Homeಅಂಕಣಗಳುಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

ಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

- Advertisement -
- Advertisement -

| ಡಾ. ವಾಸು ಎಚ್.ವಿ |

‘ಮುಖ್ಯವಾಹಿನಿ’ ಮಾಧ್ಯಮಗಳ ಕೊಳಕುತನವನ್ನು ನೋಡಿ ಅಪಹಾಸ್ಯ ಮಾಡಿಕೊಂಡು ನಗುವುದು ಒಮ್ಮೊಮ್ಮೆ ಅಪಾಯಕಾರಿಯಾದುದು. ಏಕೆಂದರೆ ಇಂತಹ ಮಾಧ್ಯಮಗಳು ಜೀವವಿರೋಧಿಯಾಗಿದ್ದು ಪ್ರಜಾತಂತ್ರದ ಬುಡಕ್ಕೆ ಕೊಳ್ಳಿಯಿಡುತ್ತಿವೆ. ಆದರೆ ಅವನ್ನು ಬಯ್ದುಕೊಳ್ಳುತ್ತಾ, ಆತಂಕ ಪಡುತ್ತಾ, ವ್ಯಕ್ತಿಗತವಾಗಿ ಯಾರನ್ನೋ ಗುರಿ ಮಾಡುತ್ತಾ ಕಾಲವ್ಯಯ ಮಾಡುವುದು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಪರ್ಯಾಯದ ನಿರ್ಮಾಣ ಮಾತ್ರ ಈ ವಿಷವ್ಯೂಹದಿಂದ ನಮ್ಮೆಲ್ಲರನ್ನು ಮೇಲೆತ್ತಬಹುದು.

ಇದರಲ್ಲಿ ಒಂದು ತೊಡಕಿದೆ. ಪರ್ಯಾಯದ ಮಾತಾಡುವವರು ಸಮಾಜದ ಮುಖ್ಯವಾಹಿನಿಯಲ್ಲಿ ಅಂತಹ ದೊಡ್ಡ ಪರಿಣಾಮ ಬೀರದ, ಶುದ್ಧ ಮತ್ತು ರ್ಯಾಡಿಕಲ್ ಕಂಟೆಂಟ್ ಹೊಂದಿರುವ ಪುಟ್ಟ ಪ್ರಯತ್ನದ ಕಡೆಗೆ ಒತ್ತು ಕೊಡುತ್ತಾರೆ. ಮೊದಲೇ ಅಂಚಿನಲ್ಲಿರುವುದನ್ನು, ಪರ್ಯಾಯದ ಹೆಸರಿನಲ್ಲಿ ಅಂಚಿನಲ್ಲೇ ಉಳಿಸುವುದು ಪರ್ಯಾಯವಾಗಲಾರದು. ಮುಖ್ಯವಾಹಿನಿಯ ಘಾತುಕ ಗಾತ್ರವನ್ನು ಹಿಮ್ಮೆಟ್ಟಿಸಿ, ಅದೇ ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಳ್ಳುವ ಸೃಜನಶೀಲ ಮಾರ್ಗವನ್ನು ಶೋಧಿಸಿ, ಸಾಕಾರಗೊಳಿಸಿ ಜಯಿಸುವುದೇ ನಿಜವಾದ ಪರ್ಯಾಯ.

ಈವರೆಗಿನ ಪರಿಭಾಷೆಯು ತಪ್ಪು ಅರ್ಥ ಕೊಡುವುದೆಂಬ ಕಾರಣಕ್ಕೆ, ಪರ್ಯಾಯ ಮಾಧ್ಯಮದ ಬದಲಿಗೆ ಹೊಸ ಮಾಧ್ಯಮ ಎಂಬ ಪದವನ್ನು ಶೀರ್ಷಿಕೆಯಲ್ಲಿ ಬಳಸಲಾಗಿದೆ. ಮಾಧ್ಯಮಗಳು ಉಳ್ಳವರ ಕಪಿಮುಷ್ಟಿಯಲ್ಲಿ ಸೇರುವುದು ಮತ್ತು ಹಳತಾಗುವುದು ಒಟ್ಟಿಗೇ ನಡೆಯುತ್ತಿರುತ್ತದೆ. ಆ ನಂತರ ಹೊಸ ಮಾಧ್ಯಮ ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳನ್ನು ಹೊಸ ಮಾಧ್ಯಮಗಳೆಂದು ಕರೆಯಲಾಗುತ್ತದಾದರೂ, ಅಲ್ಲೊಂದು ವಿಪರ್ಯಾಸವಿದೆ. Social media is not so social ಎಂಬ ಮಾತಿದೆ. ಏಕೆಂದರೆ, ಅದೂ ಸಹಾ ಕಾರ್ಪೋರೇಟ್ ಲಾಭವನ್ನು ಹಿಗ್ಗಿಸಲೆಂದೇ ಹೆಚ್ಚೆಚ್ಚು ಪುನರ್ರೂಪಿತಗೊಳ್ಳುತ್ತಿದೆ.

