Homeಮುಖಪುಟಆರ್ಟಿಕಲ್ 15: ಭಾರತದ ಜಾತಿವ್ಯವಸ್ಥೆಯ ಕರಾಳ ಮುಖಗಳ ಸಮರ್ಥ ಅನಾವರಣ...

ಆರ್ಟಿಕಲ್ 15: ಭಾರತದ ಜಾತಿವ್ಯವಸ್ಥೆಯ ಕರಾಳ ಮುಖಗಳ ಸಮರ್ಥ ಅನಾವರಣ…

- Advertisement -
- Advertisement -

| ಕುಮಾರ್ ರೈತ |

ಅವರು ಹೊಲಸನ್ನು ಬಾಚಲೆಂದೇ ಬಂದವರು, ಅವರು ಊರಿನಿಂದಾಚೆಯೇ ಇರಬೇಕಾದವರು, ಅವರು ಮುಟ್ಟಿಸಿಕೊಳ್ಳಬಾರದವರು, ಅವರ ನೆರಳೂ ಸೋಕಬಾರದು, ಅವರು ತುಳಿಸಿಕೊಳ್ಳಲೆಂದೆ ಹುಟ್ಟಿದವರು, ದೌರ್ಜನ್ಯಕ್ಕೆ ಒಳಗಾದರೆ, ಅತ್ಯಾಚಾರಕ್ಕೀಡಾದರೆ, ಅದನ್ನು ಮಾಡಿದವರು ಮೇಲ್ಜಾತಿಯವರಾದರೆ ಪ್ರಶ್ನೆಯನ್ನೇ ಮಾಡಬಾರದು. ಏಕೆಂದರೆ ಇದರಿಂದ ಸಾಮಾಜಿಕ ಸೌಹಾರ್ದ ಹಾಳಾಗುತ್ತದೆ, ಸಮಾಜದ ನೆಮ್ಮದಿ ಭಂಗವಾಗುತ್ತದೆ.

ಇಲ್ಲಿ ಅವರು ಎಂದರೆ ದಲಿತರು. ಇವರ ನೋವು, ಮೇಲ್ಜಾತಿಗಳ ಮನೋಭಾವ, ರಾಜಕೀಯ ಸಮೀಕರಣಗಳ ಪರಿಣಾಮ ಇವೆಲ್ಲವನ್ನೂ “ಸಾಕ್ಷಿಪ್ರಜ್ಞೆ”ಯಿಂದ ಕಟ್ಟಿಕೊಡುವ ಕಾರ್ಯವನ್ನು “ಆರ್ಟಿಕಲ್ 15” ಚಿತ್ರ ಸಮರ್ಥವಾಗಿ ಮಾಡಿದೆ. ಮೂಲತಃ ಇದು 2014ರಲ್ಲಿ ಉತ್ತರ ಪ್ರದೇಶದ ಬದೌನ್ ನಲ್ಲಿ ನಡೆದ ಗ್ಯಾಂಗ್ ರೇಪ್ ದುರ್ಘಟನೆಯಿಂದ ಪ್ರೇರಿತಗೊಂಡು ರಚಿತವಾದ ಚಿತ್ರಕಥೆ ಆಧರಿಸಿದೆ.

ಭಾರತದ ಜಾತಿವ್ಯವಸ್ಥೆ ಬಹುಸಂಕೀರ್ಣ, ಜಟಿಲ. ಇದು ಇಲ್ಲಿನ ಆಡಳಿತ, ಕಾರ್ಯಾಂಗ, ರಾಜಕೀಯ ಎಲ್ಲದರ ಮೇಲೆಯೂ ದುಷ್ಪರಿಣಾಮ ಬೀರಿದೆ. ಇದು ಹೇಗೆ ನಡೆದುಕೊಂಡು ಬಂದಿದೆಯೊ ಹಾಗೆಯೇ ಮುಂದುವರಿಯಲು ಬಿಡಬೇಕು. ಬದಲಾವಣೆ ತರಲು ಹೋದವರನ್ನೇ ಆಪೋಶನ ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲಿದೆ. ಇದರೊಳಗೆ ಹೊಕ್ಕ ಯುವ ಐಪಿಎಸ್ ಅಧಿಕಾರಿ ಅನುಭವಿಸುವ ತಲ್ಲಣಗಳ ಮೂಲಕ ಈ ವ್ಯವಸ್ಥೆ ಎಷ್ಟು ಕೊಳೆತು ನಾರುತ್ತಿದೆ ಎಂಬುದನ್ನು ಮುಖಕ್ಕೆ ರಾಚುವಂತೆ ಈ ಸಿನಿಮಾ ಕಟ್ಟಿಕೊಟ್ಟಿದೆ.

