Homeಮುಖಪುಟಮಸೀದಿ ವಾಸ್ತು ಶೈಲಿಗಳೂ, ಪೊಳ್ಳು ವಾದಗಳೂ!

ಮಸೀದಿ ವಾಸ್ತು ಶೈಲಿಗಳೂ, ಪೊಳ್ಳು ವಾದಗಳೂ!

- Advertisement -
- Advertisement -

ಮಂಗಳೂರು ತಾಲೂಕಿನ ಮಳಲಿಪೇಟೆಯಲ್ಲಿರುವ ಒಂಬೈನೂರು ವರ್ಷಗಳ ಹಿಂದಿನ ಪುರಾತನ ಮಸೀದಿಯ ಕುರಿತಂತೆ ಯಾವೊಂದು ಆಧಾರವೂ ಇಲ್ಲದೇ ಭಜರಂಗದಳದ ಕೆಲವು ಕಾರ್ಯಕರ್ತರು ಅದೊಂದು ದೇವಸ್ಥಾನವಾಗಿತ್ತು ಎಂದು ಕ್ಲೈಮ್ ಮಾಡಹೊರಟಿವೆ. ಅವರಿಗೆ ಕನ್ನಡದ ಕೆಲ ಮಾಧ್ಯಮಗಳು ಕೂಡಾ ಬಿಟ್ಟಿ ಪ್ರಚಾರವನ್ನೂ ಕೊಡುತ್ತಿವೆ. ಈ ನಿಟ್ಟಿನಲ್ಲಿ ಇತಿಹಾಸ ಮತ್ತು ವಾಸ್ತುಶಿಲ್ಪಗಳ ಆಧಾರದಲ್ಲಿ ಒಂದೆರಡು ವಿಚಾರಗಳನ್ನು ಸಂಕ್ಷಿಪ್ತವಾಗಿ ನೋಡೋಣ.

ವಿಶ್ವ ಸಂಚಾರಿ ವಿದ್ವಾಂಸ ಮತ್ತು ಇತಿಹಾಸಕಾರ ಇಬ್ನ್ ಬತೂತ ತನ್ನ ‘ರಿಹ್ಲತ್ ಇಬ್ನ್ ಬತೂತ’ ಗ್ರಂಥದಲ್ಲಿ ಸ್ಪಷ್ಟವಾಗಿ ದಾಖಲಿಸಿದಂತೆ ಮಂಗಳೂರಿನಲ್ಲಿ ಸುಮಾರು‌ 1350 ವರ್ಷಗಳ ಹಿಂದಿನಿಂದ ಮುಸ್ಲಿಮರು ವಾಸಿಸುತ್ತಿದ್ದಾರೆ ಮತ್ತು ಇಸ್ಲಾಮಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿತ್ತು. ಇಬ್ನ್ ಬತೂತರ ಮಾತಿಗೆ ಪೂರಕವೆಂಬಂತೆ 1350 ವರ್ಷಗಳಿಗೂ ಪುರಾತನವಾದ ಮಸೀದಿಯೊಂದು ಮಂಗಳೂರಿನ ಬಂದರ್‌ನಲ್ಲಿದೆ. ಇದು ಭಾರತದ ಐದನೇ ಮಸೀದಿ ಮತ್ತು ಈಗಿನ ಕರ್ನಾಟಕ ಪ್ರಾಂತ್ಯದ ಎರಡನೇ ಮಸೀದಿ. ಹಾಗಾದರೆ ಭಾರತದ ಮಸೀದಿಗಳ ಆರಂಭ ಎಲ್ಲಿಂದ ಆಯಿತು ಎಂದು ನೋಡುತ್ತಾ ಚರ್ಚೆ ಮುಂದುವರಿಸೋಣ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತಕ್ಕೆ ಇಸ್ಲಾಂ ಧರ್ಮ ಪ್ರವೇಶಿಸಿದ್ದು ಕೇರಳದ ತ್ರಿಶೂರು ಜಿಲ್ಲೆಯ ಮೂಲಕ. ಆಗ ಮಲಬಾರ್ ಪ್ರಾಂತ್ಯವನ್ನು ಚೇರಮಾನ್ ಪೆರುಮಾಳ್ ರಾಜನು ಆಳುತ್ತಿದ್ದ. ಚೇರಮಾನ್ ಪೆರುಮಾಳರ ಕಾಲದ ಇತಿಹಾಸವನ್ನು ನೋಡಿದರೆ ಭಾರತಕ್ಕೆ ಇಸ್ಲಾಂ ಧರ್ಮ 1400 ವರ್ಷಗಳ ಹಿಂದೆಯೇ ಬಂದಿರುವುದಕ್ಕೆ ಬಲವಾದ ಪುರಾವೆ ಸಿಗುತ್ತದೆ.

