Homeಮುಖಪುಟವ್ಯಕ್ತಿತ್ವವಿಕಸನ 3: ನಿಮ್ಮ ವ್ಯಕ್ತಿತ್ವಕ್ಕೂ, ನೀವು ಮಾಡುತ್ತಿರುವ ಕೆಲಸಕ್ಕೂ ಏನಾದರೂ ಸಂಬಂಧವಿದೆಯೇ?

ವ್ಯಕ್ತಿತ್ವವಿಕಸನ 3: ನಿಮ್ಮ ವ್ಯಕ್ತಿತ್ವಕ್ಕೂ, ನೀವು ಮಾಡುತ್ತಿರುವ ಕೆಲಸಕ್ಕೂ ಏನಾದರೂ ಸಂಬಂಧವಿದೆಯೇ?

ಸದಾ ಮಾತು ಬಯಸುವ ಅಥವಾ ಸೃಜಾನತ್ಮಕ ವ್ಯಕ್ತಿಯನ್ನು ಕಚೇರಿಯ ಹಿಂಬಾಗದಲ್ಲಿರುವ ದಾಖಲೆ ವಿಭಾಗದಲ್ಲಿ, ನಿರ್ಜೀವ ದಾಖಲೆಗಳೊಂದಿಗೆ ಸೆಣಸಾಡಲು ಬಿಟ್ಟರೆ ಏನಾಗಬಹುದು ಯೋಚಿಸಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ – 4

ವ್ಯಕ್ತಿತ್ವವಿಕಸನ 3 –ಹಾಲೆಂಡ್ ವೃತ್ತಿಪರ ಸೂಚ್ಯಾಂಕ ಅಥವಾ ರಿಯಸೆಕ್ ಸಂಕೇತ (RIASEC Code)

1958-59ರಲ್ಲಿ ಅಮೇರಿಕದ ಜರ್ನಲ್ ಆಫ್ ಕೌನ್ಸೆಲ್ಲಿಂಗ್ ಸೈಕಾಲಜಿಯಲ್ಲಿ ಪ್ರಕಟಿತಗೊಂಡ ಜಾನ್ ಎನ್. ಹಾಲಂಡ್ ಅವರ ಪ್ರಬಂಧವನ್ನು ಆಧರಿಸಿರುವ ರಿಯಸೆಕ್ ಕೋಡ್ ಜನರವೃತ್ತಿಪರ ಜೀವನದ ಆಯ್ಕೆಗೆ ಅತ್ಯಂತ ಸಹಕಾರಿಯಾಗಿದೆ. ಇದರಲ್ಲಿ ವ್ಯಕ್ತಿತ್ವಕ್ಕೂ, ವೃತ್ತಿಗೂ ಇರುವ ಸಂಬಂಧವನ್ನು ವಿವರಿಸಲಾಗಿದೆ.

ಈ ಸಂಕೇತದ ಪ್ರಕಾರ ವೃತ್ತಿ/ಕೆಲಸಗಳನ್ನು ಮತ್ತು ಕೆಲಸಗಾರರನ್ನು ಮುಖ್ಯವಾಗಿ ಆರು ವಿಧವಾಗಿ ಕೆಳಕಂಡಂತೆ ವಿಂಗಡಿಸಲಾಗಿದೆ:

1. ರಿಯಲಿಸ್ಟಿಕ್ – (ವಾಸ್ತವಿಕ) – R

2. ಇವ್ನೆಸ್ಟಿಗೇಟಿವ್ – (ತನಿಖಾ) – I

3. ಆರ್ಟಿಸ್ಟಿಕ್ (ಕಲಾತ್ಮಕ) – A

4. ಸೋಷಿಯಲ್ (ಸಾಮಾಜಿಕ) – S

5. ಎಂಟರ್ಪ್ರೈಸಿಂಗ್ (ಧೈರ್ಯಶಾಲಿ) – E

6. ಕನ್ವೆನ್ಷನಲ್ (ಸಾಂಪ್ರದಾಯಿಕ)– C

ಕೆಲಸಕ್ಕೂ ಕೆಲಸಗಾರರನ ವ್ಯಕ್ತಿತ್ವಕ್ಕೂ ಪರಸ್ಪರ ಹೊಂದಾಣಿಕೆ ಆದಲ್ಲಿ ಅವರು ಸಂತುಷ್ಟರಾಗಿ ಕೆಲಸಮಾಡುತ್ತಾರೆ ಹಾಗೂ ಒಂದೇ ವಿಧವಾದ ಕೆಲಸಗಾರರು ಒಂದೆಡೆ ಒಟ್ಟಾಗಿ ಕೆಲಸ ಮಾಡುವುದರಿಂದ ಸ್ಥಳದಲ್ಲಿ ಒಂದೇ ಸಮನಾದ ಕ್ರಿಯಾವಾತಾವರಣ ಸೃಷ್ಟಿಯಾಗುತ್ತದೆ ಎಂಬದು ಈ ತತ್ವವಾದದ ಸಾರಾಂಶ. ಜನರೂ ಸಹ ತಮ್ಮ ಕೆಲಸದಲ್ಲಿ ಅಂತಹ ವಾತಾವರಣ ಹುಡುಕುತ್ತಿರುತ್ತಾರೆ.

ವೃತ್ತಿ/ಕೆಲಸಗಳು ಏಕತಾನತೆಯಿಂದ ಕೂಡಿದ್ದರೂ ಸಹ, ವ್ಯಕ್ತಿಗಳು ಕೇವಲ ಒಂದು ಗುಂಪಿಗೆ ಮಾತ್ರ ಸೇರಿರದೆ, ಎಡ-ಬಲದ ಇನ್ನೂ ಒಂದೋ ಎರಡೋ ಗುಂಪಿಗೂ ಭಾಗಶಃ ಸೇರಿರುತ್ತಾರೆ. ಹಾಗಾಗಿ, ಅವರು ಆ ಗುಂಪಿನ ವೃತ್ತಿ/ಕೆಲಸಕ್ಕೂ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಮೇಲಿನ ಚಿತ್ರದಲ್ಲಿ ರಿಯಾಸೆಕ್ ಷಟ್ಕೋನದ ಪರಸ್ಪರ ವಿರುದ್ಧ ದಿಕ್ಕುಗಳು ವ್ಯತಿರಿಕ್ತವೇ ಆಗಿರುವುದರಿಂದ ಆ ಎರಡು ಗುಂಪಿಗೂ ಸರಿಹೊಂದಿಕೊಳ್ಳುವ ಜನರು ವಿರಳ ಆದರೆ ಅಸಾಧ್ಯವಲ್ಲ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ನಂತರ ಬ್ಯಾಂಕಿನಲ್ಲಿ ಕಾರಕೂನ ನೌಕರಿಗೆ ಸೇರಿ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನಿವೃತ್ತಿ ಹೊಂದಿರುವ ವ್ಯಕ್ತಿಗಳಿಗೇನೂ ಕೊರತೆ ಇಲ್ಲ.

ರಿಯಲಿಸ್ಟಿಕ್  (ವಾಸ್ತವಿಕ)

ಇವರು ತಮ್ಮ ಸ್ವಂತ ಕೈಗಳಿಂದ, ಯಂತ್ರಗಳೊಂದಿಗೆ, ವಿವಿಧ ಉಪಕರಣಗಳೊಂದಿಗೆ, ಹಾಕಿದ ಯೋಜನೆಯೊಂದಿಗೆ, ಗಿಡ-ಮರ, ಪಶು-ಪಕ್ಷಿಗಳೊಂದಿಗೆ, ಪ್ರತ್ಯಕ್ಷವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇವರಿಗೆ ಸಾಮಾಜಿಕ ಚಟುವಟಿಕೆ ಇಷ್ಟವಿರುವುದಿಲ್ಲ. ಹಾಗಾಗಿ ಇಂತಹ ವ್ಯಕ್ತಿಗಳು ಶಿಕ್ಷಣ/ವೈದ್ಯಕೀಯ/ಮಾಹಿತಿ ಪ್ರಸಾರ ವೃತ್ತಿಯನ್ನು ಇಷ್ಟಪಡುವುದಿಲ್ಲ.

ಇನ್ವೆಸ್ಟಿಗೇಟಿವ್ (ತನಿಖಾ)

ಇವರು ಬುದ್ಧಿಜೀವಿಗಳು, ಇವರಿಗೆ ವಿಜ್ಞಾನ, ಗಣಿತ ವಿಷಯಗಳು ಇಷ್ಟವಾಗಿದ್ದು, ಸಮಸ್ಯೆಗಳನ್ನು ಅರಿತು ಪರಿಹಾರ ಹುಡುಕುವುದರಲ್ಲಿ ನಿಸ್ಸೀಮರು. ಇವರಿಗೆ ಎಲ್ಲವೂ ತಾಳೆಯಾಗಬೇಕು. ಮಾರಾಟಮಾಡುವ, ಜನರನ್ನು ಹುರಿದುಂಬಿಸುವ/ದುಂಬಾಲು ಬೀಳುವ ಅಥವಾ ನಾಯಕತ್ವದ ಕೆಲಸ ಇವರಿಗೆ ಸರಿಹೊಂದುವುದಿಲ್ಲ.