ಕೆಲವೊಂದು ಸನ್ನಿವೇಶಗಳ ಮೂಲಕ ಪೊಲೀಸ್ ವ್ಯವಸ್ಥೆಯಲ್ಲಿಯೂ ಮಡುಗಟ್ಟಿರುವ ಜಾತೀಯ ಭಾವನೆಯನ್ನು ಚಿತ್ರ ಅನಾವರಣಗೊಳಿಸುತ್ತದೆ. ಉತ್ತರಪ್ರದೇಶದ ಲಾಲ್ಗೌವ್ ಪ್ರದೇಶದ ಹೆಚ್ಚುವರಿ ಪೊಲೀಸ್ ಅಧೀಕ್ಷಕನಾಗಿ ಅಧಿಕಾರ ವಹಿಸಿಕೊಳ್ಳಲು ದೆಹಲಿಯಿಂದ ಬಂದ ಅಯಾನ್,(ಆಯುಷ್ಮಾನ್ ಖುರಾನ)  ಗ್ರಾಮವೊಂದರ ಬಳಿ ಜೀಪ್ ನಿಲ್ಲಿಸಿ ವಾಟರ್ ಬಾಟಲ್ ತರಲು ಹೇಳುತ್ತಾನೆ. ಅದಕ್ಕೆ ಜೊತೆಯಲ್ಲಿದ್ದ ಪೊಲೀಸ್ ಚಾಲಕ ಹೇಳುವುದು “ಇದು ಪಾಸಿಗಳ (ಉತ್ತರ ಪ್ರದೇಶದ ಸಾಮಾಜಿಕ ಶ್ರೇಣಿಯಲ್ಲಿ ಅತ್ಯಂತ ಕೆಳಸ್ತರದ ಜಾತಿ ಎಂದು ಪರಿಗಣಿಸಲ್ಪಟ್ಟವರು) ಗ್ರಾಮ, ಅವರಿಂದ ನೀರು ತೆಗೆದುಕೊಳ್ಳುವುದಿರಲಿ, ಅವರ ನೆರಳೂ ಸೋಕಬಾರದು ಎಂಬ ರಿವಾಜಿದೆ” ಎನ್ನುತ್ತಾನೆ. ಇದು ಅಯಾನ್ ಗೆ ತೀವ್ರ ಶಾಕ್ ಉಂಟು ಮಾಡುತ್ತದೆ.

ಮತ್ತೊಂದು ಸನ್ನಿವೇಶ: ತನ್ನ ಸಹೋದ್ಯೋಗಿಗಳಲ್ಲಿಯೇ ಮಡುಗಟ್ಟಿರುವ ಜಾತೀಯತೆಯಿಂದ ರೋಸಿ ಹೋದ ಅಯಾನ್ ಕೇಳುತ್ತಾನೆ “ನೀವೆಲ್ಲರೂ ಯಾವಯಾವ ಜಾತಿ” ಅದಕ್ಕೆ ಒಬ್ಬೊಬ್ಬರೂ ಒಂದೊಂದು ಉತ್ತರ ಹೇಳುತ್ತಾರೆ. “ಕಾಯಸ್ಥ, ಠಾಕೂರ್, ಜಾಟ್, ರಜಪೂತ್, ಚಮ್ಮಾರ್”. “ಪಾಸಿ ಮತ್ತು ಚಮ್ಮಾರ್ ಒಂದೆಯೇ ಎಂದು ಅಯಾನ್ ಮರುಪ್ರಶ್ನೆ ಹಾಕುತ್ತಾನೆ. “ಇಲ್ಲಿಇಲ್ಲ, ನಾವು (ಚಮ್ಮಾರ್) ಪಾಸಿಗಳಿಗಿಂತ ಮೇಲುಸ್ತರದವರು. ಅವರ ಮನೆಯಲ್ಲಿ ನಾವು ಆಹಾರ ಕೂಡ ಸೇವಿಸುವುದಿಲ್ಲ” ಎಂಬ ಉತ್ತರವನ್ನು ಸಬ್ ಇನ್ಸ್ಪೆಕ್ಟರ್ ನೀಡುತ್ತಾನೆ.