ಇದನ್ನೂ ಓದಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

ಮುಸ್ಲಿಮರು ಎಲ್ಲೇ ನೆಲೆ ನಿಂತರೂ ತಮ್ಮ ಆರಾಧನೆಗಾಗಿ ಒಂದು ಮಸೀದಿ ನಿರ್ಮಿಸುವುದು ಅವರ ವಾಡಿಕೆ. ಅದರಂತೆಯೇ ಅರೇಬಿಯಾದಿಂದ ಭಾರತಕ್ಕೆ ಬಂದ ಇಸ್ಲಾಮಿಕ್ ಮಿಶನರಿಗಳು ಮೊಟ್ಟ ಮೊದಲು ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರು ಕಡಲ ಕಿನಾರೆಯಲ್ಲಿ ಮಸೀದಿಯನ್ನು ನಿರ್ಮಿಸಿತು. ಆ ಬಳಿಕ ಕೇರಳದಲ್ಲಿ ಮತ್ತೆರಡು ಮಸೀದಿಗಳನ್ನು ನಿರ್ಮಿಸಿದ ಮಿಶನರಿ ತಂಡವು ಉತ್ತರದತ್ತ ಸಾಗಿ ಬಂದು ಈಗಿನ ಕರ್ನಾಟಕ ರಾಜ್ಯದ ಬಾರಕೂರಿನಲ್ಲಿ ಒಂದು ಮಸೀದಿಯನ್ನು ನಿರ್ಮಿಸಿತು. ಆ ಬಳಿಕ ಅಲ್ಲಿಂದ ಮಂಗಳೂರಿಗೆ ಬಂದು ಇನ್ನೊಂದು ಮಸೀದಿಯನ್ನು ನಿರ್ಮಿಸಿತು.

ಇವುಗಳು ಕ್ರಮವಾಗಿ ಭಾರತದ ನಾಲ್ಕು ಮತ್ತು ಐದನೆಯ ಮಸೀದಿಗಳಾದರೆ, ಕ್ರಮವಾಗಿ ಕರ್ನಾಟಕದ ಮೊದಲ ಮತ್ತು ಎರಡನೆಯ ಮಸೀದಿಗಳಾಗಿರುತ್ತವೆ. ಇವುಗಳಲ್ಲಿ ಬಾರಕೂರು ಮಸೀದಿಯಲ್ಲಿ ಅದರ ಪ್ರಾಚೀನತೆಗೆ ಸಂಬಂಧಿಸಿದ ಕುರುಹುಗಳನ್ನು ಸಂರಕ್ಷಿಸಿಡದೇ ಇದ್ದುದು ವಿಷಾದದ ಸಂಗತಿ. ಕಾಲ ಕಾಲಕ್ಕೆ ತಕ್ಕಂತೆ ಮರು ನಿರ್ಮಾಣ ಮಾಡುತ್ತಾ ಹೋದಂತೆ ಪ್ರಾಚೀನ ಕುರುಹುಗಳನ್ನು ಸಂಪೂರ್ಣವಾಗಿ ತೆಗೆದು ಹೊಸ ನಿರ್ಮಾಣಗಳನ್ನೇ ರಚಿಸಲಾಗಿದೆ. ಆದರೆ ಮಂಗಳೂರು ಬಂದರ್‌ನಲ್ಲಿರುವ ಮಸೀದಿಯ ಪ್ರಾಚೀನ ಕುರುಹುಗಳನ್ನು ಸಂರಕ್ಷಿಸುತ್ತಲೇ ಮರು ನಿರ್ಮಾಣ ಮಾಡಿರುವುದು ಪ್ರಶಂಸಾರ್ಹ.