ಅರ್ಟಿಸ್ಟಿಕ್ (ಕಲಾತ್ಮಕ)

ಇವರು ಸೃಜನಾತ್ಮಕರು, ಕಲೆ, ನಾಟಕ, ಕರಕುಶಲತೆ, ಸಂಗೀತ, ನೃತ್ಯ, ರಚನಾತ್ಮಕ ಲೇಖಕರು. ಇವರಿಗೆ ಒಂದು ಚೌಕಟ್ಟಿನಲ್ಲಿ ಕೂಡುವ ಅಥವಾ ಯಾಂತ್ರಿಕ ಕೆಲಸ ಸರಿಹೊಂದುವುದಿಲ್ಲ. ತಮ್ಮನ್ನು ತಾವು ಸ್ವತಂತ್ರ, ಮೂಲಭೂತ ಯೋಚನೆ/ಭಾವನೆ ಹೊರಸೂಸುವವರೆಂದು ಪರಿಗಣಿಸುತ್ತಾರೆ.

ಸೋಷಿಯಲ್ (ಸಾಮಾಜಿಕ)

ಇವರಿಗೆ ಬೇರೆಯವರಿಗೆ ಸಹಾಯ ಮಾಡುವ ಕೆಲಸ – ಶಿಕ್ಷಣ, ವೈದ್ಯಕೀಯ, ನರ್ಸಿಂಗ್, ಮಾಹಿತಿ/ಸಲಹೆ ನೀಡುವ, ಸಾಮಾಜಿಕ ಸಮಸ್ಯೆ ಪರಿಹರಿಸುವ ಕೆಲಸ ಇಷ್ಟ. ಯಾಂತ್ರಿಕ ಕೆಲಸ, ಉಪಕರಣಗಳ ಬಳಕೆ, ಗಿಡ-ಮರ, ಪಶು-ಪಕ್ಷಿಗಳೊಂದಿಗೆ ಕೆಲಸ ಇಷ್ಟಪಡುವುದಿಲ್ಲ. ತಮ್ಮನ್ನು ತಾವು ನೆರವಾಗುವ, ಸ್ನೇಹಪರ, ನಂಬಿಕಸ್ಥ ವ್ಯಕ್ತಿ ಎಂದು ಪರಿಗಣಿಸುತ್ತಾರೆ.

ಎಂಟರ್ಪ್ರೈಸಿಂಗ್ (ಧೈರ್ಯಶಾಲಿ)

ಇವರಿಗೆ ನಾಯಕತ್ವ, ಇತರರನ್ನು ಹುರಿದುಂಬಿಸುವ ಕೆಲಸ, ವಸ್ತು/ವಿಚಾರವನ್ನು ಮಾರಾಟ ಮಾಡುವ ಕೆಲಸ ಇಷ್ಟ. ರಾಜಕೀಯ, ವಾಣಿಜ್ಯ, ಇತರ ನಾಯಕತ್ವದ ಬಗ್ಗೆ ಒಲವು ತೋರುತ್ತಾರೆ. ಇವರಿಗೆ ಗಮನವಿಟ್ಟು ಮಾಡುವ ಕೆಲಸ, ವಿಮರ್ಶಾತ್ಮಕ ಯೋಚನೆ/ವೈಜ್ಞಾನಿಕ ಚಿಂತನೆ ಸರಿದೋರುವುದಿಲ್ಲ. ತಮ್ಮನ್ನು ತಾವು ಪ್ರಬಲ ಪ್ರವೃತ್ತಿಯ, ಆಕಾಂಕ್ಷೆಯುಳ್ಳ ಮತ್ತು ಸಾಮಾಜಿಕ ವ್ಯಕ್ತಿ ಎಂದು ಪರಿಗಣಿಸುತ್ತಾರೆ.