“ಸರಿ ನಾನ್ಯಾರು” ಎಂಬ ಮರುಪ್ರಶ್ನೆ ಅಯಾನ್ ಕೇಳಿದಾಗ “ನೀವು ಬ್ರಾಹ್ಮಣರಲ್ಲಿಯೇ ಅತ್ಯಂತ ಶ್ರೇಷ್ಠ ಬ್ರಾಹ್ಮಣರು” ಎಂಬ ಮರು ಉತ್ತರ ಬರುತ್ತದೆ. ಇಷ್ಟೆಲ್ಲ ಜಾತೀಯ ಸಿಕ್ಕುಗಳು, ಕಗ್ಗಂಟುಗಳು ತನಿಖೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ತನ್ನ ಸಹೋದ್ಯೋಗಿಗಳ ಮನೋಭಾವ ಅರಿಯಲು ಅಯಾನ್ ಕೇಳಿದ ಪ್ರಶ್ನೆಯೇ ಆತನಿಗೆ ಮುಳುವಾಗುತ್ತದೆ. ಆತನ ಮೇಲೆಯೇ ಸಾಮಾಜಿಕ ಸೌಹಾರ್ದಕ್ಕೆ ಭಂಗ ತಂದ ಆರೋಪ ಹೊರಿಸಲಾಗುತ್ತದೆ. ಆತ ಪೂರ್ವಾಗ್ರಹ ಪೀಡಿತನಾಗಿ ತನಿಖೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಸಸ್ಪೆಂಡ್ ಮಾಡಲಾಗುತ್ತದೆ.

ಇಬ್ಬರು ಪಾಸಿ ಸಮುದಾಯದ ಬಾಲಕಿಯರು ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಮರ್ಯಾದಾಹತ್ಯೆ ಎಂದು ವರದಿಕೊಟ್ಟು ಪ್ರಕರಣ ಮುಚ್ಚಿಹಾಕುವಂತೆ ಒತ್ತಡ. ಗ್ಯಾಂಗ್ ರೇಪ್ ನಡೆದಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಕೊಟ್ಟ ವೈದ್ಯೆಯ ಮೇಲೂ ಒತ್ತಡ. ಪ್ರಕರಣಕ್ಕೆ ತಿಪ್ಪೆ ಸಾರಿಸಲು ಯತ್ನಿಸುವ ದೆಹಲಿಯಿಂದ ಬಂದ ತನಿಖಾ ತಂಡದ ಮುಖ್ಯಸ್ಥ. ಇವಿಷ್ಟರ ನಡುವೆಯೂ ತನಿಖೆ ಮುಂದುವರೆಯುತ್ತದೆ. ತನಿಖಾಧಿಕಾರಿಯನ್ನೇ ದಿಗ್ಬ್ರಮೆಗೊಳಿಸುವ ಸತ್ಯಗಳು ಹೊರಬೀಳುತ್ತವೆ.

ಇವೆಲ್ಲದರ ನಡುವೆ ಇಲ್ಲಿ ರಾಜಕೀಯ ಕಾರಣಗಳಿಗಾಗಿ “ಹಿಂದೂಗಳೆಲ್ಲ ಒಂದೇ ಎನ್ನುವುದು”, ನ್ಯಾಯಕ್ಕಾಗಿ ಒತ್ತಾಯಿಸಿ ಪೌರಕಾರ್ಮಿಕರು ಮುಷ್ಕರ ಹೂಡುವುದು, ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡುವ ಯುವಕನ ಆಂದೋಲನ ಯಶಸ್ವಿಯಾಗದಂತೆ ತಡೆಯಲು ಯತ್ನಿಸುವುದು, ಪಟ್ಟಭದ್ರ ಹಿತಾಸಕ್ತಿಗಳು ಪೊಲೀಸ್ ವ್ಯವಸ್ಥೆಯನ್ನೇ ದಾಳವಾಗಿ ಬಳಸಿಕೊಂಡು ಆತನನ್ನು ಎನ್ ಕೌಂಟರ್ ಮಾಡಿಸುವುದು. ಅಬ್ಬಬ್ಬಾ ಎನ್ನಿಸುವಂಥ ವಿವರಗಳೆಲ್ಲವೂ ಕೂಡ ಈ ಚಿತ್ರದಲ್ಲಿ ಒಂದೊಂದೇ ಒಂದೊಂದೇ ಹೊರಬೀಳುತ್ತದೆ.

