Homeಕರ್ನಾಟಕಆನಂದಸಿಂಗ್ ರಾಜಿನಾಮೆ ಬ್ಲ್ಯಾಕ್‍ಮೇಲ್ ತಂತ್ರವೋ? ಅಸಲಿ ಕಾರಣ ಇದಲ್ಲವೇ?

ಆನಂದಸಿಂಗ್ ರಾಜಿನಾಮೆ ಬ್ಲ್ಯಾಕ್‍ಮೇಲ್ ತಂತ್ರವೋ? ಅಸಲಿ ಕಾರಣ ಇದಲ್ಲವೇ?

ರಾಜ್ಯ ಸರ್ಕಾರದ ಹೊಸ ಮೈನಿಂಗ್ ಲೀಸ್ ನೀತಿಯ ಪ್ರಕಾರ ಫ್ಯಾಕ್ಟರಿ ಇರುವ ಕಂಪನಿಗಳಿಗೆ ಮಾತ್ರ ಲೀಸ್ ನೀಡಲಾಗುವುದು ಎಂಬ ನಿಯಮವಿದೆ ಎನ್ನಲಾಗಿದೆ. ಹೀಗಾದರೆ ಆನಂದಸಿಂಗ್, ಲಾಡ್ ಮುಂತಾದವರಿಗೆ ಹೊಸ ಲೀಸ್ ಸಿಗುವುದು ಅಸಾಧ್ಯ.

- Advertisement -
- Advertisement -

| ಮಲ್ಲನಗೌಡರ್ |

ಇವತ್ತು ಮುಂಜಾನೆಯಿಂದ ಸರ್ಕಾರ ಬೀಳುವ/ ಬೀಳಿಸುವ ಆಟ ಹೊರನೋಟಕ್ಕೆ ಐಪಿಎಲ್ ಮ್ಯಾಚಿನ ಖದರು ಕಳೆಗಟ್ಟಿಕೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕದಲ್ಲಿರುವಾಗ ದಿಢೀರನೆ ರಾಜಿನಾಮೆಯ ಕರಿಮೋಡಗಳು ಕಾಣತೋಡಗಿದ್ದು ಇವು ಮಳೆ ಸುರಿಸುತ್ತವಾ ಅಥವಾ ಎಂದಿನಂತೆ ಹಾಗೆ ಬಂದಂತೆ ಹೀಗೆ ತೇಲಿ ಹೋಗುತ್ತವಾ ಎಂಬ ಪ್ರಶ್ನೆ ಎದ್ದಿದೆ.

ಈ ರಾಜಿನಾಮೆ ಕ್ಲೈಮೇಟಿನಲ್ಲಿ ಎದ್ದು ಹೊಡೆಯುತ್ತಿರುವುದು ಹೊಸಪೇಟೆಯ ಶಾಸಕ ಆಂದ್‍ಸಿಂಗ್ ನಡವಳಿಕೆ. ಅವರೀಗ ಸ್ಪೀಕರ್ ಪಿ.ಎಸ್‍ಗೆ ರಾಜಿನಾಮೆ ಕೊಟ್ಟು ಮಾಧ್ಯಮಗಳ ಎದುರು ಅವರು ಸ್ಪೀಕರ್ ಹೆಸರಲ್ಲಿ ಬರೆದ ರಾಜಿನಾಮೆ ಪತ್ರವನ್ನು ಪ್ರದರ್ಶಿಸಿದ್ದಾರೆ. ಇದಕ್ಕೂ ಮೊದಲು ಅವರು ರಾಜಿನಾಮೆಯನ್ನು ರಾಜ್ಯಪಾಲರಿಗೆ ಕೊಟ್ಟಿದ್ದು ವಿಚಿತ್ರವೂ ಆಗಿತ್ತು, ಹಾಸ್ಯಾಸ್ಪದವೂ ಆಗಿತ್ತು. ಬಹುಷ ಅದು ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಕೆಲಸ ಮಾಡಿಸಿಕೊಳ್ಳುವ ತಂತ್ರವಾಗಿದೆ. ಜಿಂದಾಲ್ ಕಂಪನಿಗೂ ಆನಂದಸಿಂಗ್‍ರಿಗೂ ವ್ಯವಹಾರದ ಮಟ್ಟಿಗೆ ಸರಿಯಿಲ್ಲ.