ಕನ್ವೆನ್ಷನಲ್ (ಸಾಂಪ್ರದಾಯಿಕ)

ಇವರು ಸಾಧಾರಣ ಗುಂಪಿಗೆ ಸೇರಿದವರು, ಮಹತ್ವಾಕಾಂಕ್ಷಿಗಳಲ್ಲ. ಸಂಖ್ಯೆಗಳ, ದಾಖಲೆಗಳ ಒಡನಾಟ ಇಷ್ಟ, ಅಸ್ಪಷ್ಟ, ಅವ್ಯವಸ್ಥಿತ ವಸ್ತುವಿಷಯಗಳು ಇವರಿಗೆ ಸರಿಹೊಂದುವುದಿಲ್ಲ. ವ್ಯಾಪಾರದಲ್ಲಿ ಸಫಲತೆಯನ್ನು ಬಯಸಿದರೂ, ಹಾಕಿದ ಗೆರೆ ದಾಟುವುದಿಲ್ಲ. ತಮ್ಮನ್ನು ತಾವು ವ್ಯವಸ್ಥಿತ ಮತ್ತು ವ್ಯವಸ್ಥೆಗೆ ಹೊಂದಿಕೊಳ್ಳುವ ವ್ಯಕ್ತಿ ಎಂದು ಪರಿಗಣಿಸುತ್ತಾರೆ.

ವಾಸ್ತವಿಕ ಗುಂಪಿನ ವ್ಯಕ್ತಿತ್ವವುಳ್ಳವರಿಗೆ ತಮ್ಮ ಗುಂಪಿಗೆ ಸರಿಹೊಂದುವಂತಹ ವೃತ್ತಿಗಳು ಸಮರ್ಪಕವಾಗಿದ್ದರೂ ಸಹ ಅವರು ತನಿಖಾ ಮತ್ತು ಸಾಂಪ್ರದಾಯಿಕ ಗುಂಪಿನ ಕೆಲಸಗಳಿಗೂ ಸಹ ಸರಿಹೊಂದಿಕೊಳ್ಳುತ್ತಾರೆ. ಅದೇ ರೀತಿ ಧೈರ್ಯಶಾಲಿಗಳು ಸಾಮಾಜಿಕ ಮತ್ತು ಸಾಂಪ್ರದಾಯಿಕ ಕೆಲಸಗಳನ್ನೂ ಸಹ ಒಪ್ಪಿಕೊಳ್ಳುತ್ತಾರೆ.

ಮೇಲಿನವು ವ್ಯಕ್ತಿಗಳ ಬಗ್ಗೆ ವ್ಯಾಖ್ಯಾನವಾದರೆ, ವೃತ್ತಿಗಳನ್ನು ಆರಿಸಿಕೊಳ್ಳುವಾಗ ವ್ಯಕ್ತಿತ್ವ ಮತ್ತು ವೃತ್ತಿ ಪರಸ್ಪರ ಹೊಂದಾಣಿಕೆಯಾಗುವಂತೆ ಜಾಗರೂಕತೆ ವಹಿಸಬೇಕು. ಉದಾ: ಸಮಾಜಿಕ ವ್ಯಕ್ತಿತ್ವವಿಲ್ಲದ, ಜನಸಂಪರ್ಕ ಅಷ್ಟಾಗಿ ಬಯಸದ ವ್ಯಕ್ತಿಯನ್ನು ಕಂಪನಿಯ ಸ್ವಾಗತಕಾರರ ಹುದ್ದೆಗೆ ನೇಮಿಸಿದರೆ ಆ ವ್ಯಕ್ತಿಯ ಮಾನಸಿಕತೆ ಹೇಗೆ ಆತಂಕಕ್ಕೆ ಸಿಲುಕಬಹುದು ಮತ್ತು ಕಂಪನಿಯ ಕೆಲಸ ಹೇಗೆ ಕೆಡಬಹುದು ಯೋಚಿಸಿ. ಅದೇ ರೀತಿ, ಸದಾ ಮಾತು ಬಯಸುವ ಅಥವಾ ಸೃಜಾನತ್ಮಕ ವ್ಯಕ್ತಿಯನ್ನು ಕಚೇರಿಯ ಹಿಂಬಾಗದಲ್ಲಿರುವ ದಾಖಲೆ ವಿಭಾಗದಲ್ಲಿ, ನಿರ್ಜೀವ ದಾಖಲೆಗಳೊಂದಿಗೆ ಸೆಣಸಾಡಲು ಬಿಟ್ಟರೆ ಏನಾಗಬಹುದು ಯೋಚಿಸಿ.