ಅಂದರೆ, ಹೊಸ ಮಾಧ್ಯಮವು ಬಹುಬೇಗ ಹಳತಾಗುತ್ತಿರುವ ಕಾಲದಲ್ಲಿ ನಾವು ನವನವೀನ ದಾರಿಯನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಲಂಕೇಶರು 90ರ ದಶಕದ ಮಧ್ಯಭಾಗದಲ್ಲೇ ‘ಪತ್ರಿಕೆ’ಯ ಬರಹದಲ್ಲಿ ಅದನ್ನು ಹೇಳಿದ್ದರು. ಆಗಿಂದಾಗ್ಗೆ ಪೊರೆ ಕಳಚದೇ ಮಾಧ್ಯಮವು ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂಬುದು ಅವರ ಮಾತಾಗಿತ್ತು. ಲಂಕೇಶರು ರಾಜಕೀಯ ಮತ್ತು ಸಾಹಿತ್ಯಗಳನ್ನು ಪತ್ರಿಕೆಯ ಪ್ರಮುಖ ಭಾಗಗಳನ್ನಾಗಿಸಿ ಜಾಣ ಜಾಣೆಯರನ್ನು ಓರಿಯೆಂಟ್ ಮಾಡಲು ಟ್ಯಾಬ್ಲಾಯ್ಡ್ ವಾರಪತ್ರಿಕೆಯನ್ನು ಪ್ರಭಾವೀ ಹತಾರವಾಗಿ ಬಳಸಿದರು.

ಟ್ಯಾಬ್ಲಾಯ್ಡ್ ಪತ್ರಿಕೆಗಳು ತಳಮುಟ್ಟಿ, ಮುದ್ರಣ ಮಾಧ್ಯಮ ತನ್ನ ಬಿರುಸು ಕಳೆದುಕೊಳ್ಳುತ್ತಿರುವ ಯುಗದಲ್ಲಿ ‘ನ್ಯಾಯಪಥ’ ಆರಂಭವಾಗಿದೆ. ಹಾಗಾದರೆ, ಇದು ಕೇವಲ ಒಂದು ಸಾಂಕೇತಿಕ ಪ್ರಯತ್ನವಾಗಿ ಮುಂದುವರೆಯಬೇಕೆಂಬುದೇ ನಮ್ಮ ಯೋಜನೆಯೇ? ಖಂಡಿತಾ ಅಲ್ಲ. ನಷ್ಟದಲ್ಲೇ ನಡೆಯುತ್ತಿರುವ ಬಹುಪಾಲು ಟಿವಿ ಚಾನೆಲ್‍ಗಳು ಮುಂದೆಂದೋ ಕ್ಲಿಕ್ ಆಗುತ್ತೇವೆಂಬ ಭ್ರಾಂತಿಯಲ್ಲಿ ಕಾಲು ಎಳೆದುಕೊಂಡು ನಡೆಯುತ್ತವಲ್ಲಾ ಹಾಗೆ ಇದನ್ನು ನಡೆಸಲಾಗುತ್ತಿದೆಯೇ? ಇಲ್ಲವೇ ಇಲ್ಲ. ನ್ಯಾಯಪಥ ಪತ್ರಿಕೆ ಅಥವಾ ಈಗ ಚುರುಕು ಹಾಗೂ ವ್ಯಾಪಕತೆ ಪಡೆದುಕೊಳ್ಳುತ್ತಿರುವ ವೆಬ್ ಪೋರ್ಟಲ್‍ಗಳು ಹೊಸ ಮಾಧ್ಯಮ ರೂಪಿಸಲು ಬೇಕಾದ ಜನರನ್ನು ಒಟ್ಟುಗೂಡಿಸುವ ವೇದಿಕೆಗಳಷ್ಟೇ.