“ಪೊಲೀಸ್ ಸಂಕೀರ್ಣದ ಒಳಚರಂಡಿ ಕಟ್ಟಿಕೊಂಡಿದೆ. ಕೊಳಚೆನೀರು ಆವರಣ ಪ್ರವೇಶಿಸಿದೆ. ಪೌರಕಾರ್ಮಿಕರು ಮುಷ್ಕರ ಹೂಡಿರುವುದರಿಂದ ಅಲ್ಲಿ ದುರ್ವಾಸನೆ, ಕೊಳೆತ ನೀರು ಇನ್ನೂ ಮಲೆಯುತ್ತಿದೆ. ಅದರ ಮಧ್ಯದಲ್ಲಿಯೇ ಇಟ್ಟಿಗೆಗಳನ್ನು ಪೇರಿಸಿದ ಪೊಲೀಸರು ಸರ್ಕಸ್ ಮಾಡುತ್ತಾ ನಡೆದಾಡುತ್ತಿದ್ದಾರೆ” ಇದೊಂದು ಸಾಂಕೇತಿಕ ಸನ್ನಿವೇಶದ ಮೂಲಕವೇ ಪ್ರಸಕ್ತ ಭಾರತ ಹೇಗೆ ಸಾಗಿದೆ ಎಂಬುದನ್ನು ನಿರ್ದೇಶಕರು ಅತ್ಯಂತ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ಪೊಲೀಸ್ ಅಧಿಕಾರಿ ಅಯಾನ್ ಮನವಿ ನಂತರ ಪೌರಕಾರ್ಮಿಕರು ಮುಷ್ಕರ ಕೈಬಿಟ್ಟಿದ್ದಾರೆ. ಪೊಲೀಸ್ ಸ್ಟೇಷನ್ ಆವರಣದ ಒಳಗೆ ಕಟ್ಟಿಕೊಂಡ ಒಳಚರಂಡಿ ಮ್ಯಾನ್ ಹೋಲ್ ಗೆ ಅದೇ ಪಾಸಿ ಸಮುದಾಯದ ವ್ಯಕ್ತಿ ಬರೀಮೈಯಲ್ಲಿ ಮುಳಗಿ ಎದ್ದು ಕಸ ಎತ್ತಿದ್ದಾನೆ. ಬಂದ್ ಆಗಿದ್ದ ಒಳಚರಂಡಿ ಸರಿಯಾಗುವಂತೆ ಮಾಡಿದ್ದಾನೆ. ಈ ದೃಶ್ಯ ನೋಡುಗರಿಗೆ ಶಾಕ್ ಉಂಟು ಮಾಡುತ್ತದೆ. ಇಲ್ಲಿಯ ತನಕ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ “ಪಾಸಿಗಳ ನೆರಳೂ ಸೋಂಕಬಾರದು” ಎಂಬ ಮನೋಭಾವದ ಪೊಲೀಸರು ಮೂಗು ಮುಚ್ಚಿಕೊಳ್ಳದೇ ಓಡಾಡತೊಡಗಿದ್ದಾರೆ. ಈ ಪರಿಯ ತೀವ್ರತೆಯಲ್ಲಿ ಸಂಕೀರ್ಣ ವಿವರವನ್ನು ದಟ್ಟವಾಗಿ ಕಟ್ಟಿಕೊಡಲಾಗಿದೆ.

ಹತ್ಯೆಗೀಡಾದ ಇಬ್ಬರು ಬಾಲಕಿಯರ ಜೊತೆಗಿದ್ದು ನಾಪತ್ತೆಯಾದ ಮತ್ತೊಬ್ಬ ಬಾಲಕಿಯ ಹುಡುಕಾಟ ನಡೆದಿದೆ. ಕೊಳೆತು ವಾಸನೆ ಬರುತ್ತರುವ ಕೆಸರಿನ ಬಹು ವಿಶಾಲ ಮಡುವಿನಲ್ಲಿ ಪೊಲೀಸರು ಹುಡುಕುತ್ತಾ ನಡೆದಿದ್ದಾರೆ. ಯಾರು ಯಾರಿಗೆ ಮತ ಹಾಕಿದಿರಿ ಎಂಬ ಪ್ರಶ್ನೆ ಅವರಲ್ಲೇ ಮೂಡುತ್ತದೆ. ಆನೆಗೆ, ಸೈಕಲಿಗೆ, ಹೂವಿಗೆ (ಕಮಲಕ್ಕೆ), ಆನೆ, ಕಮಲ ಜೊತೆಯಾದಾಗ ಯಾರಿಗೆ ಸೈಕಲಿಗೆ ಎಂಬ ಉತ್ತರಗಳು ಬರುತ್ತವೆ. ರಾಜಕೀಯ ಪಕ್ಷಗಳ ಸಮೀಕರಣದ ಸಂದರ್ಭದಲ್ಲಿ ಮತದಾರ ಹೇಗೆಲ್ಲ ವಿವೇಚಿಸಬಹುದು ಎಂಬ ಸಂಗತಿಗಳನ್ನು ಕೂಡ “ಆರ್ಟಿಕಲ್ 15” ಚರ್ಚಿಸುತ್ತದೆ.