ಜಿಂದಾಲ್‍ಗೆ ಭೂಮಿ ಮಾರಾಟ ಮಾಡಬಾರದು ಎಂದು ಬಹಿರಂಗವಾಗಿ ಹೇಳಿದ ಏಕೈಕ ಬಳ್ಳಾರಿ ಶಾಸಕ ಅವರು. ಹಿಂದೆಯೂ ಒಮ್ಮೆ ಅವರು ಹೊಸಪೇಟೆ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಇದ್ದಾಗ ಜಿಂದಾಲ್‍ಗೆ ನೀರು ಬಿಡಬಾರದು ಎಂದಿದ್ದರು.

ಈಗ ಜಿಂದಾಲ್‍ಗೆ ಭೂಮಿ ಮಾರಾಟ ವಿಷಯದ ಮರುಪರಿಶೀಲನೆ ಮಾಡಲು ರಚಿಸಿರುವ ಎಂಬಿ ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಮೇಲೆ ಒತ್ತಡ ಹೇರಲು, ಆ ಮೂಲಕ ಜಿಂದಾಲ್‍ಗೆ ಭೂಮಿ ಮಾರಾಟ ಆಗದಂತೆ ತಡೆಯುವ ಪ್ರಯತ್ನವನ್ನು ಆನಂದಸಿಂಗ್ ಮಾಡುತ್ತಿರುವ ಸಾಧ್ಯತೆ ಇದೆ. ತಮಗೆ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬೆಂಬಲವೂ ಇದೆ ಎಂದು ಆನಂದಸಿಂಗ್ ಹೇಳುತ್ತಿರುವುದು ಕುತೂಹಲಕರವಾಗಿದೆ. ಹೊಸಪೇಟೆ ಕೇಂದ್ರವಾಗಿಸಿ ವಿಜಯನಗರ ಹೊಸ ಜಿಲ್ಲೆ ರಚಿಸಬೇಕೆಂಬ ಬೇಡಿಕೆಗಾಗಿ ರಾಜಿನಾಮೆ ನಿಡುತ್ತಿರುವುದಾಗಿಯೂ ಆನಂದಸಿಂಗ್ ಹೇಳಲು ಶುರು ಮಾಡಿದ್ದಾರೆ.

ಇಲ್ಲಿ ಒಂದು ಸೂಕ್ಷ್ಮ ವಿಷಯವೂ ಇದೆ. ರಾಜ್ಯ ಸರ್ಕಾರದ ಹೊಸ ಮೈನಿಂಗ್ ಲೀಸ್ ನೀತಿಯ ಪ್ರಕಾರ ಫ್ಯಾಕ್ಟರಿ ಇರುವ ಕಂಪನಿಗಳಿಗೆ ಮಾತ್ರ ಲೀಸ್ ನೀಡಲಾಗುವುದು ಎಂಬ ನಿಯಮವಿದೆ ಎನ್ನಲಾಗಿದೆ. ಹೀಗಾದರೆ ಆನಂದಸಿಂಗ್, ಲಾಡ್ ಮುಂತಾದವರಿಗೆ ಹೊಸ ಲೀಸ್ ಸಿಗುವುದು ಅಸಾಧ್ಯ. ಹೊಸ ಲೀಸ್‍ಗಳೆಲ್ಲ ಜಿಂದಾಲ್ ಪಾಲಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಈ ಹೊಸ ನಿಯಮ ತಿದ್ದುಪಡಿ ಮಾಡಿ ಫ್ಯಾಕ್ಟರಿ ಇಲ್ಲದ ಮೈನಿಂಗ್ ಕಂಪನಿಗಳಿಗೂ ಲೀಸ್ ನೀಡುವ ಅವಕಾಶ ಮಾಡಿಕೊಡಿ ಎಂಬ ಒತ್ತಡ ಹೇರುವ ತಂತ್ರವಾಗಿಯೂ ಇದನ್ನು ನೋಡಬಹುದು.