ಇಬ್ನ್ ಬತೂತ ತನ್ನ ‘ರಿಹ್ಲತ್ ಇಬ್ನ್ ಬತೂತ’ದಲ್ಲಿ ಮಂಗಳೂರನ್ನು ಮಂಜರೂರ್ ಎಂದು ದಾಖಲಿಸಿದ್ದಾರೆ. ಈ ಮಸೀದಿಗೆ ಹಿಂದಿನಿಂದಲೂ ಮಂಗಳೂರಿನ ಬ್ಯಾರಿ ಮುಸ್ಲಿಮರು ಬೆಲಿಯೆ ಪಳ್ಳಿ (ದೊಡ್ಡ ಮಸೀದಿ) ಎನ್ನುತ್ತಿದ್ದರು. ಈ ಮಸೀದಿಯ ಸೌಂದರ್ಯ ಕಂಡು ಟಿಪ್ಪು ಸುಲ್ತಾನರು ಬೆರಗಾಗಿದ್ದರು. 1790ರ ಸುಮಾರಿಗೆ ಮಸೀದಿಯ ಮರು ನಿರ್ಮಾಣ ಕಾರ್ಯವನ್ನು ಅವರು ಮಾಡಿಸಿದರು.

ಟಿಪ್ಪು ಸುಲ್ತಾನ್ ಮರು ನಿರ್ಮಾಣ ಮಾಡಿಸಿದಾಗ ಬಹುತೇಕ ಪ್ರಾಚೀನ ಸಂರಚನೆಗಳನ್ನು ಹಾಗೆಯೇ ಸಂರಕ್ಷಿಸಿಟ್ಟು, ತನ್ನ ಕಾಲದ ಶ್ರೇಷ್ಠ ವಾಸ್ತುಶಿಲ್ಪ ಮಾದರಿಯನ್ನು ಅದಕ್ಕೆ ಜೋಡಿಸಿದರು. ಅದಕ್ಕಾಗಿ ಟಿಪ್ಪು ಮೈಸೂರು ಮತ್ತು ಮಲಬಾರ್‌ನಿಂದ ವಾಸ್ತುಶಿಲ್ಪಿಗಳನ್ನು ಕರೆಸಿದ್ದರು. ಇದರ ಕೆಲವೆಡೆ ಇಂಡೋ -ಅರೆಬಿಕ್ ಆರ್ಕಿಟೆಕ್ಟ್ ಮಾದರಿಯು ಎದ್ದು ಕಾಣುತ್ತಿದ್ದರೆ, ಮತ್ತೆ ಕೆಲವೆಡೆ ದ್ರಾವಿಡಿಯನ್ ಸ್ವರೂಪದ ವಾಸ್ತುಶಿಲ್ಪ ಮಾದರಿಯೂ ಇದರಲ್ಲಿವೆ. ಈ ಮಸೀದಿಯ ಸೌಂದರ್ಯಕ್ಕೆ ಮಾರು ಹೋಗಿ ಟಿಪ್ಪು ಇದಕ್ಕೆ ಮಸ್ಜಿದ್-ಎ-ಝೀನತ್ ಬಕ್ಷ್ ಎಂದು ಮರು ನಾಮಕರಣ ಮಾಡಿದರು. ಆದರೆ ಸ್ಥಳೀಯ ಬ್ಯಾರಿಗಳು ಇಂದಿಗೂ ಅದನ್ನು ‘ಬೆಲಿಯೆ ಪಳ್ಳಿ’ ಎನ್ನುತ್ತಾರೆ. ಒಂದೊಮ್ಮೆ ಇದನ್ನು ಬ್ಯಾರಿಗಳು ‘ಸುಲ್ತಾನ್ ಪಳ್ಳಿ’ ಎಂದೂ ಕರೆಯುತ್ತಿದ್ದರು.

