ್ಲ. ಅವರ ಸಮುದಾಯದವರೇ ಯಾರಾದರೂ ದೊಡ್ಡಮನಸು ಮಾಡಿ ತಮ್ಮ ಜಮೀನುಗಳಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು. ಇದು ಹೇಗೋ ದೊರಕುತ್ತದೆ ಎಂದುಕೊಂಡರೂ ಊರೊಟ್ಟಿನ ಮಂದಿ ಬಳಸುವ ಸಾಮಾನ್ಯ ರಸ್ತೆಯಲ್ಲಿ ಅಂತ್ಯಕ್ರಿಯೆ ಯಾತ್ರೆಗೆ ಅವಕಾಶ ನಿರಾಕರಿಸುವ ರೂಢಿ ಹಲವೆಡೆ ಇಂದಿಗೂ ಇದೆ.

ತಮಿಳು ಚಲನಚಿತ್ರ “ಮನುಸಂಗಡ” ಇದೇ ವಿಷಯವನ್ನು ನಮ್ಮ ಮುಂದೆ ಇಡುತ್ತದೆ. ಇದು ಕಾಲ್ಪನಿಕ ಚಿತ್ರಕಥೆಯಲ್ಲ. ನಡೆದ, ನಡೆಯುತ್ತಿರುವ ಘಟನಾವಳಿಗಳನ್ನು ಆಧರಿಸಿದ್ದು. ಆದ್ದರಿಂದಲೇ ಇದು ಸಂಪೂರ್ಣವಾಗಿ ಸಿನೆಮ್ಯಾಟಿಕ್ ಭಾಷೆಯಲ್ಲಿ ಇಲ್ಲ. ಇದನ್ನು ಡಾಕ್ಯುಮೆಂಟರಿ ಮಾದರಿಯಲ್ಲಿಯೂ ಹೇಳಲಾಗಿದೆ. ಆದ್ದರಿಂದಲೇ ಇದರ ಕ್ಯಾಮೆರಾ ಭಾಷೆಯೂ ವಿಭಿನ್ನವಾಗಿದೆ ಮತ್ತು ಅಷ್ಟೇ ಸಶಕ್ತವಾಗಿದೆ. ದಲಿತರ ನೋವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಈ ಕಥನ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಇದು ಇತರ ಯಾವುದೇ ರಾಜ್ಯದಲ್ಲಿಯೂ ನಡೆಯಬಹುದು. ಸ್ಥಳ ಇಲ್ಲಿ ನೆಪ ಅಷ್ಟೆ. ಚೆನ್ನೈ ಮಹಾನಗರದ ಕಾರ್ಖಾನೆಯೊಂದರಲ್ಲಿ ದುಡಿಯುವ ಯುವಕ ಕೊಲ್ಲಪ್ಪನ್. ಈತನ ತಂದೆ ಮರಣ ಹೊಂದಿದ ಸುದ್ದಿ ಬರುತ್ತದೆ. ಈತ ಗ್ರಾಮಕ್ಕೆ ಬರುತ್ತಾನೆ. ತಾಯಿಯ, ಸಂಬಂಧಿಕರ ದುಃಖ ಕಟ್ಟೆಯೊಡೆದಿರುತ್ತದೆ. ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುವಾಗಲೇ ಊರೊಟ್ಟಿನ ರಸ್ತೆ (ಸಾಮಾನ್ಯ ರಸ್ತೆ)ಯಲ್ಲಿ ಶವ ತೆಗೆದುಕೊಂಡು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ ಎಂಬ ವಿಷಯ ಚರ್ಚೆಯಾಗುತ್ತದೆ.