ತನಿಖೆ ಏನಾಗುತ್ತದೆ, ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆಯೇ, ಜಾತಿ ಸಂಕೀರ್ಣತೆ, ಚಕ್ರವ್ಯೂಹದೊಳಗೆ ಸಿಲುಕಿದ ಪೊಲೀಸ್ ಅಧಿಕಾರಿ ಸ್ಥಿತಿಯೇನು ಎಂಬ ವಿವರಗಳನ್ನು ನಾನಿಲ್ಲಿ ಹೇಳಲು ಹೋಗುವುದಿಲ್ಲ. ಅದು ಚಿತ್ರವನ್ನು ನೋಡಬೇಕೆನ್ನುವ ಕುತೂಹಲವನ್ನು ಕಡಿಮೆ ಮಾಡಬಹುದು. ಇದು ನೋಡಲೇ ಬೇಕಾದ ಸಿನೆಮಾ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೀಗೆ ಮಾಡಿದ್ದೇನೆ.

ಭಾರತವನ್ನು ನಿರಂತರವಾಗಿ ಕಾಡುತ್ತಲೇ ಬಂದ ಸಂಕೀರ್ಣ ಸಮಸ್ಯೆಗಳನ್ನು ಗೋಜಲಿಲ್ಲದೇ ಹೇಳುವುದು ಸವಾಲಿನ ಕೆಲಸ. ಇದನ್ನು ಸ್ವೀಕರಿಸುವ ನಿರ್ದೇಶಕ ಅನುಭವ್ ಸಿನ್ಹಾ ಬಹು ಪರಿಣಾಮಕಾರಿ ಸಿನೆಮಾವೊಂದನ್ನು ನಮ್ಮ ಮುಂದಿಟ್ಟಿದ್ದಾರೆ. ಇವರ ಕಾರ್ಯ ಯಶಸ್ವಿಯಾಗಲು ಇವರು ಮತ್ತು ಗೌರವ್ ಸೋಲ್ಹಂಕಿ ರಚಿಸುವ ಸಮರ್ಥ ಸ್ಕ್ರಿಪ್ಟ್ ಸಹಕಾರಿಯಾಗಿದೆ. ಚಿತ್ರದ ಇತರ ತಾಂತ್ರಿಕ ವರ್ಗದ ಸಹಕಾರದ ಕೆಮಿಸ್ಟ್ರಿಯೂ ಉತ್ತಮವಾಗಿ ವರ್ಕ್ ಆಗಿದೆ. ಛಾಯಾಗ್ರಾಹಣ ಮಾಡಿರುವ ಇವಾನ್ ಮುಲ್ಲಿಗನ್, ಸಂಕಲನದ ಜವಾಬ್ದಾರಿ ಹೊತ್ತ ಯಶ ರಾಮಚಂದ್ರನಿ, ಸಂಗೀತ ನೀಡಿರುವ ಅನುರಾಗ್ ಸೈಕಿಯಾ ಕಾರ್ಯ ಅನನ್ಯ. ಇಂಥದ್ದೊಂದು ಅಪರೂಪದ ಸಿನೆಮಾ ನಿರ್ಮಾಣ ಮಾಡಿದ ಹೆಗ್ಗಳಿಕೆಯೂ ಅನುಭವ್ ಸಿನ್ಹಾ ಮತ್ತು ಜಿ ಸ್ಟುಡಿಯೋಗೆ ಸಲ್ಲುತ್ತದೆ.