ಇದನ್ನೂ ಓದಿ:Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು 

ಆ ಬಳಿಕ ಮಂಗಳೂರಿನಲ್ಲಿ ನಿಧಾನಕ್ಕೆ ಮುಸ್ಲಿಮರ ಸಂಖ್ಯೆ ಏರುತ್ತಲೇ ಹೋಯಿತು. ನಿಧಾನಕ್ಕೆ ಅಲ್ಲೊಂದು ಇಲ್ಲೊಂದು ಮಸೀದಿಗಳು ನಿರ್ಮಾಣವಾಗತೊಡಗಿದವು. ಹಾಗೆ ನಿರ್ಮಿತಿಗೊಂಡ ಮಸೀದಿಗಳಲ್ಲಿ ಕೆಲವು ಮಸೀದಿಗಳು ತಮ್ಮ ಮೂಲಸ್ವರೂಪಗಳನ್ನು ಉಳಿಸಿಕೊಂಡಿವೆ. ಕಾಲ ಕಾಲಕ್ಕೆ ದುರಸ್ತಿ, ನವೀಕರಣ ಪ್ರಕ್ರಿಯೆಗಳು ನಡೆಯುತ್ತಾ ಬಂದರೂ ಮೂಲ ಸ್ವರೂಪಕ್ಕೆ ಅಡ್ಡಿ ಬಾರದಂತೆ ಕೆಲ ಮಸೀದಿಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಇನ್ನು ಕೆಲವು ಮಸೀದಿಗಳಲ್ಲಿ ಅವುಗಳ ಪ್ರಾಚೀನತೆಗೆ ಸಾಕ್ಷಿಯಾಗಿ ಕೆಲವು ಪುರಾತನ ಸಂರಚನೆ ಮತ್ತು ಪುರಾತನ ಪಾರ್ಶ್ವಗಳನ್ನು ಮಾತ್ರ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಹಾಗೆ ಪುರಾತನ ವಾಸ್ತುಶಿಲ್ಪಕ್ಕೆ, ಸಂರಚನೆಗೆ ಎಳ್ಳಷ್ಟೂ ಧಕ್ಕೆ ಬಾರದಂತೆ ಯಥಾವತಾಗಿ ಉಳಿಸಲಾದ ಜಿಲ್ಲೆಯ ಕೆಲವು ಪ್ರಮುಖ ಮಸೀದಿಗಳು ಇ‌ಂತಿವೆ.
– ಝೀನತ್ ಬಕ್ಷ್ ಮಸೀದಿ
-ಪೊಳಲಿ ಮಸೀದಿ
-ಪೇರ ಮಸೀದಿ
– ಅಜಿಲಮೊಗರು ಮಸೀದಿ
-ಅಮ್ಮುಂಜೆ ಮಸೀದಿ
-ವಿಟ್ಲ ಪರ್ತಿಪಾಡಿ ಮಸೀದಿ
-ಅಮ್ಮೆಂಬಳ ಮಸೀದಿ
-ಮತ್ತು ಪ್ರಸ್ತುತ ಚರ್ಚೆಯಲ್ಲಿರುವ ‘ಮಳಲಿ ಪೇಟೆ ಮಸೀದಿ’ ಅಥವಾ ಬ್ಯಾರಿಗಳ ಭಾಷೆಯ ‘ಮನಾಲ್‌ಡೊ ಪಳ್ಳಿ’.

ಇವಿಷ್ಟು ಮಸೀದಿಗಳಲ್ಲಿ ಹೊರಗಿಂದ ನೋಡುವಾಗಲೇ ಅಟ್ಟದ ಮಾದರಿಯ ಸಂರಚನೆಗಳು ಎದ್ದು ಕಾಣುವುದು ಪೊಳಲಿ, ಅಮ್ಮುಂಜೆ ಮತ್ತು ಮಳಲಿ ಮಸೀದಿಯಲ್ಲಿ ಮಾತ್ರ. ಈ ಸಂರಚನೆಯನ್ನು ಹಿಡಿದುಕೊಂಡು ಇದು ದೇವಸ್ಥಾನವಾಗಿತ್ತು ಎಂದು ಮಳಲಿ ಮಸೀದಿಯ ವಿಚಾರದಲ್ಲಿ ಕೆಲ ಹಿಂದೂತ್ವವಾದಿಗಳು ವಿವಾದ ಹುಟ್ಟಿಸಲು ಯತ್ನಿಸುತ್ತಿವೆ.

ಈ ತ್ರಿಭುಜಾಕೃತಿಯ ‘ಅಟ್ಟ’ ಮಾದರಿಯ ಮರದ ಕಲಾತ್ಮಕ ರಚನೆ ಭಾರತದ ಮೊಟ್ಟ ಮೊದಲ ಮಸೀದಿಯಾದ ಚೇರಮಾನ್ ಮಸೀದಿಯ ಮೂಲ ಸ್ವರೂಪದಲ್ಲೇ ಇತ್ತು. ಮತ್ತು ಅದರ ಹಳೇ ಫೋಟೋಗಳು ಇಂದಿಗೂ ಅಂತರ್ಜಾಲದಲ್ಲಿ ಲಭ್ಯವಿದೆ. ಮಾತ್ರವಲ್ಲದೇ ಕೇರಳದ ಇನ್ನೂ ಅನೇಕ ಪುರಾತನ ಮಸೀದಿಗಳ ಮೂಲ ಸ್ವರೂಪದಲ್ಲಿ ಅಂತಹ ಸಂರಚನೆಗಳಿತ್ತು. ಉದಾಹರಣೆಗೆ: ಕಾಸರಗೋಡಿನ ಮಾಲಿಕ್ ದೀನಾರ್ ಮಸೀದಿ, ಪೊನ್ನಾನಿ ಮಸೀದಿ ಇತ್ಯಾದಿಗಳು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಯಚೂರಿನಲ್ಲಿ ಏಕ್ ಮಿನಾರ್ ಮಸೀದಿ ಕೆಡವಿದಾ‌ಗ ಶಿವನ ದೇವಾಲಯ ಪತ್ತೆಯಾಯಿತೆ?