ಪೊಲೀಸ್ ಸ್ಟೇಷನ್, ಕಂದಾಯಾಧಿಕಾರಿ ಕಚೇರಿಗಳಿಗೆ ಅಲೆದರೂ ರಕ್ಷಣೆ ಭರವಸೆ ದೊರೆಯುವುದಿಲ್ಲ. ಹೈಕೋರ್ಟಿನಲ್ಲಿ ರಿಟ್ ಪಿಟಿಷನ್ ಹಾಕಲಾಗುತ್ತದೆ. ಆಗ ಸರ್ಕಾರಿ ವಕೀಲರು ಹೇಳುವುದು “ಗ್ರಾಮದ ಸಾಮಾನ್ಯ ರಸ್ತೆಯಲ್ಲಿ ದಲಿತ ಸಮುದಾಯದ ವ್ಯಕ್ತಿಯ ಶವ ತೆಗೆದುಕೊಂಡು ಹೋದರೆ ಕಾನೂನು ಸುವ್ಯವಸ್ಥೆ ಕೈಮೀರಿ ಹೋಗಬಹುದು” ಇದು ನ್ಯಾಯಾಧೀಶರಿಗೆ ಅಚ್ಚರಿ ಉಂಟು ಮಾಡುತ್ತದೆ. ಅರ್ಜಿದಾರ ಕೊಲ್ಲಪ್ಪನ್ ತಂದೆಯ ಅಂತ್ಯಕ್ರಿಯೆ ಯಾತ್ರೆಯನ್ನು ಸಾಮಾನ್ಯ ರಸ್ತೆಯಲ್ಲಿ ತೆಗೆದುಕೊಂಡು ಹೋಗಲು, ಅಂತ್ಯಕ್ರಿಯೆ ಯಾವುದೇ ಸಮಸ್ಯೆಗಳಿಲ್ಲದಂತೆ ನಡೆಯಲು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಡಳಿತ, ಪೊಲೀಸರಿಗೆ ಸೂಚಿಸುತ್ತದೆ.

ಪ್ರಾಯೋಗಿಕವಾಗಿ ಹೈಕೋರ್ಟ್ ಆದೇಶ ಪ್ರಹಶನದಂತೆ ಆಗಿಬಿಡುತ್ತದೆ. ಕಂದಾಯಾಧಿಕಾರಿ, ಪೊಲೀಸ್ ಉನ್ನತಾಧಿಕಾರಿಗಳು ಮೇಲ್ಜಾತಿಯ ವಕ್ತಾರರಾಗುತ್ತಾರೆ. “ಸಾಮಾನ್ಯ ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗುವುದು ಬೇಡ. ಪರ್ಯಾಯ ಮಾರ್ಗದಲ್ಲಿ ತೆಗದುಕೊಂಡು ಹೋಗಿ” ಎನ್ನುತ್ತಾರೆ. ಪರ್ಯಾಯ ಮಾರ್ಗವೇ ಇಲ್ಲ. ಕಲ್ಲು-ಮುಳ್ಳು-ಪೊದೆಗಳ ಹಾದಿ ಅದು. ಒಂದುವೇಳೆ ಪರ್ಯಾಯ ಹಾದಿಯಿದ್ದರೂ ಅದನ್ನು ಬಳಸುವ ಅನಿವಾರ್ಯತೆ ಏಕೆ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಪೊಲೀಸರೇ ಬಲವಂತವಾಗಿ ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಾರೆ.

ಈ ಸಂದರ್ಭದಲ್ಲಿ ಕೊಲ್ಲಪ್ಪನ್ ಸಾಮಾನ್ಯ ಹಾದಿ ಶುರುವಾಗುವಲ್ಲಿ ಒಬ್ಬಂಟಿಯಾಗಿ ಬಂದು ನಿಂತು “ನಿಮ್ಮ ಮನೆಗಳ ಸತ್ತ ನಾಯಿ, ದನ ಸಾಮಾನ್ಯ ರಸ್ತೆಯಲ್ಲಿ ಹೋಗಬಹುದು, ನಮಗ್ಯಾಕೆ ಅವಕಾಶ ನಿರಾಕರಿಸುತ್ತೀರಿ. ನಿಮ್ಮಲ್ಲಿ ಸಾವು ಉಂಟಾದಾಗ ಹೂಳಲು, ಸುಡಲು ನಮ್ಮ ನೆರವು ಬೇಕು. ಆದರೆ ನಮ್ಮ ಶವವನ್ನು ಕೊಂಡೊಯ್ಯಲು ಏಕೆ ನಿರಾಕರಿಸುತ್ತೀರಿ ಎಂದು ಕೇಳುವುದು ಪರಿಣಾಮಕಾರಿ. ಮೇಲ್ಜಾತಿಗಳ ಸಮುದಾಯದಲ್ಲಿ ಸಾವು ಉಂಟಾದಾಗ ಈ ಸುದ್ದಿ ಸಾರಲು ದಲಿತರು ಬೇಕು; ಶವದ ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾ ತಮಟೆ ಬಡಿಯಲು ಬೇಕು. ಆದರೆ ಈ ಸಮುದಾಯದಲ್ಲಿ ಸಾವು ಉಂಟಾದಾಗ ಅದೇರಸ್ತೆಯಲ್ಲಿ ಸಾಗಲು ಬಿಡುವುದಿಲ್ಲ. ಇದೊಂದು ಕ್ರೂರ ವಿಪರ್ಯಾಸ.