ಆಯುಷ್ಮಾನ್ ಖುರಾನ (ಯುವ ಪೊಲೀಸ್ ಅಧಿಕಾರಿ ಅಯಾನ್) ಸಯ್ಯಾನಿ ಗುಪ್ತಾ (ದಲಿತ ಯುವತಿ ಗೌರ) ಕುಮುದ್ ಮಿಶ್ರಾ (ಸಬ್ ಇನ್ಸ್ಪೆಕ್ಟರ್) ಮನೋಜ್ ಪ್ಹಾವಾ ( ಸರ್ಕಲ್ ಇನ್ಸ್ಪೆಕ್ಟರ್ ಬಹ್ಮದತ್ತ) ಮಹಮ್ಮದ್ ಜಿಶಾನ್ ಆಯೂಬ್ (ದಲಿತ ನಾಯಕ ನಿಷಾದ್) ನಾಸೀರ್ (ದೆಹಲಿಯಿಂದ ಬರುವ ಕೇಂದ್ರ ತನಿಖಾ ತಂಡದ ಮುಖ್ಯಸ್ಥ), ರಂಜಿನಿ ಚಕ್ರವರ್ತಿ (ಪೋಸ್ಟ್ ಮಾರ್ಟಂ ಮಾಡುವ ವೈದ್ಯೆ) ಇಶಾ ತಲ್ವಾರ್ (ಆದಿತಿ) ಸೇರಿದಂತೆ ಸಿನೆಮಾದಲ್ಲಿ ಇರುವ ಎಲ್ಲ ಕಲಾವಿದರೂ ಸಮರ್ಥವಾಗಿ ನಟಿಸಿದ್ದಾರೆ.

ಅಂದಹಾಗೆ ಸಂವಿಧಾನದ ಆರ್ಟಿಕಲ್ 15; ತಾರತಮ್ಯಗಳಿಲ್ಲದ, ಲಿಂಗಭೇದವಿಲ್ಲದ, ಎಲ್ಲರೂ ಸಮಾನವಾಗಿ ಗೌರವಿಸಲ್ಪಡಬೇಕಾದ ಅಂಶಗಳ ಬಗ್ಗೆ ಹೇಳುತ್ತದೆ. ಡಾ. ಬಿ.ಆರ್ . ಅಂಬೇಡ್ಕರ್ ಅವರ ಮಹತ್ತರ ಆಶಯವಿದು. ಅವರ ಆಶಯ ಆಶಯವಾಗದೇ ಉಳಿದಿದೆ. ಸಂವಿಧಾನದ ಆಶಯಗಳನ್ನು ಜನರ ನಡುವೆ ಕಾರ್ಯಗತಗೊಳಿಸುವಲ್ಲಿ ಬಹು ಪ್ರಮುಖ ಪಾತ್ರ ವಹಿಸಬೇಕಾದ ಪೊಲೀಸ್ ಠಾಣೆ ನೋಟಿಸ್ ಬೋರ್ಡಿಗೆ “ಆರ್ಟಿಕಲ್ 15” ತೂಗಹಾಕಬೇಕಾದ ದುಸ್ಥಿತಿಯಿದೆ. ಇದೊಂದು ದೊಡ್ಡ ವಿಪರ್ಯಾಸ ಎಂಬುದರತ್ತವೂ ಚಿತ್ರ ಗಮನ ಸೆಳೆಯುತ್ತದೆ.

ದಲಿತ ಸಮುದಾಯಗಳ ಯುವ ನಾಯಕ ನಿಷಾದ್ “ಆಗ ಹರಿಜನ, ಈಗ ಬಹುಜನ, ಆದರೆ ಎಂದಿಗೂ ನಾವು ಜನವಾಗಲೇ ಇಲ್ಲ” ಎನ್ನುತ್ತಾನೆ. ಹೌದಲ್ಲವೆ… ಅವರು ದಲಿತರಲ್ಲ, ಮನುಷ್ಯರು ಎಂದು ಭಾರತೀಯ ಸಮಾಜದ ಹೆಚ್ಚಿನಾಂಶ ಯೋಚಿಸುತ್ತಲೇ ಇಲ್ಲವೇ ಎಂಬ ತಲ್ಲಣ ದಿಗ್ಗನೆ ಆವರಿಸಿಕೊಳ್ಳುತ್ತದೆ. ಬಹುಕಾಲ ಕಾಡುತ್ತಲೇ ಇರುವ ಚೌಕಟ್ಟಿನಾಚೆಯ ಚಿತ್ರವಿದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...