ಇದನ್ನು ಓದಿ: ನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

ಆದರೆ ವ್ಯತಿರಿಕ್ತ ಸನ್ನಿವೇಶದಲ್ಲಿ ಸಿಲುಕಿಕೊಂಡ ವ್ಯಕ್ತಿಗಳು ತೀರಾ ಆತಂಕಕ್ಕೆ ಒಳಗಾಗಬೇಕಿಲ್ಲ, ಏಕೆಂದರೆ ಅವರು ತಮ್ಮ ವೃತ್ತಿಯ ಎಲ್ಲಾ ಆತಂಕಗಳನ್ನು ಕಚೇರಿಯಲ್ಲಿ ಮರೆತು, ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವ ಹವ್ಯಾಸವೊಂದನ್ನು ಬೆಳೆಸಿಕೊಳ್ಳಬಹುದು. ಎಷ್ಟೋ ಸಾಮಾಜಿಕ ಪ್ರವೃತ್ತಿಯವರಲ್ಲದ ಅಭಿಯಂತರು/ವೈದ್ಯರು ಸಂಗೀತವನ್ನು ಹವ್ಯಾಸವಾಗಿ ಬೆಳೆಸಿಕೊಂಡು ನಂತರ ಸಾಮಾಜಿಕ ವ್ಯಕ್ತಿಯಾಗಿರುವುದನ್ನು ನಾವು ಕಾಣಬಹುದು. ಅದೇ ರೀತಿಯಲ್ಲಿ ಯಾಂತ್ರಿಕ ಕೆಲಸ ಪರಿಣಿತರು ಮುಂದೆ ತರಬೇತುದಾರರಾಗಿ ಮಕ್ಕಳಿಗೆ ಮಾರ್ಗದರ್ಶನ/ಸಲಹೆಗಾರರಾಗಿ ಕೆಲಸ ಮಾಡಿರುವ ಉದಾಹರಣೆಗಳೂ ಇವೆ. ದೌರ್ಬಲ್ಯ ಎಂದೆನಿಸುವುದನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸ್ವಲ್ಪ ಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ.

ನಿಮಗೂ ಉಚಿತ ಆನ್-ಲೈನ್ ರಿಯಸೆಕ್ ಸಂಕೇತ ಪರೀಕ್ಷೆ ತೆಗೆದುಕೊಳ್ಳಬೇಕೆನಿಸಿದಲ್ಲಿ ಈ ಲಿಂಕ್ ಕ್ಲಿಕ್ಕಿಸಿ

ಈಗಲೂ ಅವಕಾಶವಿದ್ದಲ್ಲಿ ನಿಮ್ಮ ವೃತ್ತಿ ಬದಲಾಯಿಸಿಕೊಂಡು ಹೊಸ ಕೆಲಸದಲ್ಲಿ ಅಥವಾ ಹವ್ಯಾಸ ರೂಢಿಸಿಕೊಂಡು ಈಗಿರುವಲ್ಲಿ ಸಂತುಷ್ಟರಾಗಿರಿ.

ಲೇಖಕರ ಪರಿಚಯ

ಜಿ.ಆರ್ ವಿದ್ಯಾರಣ್ಯ ಅವರು ಶ್ರೀಮತಿ ಶಾಂತ ಮತ್ತು ದಿ. ಜಿ.ವಿ.ರಂಗಸ್ವಾಮಿಯವರ ಜ್ಯೇಷ್ಠ ಪುತ್ರರಾಗಿ 1951ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಜನಿಸಿ, ದೂರದ ಮುಂಬಯಿ ನಗರದಲ್ಲಿ ಬೆಳೆದವರು. ಶಾಲಾ ಕಾಲೇಜು ಶಿಕ್ಷಣ ಮುಂಬಯಿಯಲ್ಲಿ ನಡೆಯಿತು. ತಮ್ಮ 18ನೆಯ ವಯಸ್ಸಿನಲ್ಲಿ, 1969ರಲ್ಲಿ ಐ.ಬಿ.ಎಂ. 1401 ಆಟೋಕೋಡರ್ ಕಂಪ್ಯೂಟರ್ ಪ್ರೊಗ್ರಾಮಿಂಗ್ ಡಿಪ್ಲೊಮಾ ಪಡೆದ ನಂತರ, ಕೆಲಸ ಸಿಗದೆ, ಮರೀನ್ ಕಮ್ಯುನಿಕೇಷನ್ ಕ್ಲಾಸ್ 1 ಲೈಸೆನ್ಸ್ ಪಡೆದು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಜೊತೆಗೆ ಇಂಗ್ಲೆಂಡಿನ ಲಿವರ್ಪೂಲ್ ನಗರದ ರಿವರ್ಸ್ಡೇಲ್ ಕಾಲೇಜಿನಲ್ಲಿ ಓದಿ, ಮರೀನ್ ರೇಡಾರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಕಂಪ್ಯೂಟರ್ ಆಸಕ್ತಿ ಮುಂದುವರೆಸಿ, ಮೈಕ್ರೋಸಾಫ್ಟ್ ಕಂಪನಿಯ ಸಿಸ್ಟಮ್ ಇಂಜಿನಿಯರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಮುಂತಾದ ಡಿಪ್ಲೊಮಾಗಳನ್ನೂ ಪಡೆದಿದ್ದಾರೆ. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ.

ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ, ತಮ್ಮ ಕೈಯಲ್ಲಾದ ಸಮಾಜ ಸೇವೆ ಮಾಡುತ್ತಿದ್ದಾರೆ. ಹಲವಾರು ಎನ್.ಜಿ.ಒ. ಗಳೊಂದಿಗೆ ಸುಮಾರು 75 ಶಾಲೆಗಳಲ್ಲಿ ಮತ್ತು 15 ಕಾಲೇಜುಗಳಲ್ಲಿ ಮಕ್ಕಳಿಗೆ ಪೌರಪ್ರಜ್ಞೆಯ ಪಾಠ ಹೇಳಿಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ಜಿಲ್ಲಾ ಮಟ್ಟದ ತರಬೇತುದಾರರಾಗಿ, ಅರ್.ಟಿ.ಐ. ಇಂಡಿಯಾ ಜಾಲತಾಣದಲ್ಲಿ ಕಮ್ಯುನಿಟಿ ಬಿಲ್ಡರ್ ಆಗಿ, ಜನರಿಗೆ ಉಚಿತ ಮಾರ್ಗದರ್ಶನ ಮಾಡುತ್ತಿದ್ದಾರೆ. ಮೈಸೂರಿನ ಕೊಳಗೇರಿಗಳಲ್ಲಿ ಬಡ ಮಕ್ಕಳಿಗೆ, ಎನ್.ಜಿ.ಒ. ಜೊತೆ ಸೇರಿ, ಜೀವನಾವಶ್ಯಕ ಕಲೆಗಳ ಮತ್ತು ನಾಯಕತ್ವದ ತರಬೇತಿಯನ್ನೂ ನೀಡುತ್ತಿದ್ದಾರೆ. ಬರಹದಲ್ಲಿ ತಮ್ಮ ಆಸಕ್ತಿಯಿಂದ ಮೈಸೂರಿನ ರೋಟರಿ ವೆಸ್ಟ್ ಕ್ಲಬ್ಬಿನ ಬೃಂದಾವನ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ/ಜಾಲತಾಣಗಳಲ್ಲಿ ಲೇಖನ ಪ್ರಕಟಿಸಿದ್ದಾರೆ. ಶ್ರೀಯುತರ ಪತ್ನಿ, ಶ್ರೀಮತಿ ಸ್ವರ್ಣಗೌರಿ, ನಿವೃತ್ತ ಶಾಲಾ ಶಿಕ್ಷಕಿ. ಇಬ್ಬರು ಪುತ್ರಿಯರು ವಿದೇಶದಲ್ಲಿ ನೆಲೆಸಿದ್ದಾರೆ.

ಜಿ. ಆರ್. ವಿದ್ಯಾರಣ್ಯರವರು ನಾನುಗೌರಿ. ಕಾಂಗೆ ಜೀವನ ಕಲೆಗಳು, ವ್ಯಕ್ತಿತ್ವ ವಿಕಸನದ ಕುರಿತು ನಿರಂತರವಾಗಿ ಅಂಕಣ ಬರೆಯುತ್ತಿದ್ದಾರೆ. ಅವರ ಬೈಲೈನ್ ಮೇಲೆ ಮತ್ತು ವಿಶೇಷ ಬರಹಗಳು ಕಾಲಂನಲ್ಲಿ ಅವರ ಹಿಂದಿನ ಲೇಖನಗಳಿವೆ. ತಪ್ಪದೇ ಓದಿ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...