ಅಂತಹ ತ್ರಿಭುಜಾಕೃತಿಯ ಅಟ್ಟ ಮಾದರಿಯ ರಚನೆಗಳು ಪುರಾತನ ಹಿಂದೂ ದೇವಸ್ಥಾನಗಳಲ್ಲಿಯೂ ಇತ್ತು. ಆದುದರಿಂದ ಇದು ಹಿಂದೆ ದೇವಸ್ಥಾನವಾಗಿತ್ತು ಎಂಬ ವಾದ ಮೂರ್ಖತನದ ಪರಮಾವಧಿ. ಭಾರತದ ಮೊದಲ ಹಂತದ ಮಸೀದಿಗಳನ್ನು ಕಟ್ಟಿಸಿದವರು ಅರಬ್ ಮೂಲದ ಪ್ರವಾದಿ ಅನುಚರರೇ ಆಗಿದ್ದರೂ ಕೂಡಾ ನಿರ್ಮಾಣ ಕಾರ್ಯದಲ್ಲಿ ಕಾರಕೂನರಾಗಿ, ಶಿಲ್ಪಿಗಳಾಗಿ ದುಡಿದವರು ಇಲ್ಲಿನ ಆ ಕಾಲದ ಹಿಂದೂಗಳು. ಕೇರಳದ ಮತ್ತು ದಕ್ಷಿಣ ಕನ್ನಡದ ಪುರಾತನ ಮಸೀದಿಗಳಲ್ಲಿ ಮಿಶ್ರ ವಾಸ್ತುಶಿಲ್ಪ ಕಾಣಸಿಗುವುದು ಸರ್ವೇ ಸಾಮಾನ್ಯ. ಅವು ಇಂಡೋ- ಇಸ್ಲಾಮಿಕ್ ಮತ್ತು ದ್ರಾವಿಡಿಯನ್. ಇಲ್ಲಿನ ಮುಸ್ಲಿಮರು ಮೂಲತಃ ಶೂದ್ರ-ದಲಿತರೇ ಆದುದರಿಂದ ಸಾಂಸ್ಕೃತಿಕವಾಗಿ ಅವರು ತಮ್ಮ ಅಸಲಿಯತ್ತನ್ನು ಇಸ್ಲಾಮಿಗೂ ಹಿಡಿದುಕೊಂಡು ಬಂದಿದ್ದಾರೆ.

ಇನ್ನು ಹಳೇ ದೇವಸ್ಥಾನ ಮತ್ತು ಮಸೀದಿಗಳ ರಚನೆಯಲ್ಲಿ ಕೆಲವು ಸಾಮ್ಯತೆಗಳಿವೆ. ಆದರೆ ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ದೇವಸ್ಥಾನಗಳಿಗೆ ಅಳವಡಿಸುವಂತಹ ಕಲಶ. ದೇವಸ್ಥಾನದ ಕಲಶವನ್ನು ಹೋಲುವ ಪುಟ್ಟ ಮಿನಾರೆಟ್‌ಗಳನ್ನು ಮಸೀದಿಗಳ ಮಾಡಿನ ಎರಡು ಬದಿಗಳಿಗೆ ಹಿಂದೆ ಅಳವಡಿಸಲಾಗುತ್ತಿತ್ತು.ಕಲಶಕ್ಕಿಂತ ಗಾತ್ರದಲ್ಲಿ ಚಿಕ್ಕದಾದರೂ ಎಲ್ಲೋ ಒಂದು‌ ಕಡೆ ಕಲಶವನ್ನು ಹೋಲುತ್ತದೆಂದ ಮಾತ್ರಕ್ಕೆ ಇದು ಹಿಂದೆ ದೇವಸ್ಥಾನವಾಗಿತ್ತು ಎಂಬ ಹುಚ್ಚಿಗೆ ಏನೆನ್ನಬೇಕು..?

ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಮಸೀದಿಗಳಲ್ಲಿ ಒಳ ಮಸೀದಿ ಎಂಬ ಒಂದು ಭಾಗವಿತ್ತು. ಅದು ಹೇಗೆಂದರೆ ಮಸೀದಿಯ ವಿಶಾಲ ಪ್ರಾಂಗಣದ ಮುಂಭಾಗದಲ್ಲಿರುವ ಒಂದು ಕೋಣೆ. ಆ ಕೋಣೆಯ ಮೂರು ಬದಿಯ ಗೋಡೆಗಳಿಗೆ ತಲಾ ಮೂರರಂತೆ ಒಟ್ಟು ಒಂಬತ್ತು ಬಾಗಿಲುಗಳು. ಈ ಒಳ ಮಸೀದಿಗಳು ಸ್ವಲ್ಪ ಮಟ್ಟಿಗೆ ದೇವಸ್ಥಾನಗಳ ಗರ್ಭಗುಡಿಯನ್ನು ಹೋಲುತ್ತದೆ. ಆದರೆ ದೇವಸ್ಥಾನಗಳ ಗರ್ಭಗುಡಿಗೆ ಈ ರೀತಿ ಒಂಬತ್ತು ಬಾಗಿಲುಗಳಿರುತ್ತಿರಲಿಲ್ಲ.

ಒಂದೆರಡು ಶಿಲ್ಪಕಲಾ ಸಾಮ್ಯತೆಗಳನ್ನು ಹಿಡಿದು ಇದು ಹಿಂದೆ ದೇವಸ್ಥಾನವಾಗಿತ್ತು ಎನ್ನುವವರು, ಸಾಮ್ಯತೆಯಿಲ್ಲದ ಹತ್ತಾರು ಆಕೃತಿಗಳಿಗೆ ಏನೆನ್ನುತ್ತಾರೆ..?

ನಮ್ಮ ದಕ್ಷಿಣ ಕನ್ನಡದ ಎರಡನೇ ಹಂತದ ಕೆಲವು ಪ್ರಮುಖ ಮಸೀದಿಗಳೆಂದು ನನ್ನ ಅಧ್ಯಯನದ ಸಂದರ್ಭದಲ್ಲಿ ಕೆಲವು ಮಸೀದಿಗಳನ್ನು ಪಟ್ಟಿ ಮಾಡಿರುವೆ. ಪೊಳಲಿ, ಅಮ್ಮುಂಜೆ, ಮಳಲಿ, ಪೇರ ಮಸೀದಿ, ವಳವೂರು, ಅಕ್ಕರಂಗಡಿ, ಅಜಿಲಮೊಗರು, ವಿಟ್ಲ ಪರ್ತಿಪಾಡಿ, ಕಲ್ಲೇಗ, ಪಡುಮಲೆ ಇತ್ಯಾದಿಗಳು. (ಈ ಪಟ್ಟಿಗೆ ಇನ್ನೂ ಹಲವು ಮಸೀದಿಗಳು ಒಳಪಡಬೇಕಾಗಿತ್ತಾದರೂ ನಾನು ಪ್ರಾಚೀನ ಆಕೃತಿಗಳನ್ನು ಉಳಿಸಿಕೊಂಡವುಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಿರುವೆ)

ಇದನ್ನೂ ಓದಿ: ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ: ಮಸೀದಿಗೆ ಕೇಸರಿ ಬಣ್ಣ ಬಳಿದ ಅಧಿಕಾರಿಗಳು!