ಎಲ್ಲಾ ಕಾಲದಲ್ಲೂ ಅತ್ಯಂತ ಪ್ರಬಲವಾದ ಮಾಧ್ಯಮ ಯಾವುದು? ಅದು ಜನರೇ ವಾಹಕರಾಗಿ ಪ್ರಸಾರ ಮಾಡುವ ಮಾಧ್ಯಮ. ಜನರೇ ತಮಗೆ ಬೇಕಾದ ಕಥನವನ್ನೂ ಕಟ್ಟಿಕೊಳ್ಳುವಂತಾದರೆ? ಅಂತಹ ಮಾಧ್ಯಮವನ್ನು ಯಾವುದೂ ಸರಿಗಟ್ಟಲಾರದು. ವಿವಿಧ ದೇಶಗಳಲ್ಲಿ ತಮ್ಮ ಸ್ಥಾವರಗಳನ್ನು ಹೊಂದಿ, ವಚ್ರ್ಯುಯಲ್ ಜಗತ್ತಿನಲ್ಲಿ ಜಂಗಮವಾಗಿರುವ ಸಾಮಾಜಿಕ ಜಾಲತಾಣಗಳು ಜನರ ಆಲೋಚನೆಗಳು ಹರಳುಗಟ್ಟಿ ಪ್ರಸಾರಗೊಳ್ಳಲು ವೇದಿಕೆಯನ್ನು ಒದಗಿಸಿವೆ. ಮೇಲೆ ಹೇಳಿದಂತೆ ಇದಕ್ಕೆ ಮಿತಿಗಳಿವೆಯಾದರೂ, ಈ ಸದ್ಯ ಅವು ಇನ್ನೂ ವಿಸ್ತಾರಗೊಳ್ಳುವ ಹಂತದಲ್ಲೇ ಇವೆ. ಮುಂದೊಂದು ದಿನ (ಇಂದು ಕಾಶ್ಮೀರದಲ್ಲಿ ಆಗಿರುವಂತೆ) ಸ್ಥಗಿತಗೊಳ್ಳುವ ಅಥವಾ ಸಂಪೂರ್ಣ ಸೆಲೆಕ್ಟಿವ್ ಆಗುವುದಕ್ಕೆ ಮುಂಚೆ ಬದಲೀ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದಾದರೂ, ಅಲ್ಲಿಯವರೆಗೆ ಅವು ನಮಗೆ ಕೆಲವು ಸಾಧ್ಯತೆಗಳನ್ನು ಒದಗಿಸುತ್ತವೆ.

ಬಲವಾದ ಹೊಸ ಮುಖ್ಯವಾಹಿನಿ ರೂಪಿಸಲು ಮೊದಲು ನಾವು ಓದುಗರ ಅಂದರೆ ಸಾಮಾನ್ಯ ಜನರ ಮುಂಚೂಣಿ ವಿಭಾಗದ ಹಿತಾಸಕ್ತಿಯನ್ನು ರೂಪಿಸುವುದು ಮುಖ್ಯ. ಆಗ ಅವರೇ ಸುದ್ದಿಯನ್ನು ರೂಪಿಸುತ್ತಾರೆ ಮತ್ತು ಅದರ ಪ್ರಸಾರಕ್ಕೂ ಕಾರಣರಾಗುತ್ತಾರೆ. ಎಲ್ಲಾ ಕಾಲದಲ್ಲೂ ಇವರೇ, ಅಂದರೆ ಈ ಸಾಮಾನ್ಯ ಜನರೇ, ಭಾರೀ ಬಹುಸಂಖ್ಯಾತರಾದ್ದರಿಂದ (overwhelming majority) ಅವರು ಸುದ್ದಿಯನ್ನು ರೂಪಿಸುವುದು ಮತ್ತು ಪ್ರಸಾರ ಮಾಡುವುದಕ್ಕೆ ಇಳಿದರೆ ಅದನ್ನು ಯಾರಾದರೂ ಹೇಗೆ ಸರಿಗಟ್ಟಬಲ್ಲರು. ಅವರೇ ಅದಕ್ಕೆ ಬೇಕಾದ ಸಂಪನ್ಮೂಲವನ್ನೂ ರೂಢಿಸಿಕೊಳ್ಳುತ್ತಾರೆ. ಅಂದರೆ ಬಹಳ ಹೆಚ್ಚಿನ ಜನರು ಅದನ್ನು ಓದಿದರೆ ಜಾಹೀರಾತಿನ ಮೂಲಕ ಅಥವಾ ನೇರವಾಗಿ ಹಣ ನೀಡುವ ಮೂಲಕ.