ಕೊಲ್ಲಪ್ಪನ್ ಗೆಳತಿ ಮಹಾನಗರದ ನಿವಾಸಿ. ಈಕೆಗೆ ಹಳ್ಳಿಯ ಬಗ್ಗೆ ರೋಮ್ಯಾಂಟಿಕ್ ಕಲ್ಪನೆಗಳಿವೆ. “ಇಲ್ಲಿ ಇಂಥ ಸಾಮಾಜಿಕ ವಾತಾವರಣ ಇರಬಹುದೆಂದು ನನಗೆ ಗೊತ್ತಿರಲಿಲ್ಲ” ಎನ್ನುತ್ತಾಳೆ. ಅದಕ್ಕೆ ಕೊಲ್ಲಪ್ಪನ್ ಕೊಡುವ ಉತ್ತರ “ಇಲ್ಲಿ ಎಲ್ಲ ಜಾತಿ-ಸಮುದಾಯಗಳವರು ಸಾಮರಸ್ಯದಿಂದ ಜೀವನ ನಡೆಸುತ್ತಾರೆ ಎಂದು ಭಾವಿಸಿದ್ದೆಯಾ” ಬಹುತೇಕ ಗ್ರಾಮಗಳಲ್ಲಿ ಎಲ್ಲ ಜಾತಿಗಳ ಸಾಮರಸ್ಯದ ಬದುಕು ಎಂಬುದೊಂದು ಇನ್ನೂ ರಮ್ಯ ಕಲ್ಪನೆ. ಸಾಮರಸ್ಯವೆಂದರೆ ಇಲ್ಲಿ ಮೇಲ್ಜಾತಿಗಳು ನಡೆಸಿಕೊಂಡು ಬಂದಂಥ ಆಚರಣೆಗಳನ್ನು ಪ್ರಶ್ನೆ ಮಾಡದಿರುವುದು, ತುಳಿಯುತ್ತಲೇ ಇರುವುದನ್ನು ಸಹಿಸಿಕೊಳ್ಳುವುದು.

ಆಸ್ಮೃಶ್ಯತೆ ಎನ್ನುವುದು ಹೇಗೆಲ್ಲ ಆಚರಣೆಯಲ್ಲಿದೆ ಎಂಬುದನ್ನು ನೇರವಾಗಿಯೇ ಹೇಳುವ “ಮನುಸಂಗಡ” ಒಂದು ಡಾಕ್ಯುಮೆಂಟರಿ ಹಂತದಲ್ಲಿಯೇ ನಿಂತು ಬಿಡಬಹುದಾಗಿತ್ತು. ಆದರೆ ನಿರ್ದೇಶಕ ಅಂಶನ್ ಕುಮಾರ್ ಪರಿಶ್ರಮ(ಚಿತ್ರಕಥೆಯೂ ಇವರದೇ) ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸಿನೆಮ್ಯಾಟಿಕ್ ಪರಿಭಾಷೆಗಳನ್ನೂ ಸಮರ್ಥವಾಗಿ ಬಳಸಿ ಕಥೆ ಹೇಳಲಾಗಿದೆ.

ಪಿ.ಎಸ್ ದರನ್ ಮಾಡಿರುವ ಸಿನೆಮಾಟೋಗ್ರಫಿ ವಿಭಿನ್ನವಾಗಿದೆ. ಈ ಥರದ ಕ್ಯಾಮೆರಾ ಪರಿಭಾಷೆ, ಭಾರತೀಯ ಸಿನೆಮಾಗಳ ಸಂದರ್ಭದಲ್ಲಿ ಬಹಳ ಅಪರೂಪ. ಸಾಕಷ್ಟು ಸನ್ನಿವೇಶಗಳಲ್ಲಿ ಹ್ಯಾಂಡಿ ಕ್ಯಾಮೆರಾ ಬಳಸಲಾಗಿದೆ. ಆದರೆ ಎಲ್ಲಿಯೂ ಕಥೆಯ ನಿರೂಪಣೆಗೆ ಕ್ಯಾಮೆರಾ ತೊಡಕಾಗದೇ ಮತ್ತಷ್ಟು ಪರಿಣಾಮಕಾರಿಯಾಗಿ ಹೇಳುವಲ್ಲಿ ಸಹಕಾರಿಯಾಗಿದೆ. ಸಿನೆಮಾಕ್ಕೆ ನೀಡಿರುವ ಹಿನ್ನೆಲೆ ಸಂಗೀತ ಕಥೆಯ ಸನ್ನಿವೇಶ, ಬೆಳವಣಿಗೆಯಲ್ಲಿ ಮಿಳಿತವಾಗಿದೆ. ಧನಶೇಖರ್ ನಿರ್ವಹಿಸಿರುವ ಸಂಕಲನ ಕಾರ್ಯ ಅತ್ಯುತ್ತಮ.