ಇವುಗಳಲ್ಲೆಲ್ಲಾ ಸರ್ವೇ ಸಾಮಾನ್ಯವಾದ ಕೆಲವು ಕಲಾತ್ಮಕ ಮತ್ತು ಕೆತ್ತನೆ ಕೆಲಸಗಳಿವೆ. ಅವುಗಳಲ್ಲಿ ಚಕ್ರಾಕೃತಿಯ ರಚನೆಗಳು. ಈ ಚಕ್ರಾಕೃತಿಯ ರಚನೆಗಳಿಗೆ ಸಿಲ್ವರ್ ಅಥವಾ ಗೋಲ್ಡನ್ ಪೈಂಟ್ ಬಳಿಯಲಾಗಿರುವುದನ್ನು ನಾನು ಗಮನಿಸಿರುವೆ. ಬಂಟ್ವಾಳದ ಅಕ್ಕರಂಗಡಿ ಮತ್ತು ವಳವೂರು ಎಂಬಲ್ಲಿನ ಮಸೀದಿಗಳಲ್ಲಿ ಚಕ್ರಾಕೃತಿಯ ರಚನೆಗಳಿಗೆ ವುಡ್ ಪಾಲಿಶ್ ಮಾಡಿ ಎಣ್ಣೆ ಬಳಿಯಲಾಗಿದೆ. ಚಕ್ರದಂತಹ ರಚನೆಗಳು ದೇವಸ್ಥಾನಗಳಲ್ಲಿ ಕಾಣಸಿಗುತ್ತವಾದರೂ ಮಸೀದಿಗಳಲ್ಲಿ ಕಾಣಸಿಗುವ ಚಕ್ರಾಕಾರದ ಅನೇಕ ರಚನೆಗಳೊಳಗೆ ಇಸ್ಲಾಮಿಕ್ ಕ್ಯಾಲಿಗ್ರಫಿಯಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿದು ಬರುತ್ತದೆ.

ಕೆಲವು ತಜ್ಞರ ಪ್ರಕಾರ ಮಳಲಿ ಮಸೀದಿಯ ವಾಸ್ತು ಶಿಲ್ಪಗಳು ಹದಿನೈದು ಅಥವಾ ಹದಿನೈದನೆಯ ಶತಮಾನದ್ದು. ಇದು ಸತ್ಯವಾಗಿರಲೂಬಹುದು. ಆದರೆ ಎಲ್ಲಾ ರಚನೆಗಳೂ ಹದಿನೈದು ಹದಿನಾರನೆಯ ಶತಮಾನದ ಮಾಡೆಲ್ ಎನ್ನಲಾಗದು.

ಯಾವುದೇ ಕಲಾತ್ಮಕ ರಚನೆಗಳು ಕಾಲ ಕಾಲಕ್ಕೆ ಮಾಡಲಾಗುವ ನವೀಕರಣಗಳ ಸಂದರ್ಭಗಳಲ್ಲಿ ಬದಲಾಗುತ್ತದೆ.ಅವೆಲ್ಲವೂ ಹದಿನೈದು ಮತ್ತು ಹದಿನಾರನೆಯ ಶತಮಾನದ ಜನಪ್ರಿಯ ಮಾದರಿಯನ್ನು ಅಪ್ಪಿಕೊಂಡು ಒಪ್ಪಿಕೊಂಡು ಮುಂದೆ ಆ ಕಲಾತ್ಮಕ ರಚನೆಗಳನ್ನು ಬದಲಿಸದೇ ಇದ್ದಿರಲೂ ಬಹುದು. ಟಿಪ್ಪು ಸುಲ್ತಾನರು ನವೀಕರಿಸಿದ ಮಂಗಳೂರಿನ ಬಹುತೇಕ ಮಸೀದಿಗಳಲ್ಲಿ ಝೀನತ್‌ ಬಕ್ಷ್ ಮಸೀದಿಯ ಕಲಾ ಮಾದರಿಗಳು ಕಾಣಸಿಗುತ್ತವೆ. ಅದಕ್ಕೆ ನಾನು ಸನಿಹದಿಂದ ಕಂಡ ಉದಾಹರಣೆ ಅಮ್ಮೆಂಬಳ ಮಸೀದಿ.

ಕಲೆ, ವಾಸ್ತು-ಶಿಲ್ಪ ಇತ್ಯಾದಿಗಳ ಕುರಿತ ಕನಿಷ್ಠ ಪರಿಜ್ಞಾನವೂ ಇಲ್ಲದವರು ಮಾತ್ರ ಯಾವುದೋ ಒಂದು‌‌ ಪುಟ್ಟ ಸಾಮ್ಯತೆಯನ್ನು ಹಿಡಿದುಕೊಂಡು ಇದು ಹಿಂದೆ ದೇವಸ್ಥಾನವಾಗಿತ್ತೆಂದು ವಾದಿಸಲು ಸಾಧ್ಯ. ಇಂತವರ ದುಷ್ಟ ಹುನ್ನಾರಗಳನ್ನು ನಾಡಿನ ಜನರೇ ಸೋಲಿಸಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...