ಈ ಬಹುಸಂಖ್ಯಾತ ಜನರನ್ನು ಅವರ ಹಿತಾಸಕ್ತಿಗೆ ಪೂರಕವಾಗಿ ಚಿಂತಿಸಲು, ಕಥನ ರೂಪಿಸಲು, ಸುದ್ದಿ ಕಟ್ಟಲು ಓರಿಯೆಂಟ್ ಮಾಡುವುದೆಂದರೆ, ಅದು ಹೊಸ ಮಾಧ್ಯಮ ಕಟ್ಟಲು ಬೇಕಾದ ಸೃಜನಶೀಲ ದಾರಿಗಳನ್ನು ಕಂಡುಕೊಳ್ಳುವ ಕೆಲಸ. ಆ ಸವಾಲನ್ನು ನಾವೀಗ ಕೈಗೆತ್ತಿಕೊಳ್ಳಬೇಕಿದೆ.

ದೇಶದ ಬಹುಸಂಖ್ಯೆಯ ಜನರು ಪರ್ಯಾಯ ಚಿಂತನೆ, ಪ್ರಜ್ಞೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಅವರೇ ಪಾಲ್ಗೊಳ್ಳುವ ಗುದ್ದಾಟದಿಂದ ಪಡೆಯುವ ಅನುಭವದ ಮೂಲಕವೇ. ಆ ರೀತಿಯಲ್ಲಿ ಬಹುಸಂಖ್ಯೆಯ ಜನರೆಲ್ಲರೂ ಒಂದಾಗಿ ನಿರ್ಮಿಸಹೊರಡುವ ಪರ್ಯಾಯ ಬೆಳೆಯದೇ, ಮಾಧ್ಯಮ ಮಾತ್ರ ಬೆಳೆದುಬಿಡುತ್ತದೆಯೇ ಎಂಬ ಪ್ರಶ್ನೆಯನ್ನು ಕೆಲವು ಶಾಶ್ವತ ಸಿನಿಕರು ಕೇಳಬಹುದು. ಹೌದು, ಬೆಳೆಯುತ್ತದೆ ಎಂಬ ವಿಶ್ವಾಸ ನಮ್ಮದು. ಅದು ಇಂದಿನ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳನ್ನು ಗಾತ್ರದಲ್ಲಿ ಮೀರದಿದ್ದರೂ, ಪರಿಣಾಮದಲ್ಲಿ ಬೀರುತ್ತದೆ. ಏಕೆಂದರೆ

ಮಾಧ್ಯಮವೆನ್ನುವುದು ಸಮಾಜದಲ್ಲಿ ವೇಗವರ್ಧಕದ ಕೆಲಸ ಮಾಡುತ್ತದೆಯೇ ಹೊರತು, ತಾನೇ ಸಮಾಜವಲ್ಲ.
ಅಂತಹ ‘ಮುಖ್ಯವಾಹಿನಿ’ ಮಾಧ್ಯಮವನ್ನು ಕಟ್ಟಿ ನಿಲ್ಲಿಸುವ ಯೋಚನೆಯನ್ನು ನಾವು ಹೊಂದಿದ್ದೇವೆ. ಹೇಗೆ ಎಂಬ ಯೋಜನೆಯನ್ನು ಜೊತೆಗೂಡಿ ರೂಪಿಸೋಣ. ಈ ನಿಟ್ಟಿನಲ್ಲಿ ನೀವೇನು ಜವಾಬ್ದಾರಿ ತೆಗೆದುಕೊಳ್ಳಬಹುದು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...