ಚಿತ್ರದಲ್ಲಿ ಇರುವ ಕಲಾವಿದರಾದ ರಾಜೀವ್ ಆನಂದ್, ಶೀಲಾ ರಾಜಕುಮಾರ್, ಮಣಿಮೇಘಲೈ, ವಿದುರ್ ರಾಜರಾಜನ್, ಆನಂದ್ ಸಂಪತ್, ಸೇತು ದರ್ವೀನ್, ಎ.ಎಸ್. ಶಶಿಕುಮಾರ್ ಅಭಿನಯ ಮನಮುಟ್ಟುತ್ತದೆ. ಗ್ರಾಮ ನಿವಾಸಿಗಳನ್ನು ಪಾತ್ರಧಾರಿಗಳಾಗಿರುವಂತೆ ಸಿನಿಮಾ ಸಂಯೋಜಿಸಿರುವುದು ವಿಶೇಷ.

ತಮಿಳುನಾಡಿನಲ್ಲಿ 2018ರ ಅಕ್ಟೋಬರ್ ನಲ್ಲಿ “ಮನುಸಂಗಡ” ತೆರೆಕಂಡಿದೆ. ಸಾಕಷ್ಟು ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗಳನ್ನೂ ಗಳಿಸಿದೆ. ಭಾರತೀಯ ಸಾಮಾಜಿಕ ಕಥನವನ್ನು ಬಹು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ಈ ಸಿನೆಮಾ “ನೆಟ್ ಫ್ಲಿಕ್ಸ್” ನಲ್ಲಿಯೂ ಲಭ್ಯವಿದೆ.

ಪೊಲೀಸರು ಕೊಲ್ಲಪ್ಪನ್ ಮತ್ತವರ ಕುಟುಂಬದವರು, ಸಂಬಂಧಿಕರನ್ನು ಬಂಧಿಸಿ ಕರೆದೊಯ್ಯುತ್ತಾರೆ. ಇವರೆಲ್ಲ ಪೊಲೀಸ್ ವ್ಯಾನಿನಲ್ಲಿದ್ದೂ ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದರೂ ಹಳ್ಳಿಯ ಮೇಲ್ಞಾತಿಯವರು ದಾಳಿ ಮಾಡುತ್ತಾರೆ. ಕಲ್ಲುಗಳೂ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ವ್ಯಾನಿನತ್ತ ತೂರುತ್ತಾರೆ, ನಿಂದಿಸುತ್ತಾರೆ. ಇವೆಲ್ಲವೂ ಇಲ್ಲಿ ಹಲವೊಮ್ಮೆ ಕಾನೂನು ಸುವ್ಯವಸ್ಥೆ ಎಂಬುದು ಅಣಕ ಎಂಬುದನ್ನು ಹೇಳುತ್ತದೆ.

ಭಾರತೀಯರಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಸೂಕ್ತವಾಗಿ ನಡೆಸಬೇಕು ಎಂಬ ನಂಬಿಕೆಯಿದೆ. ಇದಕ್ಕೆ ಚ್ಯುತಿ ಬಂದರೆ ಆ ನೋವು ದೀರ್ಘಕಾಲ ಉಳಿಯುತ್ತದೆ. ಮಣ್ಣು ಮಾಡಿದ ನಂತರ ನಡೆಸುವ ವಿಧಿವಿಧಾನಗಳಿರುತ್ತವೆ. ಸತ್ತವರ ಸಮಾಧಿ ಮುಂದೆ ಅವುಗಳನ್ನು ನಡೆಸಲಾಗುತ್ತದೆ. ಆದರೆ ಸತ್ತವರ ಸಮಾಧಿ ಯಾವುದು, ಎಲ್ಲಿದೆ ಎಂದು ತಿಳಿಯದಿದ್ದರೆ ….

ಇದನ್ನೂ ಓದಿ: ಆರ್ಟಿಕಲ್ 15: ಭಾರತದ ಜಾತಿವ್ಯವಸ್ಥೆಯ ಕರಾಳ ಮುಖಗಳ ಸಮರ್ಥ ಅನಾವರಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...