ತಮ್ಮ ವೈಯಕ್ತಿಕ ಲಾಭಕ್ಕಾಗಿ ತಾವಿರುವ ಪಕ್ಷದ ಮೇಲೆ ಒತ್ತಡ ಹೇರಲು ಹಿಂದೆ ಇಂತಹ ಹಲವಾರು ಬ್ಲ್ಯಾಕ್‍ಮೇಲ್ ತಂತ್ರಗಳನ್ನು ಆನಂದಸಿಂಗ್ ಅನುಸರಿಸಿದ್ದಾರೆ. ಅವರು ಬಿಜೆಪಿ ಶಾಸಕರಾಗಿದ್ದಾಗ ಮಂತ್ರಿ ಪದವಿ ಪಡೆಯಲು ಒತ್ತಡ ಹೇರುವ ಸಲುವಾಗಿ ಹೊಸಪೇಟೆಯಲ್ಲಿ ಭವ್ಯವಾಗಿ ಟಿಪ್ಪು ಜಯಂತಿ ಆಚರಿಸಿದ್ದರು. ಕಾಂಗ್ರೆಸ್ ಶಾಸಕರಾದ ಮೇಲೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಲು ಒತ್ತಡ ಹೇರಲು ಹನುಮ ಮಾಲೆ ಜಯಂತಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ನಾಯಕರಲ್ಲಿ ದಿಗಿಲು ಮೂಡಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ರಮೇಶ ಜಾರಕಿಹೊಳಿ ಗುಂಪಿನೊಂದಿಗೆ ಮುಂಬೈ ಸುತ್ತಾಡಿ ಬಂದಿದ್ದ ಅವರು, ಬಹುಮತ ಸಾಬೀತುಪಡಿಸುವ ವೇಳೆಗೆ ಕಾಂಗ್ರೆಸ್ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್‍ನಲ್ಲಿ ಆಪರೇಷನ್ ಕಮಲ ವಿಫಲವಾದ ನಂತರ ರೆಸಾರ್ಟಿನಲ್ಲಿ ಗದ್ದಲ ಮಾಡಿಕೊಂಡು ಹಲ್ಲೆಗೊಳಗಾಗಿದ್ದರು.

ಇದಾದ ಮೇಲೆ ಅವರು ಸುದ್ದಿಯಾಗಿದ್ದು ಜಿಂದಾಲ್‍ಗೆ ಭೂಮಿ ಮಾರಾಟ ಮಾಡಬಾರದೆಂದು ಸರ್ಕಾರಕ್ಕೆ ಆಗ್ರಹಿಸುವ ಮೂಲಕ. ಹೊಸ ಮೈನಿಂಗ್ ನೀತಿಯಲ್ಲಿ ಮಾರ್ಪಾಟು ಮಾಡಿಸಲು ಈಗ ರಾಜಿನಾಮೆ ತಂತ್ರ ಹೂಡಿದ್ದಾರೋ ಅಥವಾ ಜಿಂದಾಲ್‍ಗೆ ಭೂಮಿ ಮಾರಾಟ ತಡೆಯಲು ಯತ್ನಿಸುವುದು, ಆಗದಿದ್ದರೆ ಆ ಕಡೆಯಿಂದ ‘ಫೇವರ್’ ಪಡೆಯುವ ಉದ್ದೇಶವೂ ಇದರ ಹಿಂದಿರಬಹುದೇ?

ಸುದ್ದಿ ಮಾಧ್ಯಮಗಳ ಪ್ರಕಾರ, ಸರ್ಕಾರ ಬೀಳುವುದು ಗ್ಯಾರಂಟಿ ಎಂಬ ಭಾವವನ್ನಂತೂ ಜನರಲ್ಲಿ ತೇಲಿ ಬಿಡಲಾಗಿದೆ. ಇದರ ಮೂಲ ಮಾತ್ರ ಆನಂದಸಿಂಗ್ ಹೊರಡಿಸಿದ ಗುಡುಗಿನ ಆರ್ಭಟವಷ್ಟೇ. ಹಿಂದಿನಂತೆ ಈ ಭಿನ್ನಮತ ಮಳೆ ಸುರಿಸದೇ ಹೋಗಬಹುದು. ರಾಷ್ಟ್ರೀಯ ಬಿಜೆಪಿಯಲ್ಲಿರುವ ಅಧಿಕಾರ ಮತ್ತು ಹಣಬಲದಿಂದ ಕೃತಕ ಮೋಡಬಿತ್ತನೆಯೂ ಆಗಿ ಮಳೆ ಸುರಿಸಲೂಬಹುದು. ಆಗಲೂ ಬಿತ್ತನೆಗೆ ಬೇಕಾದಷ್ಟು ಮಣ್ಣು ಹಸಿ (ಸರ್ಕಾರ ಕೆಡವಲು ಅಗತ್ಯವಾದ ಸಂಖ್ಯೆ) ಆಗುವುದೇ ಎಂಬ ಸಂಶಯ ಎಂದಿನಂತೆ ಇದ್ದೇ ಇದೆ,  ಅಧಿಕಾರದ ಆಟದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಕಾದು ನೋಡುವುದಷ್ಟೇ ರಾಜ್ಯದ ಜನರ ಕರ್ಮ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...